ಸದಗುರುರಾಥ‍ನ್ಹೊರತು ಗತಿ ಬ್ಯಾರಿಹುದೆ?

ಸದಗುರುರಾಥ‍ನ್ಹೊರತು ಗತಿ ಬ್ಯಾರಿಹುದೆ?
ಮುಕ್ತಿದಾತನೆನ್ನುತಾ ಶ್ರುತಿ ಸಾರುತಿದೆ                 ||ಪ.||

ಕೌತಕದಿ ಕಲಿಯೊಳು ಕೂಡಿಸಿದಾ
ರೇತು ರಕ್ತದೊಳು ಮನಿ ಮಾಡಿಸಿದಾ
ಮಾತೆ ಕುಚದೊಳು ಆಮೃತರಸ ನೀಡಿಸಿದಾ          ||೧||

ಏನು ಹೇಳಲಿ ಆತನ ದಯದಿಂದಾ
ದೇವ ಶಿಶುನಾಳೇಶನ ವರದಿಂದಾ
ತಾನು ತಾನೇ ಆದನು ಗುರುಗೋವಿಂದಾ             ||೨||
                ****
-ಶಿಶುನಾಳ ಶರೀಫ್


ಕೀಲಿಕರಣ: ಎಂ.ಎನ್.ಎಸ್. ರಾವ್

ನಂಬಿದೆನಯ್ಯಾ ನಿನ್ನ ಸದಗುರುರಾಯಾ

ನಂಬಿದೆನಯ್ಯಾ ನಿನ್ನ ಸದಗುರುರಾಯಾ
ರಕ್ಷಿಸು ಎನ್ನ ಪ್ರೀಯಾ                                   ||ಪ||

ನ೦ಬಿದೆ ನಾ ನಿನ್ನ ಶಂಬು ರಕ್ಷಿಸು ಎನ್ನಾ
ಕುಂಭಿನಿಯಾಳು ಬಿಡದೆ ತುಳುಕುತಿರುವೆ         ||ಅ.ಪ.||

ಹರನಾಮ ಧ್ಯಾನದಲಿ ಫ್ರೇಮದಲಿ
ಕರಿಗೊಂಡು ಮನಸಿನಲಿ ವರವ್ಯಸನವನು ಹರಿದು
ನಿರುತ ಪಾಲಿಸು ದೇವಾ
ಧರಿಯೊಳು ಸತ್ಯಶಂಕರ ರೂಪ ನಿನ್ನ               ||೧||

ಜಡದೇಹಿ ಜಗದಿ ನಾನು ಪರಂಜ್ಯೋತಿ
ಮೃಡರೂಪ ಮೂರ್ತಿ ನೀನು
ಪೊಡವಿಪ ಶಿಶುನಾಳ ಒಡಿಯನ ಕರುಣಿಸೊ
ಕಡುಮತಿ ಸದ್ಗುರು ಗೋವಿಂದನಾಥನೆ             ||೨||  
                ****
-ಶಿಶುನಾಳ ಶರೀಫ್


ಕೀಲಿಕರಣ: ಎಂ.ಎನ್.ಎಸ್. ರಾವ್

ಸದ್ಗುರು ನಿನ್ನ ಮಾಯಕ್ಕೆ ಮರುಳಾದೆನೋ

ಸದ್ಗುರು ನಿನ್ನ ಮಾಯಕ್ಕೆ ಮರುಳಾದೆನೋ      ||ಪ||

ಕರಪಿಡಿದು ಎನ್ನ ಕರಣದೊಳಗೆ ಮೊದಲು
ವರಮಂತ್ರಬೋಧಿಸಿ ಕರವಿಟ್ಟು ಶಿರದೊಳು      ||೧||

ಮಸ್ತಕ ಪಿಡಿದೆತ್ತಿ ಹಸ್ತದಿ ತರ್ಕೈಸಿ
ದುಸ್ತರ ಭವಬಾಧೆ ಕಸ್ತು ಬಿಸಾಕಿದಿ                 ||೨||

ಗುರುವರ ಗೋವಿಂದ ಪರಮಗಾರುಡಿಗ ನಿ-
ನಿರುತಿಹೆ ತಿಳಿಯದು ನರರಿಗೆ ಪರಿಯಿದು        ||೩||
                ****
-ಶಿಶುನಾಳ ಶರೀಫ್


ಕೀಲಿಕರಣ: ಎಂ.ಎನ್.ಎಸ್. ರಾವ್

ಶ್ರೀಗುರು ನಿತ್ಯನಿರಾಲಂಬ

ಶ್ರೀಗುರು ನಿತ್ಯನಿರಾಲಂಬ ನಿಜಪದ ಸೇವಕ
ಈ ಆತ್ಮಾ ಶಿವಯೋಗಿ                                    ||ಪ||

ಮರಳಿ ತೆರಳದಂತೆ ಭವದೊಳು ಬಾರದೆ
ಮರಣರಹಿತ ನಿಮ್ಮ ಚರಣಕ್ಕೆ ಎರಗುವೆ              ||ಅ.ಪ.||

ಆರನಳಿದು ಮುನ್ನ ಮೂರು ಮೀರಿತು ಆತ್ಮಾ ಏರಿ
ಪಾರಮರ್ಥದೊಳಿರುವಾ ನಾಲಿ ನಿಲ್ಲಿಸಿ
ಗುರುಸಾಧ್ಯನಾಗುತ ತಾನು
ಬ್ಯಾರೆ ಬೈಲು ಬ್ರಹ್ಮಜ್ಞಾನದೊಳಿರುವನಯ್ಯ         ||೧||

ವಸುಧಿಯೊಳು ಶಿಶುನಾಳಧೀಶನ ಸೇವಕ
ಉಸುರಿದ ನುಡಿಕೇಳಿ ಪಸರಿಸುವಾ
ಶಶಿಕಿರಣದೋಳ್ ಗುರುಗೋವಿಂದನಾಥನ
ಶಿಶುವೆಂದಿನಿಸಿದಂಥಾ ಕುಶಲ ಶರೀಫನು            ||೨||
                ****
-ಶಿಶುನಾಳ ಶರೀಫ್


ಕೀಲಿಕರಣ: ಎಂ.ಎನ್.ಎಸ್. ರಾವ್

ಧರೆ ಹೊತ್ತಿ ಉರಿದೊಡೆ


- ಬಸವರಾಜ್ ಡಬ್ಲ್ಯು

ಲೇ... ಬರ್‍ರೋ.. ಏನ್ ನೋಡಾಕ್ಹತ್ತೀರಿ... ಅಲ್ನೋಡು ಮಲ್ಲಣ್ಣ ತಾತ ಐದಾನ... ಲೇ ಎಲೈದನಪಾ... ಆಯಾ... ಆಗ!... ಅಲ್ಲಿ ಮಾರಕ್ಕನ ಹೋಟ್ಲಾಗ ಚಾ ಕುಡ್ಕಂತ ಕುಂತಾನ ಜಲ್ದಿ ಬರ್‍ರೋ... ಜಂಬ, ನಾಗ, ಕೆಂಚ ಎಂದು ಕೂಗುತ್ತ ಹೋಟೆಲ್ ಒಳಗೆ ಹೋದ ಚನ್ನಪ್ಪ.

ತಾತ... ತಾತ... 'ಯಾಕಲೇ ಚನ್ನ ಅದ್ಯಾಕ್ಹಂಗ ಓಡ್ಕಂತ ಬಂದಿ'.  ಇಲ್ಲಪೋ ಮತ್ತೆ ನೀಯಲ್ಲಿ ಓಗಿಬುಡ್ತಿಯಂತ ಬಂದೆ.  ಟೇಬಲ್ ಮೇಲಿದ್ದ ನೀರನ್ನು ಕುಡಿದು ಸ್ವಲ್ಪ ದಣಿವಾರಿಸಿಕೊಂಡ.  ಏನು ತಾತ ಬೇಸೈದಿಯಾ...  ಭಾಳ ದಿವ್ಸ ಆತ್ನೋಡು ನಿನ್ನ ನೋಡ್ಲಾರ್‍ದ.  ಹೌದು ನೋಡಾ... ನೀನೇ ಬರಂಗಿಲ್ಲ ಈಕಡಿ.  ಏನ್ಮಾಡದು ತಾತ ಹೊಲ, ಮನೆ ಅನ್ಕಂಡು ಹೊರಕ ಬರಕ ಆಗಂಗಿಲ್ಲ ನೋಡು.  ಅಲ್ಲೇ ನಿಂತಿದ್ದ ಗೆಳೆಯರನ್ನು ನೋಡಿ,  ಏ... ಬರ್‍ರ್‍ಯಾ, ಅಂಗ್ಯಾಕ ನಿಂತೀರಿ.  `ಅವ್ರು ನಾನು ಬೈದು ಬುಡ್ತೀನಂತ ಎದ್ರಿಕಂಡು ನಿಂತಾರ ಕಳ್ ಸೂಳೇ ಮಕ್ಳು... ಎಂಗೈದಾರ್‍ ನೋಡು ಒಬ್ಬೊಬ್ರನ ಕಡದ್ರೆ ನಾಕ್ ತುಂಡಾಕ್ತಾರ.  ದುಡಿಯಂಗಿಲ್ಲ ದುಃಖ್ ಪಡಂಗಿಲ್ಲ.  ಅಪ್ಪಾ ಮಾಡಿದ್ದ ಆಸ್ತಿ ಕರಗ್ಸೋದ್ಹೆಂಗಂತ ನೋಡ್ತಾರ... ಅದ್ರಾಗ ಲಗ್ಣ ಬ್ಯಾರೆ ಕೇಡು ಈ ನನ್ ಮಕ್ಳಿಗೆ... ಎನ್ ಸುಮ್ನೆ ನೋಡ್ತಿರಿ ಬರ್‍ರಿ' ಎಂದ ಮಲ್ಲಣ್ಣ ತಾತ.  ಅಂಜುತ್ತ ಕಳ್ಳರಂತೆ ಬಂದು ಕುಳಿತರು ಜಂಬ, ನಾಗ, ಕೆಂಚ.

ಮಾರಕ್ಕ... ರವಟು ಚಾ ಕೊಡಂಗೆ ಈ ಉಡ್ರಿಗೆ.  ಅಲ್ಲಪೋ ತಾತ ಇದೇನು ಅಂತೀನಿ.  ಏ... ಕುಡಿರಾ ಇರ್‍ಲಿ.  ಮತ್ತೆ ನಾ ನಿಮಿಗ್ಯಾವಾಗ ಸಿಗಬೇಕು ಕುಡ್ರಿ ಕುಡಿರಿ.  `ಅದ್ರ ಜತಿಗೆ ಒಂದೊಂದು ಮಿರ್ಚಿ ಕೊಟ್ಬುಡು ಮಾರಕ್ಕ' ಎಂದ ಚನ್ನ.

ಲೇ ಚನ್ನ ಮಿಚಿð ಅಂದ್ರೆ ನಿಮ್ಮಪ್ಪ ನೆಪ್ಪಾಗ್ತಾನ ನೋಡು.  ಅವಾಗ ಮಧ್ಯಾದ್ಹೊತ್ತು ಉಂಡು ಬಂದು ವಗ್ಗಣ್ಣಿ ಮೆಣಸಿಕಾಯಿ ತಿಮ್ತಿತಿದ್ವಿ.  ಆಗಿನ ಕಾಲ ಬೇಸಿತ್ನೋಡು.  ಈಗ್ನೋಡು... ಅನೌನ ರೇಟೆಲ್ಲ ಮ್ಯಾಕೇರ್‍ಯಾವು.  ಸುಡುಗಾಡ್ ಸೂಳೇಮಗನ ಗೌರ್‍ಮೆಂಟ್.  ಏನಾನ ಗಬಕಂಥ ತಿಂಬಂಗಿಲ್ಲ ಉಂಬಂಗಿಲ್ಲ ಎಂದು ಮೀಸೆ ಮೇಲೆ ಕೈಯಾಡಿಸುತ್ತಾ ಕುಳಿತ.

ಊರಿನಲ್ಲಿ ಮಲ್ಲಣ್ಣ ತಾತ ಅಂದ್ರೆ ಎಲ್ಲರಿಗೂ ಇಷ್ಟ.  ಈತನ ಸಾಮಾಜಿಕ ಕಳಕಳಿ ಎಂಥವರಿಗೂ ಬೆಚ್ಚು ಬೀಳಿಸುತ್ತಿತ್ತು.  ಈತ ನಮ್ಮೂರಿನ ನ್ಯೂಸ್ ಪೇಪರ್‍ ಎಂದೇ ಕಂಪ್ಲಿ ಜನ ಕರೆಯುತ್ತಿದ್ದರು.  ಪ್ರಾಮಾಣಿಕ ವ್ಯಕ್ತಿಯಾಗಿದ್ದ ಈತ ಊರಿನ ನ್ಯಾಯ ಬಗೆಹರಿಸುತ್ತಿದ್ದ.  ಈತನ ಮಾತು ಯಾರೂ ತೆಗೆದು ಹಾಕುತ್ತಿರಲಿಲ್ಲ.  ಊರಿನ ಉಸಾಬರಿ ನಿನಗ್ಯಾಕಂತ ಮಕ್ಕಳು ಬೈಯುತ್ತಿರಲಿಲ್ಲ.

ತಾತ... ತಾತ... ಏನಲೇ ಚನ್ನ... ಆಗ ಮತೆ... ಏನನ ಹೊಸ ಸುದ್ದಿ ಇದ್ರೆ ಹೇಳಪೋ ರವಟು ಕೇಳ್ತೀವಿ.  ಅಂಗಾ...  ಹೇಳ್ತಿನಿ ಕೇಳು... ಮನ್ನೆ ಎಪಿಎಂಸಿ ಎಲೆಕ್ಸನ್ ಆತಲ್ಲ ಅವಗೊಂದು ಮಜಾ ಆತ್ನೋಡು.  ಊಂ... ಆ ಭೀಮ ಐದಾನಲಾ... ಯಾರ್‍ ತಾತ... ಅದೇಲೇ ನಮ್ ಮೂಲಿಮನಿ ಭೀಮ ಊಂ... ಊಂ... ಹೌದೌದು... ಎಂದು ತಲೆ ಅಲ್ಲಡಿಸಿದ ಚನ್ನ.

ಅವ್ನು ಎಂಥ ದಡ್‌ಸೂಳೇಮಗ ಅಂದ್ರೆ ಎಲೆಕ್ಸನ್ನಾಗ ನಿತ್ಗಂಡಿದ್ದ.  ಎಲ್ಲಿ ಸೋಲ್ತೀನಂತ ತಿಳ್ಕಂಡು ತನ್ ಓಟು ಆ ಪರಮೇಸಿಗೆ ಹಾಕ್ಬಿಟ್ಟ ಇಂಥನ್ರ ಕಟ್ಗಂಡು ನಾವು ಊರಕ ಐದೀವಿ ನೋಡು ಎಂದಾಗ ಹೋಟೆಲ್ನಲ್ಲಿರುವವರೆಲ್ಲ ನಗತೊಡಗಿದರು.

ಆ ಪರಮೇಸಿ ರೊಕ್ಕ ಇದ್ದಾತ.  ಮೆಂಬರ್‍ಸಿಗೆಲ್ಲ ರೊಕ್ಕ ಕೊಟ್ಟು ತಾನು ಅಧ್ಯಕ್ಷ ಆದ.  ಈ ಭಂಡ ಭೀಮ ಎಲೆಕ್ಸನ್ ಎದುಸ್ರಾಕ ಆಗ್ಲಾರ್‍ದೆ ಈ ಪರಿಸ್ಥಿತಿ ತದ್ಕಂಡಾನ ನೋಡು.  ಆಮ್ಯಾಕ ಇನ್ನೊಂದು ಸುದ್ದಿ ಕೇಳು.  ಎಂದು ಕುಂಡಿ ತುರಿಸಿಕೊಳ್ಳೂತ್ತ ಮಾತು ಶುರುಮಾಡಿದ.

ನಿನ್ನೆ ಆ ಮೇಸ್ಟ್ರು ಮಲ್ಲೇಸಿ ಸತ್ತ.  ಎಂಗ ಸತ್ತಂತ ಕೇಳು ಸ್ವಲುಪು.  ಅವ್ನು ಮೊದ್ದಲೆ ಕುಡ್ಕ.  ಬರೇ ಓಸಿ, ಇಸ್ಪೇಟು, ಸೋಳೇರಂತ ಬಂದ ಸಂಬ್ಳ ಎಲ್ಲಾ ಖರ್ಚು ಮಾಡ್ತಿದ್ದ.  ಮೈಯಾಗ ಆರಾಮಿಲ್ದಂಗಾತು ಬಳ್ಳಾರಿ ಓಪಿಡಿ ಆಸ್ಪತ್ರಿಗ್ಹೋಗಿ ತೋರಿಸ್ಕಂಡು ಬಂದ.  ಆದ್ರೆ... ಅಲ್ಲಿ ಡಾಕ್ಟ್ರು ಅವನಿಗೆ ಕ್ಯಾನ್ಸರ್‍ ಐತಂತ ಹೇಳ್ಬಿಟ್ರು.  ಎದಿನೇ ಹೊಡ್ಕಂಡ್ಹಂಗ ಮಾಡ್ದ.  ಮನ್ಯಾಗ ಏನೂ ಹೇಳ್ದೆ ನನ್ಮುಂದ ಬಂದು ಹೇಳ್ದ.  ನಾವು ಸೀದಾ ಹುಬ್ಬಳ್ಳಿ ಕ್ಯಾನ್ಸರ್‍ ಆಸ್ಪತ್ರಿಗ್ಹೋಗಿ ಸ್ವಲುಪು ದಿನ ಇದ್ವಿ.  ಅಲ್ಲಿ ಡಾಕ್ಟ್ರು ಹೇಳಿದ್ರು `ಇದು ಆಗ್ಲೆ ಬಡ್ಡಿಗೆ ಬಂದೈತಿ ನೀವು ಮನಿಗೆ ಕರ್‍ಕಂಡ್ಹೋಗ್ರಿ.  ಇರಷ್ಟದಿನ ಇರಲ್ಲಿ' ಅಂದ್ರು.  ಅಲ್ಲಿಂದ ಸೀದಾ ಊರಿಗೆ ಬಂದ್ವಿ ಎನ್ನುತ್ತ ಕಿವಿಯೊಳಗೆ ಕಡ್ಡಿ ಹಾಕಿ ಕೂಕಣಿ ತೆಗೆದುಕೊಂಡು ಮತ್ತೆ ಮಾತಿಗಿಳಿದ.

ಮನ್ನೆ ಅವ್ನ ಮನಿ ಹತ್ರ ಹೋಗಿದ್ದೆ ಪಾಪ... ಮಾತಾಡಕ ಬರ್‍ಲಾರ್‍ದಂಗಾಗಿತ್ತು.  ನನ್ನ ನೋಡಿದ್ಕೂಡ್ಲೆ ಅಳಾಕ ಸುರುಮಾಡ್ದ.  ಕೈ ಹಿಡ್ದು ನೋಡ್ದೆ ಆಗ್ಲೆ ತಣ್ಣಗ ಆಗಕ್ಹತ್ತಿದ್ವು...  ಅವ್ನ ಹೆಣ್ತಿಗ್ಹೇಳಿ ಗಂಗೆ ಕೊಡಂಗೆ ಸ್ವಲುಪು... ಅಂದ್ಕೂಡ್ಲೆ ಪಾಪ ಆ ಹುಡ್ಗಿ ಅತ್ಗಂತ ನೀರು ಕೊಟ್ಲು.  ಅಷ್ಟ್ ಜಲ್ದಿ ಸಾಯ್ಲಿಲ್ಲ.  ಅಲ್ಲೇ ಇದ್ದ ಬಗಲ್ಮನಿ ಸಾಂಬಯ್ಯ ಓಡ್ಹೋಗಿ ಸಾರಾಯಿ ಪಾಕೀಟು ತಂದು ಅವ್ನ ಬಾಯಾಗ ಸುರ್‍ದ.  ಸ್ವಲುಪಹೊತ್ತಿಗೆ ಸತ್ತ ನೋಡು ಎನ್ನುತ್ತ ಕುಂಡಿ ಮೇಲೆತ್ತಿ ಢಂ!  ಅಂತ ಹೂಸು ಬಿಟ್ಟ.  ಅಲ್ಲಿರುವವರೆಲ್ಲ ಗಹಗಹಿಸಿ ನಗ ತೊಡಗಿದರು.

ತಾತ ನೀನು ಏನೇ ಅನ್ನು ಬಲೇಟ ಮುದೇತ ನೋಡು... ಯಾಕಲೇ ಚನ್ನ ಅಂಗಮ್ತಿ.  ನಾನು ಹೇಳಿದ್ದು ಎಂಗ್‌ಕಾಮ್ತೈತಿ... ಅಂಗಲ್ಲಪೋ ತಾತ ನಾನು ಅಂಗೆ ಸುಮ್ಕೆ ಕೋಡ ಮಾಡ್ದೆ.  ಅಂದ್ಹಂಗೆ ಈ ವರ್ಸ ಎಂಗೈತಲೇ ನೆಲ್ಲಿನ(ಭತ್ತ) ರೇಟು.  ಏ... ಅಂಥ ರೇಟೇನಿಲ್ಲಪೋ... ಮಮೂಲೈತೆ.  ಎಂಗಾನ ಆಗ್ಲಿ ನೀನೊಬ್ಬತನ ಬುದ್ಧಿವಂತ ಅದೆಲ್ಲ ಸರಿ ಬಿಡು.  ಎಲ್ಲ ನಿನ್ನ ಆಸೀರ್ವಾದಪೋ ತಾತ.  ಲೇ... ನಂದೇನೈತೋ ಎಲ್ಲ ಆ ಸಿವ್ನಾಟ.

ಮಲ್ಲಣ್ಣ ತಾತ ಬೀಡಿ ಸೇದುತ್ತ ಕುಳಿತಿದ್ದ.  ಹೋಟೆಲಿನ ಮುಂದುಗಡೆಯಿಂದ ಹೆಂಗಸು ಹಾದು ಹೋಗುವುದನ್ನು ನೋಡಿದ.  ಕಣ್ಣುಸ್ವಲ್ಪ ಮಂಜಾಗಿದ್ದರೂ ನಿಖರವಾಗಿ ಇಂಥವರೇ ಎಂದು ಗುರುತಿಸುತ್ತಿದ್ದ.  `ಏನಂಗೆ ದ್ಯಾಮವ್ವ... ಅಂಗೇ ವಂಟೆಲಾ...' ಹಿಂತಿರುಗಿ ನೋಡಿದ ದ್ಯಾಮವ್ವ.  ಇಲ್ಲಪೋ ತಾತ... ನಾ ನೋಡ್ಲಿಲ್ಲ ಎಂಗೈದಿಯಪ.  ಆರಮೈದಿಗಿಲ್ಲ...  ಏನ್ ಆರಾಮಂಗೆ `ನಾಡು ಓಗಂತೈತೆ... ಸುಡುಗಾಡು ಬಾ ಅಂತೈತಿ... ನನ್ನ ಕುಣಿ ನೀನೇ ತೋಡ್ಬುಡಂಗೆ'  ಏ... ಅಂಗ್ಯಕಮ್ತಿ ತಾತ.  ನೀ ಇನ್ನೂ ಬಾಳಿ ಬದುಕ್ಬೇಕು.  ನಾಕು ಜನ್ರಿಗೆ ಉಪಕಾರ ಮಾಡಾತ ನೀನು.  ಅದಿರ್‍ಲಿ ನೀನ್ ಎಂಗೈದಿಯಂಗೆ.  ಆಯಾ... ನಂದೇನಪೋ ಅದೇ ಸುಡಗಾಡ ಬದ್ಕು.  ಅಂದ್ಹಂಗ ನಿನ್ ಮಕ್ಳು ಏನಾರ... ಥೂ ಅವ್ರೆಸ್ರು ಎತ್ಬಾಡ.  ಅವು ಇದ್ರೂ ಒಂದೇ... ಸತ್ರೂ ಒಂದೇ.  ಅಂಗ್ಯಾಕಮ್ತ್ಯವಾ.   ಮತ್ತಿನ್ನೇನು ತಾತ... ಅಲಾ ಅವ್ವ ಅಂಥ ನಾನೊಬ್ಬಕೈದೀನಿ ಅಂಬ ಗ್ಯಾನ ಬ್ಯಾಡ ಆ ಕೋಡಿಗಳಿಗೆ.  ಹೆಂಡ್ರು ಬಂದ್ಮೇಲೆ ಯಾ ಅಪ್ಪ... ಯಾ ಅವ್ವ... ನೀನ್ಹೇಳದು ಖರೆವೈತೆ ಬುಡು.  ಅಗಾ... ಎಲ್ಲಿಗ್ಹೊಂಟೆವಾ.  ಇಲ್ಲೇ ಕಿರಾಣಿ ಸಾಮಾನು ತಗಂಬರಾಕ ವಂಟೀನಿ.  ಇಲ್ನೋಡು... ಆ ಕಾಕನ ಅಂಗಡ್ಯಾಗ ತಗಂಬಾ ಮಾಲು ಬೇಸಿರ್‍ತೈತೆ.  ಅಂಗೇ ರೇಟು ಕಮ್ಮಿ ಕೊಡ್ತಾನಾ.  ಆಗ್ಲಿ ತಾತ ಎಂದು ಹೊರಟಳು.

ಲೇ... ನಾಗ, ಜಂಬ, ಕೆಂಚ ನೋಡ್ರಲೋ ಆ ಯಮ್ಮ ಎಂಗ ಕಷ್ಟಪಟ್ಟು ದುಡಿತಾಳ.  ನೀವೂ ಐದೀರಿ... ದರಿದ್ರಗತಿ ತಿಂದು ತಿರ್‍ಗದು ಆತ್ನೋಡು, ಅದು ಸಾಲ್ದಂತ ನಿಮ್ಗೆ ಹೆಂಡ್ರು ಮಕ್ಳು ಬ್ಯಾರೆ ಕೇಡು ಎಂದು ಎಗ್ಗಿಲ್ಲದೆ ಬೈದ ತಾತ.

ತಾತ... ಆಯಮ್ಮ ಸುಡುಗಾಡ್ನಗ ಕುಣಿ ತೋಡ್ತಾಳಲ ದ್ಯಾಮವ್ವ ಅಲಾ.  ಹೌದಪಾ... ಅದೊಂದು ದೊಡ್ಡ ಕತಿ ಐತಿ ಕೇಳು.  ಇಪ್ಪತ್ತೈದೊಸ್ರದ ಹಿಂದೆ ಎಮ್ಮಿಗ್ನೂರಾಗ ಇದ್ಲು.  ಅಲ್ಲಿ ಭಾಳ ಕಷ್ಟ ಅನುಭವಿಸಿದ್ಲು.  ದ್ಯಾಮವ್ವನ ಅಪ್ಪ ಇಲ್ಲೇ ಕಂಪ್ಲಿಗೆ ಗಂಡನ್ನ ಕರ್‍ಕಂಡ್ ಬಂದ್ಬುಡು.  ಇಲ್ಲಿ ಕೂಲಿ ಕೆಲ್ಸ ಸಿಗ್ತಾವು ಅಂತ್ಹೇಳಿ ಕರ್‍ಕಂಡು ಬಂದ.  ಊರೆಲ್ಲ ಸುತ್ತಾಡಿದ್ರೂ ಕೆಲ್ಸ ಸಿಗ್ಲಿಲ್ಲ.  ಕೊನಿಗೆ ನನ್ಕಡೆ ಬಂದು ಕೇಳ್ಕಂಡ್ರು.  ಹೊಸ್ದಾಗಿ ಊರಿಗೆ ಬಂದರ್‍ನ ನಮ್ಮೂರಗಿನ ಜನ ನಂಬಂಗಿಲ್ಲ ಅದ್ಕೆ ನಿಂಗ ಕೆಲ್ಸ ಸಿಕ್ಕಿಲ್ಲ.  ನಾನು ಕೊಡುಸ್ತಿನಿ ನಡಿ ಅಂತ್ಹೇಳಿ ವೀರಣ್ಣ ಗೌಡ್ರ ಮನ್ಯಾಗ ಕೆಲ್ಸಕ್ಕೆ ಸೇರ್‍ಸಿದೆ ದ್ಯಾಮವ್ವನ ಗಂಡ ಲಚಮ್ಯಾನ.

ಊರೆಂಬ ಊರು ಬರೀ ಜಗ, ದ್ವೇಷ, ಅಸೂಯೆಯಿಂದ ಕೂಡಿದ್ದು, ಅಲ್ಲಿ ಜಾತಿ ಲೆಕ್ಕಾಚಾರವೇ ಹೆಚ್ಚಾಗಿತ್ತು.  ಅದ್ರಲ್ಲೂ ಕೆಲವರು ಬುದ್ಧಿವಂತರೂ ಐದಾರಂತ ಒಮ್ಮೆ ಮಲ್ಲಣ್ಣ ತಾತನ ಹತ್ತಿರ ಹೊಸದಾಗಿ ಬಂದ ಇನ್ಸ್‌ಪೆಕ್ಟರ್‍ ಮಾತಾಡಿದ್ರು.  ಇದ್ನೆಲ್ಲ ನೆನೆಸಿಕೊಳ್ಳತ್ತ ಹೇಳತೊಡಗಿದ ತಾತ.  `ತಾತ ಆಯಮ್ಮನ ಕತೆ ಹೇಳದ್ಬಿಟ್ಟು ಏನನ ನೆಪ್ಪಮಾಡ್ಕೆಂತಿಯಲಾ.'  `ರವಟು ತಡ್ಕಳಲೇ... ವೀರಣ್ಣ ಗೌಡ್ರ ಕಣ್ಣು ದ್ಯಾಮವ್ವನ ಮ್ಯಾಲೆ ಬಿತ್ತು.  ಆಕಿನ ಕೆಡ್ಸಾಕ ಪ್ರಯತ್ನಮಾಡಿದ್ದ.  ಅಷ್ಟ್ರಾಗ ಲಚಮ್ಯಾ ಬಂದು ಬುಡುಸ್ಕಂಡು ಗೌಡ್ರಿಗೆ ನವ್ವರ್‍ಹೆಂಗ ಒದ್ದು ಕೆಲ್ಸ ಬುಟ್ಟು ಬಂದ.'

ಒಂದ್ಸಾತಿ ಊರಾಕ ಹೊಸ ರುದ್ರಭೂಮಿ ಬೇಕಂಥ ಹೇಳಿ ಕೆರಿ ಬಗಲಾಗಿನ ಸೋಮಪ್ಪನ ಗುಡ್ಯಾಗ  ಮೀಟಿಂಗ್ ಸೇರಿದ್ವಿ.  ಅವಾಗ ಹೊಸ್ದಾಗಿ ಬಂದ ಇನ್ಸ್‌ಪೆಕ್ಟ್ರು, ಮಠದ ಸ್ವಾಮೇರು, ಊರಿನ ಗೌಡ್ರು, ನಾನು ಮತ್ತೆ ದೈವ ಎಲ್ಲರೂ ಬಂದಿದ್ರು.  ಕೆರೆ ಬಗಲಾಗಿನ ಎರ್‍ಡು ಎಕ್ರಿ ಗದ್ದಿನ ನಾನೇ ದಾನವಾಗಿ ಕೊಟ್ಟೆ ಅಪ್ಷ್ರಾಗ ದ್ಯಾಮವ್ವ ಲಚಮ್ಯಾ ಮತ್ತೆ ಚಲುವಾದಿ ತಾಯಪ್ಪ ಬಂದ್ರು.  ಅಲ್ಲಿದ್ದ ದೈವ `ಏ... ನೀವ್ಯಾಕ ಬಂದ್ರಿ' ಎಂದು ಗದ್ರಿಸಿದ್ರು.  ಅದಕ್ಕೆ `ಏ... ರವಟು ತಡ್ಕಳ್ರಿ ನಾನೇ ಇಲ್ಲಿಗೆ ಬಾ ಅಂತ ಹೇಳಿದ್ದೆ'.  ಅಂದ್ಕೊಡ್ಲೆ ಎಲ್ಲಾ ಸುಮ್ಯಾದ್ರು.  ಅವ್ರು ಒಂದು ಮೂಲ್ಯಾಗ ಕುತ್ಕಣಕ ಹೋದ್ರು.  ಅವಾಗ ನಾನು ತಡುದು `ಏ... ಅಲ್ಯಾಕ ಕುತ್ಕಂತೀರಿ ಇಲ್ಲಿ ಬರ್‍ರಿ, ಮುಂದೆ' ಎಂದಾಗ ಎಲ್ಲಾ ನನ್ ಮಕ ಮಕ ನೋಡಿದ್ರು.  `ಏನ್ಹಂಗ ನೋಡ್ತೀರಿ ಸುಮ್ನಿರಿ.  ಅವ್ರು ನಮ್ಮಂಗ ಮನಸ್ಯಾರ...' ಅಂದ್ಕೂಡ್ಲೆ ಮನಸ್ನ್ಯಾಗ ಬೈಕಮತ ಸುಮ್ನಾದ್ರು.

ಹೊಸ ರುದ್ರ ಭೂಮ್ಯಾಗ ಈಶ್ವರ ಗುಡಿ ಕಟ್ಟಬೇಕಂಥ ತೀರ್‍ಮಾನ ಮಾಡಿದ್ರು ದೈವದವ್ರು.  ಈಶ್ವರ ಗುಡ್ಯಾಗ ಪೂಜಿ ಮಾಡಾಕ ಯಾರಂತ ಮಠದ ಸ್ವಾಮೇರು ಪ್ರಶ್ನೆ ಎತಿದ್ರು.  ಆಗ ಎಲ್ಲರೂ ಸುಮ್ನಾದ್ರು.  ಯಾರಾದ್ರು ಮಾಡ್ತೀರಂತ ಮತ್ತೆ ಕೇಳಿದ್ರು.  ಎಲ್ಲರೂ ಗುಸು ಗುಸಂತ ಮಾತಾಡಾಕ ಸುರುಮಾಡಿದ್ರು.  ನಾನೊಲ್ಲೆ... ನೀನೊಲ್ಲೆ... ಅನ್ನಕ್ಹತಿದ್ರು.  ಅಂಗಾರೆ ಎಂಗಪಾ ಅನ್ಕಂತ ನಾನೇ ಎದ್ದು ಕೇಳ್ದೆ.  ನಂದೊಂದು ಮನ್ವಿ ಐತೆ... ದೈವ ಕೇಳ್ಬೇಕು ಅಂದೆ.

ಇಲ್ಲಿರೋ ದೈವ ಯಾರೂ ಪೂಜಿ ಮಾಡಾಕ ಒಪ್ಪಿಗಿಲ್ಲ ಅಂದಾಗ್ಹಾತು.  ನಾನಗ ತಿಳಿದ್ಹಂಗ ಲಚಮ್ಯಾನ ಹೆಂಡ್ತಿ ದ್ಯಾಮವ್ವ ಪೂಜಿ ಮಾಡ್ತಾಳ ಅಂದ್ಕೂಡ್ಲೆ ಜನ್ರೆಲ್ಲಾ ಗಲಾಟೆ ಮಾಡಾಕ ಶುರುಮಾಡಿದ್ರು.  ದೈವದಾಗ ಒಬ್ಬ ಮುಖಂಡ ಶಿವಲಿಂಗಯ್ಯ ಎದ್ದು ನಿಂತು `ಮಲ್ಲಣ್ಣ ತಾತ ನೀನು ಹೇಳೋದು ನಮ್ಗೆ ಒಂದು ಸ್ವಲುಪನೂ ಒಪ್ಪಿಗಿ ಇಲ್ಲ.  ಅಲಾ... ಈ ಜಾತೇರು ನಮ್ಮ ಈಶ್ವರ ಗುಡ್ಯಾಗ ಪೂಜಿ ಮಾಡದಂದ್ರೆ ಏನು' ಎಂದಾಗ, ದೈವ ಹೌದು... ಹೌದು... ಎಂದು ಕುರಿಗಳು ಒದರಿದ್ಹಂಗ ಒದರಿದ್ರು.  ನಂಗೆ ಸಿಟ್ಟು ಬಂದು ಏ ಶಿವಲಿಂಗಯ್ಯ ಸ್ವಾಮಿ... ಓಗ್ಲಿ ನೀನು ಪೂಜಿ ಮಾಡ್ತೀಯಾ... ಇಲ್ಲ ನಿನ್ನ ಮಗನ್ನ ಬಿಡ್ತಿಯಾ ಎಂದು ಗದ್ರಿಸಿದೆ.  ಅದ್ಕೆ ಸುಮ್ನಗಿ ಕುತ್ಕಂಡ್ಬುಟ್ಟ.  `ಏನ್ ಶಿವಲಿಂಗಯ್ಯ ಸ್ವಾಮಿ... ಸುಮ್ಕೆ ಕುತ್ಕಂಡ್ಬುಟ್ಟಿ' ಎಂದು ಇನ್ಸ್ಪೆಕ್ಟ್ರು ಸಾಹೇಬ್ರು ಮತ್ತು ಮಠದ ಸ್ವಾಮೇರು ಕೇಳಿದ್ಕೂಡ್ಲೆ ಯಾವ ಉತ್ರ ಬರ್‍ಲಿಲ್ಲ.  ಇನ್ಸ್‌ಪೆಟ್ರು ಕೆಲ್ವು ಮುಖಂಡ್ರು ದಲಿತ ಮಹಿಳೆಗೆ ಇಂಥ ಸ್ಥಾನ ಕೊಟ್ಟ ಮಲ್ಲಣ್ಣ ತಾತನ ನಿರ್ಣಯ ಸಂತೋಸ ಆಗೈತಂಥ ಹೊಗಳಿದ್ರು.

ಮಲ್ಲಣ್ಣ ತಾತನ ಮಾತುಗಳನ್ನು ಹೋಟೆಲ್ ಮಾರಕ್ಕ ತದೇಕ ಚಿತ್ತದಿಂದ ಕೇಳುತ್ತಿದ್ದಳು.  ಅದ್ಯಾಕ್ಹಂಗ ನೋಡ್ತೆಂಗೆ ಮಾರಕ್ಕ... ಇನ್ನೊಂದಿನ್ನೊಂದು ಚಾ ಕೊಡು.  ಆತು ತಾತ... ಈಗ ಸೋಸಿ ಕೊಟ್ಬುಡ್ತೀನಿ.

ಲೇ ಚನ್ನ ಇನ್ನೊಂದು ಬೀಡಿ ಇದ್ರೆ ತಾಲೇ... ಇಗ ತಗಳಪೋ... ನೀನು ಭಾಳ ಸೇದ್ತಿ ಬುಡು.  ಏನ್ಮಾಡ್ತ್ಯಾ ಹಾಳ ಚಟ... ಹೌದಲ್ಲಾ, ಅದು ಖರೇವು ಅನ್ನು ಎಂದ ಚನ್ನ, ಎಲ್ಲರೂ ಚಹ ಕುಡಿದು ಮಲ್ಲಣ್ಣ ತಾತ ಹೇಳುವ ಕತೆ ಕೇಳಲು ಮುಂದಾದರು.

ಅಲ್ಲಿಗೆ ಮುಗಿಲಿಲ್ಲ ಕೇಳ್ರಿ.  ದ್ಯಾಮವ್ವ ಲಚಮ್ಯಾಗ ಇಬ್ರು ಗಂಡ್ಮಕ್ಳು.  ಅವರ್‍ನಾ ಸಾಲಿ ಬಿಡ್ಸಿ ಕೂಲಿ ಮಾಡಾಕ ಕಳಿಸ್ತೀನಿ ಅಂದ ಲಚಮ್ಯಾ.  ನಾನೇ ಬಯದು ಹುಡುಗ್ರು ಓದ್ಬೇಕು ಇಲ್ದಿದ್ರೆ ಅವು ನಿನ್ನಂಗ ಆಗ್ತಾವ ನೋಡು.  ನೀಸುಮ್ಕಿರು ಅವರ್‍ನಾ ಗೌರ್‍ಮೆಂಟ್ ಹಾಸ್ಟಲ್ನಾಗ ಸೇರಿಸಾಮಂತೆ.  ನಮ್ಮೂರ್‍ನಗಿರೋ ರೆಹಮಾನ್ ಸಾಬ್ ಮೇಷ್ಟ್ರು ಈಗ ಬಳ್ಳಾರ್‍ಯಾಗ ಇಒ ಮತ್ತೆ ಹೊಸಪೇಟ್ಯಾಗ ನಾಗರಾಜ ರೆಡ್ಡಿ ಮೇಷ್ಟ್ರು ಬಿಇಒ ಆಗ್ಯಾರ.  ಇವರಿಬ್ಬರ್‍ನ ಕೇಳ್ಕಂಡು ಕಂಪ್ಲ್ಯಾಗಿರೋ ಹಾಸ್ಟಲ್ನಾಗ ಸೇರ್‍ಸಮಂತೆ ಎಂದು ಗದ್ರಿಸ್ದೆ.  ಒಂದಿನ ರೆಹಮಾನ್ ಸಾಬ್ ಮತ್ತೆ ನಾಗರಾಜ ರೆಡ್ಡಿ ಮೇಷ್ಟ್ರುನ ಕಂಡು ಬಂದ್ವಿ.  ಆಗ ಅವ್ರು ಒಂದೇ ಮಾತ್ನ್ಯಗ ಒಪ್ಪಗಂಡ್ರು.  ಊರಾಕಿರೋ ಸಂತೆ ಮಾರ್ಕೇಟ್ ಬಗಲಾಗಿನ ಸಾಲ್ಯಾಗ ವೀರಣ್ಣ ಮೇಷ್ಟ್ರು ಮತ್ತೆ ಮಾಬಲಪ್ಪ ಮೇಸ್ಟ್ರಗ್ಹೇಳಿ ರವಟು ಹುಡುಗ್ರಿಗೆ ಬೇಸು ಹೇಳಿ ಕೊಡ್ರಿ ಅದ್ವಿ, ಅವ್ರು ಕಾಳ್ಜಿ ಬುಟ್ಬುಡು ತಾತ ಅಂದ್ರು.  ಆಕಳಿಕೆ ಬಂದು ಐದು ನಿಮಿಷ ಸುಮ್ಮನೆ ಕುಳಿತು ಮತ್ತೆ ಹೇಳಲು ಶುರುಮಾಡಿದ.

ಅದೇ ಟೈಂನಾಗ ರುದ್ರಭೂಮಿ ಕೆಲ್ಸ ಮುಗ್ದು ಈಶ್ವರ ಗುಡಿನೂ ತಯಾರಾಯ್ತು.  ಅದರ ಬಗಲಾಗ ಒಂದು ಸಣ್ಣಗುಡುಸ್ಲು ಹಾಕಿ ದ್ಯಾಮವ್ವ ಲಚಮ್ಯಾಗ ಇರಾಕ ಮಾಡಿದ್ವಿ.  ಈಶ್ವರ ಗುಡಿ ಪೂಜಿ ಮಾಡಾಕ ದ್ಯಾಮವ್ವಗ ತಿಂಗ್ಳಿಗೆ ಮುನ್ನೂರು ರೂಪಾಯಿ ಕೊಡಕ ದೈವ ಒಪಿಗಂತು.  ಆದರೆ ಲಚಮ್ಯಾ ಮತ್ತೆ ತಾಯಪ್ಪ ಅವರಿಷ್ಟದಂಗ ಸುಡುಗಾಡಾಗ ಕುಣಿ ತೋಡಾಕ ಕೇಳ್ಕಂಡ್ರು ಆಯ್ತಂತ ನಾವೂ ಒಪ್ಪಿಗೆಂಡ್ವಿ.  ಹೆಣದ ಕಡೆಯರ್‍ರು ಕೊಟ್ಟ ನೂರು ರೂಪಾಯಿದಾಗ ತಲಾಕ ಅರ್ಧ ತಗಮ್ತಿದ್ರು.  ತಿಂಗಳ್ದಾಗ ನಾಕೋ ಐದೋ ಹೆಣ ಬರ್‍ತಿದ್ವು.  ಬಂದ ರೊಕ್ಕದಾಗ ಸಂಸಾರ ಸಾಗುಸ್ಬೇಕಾಗಿತ್ತು.  ತಾಯಪ್ಪಗ ಅವಾಗವಾಗ ಆರಾಮಿಲ್ದಂಗಾಗಿ ಕುಣಿ ತೋಡಾಕ ಬರ್‍ತಿದ್ದಿಲ್ಲ.  ಅಂಥ ಟೈಮ್ನಾಗ ಲಚಮ್ಯಾಗ ಒಬ್ಬನೇ ಕುಣಿ ತೋಡಾಕಾಗ್ದೆ ದ್ಯಾಮವ್ವನೂ ಆಸ್ರ ಆಗ್ತಿದ್ಲು.  ಒಂದಿನ ತಾಯಪ್ಪಗ ಜಗ್ಗಿ ಜ್ವರ ಬಂದು ಸತ್ತ.  ಕುಣಿತೋಡಾ ಜವಾಬ್ದಾರಿ ಗಂಡ ಹೆಂಡ್ತಿ ಮ್ಯಾಲೆ ಬಿತ್ತು.  ಈ ಸುದ್ದಿ ತಿಳ್ದು ನಂಗೆ ಭಾಳ ಬೇಸ್ರಾತು.  ಪಾಪ... ಆ ಎಣ್ಮಗಳು ಎಂಗಪಾ ಕಷ್ಟ ಪಡ್ತಾಳ ಅಂದ್ಕಂಡು ಲಚಮ್ಯಾನ ಜೊತಿಗೆ ಕೆಲ್ಸ ಮಾಡಾಕ ಬ್ಯಾರೇರ್‍ನ ನೋಡಿದ್ವಿ ಯಾರೂ ಬರ್‍ಲಿಲ್ಲ.  ಇರ್‍ಲಿ ಬುಡಂತ ನಾನು ಸುಮ್ಕೆ ಆಗ್ಬುಟ್ಟೆ ಎನ್ನುತ್ತ ಕಣ್ಣೀರು ಒರೆಸಿಕೊಳ್ಳಲು ಪಂಚೆ ಮೇಲೆತ್ತಿದಾಗ ಮಾರಕ್ಕ ನೋಡಿ ನಾಚಿಗುಂದ ಆಚೆ ತಿರುಗಿದಳು.

ತಾತ... ತಾತ... ಎಂದು ಎಚ್ಚರಿಸಿದ ಚನ್ನ  ಆಂ... ಎನ್ನುತ್ತ... ಲೇ ಚನ್ನ ಇನ್ನೊಂದು ಬೀಡಿ ಇದ್ರೆ ತಾರಲೇ.  ಆವಾಗ ಕೊಟ್ಟೆಲಾ ಬೀಡಿ ಅದ್ಯಾವದ್ಲೆ ಸ್ವಲುಪನ ಸರಿ ಇದ್ದಿಲ್ಲ.  ಗಣೇಶ್ ಬೀಡಿ ಇದ್ರೆ ಕೊಡ್ಲೆ.  ಅನೌನ... ಅದೇ ಬೇಸು.

ಏ... ಇಲ್ಲಪೋ ತಾತ ಅದು.  ಇರ್‍ಲಿತಾ... ಇದ್ದಿದ್ರಾಗ ಸುಧಾರಿಸ್ಯಾಗಮನ ಎನ್ನುತ್ತ ಮೂಗಿನಲ್ಲಿ ಕೈ ಹಾಕಿ ಸಿಂಬಳ ತೆಗೆಯುತ್ತ ಮಾತು ಮುಂದುವರಿಸಿದ.

ಅವಾಗವಾಗ ಗಂಡ ಹೆಂಡ್ತಿ ಜಗಳ ಆಡ್ತಿದ್ರು.  ಇತ್ತಿತ್ಲಾಗ ಲಚಮ್ಯಾ ಜಗ್ಗಿ ಕುಡ್ಯಕ ಸುರುಮಾಡಿದ್ದ.  ರೊಕ್ಕ ಸಾಲ್ವಲ್ದಂತ ಒಂದ್ಸಾರಿ ದ್ಯಾಮವ್ವ ಬಂದು ಹೇಳಿ ಅತ್ತಿದ್ಲು.  ಲಚಮ್ಯಾನ ಕರ್‍ದು ಬುದ್ಧಿ ಹೇಳಿದ್ರೂ ಕೇಳ್ತಿದ್ದಿಲ್ಲ.  ಕಣ್ತಪ್ಸಿ ಕುಡಿತ್ತಿದ್ದ.  ನಿನ್ನ ಹಣೆಬರನೇ ಇಷ್ಟೇ ಓಗಂತ ಬೈದು ಕಳ್ಸಿದ್ದೆ.  ಇದ್ಕಿದ್ದಂಗ ಲಚಮ್ಯಾಗ ಪಾರ್ಸಿ (ಲಕ್ವ) ಹೊಡ್ದು ಒಂದು ಕೈ ಒಂದು ಕಾಲು ಬಿದ್ದು ಮನ್ಯಾಗ ಹಾಸ್ಗಿ ಹಿಡಿದು ಮಕ್ಕಂಬುಟ್ಟ ಸುದ್ದಿ ತಿಳ್ದು ನಾನು ಅವ್ನ ಮನಿಗ್ಹೋಗಿ ನೋಡ್ದೆ.  ಲಚಮ್ಯಾ ನನ್ನೋಡಿ ಅಳಾಕ ಸುರುಮಾಡ್ದ.  ಸುಮ್ಕಿರು ಆದಿದಾತು... ಆ ಸಿವಾ ಐದಾನ ಎಲ್ಲಾ ಕಡಿಮಿ ಮಾಡ್ತಾನ ಬುಡು ಅಂತ್ಹೇಳಿ ಸುಧಾರ್‍ಸಿದೆ.  ಆಂ... ಅಂದ್ಹಂಗ ದ್ಯಾಮವ್ವ... ಆ ನಮ್ಮ ಆದ್ವಾನಿ ಮಸೀದಿ ರುಗಿನರು ಐದಾರಲಾ ಅವ್ರಕಡೆ ಓಗಿ ಒಂದು ಅಂತ್ರ ಕಟ್ಟಿಸ್ಗಂಡು ಲಚಮ್ಯಾನ ಕೈಕಾಲಿಗೆ ಕಟ್ಟು ಕಡಿಮಿ ಆದ್ರೂ ಆಗ್ಬೋದು ಅಂತ್ಹೇಳಿದ್ದೆ.  ಆದ್ರಂಗ ಮಾಡಿದ್ಲು ಸ್ವಲುಪು ಉತ್ಮ ಅಂತ ಅಂದಿದ್ಲು... ಪಾಪ... ಆ ಹೆಣ್ಮಗ್ಳನ ನೋಡಿದ್ರೆ ಕಳ್ಳು ಚುರುಕ್ ಅಂತೈತೆ.  ಏನ್ಮಾಡದು ಬದುಕ್ಬೇಕಲಾ.  ಊಂ... ನಡಿಲಿ... ನಡಿಲಿ ಎಲ್ಲಾ ಸಿವ್ನಿಚ್ಛೆ.

ಒಂದಿನ ಲಚಮ್ಯಾ ಸತ್ತ.  ಊರಾಗೆಲ್ಲ ಸುದ್ದಿ ಗೊತ್ತಾತು.  ಅವರ ಜನಕ್ಕಂತ ಬ್ಯಾರೆ ಸುಡುಗಾಡು ಮಾಡ್ಕ್ಯಡಿದ್ರು.  ಅಲ್ಲಿ ಕುಣಿ ತೋಡಾತ ಅವತ್ತು ಊರಾಕಿದ್ದಿಲ್ಲ.  ಯಾರೂ ಕುಣಿ ತೋಡಾಕ ಮುಂದ ಬರಲ್ಲಿಲ್ಲ.  ಅಂಥವತ್ತ್ಯಗೂ ದ್ಯಾಮವ್ವ ಹಿಂದು ಮುಂದು ನೋಡ್ಹಂಗ ತಾನೇ ಸೆಲಿಕಿ ಹಾರಿ ಗುದ್ಲಿ ಇಡ್ಕಂಡು ಇಬ್ರು ಮಕ್ಳನ ಕರ್‍ಕಂಡು ಸುಡುಗಾಡಗ್ಹೋಗಿ ಕುಣಿ ತೋಡಿ ಮಣ್ಣು ಮಾಡಿ ಬಂದ್ಲು.  ಇಂಥ ವತ್ನಾಗ ಊರಿನ ಜನ ಬರ್‍ಲಿಲ್ಲ ನಾನು ಮತ್ತೆ ನನ್ನ ಫ್ರೆಂಡ್ಸು ಓಗಿ ಮಣ್ಣ ಮಾಡಿ ಬಂದ್ವಿ.  ಯಾಕ್ಲೇ... ಈ ಬೀಡಿ ಸಜ್ಜಿಲ್ಲ ಬುಡು.  ಅವು ಅಂಗೇ ನೀ ಮುಂದ್ಹೇಳಂತ ಕೈ ಅಲ್ಲಾಡಿಸಿ ಪೀಡಿಸಿ ಕೇಳತೊಡಗಿದ ಚನ್ನ.

ಆಂ... ಹೇಳ್ತಿನಿ ಕೇಳು.  ಮಾರ್‍ನೆ ದಿನ ದ್ಯಾಮವ್ವನ ಮನಿಗ್ಹೋಗಿ ಸಮಾಧಾನ ಮಾಡ್ದೆ.  ಬ್ಯಾರೆ ಕೆಲ್ಸ ಮಾಡ್ವಂತಿ ತಗಳಂಗೆ ಅಂದೆ.  ಅದ್ಕ ಆ ಯಮ್ಮ ಒಪ್ಲಿಲ್ಲ.  ಇಲ್ಲ ತಾತ ನಾನು ಇಲ್ಲೆ ಪೂಜೆ ಮಾಡ್ಕಂಡು ಇದ್ಬುಡ್ತೀನಿ ಅಂದ್ಲು.  ಆಗ್ಲೆವಾ... ಆದ್ರೆ ಕುಣಿ ತೋಡ ಕೆಲ್ಸ ಮಾಡಬ್ಯಾಡ ನಿನ್ನೊಬಾಕಿ ಕೈಯಾಗ ಆಗಂಗಿಲ್ಲ ಅಂದೆ.  ಅಂಗೇ ಆಗ್ಲಿ ಅಂದಿದ್ಲು.  ಆದ್ರೆ ಅದಾದ ಸ್ವಲುಪೇ ದಿನಕ್ಕ ಗೌಡನ ಮಗ ಸತ್ತ.  ಆ ಹೊತ್ನಾಗ ಕುಣಿ ತೋಡೋರು ಯಾರೂ ಇರ್‍ಲಿಲ್ಲ.  ನಿರ್ವಇಲ್ದೆ ದ್ಯಾಮವ್ವ ಕುಣಿ ತೋಡಿದ್ಲು.  ಮಕ್ಳನ ಸಾಕ ಸಲುವಾಗಿ ಈ ಕೆಲ್ಸ ಮಾಡ್ತೀನಿ ಬ್ಯಾಡ ಅನಬ್ಯಾಡ ತಾತ ಅಂತ್ಹೇಳಿ ಕಣ್ಣೀರು ತಗದ್ಲು.  ಆತ್ಬುಡವಾ ಎಂದು ಗೋಣು ಅಲ್ಲಾಡಿಸಿ ಬಂದೆ.  ಒಂದೊಂದು ಸರ್‍ತಿ ಯಾಕಾನಾ ಪಾಪ... ಆ ಎಣ್ಮಗ್ಳಿಗೆ ಪೂಜಿ ಕೆಲ್ಸ ಮಾಡ್ಸಕ್ಹತ್ಸಿ ಇಂಥ ಪರಿಸ್ಥಿತಿಗೆ ತಂದು ಬುಟ್ನೇನಂತ ನನ್ನ ಕಳ್ಳು ಚುರುಕ್ ಅಂತೈತಿ.  ತಪ್ಪು ಮಾಡ್ಬಿಟ್ನ್ಯಪೋ... ಎಂದು ಏದುಸುರು ಬಿಡುತ್ತಿರುವುದನ್ನು ನೋಡಿ ಸುಧಾರಿಸಿದ ಚನ್ನ.

ಅಂಗೇನಿಲ್ಲ ಕೇಳು... ದುಡ್ದು ಮಕ್ಳನ ಸಾಲಿ ಓದ್ಸದ್ಲು.  ಅವ್ರು ಬೇಸೋದಿ ಬೆಂಗಳೂರ್‍ನಾಗ ಒಬ್ಬಾತ ಇಂಜಿನಿಯರ್‍ ಆಗ್ಯಾನ.  ಇನ್ನೊಬ್ಬಾತ ಬಳ್ಳಾರ್‍ಯಾಗ ಬ್ಯಾಂಕ್ನಾಗ ಕೆಲ್ಸ ಮಾಡ್ತಾನ.  ಇಬ್ರಿಗೂ ಲಗ್ನ ಮಾಡಿದ್ಲು.  ಬಳ್ಳಾರ್‍ಯಾಗ ಇರ ಮಗ ದ್ಯಾಮವ್ವನ ಇಲ್ಲೆ ಇದ್ಬುಡಂತ ಕರ್‍ದ.  ಅದಕ್ಕ ಒಪ್ಲಿಲ್ಲ.  ನಾನೇ ಗದ್ರಿಸಿ ಅಲ್ಲೆ ಇದ್ಬುಡು ಈ ಸುಡುಗಾಡ್ಯಾಗೇನು ಇರ್‍ತಿ ಅಂದು ಕಳ್ಸಿದ್ದೆ.  ಆದ್ರೆ ಸೊಸಿ ಕಾಟ ಕೊಡಾಕ ಸುರುಮಾಡಿದ್ಲಂಥ ಮತ್ತೆ ಸುಡುಗಾಡಿಗೆ ಬಂದು ಸೇರ್‍ಕಂಡ್ಲು.  ಇಂಗಾತು ನೋಡು ತಾತ ಅಂದು ಗೋಳೋಂತ ಅತ್ಲು.  ನಾನೆಲ್ಲಿಗ್ಹೋಗಂಗಿಲ್ಲಪೋ ತಾತ... ಇಲ್ಲೇ ಇದ್ಬುಡ್ತೀನಿ ಅಂದ್ಲು.  ಅಂಗೆ ಮಾಡವಾಗ ನಿನ್ನ ಹಣೆಬರ್‍ದಂಗ ಇದ್ದಂಗೆ ಆಗ್ತೈತಿ ಅಂದು ಕಳ್ಸಿದ್ದೆ.

ಕುಣಿ ತೋಡದಂದ್ರೆ ಸುಮ್ನೆ ಏನ್ಲೆ ಚನ್ನ... ಐದೈದು ತಾಸು.  ಅದು ಈ ಬಿಸ್ಲಾಗ ಪಾಪ... ದ್ಯಾಮವ್ವ ಒಬ್ಬಾಕೆ ಕುಣಿ ತೋಡ್ತಾಳ.  ಹೆಣದ ಕಡೆಯರ್‍ರು ಕೊಡೋ ನೂರೈವತ್ತೋ... ಇನ್ನೂರೋ ತಗಂಡು ಜೀವ್ನ ಮಾಡ್ತಾಳ.  ಜತಿಗೆ ಈಸ್ವರ ದೇವ್ರು ಗುಡಿ ಪೂಜಿ... ಎಂಗೋ ನಡಸ್ತಾಳ ಜೀವ್ನ.  ಅದಲ್ದೆ ಗಂಡ ಮಾಡಿದ ಸಾಲ ತೀರಸ್ತೈದಾಳ.  ದ್ಯಾಮವ್ವನ ಅಪ್ಪ ಮನಿ ಕಟ್ಟಿಸ್ಗ್ಯಾಳಕಂತ ಜಾಗ ಕೊಟ್ಟಿದ್ದ.  ಅದನ್ಕೂಡ ಮಾರ್‍ಕ್ಯಾಂಡು ಬುಟ್ಟಿದ ಆ ಲಚಮ್ಯಾ.  ನನ್ಲಿಂದ ನಿಂಗೆ ಈ ಕಷ್ಟ ಬಂತು ನೋಡಂಗೆ ದ್ಯಾಮವ್ವ ಅಂದಿದ್ಕ ಆಕಿ ಏನಂದಿದ್ಲು ಗೊತ್ತೇನ್ಲೆ.... ಏ ಬುಡಪೋ ತಾತ ನಂಗೇನಾಗೈತಿ ಗುಂಡ್ಕಲ್ಲಿದ್ಹಂಗ ಐದೀನಿ.  ಅಂಗಲ್ಲವಾ ನಿನ್ನ ಮಕ್ಳು... ಥೂ... ಆ ಮಕ್ಳು ಸುದ್ದಿ ಎತ್ತಬ್ಯಾಡ ಅವ್ರು ನನ್ ಪಾಲಿಗೆ ಇಲ್ಲ ಅನ್ಕಮ್ತೀನಿ.  ಅವ್ರೆಸ್ರು ಎತ್ತಬ್ಯಾಡ ಅಂತೇಳಿದ್ಲು.  ಹೇಳ್ತಾ ಹೇಳ್ತಾ ಮಲ್ಲಣ್ಣ ತಾತ ಕುಸಿದ!

ಚನ್ನ ಮತ್ತವನ ಗೆಳೆಯರು ಎಷ್ಟೇ ಎಬ್ಬಿಸಿದರೂ ಏಳಲಿಲ್ಲ.  ಯಪ್ಪೋ... ತಾತ ನಮನ್ನ ಬುಟ್ಟು ಓಗ್ಬಿಟ್ನಲ್ಲಪ್ಪೋ... ಎಂದು ಬಾಯಿ ಬಾಯಿ ಬಡಿದು ಕೊಳ್ಳುತ್ತಿರುವ ಶಬ್ದ ದ್ಯಾಮವ್ವನ ಕಿವಿಗೆ ಬಿತ್ತು.  ಬಂದು ನೊಡಿದರೆ ಮಲ್ಲಣ್ಣ ತಾತ ಸತ್ತಿದ್ದ.  ಗರ ಬಡಿದಂತೆ ನಿಂತಳು.  `ನಾಡು ಓಗಂತೈತೆ... ಸುಡುಗಾಡು ಬಾ ಅಂತೈತಿ... ನನ್ನ ಕುಣಿ ನೀನೇ ತೋಡ್ಬುಡಂಗೆ'  ಎಂದು ಹೇಳದ್ದ ಮಾತುಗಳು ನೆನಪಾದವು.  ಎಂದಿನಂತೆ ಹಾರೆ, ಗುದ್ದಲಿ, ಪಿಕಾಸಿ ಹಿಡಿದು ಕುಣಿ ತೋಡಲು ಅಣಿಯಾದಳು.

        *   *   *

ಕೀಲಿಕರಣ: ಕಿಶೋರ್‍ ಚಂದ್ರ

ಸದ್ಗುರುವಿನ ವರವು ನಮಗೆ ಇರಲಿ

ಸದ್ಗುರುವಿನ ವರವು ನಮಗೆ ಇರಲಿ
ಸರಸಿಜ ಮುಖಿಯೆ                        ||ಪ||

ಪರಮ ನಿತ್ಯಾನಂದ ಸುಖವು
ಆರವು ಹಿಡಿದು ನುಡಿಯುತಿರಲು
ಸ್ಮರನ ಮತ್ಸರವನ್ನು ಗೆದ್ದು
ಮರಣ ಬಾಧೆ ಮಾಯೆ ತುಳಿದು       ||೧||

ದೇವ ಶಿಶುನಾಳಧೀಶನ
ಜೀವ ದಣಿದು ಉಸುರಿದ೦ತೆ
ಕೇವಲಾದ ಬ್ರಹ್ಮ ತಾನು
ಠಾವಿನೊಳಗೆ ನಿಂತ ಬಳಿಕ             ||೨||
                ****
-ಶಿಶುನಾಳ ಶರೀಫ್


ಕೀಲಿಕರಣ: ಎಂ.ಎನ್.ಎಸ್. ರಾವ್

ಮಣಿಮಾಲಿಕೆ ಕೊಟ್ಟನೋ ಸದ್ಗುರುನಾಥ

ಮಣಿಮಾಲಿಕೆ ಕೊಟ್ಟನೋ ಸದ್ಗುರುನಾಥ ಎನಗೊಂದು
ಮಣಿಮಾಲಿಕೆ ಕೊಟ್ಟನೋ ಸದ್ಗುರುನಾಥ

ಪ್ರಣಮ ಪಂಚಾಕ್ಷರಿಯ ಎಣಿಸಿ ಜಪಮಾಡೆಂದು
ಹನ್ನೊದುಮಣಿ ಮೇಲೆ ಇನ್ನೊಂದು ಸಣ್ಣರುದ್ರಾಕ್ಷಿ                                ||ಅ. ಪ||

ಆದರೊಳುನ್ನತಾಮೃತದ ಶಿಲೆಮಾನ ರತ್ನದ ಹರಳಿನೊಳು
ಚಿನ್ನದ ಎಳಿಯ ಪೊಣಿಸಿ ಎಣಿಸಿ ಜಪಮಾಡೆಂದು                                 ||೧||

ಕಸುಗ್ರಾಮದ ಕಡಕೊಳ್ಳ ಕಡೆಗಿಟ್ಟು
ಹೊಸಗ್ರಾಮ ಸ್ಥಳಕಿಳಿದು
ಬಸವನಾಮಾಮೃತದ ರುಚಿ ಕಂಠಮಾಲೆಯನು ಕೊಟ್ಟಾತನೋ ತಾನು  ||೨||
ಕರದಿ ಕೈದಂಡ ಕೋಲು ಪಾರಮಾಡಿದ ವಿರಚಿಸಲು
ವರವೀರಯೋಗಿ ಧರೆಗೆ ಮೇಲೆ ಶಿಶುನಾಳಢೀಶ
ತರಲಘಟ್ಟದ ಪೀರ ಫಕೀರನಾಗೆನುತ ಮಣಿಮಾಲಿಕವ ಕೊಟ್ಟನೋ        ||೩||
                ****
-ಶಿಶುನಾಳ ಶರೀಫ್


ಕೀಲಿಕರಣ: ಎಂ.ಎನ್.ಎಸ್. ರಾವ್

ಗುರುನಾಥನಂತಃಕರಣವಾಯಿತು

ಗುರುನಾಥನಂತಃಕರಣವಾಯಿತು ಆತ್ಮರಾಮನಿಗೆ
ನಿನ್ನಂತರ೦ಗದಿ ಮರಳಿ ತೆರಳದಂತೆ ಇಹದೊಳಗೆ     ||ಪ||

ಸಾಧು ಸಂತತಿ ಸಿದ್ಧ ಆರೂಢಗೆ ತಾನೇಕದೋಳ್
ಆರನಳಿಯುತ ಮೂರು ಮೀರುವನೆ ಬ್ಯಾರೊಂದು ತತ್ವಾಧಾರದಲಿ
ಗುರುಬೋಧ ಪಡದವಗೆ ಪಾರಮಾರ್ಥದ
ನೆಲೆಯನೇರುವಗೆ ಘನತೂರ್ಯದೋಳ್                 ||೧||

ವಸುಧಿಯೊಳ್ ಶಿಶುನಾಳಧೀಶನ ಆಸಮಸೇವಕರಿಗೆ
ಪಶುಪತಿಯ ವಶವಾಗಿ ಗುರುಗೋವಿಂದನಾಥನಿಗೆ
ಕಸಮಳದಿ ಗುರುಕೊಟ್ಟ ಮಂತ್ರವ ಜಪಿಸುತಿರುವವಗೆ || ೨ ||
                ****
-ಶಿಶುನಾಳ ಶರೀಫ್


ಕೀಲಿಕರಣ: ಎಂ.ಎನ್.ಎಸ್. ರಾವ್

ಹೋಗೋಣ ನಡಿಯೋ ಬೇಗನೆ ಎದ್ದು

ಹೋಗೋಣ ನಡಿಯೋ ಬೇಗನೆ ಎದ್ದು
ಸಾಗಿ ಸದ್ಗುರುವಿನ ಯೋಗ್ಯ ಮಂದಿರಕೆದ್ದು                ||ಪ||

ಮೃಡನ ಆಕಾರಾ ಪೊಡವಿಯೊಳು ಬಡವರಾಧಾರಾ
ಬಿಡದೆ ಭಕ್ತ ಜನರ ಉದ್ಧಾರಾ ಮಾಡುತಲಿಹ
ಆಡವಿ ಪಾಚ್ಛಾನೆಂಬೋ ಒಡಿಯನಾ ಮಠಕೆದ್ದು           ||೧||

ಕಿಂಕರರಾಗಿ ನಾವಿಬ್ಬರು
ಭೊಂಕರನೆ ಸಾಗಿ ಭಜಿಸಿ ಕರುಣಾಹಂಕಾರ ಪೋಗಿ
ಪಂಕಜಮುಖಿ ಶಂಕರನೆನಿಸಿದ ಆಂಕಲಿಸ್ಥಳಕೆದ್ದು        ||೨||

ಪರಮ ವಿಶಾಲಾ ಪಾವನ ಶುಭ
ಚರಿತನಿರಾಲಾ ನಿರಂಜನ ನಿರುಪಮಶಾಲಾ ದಯಾಪರ
ಪರಲೋಕ್ಕೋದ್ಧರಿಸಿದ ಚರಣಕಮಲಕೆದ್ದು                ||೩||

ಚರರೂಪಧರಿಸಿ  ಚೆನ್ನಾಗಿ ಸಾಧು
ಧರಿಯೊಳವತರಿಸಿ ದಾಸೋಹದ ಸಿರಿಯನ್ನೇ ಮೆರಸಿ
ಸಾರುವೆ ದೇವಾ ಹರಲೀಲೆ ನಟಿಸಿದ ಶರಣ ಪಾದಕೆದ್ದು  ||೪||

ಶಿವಯೋಗಿ ಕಾಣ ಸಂಕಟ ಮಾಯಾ
ಭವ ಜೈಸಿದನೆ ದಯಾಪರಭವದ ಜೀವನನೇ ಸಿದ್ಧೇಶನೆ
ಹರಲೀಲ ಧರಿಸಿಪ ಮಹಿಮನ ಪಾದಕ್ಕೆ                      ||೫||

ವಸುಧಿಪಾಲಿಪನೆ ಶ್ರೀ ಬಸವಾದಿ ಪ್ರಮಥರೋಳ್ ಇಹನೆ
ಶಿಶುವಿನಾಳಧೀಶ ಸಾಖನೆ ಸದ್ಗುರುದಯ
ಅಸಮ ಸದ್ಗುರು ಗೋವಿಂದನ ದಯದಿಂದ                  ||೬||
                ****
-ಶಿಶುನಾಳ ಶರೀಫ್


ಕೀಲಿಕರಣ: ಎಂ.ಎನ್.ಎಸ್. ರಾವ್

ಗುರುಸೇವಾ ಮಾಡೋ

ಗುರುಸೇವಾ ಮಾಡೋ ನೀನು
ಪಾಮರ ಮೂಢಾ                                       ||ಪ||

ಗುರುಸೇವೆ ಮಾಡದೆ
ನರಸೇವೆ ಮಾಡುವಿ
ತಾರಿಸುವವರ ಕಾಣೆ ತಾಮಸ ನಿನ್ನೊಳು         ||ಅ.ಪ.||

ಬಂಧನ ಇಲ್ಲೆ ಕಂಡಿ
ಇಂದಿನ ಕರ್ಮಫಲವೆಲ್ಲ ಇಲ್ಲೆ ಉಂಡಿ
ಮುಂದಿನ ಮಾಗ ತಿಳಕೋಳೋ ಹುಚ್ಚುಮುಂಡೆ
ಎಚ್ಚರಿಕಿಲ್ಲದೆ ಹುಚ್ಚನ ತೆರದಂತೆ
ಬೆಟ್ಟನ ಮರದಂತ ಕೆಟ್ಟನಾಗಲಿಬೇಡ               ||೧||

ಸಾಧುಗಳ ಸಂಗವ ಬಿಟ್ಟು
ವಾದಮಾಡಿ ಕಾದುವದ್ಯಾಕೋ ಖೊಟ್ಟಿ
ವೇದವನೋದಿ ಆದೆಲ್ಲೋ ಮುರಾಬಟ್ಟಿ
ಬೋಧನ ಮಾರ್ಗವ ಸಾಧಿಸಿ ಸದ್ಗುರು
ಪಾದಸೇವೆಯೋಳ್ ನಿರತನಾಗಿ ಬೇಗನೆ          ||೨||

ಮದ್ಯಪಾನ ಮಾಡಿದಿಯೆಲ್ಲೋ
ಮದವೇರಿದಾನಿಯೆಂತಾದಿಯಲ್ಲೋ
ಕದನದೊಳ್ ಕಾಲ ಯಮನಾದಿಯಲ್ಲೋ
ಸದಮಲ ಶಿಶುನಾಳಧೀಶನ ಕಾಣದೆ
ಕಾಲನ ವಶವಾಗಿ ಕೈಸೆರೆ ಸಿಗುವಿಯಲ್ಲೋ         ||೩||
                ****
-ಶಿಶುನಾಳ ಶರೀಫ್


ಕೀಲಿಕರಣ: ಎಂ.ಎನ್.ಎಸ್. ರಾವ್

ಶ್ರೀಗುರು ಮಂತ್ರ

ಶ್ರೀಗುರು ಮಂತ್ರವ
ರಾಗದಿ ನುತಿಸಲು
ಬೋಧ ಸಂಪದ ಸುಖವಾಗುವದೋ     ||ಪ||

ಮಾಜದೆ ಮಂತ್ರದ
ಮೊದಲಕ್ಷರವ
ತೇಜಿಸುತಲಿ ನಿತ್ಯ ಜಪಿಸುವದೋ       ||೧||

ಬಿಡದೆರಕ್ಷರ
ನಡುವಿನ ಶೂನ್ಯದಿ
ದೃಧವಿಡಿದಾತ್ಮದಿ ನುತಿಸುವದೋ      ||೨||

ಬರೆದು ಮೂರಕ್ಷರ
ಕರುಣ ಸೇವಿಸಿದರೆ
ಜನನ ಮರಣ ಭಯ ನೀಗುವದೋ     ||೩||

ನೀ ಕಲಿ ಸುಮ್ಮನೆ
ನಾಲ್ಕು ಅಕ್ಷರಗಳ
ಬೇಕೆನಿಸಿದ ವಸ್ತು ಸಿಗುರಿತಿಹುದೋ   ||೪||

ಶಿಶುನಾಳಧೀಶನ
ಹೆಸರಿನೈದಕ್ಷರ
ಹಸನಾಗಿ ಭಜಿಸಲಹುದೆನಿಸುವದೋ  ||೫||
                ****


-ಶಿಶುನಾಳ ಶರೀಫ್



ಕೀಲಿಕರಣ: ಎಂ.ಎನ್.ಎಸ್. ರಾವ್

ದಯಾಳು ಶ್ರೀಮಂತ

- ಡಬ್ಲ್ಯು. ಬಸವರಾಜ್

ಒಂದು ಊರಿನಲ್ಲಿ ಜಯಶೀಲ ಎಂಬ ದಯಾಳು, ಶ್ರೀಮಂತ ಯುವಕನಿದ್ದ. ಒಮ್ಮೆ ಪಕ್ಕದ ಊರಿಗೆ ವ್ಯಾಪಾರಕ್ಕೆಂದು ಹೊರಟಿದ್ದ.  ದಾರಿಯಲ್ಲಿ ಕೋಳಿಯನ್ನು ಬಲಿ ಕೊಡುವುದನ್ನು ನೋಡಿ ಆಲ್ಲಿಯ ಜನರಿಗೆ ಹೇಳಿದ: `ಅನ್ಯಾಯವಾಗಿ ಆ ಕೋಳಿಯನ್ನು ಕೊಲ್ಲಬೇಡಿ' ಎಂದ. ಆದಕ್ಕೆ ಜನರು `ಅದರ ಪ್ರಾಣ ಉಳಿಸಬೇಕೆಂದರೆ ಸಾವಿರ ಬಂಗಾರದ ನಾಣ್ಯ ಕೊಡು' ಎಂದರು. ಜಯಶೀಲ ಆವರಿಗೆ ಸಾವಿರ ಕೊಟ್ಟು ಕೋಳಿಯನ್ನು ತೆಗೆದುಕೊಂಡು ಹೊರಟ.
 ಮುಂದಿನ ಊರಿನಲ್ಲಿ ಮತ್ತೊಂದು ದೃಶ್ಯ ನೋಡಿದ ಅಲ್ಲಿಯ ಜನ ಕುರಿಯನ್ನು ಬಲಿ ಕೊಡುತ್ತಿದ್ದರು.  `ಇದನ್ನು ಸಾಯಿಸಬೇಡಿ ನೀವು ಕೇಳಿದಷ್ಟು ಹಣ ಕೊಡುವೆ' ಎಂದ. ಈ ಕುರಿಗೆ ಐದು ಸಾವಿರ ನಾಣ್ಯ ಕೊಟ್ಟರೆ ಬಿಟ್ಟುಬಿಡುವೆವು ಎಂದರು ಜನ. ಆವರಿಗೆ ಐದು ಸಾವಿರ ನಾಣ್ಯ ಕೊಟ್ಟು ಕುರಿಯನ್ನು ಕೊಂಡು ತನ್ನ ಊರಿಗೆ ಮರಳಿದ.
  ಹೀಗೆ ಎಲ್ಲರಿಗೂ ದಾನ ಮಾಡಿ ಎಲ್ಲ ಆಸ್ತಿಯನ್ನೂ ಜಯಶೀಲ ಕಳೆದುಕೊಂಡ. ಇದನ್ನು ನೋಡಿದ ಕೋಳಿ ಮರುಗಿತು. `ಒಡೆಯಾ ನೀನೇನು ಯೋಚಿಸಬೇಡ.  ಕಾಡಿನಲ್ಲಿ ನಮ್ಮ ಕೋಳಿಗಳಿಗೆ ಒಬ್ಬ ರಾಜನಿದ್ದಾನೆ. ಅವನು ನಿನಗೆ ಸಹಾಯ ಮಾಡುವನು ನಡೆ' ಎಂದು ತಮ್ಮ ರಾಜನ ಬಳಿಗೆ ಕರೆದುಕೊಂಡು ಹೋಯಿತು.
  ಜಯಶೀಲನ ಪೂರ್ವಾಪರ ಏನೆಲ್ಲ ತಿಳಿದ ಕೋಳಿರಾಜ. `ನಾನು ನಿನಗೊಂದು ಬಂಗಾರದ ಮೊಟ್ಟೆ ಇಡುವ ಕೋಳಿ ಕೊಡುವೆ ತೆಗೆದುಕೋ' ಎಂದಿತು. ಜಯಶೀಲ ಆ ಕೋಳಿಯನ್ನು ತೆಗೆದುಕೊಂಡು ತಮ್ಮೂರಿಗೆ ಹಿಂದಿರುಗಿದ.
  ಕೋಳಿ ಬಂಗಾರದ ಮೊಟ್ಟೆ ಇಡತೊಡಗಿತು. ಇದರಿಂದ ಜಯಶೀಲ ಶ್ರೀಮಂತನಾದ.  ಒಮ್ಮೆ ಕುರಿ `ನಾನೂ ನಿನಗೆ ಏನಾದರೂ ಉಪಕಾರ ಮಾಡಬೇಕೆಂದಿರುವೆ. ಆದಕ್ಕೆ ನಮ್ಮ ಕುರಿ ಹಟ್ಟಿಗೆ ಹೋಗೋಣ. ಆಲ್ಲಿ ನಮ್ಮ ಕುರಿನಾಯಕ ಇದ್ದಾನೆ ಅವನು ನಿನಗೆ ಸಹಾಯ ಮಾಡುತ್ತಾನೆ' ಎಂದು ಹೇಳಿ ಜಯಶೀಲನನ್ನು ಕರೆದುಕೂಂಡು ಹೋಯಿತು. ಅಲ್ಲಿ ಕುರಿ ನಾಯಕ ಆಪರೂಪದ ಬಂಗಾರದ ಉಣ್ಣೆ ಕೊಡುವ ಕುರಿಯನ್ನು ಕೊಟ್ಟಿತು. ಆದನ್ನು ತೆಗೆದುಕೊಂಡು ಬಂದನು. ಜಯಶೀಲ ಎಲ್ಲರಿಗೆ ದಾನ ಮಾಡಿ ಹೆಸರುವಾಸಿಯಾದನು.
  ಒಮ್ಮೆ ಇವನ ದಾನ, ಧರ್ಮ, ಒಳ್ಳೆಯತನ ಪಕ್ಕದ ರಾಜ್ಯದ ರಾಜಕುಮಾರಿಗೂ ಗೊತ್ತಾಗಿ ಜಯಶೀಲನನ್ನು ನೋಡಲು ಬಂದಳು. ಅವನನ್ನು ನೋಡಿದೊಡನೆ ಮೋಹಗೊಂಡು, ತನ್ನನ್ನು ಮದುವೆಯಾಗುವಂತೆ ಒತ್ತಾಯಿಸಿದಳು. ಜಯತೀಲ ಒಪ್ಪಿ ಮದುವೆಯಾದ. ಈ ವಿಷಯ ತಿಳಿದ ರಾಜಕುಮಾರಿಯ ತಂದೆ ಇವಳನ್ನು ಕರೆತಂದು ಸೆರೆಮನೆಗೆ ಅಟ್ಟಿದ. ವಿಷಯ ತಿಳಿದ ಜಯಶೀಲ ದುಃಖಿತನಾದ. ಆಗ ಕೋಳಿ ಮತ್ತು ಕುರಿ `ನೀನೇನು ಚಿಂತಿಸಬೇಡ, ರಾಜಕುಮಾರಿಯನ್ನು ನಾವು ಕರೆತರುತ್ತೇವೆ' ಎಂದು ಹೇಳಿ ಅರಮನೆಯತ್ತ ಹೊರಟವು.
  ಅಲ್ಲಿ ಸೇವಕಿಯರ ವೇಷ ಧರಿಸಿದವು. ಸೆರೆಮನೆಯಲ್ಲಿ ಅಳುತ್ತ ಕುಳಿತಿರುವ ರಾಜಕುಮಾರಿಯನ್ನು ನೋಡಿ, ನೀನು ಅಳಬೇಡ ಜಯಶೀಲನ ಬಳಿ ಕರೆದೊಯ್ಯುತ್ತೇವೆ ಎಂದು ಹೇಳಿ ತಮ್ಮ ನಿಜ ರೂಪ ತಳೆದವು. ಅದನ್ನು ನೋಡಿ ಹೆದರಿದಳು ರಾಜಕುಮಾರಿ. `ಹೆದರಬೇಡ ನಾವು ನಿನಗೆ ಸಹಾಯ ಮಾಡುವೆವು. ನನ್ನ ಬೆನ್ನ ಮೇಲೆ ಕುಳಿತುಕೊ' ಎಂದಿತು ಕುರಿ. ರಾಜಕುಮಾರಿ ಜತೆಗೆ ಕೋಳಿಯೊಂದಿಗೆ ಕುರಿಯ ಬೆನ್ನ ಮೇಲೆ ಕುಳಿತು ಬಂದಳು. ಇದನ್ನು ನೋಡಿದ ಜಯಶೀಲ ಸಂತೋಷಗೊಂಡ. ರಾಜಕುವಕಾರಿ, ಕೋಳಿ ಮತ್ತು ಕುರಿಯೊಂದಿಗೆ ನೆಮ್ಮದಿಯಿಂದ ಬಾಳಿದ ಜಯಶೀಲ.


ಕೀಲಿಕರಣ : ಎಂ ಎನ್ ಎಸ್ ರಾವ್

ದೊರಕಿದಾ ಗುರು

ದೊರಕಿದಾ ಗುರು
ದೊರಕಿದಾ                        || ಪ ||

ಪರಮಾನಂದ ಬೋಧ
ಆರವಿನೊಳಗ ಬಂದು
ದೊರಕಿದಾ ಗುರು
ದೊರಕಿದಾ                        ||ಅ.ಪ.||

ಕರಪಾತ್ರೆ ಹಿಡಿದು ಈ
ನರ ಶರೀರದಿ ತನ್ನ
ಅರುವ ತನಗೆ ತೋರಿ
ಪರಮ ನಂಬುಗೆಯಲಿ
ದೊರಕಿದಾ ಗುರು
ದೊರಕಿದಾ                        ||೧||

ಹಿಂದೆ ಜನ್ಮಾಂತರ
ಒಂದು ಉಳಿಯದಂತೆ
ಒಂದು ವಸ್ತುವಿನೊಳು
ಚಂದದಿಂದಲಿ ಬಂದು
ದೊರಕಿದಾ ಗುರು
ದೊರಕಿದಾ                        ||೨||

ಶಿಶುನಾಳಧೀಶ ಪ್ರ-
ಕಾಶ ಗೋವಿಂದನ
ಆಸಮ ತೇಜೋರೂಪ
ಕಿರಣದಿಂದಲೆ ಬಂದು
ದೊರಕಿದಾ ಗುರು
ದೊರಕಿದಾ                       ||೩||
                    ****
-ಶಿಶುನಾಳ ಶರೀಫ್

ಕೀಲಿಕರಣ: ಎಂ.ಎನ್.ಎಸ್. ರಾವ್

ಎಂಥಾ ಬೇಗನೆ ಯವ್ವನ ಬಂತೆ

ಎಂಥಾ ಬೇಗನೆ ಯವ್ವನ ಬಂತೆ ನಿನಗೆ
ನಿಂತು ನೋಡಿ ಹೋಗದಾಂಗಾಯಿತೆನಗೆ          ||ಪ||

ಸಂತಿಗ್ಹೊಗಿ ಸಣ್ಣದೊಂದು
ಚಿಂತಾಕವ ಕದ್ದುಕೊಂಡು
ಹಂತಿಲಿದ್ದವರೆಲ್ಲ ಕಂಡರೆ
ಮೆಂತೇದವನಾ ಹೊಲಾವೂಕ್ಕೆ
ಕಾಂತೆ ಕಬ್ಬಿನ ವನದಿ ಬಂದು
ಕುಂತೆಲ್ಲ ಶೀಗಿಹುಣ್ಣಿವಿಗೆ                                ||೧||

ದಿನದಲ್ಲಿ ಹುಡೂಗಿ ಸಣ್ಣಾಕಿ ಒಳ್ಳೆ
ಘನ ಹಿರಿಯರಿಗೆ ಕಣ್ಣಾರೆ
ಎಣಕಿಗೆಟ್ಟ್ಹಾದರವ ಮಾಡಿ
ಹಣಜಿ ಹುಲ್ಲೋಳಡಗಿ ನೋಡಿ
ಬಣಜಿಗೇರಣ್ಣಾನ ಕೂಡಿ
ಕಣಜತುಂಬಾ ಹೊನ್ನ ಗಳಸಿ                        || ೨ ||

ನೊಣವು ಹತ್ತಿಗೆ ಏರಿ ಸಣ್ಣ
ಮಣಕ ಎಮ್ಮಿ ಕೋಣನೀದ್ಹಾಂಗ,
ಶಿಶುನಾಳೇಶನ ಸೇವಕಗೆ ಸುಳ್ಳೇ
ವಿಷಯಕ್ಕೆ ಎಳಸೀದಿ ಹೀಗೆ                           ||೩||

ಹಸಿಯ ಕಬ್ಬಿನಂತೆ ಶಟದು
ಮಸಿವ ಹಿಂಡಿಯ ಕಲ್ಲು ಕಟದು
ಹೆಸರ ಬಳ್ಳಿಗೆ ಉರುಳಿಬಿದ್ದು
ಕಸದ ಬುಟ್ಟಿ ಹೊತ್ತುಕೊಂಡು
ಬಸರು ಬಯಕಿ ತೋರಲಾಗಿ
ಕೊಸರಿತಲ್ಲೋ ಕರ್ಮ ಕಣ್ಣಿಗೆ                       ||೪||
                    ****
-ಶಿಶುನಾಳ ಶರೀಫ್

ಕೀಲಿಕರಣ: ಎಂ.ಎನ್.ಎಸ್. ರಾವ್

ಬೆಳ್ಳಿ ಕಡಗ

-ಬಸವರಾಜ್ ಡಬ್ಲ್ಯೂ

ಒಂದು ಕುಗ್ರಾಮದಲ್ಲಿ ಮುದುಕ ಮುದುಕಿ ಇದ್ದರು.  ಅವರಿಗೆ ಒಬ್ಬ ಮಗನಿದ್ದ.  ಆತ ಹೇಳಿದ್ದನ್ನು ತಿಳಿದುಕೊಳ್ಳಲಾರದಷ್ಟು ದಡ್ಡನಾಗಿದ್ದ.  ಮಗನ ಈ ವರ್ತನೆಯಿಂದ ಬೇಸತ್ತ ಅವನ ತಂದೆ-ತಾಯಿ ಪಕ್ಕದ ಆಶ್ರಮದ ಋಷಿಯ ಬಳಿ ಹೋಗಿ `ಸ್ವಾಮೀಜಿ, ಇವನು ನಮ್ಮ ಮಗ ಧನವಂತ.  ಇವನು ದಡ್ಡ.  ಹೇಗಾದರೂ ಮಾಡಿ ಇವನನ್ನು ಬುದ್ಧವಂತನನ್ನಾಗಿ ಮಾಡಿ.  ನಮ್ಮ ಬಳಿ ಇರುವ ಆಸ್ತಿ, ಹಣವನ್ನು ಆಶ್ರಮಕ್ಕೆ ಒಪ್ಪಿಸಿ ನಾವೂ ಇಲ್ಲಿಯೇ ಕೆಲಸ ಮಾಡಿಕೊಮಡು ಇರುತ್ತೇವೆ' ಎಂದು ಬೇಡಿಕೊಂಡರು.  ಧನವಂತನನ್ನೊಮ್ಮೆ ನೋಡಿದ ಋಷಿ `ಆಯಿತು' ಎಂದರು.

`ಧನವಂತಾ, ನೀನು ಸ್ವಲ್ಪ ದಿನಗಳವರೆಗೆ ಸ್ವಚ್ಛಂದವಾಗಿ ಆಶ್ರಮದಲ್ಲಿ ಸುತ್ತಾಡಿಕೊಂಡಿರು.  ಇಲ್ಲಿ ನಿನಗಾಗಿ ಈಜುಕೊಳ, ಪ್ರಾಣಿ, ಪಕ್ಷಿಗಳಿವೆ' ಎಂದರು.  ಸಂತಸಗೊಂಡ ಧನವಂತ `ಆಗಲಿ' ಎಂದು ಕುಣಿಯುತ್ತ ಹೋದ.

ಸ್ವಲ್ಪ ದಿನಗಳ ನಂತರ ಋಷಿಗಳು ತಾವು ಕಲಿತ ಎಲ್ಲ ವಿದ್ಯೆಗಳನ್ನೂ ಕಲಿಸಿ ಧನವಂತನನ್ನು ಬುದ್ಧವಂತನನ್ನಾಗಿ ಮಾಡಿದರು.  ನಂತರ `ನಾನು ಕಲಿತ ವಿದ್ಯೆಯನ್ನೆಲ್ಲ ನಿನಗೆ ಧಾರೆ ಎರೆದಿದ್ದೇನೆ.  ನಿನಗೆ ರಾಜನಾಗುವ ಲಕ್ಷಣಗಳಿವೆ.  ನಿನಗೊಂದು ಬೆಳ್ಳಿ ಕಡಗ ಕೊಡುವೆ.  ಇದು ಸಾಮಾನ್ಯವಾದುದಲ್ಲ.  ನೀನು ಕೇಳಿದ್ದನ್ನೆಲ್ಲ ಕೊಡುತ್ತದೆ.  ಆದರೆ, ಒಳ್ಳೆಯ ಕಾರ್ಯಗಳಿಗೆ ಮಾತ್ರ ಉಪಯೋಗಿಸು' ಎಂದು ಹೇಳಿ ಬೆಳ್ಳಿ ಕಡಗವನ್ನು ಧನವಂತನಿಗೆ ಕೊಟ್ಟರು.

ರಾತ್ರಿ ಮಲಗಿದ್ದ ಸಮಯದಲ್ಲಿ ಧನವಂತನ ಮನದಲ್ಲಿ ಕೆಟ್ಟ ಯೋಚನೆಗಳು ಸುಳಿದಾಡಿದವು.  ತುಸು ಸಮಯದ ನಂತರ ಆತ ಎದ್ದು ಕುಳಿತು, ಬೆಳ್ಳಿ ಕಡಗವನ್ನು ಕೈಗೆ ಹಾಕಿಕೊಂಡು ನನಗೊಂದು ಅರಮನೆ ಬೇಕೆಂದ.  ಕೂಡಲೇ ಅಲ್ಲೊಂದು ಅರಮನೆ ಸೃಷ್ಟಿಯಾಯಿತು.  ತನಗೊಬ್ಬ ರಾಜಕುಮಾರಿ ಬೇಕೆಂದ.  ಮರುಕ್ಷಣವೇ ಅಲ್ಲಿಗೆ ಒಬ್ಬ ಸುಂದರ ಯುವತಿ ಬಂದಳು.  ಹೀಗೆ ಅರಮನೆಯ ರಾಜನಿಗೆ ಬೇಕಾದ ಬೆಳ್ಳಿ, ಬಂಗಾರ, ವಜ್ರ, ವೈಢೂರ್‍ಯ, ಸೈನಿಕರು, ಸೇವಕರು ಎಲ್ಲವೂ ಬಂದವು.  ಇದನ್ನೆಲ್ಲ ಗಮನಿಸಿದ ಋಷಿಗಳು `ಧನವಂತ, ಏನಿದು ವಿಚಿತ್ರ' ಎಂದು ಕೋಪಗೊಂಡರು.  ಆದರೆ, ಧನವಂತ ಅದನ್ನು ಗಮನಿಸುವ ಸ್ಥಿತಿಯಲ್ಲಿರಲಿಲ್ಲ.  ಆತ ಅಹಂಕಾರದಿಂದ `ಏ! ಯಾರು ನೀನು?  ನಡೆ ಇಲ್ಲಿಂದ' ಎಂದು ಗದರಿಸಿದ.

`ಥೂ, ಪಾಪಿ, ನೀನು ಸರ್ವನಾಶವಾಗುತ್ತಿ ಹೋಗು' ಎಂದು ಹೇಳಿ ಋಷಿಗಳು ಅಲ್ಲಿಂದ ಹೊರಟರು.

ಇತ್ತ ಧನವಂತ ತನ್ನ ರಾಜ್ಯದಲ್ಲಿ ದರ್ಪ, ಸೊಕ್ಕಿನಿಮದ ಮೆರೆಯುತ್ತ ಪ್ರಜೆಗಳಿಗೆ ಕಿರುಕುಳ ಕೊಡಲು ಆರಂಭಿಸಿದ.  ಅನ್ಯಾಯವಾಗಿ ಭೂಕಂದಾಯ ವಸೂಲಿ ಮಾಡುವುದು, ಭೂಮಿ ಕಬಳಿಸುವುದು, ಪಕ್ಕದ ರಾಜರನ್ನು ಯುದ್ಧಕ್ಕೆ ಆಹ್ವಾನಿಸಿ ತನ್ನ ಬೆಳ್ಳಿ ಕಡಗದ ಸಹಾಯದಿಂದ ಅವರನ್ನು ಸೋಲಿಸಿ, ಅವರ ಸಮಸ್ತ ರಾಜ್ಯವನ್ನೂ ತೆಗೆದುಕೊಂಡು ಆ ರಾಜರನ್ನು ತನ್ನ ಗುಲಾಮರನ್ನಾಗಿಸಿಕೊಳ್ಳುವುದೇ ಅವನ ಬದುಕಾಯಿತು.

ಇದನ್ನೆಲ್ಲ ಅರಿತ ಋಷಿಗಳು ಧನವಂತನಿಗೆ ಕೊಟ್ಟ ಬೆಳ್ಳಿ ಕಡಗವನ್ನು ದಿವ್ಯ ಶಕ್ತಿಯಿಂದ ತಮ್ಮ ಬಳಿ ಬರುವಂತೆ ಮಾಡಿದರು.  ಕೂಡಲೇ ಬೆಳ್ಳಿ ಕಡಗ ಋಷಿಗಳ ಹತ್ತಿರ ಬಂತು.  ಅಂದಿನಿಂದ ಧನವಂತ ಹಂತ ಹಂತವಾಗಿ ಎಲ್ಲವನ್ನೂ ಕಳೆದುಕೊಂಡ.  ತನ್ನ ತಪ್ಪಿನ ಅರಿವಾಗಿ ಪುನಃ ಋಷಿಗಳ ಹತ್ತಿರ ಬಂದು ತನ್ನ ತಪ್ಪನ್ನು ಮನ್ನಿಸುವಂತೆ ಕೇಳಿಕೊಂಡ.  ಅವನ ಕೋರಿಕೆ ತಿರಸ್ಕರಿಸಿದ ಋಷಿಗಳು `ನಿನ್ನನ್ನು ಶಿಷ್ಯನನ್ನಾಗಿ ಮಾಡಿಕೊಂಡಿದ್ದೇ ತಪ್ಪು, ನಡೆ ಆಚೆ' ಎಂದರು.  ಧನವಂತನ ಹೆಂಡತಿ ಅಳುತ್ತ `ಸ್ವಾಮೀಜಿ, ನನ್ನ ಗಂಡನದು ತಪ್ಪಾಗಿದೆ.  ಮನ್ನಿಸಿ.  ನಿಮ್ಮ ಸೇವೆ ಮಾಡಲು ನಮಗೆ ಅವಕಾಶ ಕೊಡಿ' ಎಂದು ಬೇಡಿಕೊಂಡಳು.  ಋಷಿಗಳು ಕಡೆಗೊಮ್ಮೆ ಆ ಮಾತಿಗೆ ಒಪ್ಪಿದರು.  ಮುಂದೆ ಧನವಂತ ಸನ್ಮಾರ್ಗದಲ್ಲಿ ನಡೆದು ತನ್ನ ತಪ್ಪನ್ನು ತಿದ್ದಿಕೊಂಡ.  ಆಶ್ರಮದಲ್ಲೇ ಇದ್ದು ಋಷಿಗಳ ಸೇವೆ ಮಾಡುತ್ತ ಕಾಲ ಕಳೆದ.

ಕೀಲಿಕರಣ: ಕಿಶೋರ್‍ ಚಂದ್ರ

ಪ್ರಾಯ ಹೋಗುತ ಬಂತು

ಪ್ರಾಯ ಹೋಗುತ ಬಂತು ದೇಹ ಒಣಗಿ ನಿಂತು
ಜೀವದ ಬಡಿವಾರವೇನೆಂಬೆ                          ||ಪ||

ಕೋವಿಧನಾದರೆ ಸಾವಿಗಂಜದೆ ಆ
ಮಹಾದೇವರ ನುತಿಸಲೆಂಬೆ                        || ೧ ||

ಆಸ್ತಿ ಚರ್ಮದ ಘಟವಿಸ್ತರಣದಲಿ ಕೂಟ
ಮಸ್ತಕ ಮನ ಬುದ್ಧಿಯೆಂತೆಂಬೆ                     || ೨ ||

ಮಸ್ತಿ ಮಸ್ತಕರ ಕಾಮ ರಸ್ತೆಯೊಳಿರುವಂತೆ
ಆಸ್ಥಿರ ಮಾತಿದು ಮೊದಲು ಕಾಂಬೆ               || ೩ ||

ಶಿಶುನಾಳೇಶನ ಎಸವ ಪಾದಕ ನೀನು
ಮುಸುಗು ತೆಗದು ಪೂಜಿಪೊಡಲೇನೆಂಬೆ        || ೪ ||
                    ****
-ಶಿಶುನಾಳ ಶರೀಫ್

ಕೀಲಿಕರಣ: ಎಂ.ಎನ್.ಎಸ್. ರಾವ್

ಮುತ್ತಿನಂಥಾ ಮಾತಿದು ಕೇಳೇ ಗೆಳತಿ

ಮುತ್ತಿನಂಥಾ ಮಾತಿದು ಕೇಳೇ ಗೆಳತಿ
ನಿಮ್ಮತ್ತಿಮಾವಗಳಿಗುತ್ತರ ಏನ ಹೇಳತಿ           ||ಪ||

ಗೊತ್ತುಗೇಡಿ ಮಗಳೆ ವ್ಯರ್ಥ
ಹೊತ್ತುಗಳಿಯುತ್ತೀ
ಆತ್ತ ಇತ್ತ ತಿರುಗಿ ಭವದೊಳ್ ಬೀಳತೀ
ಛೀ ಛೀ ಕೆಡತೀ                                         ||೧||

ನಾದುನಿ ಮೈದುನ ಭಾವಗೇನ ಹೇಳತೀ
ಒಬ್ಬ ಮಾದರವನ ಸ್ನೇಹಮಾಡಿ ಮತಿಗೆಡತೀ
ಬಿಡು ಬಿಡು ತರವಲ್ಲಾ ಈ ನಡತೀ
ಸುಳ್ಳೇ ಬಾಯ್ಬಿಡತೀ                                 ||೨||

ಮುಟ್ಟದಿರು ಎನ್ನ ಎಂದು ದೂರ ಹೋಗತೀ
ನಿಲ್ಲೋ ಖೊಟ್ಟಿಗಂಡಾ ಎಂದು ಬಾಯಿಲೆ ಆಡತೀ
ಬಿಟ್ಟು ಬಿಟ್ಟು ಊರ ಕಡೆ ಓಡಿ ಹೋಗತೀ
ಜಾರತನ ತೋರತೀ                                 ||೩||

ಶಿಶುನಾಳಧೀಶನ ಕಸಾ ಬಳಿದು
ಹಸನಾಗಿ ನೀ ಕಾಲಕಳಿದು
ಆಲ್ಲೇ ಹುಸಿ ಮಾತನಾಡದೆ ಇರು ತಿಳಿದು
ಒಳ್ಳೇ ಮಾತಿದು                                       ||೪||
                    ****
-ಶಿಶುನಾಳ ಶರೀಫ್

ಕೀಲಿಕರಣ: ಎಂ.ಎನ್.ಎಸ್. ರಾವ್