ನಗೆ ಡಂಗುರ - ೪

- ಪಟ್ಟಾಭಿ ಎ ಕೆ

ಗುರು :  "ನರ ಎಂಬ ಶಬ್ದಕ್ಕೆ ಸ್ತ್ರೀಲಿಂಗ ಏನು?"
ಶಿಷ್ಯ:  "`ನರಿ' ಸಾರ್‍!"

        *****

ಅದ್ವೈತ

- ಶೇಖರ್‌ಪೂರ್ಣ

        ಭಾಗ-೧
ಹೀಗೀಗೆ ಆಗುತ್ತದೆ- ಆಗಲೇಬೇಕು’ - ಇದು ತರ್ಕ.  ಮನುಷ್ಯನೊಬ್ಬನ ಸಕಲ ನಡವಳಿಕೆಗಳನ್ನು ಯಾವುದೇ ಒಂದು ತಾರ್ಕಿಕ ವಲಯಕ್ಕೆ ಮಾತ್ರ ಸೀಮಿತಗೊಳಿಸಿಬಿಟ್ಟರೆ ಒಬ್ಬರು ಇನ್ನೊಬ್ಬರನ್ನು ಅರ್ಥಮಾಡಿಕೊಳ್ಳಲು ಸಾಧ್ಯವೇ ಇಲ್ಲವೇನೊ.  ಯಾವುದೋ ಒಂದನ್ನು ಹೇಳಬೇಕು ಎಂದನ್ನಿಸಿ ಹೇಳಬೇಕಾದ್ದನ್ನೆಲ್ಲ ಈ ತಾರ್ಕಿಕ ಪಥದಲ್ಲೇ ಹೇಳ ಹೊರಡುವುದು ಸದಾ ಸಾಧ್ಯವಾಗದ ಮಾತು.  ಸಾಹಸಿಸಿದರೆ ಎಡವುವುದು ಸಹಜ.  ಹೇಳುವವನ ಕೇಳುವವನ [ಪ್ರೇಕ್ಷಕ, ಓದುಗ, ಕೇಳುಗ ಇತ್ಯಾದಿ] ನಡುವೆ ಸಂವಹನ ಕುಸಿದು ಬೀಳುತ್ತದೆ.  ಆದ್ದರಿಂದಲೇ ನಾನು ಹೇಳ ಹೊರಟಿರುವುದನ್ನು ತರ್ಕರಾಹಿತ್ಯವಾಗಿ ನಡೆದ್ದದ್ದನ್ನು ನಡೆದಂತೆಯೆ, ಅನ್ನಿಸಿದ್ದನ್ನು ಅನ್ನಿಸಿದಂತೆಯೆ - ಬಹುಶಃ ಹೀಗಿರಬಹುದು- ಹೀಗಿದ್ದಿರಬೇಕು ಎಂಬ ಅಂದಾಜಿನ ತರ್ಕ [ಹೈಪೋತೀಸಿಸ್] ಬಳಸಿ ಹೇಳಲಾರಂಭಿಸುತ್ತೇನೆ.  ಶಂಕೆಯಂತೂ ಇದ್ದೇ ಇದೆ.  ನಾನು ಹೇಳಿದ ರೀತಿಯಲ್ಲೆ ಆಗಿರಬಹುದು.  ನಿಮಗೆ ಬೇರೆನಾದರು ಅನ್ನಿಸಿದರೆ ನೀವು ಹೇಳಿ- ತರ್ಕ ಬೇಡ ಆಷ್ಟೆ.

ಎಷ್ಟೋ ಜನರ ಬಾಯಲ್ಲಿ ಕೇಳಿದ್ದೇನೆ-
"ನನ್ನ ಹೆಂಡ್ತೀನ ನೋಡ್ಕೊಂಡ ಹಾಗೆ ಗಾಡೀನ ನೋಡ್ಕೊಂಡಿದೀನಿ.  ಸಿಂಗಲ್ ಹ್ಯಾಂಡ್.  ಬೇರೆ ಯಾರ ಕೈಗೂ ಕೊಡೋಲ್ಲ."
ನನ್ನ ಬಳಿಯೂ ಒಂದು ಮೊಪೆಡ್ ಇದೆ.  ೧೯೮೫ರ ಮಾಡೆಲ್‌ನದು.  ಎಲ್ಲರೂ ಉಪಯೋಗಿಸುತ್ತಾರೆ!
ಪಾಪ, ಬಹಳ ಒಳ್ಳೆಯ ಗಾಡಿ- ಈಗ ಲಟಾರಿ ಎದ್ದು ಹೋಗಿದೆ.  ಈಗೀಗ ಬಹಳ ಜನ ಹೇಳುತ್ತಾರೆ- "ಗುಜರಿಗಾಕೋ".  "ಬೀಗ ಬೇರೆ ಯಾಕಾಕ್ತೀಯ?  ಈ ಗಾಡೀನ ಯಾರೂ ಮುಟ್ಟೋ ಧೈರ್ಯ ಮಾಡೋಲ್ಲ, ಬಾ" -
"ಸ್ಕ್ರಾಪ್ ಇಟ್, ಸೆಂಡ್ ಇಟ್ ಟು ಸಾಲ್ವೇಜ್" - ಹೀಗೆ ವ್ಯಂಗ್ಯದ ಸರಣಿ ನಾನು ಎದುರಿಸಬೇಕಾಗಿ ಬಂದ್ದದಿದೆ.  ಆಗೆಲ್ಲ ನನಗೆ ಏನೂ ಅನ್ನಿಸುವುದಿಲ್ಲ.  ಅವಮಾನವೂ ಇಲ್ಲ.  ನಕ್ಕುಬಿಡುತ್ತೇನೆ.  ‘ದೇವರೆ ಇವರು ಏನು ಹೇಳುತ್ತಿದ್ದಾರೊ ಇವರಿಗೆ ತಿಳಿಯದು, ಇವರನ್ನು ಕ್ಷಮಿಸು!’ ಬೇರೆಯವರಿರಲಿ, ಸೀತಳೂ ಒಮ್ಮೊಮ್ಮೆ ಹೇಳಿದ್ದಿದೆ, "ರೀ ಮಾರಾಕಿ ಬೇರೆ ಹೊಸದನ್ನಾದ್ರೂ ತೊಗೋ ಬಾರ್ದೇನ್ರಿ..." ಇವಳಿಗೂ ಅರ್ಥವಾಗುವುದಿಲ್ಲ.  ಕ್ಷಮೆ ಇರಲಿ!
ಸೀತಳಿಗೂ ಸೇರಿದಂತೆ ಯಾರಿಗೂ ಅರ್ಥವಾಗುವುದಿಲ್ಲ.  ನಾನು ಈ ಮೊಪೆಡ್ಡನ್ನ ಪ್ರೀತಿಸ್ತೀನಿ ಅಂತಂದ್ರೆ.  ಬಹುಶಃ ನಿಮಗೂ ಗೊತ್ತಾಗುತ್ತೋ ಇಲ್ಲವೋ, ನನಗೆ ಗೊತ್ತಿಲ್ಲ.  ಖಾತ್ರಿಯೂ ಇಲ್ಲ.  ಷುಡ್ ಐ ಕೇರ್?  ಉದ್ಧಟತನಕ್ಕೆ ಕ್ಷಮೆ ಇರಲಿ. 

ಒಂದ್ಸಾರಿ ಏನಾಯ್ತೂಂದರೆ:
ನಾನೂ ನನ್ನ ದೊಡ್ಡಮ್ಮನ ಮಗ ಸುಬ್ಬು ಇಬ್ಬರೂ ನಮ್ಮ ಮಾವನ ಹಳ್ಳಿಗೆ ಹೋಗಬೇಕಾಯ್ತು.  ನಾವಿಬ್ಬರೂ ಅಕ್ಕ ತಂಗಿಯರನ್ನೆ ಮದುವೆಯಾಗಿರೋದು.  - ದಾರೀಲಿ ಗೌರಿಬಿದನೂರಿಗೆ ಸ್ವಲ್ಪ ದೂರದಲ್ಲಿ ಮೈನ್‌ರೋಡಿನಲ್ಲಿ ಅಂದರೆ ಮಾಕಳಿದುರ್ಗದ ಬಳಿ ಘಾಟಿಸುಬ್ರಹ್ಮಣ್ಯಕ್ಕೆ ದಾರಿ ಸೂಚನಾ ಫಲಕವೊಂದು ಇತ್ತು.  ಆಸ್ತಿಕನಾದ ಸುಬ್ಬನಿಗೆ ಅದು ಕಣ್ಣಿಗೆ ಬಿದ್ದು ಕೂಗಿಕೊಂಡ;
"ಲೋ ಚಂದ್ರ, ಇಷ್ಟು ಹತ್ತಿರ ಬಂದಿದ್ದೀವಿ, ದೇವ್ರನ್ನ ನೋಡ್ಕೊಂಡು ಬಂದುಬಿಡೋಣ."
ಸಮಯ ಬಹಳ ಕಡಿಮೆಯಿತ್ತು, ಅಪರಿಚಿತವಾದ ಹಾದಿ.  ಅವನ ಬೇಡಿಕೆಯನ್ನ ನಿರಾಕರಿಸಿ ನನ್ನ ಲಟಾರಿ ಗಾಡಿಯಲ್ಲಿ ಹಾಗೂ ಹೀಗೂ ಅರ್ಧರಾತ್ರಿ ತಲುಪಿದೆ.  ದಾರಿಯಲ್ಲಿ ಷೀಲ್ಡ್‌ಸ್ಕ್ರೂಗಳು ಕಳಚಿ ಹೋಗಿ, ಸೈಲೆನ್ಸರ್ ಕಳಚಿಕೊಂಡು ಅವಸ್ಥೆಯೋ ಅವಸ್ಥೆ.  ಆದರೂ ಸಿಂಪ್ಲಿ ಐ ಲವ್ ದಿಸ್ ಮೊಪೆಡ್.  ಸುಮಾರು ೧೩೦ ಕಿ.ಮೀ ಇಬ್ಬರನ್ನು ಹೊತ್ತು ತಂದಿತ್ತು!

ಅಲ್ಲಿಯ ಕೆಲಸ ಮುಗಿಸಿ ಎರಡು ದಿನದ ನಂತರ ಆ ಹಳ್ಳಿ ಬಿಟ್ಟು ಮರಳಿ ಹೊರೆಟೆವು.  ಹಿಂದೂಪುರದಲ್ಲಿ ಒಂದು ಕಡೆ ಸ್ಕಿಡ್ ಆಯಿತು.  ಸ್ವಲ್ಪ ದೂರ ಬಂದ ಮೇಲೆ ಹಿಂದಿನ ಬ್ರೇಕ್ ಪೂರ್ತಾ ಕೈ ಕೊಡಲಾರಂಭಿಸಿತು.  ಆದರೂ ನನ್ನ ಮೊಪೆಡ್ ಮೇಲೆ ನನಗೆ ಬಹಳ ನಂಬಿಕೆ.  ಒಳ್ಳೆಯ ಹಿಡಿತವೂ ಇತ್ತು.  ಗೌರಿಬಿದನೂರಿನಲ್ಲಿ ‘ಬ್ರೇಕ್ ಷೂ’ ಗೆ ಹುಡುಕಿದೆ.  ಹೊಂದುವಂತದ್ದು ದೊರೆಯದೆ ವ್ಯರ್ಥ ಪ್ರಯತ್ನದನಂತರ ಹೊರಟು ಬಿಟ್ಟೆ.  ಸುಬ್ಬ ಸ್ವಲ್ಪ ದೂರ ಓಡಿಸುತ್ತೇನೆಂದು ತಾನು ಸ್ಟೀರಿಂಗ್ ಹಿಡಿದಿದ್ದ. 

ಘಾಟಿಸುಬ್ರಹ್ಮಣ್ಯದ ಸೂಚಿಫಲಕ ನೋಡಿದೊಡನೆ ನಾಸ್ತಿಕನಾದ ನಾನು ಸುಬ್ಬನ ಮುಖ ನೋಡಿದೆ.  ಹೋಗಬೇಕೆಂಬ ಅವನ ಆಸಕ್ತಿಯನ್ನು ಶ್ರದ್ಧೆಯನ್ನು ತುಳಿಯುವುದು ನನ್ನಿಂದ ಅಸಾಧ್ಯವಾಯಿತು.

ಸ್ವಲ್ಪ ಹೊತ್ತು ಗಾಡಿಗೆ ವಿಶ್ರಾಂತಿ ಕೊಟ್ಟು ಸಿಗರೇಟು ಸೇದಿದನಂತರ ಸ್ಟೀರಿಂಗ್ ಹಿಡಿದೆ.  ಮೈನ್‌ರೋಡಿನಿಂದ ಸ್ವಲ್ಪ ಒಳಕ್ಕೆ ನೋಡಿದೊಡನೆ.  ಇಳುಕಲಿನ ತಿರುವು ಹಾದಿ.  ಘಟ್ಟದ ಕಮರಿಗಳು ರಸ್ತೆ ಬದಿಗೆ, ಹಿಂದಿನ ಬ್ರೇಕ್ ಇಲ್ಲ.  ಮುಂದಿನ ಬ್ರೇಕ್‌ನಲ್ಲೇ ವೇಗವನ್ನು ನಿಯಂತ್ರಿಸಬೇಕು.  ಧೈರ್ಯ ಮಾಡಿ ಆಕ್ಸಿಲರೇಟರ್ ಆಫ್ ಮಾಡಿದೆ.  ಇಳುಕಲಿನಲ್ಲಿ ಗಾಡಿ ಅಂದಾಜು ಮೀರಿ ವೇಗವಾಯ್ತು- ೫೦-೬೦ ಕಿ.ಮೀ. ವೇಗ.  ತಿರುವೊಂದರಲ್ಲಿ ಗಾಡಿ ನಿಯಂತ್ರಣಕ್ಕೆ ಸಿಗದೆ ಸ್ಕಿಡ್ ಆಯಿತು.  ಇಬ್ಬರಿಗೂ ಹೆಚ್ಚೇನು ಪೆಟ್ಟು ತಾಗಲಿಲ್ಲ, ಗಾಡಿಗೂ ಏನಾಗಲಿಲ್ಲ!

ಮತ್ತೆ ಇಳುಕಲಿನಲ್ಲಿ ಹೊರಟೆವು.  ವೇಗವೋ ವೇಗ.  ಬ್ರೇಕ್ ಹಾಕಿದೆ.  ಬ್ರೇಕ್ ಕೇಬಲ್ ತುಂಡರಿಸಿ ಹೋಗಿತ್ತು.  ಎಡಗಡೆಗೆ ಬೃಹತ್ ಬಂಡೆಗಳು- ಗುದ್ದಿದರೆ ‘ಸ್ಪಾಟ್ ಡೆತ್’ ರಿಪೋರ್ಟ್‌ಗಳಲ್ಲಿ ನಮ್ಮ ಹೆಸರಷ್ಟೆ ದಾಖಲಾಗುತ್ತಿತ್ತು.  ಬಲಗಡೆಗೆ ಆಳವಾದ ಕಮರಿ.  ಹೀಗೂ ಇಲ್ಲ- ಹಾಗೂ ಇಲ್ಲದಂತಹ ಸ್ಥಿತಿಯಲ್ಲಿ ಗಾಬರಿಯಿಂದ ಕೂಗಿಕೊಂಡೆ- "ಸುಬ್ಬ ಬ್ರೇಕ್ ಇಲ್ಲ, ದುಮುಕಿ ಬಿಡು" - ಗಾಡಿಯ ವೇಗಕ್ಕೆ ಅವನೂ ಸಹ ತಬ್ಬಿಬ್ಬಾಗಿದ್ದಿರಬಹುದು.  ಕೂತೆ ಇದ್ದ.  ಹೆಬ್ಬಂಡೆಗಳಿಗಿಂತ ಕಮರಿಯೆ ಮೇಲು ಎಂದು ಸ್ಪ್ಲಿಟ್ ಆಫ್ ಸೆಕೆಂಡ್‌ನಲ್ಲಿ ತೀರ್ಮಾನಿಸಿ ಗಾಡಿಯನ್ನು ಬಲಗಡೆ ಕಮರಿಗೆ ನುಗ್ಗಿಸಿದೆ.  ಎಂಟು ಹತ್ತು ಅಡಿಗಳ ಕಮರಿಗೆ ಐವತ್ತು ಅರವತ್ತು ಕಿ.ಮೀ ವೇಗದಲ್ಲಿ ೧೭೦ ಕೆ.ಜಿ ತೂಕದ ನಾವುಗಳು ಬಿದ್ದೆವು.  ನಂಬಿದರೆ ನಂಬಿ- ಬಿಟ್ಟರೆ ಬಿಡಿ, ನನಗೆ ಒಂದು ಚೂರೂ ಗಾಯವಾಗಿರಲಿಲ್ಲ.  ಸುಬ್ಬನಿಗೆ ಬಲ ಮೊಣಕಾಲಿನ ಕೆಳಗೆ ಒಂದಷ್ಟು ತರಚು ಗಾಯವಷ್ಟೆ.  ಗಾಡಿಯ ಸೀಟಷ್ಟೇ ಬೆಂಡ್ ಆಗಿತ್ತು.  ಉಳಿದಂತೆ ಹೆಡ್‌ಲೈಟ್ ಅಷ್ಟೆ ಸ್ವಲ್ಪ ಪೆಟ್ಟು ತಿಂದಿತ್ತು. 

ಸುಬ್ಬ, ಏನೂ ಅಗದ್ದಕ್ಕೆ ತನ್ನ ದೈವಶ್ರದ್ಧೆಯ ಅಹಂಕಾರ ಬೀಗಿ - ಪ್ರಯಾಣ ಮುಂದುವರಿಸಲಾಗದ್ದಕ್ಕೆ ವ್ಯಥೆಪಟ್ಟು "ಮುಂದೊಮ್ಮೆ ಬಂದು ತನ್ನ ಕಾಣಿಕೆ ಸಲ್ಲಿಸುವುದಾಗಿ" ಬೇಡಿದ.  ನಾನು ನನ್ನ ಮೊಪೆಡ್‌ಗೆ ನಮಸ್ಕರಿಸಿದೆ.  ಆ ಮುಹೂರ್ತದಲ್ಲಿ ಮೊಪೆಡ್ ಬಗೆಗೆ ನನಗಿದ್ದ ಪ್ರೀತಿ ನೂರ್ಮಡಿಯಾಯಿತು.  ನನ್ನ ಮತ್ತು ಮೊಪೆಡ್‌ನ ಸಂಬಂಧದಲ್ಲಿ ಇಂತಹ ಮುಹೂರ್ತಗಳೆಷ್ಟೋ ಇದ್ದವು.  ಉಡುಪು ಕಳಚಿ ನನ್ನ ಬೆತ್ತಲೆ ಮೈ ನೋಡಿದರೆ ಅಲ್ಲೊಂದು ಇಲ್ಲೊಂದು ಗೀರು ಗಾಯದ ಗುರುತು ಕಂಡಾತು. 

ಇಂತಹ ಮೊಪೆಡ್ಡನ್ನ ಮಾರು ಅನ್ನುತ್ತಾರಲ್ಲ, ಮೂದಲಿಸುತ್ತಾರಲ್ಲ, ಛೆ ಎಲ್ಲದರಿಂದಲೂ ಪಾರು ಮಾಡಿದ ಆ ಮೊಪೆಡ್ಡನ್ನ ನಾನು ಜೀವಕ್ಕಿಂತಲೂ ಅಧಿಕವಾಗಿ ಪ್ರೀತಿಸುತ್ತೇನೆ.  ಮಾರಾಟದ ಸಲಹೆ ನೀಡಿದವರನ್ನು, ಮೂದಲಿಸುವವರನ್ನು ಕಂಡರೆ ನನಗೆ ವಿಪರೀತ ಸಿಟ್ಟು.  ಆ ಸಿಟ್ಟನ್ನು ಎಂದೂ ತೋರಿಸದೆ ತೀರಾ ಗುಪ್ತವಾಗಿ ಇಟ್ಟು ನನ್ನ ಮೊಪೆಡ್ಡನ್ನ ಪ್ರೀತಿಸುತ್ತೇನೆ.  ಅರ್ಥವಾಗುತ್ತಾ, ನಿಮಗೆ?

        ಭಾಗ-೨
ಶಿವಾ.  .  .  .  .
ನೀವು ಅವನನ್ನು ನೋಡಬೇಕು.  ಕಪ್ಪು ಬಣ್ಣದ ತಮಿಳಿನವ.  ಕಪ್ಪಾದ ಮೈಗೆಲ್ಲಾ ಗ್ರೀಸು.  ಆಯಿಲ್ ಮಸಿ, ದೊಲ ದೊಲ ಪ್ಯಾಂಟು, ಶರಟು ಕಡುಕರೆ.  ೧೮-೨೦ ವರ್ಷದವ.  ಅಗಾಗ್ಯೆ ರಿಪೇರಿಯಲ್ಲಿ ಮೋಸ ಮಾಡುತ್ತಾನೆ.  ಅವನು ಕೆಲಸ ಮಾಡುವುದನ್ನು ನೋಡಿದರೆ ನನಗೆ ಒಮ್ಮೊಮ್ಮೆ ಅನ್ನಿಸುತ್ತದೆ- ‘ವರ್ಕ್‌ಶಾಪ್ ಎನ್ನುವ ಈ ಪೆಟ್ಟಿಗೆ ಅಂಗಡಿಯಲ್ಲೇ ಇವನು ಹುಟ್ಟಿದನೇನೊ’- ಎಂದು.  ಕೆಲಸಕ್ಕೆ, ಮನರಂಜನೆಗೆ, ಸ್ನೇಹಿತರೊಂದಿಗೆ ಹರಟುವುದಕ್ಕೆ, ಹಾದಿಬದಿಯ ಹುಡುಗಿಯರನ್ನು ಕಂಡು ಕಣ್ಣಲ್ಲಿ ಬೆಳಕು ತುಂಬಿಕೊಳ್ಳುವುದಕ್ಕೂ ಈ ವರ್ಕ್‌ಶಾಪ್ ನೆಲೆಯಾಗಿತ್ತು- ಸ್ಥಾವರವಾಗಿತ್ತು.  ಸ್ಪಾನರ್, ಸ್ಕ್ರೂ ಡ್ರೈವರ್, ಪ್ಲೇಯರ್‌ಗಳು ಅವನ ಆಟಿಕೆಗಳಾಗಿದ್ದವು.  ಆ ಜಾಗ ಮತ್ತು ತನ್ನ ಕೆಲಸದಲ್ಲಿ, ತನ್ನ ವಸ್ತುಗಳಲ್ಲಿ ಅವನಿಗೆ ಎಷ್ಟು ನಂಬಿಕೆಯೆಂದರೆ- ಅವನಿಗೆ ಒಮ್ಮೆ ಕಾಲ್ಬೆರಳು ಜಜ್ಜಿ ಹೋಗಿತ್ತು..  ಕ್ರೂಡ್ ಆಯಿಲ್ಲನ್ನು, ಗ್ರೀಸನ್ನು ಜಜ್ಜಿಹೋದ ಭಾಗಕ್ಕೆ ಗಸಗಸ ತಿಕ್ಕುತ್ತಿದ್ದ! "ಏನಯ್ಯ?"  ಎಂದರೆ "ಸಾರ್ ಎಂತಾ ಗಾಯವಾದ್ರೂ ಆಯಿಲ್, ಗ್ರೀಸ್ ಹಚ್ಚಿಬಿಟ್ರೆ ಮಾಯವಾಗುತ್ತೆ." ಎಂದು ಹಲ್ಕಿರಿದಿದ್ದ.  ಹೈಜೀನಿಕ್, ಸ್ಟೆರಿಲೈಜೇಷನ್, ಸೆಪ್ಟಿಕ್, ಈ ಪದಗಳೆಲ್ಲ ಅವನು ಕೇಳಿಯೂ ಇಲ್ಲ.  ವಾದಿಸಿದರೆ ಅವನಿಗೆ ಅರ್ಥವೂ ಆಗುವುದಿಲ್ಲ.  ತನ್ನ ಫಸ್ಟ್‌ಐಡ್ ಮೊದಲು, ಅನಂತರವೆ ಡಾಕ್ಟರ್, ನಾನು ಹೇಳಬಹುದಾದಷ್ಟು ಹೇಳಿ ಸುಮ್ಮನಾದೆ.  ಒಂದೆರಡು ದಿನ ಬಿಟ್ಟು ನೋಡಿದಾಗ, ‘ಮಿರಾಕಲ್’ ಎಂಬಂತೆ ಗಾಯ ಮಾಗಿಹೋಗಿತ್ತು!

ಕೆಲಸದಲ್ಲಿ ಅವನಿಗೆ ಎಂತದೋ ಖುಶಿ.  ದುಡ್ಡು ಬರುತ್ತದೆ ಎಂಬುದಕ್ಕಷ್ಟೆ ಅಲ್ಲ.  ಬೇರೇನೋ ತೆರೆನಾದ ಖುಷಿ.  ತನ್ನ ಕೈಚಳಕಕ್ಕೆ-ತನ್ನ ಜಾಣ್ಮೆಗೆ ತನ್ನ ನಯ ವಿನಯಕ್ಕೆ ತಾನೆ ಮರುಳಾದಂತೆ.  ಅದರಲ್ಲೇ ಮಗ್ನಗೊಂಡ ಖುಷಿ.  ಈ ತೆರೆನಾದ ಖುಷಿ ಅವನಿಗೆ ಬೇರೆಲ್ಲು ಸಿಗುವುದಿಲ್ಲ.  ಅವನ ತಂದೆ ತಾಯಿಯರು ಒಟ್ಟುಗೂಡಿ ಅಂಗಡಿ ಬೀದಿಯಲ್ಲಿ ಸಂಜೆ ಹೊತ್ತು ಬೋಂಡ ಬಜ್ಜಿ ವಡೆ ಸುಟ್ಟು ಮಾರುತ್ತಿದ್ದರು.  ವರ್ಕ್‌ಶಾಪ್‌ನಂತರ ಶಿವ ಅವರಿಗೆ ಮಾರಾಟದ ಸಮಯದಲ್ಲಿ ಸಹಾಯಕನಾಗಿ ನಿಲ್ಲುತ್ತಿದ್ದ.  ಆಗ ಅವನು ಸಪ್ಪಗೆ ಇರುತ್ತಿದ್ದುದನ್ನು ನೋಡಿ ನಗಿಸಲು ವೃಥಾ ಪ್ರಯತ್ನಿಸುತ್ತಿದ್ದೆ.  ಅವನು ಅಷ್ಟಷ್ಟೆ ಸಪ್ಪಗಿರುತ್ತಿದ್ದ. 

ಯಾವುದಾದರೂ ಒಂದು ಗಾಡಿಯೊಡನೆ ಅವನು ಸಾಧಿಸುವ ತಾದಾತ್ಮ್ಯದಲ್ಲಿ ಆಗಾಗ್ಯೆ ನಾನೂ ತಾದಾತ್ಮ್ಯ ಹೊಂದಿದ್ದಿದೆ. 

ಆದರೆ ಅವನು ಎಗ್ಗಮುಗ್ಗಾ ಸುಲಿಯುವುದು ನೋಡಿ ಜಗಳ ಮಾಡಿ ಅವನಲ್ಲಿ ಹೋಗುವುದು ಬಿಟ್ಟುಬಿಟ್ಟೆ. 

ಬೇರೆ ಮೆಕ್ಯಾನಿಕ್‌ಗಳ ಬಳಿ ನನ್ನ ಗಾಡಿ ತೆಗೆದುಕೊಂಡು ಹೋದಾಗ ಅವರ ಆಟಾಟೋಪ ಗಾಡಿ ಮೇಲೆ ಇರದೆ ಗಿರಾಕಿಗಳ ಮೇಲೂ ಇರುತ್ತಿತ್ತು.  ಹೀಗಾಗಿದೆ- ಹೀಗಾಗಿರುವುದರಿಂದ ಹೀಗೇನೆ, ಇಂತಿಂತದನ್ನ ಬದಲಾಯಿಸಬೇಕು ಎಂಬ ತರ್ಕವಿರುತ್ತಿರಲಿಲ್ಲ.  ಗಾಡಿ - ಗಿರಾಕಿ ಇಬ್ಬರೂ ತಮ್ಮ ಮುಲಾಜಿನಲ್ಲಿ ಇರುವಂತೆ , ತಾತ್ಸಾರ, ಉಪೇಕ್ಷೆ, ಉದಾಸೀನದಿಂದ "ತನ್ರಿ ಹಾಕ್ಕೊಡ್ತೀನಿ".  ಶಿವ ಎಂದೂ ಹಾಗೆ ಇರುತ್ತಿರಲಿಲ್ಲ.  ಪ್ರೀತಿಯಿಂದ ಎಂತಹ ಲಡಾಸ್ ಗಾಡಿಯಾದರೂ ತಡವುತ್ತಿದ್ದ.  ಲೋಪದೋಷಗಳನ್ನು ವಿವರಿಸಿ ಮನವರಿಕೆ ಮಾಡಿಕೊಡುತ್ತಿದ್ದ.  ಬಹಳ ದಿನ ಅವನ ರೀತಿ ನೀತಿಗು, ಬೇರೆ ಮೆಕ್ಯಾನಿಕ್‌ಗಳ ರೀತಿನೀತಿಗೂ ಹೋಲಿಸಿ ಅವನೊಂದಿಗೆ ಜಗಳವಾಡಿದ್ದಕ್ಕೆ ಪಶ್ಚಾತ್ತಾಪ ಪಟ್ಟಿದ್ದೂ ಉಂಟು. 

ಮೊಪೆಡ್ಡನ್ನು ಅವನ ಮುಂದೆಯೆ ಬೇರೆ ಮೆಕ್ಯಾನಿಕ್ ಬಳಿಗೆ ನೂಕಿಕೊಂಡು ಹೋಗುವಾಗ ಅವನು ಸಪ್ಪೆಯಾಗಿ ಕೂತಿರುತ್ತಿದ್ದ.  ನಾನು ಅವನ ಕಡೆ ಗಮನಿಸಿಯೂ ಗಮನಿಸದವನಂತೆ ಹೊರಟು ಬಿಡುತ್ತಿದ್ದೆ.  ಅವನೂ ಪಶ್ಚಾತ್ತಾಪ ಪಡಲಿ ಎಂದೊಮ್ಮೆ ಅನ್ನಿಸಿದರೆ, ಮತ್ತೊಮ್ಮೆ ಗಾಡಿ ನೂಕಿಕೊಂಡು ಹೊರಟಿರುತ್ತಿದ್ದುದನ್ನು ನೋಡಿ ಅವನು ಕಿಸಕ್ಕನೆ ನಕ್ಕುಬಿಟ್ಟರೆ ಎಂಬ ಭಯ ಇರುತ್ತಿತ್ತು.  ಆ ಭಯದಿಂದಲೆ ನಾನು ಅವನ ಕಡೆ ನೋಡುತ್ತಿದ್ದೆ.  ವ್ಯಂಗ್ಯವಾಗಲಿ, ಪರಿಹಾಸ್ಯದ ನಗುವಾಗಲಿ ಇರುತ್ತಿರಲಿಲ್ಲ.  ಖಿನ್ನನಾಗಿರುತ್ತಿದ್ದ ಆಷ್ಟೆ.  ಅವನ ಖಿನ್ನತೆಯನ್ನು ನೋಡುತ್ತಾ ಹೋಗುತ್ತಿದ್ದೆ.  ಒಳಗೆ ಎಂಥದೋ ಖುಷಿಯಾಗುತ್ತಿತ್ತು.  ಆದರೆ ಅವನ ಖಿನ್ನತೆಯೆ ನನ್ನದೂ ಆಗಿ, ಒಳಗೊಳಗೇ ಎಂಥದೋ ವಿಲವಿಲ.... 
*
*
*
ಏರು ರಸ್ತೆಯಲ್ಲಿ ಇಬ್ಬರನ್ನು ಹೊತ್ತು ನನ್ನ ಮೊಪೆಡ್ ಸರಾಗವಾಗಿ ನುಗ್ಗುತ್ತಿದ್ದ ಕಾಲ ಸರಿದು ಬಹಳಾ ದಿನಗಳೆ ಆಗಿದ್ದವು.  ತೀರಾ ಇತ್ತೀಚೆಗೆ ಒಬ್ಬನನ್ನೇ ಅದು ಎಳೆಯುತ್ತಿರಲಿಲ್ಲ.  ನಿತ್ರಾಣವಾಗಿಹೋಗಿತ್ತು.  ರಾತ್ರಿ ಪಾಳಿಗೆ ಅದನ್ನು ತೆಗೆದುಕೊಂಡು ಹೋಗಿ ಬಹಳ ಪ್ರಯಾಸ ಪಟ್ಟಿದ್ದಿದೆ.  ಈಗೀಗಂತೂ ಏರು ರಸ್ತೆಯಲ್ಲಿ ಒಬ್ಬನನ್ನು ಅದು ಎಳೆಯುವುದಿರಲಿ, ಸಮತಟ್ಟಾದ ರಸ್ತೆಯಲ್ಲಿಯೂ ಪೆಡಲ್ ಮಾಡಬೇಕಾದ ಸ್ಥಿತಿಗೆ ಅದು ಇಳಿದಿತ್ತು. 

ಓಡಿಸುವುದನ್ನು ನಿಲ್ಲಿಸಿದರೂ ಮೊಪೆಡ್ ಬಿಟ್ಟು ಇರಲಾಗಲಿಲ್ಲ.  ಮೂಲೆಯಲ್ಲಿ ತಳ್ಳಿದ್ದ ಅದನ್ನು ನೋಡಿದಾಗ, ಅದರ ಹರಿದು ಹೋಗಿದ್ದ ಸೀಟು, ಟೈಲ್ ಲ್ಯಾಂಪ್ ಸೆಟ್‌ನ ಭಗ್ನಾವಸ್ಥೆ, ಮೂಲ ಬಣ್ಣದ ಕುರುಹು ಇರದಿದ್ದುದು, ಅಲ್ಲಲ್ಲಿ ತುಕ್ಕು ಹಿಡಿದದ್ದು ಕಂಡು ಜಿಗುಪ್ಸೆ ಉಂಟಾಯಿತು. 

ಎಲ್ಲವನ್ನು ಬದಲಾಯಿಸಿ ಮೊಪೆಡ್ಡನ್ನು ಪೂರ್ವಸ್ಥಿತಿಗೆ ತರಲು ತೀರ್ಮಾನಿಸಿದ್ದೆ.  ಮಾರಲು ತೀರ್ಮಾನಿಸಿದ್ದಿದ್ದರೆ ಸಾವಿರ ರೂಗಳೂ ಬರುತ್ತಿರಲಿಲ್ಲ!

ಪೂರ್ವಸ್ಥಿತಿಗೆ ತರುವುದೆಂದೇನೋ ತೀರ್ಮಾನಿಸಿದ್ದಾಯಿತು.  ಆದರೆ ಅದನ್ನು ಬೇರೆ ಮೆಕ್ಯಾನಿಕ್‌ಗಳ ಬಳಿಗೆ ಅದನ್ನು ನೂಕಿಕೊಂಡು ಒಯ್ಯಲು ಬೇಕಿರಲಿಲ್ಲ. 

ಹೇಗಾದರೂ ಆಗಲಿ, ಶಿವನನ್ನು ಒಮ್ಮೆ ಮಾತನಾಡಿಸಿ ಒಂದು ನಿರ್ಧಾರಕ್ಕೆ ಬರುವುದು ಒಳ್ಳೆಯದು ಎಂದನ್ನಿಸಿತು.  ಹೊರಟೆ. 
*
*
*
ಮುರುಕಲು ಕುರ್ಚಿ ಮೇಲೆ ಕೂತಿದ್ದ.  ಸಪ್ಪಗಿದ್ದ.  ಬಾಗಿಲಲ್ಲಿ ನನ್ನ ನೋಡಿದವನೆ ಅವನ ಕಣ್ಣುಗಳು ಮಿನುಗಿದವು. 
"ಏನಣ್ಣಾ.." - ಅದೇ ವಿನಯ. 
"ಗಾಡಿ ಪಿಕಪ್ ಇಲ್ಲ.  ಸೈಲೆನ್ಸರ್ ಕ್ಲೀನ್ ಮಾಡಿಸಿದ್ದಾಯ್ತು.  ಡೀಕಾರ್ಬನ್ ಮಾಡಿಸಿಯಾಯ್ತು.  ಆಯಿಲ್ ಸೀಲ್ ಚೇಂಜ್ ಮಾಡ್ಸಿಯಾಯ್ತು, ಪ್ರಯೋಜನವಿಲ್ಲ..."
"ಗಾಡಿ ತೊಗೊಂಬನ್ನಿ , ಬೋರ್ ಚೆಕ್ ಮಾಡಿ ಹೇಳ್ತೀನಿ.. 
"ಗಾಡಿಯನ್ನು ತಂದೆ, ಚಕ ಚಕ ಬೋರ್ ಬಿಚ್ಚಿದ." ಹೊಸಾ ಬೋರ್ ಹಾಕಿಸ್‌ಬೇಕು- ಚೈನು -ಸ್ಪ್ರಾಕೆಟ್ ಹೋಗಿವೆ...."
ಹೊಸಬೋರು, ಚೈನುಸ್ಪ್ರಾಕೆಟ್‌ಗಳು, ಹೊಸಾ ಸೀಟು, ಸೈಡ್‌ಮಿರರ್, ಟೈಲ್‌ಲ್ಯಾಂಪ್ ಸೆಟ್ ಹೀಗೆ ಎಲ್ಲ ಹಳೆಯದನ್ನು ಕಿತ್ತು ಹಾಕಿ ಹೊಸದನ್ನು ಹಾಕಲು ತೀರ್ಮಾನಿಸಿದೆ.  ಸಾವಿರದ ಮುನ್ನೂರ್ ರೂಪಾಯಿಗಳ ಬಾಬತ್ತು.  ಆದರೂ ಶಿವನ ಮೇಲೆ ನಂಬಿಕೆಯಿತ್ತು. 

ಸಾವಿರ ರುಪಾಯಿ ಅಡ್ವಾನ್ಸ್ ಎಣಿಸಿ ಹೊರಟಾಗ ಗಮನಕ್ಕೆ ಬಂತು, ಕಾಲಿಗೆ ಬ್ಯಾಂಡೇಜು ಕಟ್ಟಿದ್ದ.  ಅದೆ ಕಾಲು, ಅದೆ ತೆರನಾದ ಬ್ಯಾಂಡೇಜು!
"ಏನೋ ಅದು?"
"ಕಲ್ಲೇಟು ಬಿತ್ತು ಸಾರ್.  ಜೊತೆಗೆ ಕೀವು ರಕ್ತ."
"ಕುಂಟುತ್ತಲೇ ಗಾಡಿಯ ಎಲ್ಲಾ ಭಾಗಗಳನ್ನು ಕಳಚಿ ಹಾಕುತ್ತ ನಗುನಗುತ್ತಾ ಗಾಡಿಯ ಬಗ್ಗೆ ಮಾತನಾಡಲು ತೊಡಗಿದ.  ನಾನು ಬಹಳ ಹೊತ್ತು ಜೊತೆಗಿದ್ದೆ.  ಏನೋ ಖುಷಿ ಖುಷಿ.  ಅವನಿಗೂ ಹಾಗೆಯೇ ಇರಬೇಕು. 
"ಗ್ರೀಸ್ ಆಯಿಲ್ ಹಚ್ಚಲಿಲ್ಲವೇನೋ?"
- ಅಲ್ಲಿಂದ ಹೊರಟಾಗ ಹಾಸ್ಯವಾಡಿದೆ. 
"ಸುಮ್ನಿರಿ ಸಾರ್, ನನ್ನ ಕಾಲು ನೋವು ನನಗೆ.."
ಅವನ ಕಣ್ಣುಗಳು ಮಿನುಗುತ್ತಲೇ ಇದ್ದವು.  ನನ್ನ ಕಣ್ಣುಗಳು ಸಹ ಅರಳಿದ್ದವು. 
*
*
*
ಮಾರನೆ ದಿನ ಗಾಡಿ ತಯಾರಾಗಿತ್ತು.  ಶಿವಾ ಗಾಡಿ ಟ್ರಯಲ್‌ಗೆ ತೆಗೆದುಕೊಂಡು ಹೋಗುವ ಮುನ್ನ
"ಸಾರ್ ಕಿಕ್ ಮಾಡಿ ಸ್ಟಾರ್ಟ್ ಮಾಡಿಕೊಡಿ"- ಎಂದ. 
ವಿಪರೀತವಾಗಿ ಕುಂಟುತ್ತಾ ನಡೆಯುತ್ತಿದ್ದ ಅವನನ್ನು ನೋಡಿ ಅಯ್ಯೋ ಎಂದನ್ನಿಸಿತು.  ಕುಂಟುತ್ತಲೇ ಗಾಡಿಯನ್ನು ಸಿದ್ದ ಮಾಡಿದ್ದ. 
"ಪ್ಯಾಂಟು ಮೇಲೆತ್ತು." ಎಂದೆ.  ಮಾತನಾಡದೆ ಪ್ಯಾಂಟು ಮೇಲೆತ್ತಿದ್ದ.  ತೊಡೆಯಿಂದ ಅಂಗಾಲಿನವರೆಗೆ ಕಾಲು ವಿಪರೀತವಾಗಿ ಊದಿಕೊಂಡಿತ್ತು.  ಕೊಳಕೊಳ ಬಿಗಿದುಕೊಂಡಂತೆ.  ಶವದ ಕಾಲಿನಂತೆ.  ನೋಡಿ ದಂಗಾದೆ. 
"ವಿಪರೀತ ನೋಯುತ್ತೆ, ಸಾರ್."
"ಮೊದಲು ಇವತ್ತೆ ಡಾಕ್ಟರ್ ಹತ್ರ ಹೋಗು, ತಡ ಮಾಡ್ಬೇಡ..."
ಎಂದೆನ್ನುತ್ತ ಗಾಡಿಯನ್ನ ಪೆಡಲ್-ಕಿಕ್ ಮಾಡಿದೆ.  ಒಂದೆ ಕಿಕ್‌ಗೆ ಸ್ಟಾರ್ಟ್ ಆಯಿತು.  ನನಗೋ ಖುಷಿಯಾಯಾಯಿತು.  ಗಾಡಿ ಟ್ರಯಲ್‌ಗೆ ತೆಗೆದುಕೊಡು ಹೋದ.  ವೇಗದಿಂದ ಮುನ್ನುಗ್ಗುತ್ತಾ ಹೋದ, ಗಾಡಿ ಕಣ್ಮರೆಯಾಗುವವರೆಗೆ ನೋಡುತ್ತಾ ನಿಂತಿದ್ದೆ.  ಏನನ್ನೋ ಸಾಧಿಸಿದ ತೃಪ್ತಿ ಇತ್ತು. 
ಟ್ರಯಲ್‌ನಿಂದ ಹಿಂತಿರುಗಿದ ಅವನಲ್ಲೂ ಅದೇ ತೃಪ್ತಿ ಇತ್ತು. 
ನಾನು ಗಾಡಿ ತೆಗೆದುಕೊಂಡು ಹೊರಟಾಗ ಅವನಿಗೆ ಡಾಕ್ಟರ್ ಬಳಿ ಹೋಗಲು ಮತ್ತೊಮ್ಮೆ ಸೂಚಿಸುವುದನ್ನು ಮರೆಯಲಿಲ್ಲ. 
*
*
*
ಎಡಕ್ಕೆ ಬಗ್ಗಿಸಿ, ಬಲಕ್ಕೆ ಬಾಗಿಸಿ, ನುಗ್ಗಿಸಿ ಒಂದಷ್ಟು ಗಾಡಿಗಳನ್ನು ಹಿಂದಕ್ಕೆ ಹಾಕುವ ಹೊಸ ವೇಗದಲ್ಲಿ ಮೈ ಮರೆತು, ಸುಖದಲ್ಲಿದ್ದೆ.  ಆಚೀಚಿನ ಬಗ್ಗೆ ಪ್ರಜ್ಞೆಯನ್ನೇ ಕಳೆದು ಕೊಂಡಿದ್ದೆ. 

ಗಾಡಿಗೂ ನನಗೂ ಹೊಸತೆ ಆದ ಜನ್ಮ ಸಿಕ್ಕಂತಾಗಿತ್ತು.  ಸುಮಾರು ಒಂದು ತಿಂಗಳು ಶಿವಾನನ್ನು ನೋಡುವ ಅವಕಾಶವೇ ಆಗಲಿಲ್ಲ.  ಸಂದರ್ಭವೂ ದೊರೆಯಲಿಲ್ಲ. 

ಒಂದುದಿನ ಅವನ ವರ್ಕ್‌ಶಾಪ್ ಬಳಿ ಹೋದೆ.  ನಿರಿಕ್ಷಿಸಿಯೇ ಇರಲಿಲ್ಲ.  ಕುರ್ಚಿ ಮೇಲೆ ಸಪ್ಪಗೆ ಕುಳಿತಿದ್ದ.  ಬಲಗಾಲು ಇರಲೇ ಇಲ್ಲ! ಏನಾಯ್ತೆಂದು ಕೇಳಲು ಬಾಯೇ ಬರಲಿಲ್ಲ.  ಆದರೂ ಕೇಳಿದಾಗ:
"ಹದಿನೈದು ದಿನದಾಗೆ ನೀವು ಹೇಳ್ದ ಹಾಗೇನೆ ಆಸ್ಪತ್ರೆಗೆ ಹೋದೆ.  ಅಡ್ಮಿಟ್ ಮಾಡ್ಕೊಂಡ್ರು.  ಅದೆಂತದೋ ಗ್ಯಾಂಗ್‌ಇನೊ ಪಾಂಗ್ರೀನೊ ಆಗಿದೆ, ಕತ್ತರಿಸಬೇಕೂಂದ್ರು- ಕತ್ತರಿಸಿದ್ರು.  ಇವತ್ತೇನೆ ಬಂದಿದ್ದು.  ಬಂದೋನು ಇಲ್ಲಿಗೆ ಬಂದ್ಬಿಟ್ಟೆ.  ನನ್ನ ತಮ್ಮ ಸೈಕಲ್ ಕ್ಯಾರಿಯರ್ ಮೇಲೆ ಕರಕೊಂಡು ಬಂದು ಬಿಟ್ಟುಹೋದ.  ಎರಡು ಮೂರು ಸಾರ್ತಿ ನಿಮ್ಮ ಆಫೀಸಿಗೆ ಫೋನ್ ಮಾಡ್ಸಿದ್ದೆ, ಸೀಟಲ್ಲಿರಲಿಲ್ಲಾಂದ್ರಂತೆ..."
- ಅವನು, ಹೇಳುವುದನ್ನು ತಲೆ ತಗ್ಗಿಸಿ ಕೇಳಿಸಿಕೊಳ್ಳುತ್ತಿದ್ದ ನಾನು ಅವನ ಕಣ್ಣಲ್ಲಿ ನೀರಿದ್ದಾತು ಎಂದು ನೋಡಿದೆ.  ನೀರಿರಲಿಲ್ಲ.  ಬದಲಿಗೆ ಮಿನುಗುತ್ತಿದ್ದವು. 
*
*
*
ಮತ್ತೆ ಅವನನ್ನು ನೋಡುವುದು ಒಂದು ವಾರವೇ ಆಯ್ತು.  ಅಂಗಡಿ ಬೀದಿಯ ಅವರ ಬೋಂಡಾ ಅಂಗಡಿ ಮುಂದೆ ನೋಡಿದೊಡನೆಯೇ ಕೇಳಿದ-
"ಏನ್ಸಾರ್, ನಡ್ಕೊಂಡು ಬರ್ತಿದೀರ..?"
"ಗಾಡಿ ಮಾರ್ಬಿಟ್ಟೆ ಕಣೋ...." ಅವನಿಗೆ ಅರ್ಥವಾಗಿತ್ತು.  ಕಣ್ಣಲ್ಲಿ ನೂರ್ಮಡಿ ಬೆಳಕು ತೋರಿದ.
"ಎಷ್ಟಕ್ಕೆ ಮಾರಿದ್ರಿ ಸಾರ್?"
"ಒಂದೂ ಕಾಲು ಸಾವಿರಕ್ಕೆ.."
"ನನಗೆ ಹೇಳಿದ್ದಿದ್ರೆ ಮೂರು ಸಾವಿರನಾದ್ರು ಕೊಡಿಸ್ತಿದ್‌ನಲ್ಲ ಸಾರ್..."
"ಹೋಗಲಿ ಬಿಡೋ, ನನ್ನ ಸ್ನೇಹಿತನಿಗೆ ಮಾರಿದ್ದು."
"ವರ್ಕ್‌ಶಾಪನ್ನೂ ಮಾರಿಬಿಟ್ಟೆ ಸಾರ್"- ನನಗೂ ಅರ್ಥವಾಯಿತು!
ಒಂದು ರೂಪಾಯಿಗೆ ಬೋಂಡಾ ವಡೆ ಕಟ್ಟಿಸಿಕೊಂಡು ಬಿಸಿ ಬಿಸಿ ಇದ್ದ ಅವನ್ನು ತಿನ್ನುತ್ತಾ- ಎಷ್ಟು ಬೇಗ ಚಕಚಕ ಬೋಂಡಾ ವಡೆ ಹಾಕುತ್ತಿದ್ದಾನೆ- ಇವನೇನು ಬೋಂಡಾ ವಡೆ ಬೇಯಿಸುತ್ತಲೇ ಹುಟ್ಟಿದನೋ ಎಂಬ ಸೋಜಿಗ ಪಡುತ್ತ ಬೆಚ್ಚಗೆ ಕುಳಿತಿದ್ದೆ. 
ಬಸ್ಸು ಬಂತು.  ವಿಪರೀತ ಜನ ಗಮನಿಸಿ ನಾನೂ ಚಕಚಕ ಎದ್ದು ಫುಟ್ ಬೋರ್ಡಿಗೆ ಜೋತುಬೀಳುತ್ತ ಎಷ್ಟು ಬೇಗ ಯಾವುದೇ ಬೇಸರವಿಲ್ಲದೆ, ಜಿಗುಪ್ಸೆ ಇಲ್ಲದೆ ಈ ಜನಸಂದಣಿ ಮಧ್ಯೆ ಬಸ್ಸಿನಲ್ಲಿ ಜಾಗ ದಕ್ಕಿಸಿಕೊಂಡೆ ಎಂದು ಆಶ್ಚರ್ಯವಾಗುತ್ತಿದ್ದಂತೆಯೆ ಶಿವನನ್ನು ನೋಡಿ ಕೂಗಿಕೊಂಡೆ-
"ಬರ್ತೀನೊ ಶಿವಾ, ಸಿಕ್ತೀನಿ..."
ಇನ್ನೊಂದು ಆಶ್ಚರ್ಯವೆಂದರೆ ಇವೆಲ್ಲಾ ತಾರ್ಕಿಕವೆ? ಗೊತ್ತಿಲ್ಲ!
              *****

ಕೀಲಿಕರಣ: ಶೇಖರ್‌ಪೂರ್ಣ

ನಗೆ ಡಂಗುರ - ೩

- ಪಟ್ಟಾಭಿ ಎ ಕೆ

ಈತ:  "ಮದುವೆ ಮತ್ತು ಮೊಬೈಲ್ ಇವೆರಡರ ವ್ಯತ್ಯಾಸ?"
ಆತ:  "ಎರಡೂ ಒಂದೆ;  ಕಟ್ಟಿಕೊಂಡ ಹೆಂಡತಿ, ಹಿಡಿದುಕೊಂಡ ಮೊಬೈಲ್ ಎರಡೂ ಮಾತಿನ ಗಣಿಗಳು.  ಬಗೆದಷ್ಟೂ ಮಾತು!"....

        *****

ಕಾಡು ಕುದುರೆಗೆ ಕೋಡು ಬಂತು

ಚಿತ್ರಕೃಪೆ: ಎ ಆರ್ ಮಣಿಕಾಂತರ ಬ್ಲಾಗು
ಭಾರತೀಯ ಸಾಹಿತ್ಯ ರಂಗ ಹೆಮ್ಮೆ ಪಡುವಂತೆ ಜಾನಪದ ಸೊಗಡಿನ ಸಾಹಿತಿ ಚಂದ್ರಶೇಖರ ಕಂಬಾರರು ಜ್ಞಾನಪೀಠ ಪ್ರಶಸ್ತಿ ಪಡೆದಿದ್ದಾರೆ. ಕನ್ನಡಿಗರ  ಸಂಭ್ರಮಕ್ಕೆ ದೊಡ್ಡ ಕಾರಣ. ಕಂಬಾರರಿಗೆ ಅಭಿನಂದನೆಗಳು.

ನಾಟಕಕಾರ, ಕವಿ, ಜಾನಪದ ತಜ್ಞ,  ಸಂಗೀತ ನಿರ್ದೇಶಕ, ಚಲನಚಿತ್ರ ನಿರ್ದೇಶಕ ಮತ್ತು ಅಧ್ಯಾಪಕ ಹೀಗೆ ಎಲ್ಲ ರಂಗಗಳಲ್ಲೂ  ಜಾನಪದದ ಛಾಪು ಮೂಡಿಸಿದ ದೈತ್ಯ ಪ್ರತಿಭೆ. "ಕಾಡು ಕುದುರೆ ಓಡಿಬಂದಿತ್ತಾsss.." ಹಾಡಿಗೆ ಸಂಗೀತ, ಸಾಹಿತ್ಯ ನೀಡಿದ ಕಂಬಾರರೂ ಜಾನಪದದ ಮೂಲದೊಂದಿಗೆ ಮನೆಮಾತಾದವರು. ಅವರು ನೆನಪಾಗೋದು ಈ ಹಾಡಿನ ಮೂಲಕವೇ.

ಎಂಟನೆ ಜ್ಞಾನಪೀಠ ಪಡೆದ ಕಂಬಾರರ ಚಿತ್ರವನ್ನೂ ಎಲ್ಲಾ ಶಾಲೆಗಳಲ್ಲೂ ಸೇರಿಸುವ ಕಂತ್ರಾತು ಹಿಡಿಯಲು ವೃತ್ತಿನಿರತ ಚಿತ್ರ ಕಲಾವಿದರು ಈಗಾಗಲೇ ಪ್ರಯತ್ನಿಸುತ್ತಿರುವ ಸುದ್ಧಿಯಿದೆ.

ರಾಷ್ಟ್ರಪ್ರಶಸ್ತಿ ಪಡೆದ ಮೊದಲ ಕನ್ನಡ ಚಿತ್ರಗೀತೆ
ಕಾಡು ಕುದುರೆ ಓಡಿ ಬಂದಿತ್ತಾ…
ಕಾಡು ಕುದುರೆ ಓಡಿ ಬಂದಿತ್ತಾ
ಊರಿನಾಚೆ ದೂರದಾರಿ
ಸುರುವಾಗೊ ಜಾಗದಲ್ಲಿ
ಮೂಡಬೆಟ್ಟ ಸೂರ್ಯ ಹುಟ್ಟಿ
ಹೆಸರಿನ ಗುಟ್ಟ ಒಡೆವಲ್ಲಿ
ಮುಗಿವೇ ಇಲ್ಲದ ಮುಗಿಲಿನಿಂದ
ಜಾರಿಬಿದ್ದ ಉಲ್ಕೀ ಹಾಂಗ
ಕಾಡಿನಿಂದ ಚಂಗನೆ ನೆಗೆದಿತ್ತ ||ಪ||
ಮೈಯಾ ಬೆಂಕಿ ಮಿರುಗತಿತ್ತ
ಬ್ಯಾಸ್ಗಿ ಬಿಸಿಲ ಉಸಿರಾಡಿತ್ತ
ಹೊತ್ತಿ ಉರಿಯೊ ಕೇಶರಾಶಿ
ಕತ್ತಿನಾಗ ಕುಣೀತಿತ್ತ
ಧೂಮಕೇತು ಹಿಂಬಾಲಿತ್ತ
ಹೌಹಾರಿತ್ತ ಹರಿದಾಡಿತ್ತ
ಹೈಹೈ ಅಂತ ಹಾರಿಬಂದಿತ್ತ ||೧||
ಕಣ್ಣಿನಾಗ ಸಣ್ಣ ಖಡ್ಗ
ಆಸುಪಾಸು ಝಳಪಿಸಿತ್ತ
ಬೆನ್ನ ಹುರಿ ಬಿಗಿದಿತ್ತಣ್ಣ
ಸೊಂಟದ ಬುಗುರಿ ತಿರಗತಿತ್ತ
ಬಿಗಿದ ಕಾಂಡ ಬಿಲ್ಲಿನಿಂದ
ಬಿಟ್ಟ ಬಾಣಧಾಂಗ ಚಿಮ್ಮಿ
ಹದ್ದ ಮೀರಿ ಹಾರಿ ಬಂದಿತ್ತ ||೨||
ನೆಲ ಒದ್ದು ಗುದ್ದ ತೋಡಿ
ಗುದ್ದಿನ ಬದ್ದಿ ಒದ್ದಿಯಾಗಿ
ಒರತಿ ನೀರು ಭರ್ತಿಯಾಗಿ
ಹರಿಯೋಹಾಂಗ ಹೆಜ್ಜೀ ಹಾಕಿ
ಹತ್ತಿದವರ ಎತ್ತಿಕೊಂಡು
ಏಳಕೊಳ್ಳ ತಿಳ್ಳೀ ಹಾಡಿ
ಕಳ್ಳೆ ಮಳ್ಳೆ ಆಡಿಸಿ ಕೆಡವಿತ್ತ ||೩||


ವೀಕಿಪೀಡಿಯ ಕಂಬಾರರ ಮೇಲೆ ಕೊಡುವ ವಿವರಗಳು ಇಲ್ಲಿವೆ:
ಡಾ. ಚಂದ್ರಶೇಖರ ಕಂಬಾರ (ಜನನ- ೨ ಜನವರಿ ೧೯೩೭) ಜಾನಪದ ಸೊಗಡನ್ನು ತಮ್ಮ ಬರವಣಿಗೆಯಲ್ಲಿ ಮೈದಾಳಿಸಿಕೊಂಡು ಬಂದಿರುವ ಚಂದ್ರಶೇಖರ ಕಂಬಾರರು ಹಲವು ಪ್ರತಿಭೆಗಳ ಸಂಗಮ. ಕವಿ, ನಾಟಕಕಾರ, ಸಂಗೀತ ನಿರ್ದೇಶಕ, ಚಲನಚಿತ್ರ ನಿರ್ದೇಶಕ, ಅಧ್ಯಾಪಕ, ಜಾನಪದ ತಜ್ಞ, ಆಡಳಿತಗಾರ ಇತ್ಯಾದಿ.

ಮುಖ್ಯವಾಗಿ ಕವಿ-ನಾಟಕಕಾರರಾಗಿ ಕಂಬಾರ ಜನಪ್ರಿಯರು. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಹಲವು ವರ್ಷಗಳ ಉಪನ್ಯಾಸಕ ವೃತ್ತಿಯಿಂದ ಕನ್ನಡ ವಿಶ್ವವಿದ್ಯಾಲಯ ಹಂಪಿಯ ಕುಲಪತಿಗಳಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಈಗ ಬೆಂಗಳೂರಿನ ಬನಶಂಕರಿಯಲ್ಲಿ ನಿವೃತ್ತ ಜೀವನ ನಡೆಸುತ್ತಿದ್ದಾರೆ. ಈ ನಡುವೆ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯ ನಿರ್ದೇಶಕರಾಗಿಯೂ ಮೂರು ವರ್ಷ ಕಾರ್ಯ ನಿರ್ವಹಿಸಿದ್ದಾರೆ. ಅಲ್ಲದೆ ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ೧೯೩೭ ಜನವರಿ ೨ರಂದು ಕಂಬಾರರು ಬೆಳಗಾವಿ ಜಿಲ್ಲೆ ಘೋಡಗೇರಿಯಲ್ಲಿ ಜನಿಸಿದರು. ತಮ್ಮ ಊರಿನ ವಾತಾವರಣದಲ್ಲಿನ ಜಾನಪದ ಹಾಡು, ಕುಣಿತ, ನಾಟಕಗಳ ಬಗ್ಗೆ ವಿಶೇಷ ಕಾಳಜಿ ವಹಿಸಿ ಅವುಗಳ ಸಂಗ್ರಹ, ಬರವಣಿಗೆಯನ್ನು ರೂಢಿಸಿಕೊಂಡರು. ಉತ್ತರ ಕರ್ನಾಟಕದ ಅದರಲ್ಲೂ ಬೆಳಗಾವಿ, ಧಾರವಾಡದ ಗಂಡುಭಾಷೆಯನ್ನು ಕನ್ನಡ ಸಾಹಿತ್ಯಕ್ಕೆ ಹೊತ್ತು ತಂದರು. ಧಾರವಾಡದ ವರಕವಿ ಡಾ. ದ. ರಾ. ಬೇಂದ್ರೆ ಅವರ ನಂತರ ಭಾಷೆಯನ್ನು ಪರಿಣಾಮಕಾರಿಯಾಗಿ ದುಡಿಸಿಕೊಂಡವರಲ್ಲಿ ಕಂಬಾರರು ಒಬ್ಬರು.

ಕಂಬಾರರು ತಾವೇ ಬರೆದ ಕಾದಂಬರಿಗಳನ್ನು ಚಲನಚಿತ್ರಗಳಾಗಿಸಿದರು. ಕರಿಮಾಯಿ, ಸಂಗೀತಾ, ಕಾಡುಕುದುರೆ ಇವುಗಳಲ್ಲಿ ಪ್ರಮುಖವಾದುವು. ಕಂಬಾರರು ತಮ್ಮ ಚಿತ್ರಗಳಿಗೆ ತಾವೇ ಸಂಗೀತ ನೀಡಿದ್ದಾರೆ. ಕಾಡುಕುದುರೆಯ ಹಿನ್ನಲೆ ಸಂಗೀತದ ``ಕಾಡು ಕುದುರೆ ಓಡಿಬಂದಿತ್ತಾsss.." ಹಾಡಿಗೆ ಶಿವಮೊಗ್ಗ ಸುಬ್ಬಣ್ಣ ಅವರಿಗೆ ರಾಷ್ಟ್ರಪತಿಗಳ ಫಲಕ ಕೂಡ ಸಿಕ್ಕಿತು. `ಜೀಕೆ ಮಾಸ್ತರ ಪ್ರಣಯ ಪ್ರಸಂಗ' ಕಾದಂಬರಿಯನ್ನು ಕಿರುತೆರೆಗೂ ಅಳವಡಿಸಿದ್ದಾರೆ. ಹತ್ತಾರು ಸಾಕ್ಷ್ಯಚಿತ್ರಗಳನ್ನೂ ನಿರ್ಮಿಸಿರುವ ಕಂಬಾರರು ಉತ್ತಮ ನಾಟಕಕಾರರು. ಜೊತೆಗೆ ಜಾನಪದ ಶೈಲಿಯ ಹಾಡುಗಳಿಗೆ ಜನಪ್ರಿಯರು. ತಾವೇ ಸ್ವತಃ ಹಾಡುಗರೂ ಸಹಾ.

ಹೇಳತೇನ ಕೇಳ, ಸಿರಿಸಂಪಿಗೆ, ಬೆಳ್ಳಿಮೀನು, ಋಷ್ಯಶೃಂಗ, ಕಾಡುಕುದುರೆ, ನಾಯಿಕಥೆ, ಹರಕೆಯ ಕುರಿ, ಬೋಳೇಶಂಕರ, ಸಿಂಗಾರವ್ವ ಮತ್ತು ಅರಮನೆ ಮುಂತಾದವು ಇವರ ಪ್ರಮುಖ ಕೃತಿಗಳು. ಮಹಾಮಾಯಿ ಅವರ ಇತ್ತೀಚಿನ ಹೊಸ ನಾಟಕ ಕೃತಿ.ಶಿಖರ ಸೂರ್ಯ ೨೬ ವರ್ಷಗಳ ನಂತರ ಹೊರಬಂದ ಕಾದಂಬರಿ;ಡಿಸೆಂಬರ ೨೦೦೬ರಲ್ಲಿ ಬಿಡುಗಡೆಯಾಯಿತು. ಕನ್ನಡ ಜಾನಪದ ವಿಶ್ವಕೋಶ ಸಂಪಾದಿತ ಕೃತಿ. ಸುಮಾರು ನಲವತ್ತಕ್ಕೂ ಮಿಕ್ಕಿ ಕೃತಿಗಳು ಹೊರಬಂದಿವೆ.

ರಾಜ್ಯೋತ್ಸವ ಪ್ರಶಸ್ತಿ ವಿಜೇತರಾದ ಕಂಬಾರರು ೧೯೯೧ರಲ್ಲಿ ತಮ್ಮ `ಸಿರಿಸಂಪಿಗೆ' ನಾಟಕಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿದ್ದಾರೆ.



ಮೂಕನಾಗಿರಬೇಕೋ ಜಗದೊಳು

- ಶಿಶುನಾಳ ಶರೀಫ್

 ಮೂಕನಾಗಿರಬೇಕೋ ಜಗದೊಳು
ಜೋಕ್ಯಾಗಿರಬೇಕೋ                                 ||ಪ||
ಕಾಕು ಕುಹಕರ ಸಂಗ  ನೂಕಿರಬೇಕೋ
ಲೋಕೇಶನೊಳಗೇಕಾಗಿರಬೇಕೋ               ||ಅ.ಪ||

ಕಚ್ಚುವ ನಾಯಿಯಂತೆ  ಬೊಗಳ್ವರೋ
ಹುಚ್ಚರಂದದೊಳಿಹರೊ ಎಚ್ಚರಿಲ್ಲದವರೋ
ಲುಚ್ಚೇರು ನಾಚಿಕಿ ತೊರದಿಹರೋ
ಮುಚ್ಚಿದಾ ಸುದ್ದಿಯ ಬಚ್ಚಿಡದಂಥಾ
ಕುತ್ಸಿತ ಮನುಜರನಗಲಿರಬೇಕೋ               ||೧||

ಲೋಕನುಡಿಯ ಮಾತಾಡುವರೋ
ಕುಹಕ ಬುದ್ಧಿಯ ಜನರೋ
ತಾಕುತಗಲು ನುಡಿಯನಾಡ್ವರೋ
ತೂಕನರಿಯದವರೋ
ಸೂಕರ ಮನುಜರ ಸಂಗತಿ ಹಿಂಗಿಸಿ
ಶ್ರೀಕರ ಬ್ರಹ್ಮ ತಾನಾಗಿರಬೇಕೋ                 ||೨||

ನಡಿನುಡಿಗೆ ನುಡಿಯಬೇಕೋ  ಗುರುವಿನಾ
ಅಡಿಯ ಪಿಡಿಯಬೇಕೋ
ಕಡುಮದದೊಳಿರಬೇಕೋ
ದುರ್ಜನರಾ ನಡತಿಯ ಬಿಡಬೇಕೋ
ಪೊಡವಿಪ ಶಿಷುನಾಳ ಒಡಿಯನ ಕಂಡು
ಗುಡಿಪುರ ಕಲ್ಮನ ಕೂಡಿರಬೇಕು                  ||೩||

        *****

ಕೀಲಿಕರಣ: ಎಮ್.ಎನ್.ಎಸ್.ರಾವ್

ದಿನಮಾನ ಬಲು ಕೆಟ್ಟವೋ

- ಶಿಶುನಾಳ ಶರೀಫ್

ದಿನಮಾನ ಬಲು ಕೆಟ್ಟವೋ  ಸದ್ಗುರುಪುತ್ರ
ನಿನಗಾವು ಬಂದು ತಟ್ಟವೋ               ||ಪ||

ಚಿನುಮಯಾತ್ಮಕವಾದ ಐದಕ್ಷರವು
ತನ್ನೊಳು ಜಪಿಸಿಕೊಂಡಿಹ
ಮನುಜರೂಪವ ಕಳೆದು ಮಹಿಮೆಯ
ತಿಳಿದ ಪುರುಷನಿಗೇನು  ಆಗದು          ||ಅ.ಪ||

ದೇಹದೊಳಿದ್ದರೇನು ಜೀವನ ಕಾಯ
ಲೋಹಕೆ ಬಿದ್ದರೇನು
ಸಾವುನೋವಿನ ಭಾವ ತಿಳಿಯದೆ
ಜಾವಕೊಮ್ಮೆ ಓಂ ನಮಃ  ಶಿವಾಯೆಂದು
ಭಾವದಲಿ ನುಡಿಯೇ ಕಲಿಕರ್ಮದೊಳು ಮಹ-
ದೇವ ಮೆಚ್ಚುವ  ಸತ್ಯ ಮಾತಿದು           ||೧||

ವಿಷಯವಾಡಿದರೇನಾಯ್ತು   ಈ  ಲೋಕವು
ಹುಸಿಯನ್ನುವುದೇ  ಗೊತ್ತು
ವಸುಧಿಯೊಳು ಶಿಶುನಾಳಧೀಶನ
ಎಸೆವ ಸೇವಕನಾಗಿ  ಜಗದಿ
ಮಸಿದ ಪ್ರಣವಶಸ್ತ್ರ   ಕೈಯೊಳು
ಕೊಸರದಂದದಿ  ಹಿಡದು ನುಡಿಯಲು       ||೨||

        *****

ಕೀಲಿಕರಣ: ಎಮ್.ಎನ್.ಎಸ್.ರಾವ್

ನಾನಾರೆಂಬುದು ನಾನಲ್ಲಾ

- ಶಿಶುನಾಳ ಶರೀಫ್

ನಾನಾರೆಂಬುದು ನಾನಲ್ಲಾ  ಈ
ಮಾನುಷ ಜನ್ಮವು ನಾನಲ್ಲಾ        ||ಪ||
ನಾರಾಯಣ ವರ ಬ್ರಹ್ಮ ಸದಾಶಿವ
ನೀ ಎನಿಸುವ ಗುಣ ನಾನಲ್ಲಾ        ||ಅ.ಪ||

ಮಾತಾ ಪಿತ ಸುತ  ನಾನಲ್ಲಾ
ಭೂನಾಥನಾದವ ನಾನಲ್ಲಾ
ಜಾತಿಗೋತ್ರಗಳು ನಾನಲ್ಲಾ
ಪ್ರೀತಿಯ  ಸತಿ ಸುತ  ನಾನಲ್ಲಾ    ||೧||

ವೇದ ಓದುಗಳು ನಾನಲ್ಲಾ
ವಾದ ಮಾಡಿದವ ನಾನಲ್ಲಾ
ನಾದಬಿಂದುಕಳೆಭೇದ ವಸ್ತು ನಿಜ -
ಬೋಧದಲಿದ್ದವ ನಾನಲ್ಲಾ            ||೨||

ನಾನಾಗಿ ನಡೆದವ ನಾನಲ್ಲಾ
ನಾ ಶಿಶುನಾಳಧೀಶನ  ಬಿಡಲಿಲ್ಲಾ
ನಾ ಅಳಿಯದೆ ನಾ ತಿಳಿಯಲಾರದು
ನೀ ಎನಿಸುವ ಗುಣ ನಾನಲ್ಲಾ        ||೩||

          *****

ಕೀಲಿಕರಣ: ಶ್ರೀಕಾಂತ್ ಮಿಶ್ರಿಕೋಟಿ

ನೋವಿಗೆ ಸಾವಿಗೆ ಆಯಾಸಪಡಬ್ಯಾಡ

- ಶಿಶುನಾಳ ಶರೀಫ್

ನೋವಿಗೆ ಸಾವಿಗೆ ಆಯಾಸಪಡಬ್ಯಾಡ
ದೇವಗಂಗಾಧರ ಭಾವದೊಳಿರಲು                          ||೧||

ಮನಸ್ಸಿನ ಇಚ್ಛೆಗೆ ಘನ ವಿಪರೀತ ಮಾಡಿ
ದಿನ ಬಳಲ್ವದು ಇದು ಏನು                                    ||೨||

ವಸುಧಿಯೊಳು ಶಿಶುನಾಳಧೀಶನ
ಹಸುಳನಾಗಿ ಈ ಪರಿ ಕಸವಿಸಿಪಡುವದು ಹಸನವಲ್ಲ    ||೩||

              *****

ಕೀಲಿಕರಣ: ಶ್ರೀಕಾಂತ್ ಮಿಶ್ರಿಕೋಟಿ

ಕರುಣಾಮೃತ ರಸ ರುಚಿಕರದೋಗರ

- ಶಿಶುನಾಳ ಶರೀಫ್

ಕರುಣಾಮೃತ  ರಸ ರುಚಿಕರದೋಗರ
ಸುರಿದುಂಬುವಗಾಗುವದೇ ಮುಕುತಿ ?             ||ಪ||

ಬೇಗನೆ ತನುನಿನ  ಭೋಗವ ನೀಗದೆ
ಯೋಗಮಾರ್ಗ ಸಾಗುವದೇ  ಮನುಜಾ?        ||ಅ.ಪ||

ಮಂಗಗೆ ಮಾಣಿಕ ತೋರಲು  ಗಿಡಗಳ
ಟೊಂಗಿಗೆ   ಹಾರದೆ ಬಿಡುತಿಹುದೆ ?
ಅಂಗಜರಾಜ ಹೆದರುವ ತಪಶ್ವಿಗೆ
ಹೆಂಗಸರಾಸೆಯು  ಹಿಂಗುವುದೆ?                     ||೧||

ಜರೆಮರಣಾದಿಯೋಳ್ ಚರಿಶ್ಯಾಡುವವನಿಗೆ
ಗುರುಮಾರ್ಗವು ದೊರಕುವದೇ  ಮನುಜಾ
ಧರೆಯೊಳು  ಶಿಶುನಾಳಧೀಶನ  ಸ್ಮರಿಸದೆ
ಮರಳಿ ಮರಳಿ ಜನ್ಮ ತಪ್ಪುವುದೆ ?                    ||೨||

         *****

ಕೀಲಿಕರಣ: ಶ್ರೀಕಾಂತ್ ಮಿಶ್ರಿಕೋಟಿ

ಮಾತು ಮೌನವಾಗುತ್ತದೆ

- ರವಿ ಕೋಟಾರಗಸ್ತಿ

ಮಾತು ಮೌನವಾಗುತ್ತಿದೆ
ದಿನ.. ದಿನವು ಕ್ಷಣ.. ಕ್ಷಣವು
ಜಗದೆಲ್ಲೆಡೆ ಬಾಯಿ ಚಾಚುತಿಹ
ಕೋಮು-ಮತೀಯ ವಿಷ ಜಂತುವಿನ
ಉದ್ದನೆಯ ಕರಿ ನಾಲಗೆಯ ಕಂಡು...

ಮಾತು ಮೌನವಾಗುತ್ತಿದೆ
ನಾಡಿನ ಉದ್ದಗಲು...
ಶಾಂತಿ... ಸೌಹಾರ್ದತೆ ದೂಡಿ ಧರ್ಮದ
ಹೆಸರಲಿ ಜಾತಿ-ರಾಜಕೀಯ ಬೀಜ
ಬಿತ್ತಿ, ಕಳೆಯ ಬೆಳೆಯುವದನ್ನು ಕಂಡು.

ಮಾತು ಮೌನವಾಗುತ್ತಿದೆ
ಬದುಕಿನ ಹಸಿರು ಉಸಿರಾಗಿರುವ
ಪ್ರಕೃತಿ ಸಿರಿ ಪರಿಸರಕೆ
ಬೆಂಕಿಯಿಡುತ ಬೆಂದು
ಬರಡಾಗುತಿಹ ಮನುಕುಲ ಕಂಡು
ಮಾತು ಮೌನವಾಗುತ್ತಿದೆ.

ಜನನಿ... ಸಹೋದರಿ...
ಒಡಲ ಕುಡಿ... ಬಾಂಧವ್ಯ ಸವಿ ಅರಿಯದ
ಕ್ಷಣ... ದೇಹದ ತೃಷೆಗಾಗಿ
ಮಾರಾಟ ಮಾಡುವ ಭಂಡರ ಕಂಡು.

ಮಾತು ಮೌನವಾಗುತ್ತಿದೆ
ಕೆಂಪು ದೀಪದಡಿ ನಲುಗುತಿಹ
ಕಣ್ಣುಮುಚ್ಚಿ ಬೇಯುತಿಹ
ತನು... ಮನಗಳ ಆಳದ ನೋವು
ಕೇಳದ... ಕುರುಡಾಗಿಹ ಸಮಾಜ ಕಂಡು.

         *****

ಕೀಲಿಕರಣ: ಕಿಶೋರ್‍ ಚಂದ್ರ

ನಿತ್ಯ ಚೈತ್ರ

- ಗಿರಿಜಾಪತಿ ಎಂ. ಎನ್

ಹರಿವ ನದಿಗೆ ಹಾದಿ
ಯಾವುದೆಂಬ ನಿಯತಿಯಲದೆಲ್ಲಿದೆ?
ಮೊಳೆವ ಪ್ರೀತಿ-ಪ್ರೇಮಕೆಲ್ಲಿ
ಭಿನ್ನ-ಭೇದವೆಣಿಸಬೇಕಿದೆ?

ಬೀಸುಗಾಳಿಗೆ ಹೂವು ಅರಳಲು
ಸುಮದ ಕಂಪಿನ ಘಮ..... ಘಮ.....
ಹಾರಿಬರುವ ದುಂಬಿ ಮನದಲಿ
ಬಗೆ ಬಗೆಯ ಸಂಭ್ರಮ..... ||

ಬೆಸೆದ ಬೆಳಕಿಗೆ ಹೊಸತು ಹೊಸತಿನ
ನಿತ್ಯ ನೂತನ ನಂದನ
ಬುವಿಯ ಬಾನಿನ ಬಾಳ ಹಾದಿಗೆ
ಹಾಸಿ ಬೀಸಿದ ಚಂದನ

ಉರಿವ ಧಗೆಯಲಿ ದಿನವು ಮುಗಿದರೂ
ಮತ್ತೆ ಅರಳಿದೆ ಸುಮಬನ
ಅಂದಿನುಗಮವೇ ಅರಿದಿನಳೆವುದೆಂದರೂ
ನೆಗೆಯ ಸೂಸುವ ಬಂಧನ

        *****

ಕೀಲಿಕರಣ: ಕಿಶೋರ್‍ ಚಂದ್ರ

`ಕಾಯಮಾಯದ ಹಾಡು' - ದೇಸಿಯ ಹೊಸ ಭಾಷ್ಯ

- ತಾರಿಣಿ ಶುಭದಾಯಿನಿ

ಎಸ್.ಜಿ.ಸಿದ್ದರಾಮಯ್ಯನವರ ಕಾವ್ಯ ಹುಟ್ಟುವುದು ದೇಸಿದಿಬ್ಬದಲ್ಲಿ. ಅದು ಉಸಿರಾಡುವುದು ಅಲ್ಲಿನ ಗಾಳಿಯನ್ನೆ. ಹೀಗೆ ನೆಲಮೂಲವನ್ನು ನೆಚ್ಚಿಕೊಂಡು ಬರೆಯುವ ಕವಿ ಅವರಾಗಿರುವುದರಿಂದ ತಮ್ಮ ಸಮಕಾಲೀನರಿಗಿಂತ ಭಿನ್ನರಾಗಿ ಕಾಣುತ್ತಾರೆ.  ಮೇಲುನೋಟಕ್ಕೆ ಅವರ ಕಾವ್ಯ ಹಳ್ಳಿಗಾಡಿನ ಕೃಷಿಯ, ಅನುಭಾವದ ಸುತ್ತ ತಿರುಗಾಡುತ್ತಿರುವಂತೆ ಕಾಣಿಸಿದರೂ, ಅದರಲ್ಲಿ ನಿರೂಪಿತವಾಗುವ ನೆಲಮೂಲದ ತಾತ್ತ್ವಿಕತೆಯು ಭಿನ್ನ ಸಾಧ್ಯತೆಗಳ ಇರುವನ್ನು ಸೂಚಿಸುವಂತಿದೆ.

ಸಿದ್ದರಾಮಯ್ಯನವರು ನೆಲಮೂಲಕ್ಕೆ ಕೊಡಮಾಡಿಕೊಂಡಂತೆ ಕಾಣುವಾಗ ಅವರ ಕಾವ್ಯ ಎತ್ತಿಕೊಳ್ಳುವ ನೆಲಸಂಸ್ಕೃತಿಯ ಸಂಗತಿ ಕೆಲವು ಪ್ರಶ್ನೆಗಳನ್ನು ಮುಂದಿಡುತ್ತವೆ.  ಸಮಕಾಲೀನ ಸಂದರ್ಭದಲ್ಲಿ ದೇಸಿಯತೆಯ ಕೂಗು ಜೋರಾಗಿಯೇ ಕೇಳುತ್ತಿರುವಾಗ ಈ ಕವಿ ಯಾವ ನೆಲೆಯಲ್ಲಿ ದೇಸಿಯನ್ನು ಗ್ರಹಿಸುತ್ತಾರೆ ಮತ್ತು ಯಾವ ರೀತಿಯ ತಾತ್ತ್ವಿಕ ನಿಲುವನ್ನು ಪ್ರಕಟಿಸುತ್ತಾರೆ ಎಂಬುದನ್ನು ಮುಖ್ಯವಾಗಿ ಗ್ರಹಿಸಬೇಕಾಗುತ್ತದೆ.

ದೇಸಿಯ ಮಾತು ಕನ್ನಡದ ಸಂದರ್ಭದಲ್ಲಿ ವಿಶೇಷವಾಗಿಯೇ ನಿರ್ವಚನಗೊಳ್ಳುತ್ತ ಬರುತ್ತದೆ ಎಂಬುದು ಕನ್ನಡ ಕಾವ್ಯದ ಓದುಗರಿಗೆ ತಿಳಿದ ವಿಷಯ. ಮಾರ್ಗಕಾವ್ಯಗಳಲ್ಲಿ ಇರುವ ದೇಸಿ ವಚನಕಾರರಲ್ಲಿ ಇನ್ನಷ್ಟು, ಸ್ಪಷ್ಟವಾಗಿಯೇ ಕಾಣಿಸಿಕೊಳ್ಳುತ್ತದೆ. ಕನ್ನಡ ಸಾಹಿತ್ಯ-ಸಂಸ್ಕೃತಿಯ ಮಟ್ಟಿಗೆ ಅದು ಗುಪ್ತಗಾಮಿನಿಯಾಗಿ ಚಲನಶೀಲ ಗುಣವನ್ನು ತೋರುತ್ತಲೇ ಬಂದಿದೆ.  ಅಂದರೆ ದೇಸಿಯು ಕ್ರಿಯಾಶೀಲತೆಯ ಸಂಕೇತವೂ, ಅರಿವಿನ ಪ್ರಕ್ರಿಯೆಯೂ ಆಗಿದೆ ಎನ್ನಬಹುದು. ಅರಿವು ಎಂಬುದು ಒಳಗು ಹೊರಗು ಎರಡಕ್ಕು ಸಂಬಂಧಿಸಿದ ಪ್ರಕ್ರಿಯೆ.  ಇನ್ನೂ ಹಿಗ್ಗಿಸಿ ಹೇಳುವುದಾದರೆ, ನಿಜದನೆಲೆಯ ಹುಡುಕಾಟ;  ಸಹಜತೆಯ ಹುಡುಕಾಟ.

ಸಂಸ್ಕೃತಿ, ಪ್ರಭುತ್ವಗಳು ಜಡ್ಡುಗಟ್ಟಿದಾಗಲೆಲ್ಲ ಸಮುದಾಯಗಳಲ್ಲಿ ಒಳದಾರಿಯ ಹುಡುಕಾಟ ನಡೆಯುತ್ತಿರುತ್ತದೆ.  ಅದರಲ್ಲೂ ಸಂಸ್ಕೃತಿ, ಪ್ರಭುತ್ವಗಳ ಪ್ರತಿಗಾಮಿಧೋರಣೆಗಳನ್ನು ತಳೆದಾಗ, ಜೀವವಿರೋಧಿಯಾದಾಗ ಈ ಹುಡುಕಾಟ ಇನ್ನಷ್ಟು ಗಟ್ಟಿಯಾಗುತ್ತದೆ.  ತಂತಮ್ಮ ಜೀವರಕ್ಷಣೆಯ ವಿಷಯದಲ್ಲಿ ಎಲ್ಲ ಜೀವಿಗಳು ಇದು.  ದೇಸಿಯು ಕ್ರಿಯಾಶೀಲವಾಗುವುದೂ ಹೀಗೆಯೇ. ಜನಪದವು ತನ್ನನ್ನು ತಾನು ಕಾಯ್ದುಕೊಳ್ಳಲೆಂದು ಹೂಡವ ಒಳಬಂಡಾಯದ ರಕ್ಷಣಾತಂತ್ರ ಎಂದು ಇದನ್ನು ಕರೆಯಬಹುದು. ಈ ಪ್ರಕಿಯೆಯಾದರೋ ಎದ್ದು ಕಾಣುವಂತದಲ್ಲ.  ವ್ಯವಸ್ಥೆಯ, ಪ್ರಭುತ್ವದ ಅಥವಾ ಸಂಸ್ಕೃತಿಯ ಆಡಂಬರದ ಮಾದರಿಗಳಿಗೆ ಪ್ರತಿಯಾಗಿ ಒಳಗಿನ ಸಾಮಾನ್ಯತಾ ಸತ್ವವನ್ನು ಉದ್ದೀಪಿಸಿಕೊಂಡು ನಿಲ್ಲುವುದನ್ನು ಇಲ್ಲಿ ಗಮನಿಸಬಹುದು.  ಒಂದೆಡೆಯಿಂದ ತನ್ನೊಳಗನ್ನು ನೋಡಿಕೊಳ್ಳುವ ಪರಿಯೂ ಇನ್ನೊಂದೆಡೆ ಸ್ವಾಭಿಮಾನದ ಸಂಕೇತವೂ ಆಗಿ ಕಾಣುವ ದೇಸಿಯು ಸಾಧಾರಣೀಕರಣವನ್ನೇ ತನ್ನ ಹೆಗ್ಗುರುತನ್ನಾಗಿ ಮಾಡಿಕೊಂಡಿರುತ್ತದೆ.  ಸಾಧಾರಣ ಎನಿಸುವ ಸಂಗತಿಗಳ ಅಡಿಯಲ್ಲಿಯೇ ಸ್ವಂತಿಕೆಯನ್ನು ರೂಪಿಸಿಕೊಂಡು ಭಾಷೆ, ಸಂಸ್ಕೃತಿಗಳನ್ನು ಪುನರ್ರಚನೆ ಮಾಡಿಕೊಳ್ಳುವ ಮತ್ತು ಅದರಿಂದ ಸಂರಚನೆಗಳನ್ನು ವಿಭಿನ್ನವಾದ ಒಳನೋಟಗಳಿ೦ದ ಕಂಡುಕೊಳ್ಳುವ ರೀತಿ ಅದು.

ಈ ಬಗೆಯಲ್ಲಿ ಸಹಜವಾಗಿಯೇ ದ್ವಂದ್ವಭಾವವಿರುತ್ತದೆ. ನಾನೆಂಬುದಿದ್ದರೆ ನೀನೆಂಬುದೂ ಇರಲೇಬೇಕು ಎಂಬಂತೆ.  ಸ್ವಾತಂತ್ರ್ಯ ಚಳವಳಿಯ ಕಾಲದಲ್ಲಿ ಹುಟ್ಟಿದ ಸ್ವದೇಶಿ ಪರಿಕಲ್ಪನೆಯು ವಿದೇಶಿ ಎಂಬುದಕ್ಕೆ ದ್ವಂದ್ವಭಾವವಾಗಿ ಹುಟ್ಟಿದ್ದು.  ಆನಂತರದ ಆಧುನಿಕತೆಯ ಪರಿಕಲ್ಪನೆಯಲ್ಲಿ ಆಧುನಿಕತೆಯೆನ್ನುವುದು ಅರ್ಬನ್‍ಗೆ ಸಂವಾದಿಯಾಗಿ ನಿಂತು ಒಂದು ಹಳ್ಳಗಾಡಿನ ಸಮಾಜಕ್ಕೆ ಎದುರು ನೆಲೆಯಾಗಿರುವುದನ್ನು ಕಾಣಬಹುದು. ಇಂದಿನ ಜಾಗತೀಕರಣದ ಕಾಲದಲ್ಲಿ ದೇಸಿಯ ಭಾವವು ಹುಟ್ಟಿಕೊಳ್ಳುವುದು ಒಂದು ವಿರೋಧಿ ನೆಲೆಯಲ್ಲಿಯೇ.  ಆಧುನಿಕತೆಯ ನೆಲೆ ಪೂರ್ವಪಶ್ಚಿಮವನ್ನು ಇನ್ನಷ್ಟು ಗೆರೆ ಕೊರೆದಂತೆ ಮಾನದ೦ಡಗಳನ್ನು ರೂಪಿಸಿಕೊಳ್ಳುವಂತೆ ಕಾಣುವಾಗ ಸ್ವದೇಶಿ ವಿದೇಶಿ ವಿಂಗಡಣೆಗಳು ಸಹಜವಾಗಿಯೇ ದ್ವಂದ್ವನೆಲೆಗಳಾಗಿ ಬರುತ್ತವೆ.  ಸಿದ್ದರಾಮಯ್ಯನವರಂತಹ ಕವಿ ದೇಸಿಯನ್ನು ಒಪ್ಪುವಾಗ ಇಂಥ ದ್ವಂದ್ವಗಳ ಅಲುಗನ್ನು ಹಾಯಲೇಬೇಕು.  ಇದರಂತೆ ಅವರ ಕವಿತೆಗಳಲ್ಲಿ ಕೆಲವಾದರೂ ಪೂರ್ವ-ಪಶ್ಚಿಮ, ನಗರ-ಹಳ್ಳಿಗಳ ದ್ವಂದ್ವವನ್ನು ವ್ಯಕ್ತಪಡಿಸುತ್ತವೆ.  ಅವುಗಳ ಧೋರಣೆಯು ಕವಿಯ ನಿಲುವಿಗೆ ಬದ್ಧವಾಗಿರುವಂತೆ ಇರುವುದು ಗಮನಾರ್ಹ.

`ಗಿಡುಗ ಮತ್ತು ಎರೆಹುಳ' ಕವಿತೆ `ಕಾಯಮಾಯದ ಹಾಡು' ಸ೦ಕಲನದಲ್ಲಿ ಕಾಣುವ ಕವಿತೆ.  ಅಲ್ಲಿ ಕಾಣುವ ದ್ವಂದ್ವಭಾವ ನೋಡಬೇಕು. ಗಿಡುಗವು ಪಂಚರಂಗಿ ಬಣ್ಣದ್ದು, ಪಶ್ಚಿಮದಿಂದ ಹಾರಿ `ರವರವ್ವನೆ' ಹಾರಿ ಬರುತ್ತಿದೆ.  ಅದಕ್ಕೆ ಎದುರಾಗಿ ಸಾಧಾರಣವೆನಿಸುವ, ಮಣ್ಣನ್ನು ನಂಬಿ ಬದುಕುವ ಎರೆಹುಳ ಇದೆ.  ಅಲ್ಲಿ ಒಂದು ಪ್ರಶ್ನೆಯಿದೆ- ಯಾರಲಾ ಯಾರಲಾ! ನೆಲದ ವಾರಸು ಯಾರಲಾ? ಎಂಬುದು.  ಅದರ ದನಿಯು ಈ ಸಲದ ಹಕ್ಕು, ವಾರಸುದಾರಿಕೆ ಖಂಡಿತವಾಗಿಯೂ ಎರೆಹುಳಕ್ಕೆ ದಕ್ಕಬೇಕೆನ್ನುವ ಪಕ್ಷಪಾತಿ ನಿಲುವನ್ನು ಹೊಂದಿದಂತಿದೆ.  ಅದೇ ಕವನದ ಮುಂದಿನ ಭಾಗದಲ್ಲಿ, `ಬಣ್ಣದ ಬೆಡಗಿನ | ಪೂರ್ವದ ಜೀವಜಾತಗಳೆಲ್ಲ ಮಾತು ಕಳೆದವು' ಎಂದು ಹೇಳಿರುವುದು ಸಹ ಪೂರ್ವದ ಪರವನ್ನೇ ಸೂಚಿಸುವಂತಿದೆ.

ಈ ದ್ವಂದ್ವಗಳ ಇರವನ್ನು ಒಪ್ಪಿಕೊಳ್ಳುತ್ತಲೇ ಅಲ್ಲಿರುವ ಬಿಕ್ಕಟ್ಟನ್ನು ನೋಡಬೇಕು.  ಯಾವುದಾದರೊಂದು ನಿಲುವನ್ನು ಬೆಂಬಲಿಸಿ ನಿಂತರೂ ಅದಕ್ಕೇ ಬಾಧ್ಯಸ್ಥನಾಗಬೇಕಾದ ಅನಿವಾರ್ಯತೆ ಉಂಟಾಗುವುದಲ್ಲದೆ ತನ್ನ ಆಯ್ಕೆಯ ಸತ್ವಶೀಲತೆಯನ್ನು ಪರೀಕ್ಷೆಗೊಡ್ಡಬೇಕಾದ ಪರಿಸ್ಥಿತಿಗೆ ಕವಿ ಸಿಲುಕುತ್ತಾನೆ.  ಇದು ಅವನ ಸವಾಲು ಕೂಡ.

`ಈಗಾಗಲೇ ಹೇಳಿದಂತೆ ಸಿದ್ದರಾಮಯ್ಯನವರ ಕಾವ್ಯವು ಕೇಂದ್ರೀಕೃತವಾಗುವುದು ದೇಸಿದಿಬ್ಬದಲ್ಲಿ- ದೇಸಿಯೆಂದರೆ ಒಂದು ಜೀವನಕ್ರಮವೆಂದು ನಿರ್ವಚನ
ಮಾಡಿಕೊಳ್ಳುವಾಗ ಅದು ರೈತಾಪಿವರ್ಗದ ಜೀವನ ಕ್ರಮವೆಂದು ಅವರು ಭಾವಿಸುತ್ತಾರೆ.  ರೈತಾಪಿ ವರ್ಗವು ಜಾಗತೀಕರಣದ ಅಪಾಯಗಳಿಗೆ ಬದುಕನ್ನು ಒಡ್ಡಿಕೊ೦ಡಿರುವ ಸಂದರ್ಭದಲ್ಲಿ ಅದರ ಅಳಿವು ಕಂಗೆಡಿಸುವ ಅಂಶ.  ಇದನ್ನು ಪರಿಗಣಿಸುತ್ತಲೇ ಜಾಗತೀಕರಣದ ಸವಾಲುಗಳಿಗೆ ದೇಸಿದಿಬ್ಬದ ಸಾಮನ್ಯತಾ ಸತ್ವಗಳನ್ನು ಮುಂದಿಡುತ್ತದೆ ಸಿದ್ದರಾಮಯ್ಯನವರ ಕಾವ್ಯ. ಜಾಗತೀಕರಣ ಪರ್ಯಾಯ ನೆಲೆಗಳಲ್ಲಿ ಉತ್ತರ ಹುಡುಕುವ ಸಂದರ್ಭದಲ್ಲಿ ದೇಸಿಯತೆಯಲ್ಲಿ ಗೋಚರಿಸುವ ಸತ್ವಶೀಲ ಉತ್ತರಗಳು ರಾಜಕೀಯ, ಸಾಂಸ್ಕೃತಿಕ ನೆಲೆಗಳನ್ನು ಪುನರ್ರ್‍ಅಚಿಸಬಹುದೆಂಬ ಆಶಯವನ್ನೂ ಅದು ವ್ಯಕಪಡಿಸುತ್ತದೆ.

ನೆಲಮೂಲದ ಕಲ್ಪನೆಯು ವ್ಯವಸಾಯದ ಬದುಕನ್ನು ಬಿಟ್ಟು ರೂ‌ಪುಗೊಳ್ಳುವಂತದ್ದಲ್ಲ.  ಇಂದು ನಶಿಸುತ್ತಿರುವ ಜೀವಸಂಕುಲಗಳನ್ನು ಜೀವ ವಿಜ್ಞಾನಿಗಳು
ಪಟ್ಟಿ ಮಾಡುತ್ತಿರುತ್ತಾರೆ. ಅದರೊಳಗೆ ರೈತನೆಂಬ ಜೀವಿಯೂ ಸೇರಿಕೊಳ್ಳುವ ಕಾಲ ಬರುತ್ತಿದೆ.  ಈ ಆತಂಕ ಸ್ವಷ್ಟಿಯಾದರೆ ಅವನನ್ನು ನಂಬಿ ಬದುಕುತ್ತಿರುವ ಜೀವ ಸರಪಳಿಯು ಕಳಚಿಕೊಂಡಂತೆ ಎಂಬುದೇ ಸಿದ್ದರಾಮಯ್ಯನವರ ಆತಂಕ.  ರೈತನ ನಾಶವೆಂದರೆ ಒಂದು ಜೀವನಶೈಲಿಯ ಕಣ್ಮರೆಯಾಗುವಿಕೆ.  ಇದು ಬರಿಯ ರಾಜಕೀಯ, ಆರ್ಥಿಕ ಪ್ರಶ್ನೆಗಳನ್ನಷ್ಟೆ ಒಳಗೊಳ್ಳುವಂತಿದ್ದರೆ ಈ ಕುರಿತು ಯೋಚಿಸಬೇಕಾದ ತೀವ್ರತೆ ಅಷ್ಟಾಗಿ ಇರುತ್ತಿರಲಿಲ್ಲವೇನ್ನೋ.  ಇದು ಮೌಲ್ಯದ, ಜೀವ ಸಂಸ್ಕೃತಿಯ ಪ್ರಶ್ನೆಗಳೂ ಆಗಿರುವುದರಿಂದಲೇ ನಮ್ಮನ್ನು ಬಾಧಿಸುತ್ತದೆ.  ಬಂಡವಾಳಶಾಹಿ ಪ್ರಭುತ್ವಗಳು ಸೃಷ್ಟಿಸುವ ಬಿಕ್ಕಟುಗಳು ರೈತನನ್ನು ಮಾತ್ರವಲ್ಲದೆ, ಅವನು ನಂಬಿರುವ ನೀರು, ನೆಲ, ಗಾಳಿಗಳನ್ನೂ ಬಿಡುತ್ತಿಲ್ಲ.  ಹೀಗಿರುವಾಗ ನೆಲದ ವಾರಸುದಾರಿಕೆಯ ಪ್ರಶ್ನೆ ಇಲ್ಲಿ ಎದುರಾಗುವುದು
ಸಹಜ.  `ಈಸಕ್ಕಿಯಾಸೆ ನಿಮಗೇಕಯ್ಯ?' ಎನ್ನುವ ನೈತಿಕ ಸೊಲ್ಲು ಉಡುಗಿಸಿ, ಲಾಭಕೋರತನವನ್ನೇ ಮೌಲ್ಯ ಎಂದು ಬಿಂಬಿಸಿ ಬೆಳೆಸುವ ಜಾಗತೀಕರಣವು ಖಂಡಿತವಾಗಿ ಜೀವವಿರೋಧಿ ನೆಲೆಯದು ಎಂದು ಕವಿ ಗುರುತಿಸಿಕೊಳ್ಳುವುದು ಇಲ್ಲಿ ಕಾಣುತ್ತದೆ.  ತಳಿಗಳ ವಶೀಕರಣ, ಕುಲಾಂತರಿಗಳ ಸೃಷ್ಟಿ ನಿಸರ್ಗನೇಮಕ್ಕೆ ಎರವಾದುದು. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಇದು ಆಕ್ರಮಣಶೀಲತೆಯ ಸ್ವರೂಪ.  ಇದನ್ನು ಕವಿ ಗುರುತಿಸಿಕೊಳ್ಳುವ ರೀತಿ ಹೀಗಿದೆ:

    ಕುಲಾಂತರಿಗಳ ಕೋಟಲೆಯಲ್ಲಿ
    ಕುಲಾಂತರಿಗಳ ನೆಲೆ ಕಣ್ಮರೆಯಾದುದೋ

ಇಲ್ಲಿ ಕವಿಗೆ ಒಂದು ಮಾದರಿಯ ಕಲ್ಪನೆ ಇರುವುದು ಸ್ಪಷ್ಟ.  ಒಂದು ಜೀವನ ಶೈಲಿಯನ್ನು ಅವರು ಬೆಂಬಲಿಸುತ್ತಿದ್ದಾರೆ.  ಅದರ ಮೇಲಾಗುವ ಅಕ್ರಮವನ್ನು ನೋಡುತ್ತ, ಅದಕ್ಕೆ ಪರಿಹಾರವಾಗಿ ಪರ್ಯಾಯ ಮಾರ್ಗೋಪಾಯಗಳೇನು ಎಂದು ಚಿಂತಿಸುವಲ್ಲಿ ಮತ್ತೆ ಅದರಲ್ಲೇ ಉತ್ತರಗಳಿರಬಹುದಾದ ಸಾಧ್ಯತೆಗಳನ್ನು ಅರಸುತ್ತಾರೆ.

    ಎಲ್ಲಿರುವೆ ನನ್ನವ್ವ | ಮರುಜೇವಣಿಯ ಅಡ್ಡಿಕೆಯೇ  
    ಅಡ್ಡದಾರಿಗೆ ಬಿದ್ದ ಕರುಳ | ಕಾಯುವ ಅರಿವೇ

ಹೀಗೆಂದು ಅವರ ಏಕಲವ್ಯನ ತಾಯಿ ಕೂಗಿ ಕರೆಯುತ್ತಾಳೆ.  ನಗರದ ಮರೆ ಮೋಸಕ್ಕೆ ಬಲಿಯಾದ ಮಗು ಏಕಲವ್ಯನಿಗಾಗಿ ಮರುಗುತ್ತ, ಅವನ ಹೆಬ್ಬೆರಳಿಗಾಗಿ ಶೋಕಿಸುತ್ತ ತಾಯಿ ಸುಮ್ಮನೇ ಇರುವುದಿಲ್ಲ.  ಮುಂದಿನ ಪರಿಹಾರವನ್ನು ಹುಡುಕುವುದರಲ್ಲಿದ್ದಾಳೆ.  `ಬೆಂಕಿಗೋಳದ ರಾಚು' ತುಂಬಿದೆ ಎಂದು ಹೇಳುವ ಸಿಂದಾಬಾದ್‌ನಾವಿಕನೂ ನಿರಾಶನಾಗುವುದಿಲ್ಲ - `ಬೆಂದ ಮಣ್ಣಿನೊಡಲಲ್ಲೇ | ನೊಂದ ಮನಸು ಚಿಗುರುವುದು | ಛಲದ ಬಾಳ್ಗೆ ನೆಲದ ಏಳ್ಗೆ' - ಎನ್ನುತ್ತಾನೆ.  ಇದೆಲ್ಲಕ್ಕಿಂತ ಮಿಗಿಲಾಗಿ `ಜಲದ ಕಣ್ಣಿನ ಶೋಧ' ಎಂಬ ಭರವಸೆಯ ಮಾತು ಅಂತರ್ಗಾಮಿಯಾಗಿರುವ ನೀರಿನ ಶಕ್ತಿಯನ್ನು ನಂಬುವ ನೆಲಮೂಲದ ಅತ್ಯುನ್ನತ ಶಕ್ತಿಯ ನೆಲೆ.  ಈ ದೃಷ್ಟಿಯಿಂದ ಕವಿಯದು ಒಂದು ತೆರನಾದ ಉಗ್ರನಿಷ್ಠೆ ಎನ್ನಬಹುದು.  ಅದು ಅನ್ಯದೈವಕ್ಕೆಳಸದ ಭಕ್ತನ ಛಲದಂತೆ, ಸತತ ನಂಬುಗೆಯಲ್ಲಿ ನಿಂತು ತನ್ನ ಸತ್ವವನ್ನು ಪರೀಕ್ಷಿಸಿಕೊಳ್ಳುವುದಾಗಿದೆ.

`ಕಾಯಮಾಯದ ಹಾಡು' ಸಂಕಲನದ ತುಂಬೆಲ್ಲ ಒಕ್ಕಲು ಮಕ್ಕಳು ಇದ್ದಾರೆ (ಅಪ್ಪ, ಅಜ್ಜಿ, ಅವ್ವ - ಇವರೂ ಇದೇ ಸಾಲಿನಲ್ಲಿ ಬರುತ್ತಾರೆ ಎನ್ನುವುದು ವಿಶೇಷ).  ಜೊತೆಗೆ ಏಕತಾರಿಯ ಜೋಗಿಗಳು ಇದ್ದಾರೆ.  ಸುಮ್ಮನೇ ನೋಡಿದರೆ ಸಂಬಂಧವಿಲ್ಲದ ಚಿತ್ರಗಳಿವು.  ಆದರೆ ಇವರೆಲ್ಲ ಬೆಸೆಯುವುದು ನೆಲಮೂಲದ ಅಂಥಃಸೂತ್ರದಲ್ಲಿ.  ನೆಲಮೂಲದಿಂದಲೇ ಹುಟ್ಟಿಬಂದವರು ಇವರೆಲ್ಲ.  ಪೌರಾಣಿಕ ಪಾತ್ರಗಳಾದ ಅಹಲ್ಯೆ ಇಂದ್ರರು, ಅಮೃತಮತಿ ಬದಗರು ನೆಲಕ್ಕೆ ಸಹಜವಾದ ರೀತಿಯಲ್ಲಿ ಬರುತ್ತಾರೆ.  ಬದಗನನ್ನು `ನೆಲದ ಬಾಳಿನ ನೀತಿ ಸೂತ್ರಧಾರ' ಎಂದು ಕರೆಯುವಲ್ಲಿ ನೆಲಮೂಲದ ನೀತಿ ವಿಭಿನ್ನವಾಗಿರುವುದನ್ನು ಸೂಚಿಸಲಾಗಿದೆ.  ಏಕಲವ್ಯನ ಉದಾಹರಣೆಯನ್ನು ಇಲ್ಲಿ ತೆಗೆದುಕೊಳ್ಳಬಹುದು.  ಇವರಂತೆಯೇ ಸಹಜವಾಗಿ ಈ ನೆಲದಿಂದ ಹುಟ್ಟಿಬಂದ ಅಲ್ಲಮ, ಶರೀಫ, ದರವೇಶಿ, ರಾಬಿಯಾ ಮುಂತಾದ ಸತ್ವಶಾಲೀ ಅನುಭಾವಿಗಳು.  ಹಾಗಾಗಿ ಇಲ್ಲಿ ನೆಲಮೂಲವೆಂಬುದು ಸಹಜತೆಯ ಪರಿಕಲ್ಪನೆಯಾಗಿ ರೂಪುಗೊಳ್ಳುತ್ತಲಿದ್ದು, ಸಹಜತೆಗೆ ತೆರೆಯಾಗಿರುವ ಆವರಣಗಳನ್ನು ಸರಿಸಿ ನೋಡುವ ಕ್ರಮವೊಂದನ್ನು ನೇರ್ಪುಗೊಳಿಸುತ್ತಲಿರುವುದು ಗೋಚರಿಸುತ್ತದೆ.  ಸಹಜ ಬದುಕಿನ ತಡಕಾಟವೇ ನಿಜದ ನೆಲೆಯ ಅರಸುವಿಕೆಯಾಗಿದೆ.

ಮರುಜೇವಣಿಯನ್ನು ಹುಡುಕುವ ಮೂಲಕ ಆವರಣಗಳನ್ನು ಸರಿಸಿ ಸಹಜ ಬದುಕನ್ನು ಮತ್ತೊಮ್ಮೆ ಕಾಣಬಹುದೆಂಬ ಹಂಬಲದಲ್ಲಿರುವ ಕವಿ ಅದಕ್ಕಾಗಿ ಸಮುದಾಯದ ಬದುಕಿನಲ್ಲಿಯೂ, ಜೋಗಿತ್ವದ ಬದುಕಿನ ಸತ್ವದಲ್ಲಿಯೂ ಅರಸುತ್ತಾರೆ.  ಮರುಜೇವಣಿಯ ಸತ್ವವು `ಬಹುಜನಹಿತಾಯ'ವೆಂಬ ತಾತ್ವಿಕತೆಯಲ್ಲಿ ಕಾಣಿಸುತ್ತದೆ.  ಅದರಲ್ಲಿ ಸಮುದಾಯದ ಕಲ್ಪನೆ ಇದ್ದು, ವರ್ತಮಾನದ ಒಂಟಿ, ಒಡಕಲು ಬದುಕುಗಳಿಗೆ ಉತ್ತರವಾಗಬಹುದಾದ ಆಶಯವಿದೆ.

ಸಿದ್ಧರಾಮಯ್ಯನವರು ನೆಚ್ಚುವ ಸಮುದಾಯದ ಬದುಕು ವ್ಯವಸಾಯ ಮೂಲದ್ದು.  ಬೇಸಾಯಕ್ಕೆ ಮೂಲಾಧಾರವಾಗಿ ತಾಳ್ಮೆ, ಪರಿಶ್ರಮಗಳಿರುತ್ತವೆ.  ಫಲಾನುಭವದ ಸಂತೃಪ್ತಿ ಸಿಕ್ಕಿದರೂ ಅದು ಒಬ್ಬನದಲ್ಲ, ಸಮುದಾಯದ್ದು.  ಈ ತತ್ವವನ್ನು ಬಿಂಬಿಸುವಂತೆ ಅವರ ಕಾವ್ಯದಲ್ಲಿ ಇರುವೆ ಮತ್ತು ಇರುವೆಗೂಡಿನ ಚಿತ್ರಗಳಿವೆ.  ಕಾಯಕತತ್ವಕ್ಕೆ ಹೆಸರಾದ ಇರುವೆಗಳು ಆಹಾರವನ್ನು ಸಂಗ್ರಹಿಸಿ, ಅದನ್ನು ಹೊತ್ತುಕೊಂಡು ಹೋಗುವುದರಿಂದ ಹಿಡಿದು ಅದನ್ನು ವರ್ಷದ ಕೂಳಾಗಿ ಕಾಪಾಡಿಕೊಂಡು, ಹಂಚಿ ತಿನ್ನುವುದರ ತನಕ ಸಮುದಾಯದ ಬದುಕಿಗೆ ರೂಪಕವಾಗಿ ನಿಲ್ಲುತ್ತದೆ.  ಇದಲ್ಲದೆ ಕವಿ ಕೊಡುವ ಜಿಡ್ಡು ಕದಡಿರುವ ಮಜ್ಜಿಗೆಯ ಚಿತ್ರವು ಇದೇ ಆಶಯವನ್ನು ವ್ಯಕ್ತಪಡಿಸುತ್ತದೆ.  ಜಿಡ್ಡು ಒಟ್ಟುಗೂಡಿದಲ್ಲದೇ ಬೆಣ್ಣೆಮುದ್ದೆಯಾಗದು;  ಒಟ್ಟಾಗದೇ ಜಿಡ್ಡಿನ ಶಕ್ತಿಯಾಗದು ಎಂದು ಸೂಚಿಸುತ್ತದೆ.  ಇದಕ್ಕೆ ಪೂರಕವಾಗಿ ಇನ್ನೂ ಸ್ಪಷ್ಟವಾದ ಸಾಲುಗಳನ್ನು ಕವಿಯೆ ಬರೆಯುತ್ತಾರೆ:

    ಒಂಟೆತ್ತಿನಾರಂಬ | ಸೊಂಟ ಮುರಿದಾ ಬದುಕು
    ಮುರಿದ ಮನಸುಗಳಿಂದ | ಬಿತ್ತೋ ಹೊಲ ಬರೀ ಬೀಳು

ಈ ಸಂಯೋಜಕ ಶಕ್ತಿಯು ಅವರ ಇನ್ನೊಂದು ಪರಿಕಲ್ಪನೆಯಲ್ಲಿ ವಿವರಿಸುವುದಾದರೆ, `ಕಳ್ಳುಬಳ್ಳಿಯ ಬಂಧ' ಎನ್ನಬಹುದು.  ಕುಲಮೂಲ ಎಂಬುದು ಕುಲಾಂತರಿಗಳಿಗೆ ಎದುರು ನಿಲ್ಲುವ ತಾಯಿಬೇರಿನ ಚೇತನವಾದರೆ ಕುಲ, ಕಳ್ಳುಬಳ್ಳಿಯ ಬಂಧವು ಒಟ್ಟು ಸಮುದಾಯದ ಸ್ವರೂಪವನ್ನು ಸೂಚಿಸುತ್ತ ಪ್ರೇರಕ ಶಕ್ತಿಗಳಾಗುವುದನ್ನು ಕವಿ ಕಾಣುತ್ತಾರೆ.

ಇದಕ್ಕೆ ಜೊತೆಗೂಡುವುದು ಏಕತಾರಿಯ ನಿಶ್ಶಬ್ದದ ನಾದ.  ಜೋಗಿತ್ವದ ನೆಲೆಯೆಂದರೆ ಸ್ಥಾವರವಲ್ಲ, ಜಂಗಮವು.  ನಿರಂತರ `ಆಗುವಿಕೆ'ಯಲ್ಲಿ ಜಂಗಮದ ಶಕ್ತಿಯಿದೆ.  ತನ್ನ ತಾನು ಕಳೆದುಕೊಳ್ಳುತ್ತ ಆಗುವಿಕೆಯನ್ನು ಸಾಧಿಸುವ ಪ್ರಕ್ರಿಯೆ ಅದು.  ಇದನ್ನು `ಜನುಮವೆಂಬುದು ಜಂಗಮ' ಎಂಬ ಕವಿ ಸಾಲು ವಿವರಿಸುತ್ತದೆ.  ಗತಿಶೀಲತೆಯ ಕುರುಹಾಗಿ ಬರುವ ಜೋಗಿ ಎಲ್ಲಿಯೂ ನಿಲ್ಲದೆ ನಿರಂತತೆಯ ಸಂಕೇತವಾಗಿ, ಆವರಣಗಳನ್ನು ಸರಿಸುತ್ತ ನಿಜದ ನೆಲೆಯನ್ನು ಅರಸಿ ಹೋಗುವ ಶಕ್ತಿಯಾಗಿ ಕಾಣುತ್ತಾನೆ.  ಈ ನಿರಂತರತೆಯ ಸೃಜನಾತ್ಮಕ ಧಾತುವನ್ನು ದೇಸಿಯಲ್ಲಿ ಗುರುತಿಸಿಕೊಳ್ಳುವುದು ಮತ್ತು ಅದನ್ನು ಬಿಡುಗಡೆಯ ಉಪಾಯವಾಗಿ ಕಾಣುವುದು ಮಹತ್ವದ ನಿಲುವು.

ಸುತ್ತಲಿನ ಬದುಕು ಹೊದ್ದುಕೊಂಡ ಆವರಣಗಳನ್ನು ಸರಿಸಿ ನೋಡುವ ಒಳದೃಷ್ಟಿಯ ಪಡೆದ ಜೋಗಿಗಳು `ಕಾಯಮಾಯದ ಹಾಡು' ಸಂಕಲನದಲ್ಲಿ ಕಾಣುತ್ತಾರೆ.  ರಾಬಿಯಾ ಎಂಬ ಸೂಫಿ ಒಂದು ಕೈಯಲ್ಲಿ ಬೆಂಕಿ ಇನ್ನೊಂದು ಕೈಯಲ್ಲಿ ನೀರು ಹಿಡಿದು ಸ್ವರ್ಗನರಕಗಳನ್ನು ಎದುರಿಸ ಹೊರಡುತ್ತೇನೆ ಎನ್ನುತ್ತಾಳೆ.  ಸ್ವರ್ಗನರಕಗಳು ಎರಡು ಅತಿಗಳು, ಇವನ್ನು ನಿರಾಕರಿಸಿ ಒಂದು ಮಧ್ಯಮ ಮಾರ್ಗವನ್ನು ಹುಡುಕುವ ಅವಳ ರೀತಿ ಮರುಜೇವಣಿಯ ಭರವಸೆಯಲ್ಲಿ ಕಾಣುತ್ತದೆ.  ಅಮರಿಕಾ ಎಂಬ ಸ್ವರ್ಗ, ಇರಾಕೆಂಬ ನರಕಗಳನ್ನು ಕಾಣುವ ಸಮಕಾಲೀನ ಪ್ರಪಂಚಕ್ಕು ಮಧ್ಯಮ ಮಾರ್ಗದ ಅವಶ್ಯಕತೆಯಿದೆ ಎಂಬುದು ಕವಿ ಜೋಗಿತ್ವದ ನೆಲೆಯಲ್ಲಿ ಸೂಚಿಸುವ ಪರಿಹಾರ ಮಾರ್ಗ.

ಜೋಗಿತ್ವದ ಅರಿವು ವಿಕಾಸಗೊಂಡಂತೆಲ್ಲ `ಮರೆಮಾಚಿದ' ಬದುಕಿನ ಆವರಣಗಳು ಸರಿಸಿ ನೋಡುವ ದೃಷ್ಟಿ ಬಲವಾಗುತ್ತದೆ.  ಸಾರ್ವಜನಿಕ ಬದುಕಿಗೆ ಸಂಪರ್ಕಕೊಂಡಿಯಾದ ಮಾತು ನಿಜವಲ್ಲದೆ ಸೂತಕವೆನಿಸುವುದು, ಜೀವಪಾತಕವೆನಿಸುವುದು ಇಲ್ಲಿನ ಕವಿತೆಗಳು ಬಿಚ್ಚಿಡುವ ಅಂಶ.  `ಸೊಲ್ಲುಫಲವಾಗಿ' ಎಂಬ ಕನವರಿಕೆಯಲ್ಲಿರುವ ಅವು ನಡೆನುಡಿಯ ಪಾರದರ್ಶಕತೆಯನ್ನು ಎತ್ತಿಹಿಡಿಯುತ್ತವೆ.  `ನೆತ್ತರ ಪಾತಕದಲ್ಲಿ ಉರಿಯುವ ನೆಲ', `ಮನೆಯೆಂಬೋ ಮನೆ ಮಸಣವಾಟಿಯಾಗುವುದು ಮಾತಿನ ಸೂತಕದ ಫಲಗಳೆಂಬುದು `ನುಡಿ ಜ್ಯೋರ್ತಿಲಿಂಗ' ಎಂಬ ತಾತ್ವಿಕ ತಿಳಿವಳಿಕೆಯಿಂದ ಕಂಡುಕೊಂಡ ಸತ್ಯ.  ಇದು ಜೋಗಿತ್ವದ ತಿಳುವಳಿಕೆಯ ಮಾದರಿ.

ಜೋಗಿತ್ವದ ಇನ್ನೊಂದು ಮುಖ್ಯ ಕಾಣ್ಕೆ ಎಂದರೆ ನಾನು ಎಂಬ ಅಹಂಕಾರವನ್ನು ಕಳೆದುಕೊಳ್ಳುವುದು.  ಸಮಷ್ಟಿಯಲ್ಲಿ ಬಿಂದುವಾಗಿ ಸೇರುವುದು.  ಇದೊಂದು ಅನುಭಾವದ ದರ್ಶನವಷ್ಟೇ ಅಲ್ಲದೆ, ಸಮುದಾಯದ ಬದುಕಿನ ಮೂಲಾಧಾರ ತಿಳುವಳಿಕೆಯೂ ಆಗಿದೆ.  ಇದನ್ನು ಕವಿ `ನನ್ನದೆನ್ನುವ ಸೊಲ್ಲು ಕರಕರಗಿ ಕರ್ಪೂರ' ಎಂಬ ಮಾತುಗಳ ಮೂಲಕ ವ್ಯಕ್ತಪಡಿಸುತ್ತಾರೆ.  ಸಮುದಾಯದ ಬದುಕಿಗೆ ಕನಸುವುದಾದರೆ ಜೋಗಿತ್ವದ ಅರಿವು ತಂದುಕೊಡುವ ಅಹಂಕಾರ ನಿರಸನದ ತತ್ವವು ಅಗತ್ಯ ಎಂಬುದನ್ನು ಧ್ವನಿಸುವುದರಿಂದಲೇ ಇಲ್ಲಿನ ಕವಿತೆಗಳು ರೈತರನ್ನು ಜೋಗಿಗಳನ್ನು ಒಟ್ಟು ದೃಷ್ಟಿಯಲ್ಲಿ ನೋಡಲು ಬಯಸುವುದು.  ಇದನ್ನೇ ಕವಿ ಅರಿವಿನಕ್ಕರದಲಿ ಊರಿನೊಕ್ಕಲ ಗೆಲುವು' ಎನ್ನುವುದು;  ಇದನ್ನೇ ಅವರು `ಗುರುವು ಹಚ್ಚಿದ ಅರಿವು' ಎನ್ನುವುದು.  ಹಳೆಯ ಹೊನ್ನನ್ನು ಪುಟಕ್ಕಿಟ್ಟು ಮತ್ತೆ ಬಳಸುವಂತೆ ದೇಸಿಯ ಅರಿವಿನ ಮಾರ್ಗಗಳನ್ನು ಕವಿ ಯಾವ ಕಾರಣಕ್ಕೂ ಅಪ್ರಸ್ತುತ ಎಂದು ಭಾವಿಸುವುದಿಲ್ಲ.  ಅದನ್ನು ತಾತ್ವಿಕವಾಗಿ ಹೇಗೆ ಪ್ರಸ್ತುತಗೊಳಿಸಬಹುದೆಂದು ಚಿಂತಿಸುತ್ತಾರೆ.  ಹೀಗೆ ಸಿದ್ಧರಾಮಯ್ಯನವರ ಕಾವ್ಯ ಅರಿವಿನ ಮಾರ್ಗದಲ್ಲಿ ಬಂದು ನಿಲ್ಲುವುದು, ತಾತ್ವಕವಾಗಿ ನೆಲೆಮುಟ್ಟುವುದು ಅದಕ್ಕೆ ಸಂದ ಜಯ.  ಆದರೆ ಇದೇ ಸಂದರ್ಭದಲ್ಲಿ ಅವರ ತಾತ್ವಿಕ ನಿಲುವನ್ನು ಪ್ರಶ್ನಿಸುವ ಅವಕಾಶಗಳು ಇದ್ದೇ ಇವೆ.  ಈ ಲೇಖನದ ಮೊದಲ ಭಾಗದಲ್ಲಿ ಚರ್ಚಿಸಿದಂತೆ ದೇಸಿಯೆಂಬ ಇರ್ಬಾಯ ಖಡ್ಗದ ಅಲುಗು ಸಿದ್ಧರಾಮಯ್ಯನವರ ಕಾವ್ಯವನ್ನೂ ಮುಟ್ಟದೇ ಇರದು.  ದೇಸಿದಿಬ್ಬ ಸೃಷ್ಟಿಸುವ ಪರಿಹಾರಗಳೆಡೆಯಲ್ಲೇ ಇಣುಕುವ ರಮ್ಯತೆಯ ಛಾಯೆಯು ಕಾಡುತ್ತದೆ.  ಅವರ ಸಮುದಾಯ ಶಕ್ತಿಯ ಭರವಸೆಯ ಬಗ್ಗೆ ಹೇಳುವುದಾದರೆ, ಆ ಆಶಯಗಳು ಒಂದು ಟ್ರೈಬಲ್ ಸಮಾಜವನ್ನೂ, ಅದರ ಸ್ವಯಂಪೂರ್ಣಶಕ್ತಿಯನ್ನು ನಿರ್ದೇಶಿಸಿದಂತೆ ತೋರುತ್ತವೆ ಎಂಬ ಸಂದೇಹ ನನ್ನದು.  ಸಮುದಾಯಗಳ ಶಕ್ತಿ ಛಿದ್ರವಾಗುತ್ತಿರುವ ಆತಂಕ ವ್ಯಕ್ತಪಡಿಸುವ ಅವರ ಕಾವ್ಯವನ್ನು ಓದುತ್ತಿರುವಾಗ ಸಮುದಾಯಗಳ ಶಕ್ತಿಯ ಪ್ರದರ್ಶನವನ್ನು ಮಾಡಿ, ಅಹಂಕಾರದಿಂದ ಸ್ವಾರ್ಥಿಗಳಾಗುತ್ತಿರುವ ಸಮುದಾಯಗಳನ್ನು ಸಮಕಾಲೀನ ಜಗತ್ತಿನಲ್ಲಿ ಕಾಣುತ್ತಿದ್ದೇವೆ ಎಂಬ ವಿಪರ್ಯಾಸದ ಭಾವನೆಗಳು ಮೂಡುತ್ತವೆ.  ಕುಲಮೂಲವನ್ನು ಅರಸುವುದರಲ್ಲಿಯೇ ಒಂದು ರೀತಿಯ ಅನ್ಯತೆಯನ್ನು ಸಾಧಿಸುವ ಸಮುದಾಯಗಳು ತಮ್ಮ ಪರಿಧಿಯಿಂದ ಆಚೆಗೆ ವಿಶಾಲ ದೃಷ್ಟಿಕೋನದಿಂದ ನೋಡುವುದೇ ಇಲ್ಲ ಎಂಬ ಸ್ಥಿತಿ ಉಂಟಾಗಿದೆಯಲ್ಲವೆ?  ಎಂಬುದು ನನ್ನ ಇನ್ನೊಂದು ಸಂದೇಹ.  ಇಂದಿನ ವಸಾಹತೋತ್ತರ ಸಮಾಜಗಳಲ್ಲಿ ಕಾಣುವ ಸಮುದಾಯಗಳ ಶಕ್ತಿ ಪ್ರದರ್ಶನವು ಇನ್ನೊಂದು ಸಮುದಾಯವನ್ನು ಅಳಿಸಿ ಹಾಕುವ ಕ್ರಿಯೆಯಲ್ಲಿ ತೊಡಗಿರುವುದನ್ನು ನಮ್ಮ ಅರಿವಿಗೆ ಬರುತ್ತಿದೆ.  ಹೀಗಿರುವಾಗ ದೇಸಿದಿಬ್ಬವನ್ನು ನೆಚ್ಚಿ ಬದುಕುವ ಬದುಕಿಗೆ ತಮ್ಮದೇ ಆದ ಅಗ್ನಿ ಪರೀಕ್ಷೆಗಳಿವೆ.  ಒಂದು ರೀತಿಯಲ್ಲಿ `ಕಾಯಮಾಯದ ಹಾಡು' - ಸಂಕಲನವು ಸಮಕಾಲೀನ ರಾಜಕೀಯ, ಸಾಮಾಜಿಕ ಸ್ಥಿತ್ಯಂತರಗಳ ತಲ್ಲಣಗಳನ್ನು ಕಂಡು ತೀವ್ರವಾಗಿ ಪ್ರತಿಕ್ರಿಯಿಸುವ ನಿಟ್ಟಿನಲ್ಲಿ ಕ್ರಿಯಾಶೀಲವಾಗಿದೆ.  ಒಳಬಂಡಾಯದ ದನಿಗಳಿಂದ ಪರ್‍ಯಾಯ ಸಾಧ್ಯತೆಗಳನ್ನು ಸೂಚಿಸುತ್ತ, ಜೀವಪರ ನಿಲುವನ್ನು ಹೊಂದಿದೆ.  ಇದನ್ನು ನಿಷ್ಠೆಯ ದಾರಿ ಎಂದು ಕರೆಯೋಣ.  ಆದರೆ ಅದನ್ನು ಸಹ ಪ್ರಶ್ನಿಸುವ, ಪುನರ್ವಿಮರ್ಶಿಸುವ ಅವಕಾಶಗಳಿವೆ ಎಂಬುದನ್ನು ಮರೆಯದಿರೋಣ.
        *****
ಕೀಲಿಕರಣ: ಎಂ.ಎನ್.ಎಸ್. ರಾವ್

ರಕ್ಷಕ

-ರವಿ ಕೋಟಾರಗಸ್ತಿ

ಶಿಕ್ಷಕ... ನೀ... ರಕ್ಷಕ
ಭವ್ಯ ಭಾರತದ...
ಅರಳುವ ಕುಡಿಗಳ ಆರಾಧಕ

ನಿನ್ನ ರಕ್ಷೆಯಲಿ
ಮಕ್ಕಳು ಅರಿತು ಬೆರೆತು
ವಿದ್ಯೆಯ ಕಲಿತು ನುರಿತರೆ
ಬೆಳೆಯುವದು ಬಾನೆತ್ತರಕೆ...

ಪ್ರೀತಿ ವಾತ್ಸಲ್ಯ
ಮಕ್ಕಳೊಡನೆ ಹಂಚಿಕೊಳ್ಳುತ
ನೀರುಣಿಸಿ ಪೋಷಿಸುವ...
ಕುಶಲ ಕಲೆಯ ತೋಟಿಗ ನೀನು

ಶಾಂತಿ ಸಮತೆ ಮಂತ್ರ ಹೇಳುವ
ಸೌಹಾರ್ದತೆಯ ಸೌಮ್ಯಮೂರ್ತಿ
ಅನಕ್ಷರತೆಯನು ಆಳಕ್ಕೆ ಅಟ್ಟಿ
ಅಕ್ಷರಗಳ ಸಾಕ್ಷಾರಗೊಳಿಸುವ
ಸಾಕಾರಮೂರ್ತಿ ಚತುರಶಿಲ್ಪಿ ನೀನು

         ***

ಕೀಲಿಕರಣ: ಕಿಶೋರ್‍ ಚಂದ್ರ

ಸೆಪ್ಟೆಂಬರ್ ತಿಂಗಳಿನ ಹುಡುಗಿಯರು

- ಮಂಜುನಾಥ ವಿ ಎಂ

ಮಧ್ಯಾಹ್ನ ಬಿಯರ್ ಕುಡಿದದ್ದು ತಲೆ ಸುತ್ತುತ್ತಿದೆ;
ಈಗ ನನ್ನೊಂದಿಗಿಲ್ಲದ, ಮಠಕ್ಕೆ ಓದಲು ಬರುವ
ಅವರ ನೆನಪು ಜೀವ ಹಿಂಡುತ್ತಿದೆ.

ಹೆಣ ತಿನ್ನುವ ರಾತ್ರೆಯ ಹುಳುಗಳು ಸುಳಿದಾಡಲಾರಂಭಿಸಿವೆ.

ಅವರ ಮುಗ್ಧತೆ, ಸೆಡವು, ಕುಗ್ರಾಮದ ಲಾವಣಿಗಳು-
ಒಂದರಿಂದೊಂದು ಹಳಸಲಾರಂಭಿಸಿವೆ.

ಪ್ರೇಮದಿಂದೊದಗುವ ಚುಂಬನ, ಆಲಿಂಗನದೂರದ
ಬೆಟ್ಟದಂತೆ ಅವರ ಮನಸ್ಸಿನಾಳದಲ್ಲಿ ಹುದುಗಿಕೊಂಡಿದೆ.

ನಾನು ಎಚ್ಚರ ತಪ್ಪುವುದು ನನಗೆ ಗೊತ್ತಾಗುತ್ತಿದೆ, ಕ್ಷಮಿಸಿ.

        *****