ಹಾರ್ಸ್ ಪವರ್

-    ಕಂನಾಡಿಗಾ ನಾರಾಯಣ

ಫ್ಲೈ‌ಓವರ್ ಮೇಲಿಂದ ಹೋಗುತ್ತಿದ್ದಾಗ ರೇಸ್‌ಕೋರ್ಸಿನ ಅಂಗಳದಲ್ಲಿ ಕುದುರೆಗಳು ಓಡುತ್ತಿದ್ದುದನ್ನು ನೋಡಿದ ಚಂದ್ರಹಾಸ ಕೂಡಲೇ ಬೈಕ್ ನಿಲ್ಲಿಸುವಂತೆ ಡೇವಿಡ್‌ನಿಗೆ ಹೇಳಿದ. ಊರಿನಿಂದ ಬಂದಿದ್ದ ಗೆಳೆಯ ಚಂದ್ರಹಾಸನಿಗೆ ಬೆಂಗಳೂರನ್ನು ತೋರಿಸುತ್ತೇನೆಂದು ಡೇವಿಡ್ ಕರೆದುಕೊಂಡು ಬಂದಿದ್ದ. ಇಲ್ಲಿಯೇ ಅನೇಕ ವರ್ಷಗಳಿಂದ ಸರ್ಕಾರೀ ಕಛೇರಿಯೊಂದರಲ್ಲಿ ಕೆಲಸ ಮಾಡುತ್ತಿರುವ ಡೇವಿಡ್ ಅದೇ ಪ್ಲೈ‌ಓವರ್ ಮೇಲೆಯೇ ಪ್ರತಿದಿನ ಓಡಾಡುತ್ತಿದ್ದರೂ ಅಲ್ಲಿ ನಡೆಯುವ ಕುದುರೆಯ ಓಟ ಕಣ್ಣಿಗೆ ಬಿದ್ದಿರಲಿಲ್ಲ.


ಚಿತ್ರ: ಪ್ರಮೋದ್

    ಕಣ್ಣು ಮುಚ್ಚಿ ತೆರೆಯುವಷ್ಟರಲ್ಲಿ ಕಿಲೋಮೀಟರ್‌ನಷ್ಟಿರುವ ದೂರವನ್ನು ಕ್ರಮಿಸಿ ವಿಶ್ರಮಿಸಿಕೊಳ್ಳಲು ತೊಡಗಿದ ಕುದುರೆಗಳ ಗುಂಪು ಕಣ್ಣಿಗೆ ಬಿತ್ತು. ದೂರದಲ್ಲಿ ನೊಣಗಳು ರೆಕ್ಕೆಮಡಚಿ ಕುಂತಂತಿದ್ದ ಜನಗಳು ಏಕದಂ ಹಾರಾಡುವಂತೆ ಕಂಡುಬಂದರು. ಒಂದು ಕ್ಷಣ ಇಡೀ ಪ್ರಪಂಚದಲ್ಲಿ ಸಂಚಲನ ಉಂಟಾದಂತೆ.. ಅದೆಷ್ಟೋ ಹಣ ಒಂದೇ ಸೆಕೆಂಡಿನಲ್ಲಿ ಯಾರು ಯಾರದೋ ಜೇಬಿನಿಂದ ಇನ್ಯಾರದೋ ಜೇಬಿಗೆ ಸೇರಿಹೋಗಿತ್ತು. ಅದಕ್ಕಾಗಿ ನೂರಾರು ವರ್ಷದಿಂದ ಕಾಯುತ್ತಿದ್ದವರಂತೆ ಜನಗಳು ಕುಣಿದಾಡುತ್ತಿದ್ದರು..

ಮತ್ತೆ ಆ ಕುದುರೆಗಳು ಓಡಿಬರುತ್ತವೇನೋ ಎಂದು ಚಂದ್ರಹಾಸ ನಿರೀಕ್ಷಿಸಿದ್ದು ಯಾಕೋ ಹುಸಿಯಾದಂತೆನಿಸಿತು.. ಅವುಗಳನ್ನು ಹತ್ತಿರದಿಂದ ನೋಡಬೇಕೆಂಬ ಆಸೆಯನ್ನು ಹತ್ತಿಕ್ಕಲಾಗಲಿಲ್ಲ. ಡೇವಿಡ್‌ನಿಗೆ ಗಾಡಿಯನ್ನು ಅದರ ಮುಖ್ಯದ್ವಾರದತ್ತ ಒಯ್ಯುವಂತೆ ಹೇಳಿದ. ಕುದುರೆ ಜೂಜಿನ ಬಗ್ಗೆ ಕೆಟ್ಟ ಅಭಿಪ್ರಾಯ ಹೊಂದಿದ್ದ ಡೇವಿಡ್ 'ಅದೆಲ್ಲ ಒಳ್ಳೆಯದಲ್ಲ, ಬೇಡ ಚಂದ್ರು..' ಎಂದರೂ ಕೇಳಲಿಲ್ಲ. 'ನೀನೊಳ್ಳೆ ಗಾಂಧಿ ಆಡ್ದಂಗೆ ಆಡ್ಬೇಡ.. ಅಲ್ಲಿಗೆ ಹೋದ ತಕ್ಷಣ ನಾವೂ ಜೂಜಾಡಲೇಬೇಕು ಅಂತ ಏನಿಲ್ಲ.. ಜಸ್ಟ್ ಫಾರ್ ಕ್ಯೂರಿಯಾಸಿಟಿ.. ಕನಿಷ್ಟ ಎಂತೆಂತಹವರು ಬಂದಿದ್ದಾರೆ ಅಂತಲಾದರೂ ನೋಡಬಹುದು.. ಈ ಸಲದ್ದೇ ಕೊನೇ ರೇಸಂತೆ, ರೇಸ್‌ಕೋರ್ಸ್‌ನ್ನ ಮುಚ್ಚುತಾರೆ ಅಂತ ಪೇಪರ್ರಲ್ಲಿ ಬಂದಿತ್ತು ಗೊತ್ತಾ.. ಈಗ ಬಿಟ್ರೆ, ಮತ್ತೆ ಇನ್ನೆಲ್ಲಿಗೋ ಹೋಗಿ ನೋಡಕ್ಕಾಗುತ್ತಾ..' ಎಂದು ಪುಸಲಾಯಿಸಿದ.

ಎಂಟ್ರೆನ್ಸ್‌ನಲ್ಲಿ ಜನಗಳು ಆಗಲೇ -ಇನ್ನೂ ತಮ್ಮಿಂದ ಕಾಯಲು ಸಾಧ್ಯವಿಲ್ಲವೆನ್ನುವಂತೆ- ಹೊರಗೆ ನುಗ್ಗಿಬರುತ್ತಿದ್ದರು. ಒತ್ತಿಸಿಕೊಳ್ಳುತ್ತ ಜಾಗ ಮಾಡಿಕೊಂಡು ಕೌಂಟರ್‌ನಲ್ಲಿ ಟಿಕೇಟು ಕೇಳಿದ. ಯಾರೋ ಅಡ್ಡಕಸುಬಿ ಇರಬೇಕೆಂದು ಮುಖ ನೋಡಿ ಮುಗುಳ್ನಕ್ಕ ಟಿಕೇಟ್‌ವಾಲಾ, 'ಶೋ ಮುಗಿದುಹೋಗಿದೆ.. ಹಾಗೇ ಹೋಗಿ ನೋಡ್ಕಂಡು ಬನ್ನಿ, ಪರವಾಗಿಲ್ಲ..' ಎಂದು ಅನುಮತಿ ನೀಡಿ ತನ್ನ ಪಾಡಿಗೆ ತಾನು ಲೆಕ್ಕ ಹಾಕುವುದರಲ್ಲಿ ಮಗ್ನನಾದ. ಆದರೂ ರೈಲ್ವೆ ಫ್ಲಾಟ್‌ಫಾರಂನಲ್ಲಿ ಹಿಡಿಯುವಂತೆ ಯಾರು ಎಲ್ಲಿ ಟಿಕೇಟ್ ಕೇಳಿಬಿಡುತ್ತಾರೋ ಎಂಬ ಅನುಮಾನದಿಂದಲೇ ಒಳಗೆ ಹೋದರು. ನಾಯಕನಹಟ್ಟಿ ಜಾತ್ರೆಯಲ್ಲಿ ತುರುಕಿಕೊಂಡಿರುವಂತೆ ಲಕ್ಷಾಂತರ ಜನರು, ಬ್ರಿಟಿಷರ ಕಾಲದ ಹಳೇರೈಲ್ವೆಸ್ಟೇಷನ್ನಿನಂತಹ ಆ ಇಡೀ ಕಟ್ಟಡವನ್ನು ಆವರಿಸಿಕೊಂಡುಬಿಟ್ಟಿದ್ದರು. ಹತ್ತಾರು ಟಿ.ವಿ.ಗಳು, ಕುದುರೆಗಳು ಗೇಟ್ ತೆರೆಯುತ್ತಿದ್ದಂತೆಯೇ -ತುಂಬಿದ ಡ್ಯಾಮಿನಿಂದ ನೀರು ಹೊರನುಗ್ಗುವಂತೆ ನುಗ್ಗಿ- ಒಂದನ್ನೊಂದು ಹಿಂದಿಕ್ಕಿ ಕ್ಷಣಾರ್ಧದಲ್ಲಿ ಗುರಿಮುಟ್ಟಿದುದನ್ನು ಇನ್ನೂ ರಿಲೇ ಮಾಡುತ್ತಲೇ ಇದ್ದವು -ಘಟನೆ ಇದೀಗ ತಾನೇ ನಡೆದು ಅದರ ಬಿಸಿ ಇನ್ನೂ ಆರಿಲ್ಲವೆನ್ನುವಂತೆ, ಅಥವಾ ಸರಿಯಾಗಿ ನೋಡದವರು ಮತ್ತೆ ಮತ್ತೆ ನೋಡಿ ಮನವರಿಕೆ ಮಾಡಿಕೊಳ್ಳಲಿ ಎನ್ನುವಂತೆ..

ಒಳಗೆ ಹತ್ತಾರು ಕೌಂಟರುಗಳು.. ಅದರ ಒಳಗೆಲ್ಲಾ ಬಿಳೀ ಸಮವಸ್ತ್ರ ಧರಿಸಿದ ಕ್ಯಾಷಿಯರ್‌ಗಳು ದುಡ್ಡಿನ ಕಂತೆಕಂತೆಗಳನ್ನು ಬಂಡಲ್ಲು ಮಾಡುತ್ತಿದ್ದರು. ಸಾವಿರಾರು ಜನ ನುಗ್ಗಿದರೂ ತಮಗೆ ಏನೂ ಮಾಡಲಾಗದೆನ್ನುವಂತೆ ಕೋಟೆ ಥರಾ ಬೀಗ ಹಾಕಿಕೊಂಡಿದ್ದರು. ಚಂದ್ರಹಾಸ, 'ನೋಡು, ಗಂಟೆಯ ಹಿಂದೆ ಲಕ್ಷಾಂತರ ಜನರ ಕೈಲಿದ್ದ ಆ ದುಡ್ಡನ್ನೆಲ್ಲಾ ಈಗ ಗೆದ್ದ ಕುದುರೆಯ ಓನರ್ ಹೇಗೆ ಬಾಚಿಬಿಟ್ಟಿರುತ್ತಾನೆ.. ಲಕ್ಷ್ಮಿ ಎಂತಹ ಚಂಚಲೆ ಅಲ್ಲವಾ..' ಎಂದ. ಅದಕ್ಕೆ ಡೇವಿಡ್, 'ಹಿಂದಿನ ಕಾಲದಲ್ಲಿ ಯುದ್ಧ ಮಾಡಿ, ಗೆದ್ದವರು ಸೋತವರಿಂದ ಬಲವಂತವಾಗಿ ದೋಚುತ್ತಿದ್ದರಂತೆ.. ಆದರೆ ಈಗ ಜನ ವಾಲೆಂಟಿಯರ್ ಆಗಿಯೇ ಕೊಡುತ್ತಾರೆ.. ಅಷ್ಟೇ ವ್ಯತ್ಯಾಸ..' ಅಂದ. 'ಕಾಕತಾಳೀಯ ಏನು ಗೊತ್ತಾ.. ಆಗ ಯುದ್ಧಕ್ಕೂ ಕುದುರೆಗಳನ್ನೇ ಬಳಸುತ್ತಿದ್ದರು..' ಎಂದು ಮಾರ್ಮಿಕವಾಗಿ ನಕ್ಕ ಚಂದ್ರಹಾಸ.

ನಡೆಯುತ್ತ ಮಾತಿನ ಮಧ್ಯೆ ಡೇವಿಡ್, 'ಬರೀ ಗಂಡಸರೇ ಕಾಣಿಸ್ತಾರಲ್ಲ.. ಹೆಂಗಸರು ಬರೋದಿಲ್ವ?..' ಎಂದು ಅನುಮಾನ ವ್ಯಕ್ತಪಡಿಸಿ, ಉತ್ತರಕ್ಕೆ ಕಾಯುವ ಮೊದಲೇ ಮಹಾರಾಣಿಯಂತಹ ಹೆಣ್ಣೊಬ್ಬಳು ಕಾಣಿಸಿಕೊಂಡಳು.. ಹಳದಿ-ಬಿಳೀ ಮಿಶ್ರಿತ ತೊಗಲಿಗೆ ಕಾಂಟ್ರಾಸ್ಟ್ ಕಲರ್ ಎನ್ನುವಂತೆ ಕಪ್ಪು ಬಣ್ಣದ ಚೂಡಿದಾರ.. ಕಣ್ಣಿಗೆ ತಂಪನೆರೆವ ಅಚ್ಚ ಕಪ್ಪು ಕನ್ನಡಕ.. ಬಣ್ಣಗೆಟ್ಟ ಕೂದಲಿಗೆ ಒಂದಷ್ಟು ಬಂಗಾರದ ಬಣ್ಣ ತಂದಿದ್ದ ಮೇಂದಿ ಕೂದಲು.. ರೇಷ್ಮೆಯಂತೆ ಒಂದೊಂದೇ ಎಳೆ ಇಳಿಯುತ್ತಿದ್ದ ಅದನ್ನ ಕಿವಿಯ ಹಿಂದಕ್ಕೆ ತೂಗುಹಾಕುತ್ತ ಹೆಣ್ಣಿನ ಜೀವ ಇಷ್ಟೊಂದು ಸೂಕ್ಷ್ಮವಾ ಎಂಬ ಅನುಮಾನ ಬರುವಂತಹ ನಯಗಾರಿಕೆ ಪ್ರದರ್ಶಿಸುತ್ತ ಅವಳು ನಡೆಯುತ್ತಿದ್ದರೆ, ಅವಳ ಸುತ್ತ ಹತ್ತಾರು ಜನ ಬಾಡಿಗಾರ್ಡುಗಳಂತೆ ಅರೆವೃತ್ತಾಕಾರ ರಚಿಸಿಕೊಂಡು ಬರುತ್ತಾ, ಈಗ ತಾನೇ ಮುಗಿದ ರೇಸಿನ ಬಗ್ಗೆ ತಮ್ಮ ತಮ್ಮ ಅಭಿಪ್ರಾಯ ಹೇಳುತ್ತಿದ್ದರು.. ಚಂದ್ರಹಾಸ ಅವಳನ್ನು ಗುರುತಿಸಿ, 'ಚಿತ್ರನಟ ಅಮೋಘವರ್ಷನ ಹೆಂಡತಿ ಆಕೆ.. ಆಕೆಯೂ ಮಾಜಿ ಹೀರೋಯಿನ್..' ಎಂದವನು, ತನಗೆ ಗೊತ್ತಿಲ್ಲದೇ ಬಳಸಿದ ಮಾಜಿ ಹೀರೋಯಿನ್ ಎಂಬ ಪದದ ಅರ್ಥಸಾಧ್ಯತೆಯನ್ನು ವಿವರಿಸಿ ಡೇವಿಡ್‌ನನ್ನು ನಗಿಸಿದ. ನೂರಾರು ಜನರು ಆಕೆಯನ್ನು ಇರಿದು ತಿನ್ನುವಂತೆ ನೋಡುತ್ತಿರುವುದನ್ನು ನೋಡಿದ ಚಂದ್ರಹಾಸ, 'ನಿನಗೆ ವಾತ್ಸಾಯನ ಗೊತ್ತು ಅಲ್ಲವಾ.. ಅವನ ಪ್ರಕಾರ ಹೆಂಗಸರಲ್ಲಿ ಹಸುವಿನಂತಹ, ಕುದುರೆಯಂತಹ, ಚಿಗರೆಯಂತಹ ಚಹರೆಗಳಿರುತ್ತಾವಂತೆ.. ಈಕೆಯಲ್ಲಿ ನೋಡು ಕುದುರೆಯಂತಹದೇ ಲಕ್ಷಣಗಳಿವೆ ಅಲ್ಲವಾ..' ಎಂದು ಆಕೆಯ ಚೂಡಿದಾರದ ಒಳಗೆ ನಿಲ್ಲಲಾರೆನೆನ್ನುವಂತೆ ಹೊರ ಪುಟಿಯುತ್ತಿರುವ ದುಂಡನೆಯ ತೊಡೆಗಳನ್ನು ವರ್ಣಿಸಿದ..

ಆಕೆ ತನ್ನ ಪಾಡಿಗೆ ತಾನೆನ್ನುವಂತೆ ಅತ್ತ ಹೋಗುತ್ತಿದ್ದಂತೆಯೇ, ಇದೇ ಕೊನೇ ಡರ್ಬಿ ಎಂದು ತನ್ನ ಸಮಸ್ತವನ್ನೂ -ಧರ್ಮರಾಯನಂತೆ- ಜೂಜು ಕಟ್ಟಿ ಕಳೆದುಕೊಂಡಿದ್ದ ಅಮಾಯಕನೊಬ್ಬ ಆಕೆಯನ್ನು ಬಾಯಿಗೆ ಬಂದಂತೆ ಬಯ್ದುಕೊಳ್ಳುತ್ತಿದ್ದ. ಜಾಕಿಗಳನ್ನು ಮತ್ತು ಬುಕ್ಕಿಗಳನ್ನು ತನ್ನ ಹಣ ಮತ್ತು ವರ್ಚಸ್ಸಿನಿಂದ ಆಕೆ ಬುಕ್ ಮಾಡಿಕೊಂಡಿದ್ದಳಂತೆ. ಆತನ ಪ್ರಕಾರ ಯಾವ ಕುದುರೆ ಗೆಲ್ಲುತ್ತದೆಂದು ಹೆಚ್ಚು ಜನ ಹಣ ಕಟ್ಟುತ್ತಾರೋ ಅದರ ಜಾಕಿಗೆ ಹಣ ಕೊಟ್ಟು ಸೋಲುವಂತೆ ಬುಕ್ ಮಾಡಿಕೊಳ್ಳುತ್ತಾರಂತೆ. ಹಾಗಾಗಿ ಲಕ್ಷಾಂತರ ರೂಪಾಯಿ ಎಗರಿಸಿಬಿಡುತ್ತಾರಂತೆ.

ಆಕೆಯನ್ನೂ ಮೀರಿಸಿದಂತಹ ನೂರಾರು ಘನ ಶ್ರೀಮಂತರು ಫೀಲ್ಡ್‌ನಲ್ಲಿರುವಾಗ, ಲಕ್ಷಾಂತರ ರೂಪಾಯಿ ಹಾಕಿ ವರ್ಷಗಟ್ಟಲೆ ಕುದುರೆಯನ್ನು ಸಾಕಿ, ಅದರ ಜಾಕಿ ಮತ್ತವನ ಕುಟುಂಬವನ್ನೆಲ್ಲಾ ಸಲಹುತ್ತಿರುವವರಿರುವಾಗ, ಅವರ ನಡುವೆಯೇ ದ್ವೇಷ, ಅಸೂಯೆ, ಈರ್ಷ್ಯೆಗಳಿರುವಾಗ, ಅದು ಹೇಗೆ ಆಕೆಯೊಬ್ಬಳೇ ಅವರನ್ನೆಲ್ಲಾ ಬುಕ್ ಮಾಡಿಕೊಳ್ಳಲು ಸಾಧ್ಯ? ಸುಮ್ಮನೇ ಸೋತು ಹಣ ಕಳೆದುಕೊಂಡು ಹತಾಷನಾಗಿ ಹಾಗೆಲ್ಲ ಹೇಳುತ್ತಿದ್ದಾನೆ ಎಂದುಕೊಂಡು, ಅದನ್ನೆಲ್ಲ ತಮಾಷೆಯೆನ್ನುವಂತೆ ಕೇಳಿಸಿಕೊಂಡು ಲಘುವಾಗಿ ನಕ್ಕು ಸುಮ್ಮನಾದ ಚಂದ್ರಹಾಸ.

'ಹಾಗೆಂದು ನಿಮಗೆ ಗೊತ್ತಿದ್ದ ಮೇಲೆ, ಸೋಲುತ್ತದೆಂದು ಜನ ಹಣ ಕಟ್ಟದೇ ಇರುವ ಕುದುರೆಯ ಮೇಲೆಯೇ ನೀವು ಹಣ ಕಟ್ಟಬಹುದಾಗಿತ್ತಲ್ಲವಾ?' ಎಂಬ ತರ್ಕವನ್ನೆಸೆದ ಡೇವಿಡ್. ಕೈಯ್ಯಲ್ಲಿ ಹಿಡಿದಿದ್ದ ಇಷ್ಟು ದಪ್ಪದ ಪುಸ್ತಕ ತೋರಿಸಿ, 'ಇಪ್ಪತ್ತು ವರ್ಷದಿಂದ ಇದನ್ನು ಓದಿ ಓದಿ, ಅಳೆದು ಸುರಿದು ಲೆಕ್ಕ ಹಾಕಿ ಕಟ್ಟುತ್ತಲೇ ಇದ್ದೇನೆ.. ಆದರೂ, ಇನ್ನೂ ಅದರ ಆಳ ಅಗಲ ಗೊತ್ತಾಗ್ತಾಯಿಲ್ಲ..' ಎಂದು, ಈಗ ತಾನೆ ಇಲ್ಲಿಗೆ ಕಾಲಿಡುತ್ತಿರುವ ಬಚ್ಚಾ ನೀನು ಎನ್ನುವಂತೆ ಕೊಂಕು ನೋಟ ಬೀರಿ ಆ ವಿದ್ಯೆಯ ಅಗಾಧತೆಯ ಪರಿಚಯ ಮಾಡಿಸಿದ.

ಓಡಿ ದಣಿದ ಕುದುರೆಗಳು ತಮ್ಮ ಸ್ಪರ್ಧಿಗಳೊಂದಿಗೆ ತಮ್ಮ ತಮ್ಮ ಅನುಭವ ಅಭಿಪ್ರಾಯಗಳನ್ನು ಹಂಚಿಕೊಂಡು ತಮ್ಮ ತಮ್ಮ ಲಾಯ ಸೇರಿಕೊಂಡ ಮೇಲೆ ಜನರೂ ತಮ್ಮ ತಮ್ಮ ಶಹರಗಳನ್ನು ಸೇರಿಕೊಳ್ಳಲು ದೌಡಾಯಿಸತೊಡಗಿದರು. ಚಂದ್ರಹಾಸ ತನ್ನ ವಾಚಾಳಿತನದಿಂದಾಗಿ ಸೋತು, ತಲೆ ಮೇಲೆ ಕೈಹೊತ್ತು ಕುಕ್ಕರಿಸಿ ಕುಂತವರನ್ನು ಮಾತಾಡಿಸುತ್ತ, ಮುಂದಿನ ಪಂದ್ಯ ಡಾರ್ಜಿಲಿಂಗಲ್ಲಿ, ಅದರ ಮುಂದಿನದು ಪೂನಾದಲ್ಲಿ ಇರುವುದನ್ನು ಕೇಳಿ ತಿಳಿದುಕೊಂಡ. ಡಾರ್ಜಿಲಿಂಗಿನ ಆ ಹಿಮಪರ್ವತದ ಹಿನ್ನೆಲೆಯಲ್ಲಿರುವ ಟ್ರಾಕ್‌ನಲ್ಲ್ಲಿ ಕುದುರೆಗಳು ಓಡುತ್ತಿದ್ದರೆ.. ಜೂಜು ಕಟ್ಟದಿದ್ದರೂ ಅದನ್ನು ನೋಡುವುದೇ ಒಂದು ಅವರ್ಣನೀಯ ಮಜಾ.. ಎಂಬುದನ್ನು ಕೇಳಿಯೇ ತಾನು ಹೇಗಾದರೂ ಮಾಡಿ ಆ ಕುದುರೆಯ ಓಟವನ್ನು ನೊಡಲೇಬೇಕೆಂದು ಬಯಸಲಾರಂಭಿಸಿದ. ಡೇವಿಡ್, 'ನಿನಗೆ ಬುದ್ಧಿಯಿಲ್ಲ.. ಹಾಸಿಗೆ ಇದ್ದಷ್ಟು ಕಾಲು ಚಾಚಿಕೊಂಡಿರಬೇಕು' ಎಂದು ಬೈದರೂ, 'ಈ ಜೀವನ ಒಂದು ಕ್ಷಣಿಕನಮ್ಮ.. ಒಂದು ನೀರಿನ ಗುಳ್ಳೆಗಿರುವಷ್ಟೇ ಟೈಮಿರುವುದು.. ಅದು ಒಡೆದುಹೋಗುವುದರೊಳಗೆ ಎಲ್ಲವನ್ನೂ ಎಲ್ಲದನ್ನೂ ಅನುಭವಿಸಿಬಿಡಬೇಕು.. ಜೀವನದಲ್ಲಿ ಏನಿದೆ ಹೇಳು ಗೆಳೆಯಾ..' ಎಂದು ವೇದಾಂತ ಹೇಳಿದ.

ಗಾಡಿ ಹತ್ತುತ್ತ, 'ನಿನ್ನ ಗಾಡಿಯ ಹಾರ್ಸ್ ಪವರ್ ಎಷ್ಟು?' ಎಂದು ಕೇಳಿದ ಚಂದ್ರಹಾಸ. ಒಂದು ಕ್ಷಣ ತಬ್ಬಿಬ್ಬಾದ ಡೇವಿಡ್ 'ಗೊತ್ತಿಲ್ಲ..' ಎಂದ. 'ನೀರು ಎತ್ತುವ ಪಂಪ್‌ಸೆಟ್‌ನ ಕೆಪಾಸಿಟಿಯನ್ನು ಅದು ಎಷ್ಟು ಹಾರ್ಸ್ ಪವರ್ ಎಂಬುದರ ಮೇಲೆ ನಿರ್ಧರಿಸುವುದು ನಿನಗೆ ಗೊತ್ತಲ್ಲವಾ? ಅದೇ ರೀತಿ ಮೆಕ್ಯಾನಿಕಲ್, ಎಲೆಕ್ಟ್ರಕಲ್ ಪವರ್‌ನ ಅಳೆಯೋದು ಹಾರ್ಸ್ ಪವರ್‌ನಿಂದ. ಒಂದು ಕುದುರೆಯ ಪವರ್ ಅಂದರೆ ಒಂದು ಎಚ್.ಪಿ. ಅಂತ. ಹಾಗೆಯೇ ಐದು ಎಚ್.ಪಿ., ಹತ್ತು ಎಚ್.ಪಿ. ಅಂತ ಅಳೀತಾರೆ..' ಎಂದು ಹೇಳುವ ಮೂಲಕ ಜೀವನದ ಎಲ್ಲಾದರಲ್ಲೂ ಹಾರ್ಸ್‌ಪವರ್ ಇದೆಯೆಂಬುದನ್ನು ಮನದಟ್ಟು ಮಾಡಲು ಪ್ರಯತ್ನಿಸಿದ ಚಂದ್ರಹಾಸ. ಗಾಡಿ ಮೊದಲನೇ ಗೇರ್ ಹಾಕಿಕೊಂಡು ಮುನ್ನುಗ್ಗುತ್ತಿದ್ದಂತೆಯೇ ಏನನ್ನೋ ನೆನೆಸಿಕೊಂಡವನಂತೆ ಗಾಡಿ ನಿಲ್ಲಿಸಲು ಹೇಳಿದ ಚಂದ್ರಹಾಸ, ಇಳಿದು ಓಡಿಹೋಗಿ ಒಂದು ಪುಸ್ತಕ ಕೊಂಡುತಂದ. ಅದರಲ್ಲಿ ಯಾವ ಯಾವ ದಿನ ಎಲ್ಲೆಲ್ಲಿ ರೇಸ್‌ಗಳಿವೆ ಎಂಬ ವಿವರವಿತ್ತು. ಆಗಲೇ ರೇಸ್‌ಪ್ರಿಯನೊಬ್ಬ ಹೇಳಿದ ಡಾರ್ಜಿಲಿಂಗ್‌ನ ರೇಸ್ ಯಾವ ದಿನ ಇದೆಯೆಂಬುದನ್ನು ಚಲಿಸುತ್ತಿರುವ ಗಾಡಿಯ ಮೇಲೆ ಕುಳಿತೇ ಹುಡುಕಲಾರಂಭಿಸಿದ.

ಬೈಕು ತಗ್ಗುದಿಣ್ಣೆಗಳಲ್ಲಿ ಇಳಿದು ಹತ್ತುವಾಗ ಕಾಲು ಅಗಲಿಸಿ ಸುಮ್ಮನೆ ಕುಂಡೆಯೂರಿ ಕೂರುವ ಬದಲು ಅದರ ವೈಬ್ರೇಷನ್ನಿಗೆ ತಕ್ಕಂತೆ ಮರ್ಮಾಂಗಕ್ಕೆ ಒತ್ತಡ ಬೀಳುವುದನ್ನು ತಪ್ಪಿಸಿಕೊಳ್ಳಲು ಕಾಲಿನಿಂದಲೇ ಜೀನನ್ನು ಒತ್ತುವಂತೆ ಒತ್ತುತ್ತಾ ಒಂದು ಕ್ಷಣ ಕುದುರೆ ಸವಾರಿಯನ್ನೇ ಮಾಡುತ್ತಿರುವಂತೆ ಕನಸುಕಂಡ. ತನ್ನ ಹಳ್ಳಿಗೂ ಹೀಗೆ ಕುದುರೆ ಸವಾರಿ ಮಾಡುತ್ತ ಹೋದರೆ, ಅಗಸೆ ಬಾಗಿಲಲ್ಲಿ ನಿಂತು ಶಿವಪ್ಪನಾಯಕನಂತೆ ಮೀಸೆ ತಿರುವುತ್ತಿದ್ದರೆ ಊರ ಗೌಡನೂ ನಾಚಿಕೊಳ್ಳಬೇಕೆಂದುಕೊಂಡ. ಮಹಾಭಾರತದಲ್ಲಿ ದ್ರೌಪದಿ-ಧರ್ಮರಾಯನ ಏಕಾಂತವನ್ನು ಕಂಡ ಅರ್ಜುನ ಪಶ್ಚಾತ್ತಾಪಕ್ಕಾಗಿ ಕಾಮದ ಸಂಕೇತವಾದ ಕುದುರೆಯನ್ನೇ ಏರಿ ಹೆಚ್ಚುಕಡಿಮೆ ಇಡೀ ಉತ್ತರ ಭಾರತವನ್ನು ಸಂಚರಿಸಿ ಎರಡು-ಮೂರು ಮದುವೆಯಾದದ್ದು ನೆನಪಾಯಿತು. ತಾನೇನಾದರೂ ಬೈಕನ್ನು ಕೊಳ್ಳಬೇಕಾದಂತಹ ಸಂದರ್ಭ ಬಂದರೆ ಅದರ ಬದಲು ಅದೇ ಬೆಲೆಗೆ ಕುದುರೆಯನ್ನೇ ಕೊಳ್ಳಬೇಕೆಂದುಕೊಂಡ.

ಬ್ರಿಟಿಷರ ಕಾಲದಲ್ಲಿದ್ದಂತೆ ಈ ಬೆಂಗಳೂರಲ್ಲಿ ಕುದುರೆ ಸವಾರಿ ಮಾಡುತ್ತಾ ಸಿಗ್ನಲ್‌ನ್ನು ದಾಟುವುದು ಹೇಗೆಂದು ಲೆಕ್ಕಾಚಾರ ಹಾಕಿ ಎಲ್ಲೆಲ್ಲಿ ಹೇಗೆ ಹೇಗೆ ಓಡಿಸಬೇಕೆಂದು ಕನಸು ಕಂಡವನು, ಬೇರೆಯವರಿಗೆ ಅದರ ಬಗ್ಗೆಯೇ ತರಬೇತಿ ಕೊಡಲು ತರಗತಿ ತೆರೆದರೆ ಒಳ್ಳೆ ದುಡ್ಡು ಮಾಡಬಹುದಲ್ಲವಾ ಎಂದುಕೊಂಡ.. ಬೆಂಗಳೂರಲ್ಲಿ ಏನು ಬೇಕಾದರೂ ಮಾಡಿ ಜೀವಿಸಬಹುದು.. ಎಷ್ಟೆಲ್ಲಾ ಸಾಧ್ಯತೆಗಳಿರುವ ಊರಲ್ಲವೇ ಬೆಂಗಳೂರು ಎಂದುಕೊಂಡ.. ಡೇವಿಡ್ ಮಾತ್ರ ಹೆಲ್ಮೆಟ್ ಹಾಕಿಕೊಂಡು, ಕಣ್ಣು ಕಟ್ಟಿದ ಜಟಕ ಗಾಡಿಯ ಕುದುರೆಯಂತೆ, ಅಕ್ಕಪಕ್ಕದ ಏನೂ ಕಾಣಿಸದೆನ್ನುವಂತೆ ಗಾಡಿ ಓಡಿಸುತ್ತಲೇ ಇದ್ದ.. ಚಂದ್ರಹಾಸ, ನಾಳೆ ಒಂದು ಕಾಲಕ್ಕೆ ಈ ಬೈಕುಗಳೆಲ್ಲ ನೆಲಕಚ್ಚಿ ಕುದುರೆಗಳೇ ರಸ್ತೆಗಿಳಿದರೂ ಸರ್ಕಾರ ಹೆಲ್ಮೆಟ್ ಕಡ್ಡಾಯಗೊಳಿಸುವುದನ್ನು ಮಾತ್ರ ನಿಲ್ಲಿಸುವುದಿಲ್ಲವೆನಿಸಿ ಒಳಗೊಳಗೇ ನಕ್ಕ.

ಸಂಜೆ ರೂಮಿಗೆ ಬಂದ ಚಂದ್ರಹಾಸ ಸುಮ್ಮನೇ ಕೂರದಾದ.. ನಿದ್ದೆ ಮಾಡದಾದ.. ತಾನು ಹಳ್ಳಿಯಿಂದ ಬಂದಿದ್ದರೂ ಬೆಂಗಳೂರಿನ ಎಲ್ಲೆಲ್ಲಿ ಏನೇನಿದೆ ಎಂದು ಗೊತ್ತಿತ್ತು. ಆದರೆ ಅಲ್ಲಿಗೆ ಏಕಾಂಗಿಯಾಗಿ ಹೋಗಲು ಗೊತ್ತಾಗುತ್ತಿರಲಿಲ್ಲ ಅಷ್ಟೇ. ಸಂಜೆ ವೇಳೆಗೆ ಎಂ.ಜಿ.ರಸ್ತೆಗೆ, ಬ್ರಿಗೇಡ್ ರಸ್ತೆಗೆ ಹೋಗಬೇಕೆಂದು ಬಯಸಲಾರಂಭಿಸಿದ.. ಅಲ್ಲಿ ಅಡ್ಡಾಡುವ ತೆರೆದೆದೆಯ ಹುಡುಗಿಯರನ್ನು ನೋಡಬೇಕೆಂದ.. ಪಬ್‌ನಲ್ಲಿ ಕುಳಿತು ಬೀರನ್ನು ಹೀರಬೇಕೆಂದ.. ಆದರೆ ಅದಕ್ಕೆಲ್ಲ ತನ್ನಲ್ಲಿ ಹಣವಿಲ್ಲ, ಖರ್ಚು ಮಾಡುವುದಾದರೆ ಮಾತ್ರ ಕರೆದುಕೊಂಡು ಹೋಗುವುದಾಗಿ ಡೇವಿಡ್ ಹೇಳಿ ಅವನ ಬೇಡಿಕೆಯನ್ನು ಒಂದೇ ಮಾತಿನಲ್ಲಿ ನಿರಾಕರಿಸಿಬಿಟ್ಟ.

ಹತ್ತಿರದ ಖಾನಾವಳಿಯಲ್ಲಿ ಧಾರವಾಡ ಕಡೆಯ ರೊಟ್ಟಿ ಊಟ ಮಾಡಿಕೊಂಡು ಬಂದು ಮಲಗಿದವನಿಗೆ ನಿದ್ದೆ ಬರಲೇಯಿಲ್ಲ. ಡಾರ್ಜಿಲಿಂಗಿಗೆ ಹೋಗಿ ಬರೋಣ ಎಂದು ಪೀಡಿಸಲಾರಂಭಿಸಿದ. ತಾನು ಸಣ್ಣದೊಂದು ಕೆಲಸದಲ್ಲಿರುವುದರಿಂದ ಸುಲಭವಾಗಿ ರಜೆ ಸಿಗುವುದಿಲ್ಲ ಬರಲಾಗುವುದಿಲ್ಲ ಎಂದ ಡೇವಿಡ್. ಹಾಗಾದರೆ ತಾನೊಬ್ಬನೇ ಹೋಗಿ ಬರುತ್ತೇನೆ, ತನಗೆ ಒಂದು ಲಕ್ಷ ಸಾಲ ಕೊಡೆಂದ. ಒಂದು ಲಕ್ಷ!? ತನ್ನ ಜೀವಮಾನವಿಡೀ ದುಡಿದರೂ ಅಷ್ಟನ್ನು ಉಳಿಸಲು ಆಗದೆಂದ. ಹಾಗಾದರೆ ಯಾರ ಹತ್ತಿರವಾದರೂ ಸಾಲ ಕೊಡಿಸೆಂದ. ಕಂತಿನ ಮೇಲೆ ತೆಗೆದುಕೊಂಡ ಈ ಬೈಕು ಬಿಟ್ಟರೆ ಅಡ ಇಡಲೂ ತನ್ನ ಬಳಿ ಏನೂ ಇಲ್ಲ ಎಂದುಬಿಟ್ಟ..

ನಿರಾಶನಾದ ಚಂದ್ರಹಾಸ ಜೂಜಿನ ಕುದುರೆಯ ಮೋಜಿಗೆ ಬಿದ್ದು ಚಡಪಡಿಸಲಾರಂಭಿಸಿದ..

ಬೆಳಗ್ಗೆ ಎದ್ದ ಡೇವಿಡ್ ತನ್ನ ಪಕ್ಕ ಚಂದ್ರಹಾಸ ಇಲ್ಲದುದನ್ನು ಗಮನಿಸಿ ಬೆಳಗಿನ ವಾಕಿಂಗ್ ಹೋಗಿರಬಹುದೆಂದುಕೊಂಡ. ಸ್ನಾನ ಮಾಡಿ ಆಫೀಸಿಗೆ ಹೋಗಲು ಬೈಕ್‌ನ ಕೀ ಹುಡುಕಿದ. ಕಾಣದಾದಾಗ ಆತಂಕದಿಂದ ಆಚೆ ನಿಲ್ಲಿಸಿದ್ದ ಬೈಕನ್ನು ಹುಡುಕಾಡಿದ. ಇಲ್ಲೇ ಎಲ್ಲೋ ಹೋಗಿರಬಹುದೆಂದು ನಿರಾಳನಾಗಲು ಪ್ರಯತ್ನಿಸಿದ.. ಇವತ್ತು ಒಂದು ದಿನ ನೋಡಿ ನಾಳೆ ಬೆಳಗ್ಗೆ ಪೊಲೀಸ್ ಕಂಪ್ಲೆಂಟ್ ಕೊಡುವುದೆಂದು ನಿರ್ಧರಿಸಿದ.

    ಬಸ್‌ನಲ್ಲಿ ಆಫೀಸಿಗೆ ಹೋದ ಡೇವಿಡ್ ಸಂಜೆ ಮನೆಗೆ ಬರುವ ವೇಳೆಗೆ ಸರಿಯಾಗಿ ಚಂದ್ರಹಾಸನ ಸವಾರಿಯೂ ರೂಮಿನ ಮುಂದೆ ಬಂದು ನಿಂತಿತು. ಕುದುರೆಯ ಜೀನನ್ನು ಜೀಕುತ್ತಾ ಬಂದ ಚಂದ್ರಹಾಸ ತನ್ನನ್ನು ತಾನು ಹಳೇ ಕಾಲದ ರಾಜಕುಮಾರನೆಂದುಕೊಂಡುಬಿಟ್ಟಿದ್ದ. ಮೀಸೆ ಮೇಲೆ ಕೈಯ್ಯಾಡಿಸುತ್ತ, ತನ್ನ ಸರಿಸಮಾನ ಯಾರೂ ಓಡಲು ಸಾಧ್ಯವಿಲ್ಲವೆಂಬಂತೆ ಬೀಗಿದ. ಜೀವವಿರದ ನಿನ್ನ ಬೈಕಿಗಿಂತ ಇದು ಶ್ರೇಷ್ಠ ಎಂಬಂತೆ, ನಿನ್ನ ಬೈಕಿಗೆ ಹಾಕುವ ಪೆಟ್ರೋಲಿಗಿಂತ ಇದಕ್ಕೆ ಹಾಕುವ ಹುಲ್ಲು ಹಿಂಡಿಯ ಬೆಲೆಯೇ ಕಡಿಮೆ ಎಂಬಂತೆ ಹುಬ್ಬು ಹಾರಿಸಿ 'ಹೆಂಗೆ?' ಎಂದಂದು ಹೆಗಲು ಕುಣಿಸಿದ. ಬಡಕಲು ದೇಹದ ಆ ಕುದುರೆಯನ್ನು ಗುಟ್ಟಹಳ್ಳಿ ಸರ್ಕಲ್ಲಿನ ಜಟಕಗಾಡಿಯವನ ಬಳಿ ಬೈಕಿಗೆ ಸಾಟಿ ಮಾಡಿಕೊಂಡು ಬಂದಿರುವುದಾಗಿಯೂ, ಒಂದೆರಡು ತಿಂಗಳಲ್ಲಿ ಇದಕ್ಕೆ ಚೆನ್ನಾಗಿ ಮೇವು ಹಾಕಿ ಕೊಬ್ಬಿಸಿ, ರೇಸಿಗೆ ಬಿಡುವುದಾಗಿಯೂ ಹಾಗೂ ಕೆಲವೇ ದಿನಗಳಲ್ಲಿ ಬೈಕನ್ನು ಬಿಡಿಸಿಕೊಡುವುದಾಗಿಯೂ, ಬೇಡವೆಂದರೆ ವರುಷದೊಳಗೆ ಬೈಕಿಗೆ ಬದಲಾಗಿ ಕಾರನ್ನೇ ಉಡುಗೊರೆಯಾಗಿ ಕೊಡಿಸುವುದಾಗಿ ಒಳ್ಳೆ ಪ್ರೊಫೆಷನಲ್ ರಾಜಕಾರಣಿಯಂತೆ ಕೇಳದೆಯೇ ಆಶ್ವಾಸನೆ ಕೊಡಲಾರಂಭಿಸಿದ.

    'ನೀನು ಯಾಕೆ ಸಿಟ್ಟಾಗಿದ್ದೀಯಾ ಅಂತ ಗೊತ್ತು ಮಾರಾಯ... ನಾನು ಜೂಜಾಟಕ್ಕೆ ಹೋಗಿ ಹಣ ಕಳಕೊಂಡು ಬರ್‍ತೀನಿ ಅಂತ ಅಲ್ವಾ?... ನಾನು ಬೇರೆಯವರ ಥರಾ ಅಲ್ಲ... ನಾನೇ ಬೇರೆ, ನನ್ನ ಸ್ಟೈಲೇ ಬೇರೆ... ' ಅಂತಂದು ಒಂದು ಕ್ಷಣ ಸುಮ್ಮನಾದವನು, ಹೇಳದೇ ಕೇಳದೇ ಕುದುರೆಯನ್ನು ಓಡಿಸಿಕೊಂಡು ಹೊರಟೇಬಿಟ್ಟ. ಕಂಪ್ಲೆಂಟ್ ಕೊಡಬೇಕೆಂದುಕೊಂಡಿದ್ದ ಡೇವಿಡ್‌ನಿಗೆ, ಅವನು ಬಂದುಹೋಗದೇ ಇದ್ದಿದ್ದರೇ ಚೆನ್ನಾಗಿತ್ತು ಅನ್ನಿಸಿ, ಮುಂದೆ ಏನು ಮಾಡಬೇಕೆಂದು ತೋಚದೇ ಪರಿತಪಿಸಿದ.

ಕುದುರೆ ಓಡಿಸಿಕೊಂಡು ಊರಿಗೆ ಹೋದ ಚಂದ್ರಹಾಸ ಅದಕ್ಕೆ ರಾಜಮರ್ಯಾದೆ ನೀಡುವಂತೆ ಕೆರೆಯಲ್ಲಿ ಶಾಂಪೂ ಹಾಕಿ ಮಿರಮಿರನೇ ಮಿಂಚುವಂತೆ ಸ್ನಾನ ಮಾಡಿಸಿದ. ಬ್ಯೂಟಿ ಪಾರ್ಲರಿನಲ್ಲಿ ಹುಡುಗಿಯರು ಜುಟ್ಟು ಕತ್ತರಿಸಿಕೊಳ್ಳುವಂತೆ ಅದರ ಬಾಲದ ಕೂದಲನ್ನು ಕತ್ತರಿಸಿ ಟ್ರಿಮ್ ಮಾಡಿದ. ಕೆಂಪುದೇಹದ ಅದರ ಕುತ್ತಿಗೆಯ ಮೇಲಿನ ಕಪ್ಪುಕೂದಲನ್ನು ಸಿನಿಮಾ ಹೀರೋನ ಹಿಪ್ಪಿ ಕಟಿಂಗ್‌ನಂತೆ ಗಾಳಿಗೆ ಆಕರ್ಷಕವಾಗಿ ಹಾರುವಂತೆ ರೂಪಿಸಿದ. ಅಸ್ಥಿಪಂಜರವಾಗಿದ್ದ ಅದರ ಮೈತುಂಬಾ ಬಿಗಿದ ಮಾಂಸಖಂಡಗಳು ಸ್ಫರಿಸುವಂತೆ ಬರೀ ಹಸೀಹುಲ್ಲು, ಶೇಂಗಾಹಿಂಡಿಯನ್ನು ಹಾಕಿ ತಿನ್ನಿಸಿ ಕೊಬ್ಬಿಸಿದ. ತಿಂಗಳೊಳಗೆ ಬಡಕಲು ಕುದುರೆಯನ್ನೂ ರಾಜಠೀವಿಯ ಕುದುರೆಯನ್ನಾಗಿ ಪರಿವರ್ತಿಸಿದ.

ಎಂಟು ಹತ್ತು ಸಾವಿರ ಬಾಳುವ ಕುದುರೆಯನ್ನು ರೇಸ್‌ಕೋರ್ಸ್ ಬಳಿಗೆ ಹೊಡೆದುಕೊಂಡು ಹೋದ. ಅದನ್ನು ಅಕಸ್ಮಾತ್ತ್ತಾಗಿ ಕಂಡ ಸಾಹುಕಾರನೊಬ್ಬ ಹತ್ತು ಲಕ್ಷ ಕೊಡುತ್ತೇನೆ ಕೊಡು ಎಂದರೂ ಕೊಡುವುದಿಲ್ಲವೆಂದುಬಿಟ್ಟ!

ಜಾಕಿಯೊಬ್ಬನನ್ನು ಪರಿಚಯ ಮಾಡಿಕೊಂಡ. ಆ ಟ್ರಾಕ್‌ನಲ್ಲಿ ಪ್ರಾಕ್ಟೀಸು ಮಾಡಲು ಅವಕಾಶ ಕೊಡುವುದಿಲ್ಲವೆಂದು ತಿಳಿದು, ಊರಾಚೆಯ ಬಯಲಿಗೆ ಡಬಲ್ ರೈಡಿಂಗ್‌ನಲ್ಲಿ ಅವನನ್ನು ಕರೆದುಕೊಂಡು ಹೋಗಿ ಕುದುರೆ ಓಟಕ್ಕೆ ಸಂಬಂಧಿಸಿದ ಪಟ್ಟುಗಳನ್ನೆಲ್ಲ ಕಲಿತುಕೊಂಡ. ತಮ್ಮ ಹಳ್ಳಿಯಲ್ಲಿ ದೀಪಾವಳಿಗೆ ಕುದುರೆ ಓಡಿಸುವ ಹಾಗೂ ಜಟಕಾಗಾಡಿ ಓಡಿಸುವ ಸ್ಪರ್ಧೆ ಇರುವುದರಿಂದ ಕಲಿಯುತ್ತಿರುವುದಾಗಿ ಅವನಿಗೆ ಸಮಯಕ್ಕೊಂದು ಸುಳ್ಳು ಹೇಳಿದ.

ರಾಜಕಾರಿಣಿಯೊಬ್ಬರನ್ನು ಹಿಡಿದು ಕುದುರೆ ಮುಖ್ಯವಲ್ಲ, ಅದನ್ನು ಓಡಿಸುವ ಜಾಕಿ ಮುಖ್ಯ ಎಂದು ಅವರನ್ನು ಪ್ರಚೋದಿಸಿದ. ಕುದುರೆಯೂ ನನ್ನದು, ಜಾಕಿಯೂ ನಾನೇ, ರೇಸಿನಲ್ಲಿ ಅವಕಾಶ ಕೊಡಿಸುವುದು ಮಾತ್ರ ನಿಮ್ಮದು ಎಂಬ ಷರತ್ತಿನ ಮೇಲೆ ಬಂದ ಲಾಭದಲ್ಲಿ ೫೦:೫೦ ಸೂತ್ರದಂತೆ ಪಾರ್ಟ್‌ನರ್ ಮಾಡಿಕೊಂಡು ಅವರ ಶಿಫಾರಸ್ಸಿನಿಂದ ರೇಸಿನ ಒಳಸೇರಲು ಒಂದು ದಾರಿ ಮಾಡಿಕೊಂಡ. ಆ ಕೆಂಪುಕುದುರೆಗೆ ಒಂದು ಆಕರ್ಷಕ ಹೆಸರು ಬೇಕೆಂದು ಅನ್ನಿಸಿ ಮೂಲ ಬಂಡವಾಳ ಹೂಡಿದ ಡೇವಿಡ್‌ನ ನೆನಪಿನಲ್ಲಿ ನೆಪೋಲಿಯನ್ ಎಂದು ಹೆಸರಿಟ್ಟ.

ಲಿಸ್ಟ್‌ನಲ್ಲಿ ಹೆಸರೇ ಇಲ್ಲದ ಅದು ಸೋತುಹೋಯಿತು. ಆದರೆ ಸೋತದ್ದು ಅದಲ್ಲ, ತಾನು ಎಂಬ ಛಲ ಮೂಡಿಸಿಕೊಂಡು ಮತ್ತೆ ಮತ್ತೆ ಅಭ್ಯಾಸ ನಡೆಸಿದ. ಎಷ್ಟೋ ದಿನಗಳ ಮೇಲೆ ಮತ್ತೊಂದು ಅವಕಾಶ ಪಡೆದುಕೊಂಡ. ಈ ಬಾರಿ ಅನಿರೀಕ್ಷಿತ ಫಲಿತಾಂಶ ಬಂದು ಜನ ಕೇಕೆ ಹೊಡೆದರು. ಯಾರೂ ಬಿಡ್ ಮಾಡದ ನೆಪೋಲಿಯನ್ ಸಾಕಷ್ಟು ಲಾಭ ಗಳಿಸಿತು. ಲಿಸ್ಟ್‌ನಲ್ಲೂ ಶಾಶ್ವತ ಸ್ಥಾನ ಗಳಿಸಿಕೊಂಡಿತು.

ಮುಂದಿನ ಸಲ ಸಾವಿರಾರು ಜನ ನೆಪೋಲಿಯನ್‌ನ ಹೆಸರಿನಲ್ಲೂ ಲಕ್ಷಾಂತರ ಬಿಡ್ ಕಟ್ಟಿದರು. ನೆಪೋಲಿಯನ್ ಮತ್ತೆ ಮತ್ತೆ ಗೆದ್ದುಬಿಟ್ಟಿತು. ಕುದುರೆಯ ಜೊತೆಗೆ ಜಾಕಿ ಚಂದ್ರಹಾಸನೂ ಜನಪ್ರಿಯತೆ ಗಳಿಸಿಬಿಟ್ಟ. ಕೂಡಲೇ ಪಾರ್ಟ್‌ನರ್‌ಶಿಪ್ ತೊರೆದುಕೊಂಡ ಚಂದ್ರಹಾಸ, ತನ್ನ ಕಂಪೆನಿಗೆ ನೆಪೋಲಿಯನ್‌ನ ಬಣ್ಣದ ನೆಪದಲ್ಲಿ 'ರೆಡ್ ಹಾರ್ಸ್' ಎಂದು ಹೆಸರಿಟ್ಟುಕೊಂಡು, ದಮ್ಮು ಕಟ್ಟಿಕೊಂಡು ಬಾಲ ನಿಗರಿಸಿ ಓಡುವ ಕೆಂಪು ಕುದುರೆಯ ಲಾಂಛನ ಮಾಡಿಕೊಂಡು, ಬಂದ ಲಾಭದಲ್ಲಿ ಇನ್ನೊಂದು, ಮತ್ತೊಂದು ಎನ್ನುವಂತೆ ಕುದುರೆಗಳನ್ನು ಕೊಂಡು ರೇಸಿಗೆ ಬಿಟ್ಟ. ಜಾಕಿಯರನ್ನು ನೇಮಿಸಿಕೊಂಡು ಅದನ್ನೇ ದಂಧೆಯಂತೆ ನಡೆಸಲಾರಂಭಿಸಿದ..

ಈ ನಾಲ್ಕೈದು ವರ್ಷಗಳಲ್ಲಿ, ಮಲಗುವುದನ್ನು ಕಲಿತಿಲ್ಲದ ಆ ಕುದುರೆಯಂತೆಯೇ ಅಡ್ಡಾಡುತ್ತ, ಹತ್ತಾರು ದೇಶಗಳಿಗೆ ರೇಸುಗಳಿಗೆಂದು ಹೋಗಿಬಂದ. ಅವುಗಳನ್ನೆಲ್ಲ ನೋಡಿದ ಮೇಲೆ, ಅವುಗಳಲ್ಲೆಲ್ಲ್ಲ ಭಾಗವಹಿಸಿದ ಮೇಲೆ, ಡಾರ್ಜಿಲಿಂಗ್ ರೇಸು ನೋಡಬೇಕೆಂಬ ಅವತ್ತಿನ ಕನಸು ಇವತ್ತು ಬಾಲಿಶವಾಗಿ ಕಾಣಲಾರಂಭಿಸಿತು.
ಡಾರ್ಜಿಲಿಂಗ್ ನೆನಪಾಗುತ್ತಿದ್ದಂತೆಯೇ ಯಾಕೋ ಡೇವಿಡ್ ನೆನಪಾದ.
ತನ್ನ ಕಾರನ್ನು ಏರಿ, ಡೇವಿಡ್ ಇದ್ದ ಕೊಂಪೆಯತ್ತ ಹೋಗುವಂತೆ ಡ್ರೈವರ್‌ಗೆ ಹೇಳಿದ. ಒಬ್ಬ ಅಪರೂಪದ ವ್ಯಕ್ತಿಯನ್ನು ಪರಿಚಯ ಮಾಡಿಕೊಡುತ್ತೇನೆ, ಬಾ ಎಂದು ಹೆಂಡತಿಯನ್ನೂ ಜತೆಗೆ ಕರೆದುಕೊಂಡ. ಯಾಕೋ ತನ್ನ ರೋಲ್ಸ್‌ರಾಯ್ಸ್ ಕಾರಂತಹ ಕೆಂಪು ಕಾರೂ ಅವತ್ತು ಕುದುರೆಯಲ್ಲಿ ಡೇವಿಡ್‌ನ ರೂಮಿಗೆ ಹೋದಾಗ ಕೊಟ್ಟಂತಹ ಖುಷಿಯನ್ನು ಕೊಡಲಿಲ್ಲ.
ಚಂದ್ರಹಾಸ ತನ್ನ ಎಂದಿನ ಶೈಲಿಯಲ್ಲಿ ಏಕವಚನದಲ್ಲಿ ಗೆಳೆಯನನ್ನು ಕರೆದರೂ ಡೇವಿಡ್ ಗುರುತಿಸದಾದ. ಯಾವುದೋ ಶ್ರೀಮಂತ ಮಾರವಾಡಿಯಂತಹ ಬಿಳಿಯ ಶೇರ್ವಾನಿ..., ಮಾಜಿ ಚಿತ್ರನಟಿಯಂತೆ ಮೈಬೆಳೆಸಿಕೊಂಡ ಗುಜರಾತಿ ಹೆಂಡತಿ..., ದೊಡ್ಡ ಕಾರಿನ ಡೋರಿನ ಪಕ್ಕ ಏರ್‌ಇಂಡಿಯಾದ ಲೋಗೋ ನಮ್ರಸೇವಕನ ಥರಾ ಒಡೆಯನ ಆಜ್ಞೆಗಾಗಿ ಬೆನ್ನುಬಾಗಿಸಿ ಕಾದು ನಿಂತಿರುವ ಡ್ರೈವರ್... 
'ಏ.. ನಾನೋ.., ಚಂದ್ರಹಾಸ..' ಎಂದಾಗ ಡೇವಿಡ್‌ಗೆ ತನ್ನ ಕಣ್ಣು ಕಿವಿಗಳನ್ನೇ ನಂಬಲಾಗಲಿಲ್ಲ. ಅವತ್ತು ಕುದುರೆಯ ಬಾಲಕ್ಕೆ ಗಂಟುಬಿದ್ದು ಬೈಕನ್ನ ಕದ್ದುಕೊಂಡು ಹೋದ ಗೆಳೆಯ ಇವನೇನಾ ಅನ್ನಿಸಿಬಿಟ್ಟಿತು. ಅಪಾರ ಆಶ್ಚರ್ಯ, ಅಭಿಮಾನದಿಂದ ಒಳಗೆ ಕರೆದುಕೊಂಡು ಹೋದ. ಅಲ್ಲಿ ಒಂದು ಹಳೇ ನೈಟಿ ಹೊತ್ತ ಹೆಂಡತಿ, ಗೊಣ್ಣೆ ಸುರಿಸುವ ಅಸ್ಥಿಪಂಜರದಂತಹ ಎರಡು ಮಕ್ಕಳು... ಚಂದ್ರಹಾಸನ ಹೆಂಡತಿ ತನ್ನ ಬಾತ್‌ರೂಮಿನಷ್ಟಗಲದ ಆ ಮನೆಯ ಕಮಟು ವಾಸನೆಗೆ ಮೂಗು ಮುರಿದಳು. ಮನುಷ್ಯರು ಇಂತಹ ಮನೆಗಳಲ್ಲೂ ವಾಸಿಸುತ್ತಾರೆಯೇ ಎಂದು ಅತ್ಯಾಶ್ಚರ್ಯಗೊಂಡಳು. ಯಾವುದೋ ದೊಡ್ಡ ವ್ಯಕ್ತಿಯನ್ನು ಪರಿಚಯ ಮಾಡಿಕೊಡುತ್ತೇನೆಂದು ಹೇಳಿ ಇಲ್ಲಿಗೆ ಕರೆದುಕೊಂಡು ಬಂದ ಗಂಡನ ವರ್ತನೆ ಬಗ್ಗೆ ಅಸಹ್ಯವೆನಿಸಿತು. ಆತ ಡೇವಿಡ್‌ನೊಂದಿಗೆ ಮೈಮರೆತು ಮಾತಾಡುತ್ತಿದ್ದರೆ ಬೋರು ಹೊಡೆದ ಆಕೆ ಹೋಗಿ ಕಾರಲ್ಲಿ ಡಿ.ವಿ.ಡಿ. ನೋಡಿಕೊಂಡು ಕುಂತಳು.
ಈವರೆಗೂ ಇನ್ನೊಂದು ಬೈಕ್ ಕೊಳ್ಳಲಾಗದೇ ಬಸ್ಸಿನಲ್ಲಿ ಓಡಾಡುತ್ತಿರುವ ಡೇವಿಡ್‌ನ ಅವಸ್ಥೆಗೆ ಕ್ಷಮೆ ಕೇಳಿದ ಚಂದ್ರಹಾಸ. ತನ್ನ ಬಳಿಯಿರುವ ಇನ್ನೊಂದು ಕಾರು ಹಾಗೂ ಡ್ರೈವರ್‌ನನ್ನು ಕಳಿಸಿಕೊಡುವುದಾಗಿ ಎಷ್ಟು ಹೇಳಿದರೂ ಆತ ಒಪ್ಪಲೇಯಿಲ್ಲ. ತಾನು, ತನ್ನ ಮನೆ, ತನ್ನ ಕುಟುಂಬಕ್ಕೆ ಅದೆಲ್ಲ ಮುರುಕಲು ದೇವಸ್ಥಾನಕ್ಕೆ ಚಿನ್ನದ ಲೇಪನ ಮಾಡಿದಂತಾಗುತ್ತದೆಯೆಂದು ಬೇಡವೆಂದ. ಹಳೇ ಕಾರೆಂದು ಬೇಡವೆನ್ನುತ್ತಿದ್ದಾನೆಂದುಕೊಂಡು ಹೊಸ ಕಾರನ್ನೇ ಕೊಡಿಸುತ್ತೇನೆ, ಬಾ ಎಂದು ಬಲವಂತ ಮಾಡಿ ಎಳಕೊಂಡು ಹೋದ. ಆದರೆ ಡೇವಿಡ್ ತನ್ನ ಹಳೇ ಸುಝುಕಿಯಂತದೇ ಹೊಸ ಬೈಕನ್ನು ಮಾತ್ರ ಕೊಡಿಸಿಕೊಂಡ.
?
ದಿನ ಕಳೆದಂತೆ ಚಂದ್ರಹಾಸನ ಕುದುರೆಗಳ ಸಂಖ್ಯೆ ಹದಿನೈದು ಇಪ್ಪತ್ತಕ್ಕೆ ಏರಿತು. ದೊಡ್ಡ ವ್ಯಾಪಾರಿ ಬೇರೆ ಬೇರೆ ಊರುಗಳಲ್ಲಿ ತನ್ನ ಶಾಖೆಗಳನ್ನು ತೆರೆಯುವಂತೆ ಅನೇಕ ಕಡೆ ತನ್ನ ಪಡೆಯನ್ನು ನೇಮಿಸಿಕೊಂಡ. ಒಂದೇ ಹೆಸರಿನಲ್ಲಿದ್ದರೆ ಆದಾಯ ತೆರಿಗೆ, ಅದೂ ಇದೂ ಸಮಸ್ಯೆ ಅಂತ ಹೆಂಡತಿ, ಮಕ್ಕಳ ಹೆಸರಿನಲ್ಲಿ ಮಾತ್ರವಲ್ಲದೇ ಬೇರೆ ಬೇರೆ ಆತ್ಮೀಯರ ಹೆಸರಿನಲ್ಲಿ ಕುದುರೆಗಳ ಮಾಲೀಕತ್ವ ತೋರಿಸಿಕೊಂಡ. 
ಒಂದು ಸಲ ಬೆಂಗಳೂರಿನಲ್ಲಿ ಏರ್ಪಡಿಸಿದ್ದ ರೇಸಿನಲ್ಲಿ ಕಾಕತಾಳೀಯವೆಂಬಂತೆ ಓಡಿದ ಎಂಟೂ ಕುದುರೆಗಳೂ ಇವನವೇ ಆಗಿದ್ದವು. ಇದುವರೆಗೂ ಈತನ ಉನ್ನತಿಯನ್ನು ಅಸಹನೆಯಿಂದಲೇ ಸಹಿಸಿಕೊಂಡಿದ್ದ, ಇತರೆ ಮಾಲೀಕರೆಲ್ಲ ದೊಡ್ಡ ಸ್ಕ್ಯಾಂಡಲ್‌ನ್ನು ಕಂಡುಹಿಡಿದವರಂತೆ ಒಗ್ಗಟ್ಟಾದರು. ಬೇನಾಮಿ ಹೆಸರಿನಲ್ಲಿ ಕುದುರೆಗಳನ್ನು ಹೊಂದಿರುವ ಚಂದ್ರಹಾಸ, ತನ್ನವೇ ಕುದುರೆಗಳನ್ನು ಓಡಿಸಿ, ಕ್ರೀಡಾ ಮನೋಧರ್ಮಕ್ಕೆ ಅಪಚಾರ ಎಸಗುತ್ತಿರುವುದಾಗಿಯೂ, ಅದೇ ವೇಳೆ ಸರ್ಕಾರಕ್ಕೂ ಸಾರ್ವಜನಿಕರಿಗೂ ಏಕಕಾಲಕ್ಕೆ ಮೋಸ ಮಾಡುತ್ತಾ ಎಲ್ಲಾ ಲಾಭವನ್ನೂ ತಾನೊಬ್ಬನೇ ಗಳಿಸುತ್ತಿರುವುದಾಗಿಯೂ ಕ್ಲಬ್ ಮುಂದೆ ದೂರನ್ನು ನೀಡಿದರು. ಚಂದ್ರಹಾಸ ಇದ್ದಾಗ ಅತ್ಯಂತ ಆತ್ಮೀಯರಂತೆ ಫೋಸು ಕೊಡುತ್ತಿದ್ದ ಅವರೆಲ್ಲ, ಅವನಿಲ್ಲದ ಮೀಟಿಂಗ್‌ನಲ್ಲಿ ತಮ್ಮದು ಶತಮಾನಗಳ ಕಾಲದ ವೈರತ್ವವೇನೋ ಎಂಬಂತೆ ಬ್ಲಾಕ್‌ಲೀಸ್ಟ್ ಮಾಡಲು ಕ್ರಮ ತೆಗೆದುಕೊಳ್ಳಲೇಬೇಕೆಂದು ಪಟ್ಟುಹಿಡಿದರು.
ಹಿನ್ನೆಲೆಯಲ್ಲಿ ತಮ್ಮ ವಿರುದ್ಧ ಪತ್ರಿಕೆಯಲ್ಲಿ ಅಪಪ್ರಚಾರ ಮಾಡಲು ಕಾರಣವಾದ ಕಾಣದ ಕೈ ಚಂದ್ರಹಾಸನದೇ ಎಂದು ಕ್ರೀಡಾಮಂತ್ರಿಗಳಿಗೆ ಮನವರಿಕೆ ಮಾಡಿಕೊಟ್ಟರು. ತಮ್ಮ ವಿರುದ್ಧವೇ ಕತ್ತಿ ಮಸೆಯುತ್ತ, ತಮ್ಮನ್ನೇ ನಿಯಂತ್ರಣದಲ್ಲಿ ಇರಿಸಿಕೊಳ್ಳಲು ಮಸಲತ್ತು ಮಾಡುತ್ತಿರುವ ಅವನನ್ನು ಸುಮ್ಮನೇ ಬಿಡಬಾರದು ಎಂದು ಪ್ರಚೋದಿಸಿದರು. ಎಂದೂ ಕ್ರೀಡೆಯನ್ನೇ ಆಡಿರದ ಕ್ರೀಡಾಮಂತ್ರಿಯಾದರೋ, ತನ್ನೆಲ್ಲ ವೈಫಲ್ಯಗಳಿಗೆ ಚಂದ್ರಹಾಸನೇ ಕಾರಣವೆಂಬಂತೆ, ಇದೇ ನೆಪ ಇಟ್ಟುಕೊಂಡು ಅವನನ್ನೂ ಹಾಗೂ ಅವನ ಕುದುರೆಗಳನ್ನೂ ರೇಸಿನಲ್ಲಿ ಭಾಗವಹಿಸದಂತೆ ನಿರ್ಬಂಧ ವಿಧಿಸಿ ಆದೇಶ ಹೊರಡಿಸಿಬಿಟ್ಟ.
ತನ್ನ ವಿರುದ್ಧ ನಡೆಯುತ್ತಿರುವ ಮಸಲತ್ತಿನ ಬಗ್ಗೆ ಏನೇನೂ ಅರಿಯದ ಚಂದ್ರಹಾಸ ಮಂಕಾಗಿ ಕುಂತ. ಅನೇಕ ದೇವಸ್ಥಾನಗಳು, ತೀರ್ಥಕ್ಷೇತ್ರಗಳಿಗೆಲ್ಲ ಹೋಗಿ ಪೂಜೆ ಮಾಡಿಸಿದ. ಕಾಣದ ದೇವರುಗಳಿಗೆಲ್ಲ ಕಾಯಿ ಒಡೆಸಿದ. ಕಂಡ ಕಂಡ ಜೋತಿಷಿಗಳ ಕಾಲಿಗೆಲ್ಲ ಬಿದ್ದು, ಏಕೆ ಹೀಗಾಯಿತೆಂದು ವಿಚಾರಿಸಿದ. ಗುರು ಮತ್ತು ಶುಕ್ರ ಗ್ರಹಗಳನ್ನು ಶನಿ ಮತ್ತು ರಾಹುಗಳು ದಿಟ್ಟಿಸಿ ನೋಡುತ್ತಿರುವುದರಿಂದ ಹೀಗಾಗಿದೆಯೆಂದು ಏನೋ ಒಂದು ಸಮಜಾಯಿಷಿ ನೀಡಿದ ಅವರು ಏನೆಲ್ಲ ಶಾಂತಿ ಮಾಡಿಸಬೇಕೆಂದು ವಿವರಿಸಿ, ಅದಕ್ಕೆಲ್ಲ ಸಾಕಷ್ಟು ಹಣ ಸುಲಿದು ತಾವು ಮಾತ್ರ ಶ್ರೀಮಂತರಾದರು.
ನೀಡಿರುವ ಆದೇಶವನ್ನು ಹಿಂಪಡೆಯುವಂತೆ ಮಂತ್ರಿಗಳಿಗೆ ಯಾರು ಯಾರಿಂದಲೋ ಶಿಫಾರಸ್ಸು ಮಾಡಿಸಿದ. ತಾವು ತಿಳಿದಂತೆ ಪತ್ರಿಕೆಯಲ್ಲಿ ವರದಿಯಾದದ್ದರಲ್ಲಿ ತನ್ನದೇನೂ ಪಾತ್ರವಿಲ್ಲ ಎಂದು ಮನವರಿಕೆ ಮಾಡಿಕೊಡಲು ಪ್ರಯತ್ನಿಸಿದ. ಹೇಳಿದ ದಿನಗಳಿಗೆಲ್ಲ ಆತನ ಮನೆಬಾಗಿಲಿಗೆ ಅಲೆದು, ನಿರ್ಬಂಧ ತೆರವಿಗೆ ಅಂತ ಆತ ಕೇಳಿದಂತೆ ಕೋಟಿಗಳ ಲೆಕ್ಕದಲ್ಲಿ ದುಡ್ಡು ಹೊಂದಿಸಿಕೊಟ್ಟ. ಎಂತಹವರನ್ನೂ ಮರುಳುಮಾಡಿ ಡೀಲ್ ಮಾಡುವ ಕಲೆಯನ್ನು ಕರತಲಾಮಲಕ ಮಾಡಿಕೊಂಡಿದ್ದ ಚಂದ್ರಹಾಸನ ಬಗ್ಗೆ ಮನಸ್ಸು ಬದಲಾಯಿಸಿದ ಮಂತ್ರಿಗಳು ಇನ್ನೇನು ಕಡತಕ್ಕೆ ಸಹಿ ಹಾಕಬೇಕು ಎನ್ನುವ ಕಾಲಕ್ಕೆ ಪಕ್ಷದಲ್ಲಿ ಭಿನ್ನಾಭಿಪ್ರಾಯ ಮರುಕಳಿಸಿ ಸರ್ಕಾರ ಉರುಳಿಬಿತ್ತು!
ಚಂದ್ರಹಾಸ ಕಂಗಾಲಾಗಿ ಹೋದ. ಮತ್ತೆ ಚುನಾವಣೆ ನಡೆದು, ಮುಂದಿನ ಆ ಸರ್ಕಾರ ಅಸ್ಥಿತ್ವಕ್ಕೆ ಬಂದು, ಅದರಲ್ಲಿ ಯಾರು ಕ್ರೀಡಾ ಮಂತ್ರಿಯಾಗುತ್ತಾರೋ ನೋಡಿ, ಅವರಿಗೆ ಹತ್ತಿರವಾದವರನ್ನು ಹಿಡಿದು, ಅವರಿಗೆ ಮತ್ತೆ ಏಳಂಕಿಯ ಹಣ ಹೊಂದಿಸಿಕೊಟ್ಟು... ಅಯ್ಯಯ್ಯಪ್ಪ... ಯಾಕೋ ತನ್ನ ಗ್ರಹಚಾರವೇ ಸರಿಯಿಲ್ಲ ಎಂದು ಅಂತರ್ಮುಖಿಯಾದ.
ಅಲ್ಲಿಯವರೆಗೆ ಬೇರೆ ಏನಾದರೂ ದಂಧೆ ಮಾಡೋಣವೆಂದು ಎಷ್ಟೇ ಯೊಚಿಸಿದರೂ ತನಗೆ ತಿಳಿದ ಬೇರೆ ಯಾವುದೇ ಕೆಲಸವೂ ಹೊಳೆಯಲಿಲ್ಲ. ಅಲ್ಲದೇ ಬೇರೆ ಯಾವುದರಲ್ಲೂ ಈ ಪ್ರಮಾಣದ ಲಾಭ ಬರುವುದಿಲ್ಲವೆಂಬ ಅರಿವೂ ಅವನಿಗಿತ್ತು. ತನಗೆ ಮೋಸ ಮಾಡಿದವರ ಎದುರು ಮೀಸೆ ಮಣ್ಣಾಗಿಸಿಕೊಳ್ಳಬಾರದು ಎಂಬ ಹಠ ಬೇರೆ ಅಡ್ಡಬರುತ್ತಿತ್ತು. ಮತ್ತು ಎಲ್ಲಿ ಕಳೆದುಕೊಂಡಿರುತ್ತೇವೆಯೋ ಅಲ್ಲೇ ಹುಡುಕಬೇಕು ಎಂಬ ಸಿದ್ಧಾಂತ ಹೇಳುವವರ ಉಪದೇಶ ಬೇರೆ. ಈವತ್ತು ಸರಿಹೋಗುತ್ತದೆ, ನಾಳೆ ಸರಿಹೋಗುತ್ತದೆಯೆಂದು ಕುದುರೆಯ ಖರ್ಚೂ, ಜಾಕಿಗಳ ಖರ್ಚೂ ಸರಿದೂಗಿಸುತ್ತಲೇ ಹೋದ. ಕಾದೂ ಕಾದು ತಿಂಗಳು, ವರುಷಗಳು ಉರುಳಿಹೋದವೇ ಹೊರತು ಯಾವುದೇ ಬದಲಾವಣೆಯಿಲ್ಲದೇ ಯಥಾಸ್ಥಿತಿ ಮುಂದುವರೆಯಿತು.
ಕುಂತು ಉಂಡರೆ ಕುಡಿಕೆ ಹೊನ್ನೂ ಸಾಲದು ಎಂಬಂತೆ, ಕುದುರೆ ಮತ್ತು ಜಾಕಿಗಳನ್ನು ಸಾಕುವುದೂ ಮೈಮೇಲೆ ಬರಲಾರಂಭಿಸಿತು. ಒಂದೊಂದೇ ಮಾರಲಾರಂಭಿಸಿದ. ತನ್ನ ಮೂಲದ ನೆಪೋಲಿಯನ್‌ನನ್ನು ಮಾತ್ರ ಲಕ್ಕಿ ಕುದುರೆಯೆಂದು ಇಟ್ಟುಕೊಂಡು ಉಳಿದವನ್ನೆಲ್ಲ ಕ್ರಮೇಣ ಒಂದೊಂದಾಗಿ ಮಾರಲಾರಂಭಿಸಿದ. ಅದಕ್ಕೂ ಕಾಲಕ್ಕೆ ಸರಿಯಾಗಿ ಉತ್ತಮ ಆಹಾರ ಕೊಡಲಾಗದೇ ಕ್ರಮೇಣ ಜಟಕಾಗಾಡಿ ಓಡಿಸುತ್ತಿದ್ದಾಗಿನ ಸ್ಥಿತಿಗೇ ಬಂದಿಳಿಯಿತು. ಸಂಬಳ ಸರಿಯಾಗಿ ಕೊಡುತ್ತಿಲ್ಲವೆಂದು ಅದರ ಜಾಕಿಯೂ ಕೆಲಸ ಬಿಟ್ಟ. ಸರಿಯಾಗಿ ಬಾಡಿಗೆ ಕೊಡುತ್ತಿಲ್ಲವೆಂದು ಲಾಯದವರೂ ಕುದುರೆಯನ್ನು ಹೊರಹಾಕಿದರು. ಟರ್ನ್‌ಓವರ್ ಚೆನ್ನಾಗಿದ್ದಾಗ ಕೋಟಿಗಟ್ಟಲೇ ದುಡ್ಡಿರುತ್ತಿದ್ದ ತಾನೂ, ಇಷ್ಟು ಬೇಗ ಈ ಸ್ಥಿತಿಗೆ ತಲುಪಬಹುದೆಂಬುದನ್ನು ಕನಸಿನಲ್ಲಿಯೂ ನಿರೀಕ್ಷಿಸಿರಲಿಲ್ಲ.
ದುಡ್ಡಿರುತ್ತಿದ್ದಾಗ ಬರದ ಆಲೋಚನೆಗಳು ಕೈ ಖಾಲಿಯಾದಾಗ ಬರಲಾರಂಭಿಸಿದವು. ಒಂದು ಕನ್ಸಲ್ಟೇಷನ್ ಆಫೀಸ್ ಮಾಡಿ, ತನ್ನ ಆಲೋಚನೆಗಳನ್ನ ದುಡ್ಡಿಗೆ ಮಾರಬಹುದಲ್ಲ ಎಂದೂ ಅನ್ನಿಸಿತು. ಆದರೆ ಸ್ವಂತ ಜೀವನದಲ್ಲಿ ಫೇಲಾದ ತನ್ನ ಸಲಹೆಗಳನ್ನು ಸ್ವೀಕರಿಸುವರೇ ಎಂಬ ಅನುಮಾನವೂ ಬಂತು. ಈ ಸ್ಥಿತಿಗೆ ತಂದ, ತನ್ನ ವಿರುದ್ಧ ಮಸಲತ್ತು ಮಾಡಿದವರನ್ನೆಲ್ಲ ಹತಾಶೆಯಿಂದ ಕೊಂದುಬಿಡಬೇಕು ಅನ್ನಿಸಿತು. ಅದರಿಂದೇನು ಪ್ರಯೋಜನ -ತಾನು ಜೈಲು ಸೇರಬೇಕಾಗುತ್ತದೆಯಷ್ಟೇ ಎಂದು ಸುಮ್ಮನಾದ. ಅದೇ ವೇಳೆಗೆ ಜಾಗತಿಕ ಆರ್ಥಿಕ ಕುಸಿತದಿಂದಾಗಿ ಇಡೀ ಉದ್ಯಮವೇ ನಷ್ಟ ಅನುಭವಿಸುವಂತಾದ್ದರಿಂದ ವಿಕೃತ ಖುಷಿ ಅನುಭವಿಸಿದ. ಯಾರಿಗೂ ಮೋಸ ಮಾಡದ ತನಗೆ ಮೋಸ ಮಾಡಿದ ಯಾರನ್ನೂ ದೇವರು ಶಿಕ್ಷಿಸದೇಬಿಟ್ಟಿಲ್ಲ ಎಂದು ಸಮಾಧಾನಗೊಂಡ.
ಉಳಿದಿದ್ದ ಆ ಒಂದು ಕುದುರೆಯನ್ನು ಯಾಕೋ ಸಾಯಿಸಲು ಮನಸ್ಸು ಬಾರದೇ ಜಟಕಾಗಾಡಿಯ ಸಾಬಿಗೇ ಹಿಂದಿರುಗಿಸಿಬಿಡೋಣವೆಂದುಕೊಂಡು ಹುಡುಕುತ್ತ ಗುಟ್ಟಹಳ್ಳಿಗೆ ಬಂದ ಚಂದ್ರಹಾಸ. ಬದಲಾದ ಕಾಲಕ್ಕೆ ತಕ್ಕಂತೆ ಅಲ್ಲಿ ಆಗಲೇ ಯಾವುದೇ ಗಾಡಿಗಳಿಗೂ ಬೇಡಿಕೆಯಿಲ್ಲದೇ ಎಲ್ಲವೂ ತೆರವುಗೊಂಡಿದ್ದವು. ಬೇರೆ ದಾರಿ ಕಾಣದೇ ಸೀದಾ ಮನೆಗೇ ಹೊಡೆದುಕೊಂಡು ಹೋಗಿ ಕಟ್ಟಿಕೊಂಡ. ಅದರ ಲದ್ದಿ ವಾಸನೆಗೆ ಅವನ ಹೆಂಡತಿ ರಚ್ಚೆ ಹಿಡಿದಳು. ಇವನೂ ಆವೇಶದಲ್ಲಿ, ನಿನ್ನನ್ನು ಬೇಕಾದರೆ ಬಿಡುತ್ತೇನೆಯೇ ಹೊರತು ಕುದುರೆಯನ್ನು ಬಿಡುವುದಿಲ್ಲ ಎಂದುಬಿಟ್ಟ. ಮುನಿಸಿಕೊಂಡ ಆಕೆ ಗಂಟುಮೂಟೆ ಕಟ್ಟಿಕೊಂಡು ಹೇಳದೇ ಕೇಳದೇ ತವರುಮನೆಯ ದಾರಿ ಹಿಡಿದಳು.
?
ತಿಂಗಳು ನೋಡಿದ. ವರ್ಷ ನೋಡಿದ.. ತನ್ನ ಪರಿಸ್ಥಿತಿ ಇನ್ನೂ ಅಧೋಗತಿಗಿಳಿಯಲಾರಂಭಿಸಿತು... ಕಾರುಲೋನಿನ ಕಂತು ಕಟ್ಟುವುದಾಗಲಿಲ್ಲ.. ಮನೆಸಾಲವೂ ಉಳಿಯುತ್ತಲೇ ಬಂತು... ಮೂರು ನಾಲ್ಕು ತಿಂಗಳು ಯಾವಾಗ ಲೋನು ಕಟ್ಟಲಾಗಲಿಲ್ಲವೋ ಆಗ ಒಂದು ಎರಡು ನೋಟೀಸು ನೀಡಿದ ಬ್ಯಾಂಕಿನವರು, 'ನಿಮ್ಮ ಬಗ್ಗೆ ನಮಗೆ ಅಪಾರ ಗೌರವ, ಆದರೆ ಏನು ಮಾಡುವುದು.. ಕಾನೂನನ್ನು ಪಾಲಿಸಲೇಬೇಕಲ್ಲ...' ಎಂಬ ಸೋಗಲಾಡಿ ಅಸಹಾಯಕತೆಯನ್ನು ತೋರುತ್ತ, ಕಾರನ್ನು ಮುಟ್ಟುಗೋಲು ಹಾಕಿಕೊಂಡು ಬರಲು ತನ್ನ ರೌಡಿಪಡೆಗೆ ನಿರ್ದೇಶನ ನೀಡಿತು; ಮನೆಯನ್ನು ಹರಾಜು ಹಾಕಲು ಪತ್ರಿಕೆಯಲ್ಲಿ ಜಾಹೀರಾತು ಹಾಕಿತು. ಚಂದ್ರಹಾಸನಿಗೆ ತನ್ನ ಮುಂದೆಲ್ಲ ಶೂನ್ಯ ಕವಿದ ಅನುಭವ...
ಯಾಕೋ ಆತ್ಮಹತ್ಯೆಯನ್ನಾದರೂ ಮಾಡಿಕೊಂಡುಬಿಡಬೇಕು ಅನ್ನಿಸಿಬಿಟ್ಟಿತು. ಇಂತಿಂಥವರಿಗೆಲ್ಲ ಇಷ್ಟಿಷ್ಟು ಹಣಕೊಟ್ಟರೂ ತನ್ನ ಕೆಲಸವಾಗದ ಪ್ರಯುಕ್ತ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ, ಅವರನ್ನೆಲ್ಲ ಜೈಲಿಗೆ ಹಾಕಬೇಕು ಎಂದು ಬರೆದ. ತಾನೇ ಸತ್ತ ಮೇಲೆ ಅವರಿಗೆ ಶಿಕ್ಷೆ ಕೊಟ್ಟರೇನು, ಬಿಟ್ಟರೇನು... ನನ್ನನ್ನು ನಾನೇ ಕೊಂದುಕೊಳ್ಳುವಂತೆ ಮಾಡಿರುವುದೇ ಅವರು ನನಗೆ ಕೊಟ್ಟಿರುವ ದೊಡ್ಡ ಶಿಕ್ಷೆ. ಅದು ಬೇರೆಯವರು ಕೊಡುವ ಶಿಕ್ಷೆಗಿಂತ ದೊಡ್ಡದು. ನಾನು ತಪ್ಪು ಮಾಡಿದ್ದರೆ ಶಿಕ್ಷೆಯಾಗಿದ್ದು ಸರಿಯಾಗಿಯೇ ಇದೆಯಲ್ಲವೇ? ಬಡವನಾಗಿದ್ದ ನಾನು ಏಕದಂ ಶ್ರೀಮಂತನಾಗಲಿಲ್ಲವೇ... ಶ್ರೀಮಂತನಾಗಿದ್ದವನು ಏಕದಂ ಬಡವನಾದರೆ ಏನು ತಪ್ಪು?
ಅಷ್ಟಕ್ಕೂ ಈ ಹಣವನ್ನೇ ಯಾಕೆ ಎಲ್ಲದಕ್ಕೂ ಮಾನದಂಡ ಮಾಡಿಕೊಳ್ಳಬೇಕು. ಹಣವನ್ನು ಯಾರು ಬೇಕಾದರೂ ದುಡಿಯಬಹುದು, ಕಳೆಯಬಹುದು. ಆದರೆ ಹಣದಿಂದಲೇ ಎಲ್ಲ ಸಂಬಂಧಗಳನ್ನು ಅಳೆಯುವುದು ಎಷ್ಟು ಅಸಹ್ಯ ಅಲ್ಲವಾ? ಬೇರೆಯವರಿರಲಿ, ದೇಹ ಹಂಚಿಕೊಂಡ ಹೆಂಡತಿಯೇ ನನ್ನ ನಷ್ಟವನ್ನು -ಹಂಚಿಕೊಳ್ಳುವುದಿರಲಿ- ಸಹಿಸಿಕೊಳ್ಳಲಿಲ್ಲವಲ್ಲ ಅನಿಸಿತು. ಆಕೆಯ ಡೈವರ್ಸ್ ಪೇಪರ್ ಇದ್ದ ಲಾಯರ್ ನೋಟೀಸು ಎದುರು ಟೇಬಲ್ಲಿನ ಮೇಲೆ ಕುಂತು ಕೊಂಕಿಸಿ ನಕ್ಕಂತಾಯಿತು. ಈತನ ವೃತ್ತಿಯಲ್ಲಿ ಆದ ನಷ್ಟವನ್ನೇ ವಿಚ್ಚೇದನಕ್ಕೆ ಕಾರಣ ಎಂದು ಆಕೆ ತಿಳಿಸಿದ್ದಳು.
ಸುಖವನ್ನು ಹಂಚಿಕೊಳ್ಳಲು ಹೆಂಡತಿ ಸಹಿತ ಸಾವಿರಾರು ಜನರಿರುತ್ತಾರೆ. ಆದರೆ ನಷ್ಟವನ್ನು ಹಂಚಿಕೊಳ್ಳಲು? ಆಗ ಕನಿಷ್ಟ ತನ್ನ ದುಃಖಗಳನ್ನಾದರೂ ಹೇಳಿಕೊಳ್ಳಲು ನೆನಪಾದ ಏಕೈಕ ವ್ಯಕ್ತಿ ಡೇವಿಡ್.
ಮೊದಲೆಲ್ಲ, ಯಾರಾದರೂ ಎಲ್ಲಿ ಗುರುತಿಸಿಬಿಡುತ್ತಾರೋ ಎಂಬ ಆತಂಕದಿಂದ ಕಾರಿನ ಎಲ್ಲ ಕಪ್ಪು ಬಣ್ಣದ ಗ್ಲಾಸುಗಳನ್ನು ಏರಿಸಿಕೊಂಡಿರುತ್ತಿದ್ದ ಚಂದ್ರಹಾಸ, ಈಗ ನಡೆಯುತ್ತಲೇ ಡೇವಿಡ್‌ನ ಮನೆ ದಾರಿ ಹಿಡಿದ. ಮಾಸಿದ ಬಟ್ಟೆ, ಕೆದರಿದ ತಲೆ.. ಚಂದ್ರಹಾಸ ಗೆಳೆಯನನ್ನು ಮತ್ತೆ ಗುರುತಿಸದಾದ. ಹಿಂದಿನ ಶೈಲಿಯಲ್ಲೇ 'ಏ.. ನಾನೋ.., ಚಂದ್ರಹಾಸ..' ಎಂದಾಗ ಡೇವಿಡ್‌ಗೆ ಮತ್ತೆ ತನ್ನ ಕಣ್ಣು ಕಿವಿಗಳನ್ನೇ ನಂಬಲಾಗಲಿಲ್ಲ. ಪೊಲೀಸರು ಅಟ್ಟಿಸಿಕೊಂಡು ಬಂದ ಕಳ್ಳನಂತೆ, ಯಾರಾದರೂ ಎಲ್ಲಿ ನೋಡಿಬಿಡುತ್ತಾರೋ ಎಂಬಂತೆ ಸರಸರನೇ ಒಳಗೆಳೆದುಕೊಂಡ.
ಚಂದ್ರಹಾಸ ಗೆಳೆಯನಿಗೆ ತನ್ನ ಪರಿಸ್ಥಿತಿಯನ್ನು ವಿವರಿಸುತ್ತ, ತಾನು ಏರಿದ ಎತ್ತರ ಮತ್ತು ಇಳಿದ ಆಳದ ಕಥೆಯನ್ನು ಹೇಳುತ್ತ, ತಾನು ಎಲ್ಲಿ ಎಡವಿದೆ ಎಂಬುದನ್ನು ತಾನೇ ವಿಮರ್ಶಿಸುತ್ತ ಹೋದ.. ಬೇರೆಯವರಿಗೆ ಹೋಲಿಸಿಕೊಂಡು ತನ್ನ ಕ್ರಮವನ್ನು ಸಮರ್ಥಿಸಿಕೊಳ್ಳಲು ಪ್ರಯತ್ನಿಸುತ್ತಿದ್ದ...
ಡೇವಿಡ್ ಅವನ ಸ್ಥಿತಿಗೆ ಮರುಗಿದ. ಆದರೂ ಅವನಾಳದ ಮನಸ್ಸನ್ನ ಪ್ರಚೋದಿಸಲು ಪ್ರಯತ್ನಿಸಿದ. 'ಅವತ್ತು ಬೆಂಗಳೂರು ನೋಡಲೆಂದು ಇದೇ ರೂಮಿಗೆ ಬಂದಿದ್ದಾಗ ನೀನು ಏನನ್ನೂ ತಂದಿರಲಿಲ್ಲ. ಇವತ್ತೂ ಏನನ್ನೂ ತಂದಿಲ್ಲ. ಮತ್ತೆ ವ್ಯತ್ಯಾಸವೇನಾಯಿತು. ಮಧ್ಯೆ ಒಮ್ಮೆ ನೀನು ಹೆಂಡತಿ ಜೊತೆ ದೊಡ್ಡಕಾರಿನಲ್ಲಿ ಬಂದುಹೋದದ್ದು ಇವತ್ತಿಗೂ ನನಗೆ ಕನಸಿನಂತೆಯೇ ಕಾಣುತ್ತಿದೆ... ಜೀವನವೆಂಬ ಹಾವು-ಏಣಿ ಆಟದಲ್ಲಿ ಕೆಳಗಿಳಿಯಲು ಕಾರಣವಿದೆಯೆಂದಾದರೆ, ಮೇಲಕ್ಕೇರಲೂ ಕಾರಣವಿದ್ದೇ ಇರುತ್ತದೆ...
'ಆ ಕಷ್ಟದ ದಿನಗಳನ್ನು ಮರೆತುಬಿಡು. ಫೀನಿಕ್ಸ್‌ನಂತೆ ಪುಟಿದೆದ್ದು ಬಾ... ಬದುಕಲು ಅದೊಂದೇ ಕ್ಷೇತ್ರವೇ ಆಗಬೇಕೆಂದೇನೂ ಇಲ್ಲವಲ್ಲ. ನೂರೆಂಟು ದಾರಿಗಳಿವೆಯಲ್ಲ... ಆದರೂ ನನ್ನಿಂದ ನಿನಗೇನು ಸಹಾಯ ಆದೀತೋ ಗೊತ್ತಿಲ್ಲ. ಹಾಗೇನಾದರೂ ಆಗುವುದಿದ್ದರೆ ಇದನ್ನು ತೆಗೆದುಕೋ, ಮತ್ತೆ ಮೊದಲಿನಿಂದ ಶುರುಮಾಡು..' ಎಂದು ತನಗೇ ಆಶ್ಚರ್ಯವೆನ್ನುವಂತೆ ಆತ್ಮವಿಶ್ವಾಸದ ಮಾತನಾಡಿ ಆತನೇ ಕೊಡಿಸಿದ್ದ ಬೈಕಿನ ಕೀಯನ್ನು ತೆಗೆದುಕೊಟ್ಟ!
ಚಾಚಬೇಕೆಂದುಕೊಂಡ ಚಂದ್ರಹಾಸನ ಕೈ ಅದ್ಯಾಕೋ ಅವನಿಗರಿವಿಲ್ಲದೇ ನಡುಗಲಾರಂಭಿಸಿತು...                                                                                                                                                                                                                                                                                                                                                                                                                                                                                                                                                                                                      
                            ***

ಆಶಾಢ ನಿಬ್ಬಣ ಸೂತ್ಯಾಡಿ ಬಂತು

- ಶಿಶುನಾಳ ಶರೀಫ್

ಆಶಾಢ ನಿಬ್ಬಣ ಸೂತ್ಯಾಡಿ ಬಂತು
ಮಾಯಾ ಮೋಹದ ಕೂಸು ಹುಟ್ಟೀತು ಗೆಳತಿ              || ಪ ||

ಲೇಸವಾದ ತಾಯಿಯಾಸೆ ಬಿಟ್ಟು
ಈಶಗುರು ಗಂಡಗ ವಾಸವಾಗಮ್ಮಾ                        ||ಅ.ಪ.||

ಮುತ್ತೈದಿ ಮಂದಿ ಕೂಡಿ
ಗೊತ್ತಿಟ್ಟು ಮುದ್ದಾಡಿ
ನಿತ್ಯ ನಿರಂಜನ ತೋರಮ್ಮಾ
ತಾರಕ ಮನೆಯೊಳು ಮೀರಿದ ದಾರಿಯೊಳು
ಆರಿಗೆ ಸಿಗದ ಮೀರಿದ ವುನ್ಮನೀ ಸೇರಿದೆಮ್ಮಾ             ||೧||

ಸತ್ಯದಿ ಶಿಶುವಿನಾಳ
ಉತ್ತಮ ಗೋವಿಂದನ
ನಿತ್ಯ ನಿರಂಜನ ತೋರೆಮ್ಮಾ
ಹಾದಿಯೆಲ್ಲ ಹಿಡಿದು ಮೇದಿನಿಯೊಳು ಬಂದು
ಮೋಹದ ಮುದವಿ ಮಾಡಿಕೊಡೆಮ್ಮಾ                       ||೨||
              ***
ಕೀಲಿಕರಣ: ಎಮ್.ಎನ್.ಎಸ್.ರಾವ್

ಮಳಿ ಬಂತೇ ರಮಣಿ

- ಶಿಶುನಾಳ ಶರೀಫ್

ಮಳಿ ಬಂತೇ ರಮಣಿ ಮಾಯದ್ದೊಂದು  ||ಪ||

ಮಳಿ ಬಂತೇ ರಮಣಿ
ಬೆಳಗು ಮೀರಿತೆ ನಳಿನಲೋಚನೆ
ಮಳಿ ಬಂದಿತು ಛಳಿ ಬಿದ್ದಿತು
ಕಳೆದೋರಿತು ಇಳಿಸ್ಥಳದೊಳು
ಜಲಜಮುಖಿ ಪ್ರಳಯ ಸೂಚನೆ ಇದು      ||೧||

ನಾವು ಬರುವ ಹಾದಿ ತಪ್ಪಿ ಸುವಿಚಾರದೋರದೆ
ತೊಯ್ಯದ ಗೊನಿ ತಪ್ಪಲಮನಿ
ಮಾಯದ ಧ್ವನಿ ನ್ಯಾಯದ ಹನಿ
ಆಯಾಸವ ಪಡುತಿಹ ಪರಿ
ಸುಯೋಗವ  ನೋಡದೆ ಬಲು            ||೨||

ಶಿಶುನಾಳಧೀಶನ ದಯದಿ ಕರಸಿಕೊಂಡಿತೇ
ಭಸಿತ ಋಣವು ನಿಶಿಕಿರಣವು
ದೆಸೆಗೆಡದಾತ್ಮಾನಂದದಿ
ವಿಷಯ ಸಂಭೋಗ ಫಲದಿ
ಹುಸಿಗಾಣದೆ ತುಸು ತುಸು              ||೩||
            ***
ಕೀಲಿಕರಣ: ಎಮ್.ಎನ್.ಎಸ್.ರಾವ್

ಗ್ರಹಣ ಹಿಡಿದುದು ಕಾಣದೆ?

- ಶಿಶುನಾಳ ಶರೀಫ್

ಗ್ರಹಣ ಹಿಡಿದುದು ಕಾಣದೆ ಪ್ರಾಣ ಸಖಿಯಳೆ
ಜಾಣನಾದ ಚಂದ್ರಮನ ಆಳುಕಿಸಿ
ಕೋಣೆಯೊಳಗೆ ಆವಮನಗೊಳಿಸಿತೆ                                   || ೧ ||

ರಾಹು ಸಿಟ್ಟಲೆ ಬಂದು
ಠಾವು ತಿಳಿಯದೆ ನಿಂದು ತೋಯದ ಗೋನಿಯನು
ಕಾಡಬೇಕೆನುತಲಿ ರೋಹಿಣಿದೇವಿಗೆ ಆಯಾಸಪಡಿಸಿತೆ            || ೨ ||

ಮಂಗಳವಾರ ಒಂದಾದಿ ರಂಗುಮಂಟಪದೊಳು
ಸುಮ್ಮನಾಗಿ ಕೇತುವಿನ ಬಲದೆ
ಬಹು ಸಂಗನಾದ ಸಾರಂಗದೊಳು                                     || ೩ ||

ಯಂತ್ರ ಮಂತ್ರಿಕರೆಲ್ಲಾ
ಗೊತ್ತುಗೆಟ್ಟಿದ್ದು ಬಲ್ಹೆ
ನಿಂತು ನೋಡಿ ಶಿಶುನಾಳಧೀಶ ತನ್ನಂತೆ ತಾ ನೋಡಿದನವ್ವಾ || ೪ ||


           ***

ಕೀಲಿಕರಣ: ಎಮ್.ಎನ್.ಎಸ್.ರಾವ್

ಹುಡಕುತ ನಾ ಎಲ್ಲಿ ಹೊಗಲಿ?

- ಶಿಶುನಾಳ ಶರೀಫ್

ಹುಡಕುತ ನಾ ಎಲ್ಲಿ ಹೊಗಲಿ?
ಹುಡುಕಿ ನಾ ಬ್ಯಾಸತ್ತೆ                    ||ಪ||

ಏಳು ಸಮುದ್ರಗಳು ಏಳು ದಿವಸಗಳು
ಹಾಳು ಬಿದ್ದವು ಕೇಳಿ ಕೇಳಿ ಬ್ಯಾಸತ್ತೆ
ನದಿಗಳೆಲ್ಲಾ ಹುಡುಕಿ ಬ್ಯಾಸತ್ತೆ
ಉದಕ ತುಂಬಿದ ಭಾವಿ ನದರಿಟ್ಟು ನೋಡಿದೆ   ||೧|| 

ಧರಿಯೆಲ್ಲ ತಿರುಗಿದೆ
ಗಿರಿಯೆಲ್ಲಾ ಚರಿಸಿದೆ
ಸರಸಿಜಸಖಿಯೆ
ಪರಮಾತ್ಮ ಸಿಗಲಿಲ್ಲ                       ||೨||

ಕಡಿಯ ಭಾಗದಿ ನಾನು
ಸುಡುಗಾಡ ಹುದುಕಿದೆ
ನಡು ಊರೊಳು ಬಂದು
ಮಿದಕ್ಯಾದಿ ನೊಡಿದೆ                        ||೩||

ಸಣ್ಣವಳಿರುತಲಿ
ಬಣ್ಣಿಸಿ ಬಹು ಜನ
ಹಣ್ಣು ಸಕ್ಕರೆ ಕೊಟ್ಟು
ಉಣ್ಣಿಸಿದರು ಎನ್ನ                         ||೪||

ಶಿಶುನಾಳಧೀಶನ
ಅಸಮ ಜರಿ ರಾಗವನ್ನು
ಶಶಿಮುಖಿ ಕಾಣದೆ
ಕಸಿವಿಸಿಗೊಳ್ಳುವೆ                         ||೫||
     ***

ಕೀಲಿಕರಣ: ಎಮ್.ಎನ್.ಎಸ್.ರಾವ್

ವಾರಿಜಾಕ್ಷಿ ವನಪಿನೊಯ್ಯಾರೆ

- ಶಿಶುನಾಳ ಶರೀಫ್

ವಾರಿಜಾಕ್ಷಿ ವನಪಿನೊಯ್ಯಾರೆ
ಬಾರೆ ನೀರೆ ನಿನ್ನನಗಲಿರಲಾರೆ            || ಪ ||

ದೀರೆ ಮರೆಯದಿರಲಾರೆ ಬ್ರಹ್ಮದ
ನೀರು ತುಂಬಿದ ಕೆರಿಯ ಮೇಲಿನ
ಏರಿಯೊಳು ನೀ ಬಾರದಿಹೆ ನಾ
ದಾರಿಯೊಳು ತರುಬಿದರೆ ಸುಮ್ಮನೆ       ||ಅ.ಪ.||

ಹರನಾ ಹಿಡಿದೆ ವಿಧಿ ತಲಿಗಡಿದೆ
ಹರಿಯ ಚರಣಾಂಬುಜವನ್ನು ಪಡಿದೆ
ಪರಮನಾರದಋಷಿಯ ಕಲಹದಿ
ಪರಿಯಗೆಡಸಿದಿ ಪಾವನಾತ್ಮಳೆ
ಧರಿಗೆ ಶಂಕರಿಯಾದೇ ಶಿವನಾ
ಶಿರದಿ ಮೆರದೇ ಗಂಗೆಯಾಗಿ                ||೧||

ಹಸಿತ ವದನದ ಕುಸುಮಗಂಧಿಯಳೆ
ವಸುಧಿ ದೆಸೆಗೆಡಿಸುತ್ತ ನಿಂತಿಹಳೆ
ಎಸೆವ ಶಿಶುನಾಳೇಶನ ಹಸುಳೆಗೆ
ಆಸಮ ಹಾದರ ಕಲಿಸಿದ್ಯಾ ಬಿಡು
ರಸಿಕರಾಟ ಗೋವಿಂದ ಸದ್ಗುರು
ಉಸುರಿದಾತ್ಮ ವಿಚಾರ ತಿಳಕೋ          ||೨||
                        ***

ಕೀಲಿಕರಣ: ಎಮ್.ಎನ್.ಎಸ್.ರಾವ್

ಗುಗ್ಗುಳ ಹೊರಟಿತಮ್ಮಾ

- ಶಿಶುನಾಳ ಶರೀಫ್

ಗುಗ್ಗುಳ ಹೊರಟಿತಮ್ಮಾ ಈ ಊರೊಳು
ಗುಗ್ಗುಳ ಹೊರಟಿತಮ್ಮಾ                                || ಪ||

ಗುಗ್ಗುಳ ಹೊರಟಿತು
ವೆಗ್ಗಳಾಯಿತು ಮ್ಯಾಳಾ
ಸ್ವರ್ಗದೊಳಿರುವ ಶ್ರೀ ರುದ್ರನರಿಯದಾಗಿ           ||ಅ.ಪ.||

ಭೂತ ಪಂಚಕ ರೂಪದಾ ಪುರಂತರು
ಆತುಕೊಂಡಿರುತಿಹರು
ನೂತನವಾಯಿತು ಏ ತರುಣಿ ಕೇಳೆ
ಧಾತ ಶಿವನ ತನುಜಾತನರಿಯದಾಗಿ                ||೧||

ದಕ್ಷನ ವಧಮಾಡಿದೆ ಷಣ್ಮುಖದೇವಾ
ಸಾಕ್ಷಪತನನು ಕೂಡಿದೆ
ಈ ಕ್ಷಿತಿಯೊಳು ಬೂದ್ಯ್ಳ ಗ್ರಾಮದೊಳು ತಾ
ಸಾಕ್ಷತ ಬಸವನಾಲಯದಂಗಳದೊಳು              ||೨||

ಇಳೆಯೋಳ್ ಆಧಿಕವಾಯಿತು ಶಿಶು-
ನಾಳಧೀಶನ ಮನವೆನಿತು
ತಿಳಿದು ನೋಡೆ ಇಂದು ಲಲನಾಮಣಿಯೆ ಕೇಳೆ
ಹೊಳಿವ ಕುಂಭದ ರೂಪಾ ಬೆಳಕಿನ ಉರಿಯಂತೆ  ||೩||

        ***

ಕೀಲಿಕರಣ: ಎಂ.ಎನ್.ಎಸ್.ರಾವ್

ಮುತ್ತು ರನ್ನದ ಕಿಡಿ ಉದುರೀತು

- ಶಿಶುನಾಳ ಶರೀಫ್

ಮುತ್ತು ರನ್ನದ ಕಿಡಿ ಉದುರೀತು
ಕಡು ವಿಷಯ ಹಿಂದಿನ ಪಾಪ ಬಂದು ಮಂದೆ ನಿಂತೀತು                || ಪ ||

ಆಪ್ಪ ಆಣ್ಣಗಳೆಲ್ಲ ಕೇಳಿರಿ ತಪ್ಪಲಾರದು ಕರ್ಮದೋಷವು
ಒಪ್ಪುವಂಥಾ ಘಟವು ಬಿಟ್ಟು ಕ್ಷಣದಲಿ ಆಸು ಹಾರಿಹೋಯಿತು         ||ಆ.ಪ.||

ದೇಶಕಧಿಕವಾದ ಹುಬ್ಬಳ್ಳಿ ಹುಚ್ಚಯ್ಯಸ್ವಾಮಿ
ಮಠದ ಪಟ್ಟದ ಚರಮೂರ್ತಿ ಆವರ ಕೀರ್ತಿ ಸಾರಿ ಸದ್ಭಕ್ತರಿಗೆ
ದುಃಖವು ಗಾರಗೊಂಡಿತು ಮನದ ಕೊನೆಯೊಳು
ಆರು ಮಾಡುವರೇನು ಇದಕೆ ಹುಟ್ಟಸಿದ ಶಿವ ತಾನೇ ಬಲ್ಲಾ           || ೧ ||

ಏನು ಎಷ್ಟಿದರೊಳು ಎಷ್ಟು ದಿವಸ ಇದ್ದರೆ ಸಾವು ತಪ್ಪದು
ಮೃತ್ಯುಬುದ್ಧಿಯನ್ನು ಬಲ್ಲವರೊಳು ಕೇಳು
ಆಲ್ಲಮ ಮಹಾಪ್ರಭುವಿನ ಸಿರಿಯು ತುಂಬಿ
ಯೋಗಮಂದಿರದೊಳು ಬೆಳಗುವ ಕಳಿವುಳ್ಳ ಬಸವಾದಿ ಪ್ರಮಥರು || ೨ ||

ಕಾಶೀ ಗ್ರಾಮದ ಪುಣ್ಯ ತೀರಿತು ಬೈಲಾಯಿತು
ಬೈಲಿನೊಳಗೆ ಬೈಲು ಆಯಿತು ಕಡಿಗೆ ಆಯಿತು
ಒಡಿಯ ಶಿಶುನಾಳ ಈಶನಡಿಗೆ ಬಿಡದೆ ಭಜಿಸುವ ನಿಮ್ಮ ಧ್ಯಾನದಿ
ನುಡಿದ ಮಾತಿಗೆ ಕಸರು ಇದ್ದರೆ ತಿದ್ದಿ ಹೇಳಿರಿ ರಸಿಕರೆಲ್ಲಾ             || ೩ ||

        ***

ಕೀಲಿಕರಣ: ಎಂ.ಎನ್.ಎಸ್.ರಾವ್

ಉಳವಿಯ ಜಾತ್ರೆಗಿ ಹೋಗೋಣು ಬನ್ನಿರಮ್ಮಾ

- ಶಿಶುನಾಳ ಶರೀಫ್

ಉಳವಿಯ ಜಾತ್ರೆಗಿ ಹೋಗೋಣು ಬನ್ನಿರಮ್ಮಾ
ತಿಳಿದು ಬ್ರಹ್ಮದ ಬಯಲೊಳಡೋಣಮ್ಮಾ || ಪ ||

ಬಲು ಸಂಸಾರವೆಂಬುವ ಹಳುವನೆಲ್ಲವ ದಾಟಿ
ಸುಳಿದಾಡಿ ಶರಣರ ಬಳಿವಿಡಿದಾಡುತ      || ಆ. ಪ. ||

ಬ್ರಹ್ಮರಕ್ಕಸಿಯೆಂಬ ಘಟ್ಟವ ದಾಟಿ
ಹಮ್ಮನಳಿದು ದಾರಿ ಸುಮ್ಮನೆ ಹಿಡಿದು
ಒಮ್ಮನದಿಂದಲಿ ಶ್ರೀಚನ್ನಬಸವನ
ರಮ್ಮ್ಯಾದ ವನವನು ಗಮ್ಮನೆ ನೋಡುತ  || ೧ ||

ಆಲ್ಲಿಂದ ಮಹಾಮುನಿ ಕೈಲಾಸದಿ
ನಿಲ್ಲದೆ ಆಕಳಗವಿಯೊಳಗೈದಿ
ಬಲ್ಲಿದ ಶಿಶುನಾಳಧೀಶನ ಭಜಿಸುತ
ಎಲ್ಲ ಜಂಜಡ ಬಿಟ್ಟು ಯಾರಿಗಂಜದಲೆ       || ೨ ||

        ***

ಕೀಲಿಕರಣ: ಎಂ.ಎನ್.ಎಸ್.ರಾವ್

ಏ ಸಖರಿಯೆ ನಾ ಸಖರಿಯೆ

- ಶಿಶುನಾಳ ಶರೀಫ್

ಏ ಸಖರಿಯೆ ನಾ ಸಖರಿಯೆ
ಬ್ಯಾಸರಾದೀತು ಮನವ ಆಸರಿಸಿ ತೈಯ್ಯ    ||ಪ||

ಪರಸತಿಗೆ ಒಲಿದು ವಿಸ್ತರದಿ ತಿಳಿದು
ಜರಿದು ಪಾದ ಪೊಗಿರಿ ರತಿಸತಿಯ            ||೧||

ಬಾರದೆ ನಿಂತು ತೋರಿತು ಪಂಥ
ಜಾರಿದ ಪಾದ ಪೋಗಿ ವಿರಚಿಸಲೆನ್ನ          ||೨||

ಶಿಶುವಿನ ಈಶ ಅಸಮ ಪ್ರಕಾಶ
ರಸಿಕ ಗೋವಿಂದನ ಸೇವಕ ತಾನು           ||೩||

         ***

ಕೀಲಿಕರಣ: ಎಂ.ಎನ್.ಎಸ್.ರಾವ್

ಒಳ್ಳೇ ನಾರಿ ಕಂಡೆ ಈಗಲೇ

- ಶಿಶುನಾಳ ಶರೀಫ್

ಒಳ್ಳೇ ನಾರಿ ಕಂಡೆ ಈಗಲೇ
ಒಳ್ಳೇ ನಾರಿ ಕಂಡೆ                           ||ಪ||

ಇಳೆಯ ತಳದಿ ಕಳವರ ಭಲೆ
ಋಷಿಗಳ ಮರುಳು ಮಾಡಂವ           ||ಅ.ಪ.||

ಕೈಯು ಕಾಲು ಇಲಾ
ಮೈಯೊಳು ಉಸುರು ಆಡಗಿತಲ್ಲಾ
ವಿಷಯಸುಖದ ಪರಮಾತ್ಮ ಬ್ರಹ್ಮೋದಯ
ನಿಶಿಕರದೊಳು ನಲಿದಾಡುತಿಹಳೋ       ||೧||

ಮುಟ್ಟಲು ಕೊಲ್ಲುವಳೋ ಕಾಮನ
ಕಟ್ಟಿ ಆಳುತಿಹಳೋ
ಬಟ್ಟ ಕುಚಕ ಬರದಿಟ್ಟ ಕುಪ್ಪಸಕ
ನಟ್ಟ ಮನಸು ನಡೆಗೆಟ್ಟು ನಿಂತಿತು          ||೨||

ವಸುಧೆಯೊಳಗೆ ಇವಳು
ಶಿಶರಿನಾಳಧೀಶನ ಒಲಿಸಿದಳೋ
ಪಸರಿಸಿ ಗುಡಿಪುರ
ಆಸಮ ರಸಿಕರಿಗೆ ಗುರುಗೋವಿಂದನ      ||೩||

         ***

ಕೀಲಿಕರಣ: ಎಂ.ಎನ್.ಎಸ್.ರಾವ್

ತೇರು ಸಾಗಿತು ನೋಡೆಲೆ ನೀರೆ

- ಶಿಶುನಾಳ ಶರೀಫ್

ತೇರು ಸಾಗಿತು ನೋಡೆಲೆ ನೀರೆ
ಸರಸಿಜಮುಖಿ ಬಾರೆ                           ||ಪ.||

ಚಾರುತರದ ಚೌಗಾಲಿರಲು ಸ್ತವ
ಮೀರಿದ ಮಹಾಪಕಿ ದಾರಿಗೆ ಪೋಗುವ    ||ಅ.ಪ.||

ಕಳಸದ ಕೆಳಗೆ ಮಾರು ಪಟಾಕ್ಷಿ
ಥಳಥಳಿಸುವ ಮಿಂಚಿನ ನಿಟಲಾಕ್ಷಿ
ಬಲಿದು ಬ್ರಹ್ಮನ ನೆಲೆಯೊಳೊಪ್ಪುವ
ಬಲು ಸುಳಿಗಾಳಿಗೆ ನಲಿ ನಲಿದಾಡುವ      ||೧||

ಶಿಶುನಾಳಧೀಶನ ಹೊಸ ರಥವಿದು ತಿಳಿ
ರಸಿಕರಾಜ ಗೋವಿಂದನ ಸೇವಕ
ಪಸರಿಸಿ ನೋಡಲು ಜಸವಡದಿರುವದು
ಅಸಮಾಕ್ಷನು ಮೆಲೇರಿ ಕುಳಿತಿರುವ        ||೨||

         ***

ಕೀಲಿಕರಣ: ಎಂ.ಎನ್.ಎಸ್.ರಾವ್

ನೋಡಿ ತಡೆಯಲಾರದೆ ಕೇಳಿದೆ

- ಶಿಶುನಾಳ ಶರೀಫ್

ನೋಡಿ ತಡೆಯಲಾರದೆ ಕೇಳಿದೆ
ಕೂಡಿ ಗಡ ಕಾಡಬ್ಯಾಡಾ ಬೇಡಿದ್ದು ಕೊಡುವೆ       ||ಪ||

ಹರಿಹರಪುರನಿಗೆ ಕ್ಷೀರವಿತ್ತು ಸಲಹಿದೆ
ಚಾರುತನದಲಿ ಶ್ರುತಿ ಸಾರುತಿದೆ ನೋಡಿ               ||೧||

ಮೂರುಗಿರಿ ಮೇಲಕೆ ಏರಿನೊಳು ವರ್ಣಿಸಿ
ನೀರಿಗ್ಹೋಗೋ ದಾರಿಯೊಳು ಜೇರುಗಿಂಡಿಯೊಳು
ಮಾರಿನೋಡು                                                ||೨||

ಮೋದಿನಿಗೆ ಸದ್ಗುರು ಆದಿ ಶಿಶುವಿನಾಳಧೀಶ
ನಾದ ಬ್ರಹ್ಮದೊಳು ಬೈಲಾದ ಮೇಲೆ ಹಾದಿನೋಡಿ   ||೩||

         ***

ಕೀಲಿಕರಣ: ಎಂ.ಎನ್.ಎಸ್.ರಾವ್

ಹೇಮರೆಡ್ಡಿ ಮಲ್ಲಮ್ಮ

- ಶಿಶುನಾಳ ಶರೀಫ್

ಹೇಮರೆಡ್ಡಿ ಮಲ್ಲಮ್ಮ
ರೆಡ್ಡಿಕುಲಧರ್ಮ ಉದ್ಧಾರಮಾಡಿದೆಯಮ್ಮಾ   || ಪ ||

ನಿನ್ನ ಭಕ್ತಿಭಾಗ್ಯದ ನೇಮ
ಮಲ್ಲಯ್ಯನ ಕಟ್ಟಿದ ಪ್ರೇಮ
ಶ್ರೇಷ್ಟವಾಗಿ ತೋರುವದು ರಡ್ಡಿಕುಲಧರ್ಮ
ಶ್ರೀಶೈಲ ನಿನಗಾಗಿದೆ ಕಾಯಮ               ||ಅ.ಪ.||

ನಿನ್ನ ಕಷ್ಟ ದುಃಖ ಹೇಳಲಾರೆನಮ್ಮ
ಗಂಡನ ಮೇಲೆ ಪ್ರೇಮ
ಹೊತ್ತಿಗಂಬಲಿ ಸಿಗಲಿಲ್ಲವಮ್ಮ
ಮನ್ನು ಪಾತ್ರೆ ಮಜ್ಜಿಗೆ ನೇಮ
ಮಲ್ಲಯ್ಯನು ಪಾಲುಗಾರನಮ್ಮ
ಉಂಡುಹೋದ ಉಳಿಯಲಿಲ್ಲವಮ್ಮ          ||೧||

ನೀ ಬೀಸುದು ನೇಮ ದಿನ ದಿನ ಕಾಯಮ
ಕೈಯಲ್ಲಿ ಗುರುಳೆಮ್ಮ
ಬೀಸಿಹೋದ ಭಕ್ತಳಮ್ಮ
ಭಕ್ತಿಗೊಲಿದು ಬಂದನು ಜಂಗಮ
ಭಿಕ್ಷೆ ಬೇಡಿ ನಿಂತ ನೋಡಮ್ಮ
ಬಿಡದ ನಚ್ಚುನೇಗರನಮ್ಮ                      ||೨||

ನಿನ್ನ ಮೂಗುತಿ ಮರ್ಮ
ತಿಳಿಲಿಲ್ಲ ಹೇಮ ಬೇಡಿ ಒಯ್ದನಮ್ಮ
ಶಿಶುನಾಳ ಊರು ಗ್ರಾಮ
ಗುರುಗೋವಿಂದನ ನಾಮ
ಆತನ ಪಾದಸೇವೆ
ನಂಬಿ ನಾನು ಮಾಡಿದೆನಮ್ಮ               ||೩|| 

         ***

ಕೀಲಿಕರಣ: ಎಂ.ಎನ್.ಎಸ್.ರಾವ್

ನಳಿನಾಕ್ಷಿಯ ಕಂಡೆ ನಾ

- ಶಿಶುನಾಳ ಶರೀಫ್

ನಳಿನಾಕ್ಷಿಯ ಕಂಡೆ ನಾ
ತಿಳವಳ್ಳಿಯ ಕಳ್ಳಿಯುಳ್ಳ ಮೋಜಿನ್ಹೆಣ್ಣ
ಹೋಳಿವ ಚಂದುಟಿ ಎಳಿವ ಮುಡಿ
ಥಳ ಥಳ ಪದಕ ಒಪ್ಪಿನ ಜಾಣೆ
ತನ್ನ ಕಲಶ ಕುಚಯುಗದಲಿ
ಸರಿಯ ಗರತಿಯರೋಳು ಮೇಲ್             ||೧||

ಕುಸುಮಶರನ ರಾಣಿಯೋ
ಕೊರಳೆಸವ ಪಲ್ಲವ ಪಾಣಿಯೋ
ಬಿಸಿಜಿಕೊರಕ ಸ್ಥಾನವೋ
ಯೋಚಿಸಿ ರೂಪ ಮಧುರ ಪಲ್ಲವ ಪಾಣಿಯೋ
ವಸುಧಿಯೊಳು ಕಡುಜಾಣ ರೀತಿಯ
ಕುಶಲ ರತಿಯಲೆ ಕೂಡಿದ್ಹೇಳ್
ಆಸು ನೀಗದೆ ಬಿಡರು ಎಮ್ಮನು
ಮಸಣಿಸಿ ಮುಂದೆ ಹೋಗಲೊಲ್ಲದು        ||೨||

ಸರಳ ಬೈತಲಿ ಮರನ ಸಿಂಗಾಡಿಯು
ತೀಡಿ ಪೊರ್ಬಿನ ಕೊರಳೊಳ್
ಹಾರ ಮುತ್ತಿನ ರತ್ನಗಳಿಂದ  ಮೆರೆಯುತಿಹುದು ಒದ್ಯಾಣ
ತರುಣಿ ಕರ್ಣದೊಳಿಟ್ಟು ಆಭರಣ
ಆಪರಿಮಿತ ಇನ್ನೆಷ್ಟು ಹೇಳಲಿ
ನೆರದ ಜನರ್ಬಾಯ್ದೆರೆವರೀಕೆಯ
ತುರುಬ ಚಲ್ವಿಕೆಗೆ ಮರುಳಗೊಂಡರು   ||೩||
ಹವಳದುಟಿಯ ಬಾವಲಿಯು
ಕುವಲನೇತ್ರ ದಿವಿಜಲೋಕದ ಸ್ತ್ರೀ
ಆಯ್ಯಯ್ಯೋ ನವಮೋಹನದ ನಿಧಿಯುಂ
ಭವದ ಅಜನ ಪಟ್ಟದ ರಾಣಿಯು
ಶಿವಶಿವಾ ಹೆಣ್ಣಿವಳ ರೂಪಕ
ಆವನೀಪತಿ ಕಡೆಯಿಲ್ಲ ದೇವರು
ಪವನಸುತ ಘನರೂಪ ಮಾರುತಿ
ಆವನ ಬಲದಿಂದುಳಿದೆನು ಜವದಿ          ||೪||

         ***

ಕೀಲಿಕರಣ: ಎಂ.ಎನ್.ಎಸ್.ರಾವ್

ಓದುವವ್ಗ ಎಚ್ಚರ ಇರಬೇಕು

- ಶಿಶುನಾಳ ಶರೀಫ್

ಓದುವವ್ಗ ಎಚ್ಚರ ಇರಬೇಕು

ಆಭವ ಮೆಚ್ಚುವ ತೆರದಿ
ಆರ್ಥವ ಪೇಳಿ ಸದ್ಭಕ್ತರಿಗೆ ಶುಭ
ಈ ಭವಬೇಧವಳಿದು ಸ್ವರ್ಗದ
ಸಭೆಯು ಹೌದೆನ್ನುವಂದದಿ

ಭಕ್ತಿಭೂಮಿ ಬೆಳೆಯದವರಿಗೆ ಬಹು
ಯುಕ್ತಿಯಿಂದಲಿ ಮುಕ್ತಿಲಲನೆ ಒಲಿಸಿ ತಿಳಿದವರಿಗೆ
ಯುಕ್ತವಾಗಿ ವಿರಕ್ತಿಮಾರ್ಗದಿ
ತತ್ವಜ್ಞಾನದಿಂದ ಮೆರವ ಮಹಿಮರಿಗೆ
ಐಕ್ಯವುಳ್ಳ ಶಿವೈಕ್ಯಭಾವದಿ
ಲಕ್ಷ್ಯವುಳ್ಳ ನಿಜಲಕ್ಷ್ಯವನಿಡುತಲಿ

ಸಾಧುಗಳು ಸೈಯೆಂಬ ಪರಿಯಿಂದಾ
ಸದ್ಗುರು ಕಟಾಕ್ಷದಿ
ನಾದ ಸ್ವರ ಸಂಗೀತ ಹಿತದಿಂ
ಮೇದಿನಿಗೆ ಶಿಶುನಾಳಧೀಶಾನ
ಮೋದದಿಂದಲಿ ಆಲ್ಲಮನ ಪಾದ ಸಂಪಾದಿಸಿ


         ***

ಕೀಲಿಕರಣ: ಎಂ.ಎನ್.ಎಸ್.ರಾವ್

ಕೇಳು ಕೇಳಿಂದ್ರಜಾತಾ

- ಶಿಶುನಾಳ ಶರೀಫ್

ಕೇಳು ಕೇಳಿಂದ್ರಜಾತಾ ಚಂದ್ರಹಾಸಾ
ಏಳು ವರುಷದಾತಾ                                                         || ಪ ||

ಸಾಲಿಬರಿಯಲ್ಹೋಗಿ ಕಲಿತನಕ್ಷರವ
ಸಾಲಿಗ್ರಮದ ಶಿಲೆಯು ಬಾಲಕನೀತಾ                                  || ೧ ||

ಆಷ್ಟೆರಡು ವರುಷವಾಗಿ ಪಟ್ಟವ ಕಟ್ಟಿ
ಕೊಟ್ಟ ಕಾರ್ಯವನು ಬೇಗ ದಿಟ್ಟ ಕಲಿಂಗನ ಸಂತಾನ ಕೀರ್ತಿಗಳನೆಲ್ಲಾ
ದುಷ್ಟಬುದ್ದಿಗೆ ಸುದ್ದಿ ಮುಟ್ಟಿದಾಕ್ಷಣದಲಿ                                  || ೨ ||

ಕುಂತಳಪುರದಿಂದಲಿ ತನ್ನ ಚಾರರ ಕಳುಹಿ
ಚಿಂತೆಯೊಳಿರಲು ಸಂತೋಷದಿಂದ ಶಿಶರಿನಾಳಧೀಶನ
ಆಂತಃಕರುಣದಿ ಬಾಲಕರು ಕಂಡರು ಬಂದು                          || ೩ ||

         ***

ಕೀಲಿಕರಣ: ಎಂ.ಎನ್.ಎಸ್.ರಾವ್

ಅಸಲ್ ವಲಿ ಬಹು ಕುಶಲದಲಿ

- ಶಿಶುನಾಳ ಶರೀಫ್

ಅಸಲ್ ವಲಿ ಬಹು ಕುಶಲದಲಿ
ದೇಹಬಿಟ್ಟಾರೋ ಬಸನಾಳ ಗ್ರಾಮದಲಿ
ಹಸನಾಗಿ ಭಜಿಸುವೆ ರಸಿಕರು ಕೇಳರಿ
ಕಸರಿಲ್ಲೇ ಕವಿತಾದಲ್ಲೇ                 ||೧||

ಶಶಿಧರ ಶಂಕರ ಸೂರ್ಯನ ಕಿರಣ
ವರ್ಣಿಸುವೆ ನಿಮ್ಮ ಮಹಾತ್ಮದಲಿ
ಮಹಾತ್ಮದಲಿ ಮಾತೀನ ಕಲಿ
ಬೈಲಾದ ವಲಿ                             ||೨||

ನಾದ ಮೋದ ಹೈದ್ರಾಬಾದದ
ಲೆಖ್ಖ ತೀರಿತೋ ಪೀರ ವಲಿ
ಸಾಧನ ಸಾಧುರ ಸದರಿಗೆ ಒಪ್ಪುವ
ಇಂಥಾವಲಿ ಕಾಣೇ ಜಗದಲಿ           ||೩||



ಲಾಲಧೀನ ಆಲ್ಲಾಉದ್ದೀನ ಶಾ ಖಾದರಿ
ತಾನೇ ಬೆಳಗುವ ತಾನೇ ವಲಿ
ಮಾನಹೀನ ಬಹುಜ್ಞಾನ ಮೌನದಿ
ಬಂಕಾಪುರದ ಪಟ್ಟದ ವಲಿ            ||೪||

ಸಿದ್ದಭಕ್ತ ಈರಭದ್ರಪ್ಪ ಅವನಿಗೆ
ಮುಕ್ತಿ ದೊರಕಿತೋ ಸ್ವರ್ಗದಲಿ
ಸ್ವರ್ಗದಲಿ ಮಾತೀನ ಕಲಿ
ಬೈಲಾದ ವಲಿ                           ||೫||

ಲಕ್ಷಕೆ ಮೋಕ್ಷ ಕಪೇಕ್ಷ
ಲಕ್ಷ ಇಟ್ಟು ಮೆರಿದಂತಾ ವಲಿ
ಈ ಕ್ಷಿತಿಯೊಳು ಶಿಶನಾಳಧೀಶನ
ದಯಾಪರಾತ್ಪರ ಪರದಲ್ಲಿ           ||೬||


         ***

ಕೀಲಿಕರಣ: ಎಂ.ಎನ್.ಎಸ್.ರಾವ್

ಕುಂಟಯ್ಯಾ ನಿನ್ನಲ್ಲೇ ಸತ್ಯಕಿ ಉಂಟಯ್ಯಾ

- ಶಿಶುನಾಳ ಶರೀಫ್

ಕುಂಟಯ್ಯಾ ನಿನ್ನಲ್ಲೇ ಸತ್ಯಕಿ ಉಂಟಯ್ಯಾ             ||ಪ||

ಎಂಟು ದಿಕ್ಕನು ಒಯ್ದು ಒಂಟಿ ಬಾಯೊಳಗಿಟ್ಟು
ಸುಂಟರಗಾಳಿಗೆ ಸಿಗದ ಮಹಾತ್ಮನೆ                      ||೧||

ಬಯಲು ಬ್ರಹ್ಮಜ್ಞಾನಿಯಂದೆನಿಪ ನೆಲಗುಡ್ಡ
ದಯದ ಯೋಗಿಯ ವಂನಕೆ ಒಲಿಸಿದ ಮಹಿಮನೆ      ||೨||

ವಸುಧಿಪ ಶಿಶುನಾಳಧೀಶನ ಮಗನಿಗೆ
ರಸಬಿಂದು ಕೊಟ್ಟಂಥಾ ಅಸಮ ಸದ್ಗುರುನಾಥಾ       ||೩||

         ***

ಕೀಲಿಕರಣ: ಎಂ.ಎನ್.ಎಸ್.ರಾವ್

ದಾಸರೋ ಹರಿದಾಸರೋ

-ಶಿಶುನಾಳ ಶರೀಫ್

ದಾಸರೋ ಹರಿದಾಸರೋ             ||ಪ||

ದಾಸರೆನಿಸಿ ಧರ್ಮ ಹಿಡಿದು
ಆಸೆ ಕಡಿದು ತೂರ್ಯದಲ್ಲಿ
ಕಾಸು ಕವಡಿ ಕಾಲಿಲೊದ್ದು
ಈಶನೊಲಿಸಿಕೊಂಬುವಂಥಾ          ||೧||

ಸ್ವಾಮಿ ಕೇಶವ ಆಚ್ಯುತ
ಗೋಕುಲದ ಗೋವಿಂದ
ರಾಮ ಕೃಷ್ಣ ಎಂಥ ಪಂಚ-
ನಾಮ ನಿತ್ಯ ಪಠಿಸುವಂಥ             ||೨|| 

ತನುವ ತಂಬೂರಿ ಮಾಡಿ
ಪ್ರಣವನಾದ ಸ್ವರದಿ ಹಾಡಿ
ಚಿನುಮಯಾತ್ಮನೊಲವಿಲೈದು
ಮನೆಯ ಭಿಕ್ಷೆ ಬೇಡುವಂಥಾ      ||೩||

ವರಶ್ರೀಮುಖಮುದ್ರೆ ಎನಗೆ
ಬರಸಿಕೊಟ್ಟ ಶಿರದ ಮೇಲೆ
ಕರವನಿಟ್ಟು ಸಲಹಿದಂಥಾ
ಶಿಶುವಿನಾಳಧೀಶನ ಹರಿ         ||೪||

              ****

ಕೀಲಿಕರಣ: ಎಂ.ಎನ್.ಎಸ್. ರಾವ್

ಹುಬ್ಬಳ್ಳಿಯೊಳು ಮನಿ ಮಾಡಿದ್ಯಾ

-ಶಿಶುನಾಳ ಶರೀಫ್

ಹುಬ್ಬಳ್ಳಿಯೊಳು ಮನಿ ಮಾಡಿದ್ಯಾ
ಅಬ್ಬರದಿ ಮಾಂತನೊಳು ಕೂಡಿದ್ಯಾ               || ಪ||

ಮಂಗಳಾತ್ಮನೊಡನೆ ಮಾತಾಡಿದ್ಯಾ
ಗಂಗಾಧರನಿಗೆ ಕೋರಿಯ ಬೇಡಿದ್ಯಾ               || ೧|| 

ಮರ್ಟಾಳ ಪತಿಯ ಪದವ ಹಾಡಿದ್ಯಾ
ಕಾಟ ಕರ್ಮ ಕಳಿದು ಈಡ್ಯಾಡಿದ್ಯಾ                  || ೨||

ತಾನರಸಿ ವಿಷಯ ಕಲಿ ದೂಡಿದ್ಯಾ
ದೇವ ಶಿಶುನಾಳಧೀಶಗ ಕರವ ಜೋಡಿಸಿದ್ಯ     || ೩ ||
              ****

ಕೀಲಿಕರಣ: ಎಂ.ಎನ್.ಎಸ್. ರಾವ್

ಒಡೆಯ ಬಸವಲಿಂಗಾ

-ಶಿಶುನಾಳ ಶರೀಫ್

ಒಡೆಯ ಬಸವಲಿಂಗಾ ಜಂಗಮ ನೆಲಸಿರ್ದ
ಕಡಕೋಳದಲಿ ವಸತಿ ಮಾಡಿದಿಯೋ                    || ಪ||

ಬಿಡದೆ ಈ ಗ್ರಾಮದ ಜನರೆಲ್ಲ ಕೂಡಲು
ನೋಡಿ ಕನ್ನಡ ಪದ ಹಾಡಿದರಯ್ಯಾ                      ||೧|| 

ಮನಸಿ ನಿನಗೆ ನಾ ಏನಂದೆ ಆತ್ಮದಿ
ನೆಲಸಿಕೊಂಡು ಸುಖವನು ಬೇಡಿಕೊಂಬೆನಯ್ಯಾ      ||೨|| 

ರಸಿಕರಾಜ ಗೋವಿಂದನ ಸೇವಕ
ಆಸಮ ಸಾಹಸಿಯು ಪಾತ್ರಿಯ ಬೇಡುವೆ                ||೩||

ಎನಿಸಿ ತೇಜಪ್ರಕಾಶ ತೋರಿದೆ
ಬಸವನ ಪಾದಕ ಕರವ ಜೋಡಿಸಿ ನಾ                   ||೪||

              ****

ಕೀಲಿಕರಣ: ಎಂ.ಎನ್.ಎಸ್. ರಾವ್

ನೋಡೋಣ ಬಾರಾ ಹಂಪಿ

-ಶಿಶುನಾಳ ಶರೀಫ್

ವಿರುಪಾಕ್ಷಲಿಂಗವಿದ್ದ ಹಂಪಿ
ನೋಡೋಣ ಬಾರಾ ಇಬ್ಬರು ಕೂಡಿ             ||ಪ||

ಆಂಗಲಿಂಗ ಸುಖ ಎರಡು ಕೂಡಿ
ಒಂದೆ ಶಿವ ಶಬ್ಬದೊಳಗೆ                           ||೧||    

ಗಂಗಿ ಸರಸ್ವತಿ ಯಮುನಾ ತೀರ
ಮಧ್ಯದಿ ಹುಡುಕೋಣ ಬಾರೆ                      ||೨||

ಶ್ರೀಶಂಕರನ ಪಾದದಡಿಯಲ್ಲಿ ನೋಡಿದ
ಕೊನೆಯೊಳು ನೋಡೋಣು ಬಾರೆ              ||೩||

ನಾಡ ಜನರು ಕೂಡಿ ನೋಡಲಿಕ್ಕೆ ಬಂದರೆ
ಬೇಡಿದ ವರವ ಕೊಡುತಿಹನು                    ||೪||  

ಬೇಡಿದ ಇಷ್ಟಾಥ೯ ಕೊಡುವಂಥ ಶಿಶುನಾಳ-
ಧೀಶನ ಪಾದಕೆ ಎರಗೋಣ ಬಾರೆ              ||೫||

              ****

ಕೀಲಿಕರಣ: ಎಂ.ಎನ್.ಎಸ್. ರಾವ್

ಜೀ.... ಗಾಂಧೀ

-  ಕಂನಾಡಿಗಾ ನಾರಾಯಣ


ಅರುಣ್‌ಗಾಂಧಿ ಹೆಗಲಿನಿಂದ ಲ್ಯಾಪ್‌ಟಾಪಿನ ಚೀಲವನ್ನು ಕೆಳಗಿಳಿಸಿ ತಿರುಗುವ ಕುರ್ಚಿಯಲ್ಲಿ ಕೂರುತ್ತಿದ್ದಂತೆಯೇ ಬಿಳಿಯ ಸಮವಸ್ತ್ರ ಧರಿಸಿದ್ದ ಸೇವಕ ಬಂದು ಒಂದು ಕವರನ್ನು ಕೊಟ್ಟು ಸಹಿ ಮಾಡಿಸಿಕೊಂಡು ಹೋದ. ಪ್ರತಿದಿನ ಹೀಗೆ ಲೆಟರ್‌ಗಳು ಬರುತ್ತಿದ್ದುದು ಸಹಜವಾಗಿದ್ದರೂ, ಅಸಹಜವಾಗಿ ಕವರಿನ ಮೇಲೆ ತನ್ನ ಹೆಸರು ಇದ್ದುದನ್ನು ನೋಡಿ ಕುತೂಹಲದಿಂದ ಒಡೆದು ಓದಿದ.

ಇದೀಗ ತಾನೇ ಎ.ಸಿ.ಯಿದ್ದ ಹೋಂಡ ಸಿವಿಕ್ ಕಾರಿನಿಂದ ಇಳಿದು ಬಂದಿದ್ದರೂ ಮೈ ಬೆವರಲಾರಂಭಿಸಿತು. ಅದೇಕೋ ಕಣ್ಣಿಗೆ ಕತ್ತಲಾವರಿಸಿದಂತಾಯಿತು. ಮುಂದಿನದೆಲ್ಲಾ ಒಂದು ರೀತಿಯ ನಿರ್ವಾತದಂತೆ, ಖಾಲಿ ಖಾಲಿಯಂತೆ ಕಾಣಲಾರಂಭಿಸಿತು. ಇಂಥದೊಂದು ಸಾಧ್ಯತೆಯನ್ನು ನಿರೀಕ್ಷಿಸಿದ್ದನಾದರೂ ಅದು ಇಷ್ಟು ಬೇಗ ತನ್ನ ಬುಡಕ್ಕೇ ಬಂದು ಕೂರುತ್ತದೆಂದು ನಿರೀಕ್ಷಿಸಿರಲಿಲ್ಲ.

'ಅಮೆರಿಕಾದ ರಿಸೆಷನ್‌ಗೂ ಕರ್ನಾಟಕದ ಕಂಪೆನಿಗೂ ಏನು ಸಂಬಂಧ.. ಇಂಡಿಯನ್ ಎಕಾನಮಿ ತುಂಬಾ ಸ್ಟೇಬಲ್ಲಾಗಿದೆ..' ಎಂದು ನೆನ್ನೆ ತಾನೆ ಲಂಚ್‌ನಲ್ಲಿ ಗೆಳೆಯರೊಂದಿಗೆ ಹರಟುತ್ತಿದ್ದ. ಮೊನ್ನೆ ತಾನೆ ಐವತ್ತು ಜನರನ್ನು ಇಂಟರ್‌ವ್ಯೂ ಮಾಡಿ ಹತ್ತು ಜನರನ್ನು ಆಯ್ಕೆ ಮಾಡಿಕೊಂಡ ಕಮಿಟಿಗೆ ಆತನೇ ಎರಡನೇ ಅತಿ ದೊಡ್ಡ ಹುದ್ದೆಯಲ್ಲಿದ್ದ ವ್ಯಕ್ತಿಯಾಗಿದ್ದ. ಅವರೆಲ್ಲ ತಮಗೆ ಕೆಲಸ ಕೊಡುವಂತೆ ಶಿಫಾರಸ್ಸು ಮಾಡಲಿ ಎಂದು ಇವನನ್ನು ಎಷ್ಟೊಂದು ಇಂಪ್ರೆಸ್ ಮಾಡಲು ಪ್ರಯತ್ನಿಸುತ್ತಿದ್ದರು. ಅದರಲ್ಲಿ ಕೆಲವರು ಅರುಣ್‌ಗಾಂಧಿಯ ತೀರ್ಮಾನವೇ ಅಂತಿಮ ಎಂದು ಗೊತ್ತಿದ್ದು, ಬೇರೆಬೇರೆ ಕಂಪೆನಿಯಲ್ಲಿ ಉನ್ನತ ಹುದ್ದೆಯಲ್ಲಿದ್ದ ಪರಿಚಯದವರಿಂದ ಹಾಗೆ ಸುಮ್ಮನೆ ಎನ್ನುವಂತೆ ಫೋನು ಮಾಡಿಸಿದ್ದರು. ಯಾರು ಯಾರು ಹಾಗೆ ಫೋನು ಮಾಡಿಸಿದ್ದರೋ ಅವರ ಹೆಸರನ್ನೆಲ್ಲಾ ನೋಟ್ ಮಾಡಿಕೊಂಡು, ತನ್ನ ಚಾಕಚಕ್ಯತೆಯಿಂದ, ಅವರು ಈ ಕಂಪೆನಿಗೆ ನಿಜವಾಗಿಯೂ ಯೋಗ್ಯರೇ ಅಲ್ಲ ಎಂದು ಅವರಿಗೇ ಅನ್ನಿಸಿಬಿಡುವಂತೆ ಮಾಡಿದ್ದ. ಆದರೆ ಈಗ...

ಹಾಳೆ ತಿರುಗಿಸಿದ. ಒಂದು ಚೆಕ್. ತನ್ನ ಇಷ್ಟು ದಿನದ ಸಂಬಳವನ್ನು ಲೆಕ್ಕ ಹಾಕಿ ಫೈನಲ್ ಸೆಟಲ್‌ಮೆಂಟ್ ಮಾಡಿದ್ದರು. ಹದಿನಾಲ್ಕು ದಿನದ ಸಂಬಳ ೭೦೦೦೦/-ರೂಪಾಯಿ. ಅಂದರೆ ತಿಂಗಳಿಗೆ ಒಂದೂವರೆ ಲಕ್ಷ. ನಿನ್ನೆತಾನೇ ಕೆಲಸಕ್ಕೆ ತೆಗೆದುಕೊಂಡ ಹತ್ತು ಜನರ ಒಟ್ಟು ಸಂಬಳ ತಿಂಗಳಿಗೆ ಒಂದು ಲಕ್ಷ ಮೀರುತ್ತಿರಲಿಲ್ಲ. ಅಂದರೆ ತನ್ನೊಬ್ಬನನ್ನು ತೆಗೆದಿದ್ದರಿಂದ ಹತ್ತುಜನಕ್ಕೆ ಕೆಲಸ ಕೊಟ್ಟು, ಇನ್ನೂ ಐದು ಜನರ ಸಂಬಳ ಉಳಿತಾಯವಾದಂತಾಯಿತು.

ಎಂ.ಡಿ. ಮುಖದ ಮೇಲೆ ಕವರನ್ನು ಎಸೆದು ನೀನೇನು ಕೆಲಸದಿಂದ ತೆಗೆಯುವುದು, ನಿನ್ನಂತಹ ತಗಡು ಕಂಪೆನಿಯಲ್ಲಿ ಕೆಲಸ ಮಾಡಲು ನನಗೇ ಇಷ್ಟವಿರಲಿಲ್ಲ ಎಂದು ತಾನೇ ರಾಜೀನಾಮೆ ಬಿಸಾಕಿದರೆ ಹೇಗೆ ಎಂದು ವಿಚಾರ ಮಾಡಿದ. ಆದರೂ ಏಳು ವರ್ಷದ ಹಿಂದೆ ಬರಿಗೈಯ್ಯಲ್ಲಿ ಬೆಂಗಳೂರಿಗೆ ಬಂದವನಿಗೆ ಆಶ್ರಯ ನೀಡಿ, ಕೋಟಿ ಬೆಲೆ ಬಾಳುವ ಅಪಾರ್ಟ್‌ಮೆಂಟು, ಮಿಲಯನ್ ಬೆಲೆ ಬಾಳುವ ಐಷಾರಾಮಿ ಕಾರು ಇವನ್ನೆಲ್ಲ ಸಂಪಾದಿಸಲು ದಾರಿಮಾಡಿಕೊಟ್ಟ ಕಂಪೆನಿಯನ್ನು ಹಾಗೆ ನಿಕೃಷ್ಟವಾಗಿ ಬಯ್ದರೆ ತಾನು ಕೃತಘ್ನ ಅನ್ನಿಸಿಕೊಳ್ಳಲಾರೆನೇ ಅನಿಸಿತು. ಆದರೆ ಕಾರು-ಮನೆ ನೆನಪಾಗುತ್ತಿದ್ದಂತೆಯೇ ಇನ್ನೆಷ್ಟು ಇನ್‌ಸ್ಟಾಲ್‌ಮೆಂಟ್ ಬಾಕಿಯಿದೆಯೋ ಎಂದು ಬ್ಯಾಂಕಿಗೆ ರಿಂಗಿಸಿದ. ಅರ್ಧದಷ್ಟು ಸಾಲ ತೀರಿದೆಯೆಂಬ ಉತ್ತರದಿಂದ ಸಮಾಧಾನಗೊಂಡ. ಆದರೆ ಇನ್ನೂ ಅರ್ಧಪಾಲು ಕಂತು ಕಟ್ಟದಿದ್ದರೆ ಆ ಬ್ಯಾಂಕಿನಿಂದ ಸಾಲ ವಸೂಲಾತಿಯ ಸುಪಾರಿ ಪಡೆದಿರುವ ರೌಡಿಗಳಂತಹವರು ಹುಡುಕಿಕೊಂಡು ಬಂದು ಮುಟ್ಟುಗೋಲು ಹಾಕಿಕೊಳ್ಳಲಾರರೇ ಎಂದೂ ಚಿಂತಿತನಾದ.

ಇದುವರೆಗೂ ತಮ್ಮ ಬಾಸ್ ಆಗಿದ್ದವನು ರಿಸೆಷನ್‌ಗೆ ಬಲಿಯಾಗಿದ್ದಾನೆಂದು ತಿಳಿದ ಸಹೋದ್ಯೋಗಿಗಳೆಲ್ಲ ತಮಗೆ ಏನೇನೂ ಗೊತ್ತೇ ಇಲ್ಲವೇನೋ ಎಂಬಂತೆ ನಟಿಸುತ್ತ, ಒಂದು ವಾರೆ ಕಣ್ಣನ್ನು ಇವನ ಮೇಲಿಟ್ಟು, ಇವನ ಎಲ್ಲ ತಲ್ಲಣ-ತಳಮಳಗಳನ್ನ ಖುಷಿಯಿಂದ ಅನುಭವಿಸುತ್ತ ತಮ್ಮ ಕೆಲಸದಲ್ಲಿ ತಾವು ತಲ್ಲೀನರಾದಂತೆ ಕುಳಿತಿದ್ದರು. ಈ ಕ್ಷಣದಲ್ಲೋ ಇನ್ನೊಂದು ಕ್ಷಣದಲ್ಲೋ ತಮಗೂ ಟರ್ಮಿನೇಷನ್ ಲೆಟರ್ ಬಂದುಬಿಡಬಹುದೆಂಬುದನ್ನೇ ಮರೆತು, 'ನಮ್ಮ ಮೇಲೇ ಬಾಸಿಜಂ ಮಾಡ್ತಿದ್ದ ಬಡ್ಡೀಮಗ, ಈಗ ಯಾರ ಮೇಲೆ ಮಾಡ್ತಾನೋ ಮಾಡಲಿ, ನೋಡೋಣ..' ಎಂದು ಸಿಟ್ಟಿನಿಂದ ಆಗಾಗ್ಗೆ ಇವನತ್ತ ಒಂದು ಕೊಂಕುನೋಟ ಹರಿಸುತ್ತಿದ್ದರು.


ಅರುಣ್‌ಗಾಂಧಿಗೆ ಯಾಕೋ ಯಾರಾದರೂ ತನ್ನನ್ನು ಗಮನಿಸುತ್ತಿದ್ದಾರೇನೋ ಅನ್ನಿಸಲಾರಂಭಿಸಿತು. ಒಮ್ಮೆ ಹಾಗೇ ದೃಷ್ಟಿ ಹಾಯಿಸಿದ. ಯಾರೂ ತನ್ನತ್ತ ನೋಡುತ್ತಿಲ್ಲ, ಆದರೆ ಎಲ್ಲರೂ ತನ್ನತ್ತಲೇ ನೋಡುತ್ತಿದ್ದಾರೆ ಎನ್ನಿಸಿ, ಮುಳ್ಳಿನ ಕುರ್ಚಿಯ ಮೇಲೆ ಕೂತಂತಹ ಅನುಭವವಾಗಿ, ಯಾರಿಗೂ ಕಾಣದಂತೆ ಎದ್ದು ಓಡಿಹೋಗಿಬಿಡಬೇಕು ಎನ್ನಿಸಿತು.
ಆದಾಗ್ಯೂ ಎಂ.ಡಿ.ಯನ್ನು ಒಮ್ಮೆ ಮಾತಾಡಿಸಿದರೆ ಹೇಗೆ ಅನ್ನಿಸಿ ಆ ಕೋಣೆಗೆ ಹೋದ. ಆತ ತಲೆಯೆತ್ತಿ ತನಗೆ ಎಲ್ಲಾ ಗೊತ್ತಿದೆ, ನೀನು ಹೇಳಬೇಕಾದ್ದು ಏನೂ ಇಲ್ಲ ಎನ್ನುವಂತೆ ಒಂದೇ‌ಒಂದು ತಿಳಿನಗೆ ಬೀರಿದ. ಗಾಂಧಿಗೆ ಇವನೊಂದಿಗೆ ಮಾತನಾಡುವುದರಿಂದ ಏನೂ ಪ್ರಯೋಜನವಿಲ್ಲ ಅನ್ನಿಸಿ ತಿರಸ್ಕಾರದಿಂದ ಎದ್ದುಬಂದ.
***

ಸೂಟ್‌ಕೇಸಿನಂತ ಲ್ಯಾಪ್‌ಟಾಪ್ ಚೀಲವನ್ನು ಟೀಪಾಯಿಯ ಮೇಲೆ ಎಸೆದು ಸೋಫಾದ ಮೇಲೆ ಕುಸಿದು ಕುಂತ. ಎದುರಿನ ಗೋಡೆಯ ಮೇಲೆ ನೇತುಹಾಕಿದ್ದ ಬೊಚ್ಚುಬಾಯಲ್ಲಿ ನಗುವ ಗಾಂಧಿಯ ಚಿತ್ರ ಕಣ್ಣಿಗೆ ಬಿತ್ತು. ತನ್ನ ಮಾಜಿ ಎಂ.ಡಿ.ಯಂತೆ ಗಾಂಧಿಯೂ ತನ್ನನ್ನು ಕಂಡು ತಿರಸ್ಕಾರದ ನಗೆ ನಕ್ಕಂತೆ ಭಾಸವಾಗಿ ಅವಮಾನವೆನಿಸಿತು.

ಈ ಗಾಂಧಿಯಿಂದಲೇ ಅಲ್ಲವೇ ತಾನು ಎಷ್ಟೆಲ್ಲಾ ಅವಮಾನ ಅನುಭವಿಸುವಂತಾಗಿದ್ದು ಎಂದು ಆ ಫೋಟೋವನ್ನೇ ಹೊಡೆದುಹಾಕಿಬಿಡುವಷ್ಟು ಸಿಟ್ಟುಬಂತು. ತಾನು ಪ್ರೈಮರಿಯಿದ್ದಾಗಿನಿಂದ ಹಿಡಿದು ಬಿ.ಇ. ಮಾಡುವವರೆಗೆ ಎಲ್ಲಾ ಕಡೆ, ಅಂತ ಗಾಂಧಿ.. ಇಂತ ಗಾಂಧಿ.. ಎಂದು ಗೆಳೆಯರು ಅಪಹಾಸ್ಯ ಮಾಡುತ್ತಿದ್ದರು.

ಒಂದು ಸಲ, ಈ ಹೆಸರು ತನಗೆ ಹೇಗೆ ಅಂಟುಕೊಂಡಿತು ಎಂಬ ಬಗ್ಗೆ ಸಂಶೋಧನೆ ಮಾಡಬೇಕೆಂಬ ಉಮೇದು ಬಂದಿತ್ತು. ಕೊರಳಪಟ್ಟಿ ಹಿಡಿದು ಕೇಳೋಣವೆಂದರೆ ಅಪ್ಪ ಸತ್ತು ಇಪ್ಪತ್ತು ವರ್ಷವಾಯಿತಂತೆ. ಅಮ್ಮ ಹೇಳಿದ್ದೇನೆಂದರೆ, ಏಳನೇ ಮಗನಾಗಿ ಗಾಂಧಿ ಹುಟ್ಟಿದ್ದರಿಂದ ಇವತ್ತು ಹೆಸರಿಡೋಣ, ನಾಳೆ ಹೆಸರಿಡೋಣ ಎಂದು ಹಂಗೇ ದಿನಗಳು ಜಾರಿಹೋಗಿ, ಮನೆಯಲ್ಲಿ ಪ್ರೀತಿಯಿಂದ ಕರೆಯುತ್ತಿದ್ದ ಪಾಪಚ್ಚಿ ಎಂಬ ಹೆಸರೇ ಉಳಿದುಬಿಟ್ಟಿತ್ತಂತೆ.

ಮನೆಮನೆಗೆ ಬಂದು ಶಾಲೆಗೆ ಸೇರಿಸಿಕೊಳ್ಳುವ ಅಭಿಯಾನದಲ್ಲಿ, ಆಟ ಆಡುತ್ತಿದ್ದ ಈತನನ್ನು ಹಿಡಿದ ಮೇಸ್ಟರು ಆರು ವರ್ಷ ಆಗಿದೆಯೇ ಎಂದು ಪರೀಕ್ಷಿಸಲು ಬಲಗೈಯ್ಯಿಂದ ಎಡಕಿವಿಯನ್ನು ಮುಟ್ಟಿಸಿ ನೋಡಿ, ಬರೆದುಕೊಳ್ಳಲು ಹೆಸರೇನೆಂದು ಕೇಳಿದಾಗಲೇ, ತನಗೆ ಹೆಸರೇ ಇಟ್ಟಿರದಿದ್ದುದರ ಅರಿವಾಗಿದ್ದಂತೆ. ಡೇಟ್ ಆಫ್ ಬರ್ತ್ ಕಾಲಂ ಬರೆದುಕೊಳ್ಳುವಾಗ ಹೆಸರೇ ಗೊತ್ತಿಲ್ಲ ಅಂದ ಮೇಲೆ ಡೇಟ್ ಇನ್ನೇನು ಗೊತ್ತಿರುತ್ತೆ ಅಂತ ಪಕ್ಕದವನೊಂದಿಗೆ ಮೇಸ್ಟರು ತಮಾಷೆ ಮಾಡುತ್ತಿದ್ದಾಗ, 'ನನಗೆ ಗೊತ್ತು..' ಅಂತ, ಆತನ ಅಣ್ಣ ಓಡಿಹೋಗಿ ತನ್ನ ಎಕ್ಸೈಜ್ ಪುಸ್ತಕದಲ್ಲಿ ತಮ್ಮ ಹುಟ್ಟಿದ್ದ ದಿನಾಂಕ ಬರೆದು ಇಟ್ಟಿದ್ದನ್ನು ಹುಡುಕಿ ತಂದುಕೊಟ್ಟನಂತೆ. ಈತನ ಬರ್ತ್‌ಡೇ ಅಕ್ಟೋಬರ್ ಎರಡು ಎಂದಿರುವುದನ್ನು ಆಶ್ಚರ್ಯದಿಂದ ನೋಡಿದ ಹಳೇಕಾಲದ ಆ ಮೇಸ್ಟರು, 'ಈ ಪ್ರಜಾಪ್ರಭುತ್ವದಲ್ಲಿ ಯಾರ್‍ಯಾರು ಏನೇನು ಆಗ್ತಾರೋ ಯಾರಿಗೆ ಗೊತ್ತು..' ಎಂದು ಗೊಣಗಿಕೊಂಡು, ಈ ಹುಡುಗನೂ ಮುಂದೆ ದೊಡ್ಡವ್ಯಕ್ತಿಯೇ ಆಗಿಬಿಡಲಿ ಎನ್ನುವಂತೆ 'ಗಾಂಧಿ' ಎಂದು ನಾಮಕರಣ ಮಾಡಿಬಿಟ್ಟರಂತೆ.

ಮುಂದೆ ದೊಡ್ಡವನಾಗಿ ಕಾಲೇಜು ಓದುವಾಗ ಒಮ್ಮೆ ಗಾಂಧಿ ಎಂಬ ಈ ಹೆಸರಿನಿಂದ ಬಹಳ ಮುಜುಗರವಾಗಿ ಹೆಸರನ್ನು ಬದಲಾಯಿಸಿಕೊಂಡುಬಿಡೋಣವೆಂದು ನಿರ್ಧರಿಸಿ ನೋಟರಿ ಬಳಿಗೆ ಹೋಗಿದ್ದನಂತೆ. 'ಗಾಂಧಿ ಎಂದಿರುವ ನನ್ನ ಹೆಸರನ್ನು ಅರುಣ್ ಎಂದು ಬದಲಾಯಿಸಿಕೊಂಡಿರುತ್ತೇನೆ' ಎಂದು ಬಾಂಡ್‌ಪೇಪರ್‌ನಲ್ಲಿ ಅಫಿಡೆವಿಟ್ ಬರೆದುಕೊಂಡು ನೋಟರಿಯ ಮುಂದೆ ಇಟ್ಟಾಗ ಅವರು ಇವನ ಮುಖವನ್ನೊಮ್ಮೆ ನೋಡಿ ಆ ಹೆಸರಿಗಿರುವ ಗೌರವಗಳನ್ನೆಲ್ಲ ಪಟ್ಟಿಮಾಡಿ ಉಪದೇಶಿಸಿ, 'ಅರುಣ್‌ಗಾಂಧಿ' ಎಂದು ಬೇಕಾದರೆ ಬದಲಾಯಿಸಿಕೋ ಎಂದು ಸಲಹೆ ನೀಡಿದರಂತೆ. ಅಂದಿನಿಂದಲೇ ಈ ಗಾಂಧಿ ಅರುಣ್‌ಗಾಂಧಿ ಆದದ್ದಂತೆ.
ನೆಲದಲ್ಲಿ ಓಡಾಡಲೇ ವಾಹನವಿಲ್ಲದೇ ಬೆಳೆದ ಅರುಣ್‌ಗಾಂಧಿ ಆಗಸದಲ್ಲಿ ತೇಲುವ ಆ ವಿಮಾನದಲ್ಲಿ ಎಂದಾದರೊಂದು ದಿನ ವಿದೇಶಕ್ಕೆ ಹಾರಬಹುದೆಂಬುದರ ಕಲ್ಪನೆಯನ್ನೇ ಮಾಡಿರಲಿಲ್ಲ. ಆದರೆ ಕೊನೆಯ ವರ್ಷದಲ್ಲಿ ಓದುವಾಗಲೇ ಜ್ಞಾನದ ಬಲದಿಂದ ಕ್ಯಾಂಪಸ್ ಸೆಲೆಕ್ಷನ್ ಮಾಡಿಕೊಂಡ ಕಂಪೆಯೊಂದು ನಿನ್ನ ಬಳಿ ಕಾರಿದೆಯಾ? ಬೈಕಿದೆಯಾ? ಎಂದು ಕೇಳಿರಲಿಲ್ಲ. ವಿಮಾನದಲ್ಲಿ ಹಾರಿಸಿ ವಿದೇಶಕ್ಕೆ ಕಳುಹಿಸಿತ್ತು.

ಇಲ್ಲಿ ಗಾಂಧಿ ಎಂಬ ಈ ಹೆಸರಿನಿಂದ ಎಷ್ಟೇ ಅವಮಾನ ಆಗಿದ್ದರೂ, ಅಲ್ಲೆಲ್ಲಾ ಎಷ್ಟೊಂದು ಗೌರವ ಸಿಗುತ್ತಿತ್ತೆಂದರೆ ಅದನ್ನು ವರ್ಣಿಸಲೇ ಸಾಧ್ಯವಿಲ್ಲ. ಆ ಗಾಂಧಿಯ ವಂಶದ ಕುಡಿಯೇ ಇರಬಹುದೆಂದುಕೊಂಡು ಅನೇಕರು ಅಭಿಮಾನ ತೋರುತ್ತಿದ್ದರು. ಇನ್ನು ಕೆಲವರು ಇಂದಿರಾಗಾಂಧಿಯ ಫ್ಯಾಮಿಲಿಯವರಿರಬೇಕು ಎಂದು ಗೌರವ ತೋರುತ್ತಿದ್ದರು. ಒಟ್ಟಿನಲ್ಲಿ ಬಹುಪಾಲು ಕೆಲಸಗಳು ಸುಲಲಿತವಾಗಿ ಆಗಿಬಿಡುತ್ತಿದ್ದವು.

ಗಾಂಧಿಯ ಫೋಟೋವನ್ನು ಮತ್ತೊಮ್ಮೆ ಹಾಗೆಯೇ ದಿಟ್ಟಿಸಿನೋಡಿದ.. ಏಕತಾನತೆಯಿಂದ ನೋಡಿದ.. ಫೋಟೋದ ಆ ನಗುವಿನಲ್ಲಿ ಏನೋ ಒಂದು ರೀತಿಯ ಆತ್ಮೀಯತೆ ಇತ್ತು, ಪ್ರೀತಿ ಇತ್ತು, ಶಾಂತಿ ಇತ್ತು.. ಬುದ್ಧನ ಮಂದಹಾಸದಲ್ಲಿ, ಬಾಹುಬಲಿಯ ಸ್ಥಿತಪ್ರಜ್ಞತೆಯಲ್ಲಿ, ಬಸವಣ್ಣನ ಅಂತರ್ಮುಖತೆಯಲ್ಲಿ ಏನೆಲ್ಲಾ ಇರಬಹುದೋ ಅಂಥದೆಲ್ಲಾ ಗಾಂಧಿಯ ಆ ನಗುವಿನಲ್ಲೂ ಕಾಣಲಾರಂಭಿಸಿತು....

ಯಾಕೋ ಗಾಂಧಿ ಎಂದಿಗಿಂತಲೂ ಇಂದು ಹೆಚ್ಚು ಆಕರ್ಷಿತನಾಗಿ ಕಂಡ. ಯಾವತ್ತೂ ಗಾಂಧಿಯನ್ನು ನೋಡಿರಲಿಲ್ಲವೇನೋ ಎನ್ನುವಂತೆ ಮತ್ತೆ ಮತ್ತೆ ನೋಡಲಾರಂಭಿಸಿದ. ನೋಡಿದಷ್ಟೂ ಇನ್ನೂ ಇನ್ನೂ ನೋಡಬೇಕೆನಿಸುವಂತೆ, ಆತನ ನಗುವಿನ ಆಳದಲ್ಲಿ ಇನ್ನೂ ಏನೇನೋ ಇರಬಹುದೆನ್ನಿಸುವಂತೆ ಭಾಸವಾಗಲಾರಂಭಿಸಿತು.. ಗಾಂಧಿಯ ಆ ಚಿತ್ರದಲ್ಲಿ ತನ್ನನ್ನೇ ತಾನು ಕಾಣಲಾರಂಭಿಸಿದ.. ತಾನು ಕೆಲಸ ಕಳೆದುಕೊಂಡಿರುವ ಈ ಸಂದರ್ಭದಲ್ಲಂತೂ ಆ ಗಾಂಧಿ ಯಾಕೋ ಇನ್ನೂ ಹೆಚ್ಚು ಹೆಚ್ಚು ಆತ್ಮೀಯವೆನ್ನಿಸಲಾರಂಭಿಸಿದ..

***

ಹೊರಗೆಬಂದರೆ ಅವಮಾನವೆಂದು ವಾರಗಟ್ಟಲೆ ಮನೆಯಲ್ಲಿ ಕುಂತ ಗಾಂಧಿ ಇಂಟರ್‌ನೆಟ್‌ನ್ನೆಲ್ಲಾ ಶೋಧಿಸಿ ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲಾ ತನ್ನ ರೆಜ್ಯೂಮ್ ಜತೆ ಅರ್ಜಿಹಾಕಿದ. ವಿದೇಶಗಳಲ್ಲಿರುವ ಅವಕಾಶಗಳನ್ನೆಲ್ಲಾ ತಡಕಾಡಿದ. ಆದರೆ ಎಲ್ಲೆಲ್ಲೂ ಕೆಲಸ ಸಿಗದೇ ಪರದಾಡಿದ. ಮನೆಯಿಂದ ಹೊರಗೆ ಬಂದು ಪರಿಚಯವಿರುವ ಕಡೆಗಳಲ್ಲೆಲ್ಲಾ ಅಲೆದು ಕೆಲಸ ಹುಡುಕೋಣವೆಂದರೆ, ಹಿಂದೆ ತಾನಿದ್ದ ಕಂಪೆನಿಯ ಓನರ್ ತಾನೇ ಎನ್ನುವಂತೆ ಆ ಕಂಪೆನಿಗಳಿಗೆಲ್ಲ ಸ್ಪರ್ಧೆಯೊಡ್ಡಿದ್ದ. ಈಗ ಕೆಲಸ ಕೇಳಲು ಹೋದರೆ ಬಿಡುತ್ತಾರಾ.. ಅವಮಾನ ಮಾಡುತ್ತಾರೆ.. ಒಂದು ವೇಳೆ ಅವಮಾನ ಮಾಡುವುದಿಲ್ಲವೆಂದುಕೊಂಡರೂ, ನಾಳೆ ಆ ಕಂಪೆನಿಯೂ ಮುಚ್ಚಲಾರದೆಂಬ ಖಾತ್ರಿಯೇನು?

ಈ ತಿಂಗಳು ಮನೆಯ ಕಂತನ್ನು ಕಟ್ಟಲಿಲ್ಲವೆಂದು ಹೆಂಡತಿ ನೆನಪು ಮಾಡಿದಳು. ಬಂದ ಸಂಬಳದ ಕೊನೆಯ ಕಂತನ್ನು ಸಾಲಕ್ಕೆ ಕಟ್ಟಿಬಿಟ್ಟರೆ ಮುಂದೆ ಕೆಲಸ ಸಿಗುವವರೆಗೆ ಹೊಟ್ಟೆಗೇನು ತಿನ್ನುವುದು? ಹೆಂಡತಿಯನ್ನು ಹೇಗೆ ಸಾಕುವುದು? ಹೋದವರ್ಷ ತಾನೇ ಅದ್ದೂರಿಯಾಗಿ ಮದುವೆಯಾಗಿದ್ದ. ವಿದೇಶೀ ಕಂಪೆನಿಯಲ್ಲಿ ಕೆಲಸ, ಒಂದೂವರೆ ಲಕ್ಷ ಸಂಬಳ ಎಂದು ಅಮ್ಮ ಹೆಣ್ಣಿನವರ ಮುಂದೆ ಕೊಚ್ಚಿಕೊಂಡು ಇಷ್ಟುದಪ್ಪ ವರದಕ್ಷಿಣೆ ಕೊಡಲೇಬೇಕೆಂದು ಪಟ್ಟುಹಿಡಿದಿದ್ದಳು. ಆದರೆ ಹುಡುಗಿಯ ತಂದೆ ಮುಗುಳ್ನಕ್ಕು, ತನ್ನ ಜೀವಮಾನದಲ್ಲಿ ಕಂಡು ಕೇಳರಿಯದಷ್ಟು ಕೊಡುತ್ತೇನೆಂದು ಸ್ವತಃ ಘೋಷಿಸಿದಾಗ ಅವ್ವ ತಬ್ಬಿಬ್ಬಾಗಿ ಸಣ್ಣವಳೆನಿಸಿಬಿಟ್ಟಿದ್ದಳು. ಬರೀ ಬಾಯಲ್ಲಿ ಹೇಳುತ್ತಾರಷ್ಟೇ, ನಿಜವಾಗಿಯೂ ಕೊಡುತ್ತಾರಾ.. ಎಂದು ಮಗನ ಮುಂದೆ ಆತಂಕ ತೋಡಿಕೊಂಡಿದ್ದಳು.
ಬ್ಯಾಂಕಿನಿಂದ ಫೋನು ಮಾಡಿದ ಮ್ಯಾನೇಜರ್ ಕಾರಿನ ಕಂತು ಬರಲಿಲ್ಲವೆಂದ. ಇವನು ತಡವರಿಸುತ್ತ ಮುಂದಿನ ವಾರ ಕಟ್ಟುತ್ತೇನೆಂದ. ಆದರೆ ಆತ, 'ನಿಮ್ಮನ್ನ ಕೆಲಸದಿಂದ ತೆಗೆದುಹಾಕಿದರಂತೆ, ಹೌದಾ ಸಾರ್..?' ಎಂದು ಕೊಂಕು ಬೇರೆ ಸೇರಿಸಿದ. ಇವೆಲ್ಲ ಇವನಿಗೇಕೆ ಬೇಕು ಅನ್ನಿಸಿ, ಕೈಗೆ ಸಿಕ್ಕಿದರೆ ನಾಲ್ಕು ತದುಕಿಬಿಡಬೇಕೆನಿಸಿತು.

ಮನೆಯಲ್ಲಿ ಕುಂತುಕುಂತು ಏಕತಾನತೆಯಿಂದ ಮಂಕು ಹಿಡಿದಂತಾಯಿತು. ಒಂದು ದಿನಪೂರ್ತಿ ಹೊರಗೆ ಹೋಗದೇ ಮನೆಯೊಳಗೇ ಇದ್ದರೆ ತನಗೇ ಹೀಗಾಗುತ್ತಲ್ಲ, ಇನ್ನು ಮನೆಯೊಳಗಿನ ಹೆಂಗಸರಿಗೆ, ಜೈಲಲ್ಲಿರುವ ಕೈದಿಗಳಿಗೆ ಹೇಗನ್ನಿಸುತ್ತದೆಯೋ ಎಂದು, ತನ್ನನ್ನು ಇತರರಿಗೆ ಹೋಲಿಸಿಕೊಂಡು ಸಮಾಧಾನಪಟ್ಟುಕೊಂಡ. ಪರಿಚಯವಿದ್ದ ಯಾರಿಗಾದರೂ ತಕ್ಷಣಕ್ಕೆ ಗುರುತು ಸಿಕ್ಕದಂತಿರಲಿ ಎಂದು ತಲೆಗೆ ಟೋಪಿ, ಕಣ್ಣಿಗೆ ಕನ್ನಡಕ ಹಾಕಿಕೊಂಡು ಹೊರಹೊರಟ. ಆದರೆ ಬೆಂಗಳೂರಂತ ಬೆಂಗಳೂರಿನ ಜನ ಇವನನ್ನು ಕೇರೇ ಮಾಡಲಿಲ್ಲ. ಅಂತಹ ದೊಡ್ಡ ಕಂಪೆನಿಯೊಂದರ ಡೆಪ್ಯುಟಿ ಮ್ಯಾನೇಜರ್ ಕೆಲಸ ಕಳೆದುಕೊಂಡು ಬೀದಿಗೆ ಬಿದ್ದಿದ್ದಾನೆಂದರೆ ಯಾರೊಬ್ಬರೂ ಕನಿಷ್ಟ ಸೌಜನ್ಯಕ್ಕಾಗಿಯಾದರೂ ತನ್ನ ಕಡೆ ಮುಖ ತಿರುಗಿಸಿಯೂ ನೋಡದೇ, ತಮಗೂ ಇದಕ್ಕೂ ಸಂಬಂಧವೇ ಇಲ್ಲವೆನ್ನುವಂತೆ, ತಮ್ಮ ಪಾಡಿಗೆ ತಾವು ಇನ್ನೊಬ್ಬರನ್ನು ಹಿಂದೆ ಹಾಕುವ ಭರದಲ್ಲಿ ಓಡುತ್ತಲೇ ಇದ್ದಾರಲ್ಲ ಅನ್ನಿಸಿತು. ಆದರೂ ಒಂದು ಥರಾ ನೆಮ್ಮದಿ, ಸಮಾಧಾನ ಎನಿಸಿತು. ಆದರೆ ಸತತವಾಗಿ ಯಾರೂ ತನ್ನನ್ನು ಮಾತನಾಡಿಸದಾದಾಗ ಕೋಟಿ ಜನರಿರುವ ಬೆಂಗಳೂರಿನಲ್ಲಿ ತಾನೊಬ್ಬನೇ ಒಂಟಿ ಎನಿಸಲಾರಂಭಿಸಿತು. ಟೋಪಿ, ಕನ್ನಡಕ ಎಲ್ಲವನ್ನೂ ತೆಗೆದುಹಾಕಿ ಯಾರಾದರೂ ತನ್ನನ್ನು ಮಾತನಾಡಿಸಬಾರದೇ ಎಂದು ಹಪಹಪಿಸಲಾರಂಭಿಸಿದ.

ಅಪಾರ್ಟ್‌ಮೆಂಟಿನ ಹದಿನಾರನೇ ಮಹಡಿಯಲ್ಲಿರುವ ತನ್ನ ಮನೆಗೆ ಬಂದು ಕುಕ್ಕರಿಸಿ ಕುಂತ. ಫ್ಯಾನು ಹಾಕುವಂತೆ ಹೆಂಡತಿಗೆ ಹೇಳಿದ. ಆದರೆ ಬೆಸ್ಕಾಂನವರು ಕರೆಂಟ್‌ಬಿಲ್ ಕಟ್ಟಿಲ್ಲವೆಂದು ಫ್ಯೂಜ್ ಕಿತ್ತುಕೊಂಡುಹೋಗಿರುವುದಾಗಿ ಹೆಂಡತಿ ಹೇಳಿದಾಗ, 'ಈ ನನ್ಮಕ್ಕಳದು ಬಹಳ ರೂಲ್ಸು. ಬಂದು ಕಟ್ಟಕ್ಕೆ ಪುರುಸೊತ್ತಾಗಿಲ್ಲ, ಕಟ್ಟುಸ್ತೀನಿ ಅಂತ ಹೇಳಕ್ಕಾಗಲಿಲ್ಲವಾ..' ಎಂದು ಹೆಂಡತಿಗೆ ರೇಗಿದ. ಆದರೆ ಆಕೆ 'ನಿಮಗೇ ಬಿಲ್ ಕಟ್ಟೋಕ್ಕೆ ಯೋಗ್ಯತೆಯಿಲ್ಲ.. ಅವರ ಬಗ್ಗೆ ಮಾತಾಡ್ತೀರಾ..' ಎಂದು ರಪ್ಪನೆ ಮುಖಕ್ಕೆ ಹೊಡೆದಂತೆ ಮಾತಾಡಿಬಿಟ್ಟಳು. ಇತ್ತೀಚೆಗೆ ಕೆಲಸವಿಲ್ಲದ ತನ್ನನ್ನು ತನ್ನ ಹೆಂಡತಿಯೂ ನಿಕೃಷ್ಟವಾಗಿ ಕಾಣಲಾರಂಭಿಸಿದ್ದಾಳೆ ಅನ್ನಿಸಲಾರಂಭಿಸಿತು.

ಗಾಂಧಿಫೋಟೋ ಯಾಕೋ ಮತ್ತೆ ತನ್ನನ್ನೇ ನೋಡಿ ನಕ್ಕಂತಾಯಿತು. ಎತ್ತ ಹೋದರೆ ಅತ್ತ ತಿರುಗಿ ನೋಡುತ್ತಿರುವಂತೆನಿಸಿತು. ಸಿಟ್ಟಿನಿಂದ ದಿಟ್ಟಿಸಿ ನೋಡಿದ. ಗಾಂಧಿ ಏನಾದರೂ ತನ್ನ ಅಪ್ಪನೋ ತಾತನೋ ಆಗಿದ್ದರೆ ಕೊರಳಪಟ್ಟಿ ಹಿಡಿದು ಕೇಳಬಹುದಿತ್ತು ಅನಿಸಿತು. ಲಂಚ್ ವೇಳೆ ಬಿಚ್ಚಿಕೊಂಡ ಟಿಫನ್‌ಬಾಕ್ಸ್‌ಗಳ ಮುಂದೆ ಗೆಳೆಯರು ಮಾತಾಡುವಾಗ ಈ ಗಾಂಧಿಯಿಂದಲೇ ನಮ್ಮ ದೇಶ ಹಾಳಾಗಿದ್ದು ಎಂದು ವಿತಂಡವಾದ ಮಾಡುತ್ತಿದ್ದುದು ನೆನಪಾಯಿತು. ನಿಜವಾಗಿಯೂ ಗಾಂಧಿಯಿಂದ ನಮ್ಮ ದೇಶಕ್ಕೆ ಎಷ್ಟು ಲಾಭವಾಯಿತು, ಎಷ್ಟು ನಷ್ಟವಾಯಿತು ಎಂದು ಒಂದು ಸಮೀಕ್ಷೆಯನ್ನೇ ಮಾಡಿಬಿಡಬೇಕೆಂಬ ಮನಸ್ಸಾಯಿತು.

***

ಪ್ರತಿದಿನ ತಪ್ಪದೇ ಗಾಂಧಿಭವನಕ್ಕೆ ಬರಲಾರಂಭಿಸಿದ ಅರುಣ್‌ಗಾಂಧಿ, ಗಾಂಧಿಸಾಹಿತ್ಯವನ್ನೆಲ್ಲಾ ತಿಂದುಬಿಡುವಂತೆ ಓದಲಾರಂಭಿಸಿದ. ತನ್ನ ಕ್ಷೇತ್ರಕ್ಕೆ ಸಂಬಂಧಿಸಿದ್ದು ಎಂಬ ಕಾರಣಕ್ಕೋ ಏನೋ ಗಾಂಧಿಯ ಆರ್ಥಿಕ ಚಿಂತನೆಗಳ ಬಗ್ಗೆ ಆಸಕ್ತನಾದ. ಗಾಂಧಿಯ ಬಗ್ಗೆ ಇನ್ನೂ ಏನೇನೋ ಓದಿದ. ಒಬ್ಬ ಆಧುನಿಕ ಮನೋಧರ್ಮದ ತನ್ನಂತಹವನನ್ನು ಸೆಳೆಯಲು ಆ ಗಾಂಧಿಗೆ ಸಾಧ್ಯವೇ ಇಲ್ಲ ಎಂದುಕೊಂಡಿದ್ದ ಅರುಣ್‌ಗಾಂಧಿಯಂತಹ ಅರುಣ್‌ಗಾಂಧಿಯೇ ಜೀ.. ಎಂದು ಮಾರುಹೋಗಿಬಿಟ್ಟ.
ಕಂತುಗಳನ್ನು ಸರಿಯಾಗಿ ಕಟ್ಟಲಿಲ್ಲವೆಂದು ಮನೆಯನ್ನು, ಕಾರನ್ನು ಮುಟ್ಟುಗೋಲು ಹಾಕಿಕೊಳ್ಳಲು ಬ್ಯಾಂಕಿನವರು ಬಂದಾಗ ಆಶ್ಚರ್ಯವೆಂಬಂತೆ ತಾನೇ ಮುಂದೆ ನಿಂತು ಅವನ್ನೆಲ್ಲಾ ಅವರಿಗೆ ಬಿಟ್ಟುಕೊಟ್ಟ. ಅಡ್ಡಬಂದ ಹೆಂಡತಿಗೆ, ಇಲ್ಲಿಗೆ ಬರುವಾಗ ಏನನ್ನೂ ತಂದಿರಲಿಲ್ಲ, ಹೋಗುವಾಗಲೂ ಏನನ್ನೂ ತೆಗೆದುಕೊಂಡು ಹೋಗುವುದಿಲ್ಲ.. ಏನನ್ನಾದರೂ ಗಳಿಸಿದ್ದರೆ ಅದು ಇಲ್ಲಿಯೇ, ಏನನ್ನಾದರೂ ಕಳೆದುಕೊಂಡರೂ ಅದು ಇಲ್ಲಿಯೇ.. ಎಂದು ಭಗವದ್ಗೀತೆಯ ಉಪದೇಶ ಮಾಡಿದ. ಆದರೆ ಈಗಾಗಲೇ ಕಟ್ಟಿರುವ ಕಂತಿನ ವ್ಯತ್ಯಾಸದ ಮೊತ್ತವನ್ನಾದರೂ ಹಿಂದಿರುಗಿಸುವಂತೆ ಬ್ಯಾಂಕಿನವರೊಂದಿಗೆ ಜಗಳ ಮಾಡಿ ಆಕೆ ಒಪ್ಪಿಸಿಕೊಂಡಳು.

***

ಗಾಂಧಿಜಯಂತಿಯ ದಿನ ಗಾಂಧೀಭವನದ ಸಭಾಭವನದಲ್ಲಿ ಖಾದಿ ಅಂಗಿ ತೊಟ್ಟು ಬಂದ ಯುವಕನನ್ನು ಕಂಡು ಎಲ್ಲರೂ ಆಶ್ಚರ್ಯಚಕಿತರಾದರು. ಅಲ್ಲೆಲ್ಲಾ ಗಾಂಧಿಯ ಒಡನಾಟದಲ್ಲಿದ್ದ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಿದ್ದರು. ಅವರೆಲ್ಲರ ವಯಸ್ಸು ಕನಿಷ್ಟ ಎಪ್ಪತ್ತೈದನ್ನು ಮೀರಿತ್ತು. ಆದರೆ ಗಾಂಧಿ ಸತ್ತು ಮುವತ್ತು ವರ್ಷ ಆದಮೇಲೆ ಹುಟ್ಟಿರಬಹುದಾದ ಏಕೈಕ ಯುವಕ ಇವತ್ತು ತಮ್ಮ ಕಾರ್ಯಕ್ರಮಕ್ಕೆ ಬಂದಿದ್ದು ತುಂಬಾ ಖುಷಿಯಾಗಿದೆ ಎನ್ನುತ್ತಾ, ಎಲ್ಲರೂ ತಮ್ಮ ಹಳೆಯಕಾಲದ ನೆನಪಿನ ಬುತ್ತಿಯನ್ನು ಬಿಚ್ಚಿ, ಬೇಡಬೇಡವೆಂದರೂ ಒತ್ತಾಯಪೂರ್ವಕವಾಗಿ ತುರುಕುತ್ತಾ ಬೋರು ಹೊಡೆಸುತ್ತಿದ್ದರು.
ರೋಸಿಹೋದ ಅರುಣ್‌ಗಾಂಧಿ ಎದ್ದುನಿಂತ. ನಿಜವಾಗಲೂ ಗಾಂಧಿಯನ್ನು ಕೊಂದದ್ದು ನೀವೇ ಎಂದು ನೇರ ಆರೋಪ ಮಾಡಿದ. ಗಾಬರಿಗೊಂಡ ಅವರೆಲ್ಲ ಈತ ಯಾವುದಾದರೂ ಸಂಘದ್ದೋ ಪರಿವಾರದ್ದೋ ಕಟ್ಟಾಬೆಂಬಲಿಗನೇ ಇರಬೇಕೆಂದು ಒಂದು ಕ್ಷಣ ಹೌಹಾರಿದರು.

'ಗಾಂಧಿ ನೀವು ತಿಳಿದಂತೆ ಹುಟ್ಟುತ್ತಲೇ ಬಹಳ ದೊಡ್ಡ ವ್ಯಕ್ತಿಯೇನಾಗಿರಲಿಲ್ಲ.. ಆದರೆ ಸಂದರ್ಭ ಅವರನ್ನು ದೊಡ್ಡವರನ್ನಾಗಿ ಮಾಡಿತು. ಅವತ್ತು ಭಾರತಕ್ಕೆ ಸ್ವಾತಂತ್ರ್ಯದ ದರ್ದು ಇರದಿದ್ದರೆ ಗಾಂಧಿ ಕೇವಲ ಒಬ್ಬ ಒಳ್ಳೆಯ ಲಾಯರ್ ಆಗಿದ್ದುಕೊಂಡು ಸತ್ತುಹೋಗಿರುತ್ತಿದ್ದರು. ಅಷ್ಟೇ.. ನಿಮಗೆ ಯಾರಿಗೂ ಗಾಂಧಿ ಅರ್ಥವೇ ಆಗಿಲ್ಲ. ನೀವು ಯಾರೂ ಗಾಂಧಿಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿಯೂ ಇಲ್ಲ..' ಎಂದು ಮಾತು ಆರಂಭಿಸಿದವನು ತನಗೇ ಅರಿವಿಲ್ಲದೇ ಮೈಮರೆತು ಮಾತನಾಡಿಬಿಟ್ಟ. 'ಗಾಂಧಿ ಇಡೀ ರಾಷ್ಟ್ರವನ್ನು, ರಾಷ್ಟ್ರದ ಭವಿಷ್ಯವನ್ನು ಕಣ್ಣಮುಂದೆ ಇಟ್ಟುಕೊಂಡಿದ್ದರು. ಹಾಗೆ ಸಮಗ್ರವಾಗಿ ನೋಡಿದಾಗ ಮಾತ್ರ ಒಂದು ಸ್ಪಷ್ಟ ಚಿತ್ರಣ ಸಿಗಲು ಸಾಧ್ಯ. ಇನ್ನೂರೈವತ್ತು ವರ್ಷಗಳ ಹಿಂದೆಯೇ ಹುಟ್ಟಿದ ಅಮೆರಿಕಾದಂತಹ ರಾಷ್ಟ್ರವೊಂದು ಒಂದೇ ಒಂದು ಆರ್ಥಿಕ ಹಿಂಜರಿತವನ್ನು ತಡೆದುಕೊಳ್ಳಲು ಸಾಧ್ಯವಾಗದೇ ಪರದಾಡುತ್ತಿರುವಾಗ, ಭಾರತಕ್ಕೆ ಅದರ ಬಿಸಿಯೇ ತಟ್ಟಿಲ್ಲವೆಂದರೆ ಅದು ಗಾಂಧೀಜಿಯವರ ದೂರದೃಷ್ಟಿಯಿಂದ ಮಾತ್ರ ಸಾಧ್ಯವಾದದ್ದು.. ಈವತ್ತು ನಾವು ನಮ್ಮ ಮೇಲೆ ಅವಲಂಬಿತರಾಗಿದ್ದೇವೆ, ಆದರೆ ಇತರರು ಇನ್ನಿತರರ ಮೇಲೆ ಅವಲಂಬಿತರಾಗಿದ್ದಾರೆ. ಅಷ್ಟೇ..

'ಇದುವರೆಗೆ ನಾನೂ ಇನ್ನೊಬ್ಬರ ಮೇಲೆ ಅವಲಂಬಿತನಾಗಿ ಫ್ಲಾಟು, ಕಾರು ಎಲ್ಲವನ್ನೂ ಮಾಡಿಕೊಂಡಿದ್ದು ನಿಜ. ಆದರೆ ನಾನು ನಂಬಿದ್ದ ಒಂದು ಸಣ್ಣ ಕೆಲಸ ಕೈತಪ್ಪುತ್ತಿದ್ದಂತೆಯೇ ನನ್ನದಾಗಿದ್ದ ಎಲ್ಲವೂ ನನ್ನದಾಗಲಿಲ್ಲ. ನಾನು ಸಾಲವನ್ನು ತೀರಿಸಲಾಗದಿದ್ದರಿಂದ, ಬ್ಯಾಂಕಿನ ಹೆಸರಿನಲ್ಲಿದ್ದ ಎಲ್ಲವೂ ಅವರ ಪಾಲಾಯಿತು. ನಾನು ಎಂಬುವ ನಾನು ನನ್ನ ಮೇಲೆ ಅವಲಂಬಿತನಾಗಿದ್ದರೆ ಹೀಗಾಗುತ್ತಿತ್ತೆ? ಇದು ಒಂದು ಸಣ್ಣ ಉದಾರಹಣೆಯಷ್ಟೇ..

'ಹೀಗಾಗಿ ಗಾಂಧಿ ನನಗೆ ಕೇವಲ ಒಬ್ಬ ಸ್ವಾತಂತ್ರ್ಯ ಹೋರಾಟಗಾರನಾಗಿ, ಒಬ್ಬ ರಾಜಕಾರಿಣಿಯಾಗಿ ಮಾತ್ರ ಕಾಣುತ್ತಿಲ್ಲ.. ಬದಲಾಗಿ ಒಬ್ಬ ಅರ್ಥಶಾಸ್ತ್ರಜ್ಞನಂತೆ ಕಾಣುತ್ತಿದ್ದಾನೆ.. ಒಬ್ಬ ಸಮಾಜಶಾಸ್ತ್ರಜ್ಞನಂತೆ ಕಾಣುತ್ತಿದ್ದಾನೆ.. ಹೀಗೇ.. ಏನೆಲ್ಲ ಆಗಿ ಕಾಣುತ್ತಿದ್ದಾನೆ..

'ಒಂದೇ ಗೆರೆಯಲ್ಲಿ ಗಾಂಧಿಯನ್ನು ಬರೆಯಿರಿ ಎಂದರೆ ಕಲಾವಿದರು ಒಂದು ಕ್ವೆಶ್ಚನ್‌ಮಾರ್ಕ್ ಬರೆದುಬಿಡುತ್ತಾರೆ.. ನಿಜವಾಗಿಯೂ ಗಾಂಧಿ ಪ್ರಶ್ನಾರ್ಥಕ ಚಿಹ್ನೆಯೇ! ಆದರೆ ಬರೀ ಪ್ರಶ್ನೆಯಾಗಿ ಮಾತ್ರ ಉಳಿದುಬಿಡುವುದಿಲ್ಲ... ಬದಲಾಗಿ ಎಲ್ಲರಿಗೂ, ಎಲ್ಲದಕ್ಕೂ ಉತ್ತರವಾಗಿಯೂ ಕಾಣಲಾರಂಭಿಸುತ್ತಾರೆ.. ಕಾಡಲಾರಂಭಿಸುತ್ತಾರೆ.. ಅದೇ ಅವರ ಶಕ್ತಿ...' ಎಂದು ಭಾಷಣ ಮಾಡಿ ಕುಳಿತ.
ಗಾಂಧಿಯನ್ನು ಮುಂದುವರೆಸಿಕೊಂಡು ಹೋಗಲು ಪರ್ಯಾಯ ಸಿಕ್ಕಂತಹ ಧನ್ಯತಾಭಾವ ವಯೋವೃದ್ಧರ ಮುಖದಲ್ಲೆಲ್ಲ ಕುಣಿಯಲಾರಂಭಿಸಿತು!
                    *****
(ಮುಗಿಯಿತು)

ಪಾದ ಪೂಜೆಯಾದುದೇನಿದು ಪ್ರಭುವರನ ಕಾಣದೆ

-ಶಿಶುನಾಳ ಶರೀಫ್

ಪಾದ ಪೂಜೆಯಾದುದೇನಿದು
ಪ್ರಭುವರನ ಕಾಣದೆ                                                             || ಪ ||

ಮೇಧಿನಿಯೊಳು ಸಂಶಿಯ ಜನ
ವಿನೋದದಿಂದು ಮಾಡಿದಂಥಾ                                               || ಅ. ಪ. ||

ಧರಿಗೆ ಸಂಶಿ ಮರೆವ ಮೋಜಿನ ಪರಿ
ಬ್ಯಾರೆ ಪ್ಯಾಕಿ ಮಳಗಿ ಸಾಲ್ಗಳೆರದು ಬಾಜಿನ
ನೆರೆ ಶುಭದಿ ಅದರೊಳಗಿರುವರೈ ಆನೇಕ-
ತರ ಜನ ಸರಿಗಾಣೆ ನಾ
ಪಿರಿದು ಕಾಂಬುದುದೀಗ ಬಾಗ್ಯ
ಸಿರಿಗೆ ಸಿಲ್ಕಿ ಶಿವನ ಚರಣ
ಮರೆತು ಮಾಯೆಯೊಳಿರಲು ಪುರಕೆ
ಪರಮಗುರು ನಿರಾಲ ಬಾರದೆ                                                  ||೧||

ಭೂಮಿಯೊಳು ನಿಸ್ಸೀಮಪ್ರೌಢರು ಈ
ಗ್ರಾಮದೊಳು ಧಾಮ ಶಾನುಭೋಗ ಗೌಡರು ಬಹು
ನಾಮವಿಡಿದು ಪಣಿ ಜನರು ಸು-
ಪ್ರೇಮ ರೈತರು ಸಮಸ್ತರು
ಕಾಮಿತಾರ್ಥ ಫಲವ ಬೇಡಿ
ನೇಮ ಹಿಡಿದು ನಿಜಕೆ ನಿಲುಕುತೆ
ಎಮಗೆ ವಿಚಿತ್ತ ಗಣಸಮೂಹ ನೆರಪಿ ಸ್ವಾಮಿ ಇಲ್ಲದೆ                      ||೨||

ಜಗದೊಳಗಿದು ಮಿಗಿಲುವಾಗಿರೆ
ಈಗಳಿದು ಇಂದ್ರನಗರ ಪೊಲ್ವ್ಶೋಭನಾಗಿರೆ
ಬಗೆವಡಿದು ಸೌಖ್ಯ ಸೊಗಸಿನಿಂದ
ನಗುವಳಿಂದಕಿ ಹೀಗಿರುತಿರೆ
ಪೊಗಲ್ವನಂತಸ್ಥಲವ ಕಂಡನಂತಾಪುರದ ಒಡಿಯರುಗಳು
ನೆಗಪಿಸಿದ ಪುರಾತ ಶಿವಗೆ
ಅಘಹರನಂ ಸಿಗದ ಬಳಿಕ                                                      ||೩||

ಊರ ಹೊರಗೆ ಉತ್ರ ದಿಸೆಯೊಳು ನಿರ್ಮಿಸಿದ ಮೂಲ
ಚಾರುತರದ ಚೌಕಬಾಗಿಲೊಳು ಈರೈದುದ್ವಾರ
ಸಾರುಗಟ್ಟಿದ ಮಂಟಪಗಳೊಳ್ ನಿರ್ಬಯಲಿನಲ್ಲಿ
ಆರು ಮೂರು ಹಾದಿ ಮೀರಿ ವೀರಸಿಂಹಾಸನವನೇರಿ
ಮಾರಹರನ ಮಂತ್ರಜಪಿಸಿ ಮಾಯಾಭಂಗ ಮಾಡೋತನಕಾ         ||೪||

ಮಂಡಲಾಗ್ರ ಮಧ್ಯನಾಡಿನೊಳ್ ಮಾಡಿಸಿದಮೋಹ
ಖಂಡಿಗನ್ನ ದಾನ ವಸ್ತ್ರಗಳ್ ಕೊಂಡಿಟ್ಟು ಚೌಕು
ಭಾಂಡ ಜೀನಸನ್ನು ಬಟ್ಟಲೊಳು ಕೊಡುತ್ತಿರಲು ಕೇಳಿ
ಉಂಡು ಉಣ್ಣಲಾರದೆ ಜಂಗಮರ್‍ಹಿಂಡುಗಟ್ಟಿ ತಿರುರುಗುತಿರ್ದ
ಪುಂಡಶಿಶುನಾಳಧೀಶನ ಕಂಡು ಕೈಮುಗಿಯುವತನಕಾ                 ||೫||

              ****

ಕೀಲಿಕರಣ: ಎಂ.ಎನ್.ಎಸ್. ರಾವ್

ತೋಟವ ನೋಡಿರಯ್ಯಾ

-ಶಿಶುನಾಳ ಶರೀಫ್

ತೋಟವ ನೋಡಿರಯ್ಯಾ ಸದ್ಗುರುವಿನ
ಆಟವ ನೋಡಿರಯ್ಯಾ                                     || ಪ ||

ನೀಟಗೂಡಿ ನಿಜ ಬ್ರಹ್ಮಜ್ಞಾನದಿ
ಕೋಟಿ ಕರ್ಮ ಸಂಹರ್ಸಿದ ಧರ್ಮವ                  ||ಅ.ಪ.|| 

ಬೈಲೋಳು ಬೈಲಾಗಿ ಕವಲಿಲ್ಲದ
ಮೂಲ ಸಹಿತವಾಗಿ
ಜೋಲುವ ಫಲಗಳು ಗಾಳಿಗೆ ಒಲಿಯಲು
ಸಾಲು ಸಾಲಿನ ಮೇಲೆನಿಸುವವರ                      ||೧||

ಭೂಮಿಯೊಳಧಿಕವಾದ ಎಲವಿಗಿಯೆಂಬ
ನಾಮದಿಂದಿಹ ಗ್ರಾಮದಾ
ರಾಮಜೋಗಿಯು ತಾನು ಪ್ರೇಮದಿ ಬೆಳಸಿದ
ಕೋಮಲ ವನದೋಳು ರಾಮನು ನೆಲಸಿದ          ||೨||

ಆಡಿಕಿ ತೆಂಗಿನ ಫಲವು
ಬಳಿಕ್ಯಾಡುವ ಬಾಳೀದಿಂಡಿನ ಛಲವೂ
ಕಡಿಕಿನಿಂ ಶಿಶುನಾಳ ಒಡಿಯ ನಿರ್ಮಿಸಿದಂಥಾ
ಆದಿಪ್ರಾಸ ಹೊಂದಿದ ಕಡು ಚಲ್ವ ಪದವೆಂಬ         ||೩||

              ****

ಕೀಲಿಕರಣ: ಎಂ.ಎನ್.ಎಸ್. ರಾವ್

ಎರಗಿ ಬಿನ್ನಾ ಮಾಡದ್ಹೋದರು

-ಶಿಶುನಾಳ ಶರೀಫ್

ಎರಗಿ ಬಿನ್ನಾ ಮಾಡದ್ಹೋದರು
ಗುರುವರನ ಗಣರಿಗೆರಗಿ             
ಬಿನ್ನಾವ್ವ ಮಾಡದ್ಹೋದರು
ನರಗುರಿಗಳು ಪರಿಹಾಸ್ಯದಿ
ಜರಿದರು ಎನ್ನ ಕರೆಸಿದರೈ
ಹರನ ಶಾಸ್ತ್ರಕೆ ವರಪ್ರಸ್ತಕೆ
ಮರಿತರು ನಿಮಗರಿಕಿರಲೈ                  ||ಪ||


ಹಿಂದಕೊಮ್ಮೆ ಪ್ರಥಮರೊಡನೆ
ದ್ವಂದ್ವ ಬಯಸಿ ರೇಚಿತಂದೆ
ಒಂದು ಕರಿಯ ಎಲಿಯ ಕೊಟ್ಟ
ಇಂದು ಪಥಕೆ ಮುಟ್ಟಲಿಲ್ಲಾ
ಆಂದಿನ ಕಥೆ ಇಂದರಿಯದೆ
ಬಂಧನಕ್ಕೊಳಗಾಗುವರೆ
ಕುಂದಿಟ್ಟರು ನಿಂದಿಸುತಲಿ
ಮಂದಾತಮರು ಮಹಾಗರ್ವದಿ               ||೧||

ನಿಷ್ಟಿ ಹಿಡಿದು ನಿಜಗ ನಿಲ್ಲದೆ
ಇಷ್ಟಲಿಂಗದ ಆರವು ಇಲ್ಲದೆ
ಶ್ರೇಷ್ಟ ಭಲಾ ಶಿವ ಜಂಗಮ-
ರಿಷ್ಟು ಬಳಲಿಸಿರುವರಿವರು
ಕೆಟ್ಟರು ಕುಚೇಷ್ಟರು
ಬ್ರಷ್ಟರು ಮಹಾಗರ್ವಿಷ್ಟರು
ತಟ್ಟಲೀ ಪಾಪ ಆವರಿಗೆ
ಕುಟ್ಟಲೀ ಶಿವಾ ಕುಟ್ಟಲೀಗ                      ||೨||

ಪೃಥ್ವಿಪಾಲ ಶಿಶುವಿನಾಳ
ಸತ್ಯಶರಣ ಸಖನ
ಕೃತ್ಯ ಕಪತ ಬಯಸಿದವರು
ಕತ್ತಿ ಜನ್ಮಕೆ ಹೋಗುತಿಹರು ಚಿತ್ತೈಸಿರಿ
ಅರ್ತಿಯಲಿ ಚಿತ್ತೈಸಿರಿ ಇದನರಿತು
ಮತೆ ಕಳಸ ಗ್ರಾಮಕೆ
ಪ್ರಸ್ತವಾಯಿತೋ ಭಕ್ತಿಯಲಿ                    ||೩||
                ****

ಕೀಲಿಕರಣ: ಎಂ.ಎನ್.ಎಸ್. ರಾವ್

ಬಾರದಿರುವೆರೇನೇ ಭಾಮಿನಿ

-ಶಿಶುನಾಳ ಶರೀಫ್

ಬಾರದಿರುವರೇನೇ ಭಾಮಿನಿ
ಬಾರದಿರುವರೇನೇ                                 ||ಪ||

ಬಾರದಿರುವ ಕಾರಣವೇನಲೆ ಸಖಿ
ದೂರದಿಂದ ಮುಖ ತೋರಿ ಸಮಯದಿ       ||ಅ.ಪ. ||

ನಂಬದವನ ಕೂಡ ಭಾಮಿನಿ
ಸಂಭ್ರಮಿಸುವದು ಬ್ಯಾಡ ನೋಡ
ಆಂಬುಜಾಕ್ಷಿಯೇ ಕಂಬುಕಂದರಿಯೇ
ಹಂಬಲಿಸುತ ನಿನ್ನ ಬೆಂಬತ್ತಿ ನಾ                ||೧||

ಕುಸುಮಲೋಚನೆ ಕೇಳೇ ವಿಷಯದ
ಕಸವನು ಕಳದವಳೆ ಭಾಮಿನಿ
ವಸುಧಿಯೊಳಂ ಶಿಶುನಾಳಧೀಶನ
ಆಸಮಸದ್ಗುರು ಗೋವಿಂದನಾಲಯ          ||೨||

                ****

ಕೀಲಿಕರಣ: ಎಂ.ಎನ್.ಎಸ್. ರಾವ್

ಬಾರೇ ನೀರೆ ತೋರೇ ಮುಖ

-ಶಿಶುನಾಳ ಶರೀಫ್

ಬಾರೇ ನೀರೆ ತೋರೇ ಮುಖ ವಾರಿಗ್ಯಾಕೆ ನಿಂತೆ
ದೂರ ಹೋದಳೆಂದು ನಾ ದಾರಿ ನೋಡುತ ಕುಂತೆ        ||ಪ||

ಆರಮುಂದೆ ಹೇಳಿದರೆ ತೀರದೀ ಮಾತು
ಊರಮಂದಿ ಅರಿಯರು ನಮ್ಮ ನಿಮ್ಮ ಗೊತ್ತು
ಬರತೀನಂತಾ ಹೇಳಿಹೋದೆಲ್ಲೆ ಮರೆತು ಮನ
ಕಲ್ಲು ಮಾಡಿದರೇನು ಬಂತು                                     || ಆ. ಪ.||

ಸಣ್ಣಾಕಿ ಇರುತಾ ನಾವು ನೀವು ಜತ್ತು
ಕಣ್ಣಿಟ್ಟು ಕಾಡುವುದೇನಿದು ಮಾತು
ಹುಣ್ಣವಿ ದಿವಸ ಆಮವಾಸಿ ಬಂತು
ಹಣ್ಣಾಗಿ ಉದರುವ ಬಳ್ಳಿ ಹಬ್ಬಿತ್ತು
ಇನ್ನ್ಯಾಕ ಕರುಣಾಗುಣವು ಇರಲಿ ಸ್ಥೂಲದ
ಹರವಿ ಸುಖದಲಿ ಹೊತ್ತು                                              ||೧||

ವಸುಧಿಯೊಳು ಶಿಶುನಾಳಧೀಶನ ಹೊರತು
ಮುಸುಕು ತೆಗೆದು ನೋಡೆ ಮಾಯೆ ಬಲವಾಯ್ತು
ಹಸನಾದ ಹಾಲಿನ ಕೆನಿಯು ನೀರಾಯ್ತು
ವ್ಯಸನವೆಂಬೊ ಮಜ್ಜಿಗಿ ಹುಳಿಯಾಯ್ತು
ದೆಸೆ ದೆಸೆಗಳಗೆ ಆಕ್ಷತೆ ಇಟ್ಟು ಮೋಹವ
ತೊಟ್ಟು ಬಂದೆ ನಾ ಸೋತು                                         ||೨||                  

                ****

ಕೀಲಿಕರಣ: ಎಂ.ಎನ್.ಎಸ್. ರಾವ್

ಇದು ಏನು ಸೋಜಿಗವೇ ಮಾನಿನಿಯಾಗಿ


-ಶಿಶುನಾಳ ಶರೀಫ್

ಇದು ಏನು ಸೋಜಿಗವೇ ಮಾನಿನಿಯಾಗಿ
ಇದು ಏನು ಸೋಜಿಗವೇ                            ||ಪ.||

ಕಲ್ಲಿನೊಳಗೆ ಮುಳ್ಳು
ಮುಳ್ಳಿನೊಳಗೆ ಜೊಳ್ಳು
ಎಳ್ಳು ಕೋಲಿಯ ಕದ್ದು
ಕಳ್ಳ ಕಾಡಿನೊಳೋದ್ದ್ದೇನು ಸೋಜಿಗವೇ       ||೧||

ಹಕ್ಕರಕಿಯ ಗಿಡವನೇರಿ ಹಾವಿನ ಹುತ್ತಾ
ಹೊಕ್ಕಾ ಮುಂದಕ್ಕೆ ಸಾರಿ
ಮುಕ್ಕರಿಸುತಾ ಬಿದ್ದು
ಅಕ್ಕನ ಸೋಬತೊ ಮಾಡಿ ಮೂರು
ಮಕ್ಕಳ್ಹಡದು ಮೈನೆರದ್ದೇನು ಸೋಜಿಗವೇ     ||೨||

ಹೇಸಿ ಮನಿಗೆ ಹೋಗಿ ನಿನಗೆ ಬಹು-
ಲೇಸಾಗೆಂದು ಕೂಡಿ
ಕಾಸಿನ ತೂಕದ ಕಡಲಿ ತಂದು
ಭಾಸುರ ಶಿಶುನಾಳಧೀಶನೊಲಿಸಿ
ನಾಗವಿಲ್ಲದ ಮುಕ್ತಿ ಪಡದದ್ದೇನು ಸೋಜಿಗವೇ  ||೩||
                ****

ಕೀಲಿಕರಣ: ಎಂ.ಎನ್.ಎಸ್. ರಾವ್

ಬಯಸಿದಕೆ ಮೋಹಿಸದಿರುವಂಥಾದ್ದೇನೇ ಭಾಮಿನಿ

-ಶಿಶುನಾಳ ಶರೀಫ್

ಬಯಸಿದಕೆ ಮೋಹಿಸದಿರುವಂಥಾದ್ದೇನೇ ಭಾಮಿನಿ
ಹೇ ಸಾಮಜಗಾಮಿನಿ ಇರುವಂಥಾದ್ದೇನೇ ಭಾಮಿನಿ                            || ಪ ||

ಬಾಳ ದಿವಸಾಯ್ತು ನಿಮ್ಮ್ನ್ನು ಕೇಳಿ ಕೀಳಿ ದಣಿದೆ ನೊಂದೆ
ಗಾಳಿ ವಂಂಟಪದೊಳಗೆ ಕೂಡಿ ಹೇಳಿದ ನುಡಿ ಆಳಾಪವಾಯ್ತು             || ೧ ||

ಚಲುವೆ ಅನಿಮಿಷಾಗ್ರ ಕೊನಿಗೆ ಸುಳಿದರೊಂದು ಘಳಿಗೆಯೊಳಗೆ
ತಿಳಿದು ನೋಡಿದೆ ಲಲನಾಮಣಿಯೇ ಹೋಳಿದು ಹೋದರೋಳಿತೇ ನೀರ  || ೨ ||

ಶಿಶುವಿನಾಳಧೀಶನೊಸಗೆಯೊಳಿರುವ ಕುಶಲವಂತೆ
ಹೊಸತು ಮಾಯಾ ಹರಿಸಿ ನಿಂದು ನಿಶಿತಾತ್ಮಕಿರಣಬಿಂದು                    || ೩ ||
                ****

ಕೀಲಿಕರಣ: ಎಂ.ಎನ್.ಎಸ್. ರಾವ್

ಮರುಳಾದೆ ಮಾನಿನಿ

-ಶಿಶುನಾಳ ಶರೀಫ್

ಮರುಳಾದೆ ಮಾನಿನಿ ಮರುಳಾದೆ
ಮಾರನಾಟದಿ ಮನಸ್ಸುಗೊಂಡೆನೇ                                || ಪ ||

ತರುಳರನ್ನು ನೀನು ಕಾಣುತ ಸ್ಮರನ
ಸರಳ ನಟ್ಟು ವರದಿ ಮರಗಿಸುವದು ರೀತಿಯೇನೇ
ಸರಸಿಜಾಕ್ಷಿ ಕರುಣಿಸು                                                 || ೧ ||

ಸುಂದರಾಂಗಿ ಚಂದ್ರವದನೆ
ಮಂದಗಮನೆ ಹೊಂದಿ ಸುಖಿಸೆ
ಎಂದಿಗಾದರು ಆಗಲದಂಥ ಒಂದು ವಚನ ಲಾಲಿಸೈ           || ೨ ||

ಇಳೆಯೊಳಧಿಕ ಶಿಶುನಾಳ ಭಲರೆ ಗುರುಗೋವಿದನೊಡನೆ
ಕಲಶ ಕುಚವು ಕೈಯೊಳು ಪಿಡಿದು
ತಿಳಿಸಿ ಬೋಧಿಸೇ ಲಲನೆ                                              || ೩ ||
                 ****

ಕೀಲಿಕರಣ: ಎಂ.ಎನ್.ಎಸ್. ರಾವ್

ಏನಾಯ್ತೇ ಮಾನಿನಿ

-ಶಿಶುನಾಳ ಶರೀಫ್

ಏನಾಯ್ತೇ ಮಾನಿನಿ
ಏನಾಯ್ತೇ ಮಾನಿನಿ                               || ಪ. ||

ಭಾನು ಕಿರಣ ಕಾಣಿಸುವ ಪ್ರಕಾಶವು
ಜ್ಞನದೋಳಗೆ ಶುಭ ತಾನೇ ತಾನೆ            || ಅ. ಪ. ||

ನಿನ್ನ ಮಾರಿ ನೋಡಿದರೆ
ಘನ ಸರಿ ಕೂಡಿದೆ
ಹೀನ ವಿಷಯ ಸಂಹರಿಸುವದಕೆ
ಅನುಮಾನವ್ಯಾಕೆ ವನಜಾಕ್ಷಿಮಣಿಯೇ       || ೧ ||

ಶಿಶುನಾಳಧಿಶನು
ಅಸಮಾಕ್ಷನೀತನು
ಕುಸುಮಗಾತ್ರೆಯನ್ನಸುವ ತೋರದೆ
ಹಸನವಲ್ಲ ಕೋಸರಾಡುವದಿದು               || ೨ ||
                 ****

ಕೀಲಿಕರಣ: ಎಂ.ಎನ್.ಎಸ್. ರಾವ್

ದಯಮಾಡಬೇಕೇ ಮಾನಿನಿಯೆ

-ಶಿಶುನಾಳ ಶರೀಫ್

ದಯಮಾಡಬೇಕೇ ಮಾನಿನಿಯೆ
ಮೋಹದ ಮನಗೋನಿಯೇ                                             ||ಪ.||

ವನಜಾನನೆ ಬಾಳ ದಿನ ಮನಸೋತೆನು
ಕನಕರಿಸುತಲಿರುವೆನು ಕನಕದ ಗಿರಿಜಾನಿಯೆ                      ||೧||

ಚಂದ್ರವದನೇ ಬಾ ಇಂದ್ರಲೋಕದ ರಂಭೆ
ಎಂದಿಗಾದರೂ ಇಂಥಾ ಗುಣವೇನಂದಪುರುಪನ ಖಣಿಯೇ     ||೨||

ವಸುಧಿಯೋಳ್ ಶಿಶುನಾಳಧೀಶನ ಸೇವಕನೋಳು ಮನ
ತುಸು ಕರುಣವಿರಲಿ ಕಾಮಿನಿಯೇ ಕುಸುಮಾಸ್ತ್ರನ ಖಣಿಯೇ    ||೩||
                 ****

ಕೀಲಿಕರಣ: ಎಂ.ಎನ್.ಎಸ್. ರಾವ್

ಎಲ್ಲರಂಥವನಲ್ಲ ನನ ಗಂಡ

-ಶಿಶುನಾಳ ಶರೀಫ್

ಎಲ್ಲರಂಥವನಲ್ಲ ನನ ಗಂಡ
ಬಲ್ಲಿದನು ಪುಂಡ
ಎಲ್ಲರಂಥವನಲ್ಲ ನನ ಗಂಡ         || ಪ ||

ಸೊಲ್ಲು ಸೊಲ್ಲಿಗೆ ಬಯ್ದು ನನ್ನ
ಎಲ್ಲಿಗೋಗದ್ಹಾಂಗ ಮಾಡಿಟ್ಟಾ
ಕಾಲ್ಮುರಿದು ಬಿಟ್ಟಾ                   || ಅ.ಪ ||

ಮಾತಾಪಿತರು ಮನೆಯೊಳಿರುತಿರಲು
ಮನಸೋತು ಮೂವರು
ಪ್ರೀತಿಗೆಳೆತನ ಮಾತಿನೊಳಿರುತಿರಲು
ಮೈನೆರೆತು ಮಾಯದಿ
ಘಾತವಾಯಿತು ಯವ್ವನವು ಬರಲು
ಹಿಂಗಾಗುತಿರಲು
ದೂತೆ ಕೇಳ್ನಿಮ್ಮವರು ಶೋಭನ
ರೀತಿಚಾರವನೆಲ್ಲ ತೀರಿಸಿ
ಆತನೊಳು ಮೈಹೊಂದಿಕೆಯ ಮಾಡಿ
ಮಮತೆಯಲ್ಲಿ ಕೂಡಿ                  || ೧ ||

ಅಕ್ಕತಂಗಿಯರಾರು ಮಂದಿಗಳಾ
ಅಗಲಿಸಿದನೈವರ
ಕಕ್ಕುಲಾತಿಯ ಅಣ್ಣತಮ್ಮಗಳಾ
ನೆದರೆತ್ತಿ ಮ್ಯಾಲಕ
ನೋಡಗೊಡದೇ ಹತ್ತು ದಿಕ್ಕುಗಳಾ
ಮಾಡಿದನೆ ಮರುಳಾ
ತೆಕ್ಕೆಯೊಳು ಬಿಗಿದಪ್ಪಿ ಸುರತಾ-
ನಂದಸುಖ ತಾಂಬೂಲ ರಸಗುಟ-
ಗಿಕ್ಕಿ ಅಕ್ಕರತಿಯಲಿ ನಗುವನು ತಾ
ಬಹು ಸುಗುಣನೀತಾ                 || ೨ ||

ತುಂಟ ಸವತಿಯ ಸೊಂಟಮುರಿ ಹೊಡೆದಾ
ಒಣ ಪಂಟಮಾತಿನ
ಗಂಟಗಳ್ಳರ ಮನೆಗೆ ಬರಗೊಡದಾ
ಹದಿನೆಂಟು ಮಂದಿ
ಕುಂಟಲಿಯರ ಹಾದಿಯನು ಕಡಿದಾ
ಎನ್ನ ಕರವ ಪಿಡಿದಾ
ಕುಂಟಕುರುಡಾರೆಂಟು ಮಂದಿ
ಗಂಟುಬಿದ್ದರೆ ಅವರ ಕಾಣುತ
ಗಂಟಲಕೆ ಗಾಣಾದನೇಳಕ್ಕಾ
ತಕ್ಕವನೇ ಸಿಕ್ಕಾ                    || ೩ ||

ಅತ್ತೆಮಾವರ ಮನೆಯ ಬಿಡಿಸಿದನೇ
ಮತ್ತೆಲ್ಲಿ ಮೂವರ
ಮಕ್ಕಳೈವರು ಮಮತೆಯ ಕೆಡಿಸಿದನೇ
ಎನ್ನನ್ನು ತಂದು
ರತ್ನಜ್ಯೋತಿಯ ಪ್ರಭೆಯೊಳಿರಿಸಿದನೇ
ಎನಗೊತ್ತಿನವನು
ಎತ್ತ ಹೋಗದೆ ಚಿತ್ತವಗಲದೆ
ಗೊತ್ತಿನಲ್ಲಿ ಇಟ್ಟು ಎನ್ನನು
ಮುತ್ತಿನಾ ಮೂಗುತಿಯ ಕೊಟ್ಟಾನೇ
ಅವನೇನು ದಿಟ್ಟನೇ                || ೪ ||

ಕಾಂತೆ ಕೇಳೆ ಕರುಣ ಗುಣದಿಂದ
ಎನಗಿಂಥ ಪುರುಷನು
ಬಂದು ದೊರಕಿದ ಪುಣ್ಯಫಲದಿಂದಾ
ಎನ್ನಂತರಂಗದ
ಕಾಂತ ಶ್ರೀ ಗುರುನಾಥ ಗೋವಿಂದಾ
ಶಿಶುನಾಳದಿಂದ
ಕಾಂತೆ ಬಾರೆಂತೆಂದು ಕರೆದೇ-
ಕಾಂತ ಮಂದಿರದೊಳಗೆ ಒಯ್ದು
ಭ್ರಾಂತಿ ಭವ ದುರಿತವನು ಪರಿಹರಿಸಿ
ಚಿಂತೆಯನು ಮರಸಿ                || ೫ ||
        ***


ಕೀಲಿಕರಣ: ಕಿಶೋರ್‍ ಚಂದ್ರ

ನಿನಗೇನಾತ ಸಖಿ

-ಶಿಶುನಾಳ ಶರೀಫ್

ನಿನ್ನವನು ನಾ
ನಿನಗೇನಾತ ಸಖಿ                  ||ಪ||

ಆನುಮಾನವಿಲ್ಲದೆ
ಆತ್ಮನ ಸವಿಸುಖ
ಚಿನುಮಯನಾಶ್ರಯಕೆ
ಆನುಮೋದಿಸು ವಿಭಾ
ನಿನಗೇನಾತ ಸಖಿ                  ||೧||

ಮೃಡಿಯಡರುತ
ಪೊಡವಿಏಗೆ ಬಿದ್ದು ಮಿಡಕುವಿ
ಕದುಚಿಂತೆಯನು ಕಂಡು
ನಿನಗೇನಾತ ಸಖಿ                  ||೨||

ಕಾಮಿನಿ ಕಲಹದ
ನಲೆ ತಿಳಿದ ಹಮ್ಮಿನೊಳು
ಶ್ರೀ ಮುನಿರಾಯ ನಿನ್ನ್ಹ್ಯಾಂಗ
ಸೈರಿಪನು ವಿಭಾ
ನಿನಗೇನಾತ ಸಖಿ                   ||೩||

ಉಟ್ಟ ಪಿತಾಂಬರ
ಗಟ್ಟ್ಯಾಗಿ ಕಟ್ಟಿಕೋ
ಮುಟ್ಟರೆ ಸಡಿಲದೆ
ಉಟ್ಟು ಮೋದಿಸು ವಿಭಾ
ನಿನಗೇನಾತ ಸಖಿ                   ||೪||

ಇಂದುಮುಖಿಯೆ ಕೇಳೇ
ಕುಂದನಿಡುವರುಂಟೆ
ಸುಂದರ ಶಿಶುನಾಳ-
ದೀಶ ನಿನ್ನವನು ನಾ
ನಿನಗೇನಾತ ಸಖಿ                   ||೫||
                 ****

ಕೀಲಿಕರಣ: ಎಂ.ಎನ್.ಎಸ್. ರಾವ್

ನಮ್ಮನಿಮ್ಮಗಾಗದು

-ಶಿಶುನಾಳ ಶರೀಫ್

ನಮ್ಮನಿಮ್ಮಗಾಗದು
ಸುಮ್ಮನೆ ಹೊತ್ತು ಹೋಗದು                       ||ಪ.||

ಕ್ರಮವಗೆಡಿಸಿ ಮಮತೆವಿಡಿಸಿ
ರಮಿಸಿ ರಮಿಸಿದಲ್ಲೆ ಸಖೀ                          ||ಅ.ಪ.||

ಕರುಣವಿಲ್ಲದೇ ಹಿರಿಯರ ದಣಿಸಿ
ಕಿರಿಯರ ಕುಣಿಸಿದಿ ಸೇರಲಾರದೆ
ಕಿರಿಯರಿ ತಮ್ಮಗೆ ಮಾರಿದೋರದೆ
ಹರಿದು ಹೋದಿಯಲ್ಲೇ ಸಖಿ                        ||೧||

ಬಲ್ಲಿದ ಬಿಡಿಸಿದಿ ಒಳ್ಳೇರ ಕೆಡಸಿದಿ
ಕಳ್ಳರ ಹೋಡೆಸಿದಿ ಸುಳ್ಳರ ಬಡಿಸಿದಿ
ಮಳ್ಳಿಯ ತೆರದಿ ಮಾತನಾಡಿ
ತಳ್ಳಿಯ ದೂರನಾಡಿದೆ ಸಖಿ                      ||೨||

ಪೊಡವಿಪ ಶಿಶುನಾಳ
ಒಡೆಯನ ಮಗನಿಗೆ
ಕಡುಮೋಹಗೊಳ್ಳಲು ನುಡಿಯುವುದೇ ನಿನ್ನಾಟ
ಬಿಡು ಬಿಡು ಸಲ್ಲದು ಕಡುಕೇಡು ತಪ್ಪದು     || ೩ ||
                 ****

ಕೀಲಿಕರಣ: ಎಂ.ಎನ್.ಎಸ್. ರಾವ್

ಸಕ್ರನೆಂಬುವನ ಬಂಡಾಯದ ವೃತ್ತಾಂತವು

-ಅಬ್ಬಾಸ್ ಮೇಲಿನಮನಿ

ಡಾಂಬರಿನ ಆ ದೊಡ್ಡ ರಸ್ತೆ ಕವಲೊಡೆಯುವುದು ರೈಲು ಗೇಟಿನ ಹತ್ತಿರ.  ಒಂದು ರಸ್ತೆ ನೇರ ಊರೊಳಕ್ಕೆ ಹೋದರೆ ಮತ್ತೊಂದು ಬೈಪಾಸ್ ರಸ್ತೆ.  ಅದರ ಮಗ್ಗಲಲ್ಲಿರುವುದೇ ಗಾಂಧಿ ಕಾಲನಿ.  ನೂರಾರು ಗುಡಿಸಲು ಅಲ್ಲಿ ಒತ್ತೊತ್ತಾಗಿ ಉಸಿರುಗಟ್ಟವಂತೆ ಹಬ್ಬಿಕೊಂಡಿವೆ.  ಅದರಾಚೆಗೆ ತುಸು ದೂರದಲ್ಲಿ ನಗರದ ಕೊಳೆ, ಕಸ ಗುಡ್ಡೆಗುಡ್ಡೆಯಾಗಿ ಬಿದ್ದಿದೆ.  ಹೆಗ್ಗಣಗಳು ಒಳಗೊಳಗೆ ಸುರಂಗ ತೋಡುತ್ತವೆ.  ಮಲಿನ ನೀರು ಬಚ್ಚಲುಗುಂಡಿ, ಇಕ್ಕಟ್ಟಾದ ರಸ್ತೆಗಳಲ್ಲಿ ಖಾಯಂ ನಿಂತು ಭಯಂಕರ ಸೊಳ್ಳೆಗಳ ಸಂತಾನ ವೃದ್ಧಿಸಿದೆ.  ಸೂರಿನ ನೆಲ ಶಿಥಿಲವಾದರೂ, ಸೊಳ್ಳೆಗಳು ರಕ್ತ ಹೀರಿದರೂ ಕಂಗೆಡದೆ ಬದುಕಿರುವ ಇಲ್ಲಿನ ಬಡನಿವಾಸಿಗಳ ಜೀವನಪ್ರೀತಿ ಅಗಾಧ.  ಅಂಥ ಪ್ರೀತಿಗಾಗಿ ಹೋರಾಟ ಮಾಡುತ್ತಿರುವವರಲ್ಲಿ ಸಕ್ರಪ್ಪನೂ ಒಬ್ಬ.  ಎಲ್ಲರಿಗೂ ಅವನು ಸಕ್ರನೆಂದೇ ಚಿರಪರಿಚಿತ.

ನಲವತ್ತು-ನಲವತ್ತೈದರ ವಯೋಮಾನ ಅವನದು.  ದೇಹ ಶಕ್ತವಾಗಿಲ್ಲ.  ಕೂಲಿಗಾಗಿ ಸಂತೆ, ಮಾರ್ಕೆಟ್ ಎಂದು ಅಂಡಲೆಯುತ್ತಾನೆ.  ಚಿಕ್ಕ ಚಿಕ್ಕ ನಾಲ್ಕು ಮಕ್ಕಳಿವೆ.  ಬಡತನಕ್ಕೆ ಉಂಬುವ ಚಿಂತೆ ಎನ್ನವಂತೆ ಮಕ್ಕಳು ಯಾವಾಗಲೂ ಹಸಿದುಕೊಂಡಂತೆ ತಿನ್ನಲು ಏನಾದರೂ ಬೇಡುತ್ತಲೋ, ರೊಟ್ಟಿ ರೊಟ್ಟಿ ಎನ್ನುತ್ತಲೋ ಪ್ರಲಾಪಿಸುತ್ತಲೇ ಇರುತ್ತವೆ.  ಮಕ್ಕಳ ಹಸಿವು ಹಿಂಗಿಸುವ ಪರಿಗಾಗಿ ಸಕ್ರ ಚಿಂತಿಸುತ್ತಲೇ ಇರುತ್ತಾನೆ.  ಅವನ ಹೆಂಡತಿ ರುಕ್ಕಿ.  ಅವಳಿಗೂ ರಕ್ತಹೀನತೆ, ಆದರೂ ನಾಲ್ಕಾರು ಶ್ರೀಮಂತ ಮನೆಗಳ ಕಸ-ಮುಸುರೆಗೆ ಹೋಗುತ್ತಾಳೆ.  ಅವರು ಎತ್ತಿಕೊಟ್ಟ ತಿನಿಸನ್ನು, ಬಟ್ಟೆಗಳನ್ನು ಮಕ್ಕಳಿಗೆ ಒದಗಿಸಿ ಸಂಭ್ರಮಿಸುತ್ತಾಳೆ.

ಸಕ್ರ ಮೈಗಳ್ಳನಲ್ಲ, ಸೂರ್ಯನೊಂದಿಗೆ ಎದ್ದು ಕೂಲಿ ಹುಡುಕಿಕೊಂಡು ಹೋಗುತ್ತಾನೆ.  ರೈಲು, ಬಸ್ಸು ನಿಲ್ದಾಣಗಳಲ್ಲಿ ಅವನಿಗೆ ಪ್ರವೇಶ ನಿಷಿದ್ಧ.  ಸಂತೆ, ಮಾರ್ಕೆಟಿನಲ್ಲಿ ಕೂಲಿಯ ಅವಕಾಶವಿದ್ದರೂ ಸರಕು, ಸರಂಜಾಮುಗಳಿಗೆ ತಡಕಾಡಬೇಕು.  ಅಲ್ಲಿ ಕೂಲಿ ಮನುಷ್ಯರಿಗೇನೂ ಕಮ್ಮಿಯಿಲ್ಲ.  ಒಂದು ವಸ್ತು ಕಣ್ಣಿಗೆ ಬಿದ್ದರೆ ಇರುವೆ ಮುಕ್ಕುರುವಂತೆ ಕೂಲಿಗಳು ಧಾಂಗುಡಿಯಿಡುವರು.  ದೊಡ್ಡ ಬಾಯಿಯ, ಗಟ್ಟಿ ದೇಹದವರು ಸಕ್ರನ ಪಾಲಿನ ಅದೃಷ್ಟನ್ನು ಕಬಳಿಸಿ ಬಿಡುವರು.  ಇದರ ನಡುವೆಯೂ ಅವನು ಇಪ್ಪತ್ತು ಮೂವತ್ತು ರೂಪಾಯಿಗಳನ್ನು ಆರಾಮವಾಗಿ ಗಳಿಸಬಲ್ಲ.  ಮನಸು ಮಾಡಿದರೆ ಇದಕ್ಕೂ ಹೆಚ್ಚಿನ ಹಣ ಸಿಗಬಲ್ಲದು ಅವನಿಗೆ.  ತಕರಾರಿನ ಜಾಯಮಾನವಲ್ಲ ಸಕ್ರನದು.  ನಡವಳಿಕೆ ವಕ್ರವಲ್ಲ.  ಎಷ್ಟೋ ಜನ ಕೂಲಿಗಳು ಅಹಂಕಾರಿಗಳು.  ಅವರು ಮನುಷ್ಯರಂತೆ ವರ್ತಿಸುವುದಿಲ್ಲ ಎಂದು ಆರೋಪಿಸುವ ಮಂದಿ ಸಕ್ರನನ್ನು ಪ್ರೀತಿಸುತ್ತಾರೆ.  ಅವನು ಹಣಕ್ಕಾಗಿ ಪೀಡಿಸುವುದಿಲ್ಲ.  ಕೊಟ್ಟಷ್ಟು ಸ್ವೀಕರಿಸುತ್ತಾನೆಂದು ನಂಬುಗೆ ಅವರದು.  ಆದರೆ ಅದು ಸಕ್ರನ ಸಂಸಾರವನ್ನು ಸುಖವಾಗಿ ಇಟ್ಟಿಲ್ಲ.

ಸಕ್ರ ಮನೆಗೆ ಬಂದಾಗ ಮಧ್ಯಾಹ್ನದ ಹೊತ್ತು ರುಕ್ಕಿ ಕಣ್ಣಂಚಿನಲ್ಲಿ ನೀರು ತುಂಬಿಕೊಂಡು ಕುಳಿತಿದ್ದಳು.  ನರಳುತ್ತ ಮಲಗಿದ ಮಗಳ ಮೈ ಕೆಂಡವಾಗಿತ್ತು.  ಅಡುಗೆ ಒಲೆ ತಣ್ಣಗಿತ್ತು.  ನೆಲದ ಮೇಲೆ ಹೊಟ್ಟೆ ಹೊಸೆಯುತ್ತ ಹಸಿವಿನ ತಹತಹಿಕೆಯಲ್ಲಿ ಮೂರು ಗಂಡು ಮಕ್ಕಳು ಸಣ್ಣಗೆ ಆಕ್ರಂದಿಸುತ್ತಿದ್ದವು.  ಸಕ್ರನ ಅಂಗಿಯ ಜೇಬಿನಲ್ಲಿದ್ದುದು ಹತ್ತು ರೂಪಾಯಿ ಮಾತ್ರ, ಮಗಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕೋ?  ಮಕ್ಕಳಿಗೆ ತಿನ್ನಲು ಏನಾದರೂ ತಂದುಕೊಡಬೇಕೋ?  ಚಿಂತೆ ಕಾಡತೊಗಿತ್ತು ಅವನಿಗೆ.

ಇಂಥ ಸಂದಿಗ್ಧ ಹೊತ್ತಲ್ಲಿ ನಾಜೂಕಪ್ಪ ಅವತರಿಸಿದ.  ರಾಜಕೀಯ ಪಕ್ಷವೊಂದರ ಸಂಘಟನಾ ಕಾರ್ಯದರ್ಶಿಯಾದ ನಾಜೂಕಪ್ಪ ಬೆರಗಿನ ಮಾತುಗಾರ.  ಪಕ್ಷದ ಕಾರ್ಯಕ್ರಮಗಳಿಗೆ ಜನರನ್ನು ಸೇರಿಸುವ ತಂತ್ರಗಾರಿಕೆಯಲ್ಲಿ ನಿಪುಣ.  ಗಣ್ಯಾತಿಗಣ್ಯರು ತಮ್ಮ ಭಾಷಣದ ಯಶಸ್ಸಿಗೆ ಅವನನ್ನೇ ಅವಲಂಬಿಸುವರು.  ಈಗಂತೂ ಚುನಾವಣಾ ಸಮಯ ರಾಜಕಾರಣಿಗಳಿಗೆ ಅವನೇ ಉಸಿರು.  ಅವರಿಗೆ ನಾಜೂಕಪ್ಪ ಹೇಗೆ ಅನಿವಾರ್ಯವೋ, ಸಕ್ರನಂಥವರು ನಾಜೂಕಪ್ಪನಿಗೆ ಅನಿವಾರ್ಯ.  ಅದಕ್ಕೇ ಅವನು ಸಕ್ರನನ್ನು ಹುಡುಕಿಕೊಂಡು ಬಂದದ್ದು.  ಸಕ್ರನಿಗೂ ಅವನಿಗೂ ಹಳೆಯ ಪರಿಚಯ.

ನಾಜೂಕಪ್ಪನ ಮುಖ ನೋಡಿದ್ದೆ ಸಕ್ರನ ಕಣ್ಣು ಅರಳಿಕೊಂಡವು.  "ಬರ್‍ರಿ, ನಾಜೂಕಪ್ಪ ಎಷ್ಟು ದಿನ ಆತು ನಿಮ್ಮನ್ನೋಡಿ" ಎಂದು ಚಾಪೆ ಹರಡಿದ.  ಕುಳಿತ ನಾಜೂಕಪ್ಪ ತೆಳ್ಳಗೆ ನಗುತ್ತ "ಪಕ್ಷದ ಕೆಲಸ, ಸಮಾಜದ ಕೆಲಸ ಪುರುಸೊತ್ತಿಲ್ಲೋ ಮಹಾರಾಯ" ಎಂದ.

"ಪ್ರತ್ಯಕ್ಷ ಭಗವಂತನ ದರುಶನ ಮಾಡಿದ್ಹಂಗ ಆತ್ರಿ ನನ್ಗ!"  ಉಲ್ಲಾಸದಿಂದ ಉದ್ಗರಿಸಿದ ಸಕ್ರ.

"ಖರೆ ದೇವರಂದ್ರ ನೀನೊ ಸಕ್ರಣ್ಣ.  ನಿನ್ನಂಥವರ ಸೇವೆಗೆ ಇರೋರು ನಾವು" ವಿನಮ್ರವಾಗಿ ಹೇಳಿದ ನಾಜೂಕಪ್ಪ ಅದನ್ನು ಒಪ್ಪಿಕೊಳ್ಳದ ಸಕ್ರ.

"ಹಂಗ್ಯಾಕಂತೀರಿ ನಾಜೂಕಪ್ಪ?  ನಮ್ಮಂಥ ಬಡೂರ ಪಾಲಿಗೆ ನೀವಽಽ, ಅಲ್ಲೇನು ಆಧಾರ?" ಎಂದ.

"ಬಡತನ-ಸಿರಿತನ ಮುಖ್ಯ ಅಲ್ಲೊ ಸಕ್ರಣ್ಣ.  ಮನುಷ್ಯತ್ವ ದೊಡ್ಡದು" ಎನ್ನುತ್ತ ಗುಡಿಸಲಿನ ವಿದ್ಯಮಾನವನ್ನು ಸೂಕ್ಷ್ಮವಾಗಿ ಅವಲೋಕಿಸಿದ ನಾಜೂಕಪ್ಪ.

"ಯಾಕ, ಗಂಡ-ಹೆಂಡ್ತಿ ಮುಖ ಒಣಗಿಸ್ಕೊಂಡು ಕುಂತೀರಿ?" ಎಂದ.

"ಹುಡುಗಿಗೆ ಜ್ವರಾ ಬಂದಾವರಿ.  ಹುಡುಗರು ಹಸ್ಗೊಂಡು ಅಳಾಕ ಹತ್ತ್ಯವು ಇವತ್ತ ನೋಡಿದ್ರ ಕೂಲೀನಽ, ಸಿಗಲಿಲ್ಲ.  ಕಿಸೆದಾಗ ಹತ್ತು ರೂಪಾಯಿ ಇಟ್ಕೊಂಡು ದಿಕ್ಕು ತಿಳಿಲಾರ್‍ದ ಕುಂತಿನಿ" ನಿಟ್ಟುಸಿರಿಟ್ಟ ಸಕ್ರ.

"ನಾನಿರಾಕಲೇ ನಿನಗ್ಯಾಕ ಚಿಂತಿ?" ಕಾಳಜಿ ಅಭಿವ್ಯಕ್ತಿಸಿದ ನಾಜೂಕಪ್ಪ.

"ಚಿಂತಿ ಬಿಟ್ಟರ ಮತ್ತೇನದರಿ ನಮ್ಗ?" ಹತಾಶೆ ವ್ಯಕ್ತಪಡಿಸಿದ ಸಕ್ರ.

"ಸುಖದ ಕಾಲ ಬರತೈತಿ ತಡ್ಕೋ ಈ ಸಲ ಎಲೆಕ್ಷನದಾಗ ನಮ್ಮ ಪಕ್ಷ ಗೆಲ್ಲೋದು ಗ್ಯಾರಂಟಿಯೇನಪಾ, ನಾವು ಸರಕಾರ ರಚನಾ ಮಾಡಿದ ಮ್ಯಾಲೆ ಈ ನಾಡಿನ್ಯಾಗ ಬಡೂರಽಽ ಇರಬಾರದ್ದು ಹಾಂಗ ಮಾಡ್ತೀವಿ.  ಶ್ರೀಮಂತರು, ಬಡೂರಾಗ, ನಾವು ಸಮಾನತೆ ತರ್ತೀವಿ" ಆಶ್ವಾಸನೆ ಕೊಟ್ಟ ನಾಜೂಕಪ್ಪ.

"ಯಾರಽಽ ರಾಜ್ಯಾ ಆಳಿದ್ರೂ ಬಡೂರ ಬದುಕು ಪತ್ರೋಳಿನಽಽ ಬಿಡ್ರಿ" ಸಕ್ರ ಬೇಸರದ ಧ್ವನಿ ಹೊರಡಿಸಿದ.

"ಇದಽಽ ನೋಡಪ ನಿರಾಶಾ ಅನ್ನುದು.  ಶುಕ್ರ-ವಕ್ರ ಎಲ್ಲಾನೂ ಒಂದಽ ಥರಾ ಇರೂದಿಲ್ಲ ಸಕ್ರಣ್ಣ"

"ಬಡೂರು ಸಾಯೋದ್ರೊಳಗಽಽ ಶುಕ್ರ ಬಂದ್ರ ಚಲೋರಿ" ಎಂದ ಸಕ್ರ.

"ಕತ್ತಲಿನ್ಯಾಗ ಕುಂತವಂಗ ಹೊಸ ಸೂರ್ಯ ಕಾಣಿಸುದಿಲ್ಲ ಸಕ್ರಣ್ಣ.  ಮೊದಲ ನಿನ್ನ ಎದ್ಯಾನ ಚಿಂತಿ ತಗದು ಹಾಕು.  ಬೆಳಕಿನ ದಾರಿ ಹುಡುಕು.  ತಗೋ ಈ ನೂರು ರೂಪಾಯಿ ತಂಗಿಗೆ ಕೊಡು.  ಹುಡುಗರಿಗೆ ಏನಾರ ತಂದು ತಿನಿಸಲಿ.  ಹಸಿವನ್ನು ಹತ್ತಿಕ್ಕಬಾರ್‍ದು.  ಹಸಿದ ಹೊಟ್ಟೆ ಮರಮರ ಅಂದ್ರ ಜಗತ್ತು ಚೂರು ಚೂರು ಆಗತ್ತ.  ರುಕ್ಕವ್ವ ನಾನು ಡಾಕ್ಟರಿಗೆ ಒಂದು ಚೀಟಿ ಬರ್‍ದು ಕೊಡ್ತಿನಿ.  ಸರಕಾರಿ ದವಾಖಾನಿಗೆ ಮಗಳನ್ನು ಕರ್‍ಕೊಂಡು ಹೋಗಿ ತೋರ್‍ಸು.  ಈಗ ನಿನ್ನ ಗಂಡನ್ನ ನನ್ನ ಕೂಡ ಕರ್‍ಕೊಂಡು ಹೋಗ್ತಿನಿ" ನಾಜೂಕಪ್ಪ ಮನ ಕರಗುವಂತೆ ಹೇಳಿದ.

"ಎಲ್ಲಿಗರಿಯಣ್ಣಾ?" ರುಕ್ಕಿ ಕೇಳಿದಳು.

"ಇವತ್ನಿಂದ ಇಲೆಕ್ಷನ್ ಪ್ರಚಾರ ಜೋರಾಗಬೇಕಾಗೇತಿ.  ನಮ್ಮ ಪಾರ್ಟಿ ಲೀಡರು ಬರ್‍ತಾರ.  ಈ ನಗರದಾಗ ಮತ್ತ ಸುತ್ತ ಮುತ್ತಲಿನ ಊರಾಗ ಹಗಲು-ರಾತ್ರಿ ಕಾರ್ಯಕ್ರಮ ನಡಿತಾವು.  ಒಂದು ಟ್ರಕ್ ಮಂದಿನ್ನ ಕರ್‍ಕೊಂಡು ಹೋಗುವ ಜವಾಬ್ದಾರಿ ನನ್ನ ಮ್ಯಾಲೆ ಐತಿ.  ಒಬ್ಬೊಬ್ಬ ಮನಿಷ್ಯಾಗ ದಿವಸಕ್ಕ ನೂರು ರೂಪಾಯಿ ಅಷ್ಟಲ್ಲದಽಽ ಊಟ, ಚಹ, ನಾಷ್ಟಾ ಬ್ಯಾರೇನೂ ಐತಿ".

"ಅಲ್ಲಿ ಕೂಲಿ ಎನು ಮಾಡಬೇಕ್ರಿಯಣ್ಣ?"  ಕೇಳಿದಳು ರುಕ್ಕಿ.

"ಕೂಲಿ-ನಾಲಿ ಏನೂ ಇಲ್ಲ.  ಸುಮ್ಮನ ಕುಂತು ಭಾಷಣ ಕೇಳುದು.  ನಡುನಡುಕ ಚಪ್ಪಾಳಗಿ ಹೊಡೆಯೂದು.   ಆಮ್ಯಾಲೆ ಘೋಷಣಾ ಕೂಗುದು ಅಷ್ಟ....."  ಸಕ್ರ ಹಿಂದಿನ ಚುನಾವಣೆಗಳಲ್ಲಿನ ಅನುಭವವನ್ನು ನೆನಪು ಮಾಡಿಕೊಂಡು ಹೇಳಿದ.

"ಇಷ್ಟು ಹಗರು ಕೆಲಸಕ್ಕ ಅಷ್ಟು ರೊಕ್ಕ ಕೊಡ್ತಾರ ಅವರು?"  ಕೌತುಕದಿಂದ ಕೇಳಿದಳು ರುಕ್ಕು.

"ರೊಕ್ಕಕ್ಕ ಕಿಮ್ಮತ್ತಿಲ್ಲಬೆ ತಂಗಿ.  ಈಗ ನೀರಿನಂಗ ಚೆಲ್ಲತಾರ.  ಆಮ್ಯಾಲೆ ಸಲಿಕಿಯಿಂದ ಬಳ್ಕೋತಾರ.  ಇದೆಲ್ಲ ನಿಮ್ಗ ಅರ್ಥಾಗುದಿಲ್ಲ ಬಿಡ್ರಿ" ಎನ್ನುತ್ತ ಸಕ್ರನನ್ನು ಕರೆದುಕೊಂಡು ಅವಸರದಿಂದ ಹೊರಟ ನಾಜೂಕಪ್ಪ.

ಜನರನ್ನು ತುಂಬಿಕೊಂಡು ಟ್ರಕ್ಕು ಊರಿಂದೂರಿಗೆ ಚಲಿಸುತ್ತಲೇ ಇತ್ತು.  ಬೆಳಗು ಮಧ್ಯಾಹ್ನವೊ, ಸಂಜೆ-ರಾತ್ರಿಯೊ ವೇದಿಕೆಯ ಮುಂದೆ ನೇತಾರರಿಗಾಗಿ ಕಾಯುತ್ತ ಜಯಕಾರ ಹಾಕುತ್ತ ಕುಳಿತಿರುತ್ತಿದ್ದ ಜನರಿಗೆ ತಿನ್ನಲು ತುಸು ಉಪ್ಪಿಟ್ಟು, ವಗ್ಗರಣೆಖಾರಾ ಸಿಕ್ಕುತ್ತಿತ್ತು.  ಊಟವಂತೂ ಇಲ್ಲ.  ಓಡುವ ಕುದುರೆಯ ಮುಂದೆ ಕೋಲು ಹಿಡಿದು, ಅದರ ತುದಿಗೆ ಹುಲ್ಲು ಕಟ್ಟಿದಂತೆ ಹಸಿದ ಜನಕ್ಕೆ ಮುಂದಿನೂರಿನಲ್ಲಿ ಊಟವೆಂದು ಹೇಳಿ ಕಾರ್ಯಕರ್ತರು ಅವರನ್ನು ಭಾಷಣ ಮುಗಿದ ಕೂಡಲೇ ಟ್ರಕ್ಕಿನಲ್ಲಿ ಕುರಿಗಳಂತೆ ತುಂಬಿ ಸಾಗಹಾಕುತ್ತಿದ್ದರು.  ರಸ್ತೆಯ ಮಧ್ಯೆ ನೀರು ಕಂಡಲ್ಲಿ ಜಳಕ.  ಎಲ್ಲೋ ಒಂದು ಕಡೆಗೆ ಉಪ್ಪಿಟ್ಟಿನ ಸಮಾರಾಧನೆ.  ಕುಡಿಯಲು ಒಂದು ಕಪ್ಪು ಚಹ.  ಎಲೆಯಡಿಕೆ ಜಗಿಯಲಾದರೆ, ಸೇದಲು ಬೀಡಿ.  ಸಭೆಯಲ್ಲಿ ಗದ್ದಲವೆಬ್ಬಿಸಿ ಮಿಸುಕಾಡಿದರೆ ಕೈಗಳಿಗೆ ಬ್ರೆಡ್ಡಿನ ತುಂಡೋ, ನಾಲ್ಕಾರು ಬಿಸ್ಕೀಟು ಇಡಲಾಗುತ್ತಿತ್ತು.  ಎರಡು ದಿನ ಅನ್ನ, ರೊಟ್ಟಿಯ ದರ್ಶನವೇ ಇಲ್ಲ.  ಒಡಲ ಬ್ರಹ್ಮಾಂಡದ ಹಸಿವನ್ನು ಹತ್ತಿಕ್ಕಿಕೊಂಡ ಜನ ಕೈಗೆ ದೊರಕಬಹುದಾದ ಹಣದ ಲೆಕ್ಕಾಚಾರದಲ್ಲಿ ನೇತಾರರ ಭಾಷಣವನ್ನು ಆಲಿಸುತ್ತಿದ್ದರು.

ಧುರೀಣರ ಮಾತೆಂದರೆ ಮಾತು.  ಸಭೆಗೆ ಸಭೆಯೇ ಬೆರಗಾಗುತ್ತಿತ್ತು.  ಚಂದದ ಶಬ್ದಗಳು, ಪರಿಣಾಮಕಾರಿ ದೃಷ್ಟಾಂತಗಳು, ರೋಚಕಗೊಳಿಸುವ ಅಡ್ಡಕಥೆಗಳು, ನವರಸಗಳೆ ಹಾವಭಾವದಲ್ಲಿ ಪುಟಿಯುತ್ತಿದ್ದರೆ ಚಪ್ಪಾಳೆಯ ಮೇಲೆ ಚಪ್ಪಾಳೆ, ಕಗ್ಗತ್ತಲಿನಲ್ಲಿ ತಡಕಾಡುವರ ಎದುರು ಸೂರ್ಯನನ್ನು ಬೆಳಗಿಸುತ್ತೇವೆ ಎಂದರು.  ಚಂದ್ರನ ಬೆಳದಿಂಗಳನ್ನು, ನಕ್ಷತ್ರಗಳ ನಗೆಯನ್ನು ಚೆಲ್ಲುತ್ತೇವೆ ಎಂದರು.  ಹಸಿದ ಒಡಲಿಗೆ ಅಮೃತ ಹನಿಸುತ್ತೇವೆ.  ಸ್ವರ್ಗದಲ್ಲಿ ತೇಲಿಸುತ್ತೇವೆ ಎಂದರು.  ಅವರ ಭರವಸೆಯ ವರಸೆಗಳಿಂದ ಜನರು ಭ್ರಮಾಧೀನರಾಗಿ ಬಲೂನು ಉಬ್ಬಿದಂತೆ ಹಿಗ್ಗುತ್ತ ಚಪ್ಪಾಳೆ ತಟ್ಟುತ್ತ ಜಯವಾಗಲಿ ನಾಯಕರಿಗೆ.... ಎಂದು ಏರುಧ್ವನಿಯಲ್ಲಿ ಕೂಗುತ್ತಲೇ ಇದ್ದರು.

"ರೊಟ್ಟಿಯಿಂದ ನಮ್ಮ ಬದುಕು.  ರೊಟ್ಟಿಯಿಂದ ಈ ದೇಶ.  ಈ ಪ್ರಪಂಚ ಉಸಿರಾಡಿಸುವುದಽಽ ಈ ರೊಟ್ಟಿಯಿಂದ....!"  ಧುರೀಣನೊಬ್ಬನ ಈ ಉದ್ಗಾರ ಸಭಿಕರನ್ನು ರೋಮಾಂಚನಗೊಳಿಸಿತು.  ಎಲ್ಲೋ ಕಳೆದುಹೋದವನಂತೆ ಕುಳಿತಿದ್ದ ಸಕ್ರನ ಎದುರು ರೊಟ್ಟಿಯೇ ಕುಣಿಯತೊಡಗಿತ್ತು.  ಅವನ ಎಡಕ್ಕೂ-ಬಲಕ್ಕೂ, ಮೇಲಕ್ಕೂ, ಕೆಳಕ್ಕೂ ರಾಶಿರಾಶಿ ರೊಟ್ಟಿ.  ಜೋಳ, ಸಜ್ಜೆಯ ರೊಟ್ಟಿ, ಅಚ್ಚ ಬಿಳಿಯದು, ಅರಿಷಿಣ ಬಣ್ಣದ್ದು, ಎಳ್ಳು ಹಚ್ಚಿದ್ದು, ತೆಳ್ಳಗಿನದು, ದಪ್ಪನೆಯದು, ಚಿಕ್ಕ-ದೊಡ್ಡಗಾತ್ರದ್ದು.  ಹಿಂಡು ಹಿಂಡಾಗಿ ಬಂದರು ಅಸಂಖ್ಯಾತ ಹಸಿದ ಮಂದಿ.  ನೂಕಿ, ನುಗ್ಗಿ ರೊಟ್ಟಿಯನ್ನು ಕೈಗೆತ್ತಿಕೊಂಡರು.  ಮುರಿದು ಬಾಯಿಗಿಟ್ಟು ಗಬಗಬನೆ ತಿನ್ನತೊಡಗಿದರು.  ಸಕ್ರನ ಮಕ್ಕಳಂತೂ ಎರಡೂ ಕೈಗಳಲ್ಲಿ ರೊಟ್ಟಿ ಹಿಡಿದು ಕುಣಿದಾಡತೊಡಗಿದರು.  ರೊಟ್ಟಿಯ ಹಬ್ಬದ ಸಡಗರ ರುಕ್ಕಿಯ ಮುಖವನ್ನು ಅರಳಿಸಿತ್ತು.

"ಧುರೀಣರಿಗೆ ಜಯವಾಗಲಿ, ಆಳುವ ಪ್ರಭುಗಳಿಗೆ ಜಯವಾಗಲಿ, ಭೋಲೋ ಭಾರತ ಮಾತಾಕೀ ಜಯ್...."  ಆಕಾಶ ಭೇದಿಸುವಂತೆ ಕೂಗಿದ್ದರು ಜನ.  ಸಕ್ರ ವಾಸ್ತವಕ್ಕೆ ಬಂದಿದ್ದ.  ಐದು ದಿನಗಳ ಚುನಾವಣಾ ಪ್ರಚಾರ ಸಮಾರೋಪ ಕಂಡಿತು.  ಊರು, ಹೆಂಡತಿ, ಮಕ್ಕಳನ್ನು ನೆನಪು ಮಾಡಿಕೊಂಡ ಜನ ಟ್ರಕ್ಕಿನ ಹತ್ತಿರ ಬಂದು ಸೇರಿದರು.  ರಣಗುಡುವ ಸೂರ್ಯ ಅವರ ನೆತ್ತಿಯನ್ನು ಉರಿಸುತ್ತ, ಹಟ್ಟೆಗಿಳಿದು ಹಸಿವನ್ನು ಕೆರಳಿಸಿದ.  ಅವರ ಕಣ್ಣು ನಾಜೂಕಪ್ಪನಿಗಾಗಿ ಹುಡುಕಾಡಿದವು.  ಅವನು ಗೆಸ್ಟ್‌ಹೌಸಿನಲ್ಲಿ ಇದ್ದಾನೆಂದು ಯಾರೋ ಪಿಸುಗುಟ್ಟಿದರು.  ಸಕ್ರನ ಹೆಜ್ಜೆಗಳು ಅತ್ತಕಡೆಗೆ ಚಲಿಸಿದವು.  ಉಳಿದವರು ಅವನನ್ನು ಹಿಂಬಾಲಿಸಿಕೊಂಡು ಹೋದರು.

ಗೆಸ್ಟ್‌ಹೌಸಿನ ಹಿಂಬದಿಯಲ್ಲಿ ಹಾಕಿದ್ದ ಶಾಮಿಯಾನದಲ್ಲಿ ಹತ್ತಿಪ್ಪತ್ತು ಜನ ಕುಳಿತು ಮೆತ್ತಗೆ ಮಾತಾಡುತ್ತ ನಗುತ್ತ ವಿಸ್ಕಿ, ರಮ್ಮು ಹೀರುತ್ತ ಖುಷಿಯಾಗಿದ್ದರು.  ನಾಜೂಕಪ್ಪ ಅವರೊಂದಿಗೆ ಬೆರೆತು ಹೋಗಿದ್ದ.  ಒಂದು ಬದಿಗೆ ಬಿಳಿಬಟ್ಟೆ ಹೊದಿಸಿದ ದೊಡ್ಡ ಟೇಬಲ್ ಮೇಲೆ ಕಡಕ್ ರೊಟ್ಟಿ, ಪರೋಟಾ, ಚಿಕನ್, ಮಟನ್, ಫಿಶ್‌ಫ್ರಾಯ್, ಆಮ್ಲೇಟ್, ಮಸಾಲೆ ರೈಸ್ ಘಮಘಮಿಸುತ್ತಿದ್ದವು.

ಅದರ ಜಾಡು ಹಿಡಿದು ಒಳ ನುಗ್ಗಿ ಬಂದರು ಜನ.  ಅವರ ಮುಂದೆ ಸಕ್ರ ಇದ್ದ.  ಅರೆಬರೆ ನಶೆಯಲ್ಲಿದ್ದ ಶಾಮಿಯಾನ ಅವರನ್ನು ನೋಡಿ ತತ್ತರಿಸಿತು.  ನಾಜೂಕಪ್ಪ ದಿಢೀರೆಂದು ಎದ್ದು ಬಂದು ಸಕ್ರನನ್ನು ದಬಾಯಿಸಿದ.  ಮಹಾನ್ ನಾಯಕರ ಎದುರು ಅಗೌರವದಿಂದ ನಡೆದುಕೊಳ್ಳಬಾರದೆಂದು ಎಚ್ಚರಿಸಿದ.  ಅವನ ತಗಡು ಮಾತುಗಳನ್ನು ಧಿಕ್ಕರಿಸಿ "ನಮ್ಗ ಊಟ ಬೇಕು, ರೊಕ್ಕ ಬೇಕು" ಎಂದು ಕೂಗಿದ ಸಕ್ರ.  ಉಳಿದವರ ಅವಾಜು ಅದರೊಂದಿಗೆ ಸೇರಿಕೊಂಡಿತು.  ಜನರನ್ನು ಅಲ್ಲಿಂದ ಪಲ್ಲಟಿಸಲು ನಾಜೂಕಪ್ಪನಿಂದ ಸಾಧ್ಯವಾಗಲಿಲ್ಲ.  ಗೆಸ್ಟ್‌ಹೌಸಿನ ಕೆಲಸಗಾರರೊಂದಿಗೆ ಒಂದಿಬ್ಬರು ದಢೂತಿ ಕಾರ್ಯಕರ್ತರು ಜನರನ್ನು ಚದುರಿಸಲು ತಮ್ಮ ಬಲ ಪ್ರಯೋಗಿಸಿದ್ದು ನಿರ್ವೀರ್‍ಯವೆನಿಸಿತು.  ಜಿಗುಟತನ ನರನಾಡಿ ತುಂಬಿಕೊಂಡಿತೋ ಎನ್ನುವಂತೆ ಸಕ್ರ ಅವರನ್ನು ಸೀಳಿಕೊಂಡು ಹೋಗಿ ರೊಟ್ಟಿಗೆ ಕೈಹಾಕಿದ.  ಉಳಿದವರೂ ಅವನನ್ನು ಅನುಸರಿಸಿದರು.

ದಿಗಿಲುಗೊಂಡ ರಾಜಕೀಯ ಮಂದಿ ಆಕ್ರೋಶದಿಂದ "ಪೋಲಿಸರಿಗೆ ಫೋನ್ ಮಾಡ್ರಿ" ಎಂದರು.  ಒಂದಿಬ್ಬರು ಜನರ ಕೈಯಲ್ಲಿದ್ದ ರೊಟ್ಟಿಯನ್ನು ಕಸಿದುಕೊಳ್ಳಲು ಪ್ರಯತ್ನಿಸಿದರು.  ಸಕ್ರ ಅವರನ್ನು ದೂರಕ್ಕೆ ನೂಕಿ "ಹೊಟ್ತುಂಬ ಉಣ್ಣೂನು ಬರ್‍ರಿ" ಎಂದು ಆಹ್ವಾನಿಸಿದ.  ರೊಟ್ಟಿ, ಪರೋಟಗಳ ಮೇಲೆ ಚಿಕನ್, ಮಟನ್, ಕೈಗೆ ಸಿಕ್ಕಿದ್ದನ್ನು ಬಡಿಸಿಕೊಂಡು ತಿನ್ನಲು ಶುರುವಿಟ್ಟುಕೊಂಡರು ಜನ.  "ನಾಚಿಕಿ ಇಲ್ದವರ, ಭಿಕಾರಿ ಹಾಂಗ ಹಿಂಗ್ಯಾಕ ಮಾಡಾಕ ಹತ್ತೀರಿ" ನಾಜೂಕಪ್ಪ ಕೆಟ್ಟ ಸ್ವರದಲ್ಲಿ ಕೂಗಿಕೊಂಡ.  ಅವನ ಬೈಗಳು ತಮಗೆ ಸಂಬಂಧಿಸಿದ್ದು ಅಲ್ಲವೆಂಬಂತೆ, ಅಂತ ಆಹಾರವನ್ನು ಎಂದಿಗೂ ಕಂಡಿಲ್ಲವೋ ಎಂಬಂತೆ, ತಮ್ಮದು ಅನಂತಕಾಲದ ಹಸಿವು ಎನ್ನುವಂತೆ ಊಟದಲ್ಲಿ ಮೈಮರೆತಿದ್ದರು ಜನ.  ನಾಜೂಕಪ್ಪನ ಹತ್ತಿರ ಬಂದ ಸಕ್ರ `ಅವರು ಬಾಳಾ ಹಸದಾರ ನಾಜೂಕಪ್ಪ.  ಇಲ್ಲೀತನಕ ತಡಕೊಂಡಿದ್ದಽಽ ಹೆಚ್ಚನ್ನು...." ಎಂದ.

ಪೋಲೀಸ್ ವ್ಯಾನ್ ಬಂದು ನಿಂತಿತು.  ಹತ್ತಾರು ಜನ ಪೋಲಿಸರು ಮುಖ ಧುಮುಗುಡಿಸುತ್ತ ವ್ಯಾನ್ ಇಳಿದರು.  ಜೀಪಿನಿಂದಿಳಿದ ಡಿವೈಎಸ್ಪಿ ತ್ವರಿತವಾಗಿ ಶಾಮಿಯಾನದೊಳಗೆ ನುಗ್ಗಿಬಂದ.  ನಿರ್ಭೀತರಾಗಿಯೇ ಇದ್ದರು ಜನ.  "ಒದ್ದು ಎಳಕೊಂಡು ನಡೀರಿ ಈ ಹರಾಮ್‌ಖೋರ ಮಕ್ಕಳನ್ನ" ಮಾಜಿ ಮಂತ್ರಿಯೊಬ್ಬರು ವಿಕಾರವಾಗಿ ಕೂಗಿದರು.  "ನಡೀಲೆ ಬದ್ಮಾಶ್, ಹಲ್ಕಾನನ್ಮಗನೆ....." ಎಂದು ತನ್ನ ಸಂಸ್ಕಾರ ನಾಲಗೆಯಿಂದ ಅನಾಗರಿಕರ ಭಾಷೆ ಬಳಸುತ್ತ ರಾಕ್ಷಸಿ ಕೈಗಳಿಂದ ಒಬ್ಬೊಬ್ಬನ ಚಂಡಿಗೆ ಕೈಹಾಕಿ ವೀರಾವೇಶ ಪ್ರದರ್ಶಿಸಿದ ಡಿವೈಎಸ್ಪಿ.  "ಹಸಿದೋರು ಯಾರಿಗೂ ಅಂಜುದಿಲ್ಲ ಸಾಹೇಬರ" ಸಕ್ರ ಧೈರ್ಯದಿಂದ ಹೇಳಿದ.

"ದಂಗಾ ನಡಸ್ತಿಯೇನಲೆ ಮಿಂಡರಿಗುಟ್ಟಿದವನೆ.  ಓಂದಽಽ ಒದ್ರ ನೆಲಾ ಬಿಟ್ಟು ಏಳಂಗಿಲ್ಲ ನೀನು" ಡಿವೈಎಸ್ಪಿ ಕೆಂಡದ ಕಣ್ಣಿಂದ ಸಕ್ರನನ್ನು ದಿಟ್ಟಿಸಿದ.

"ನಾವು ಬದ್ಮಾಶರು, ಪುಂಡರು, ಮಿಂಡರಿಗುಟ್ಟಿದವರು ಅಲ್ರಿ ಸಾಹೇಬರ.  ಬಡೂರು.  ಕೂಲಿಜನ.  ನಿಮ್ಹಂಗ ಮನಿಷ್ಯಾರು.  ಈ ರಾಜಕೀಯ ಮಂದಿ ನಮ್ಮನ್ನ ದೇವರಂತ ಕರೀತಾರ.  ದೊರೆಗಳು ಅಂತಾರ.  ನಮ್ಮ ಸೇವಾ ಮಾಡ್ತಿವಂತಾರ;  ಈಗ ನೋಡಿದ್ರ ಉಪವಾಸ ಕೊಲ್ಲಾಕ ಹತ್ತ್ಯಾರ" ಕಠೋರ ಸತ್ಯವನ್ನು ಹೇಳಿದ ಸಕ್ರ.

"ಇಂವಾ ಸುಳ್ಳು ಹೇಳಾಕ ಹತ್ತ್ಯಾನ.  ಇವರ್‍ಯಾರೋ ನಮ್ಗ ಗೊತ್ತಿಲ್ಲ, ಒಮ್ಮೇಲೆ ನುಗ್ಗಿ ಬಂದು ಇಲ್ಲಿ ದಾಂಧಲೆ ನಡಿಸ್ಯಾರ" ಅಪ್ಪಟ ಸುಳ್ಳು ಹೇಳದ ಒಬ್ಬ.  ಆ ಮಾತು ಕೇಳಿಯೂ ಕೇಳದಂತೆ ನಿಂತಿದ್ದ ನಾಜೂಕಪ್ಪ.  ಸಹನೆಯ ಕಟ್ಟೆಯೊಡೆದವನಂತೆ ಡಿವೈಎಸ್ಪಿ ಸಕ್ರನ ಎದೆಯ ಮೇಲೆನ ಅಂಗಿ ಹಿಡಿದು ಜೋರಾಗಿ ಎಳೆದ.  ಸಕ್ರ ಗಟ್ಟಿಯಾಗಿ "ಸಾಹೇಬರ ಈ ರೊಟ್ಟಿ, ಅನ್ನದ ಮ್ಯಾಲೆ ನಮ್ಮ ಹಕ್ಕು ಐತಿ" ಎಂದ.  ಅವನನ್ನು ವ್ಯಾನಿನತ್ತ ದೂಡಿದ ಡಿವೈಎಸ್ಪಿ "ಜೈಲಿನ್ಯಾಗ ಚಲೋತಂಗ ತಿನಸ್ತೀನಿ ನಡಿ ಮಗನ" ಎಂದ.

ಜನರ ರಕ್ತ ಕಳಕಳ ಅಂದಿತು.  "ಪೋಲಿಸರ ದಬ್ಬಾಳಿಕೆಗೆ ಧಿಕ್ಕಾರ.... ಬಡವರ ಹೊಟ್ಟೆ ಮ್ಯಾಲೆ ಹೊಡೆವ ಪುಢಾರಿ ರಾಜಕಾರಣಿಗಳಿಗೆ ಧಿಕ್ಕಾರ" ಒಕ್ಕೊರಲಿದರು ಅವರು.  ಸಕ್ರ "ಹೋರಾಟ..... ಹೋರಾಟ....." ಎಂದು ಪ್ರತಿಕ್ರಿಯೆಯ ಧ್ವನಿ ಮೊಳಗಿಸುತ್ತ ಎಲ್ಲರೂ ವ್ಯಾನೊಳಗೆ ತೂರಿಕೊಂಡರು.  ಕೂಗು ಅಬ್ಬರಗೊಳ್ಳುತ್ತಲೇ ಇತ್ತು.  ಅದು ಸಾಮಾನ್ಯವಲ್ಲ ಅನಿಸತೊಡಗಿತ್ತು ನಾಜೂಕಪ್ಪನಿಗೆ.  ಭೂಮಿ ಬಾಯಿ ಬಿಡುವುದೋ ಆಕಾಶ ಛಿದ್ರಗೊಳ್ಳುವುದೋ, ವ್ಯಾನ್ ಸ್ಪೋಟಗೊಳ್ಳುವುದೋ ಎಂದು ದಿಗಿಲುಗೊಳಗಾದ ಅವನಿಗೆ ಸಕ್ರನ ವರ್ತನೆ ವಿಚಿತ್ರವಾಗಿ ತೋರಿತ್ತು.  ಏಕಾಏಕಿ ಸಕ್ರ ಹೀಗೇಕೆ ಬದಲಾದನೆಂದು ತಲೆಕೆದರಿಕೊಂಡ ನಾಜೂಕಪ್ಪ.

ಸಕ್ರ ದೊಡ್ಡ ಧ್ವನಿಯಲ್ಲಿ "ರೊಟ್ಟಿಗಾಗಿ ಜೇಲಾಗ್ಲಿ, ಬೂಟಿನ ಒದೆತ, ಲಾಟಿಯ ಹೊಡೆತ ಬೀಳ್ಲಿ.  ಬಂದೂಕಿನ ಗುಂಡು ಎದಿಯಾಗ ಹೋಗ್ಲಿ" ಎನ್ನುತ್ತಿದ್ದ.  ಜನರು ತತ್‌ಕ್ಷಣ ಅವನ ಮಾತುಗಳನ್ನು ಪ್ರತಿಧ್ವನಿಸುತ್ತಿದ್ದರು.

ಸಕ್ರ ನುರಿತ ಬಂಡಾಯಗಾರನಂತೆ ಗೋಚರಿಸಿದ ನಾಜೂಕಪ್ಪನಿಗೆ.  ತಂಗಾಳಿ ಬಿರುಗಾಳಿಯಾಗುವುದೆಂದರೇನು?  ಮಂಜುಗಡ್ಡೆ ಉರಿದ ಕೆಂಡದಂತೆ ಪ್ರಜ್ವಲಿಸುವುದೆಂದರೇನು?  ಅವನ ತಾಕತ್ತಿನ ಹಿಂದೆ ವಿರೋಧ ಪಕ್ಷದವರ ಕೈವಾಡವೇನಾದರೂ ಇದ್ದಿರಬಹುದೆ?  ಗುಮಾನಿ ನಾಜೂಕಪ್ಪನನ್ನು ತೀವ್ರವಾಗಿ ಆವರಿಸಿಕೊಂಡಿತು.  ಸಕ್ರನದು ಹಸಿವಿನ ಸಿಟ್ಟು ಎಂದು ಅವನಿಗಾಗಲಿ, ರಾಜಕೀಯ ಮುತ್ಸದ್ದಿಗಳಿಗಾಗಲಿ ಹೊಳೆಯಲೇ ಇಲ್ಲ.

ಪ್ರತಿಭಟನೆಗಾರರ ಕೆಚ್ಚು ಪ್ರತಿಕ್ಷಣಗಳ ಮೈತುಂಬಿಕೊಳ್ಳತೊಡಗಿತ್ತು.  ನಾಜೂಕಪ್ಪನ ಸೂಕ್ಷ್ಮಗಳ ಜೀವಿದ್ರವ್ಯ ಬತ್ತಿದಂತಾಗಿದ್ದರೆ, ರಾಜಕಾರಣಿಗಳ ತಂತ್ರಗಳು ನಪುಂಸಕವೆನಿಸಿದವು.  ಕೂಲಿಗಳನ್ನು ಕುರಿಗಳೆಂದು ತಿಳಿದಿದ್ದೆ ತಪ್ಪಾಯಿತೆಂದುಕೊಂಡ ನಾಜೂಕಪ್ಪ.

ವ್ಯಾನಿನ ಒಳಗೂ ಹೊರಗೂ ತುಂಬಿ ತುಳುಕಾಡತೊಡಗಿದ ಜನ ಅಪಾಯಕಾರಿಗಳಂತೆ ಕಂಡು ಬಂದರು.  ಅವರಿಗೆ ಬುದ್ಧಿ ಕಲಿಸಲು ಯೋಚಿಸಿದ ಡಿವೈಎಸ್ಪಿ ಸೊಂಟದಲ್ಲಿನ ಪಿಸ್ತೂಲು ತೆಗೆದು, ಆಕಾಶಕ್ಕೆ ಕೈಯೆತ್ತಿ ಗಾಳಿಯಲ್ಲಿ ಒಂದು ಗುಂಡು ಹಾರಿಸಿದ.  ನಾಜೂಕಪ್ಪನ ಎದೆಗುಂಡಿಗೆ ಝಲ್ಲೆಂದಿತು.  ರಾಜಕೀಯ ಮಂದಿಯ ನಶೆ ಜರ್‍ರನೆ ಪಾದಕ್ಕಿಳಿಯಿತು.

"ಗುಂಡು ಹೊಡೆವ ಪುಂಡರಿಗೆ ಮುರ್ದಾಬಾದ್......." ಜನರ ಸಮೂಹದಿಂದ ಸಿಡಿದು ಬಂದಿತು ಒಂದು ಧ್ವನಿ.  "ಒಬ್ಬೊಬ್ಬರ ಎದಿಗುಂಡಿಗಿ ಒಡೆದು ಹಾಕ್ತೀನಿ" ತಲೆಕೆಟ್ಟವರಂತೆ ಚೀತ್ಕರಿಸಿದ ಡಿವೈಎಸ್ಪಿ.  ಚುನಾವಣೆ ಹೊಸ್ತಿಲಲ್ಲಿ ಅಮಾಯಕರ ಹೆಣ ಉರುಳಿದರೆ ಮತದಾರರು ತಮ್ಮ ಪಕ್ಷದ ಗೋರಿ ಕಟ್ಟುತ್ತಾರೆ.  ಅಧಿಕಾರ ದಕ್ಕಿಸಿಕೊಳ್ಳಲು ತುದಿಗಾಲ ಮೇಲೆ ನಿಂತಿರುವ ವಿರೋಧ ಪಕ್ಷದವರಿಗೆ ತಾವೇ ಈ ಮೂಲಕ ರತ್ನಗಂಬಳಿಯನ್ನು ಹಾಸಿಕೊಟ್ಟಂತಾಗುತ್ತದೆ ಎಂದು ಮಾಜಿ ಶಾಸಕರೊಬ್ಬರು ಕಳವಳಿಸಿದರು.  ಜಾಗೃತರಾದ ಮಾಜಿ ಸಚಿವರು ಈ ಜನರನ್ನು ನಾವು ಸಂಭಾಳಸ್ತೀವಿ.  ನೀವು ವಾಪಸ್ ಹೋಗಿ ಬಿಡ್ರಿ" ಎಂದು ಡಿವೈಎಸ್ಪಿಗೆ ಹೇಳಿ, ವ್ಯಾನಿನಿಂದ ಸಕ್ರನನ್ನು ಕೆಳಗಿಳಿಸಿ "ನಮ್ಮಿಂದ ಸ್ವಲ್ಪ ಎಡವಟ್ಟಾತು ಸಕ್ರಣ್ಣ" ಎನ್ನುತ್ತ ಅವನ ಹೆಗಲ ಮೇಲೆ ಕೈಹಾಕಿಕೊಂಡು ಶಾಮಿಯಾನದತ್ತ ನಡೆದರು.

"ಈ ಪಕ್ಷ ನಿಮ್ಮದು.  ನಾವೂ ನಿಮ್ಮವರು ಸಕ್ರಣ್ಣ."  ಪಕ್ಷದ ಕಾರ್ಯದರ್ಶಿ ದೇಶಾವರಿ ನಗೆಯಾಡುತ್ತ ಹೇಳಿದರು.

"ಇದು ಸತ್ಯ ಅಹಿಂಸೆಯ ಪಕ್ಷ.  ಗಾಂಧೀಜಿ ಸಿದ್ಧಾಂತವನ್ನು ಒಪ್ಕೊಂಡೋರು ನಾವು.  ನಿಮ್ಮಂಥ ಬಡವರು, ಕೂಲಿಕಾರರು ನಮ್ಮ ಪಕ್ಷದ ಜೀವಾಳ.  ನೀವಿಲ್ಲ ಅಂದ್ರ ನಾವ್ಯಾವ ಗಿಡದ ತಪ್ಪಲೊ ಸಕ್ರಣ್ಣ.  ಭಗವಂತ ಈ ಭೂಮಿ ಸೃಷ್ಟಿ ಮಾಡದಾ ನಿಮ್ಮಂಥ ಒಳ್ಳೆ ಮನುಷ್ಯಾರನ ಸೃಷ್ಟಿ ಮಾಡದಾ.  ನೀವು ನಮ್ಗ ಸ್ಥಾನ-ಮಾನ ಕೊಟ್ರಿ.  ನಿಮ್ಮ ಋಣದಾಗ ಇದ್ದೋರು ನಾವು ನಮ್ಮ ತಪ್ಪು ಒಪ್ಕೊಂತೀವಿ.  ಎಲ್ಲಾರ್‍ನೂ ಶಾಮಿಯಾನದೊಳಗೆ ಕರ್‍ಕೊಂಡು ಬಾ ನೀನು, ಹೊಟ್ಟೆ ತುಂಬ ಊಟ ಮಾಡ್ರಿ.  ನಿಮ್ಗ ಕೈ ತುಂಬ ರೊಕ್ಕಾ ಕೊಟ್ಟು, ಸುರಕ್ಷಿತ ನಿಮ್ಮೂರಿಗೆ ಕಳಿಸಿ ಕೊಡ್ತೀವಿ" ಹೊಟ್ಟೆಯಲ್ಲಿನ ಹರಳು ಕರಗುಂತೆ ಮಾತಾಡಿದ ಮತ್ತೊಬ್ಬ ಧುರೀಣ.

ಊರಸವಳ್ಳಿಯಂತೆ ಬಣ್ಣ ಬದಲಾಯಿಸುತ್ತಿರುವ ರಾಜಕಾರಣಿಗಳ ರೀತಿಗೆ ತತ್ತರಗೊಂಡ ಡಿವೈಎಸ್ಪಿ ಕೂಡಲೇ ಜೀಪೇರಿಕೊಂಡು ಹೋದ.  ಅವನ ಹಿಂದೆಯೇ ಪೋಲೀಸ್ ವ್ಯಾನು ತೆವಳುತ್ತ ಸಾಗಿತು.  ನಾಜೂಕಪ್ಪನಂತೂ ತನ್ನೆರಡೂ ಹಸ್ತಗಳನ್ನು ಫೆವಿಕಾಲಿನಿಂದ ಭದ್ರಪಡಿಸಿಕೊಂಡಂತೆ ಸಕ್ರನ ಎದುರಲ್ಲಿ ಮುಗಿದುಕೊಂಡೆ ನಿಂತಿದ್ದ.

ನೆರೆದ ಜನರಲ್ಲಿ ಒಂದಿಬ್ಬರು ಸಕ್ರನನ್ನು ತಮ್ಮ ಹೆಗಲ ಮೇಲೆ ಹೊತ್ತುಕೊಂಡರು.  `ಸಕ್ರಣ್ಣನಿಗೆ ಜಯವಾಗಲಿ' ಹರ್ಷೋದ್ಗಾರ ಮುಗಿಲು ಮುಟ್ಟಿತು.  ವಿವಶರಾಗಿ ನಿಂತಿದ್ದ ಶಾಸನಾಧೀಶರಿಗೆ ಶಾಮಿಯಾನದ ಎತ್ತರಕ್ಕೇರಿದ ಸಕ್ರನ ಕಾಲುಗಳು ವಾಮನನ ಪಾದಗಳಂತೆ ಕಂಡವು.

               ***

ಕೀಲಿಕರಣ: ಕಿಶೋರ್‍ ಚಂದ್ರ

ಎಂಥಾ ನಗಿ ಬಂತೋ ಎನಗೆ

-ಶಿಶುನಾಳ ಶರೀಫ್

ಎಂಥಾ ನಗಿ ಬಂತೋ ಎನಗೆ          
ಗಡ ಮುದುಕಿಯ ಕಂಡು                       ||ಪ||

ನಿಂತು ನೋಡಲಾಗವ್ಲ್ಲದು ಕಣ್ಣಿಲೆ     
ಸಂತ್ಯಾಗ ಮಂದಿ ಕಾಣದವಳೋ           ||ಅ.ಪ.||

ಆರು ಮೂರು ಗೆಳತೇರ ಸ್ನೇಹವನು
ದೂರ ಮಾಡದೆ ಸುಮ್ಮ್ನದಿ ತಾನು
ದಾರಿಹಿಡಿದು ಸಾರುವಳಿದು ಏನು
ದಾರಿ ನಡೆದ ಮುದುಕಿಯ ಕಂಡು           || ೧ ||

ಎಂಟು ಮಂದಿ ನೆಂಟರು ಮನಸೋತು
ಗಂಟುಬೀಳಲವರನು ಕೂಡಿಕೊಂಡು
ಪಂಟುಹಚ್ಚಿ ಪರವಶದಿ ಪೊಗುತಿಹ
ಸೊಂಟಮುದುಕಿಯನು ಕಂಡು              || ೨ ||

ಸಂದಿಗೊಂದಿಯೊಳು ಹುಡಕುತ ಬರಲು
ತಂದೆ ಗುರುಗೋವಿಂದನ ಚರಣವ
ಹೊಂದಿಕೋ ಎಂದರೆ ನಿಂದೆಯನಾಡುತ
ಮುಂದಕೆ ನಡಿವಳು ಮಂದಗಮನದಿ       || ೩ ||
                 ****

ಕೀಲಿಕರಣ: ಎಂ.ಎನ್.ಎಸ್. ರಾವ್

ನಡಿ ನಡಿಯುತ ಗಂಡ ನಡಮುರಿದೊದೆನ್ನ

-ಶಿಶುನಾಳ ಶರೀಫ್

ನಡಿ ನಡಿಯುತ ಗಂಡ ನಡಮುರಿದೊದೆನ್ನ
ಹುಡುಗಾಟ ಬಿಡಿಸಿ ಹೌದೆನಿಸಿದನೇ                ||ಪ||

ಮದನಗಿತ್ತ್ಯಾಗಿ ಬಂದು ಮನೆಯೊಳಗಿರುತಿರೆ
ಬೆದಗಡಿಕಿಯೆಂದು ಹೆಸರಿಡಿಸಿದನೇ
ನದರಿನಮ್ಯಾಲ ತಾ ನದರಿಟ್ಟಿ ಎನಗೆ
ಮುದದಿ ಚುಂಬನಕೊಟ್ಟು ರಮಿಸಿದನೇ          ||೧||

ಹೊಸದಾದ ಸೊಸಿಯಾದ ಆಕ್ಕನಮಗಳಿಗೆ
ಮುಸರಿ ಬಳಸಿ ಕಸ ಹೊಡಿಸಿದನೇ
ವಸುಧಿಯೊಳು ಶಿಶುನಾಳಧೀಶನ ದಯದಿಂದ
ಕಸೂತಿಯ ಕುಪ್ಪಸ ತೋಡಿಸಿದನೇ               ||೨||
                 ****

ಕೀಲಿಕರಣ: ಎಂ.ಎನ್.ಎಸ್. ರಾವ್

ಮುದಿಕ್ಯಾಗಿ ಮುರುಕ ಇನ್ನ್ಯಾಕ

-ಶಿಶುನಾಳ ಶರೀಫ್

ಮುದಿಕ್ಯಾಗಿ ಮುರುಕ ಇನ್ನ್ಯಾಕ
ಎದುರಿಗೆ ನೀರಗಿಗಳ್ ಒದೆಯುವದು ಸಾಕೆ                    ||ಪ||

ಮೊದಲಿಗೆ ಮೂವರು ಕೂಡಿ ಮಾಯ
ಮದನ ಮಂದಿರದೊಳು ಮುದದಿ ಮಾತಾಡಿ
ಹದಗೆಟ್ಟು ಹಾದರ ಮಾಡಿ ಮುಂದೆ
ಬದುಕಿನ ಎಚ್ಚರ ನಿನಗಿಲ್ಲ ಖೋಡಿ                                ||೧||

ಏಳೆಂಟು ಗೆಳತೇರು ಜತ್ತು  ಹಳ್ಳಿ ಹಳ್ಳಿ
ಸೂಳೇರ ತೆರದಲ್ಲಿ ತಿರುಗುತಿ ಎತ್ತ
ಕಾಳ ಕತ್ತಲದೊಳು ಗೊತ್ತು
ಹಾಳು ಗುಡಿಯೊಳು ಬಂದು ಬೀಳುದು ಕತ್ತೆ                    ||೨||


ನೆರ ಹಾಯ್ತು ತೆಲಿ ಬೆಳ್ಳಗಾಯ್ತು ಬುದ್ಧಿ
ಬರಲಿಲ್ಲ ಹಿರಿ ಕಿರಿಯರು ಹೇಳಲಾಗಿ ಜನ
ಹರಲಿಗೆ ಗುರಿಯಾಗಿ ನೀನು
ಶಿಶುನಾಳೇಶಗ ಜೋಡು ಕಾಯಿ ವಡಿಸವ್ವಾ ಮುದಿಕಿ        ||೩||
                 ****

ಕೀಲಿಕರಣ: ಎಂ.ಎನ್.ಎಸ್. ರಾವ್

ಗುರುವಿಗೆ ಮರುಳು ಮಾಡುವರೇನೆ ಮಾನಿನಿ

-ಶಿಶುನಾಳ ಶರೀಫ್

ಗುರುವಿಗೆ ಮರುಳು ಮಾಡುವರೇನೆ ಮಾನಿನಿ ?
ಧರೆಯೊಳು ಪ್ರಭುವರ ದೊರಕುವನೆ ?             ||ಪ.||

ಸರಸಿಜಮುಖಿವರ ಪರಮಮಧುಕೇಶ್ವರ
ನರನಲ್ಲ ತಿಳಿ ನಿನ್ನ ಸರಕೇನೆ ?
ಧರಿಗೆ ಪಾರ್ವತಿ ತನ್ನ ತಾಮಸರೂಪದಿ
ನೆರೆ ಬಂದರೇನಾತ ಬೆರೆಯುವನೇ ?               ||೧||

ಚನ್ನ ಚಲ್ವಿಕೆ ಕಂಡು ಸೋಲದೆ ತಾ ನಿಂದು
ಆನ್ಯರು ಕೇಳಿದರ್‍ಹೇಳುವನೆ ?
ತನ್ನ ನಿಜದಿ ತಾನೆ ಲೀಲೆಯಿಂದಿರುವನು
ಶೂನ್ಯಕ್ಕೆ ಶೂನ್ಯ ತಾನಿರುತಿಹನು                    ||೨||

ಮೊದಲು ಶಿಶುವಿನಾಳ ಸದ್ಗುರು ನಿರ್ಮಳಸ್ಥಳ-
ಕ್ಕೊದಗಿ ಮೃದಂಗವ ಬಾರಿಸಿದ
ಆದನು ತಿಳಿದು ಸುಮನಿರು ನಡಿ ಹಿಂದಕ್ಕೆ
ಇದಕೇನು ಬಯಸುವದು ಬ್ಯಾಡಿನ್ನು                ||೩||
                 ****

ಕೀಲಿಕರಣ: ಎಂ.ಎನ್.ಎಸ್. ರಾವ್

ಎಂಥಿಂಥಾದೆಲ್ಲಾನು ಬರಲಿ

-ಶಿಶುನಾಳ ಶರೀಫ್

ಎಂಥಿಂಥಾದೆಲ್ಲಾನು ಬರಲಿ
ಚಿಂತೆಯಂಬೋದು ನಿಜವಾಗಿರಲಿ            ||ಪ||

ಪರಾತ್ಪರನಾದ ಗುರುವಿನ
ಅಂತಃಕರುಣ ಒಂದು ಬಿಡದಿರಲಿ               ||ಅ.ಪ.||

ಬಡತಾನೆಂಬುದು ಕಡತನಕಿರಲಿ
ವಡವಿ ವಸ್ತ ಹಾಳಾಗಿಹೋಗಲಿ
ನಡುವಂಥ ದಾರಿಯು ತಪ್ಪಿ
ಅಡವಿ ಸೇರಿದಂತಾಗಿ ಹೋಗಲಿ                 ||೧|| 

ಗಂಡಸ್ತಾನ ಇಲ್ಲದಂತಾಗಲಿ
ಹೆಂಡರು ಮಕ್ಕಳು ಬಿಟಗೊಟ್ಟು ಹೋಗಲಿ
ಕುಂಡಿ ಕುಂಡಿ ಸಾಲ್ದವರೊದಿಯಲಿ
ಬಂಡುಮಾಡಿ ಜನರು ನಗಲಿ                     ||೨||

ನಂಬಿಗೆ ಎಳ್ಳಷ್ಟಿಲ್ಲದಂತಾಗಲಿ
ಆಂಬಲಿ ಎನಗ ಸಿಗದೆಹೋಗಲಿ
ಹುಂಬಸುಳೇಮಗನೆಂದು ಬೈಯಲಿ
ಕಂಬಾ ಮುರಕೊಂಡು ಎನ್ನ ಮೇಲೆ ಬೀಳಲಿ  ||೩||

ವ್ಯಾಪಾರುದ್ಯೋಗ ಇಲ್ಲದಾಂತಾಗಲಿ
ಬುದ್ಧಿಯೆಂಬುದು ಮಸಣಿಸಿ ಹೋಗಲಿ
ಮದ್ದುಹಾಕಿ ಎನ್ನನು ಕೊಲ್ಲಲಿ
ಹದ್ದು ಕಾಗಿ ಹರಕೊಂಡು ತಿನ್ನಲಿ               ||೪||

ಭಾಷೆ ಪಂಥ ನಡಿದ್ಹಾಂಗಾಗಲಿ
ಹಾಸ್ಯಮಾಡಿ ಜನರೆಲ್ಲರು ನಗಲಿ
ಈ ಶಿಶುನಾಳಧೀಶ ಸದ್ಗುರುವಿನ
ಲೇಸಾದ ದಯವೊಂದು ಕಡೆತನಕಿರಲಿ     ||೫||
                ****

ಕೀಲಿಕರಣ: ಎಂ.ಎನ್.ಎಸ್. ರಾವ್

ಗುರುನಾಥಾ ರಕ್ಷಿಸೋ

-ಶಿಶುನಾಳ ಶರೀಫ್

ಗುರುನಾಥಾ ರಕ್ಷಿಸೋ ಹೇ
ಕರುಣಾಸಾಗರಾ                                             ||ಪ||

ನರಜೀವಿಗೆ ಈ ದುರಿತ ಭವದ ಭಯ
ಪರಿಹರಿಸೆನುತಲಿ ಮರೆಹೊಕ್ಕೆನು                        ||೧||

ಪಾಪಾಂಬುಧಿಯನು ಪಾರುಮಾಡೆನುತಲಿ
ಶ್ರೀಪಾದಾಂಬುಜ ನಂಬಿಕೊಂಡೆ ಪರಮಾತ್ಮಾ        ||೨||

ವಸುಧಿಯೊಳು ಶಿಶುನಾಳಧೀಶನ ಸೇವಕನ
ವ್ಯಸನಗಳಿದು ಸಂತೋಷದಿ ಸಲಹೋ                  ||೩||
                ****

ಕೀಲಿಕರಣ: ಎಂ.ಎನ್.ಎಸ್. ರಾವ್

ನನ್ನೊಳಗ ನಾ ತಿಳಕೊಂಡೆ

-ಶಿಶುನಾಳ ಶರೀಫ್


ನನ್ನೊಳಗ ನಾ ತಿಳಕೊಂಡೆ
ನನಗ ಬೇಕಾದ ಗಂಡನ್ನ ಮಾಡಿಕೊಂಡೆ ||ಪ||

ಆಜ್ಞಾಪ್ರಕಾರ ನಡಕೊಂಡೆ
ನಾ ಎಲ್ಲಾರ ಹಂಗೊಂದು ಹರಕೊಂಡೆ   ||ಅ.ಪ.||

ಆರು ಮಕ್ಕಳನಡುವಿಗಟ್ಟಿ
ಮೂರು ಮಕ್ಕಳ ಬಿಟ್ಟಗೊಟ್ಟೆ
ಇವನ ಮೇಲೆ ಮನವಿಟ್ಟೆ
ಎನ್ನ ಬದುಕು ಬಾಳೆವೆಲ್ಲಾ ಬಿಟ್ಟಗೊಟ್ಟೆ  ||೧||

ಒಂದನಾಡಿದರೆ ಕಡಿಮೆಯೆಂದೆ
ಮತ್ತೆರಡನಾಡಿದರೆ ಹೆಚ್ಚೆಂದೆ
ಬೆಡಗ ಮಾತಿದು ನಿಜವೈತಂದೆ
ಇದು ಸುಜ್ಞಾನಿಗಳಿಗೇ ತಿಳಿತೆಂದೆ        ||೨||

ಶಿವಶಿವಾಯೆಂಬ ಹಾದಿ ಬೇಡಿಕೊಂಡೆ
ಗುರೂಪದೇಶವ ಪಡಕೊಂಡೆ
ಈ ಭವಕೆ ಬಾರದಂತೆ ಮಾಡಿಕೊಂಡೆ
ಗುರುಗೋವಿಂದನ ಪಾದಾ ಹಿಡಕೊಂಡೆ   ||೩||
                ****



ಕೀಲಿಕರಣ: ಎಂ.ಎನ್.ಎಸ್. ರಾವ್

ಗುರುಧ್ಯಾನವ ಮಾಡಿದಿ

ಗುರುಧ್ಯಾನವ ಮಾಡಿದಿ
ಭಕ್ತಿಯ ನೀಡಿದಿ
ಮುಕ್ತಿಯ ಬೇಡಿದಿ
ಗುರುವಿನ ಕೂಡಿದಿ
ಕುಣಿಕುಣಿದಾಡಿದಿ
ಕೂಸು ನೀನಾಡಿದಿ ಈಶಾಡಿದಿ   || ೧ ||

ಬೆಳ್ಳನ್ನ ಬೆಳದಿಂಗಳಾ
ಹಾಲೂರಿದಂಗಳಾ
ಬೆಳ್ಳಿಯ ಗಂಗಾಳಾ ಬೆಳ್ಳನ್ನಂಗಳಾ
ಜಯ ಜಯ ಮಂಗಳಾ
ಸದಾ ಶಿಶುನಾಳ ಸಾಧುಸಂತ ಮೇಳಾ
ಗುರುಗೋವಿಂದ್ಹೌದೇಳಾ         || ೨ ||
                ****
-ಶಿಶುನಾಳ ಶರೀಫ್


ಕೀಲಿಕರಣ: ಎಂ.ಎನ್.ಎಸ್. ರಾವ್

ಹಾಕಿದ ಜನಿವಾರವಾ ಸದ್ಗುರುನಾಥಾ

ಹಾಕಿದ ಜನಿವಾರವಾ ಸದ್ಗುರುನಾಥಾ
ಹಾಕಿದ ಜನಿವಾರವಾ                                      || ಪ ||

ಹಾಕಿದ ಜನಿವಾರ ನೂಕಿದ ಭವಭಾರ
ಬೇಕೆನುತಲಿ ಬ್ರಹ್ಮಜ್ಞಾನ ಉಚ್ಚರಿಸೆಂದು             || ಅ. ಪ.||

ಸಂದ್ಯಾವಂದನೆ ಕಲಿಸಿ ಆ-
ನಂದದೀವ ಬಿಂದು ವರ್ಗದಿ ನಿಲಿಸಿ
ಹೊಂದಿಸಿ ಯಮುನಾತೀರದ ಮಧ್ಯದಲಿನಿಂದು
ಎಂದೆಂದಿಗೂ ಯಮದಂದುಗನವಳಿಯೆಂದು       || ೧ ||

ಶಿಶುನಾಳಧೀಶನಲ್ಲೇ ಹುಣ್ಣಿವಿನೂಲು
ಹೊಸತಾಗಿ ಹೊಸಿಯುತಲಿ
ಮುಸುಕಿರ್ದವ್ಯಸನದ ಕಸರನು ಕಳಿಯೆಂದು
ಹಸನಾಗಿ ಮೂಲಮಂತ್ರದ ಮನಿಯೊಳುನಿಂದು || ೨ ||
                ****
-ಶಿಶುನಾಳ ಶರೀಫ್


ಕೀಲಿಕರಣ: ಎಂ.ಎನ್.ಎಸ್. ರಾವ್

ನೋಡುನು ಬಾ ಗುರುನಾಥನ

ನೋಡುನು ಬಾ ಗುರುನಾಥನ ಸಖಿ
ನೋಡುನು ಬಾ ಮುಕ್ತಿ ಬೇಡುನು ಬಾರೆ                       || ಪ ||

ಕಾಮಿತ ಫಲವಾ ಪ್ರೇಮದಿ ಕೊಡುವಾ
ನಮ ರೂಪವ ಸಂಜೀವನ ಸಖಿ ನೋಡುನು ಬಾ             || ೧ ||

ಪರಮ ಪ್ರಕಾಶ ಪಾವನಕರ ಜಗದಿಶನೇ ಸಖಿ
ಹೃತಭವತಾಪಾ ಸಂಹೃತ ಕೋಪಾ ಗುಡಿಪುರ
ಕಲ್ಮಠ ಸ್ವರೂಪನ ಸಖಿ ನೋಡುನು ಬಾ                        || ೨ ||

ವಸುಧೆಗೆ ಶಿಶುನಾಳಧೀಶನೆನಸಿದ
ಎಸೆವೆನ್ನಿ ನೇತ್ರನ ವಂದಿಸಿಯಾತನ ಸಖಿ ನೋಡುನು ಬಾ || ೩ ||
                ****
-ಶಿಶುನಾಳ ಶರೀಫ್


ಕೀಲಿಕರಣ: ಎಂ.ಎನ್.ಎಸ್. ರಾವ್

ಗುರುವೆ ಬಿನ್ನಪವುದ್ಧರಿಸೋ

ಗುರುವೆ ಬಿನ್ನಪವುದ್ಧರಿಸೋ ಎನ್ನ
ಪರಮ ಸಖನ ಜ್ಜರದುರಿ ಪರಿಹರಿಸೋ              || ಪ ||

ಇರುತಿರೆ ಆತನ ಘಟಕೆ ರೋಗಬರುವುದಿನ್ನ್ಯಾಕೆ
ಮರಗುವ ಸಂಕಟವ್ಯಾಕೆ
ಮರೆಹೊಕ್ಕೆ ನಿನ್ನಯ ಪದಕೆ
ನಿಮ್ಮ ಸ್ಮರಿಸಲು ಈ ಕರ್ಮ ಸಂಕಟವ್ಯಾಕೆ         || ೧ ||

ದೇಹವೆರಡಾತ್ಮ ಒಂದಾಗಿ
ನಾವು ತಾವು ಗುರುಸೇವೆಗೆ ಆನುಕೂಲವಾಗಿ
ಭವದ ಲಂಪಟ ಕರ್ಮನೀಗಿ
ನಿತ್ಯ ಶಿವಧ್ಯಾನದೊಳು ನಾವು ಇರುತಿರಲಾಗಿ     || ೨ ||

ಬೇಡಿಕೊಂಬುವೆ ಭಕ್ತಿಗಾಗಿ
ದಯಮಾಡಿ ರಕ್ಷಿಸಬೇಕು ಕಲ್ಮಷ ನೀಗಿ
ನೋಡಿ ಕಡಿಯೋ ಭವಬಂದಾ
ರೂಡಿಪ ಶಿಶುನಾಳಧೀಶನ ಕಂದಾ                   || ೩ ||
                ****
-ಶಿಶುನಾಳ ಶರೀಫ್


ಕೀಲಿಕರಣ: ಎಂ.ಎನ್.ಎಸ್. ರಾವ್

ಅಬ್ಬಾಸ್ ಮೇಲಿನಮನಿ

ಸಮಕಾಲೀನ ಪೀಳಿಗೆಯ ಕತೆಗಾರರಲ್ಲಿ ಅಬ್ಬಾಸ್ ಮೇಲಿನಮನಿ ಹೆಸರು ಬಹು ಮುಖ್ಯವಾದುದು.  ಶರಣರು ಮೆಟ್ಟಿದ ನೆಲದಲ್ಲಿರುವ ಅಬ್ಬಾಸ್ ಮೌಲ್ಯಗಳ ಬಿತ್ತು ಕಾಯಕವನ್ನು ತಮ್ಮ ಸಂವೇದನಶೀಲ ಕತೆಗಳ ಮೂಲಕ ಮಾಡುತ್ತ ಬಂದಿದ್ದಾರೆ.  ಆಡು-ನುಡಿ ಸೊಗಡಿನ ಭಾಷೆ; ಕಾವ್ಯದ ಲಯದಲ್ಲಿ ಓದುಗನಿಗೆ ನವನವೀನ ಪ್ರತಿಮೆ, ಆಕೃತಿಗಳನ್ನು ಕಟ್ಟಿಕೊಡುವುದನ್ನು ಇವರು ಕತೆಗಳ ಮೂಲಕ ಮಡಿರುತ್ತಾರೆ.

ಹಿಂದೂ ಮುಸ್ಲಿಂ ಸಮುದಾಯಗಳ ಸಾಮಾಜಿಕ ಸಂಬಂಧಗಳನ್ನು, ಅದರ ಸಂವೇದನೆಗಳನ್ನು ಅಬ್ಬಾಸ್‌ರ ಕತೆಗಳು ಕಟ್ಟಿಕೊಡುತ್ತವೆ.  ಒಂದು ಸಮಾಂತರದ ನೆಲೆಯಲ್ಲಿ ನಿಮತು ಧ್ಯಾನಸ್ಥನಾಗಿ ಕಾಣುವ ಪರಿ ಅನನ್ಯ.  ಸಮಾಜದ ಆ ಬಗೆಯ ವಿವಿಧ ಮುಖಗಳ ಅನುಭೂತಿ ಇವರ ಕತೆಗಳಲ್ಲಿದೆ.

ಕವನ ಸಂಕಲನ:

೧. ಕಥೆಯಾದಳು ಹುಡುಗಿ
೨. ಭಾವೈಕ್ಯ ಬಂಧ
೩. ಪ್ರೀತಿ ಬದುಕಿನ ಹಾಡು

ಕಥಾ ಸಂಕಲನ:

೧. ಪ್ರೀತಿಸಿದವರು
೨. ಕಣ್ಣ ಮುಂದಿನ ಕಥೆ
೩. ಅರ್ಧ ಸತ್ಯಗಳು (ಬನಹಟ್ಟಿಯ ಚಿಕ್ಕೋಡಿ ತಮ್ಮಣ್ಣಪ್ಪ ಸಾಹಿತ್ಯ ಪುರಸ್ಕಾರ)
೪. ಮತ್ತೊಂದು ಕರ್ಬಲಾ (ಮಂಗಳೂರಿನ ಮುಹ್ಯುದ್ದೀನ್ ಸಾಹಿತ್ಯ ಪ್ರಶಸ್ತಿ)
೫. ಅಬ್ಬಾಸರ ಐವತ್ತು ಕಥೆಗಳು (ಡಾ. ಗೊರೂರು ಸಾಹಿತ್ಯ ಪ್ರಶಸ್ತಿ)
೬. ಹುಡುಕಾಟ (ಪಿ.ಲಂಕೇಶ ಕಥಾ ಪ್ರಶಸ್ತಿ ಹಾಗೂ ಶಿವಾನಂದ ಪಾಟೀಲ ಕಥಾ ಪ್ರಶಸ್ತಿ)
೭. ಅರ್ಥ (ಕನ್ನಡ ಸಾಹಿತ್ಯ ಪರಿಷತ್ತಿನ ಸಮೀರವಾಡಿ ದತ್ತಿ ಪ್ರಶಸ್ತಿ)

ಲೇಖನ ಸಂಕಲನ:

ಸೌಹಾರ್ದ ಸಂಸ್ಕೃತಿ

ಸಂಪಾದನೆ:

೧. ಸಣ್ಣ ಕಥೆಗಳು - ೨೦೦೪ (ಕರ್ನಾಟಕ ಸಾಹಿತ್ಯ ಅಕಾಡೆಮಿ)
೨. ಬಾಗಲಕೋಟೆಯ ಮುಳುಗದ ಕಥೆಗಳು (ಜಿಲ್ಲಾ ಪ್ರಾತಿನಿಧಿಕ ಕಥಾ ಸಂಕಲನ, ಉಡುಪಿ ಸಾಹಿತ್ಯ ಸಮ್ಮೇಳನ)
೩. ಏನೆಲ್ಲಾ ಚಿತ್ರಗಳು ತಾಯಿ (ಅವ್ವನ ಕುರಿತಾದ ಪ್ರಾತಿನಿಧಿಕ ಕವನ ಸಂಕಲನ)
೪. ಪ್ರಜ್ಞೆ (ಆಕರ ಗ್ರಂಥ, ಕನ್ನಡ ಪುಸ್ತಕ ಪರಿಷತ್ತು ಬಾಗಲಕೋಟ)

ಈ ದಿನಾಂಕದವರೆಗೆ ಲಭ್ಯವಾದ ಮಾಹಿತಿ:  ೨೦೦೮