ಹಬ್ಬಗಳ ಸುಗ್ಗಿ

- ಹಾರಾಸನಾ

ಬೆಳಕಗಣಿಗೆ ದಿಶೆಯ ಬದಲಿಕೆ ಒದಗಿ ಬರಲು
ಬೆಳೆದ ಮಾಣಿಗೆ ಬೆಳೆಯ ಸುಗ್ಗಿಯು ಹರ್ಷ ತರಲು
ಬೆಲ್ಲ ಕಬ್ಬು ಎಳ್ಳು ಬೆರೆಸಿ ಮನೆಮನೆಯಲು ಬೀರಲು
ಎಲ್ಲ ಸೇರಿ ದನಕು ಸಿರಿಯು ಒಮ್ಮತವನೆ ತಾರಲು
                ಬಂತು ಸಂಕ್ರಾಂತಿ |

ಈ ವತ್ಸರವು ಪೂರ್ಣವಾಗಿಸೆ ರವಿಗೆ ತಿರುಗು
ಸಂವತ್ಸರಕೆ ಹೊಸನಾಮದ ದೀವಿಗೆ ಮೆರುಗು
ಕೊನೆಯಿಲ್ಲ ಬರಿಯಾದಿ ಬೇವು ಬೆಲ್ಲದ ನಂಟು
ಮನೆಮಂದಿಗೆಲ್ಲ ಒಬ್ಬಟ್ಟಿನ ಸಿಹಿಯಂತು ಉಂಟು
                ತಂತು ಯುಗಾದಿ |

ಮಿನಾದಲ್ಲಿ ವ್ರತವ ಪಾಲಿಸಿ ಹರಕೆ ಸಲ್ಲಿಪ ಭಕ್ತರು
ಮೆಕ್ಕಾದಲ್ಲಿ ಕಾಬಾವನ್ನು ದೇವಲಾಂಚನವೆಂಬರು
ಬಕ್ರೀದ್‌ದಲ್ಲಿ ರಂಜ್ಹಾನಲ್ಲಿ ಎಲ್ಲ ಸೇರಿ ನಲಿವರು
ಹಸಿದವನಿಗೆ ಭಿಕ್ಷೆ ನೀಡಿ ದೈವರಕ್ಷೆ ಹೊಂದುವರು
                ಈದ್ ಮಿಲಾದ್ |

ತನಯನೊಡನೆ ತಾಯಿ ಬರುವಳು ಭಾಗ್ಯ ತರುವಳು
ವಿನಯದಿಂ ಜನ ಪೂಜೆ ಗೈಯ್ವರು ವೃದ್ಧಿ ಪಡೆವರು
ವರಗಳೊಡನೆ ಹರಸಿ ಪೊರೆವರು ಸದಾ ಕಾಯ್ವರು
ಕರದಂಟು ಕಡಬುಗಳ ಮಾಡುವರು ಹಂಚುವರು
                ಬಂದರೇ ಗೌರಿ ಗಣೇಶ |

ದಂಡಿಪಳು ದುರ್ಜನರ ದುರ್ಗಾ ದೇವಿಗೆ ನಮನ
ದಂಡಾದಿ ಆಯುಧಕೂ ಹರಿದ್ರಾವಣದಿ ಸಿಂಚನ
ಹೊತ್ತು ತರುವಳು ವಿಜಯವೆಲ್ಲರಿಗು ದಶಮಿದಿನ
ಹತ್ತುದಿನಗಳ ನಾಡಹಬ್ಬಕೆ ಮಿಡಿವುದು ಜನಮನ
                ಬರಲಿ ದಸರಾ |

ಜೀವ ಜೀವವೂ ಬೆಳಕಕಿಡಿಗಳೇಂಬ ಸತ್ಯವ ಸಾರುತ
ಸೂರ್ಯನಿರದಿರೆ ಹಣತೆಯೇ ಭಾಸನೀಡ್ವುದು ಸಂತತ
ನರಕಫಲಿಸುವ ಗುಣಗಳನ್ನು ಕಳೆವ ಕೃಷ್ಣನ ನೆನೆಯುತ
ವರದ ಬಲಿಯ ಮನೆಯ ಕಾಯ್ದ ದೇವನನ್ನು ಸ್ಮರಿಸುತ
                ಆಚರಿಸುವ ದೀಪಾವಳಿ |

ದೇವ ದೇವನ ನಿಜವನರಿತ ದೇವದೂತನ ಜನನದ
ದಿವ್ಯದಿನದಿ ಅವನ ಮಹಿಮೆಯ ಇಗರ್ಜಿಯಲಿ ಪಾಡುತ
ಇಷ್ಟ ಬಂಧು ಜನರ ಕೂಡುತ ಪೇಯಪಿಷ್ಟವ ನೀಡುತ
ಕಷ್ಟ ಮರೆತು ಸರ್ವಜೀವಕು ಮುದವನೇ ತಾ ತಾರುತ
                ಖುಷಿಯ ಕ್ರಿಸ್ಮಸ್ |

ಸಮನ್ವಯ ಜೀವನವೇ ರಾಷ್ಟಕ್ಕೊಂದು ಹಬ್ಬ
ಸಮರಸ ಸಂಸಾರವೇ ಕುಟುಂಬಕ್ಕೊಂದು ಹಬ್ಬ
ಸಮತೂಲಿತ ಮಾನಸವೇ ವ್ಯಕ್ತಿಗೊಂದು ಹಬ್ಬ
ಸಮಭಾವಿತ ಸಜ್ಜನಿಕೆಯೇ ಸರ್ವರಿಗು ನಿಜಹಬ್ಬ
                ದೇಶದ ನಿಜಹಬ್ಬ |
           *****

ಮಾನಸ ವೀಣ

- ಗಿರಿಜಾಪತಿ ಎಂ. ಎನ್

ಮಾನಸ ಲೋಕದ ಪ್ರಭುವೆ
ಮನ ಮಾನಸದ ಹೊನಲಿನ ವಿಭುವೆ  ||ಪ||

ಮುಗಿಲಿಗೂ ಮಿಗಿಲು
ನಿನ್ನಯ ಹರವು
ಕಡಲಿಗೂ ಹಿರಿದು
ತಿಳಿವಿನ ಅಳವು

ಸಮೀರನ ಹಿಂದಿಕ್ಕೂ
ವೇಗದ ಲೀಲೆ
ಅನಲನ ದಾಟಿಸೋ
ಅಪುವಿನ ಓಲೆ

ಮಾಯಾ ಮೃಗದ
ನಯನದ ಮಿಂಚೊ
ನಾನಾ ಛಾಯೆಯ
ಥಳುಕಿನ ಸಂಚೋ

ಕಾಂತ ಕಾಂತಿಗಳ
ಏಕಾನೇಕದ ದೀಪ್ತಿ
ಕ್ರಾಂತಿಯುತ್ಕ್ರಾಂತಿಯ
ನಿಮೀಲನ ಶಕ್ತಿ

ಮಾತನು ಮೀರಿದ
ಮೌನದ ಮನನ
ನಿಧಿನ್ಯಾಸ ಧ್ಯಾನದಿ
ನಿನ್ನಯ ದರುಶನ ||

        *****

ಕೀಲಿಕರಣ: ಕಿಶೋರ್‍ ಚಂದ್ರ

ಸಿದ್ಧಾಂತ

-ಅಬ್ಬಾಸ್ ಮೇಲಿನಮನಿ

ಉಗ್ರಪ್ಪ ನಾಲ್ಕನೆಯ ಬಾರಿ ಸಾರ್ವತ್ರಿಕ ಚುನಾವಣೆಯಲ್ಲಿ ಗೆದ್ದು ಹ್ಯಾಟ್ರಿಕ್ ಸಾಧಿಸಿದ್ದ.  ಅಭಿಮಾನಿಗಳು ಅತ್ಯಂತ ವೈಭವದಿಂದ ಅವನ ವಿಜಯೋತ್ಸವ ಆಚರಿಸಿದರು.  ತೆರೆದ ವಾಹನದಲ್ಲಿ ಊರ ತುಂಬ ಮೆರೆಸಿದರು.

ಗೆಲುವಿನಿಂದ ಬೀಗಿಕೊಂಡಿದ್ದ ಉಗ್ರಪ್ಪನ ಬಳಿಗೆ ಬಂದ ಪತ್ರಕರ್ತನೊಬ್ಬ "ನೀವು ಕೂದಲೆಳೆಯಲ್ಲಿ ಸೋಲು ತಪ್ಪಸಿಕೊಂಡಿರಿ" ಎಂದ.

"ನಾನು ಸೋಲಿಲ್ಲದ ಸರದಾರ" ಅತ್ಯುತ್ಸಾಹದಿಂದ ಉದ್ಗರಿಸಿದ ಉಗ್ರಪ್ಪ.

"ನಿಮ್ಮ ಅಧಿಕಾರದ ಅವಧಿಗಳಲ್ಲಿ ಮತಕ್ಷೇತ್ರದ ಎಲ್ಲ ರಸ್ತೆಗಳನ್ನು ರಾಜಮಾರ್ಗಗಳನ್ನಾಗಿ ರೂಪಿಸುತ್ತೇನೆ ಎಂದಿದ್ದೀರಿ" ಪರ್ತಕರ್ತ ಹೇಳಿದ.

"ಹೌದು" ಚುಟುಕಾಗಿ ಉಲಿದ ಉಗ್ರಪ್ಪ.

"ಉದ್ದಿಮೆ ಸ್ಥಾಪಿಸಿ ನಿರುದ್ಯೋಗಿ ಯುವಕರಿಗೆ ಭವಿಷ್ಯ ನೀಡುತ್ತೇನೆಂದು ಪ್ರಮಾಣ ಮಾಡಿದ್ದೀರಿ".

"ಅದು ನಿಜ"

"ರೈತರಿಗೆ ಉಚಿತ ವಿದ್ಯುತ್, ಪಂಪ್‌ಸೆಟ್ಟು, ಬೀಜ, ಗೊಬ್ಬರ ಪೂರೈಸಿ ಅನ್ನದಾತರನ್ನು ಬದುಕಿಸುತ್ತೇನೆ ಎಂದು ಘೋಷಿಸಿದ್ದೀರಿ".

"ಹೌದು".

"ಕುಡಿಯುವ ನೀರಿಗೆ ತೊಂದರೆ ಬಾರದಂತೆ ನೋಡಿಕೊಳ್ಳುತ್ತೇನೆ.  ಹಸಿವಿನ ಸಂಕಟದಿಂದ ಜನರು ಸಾಯದಂತೆ ಎಚ್ಚರಿಕೆ ವಹಿಸುತ್ತೇನೆ.  ನೂರಕ್ಕೆ ನೂರರಷ್ಟು ಜನರನ್ನು ಸಾಕ್ಷರರನ್ನಾಗಿಸಲು ಹೋರಾಡುತ್ತೇನೆ.  ರೋಗ-ರುಜಿನಗಳಿಂದ ಜನರು ಸತ್ತು ಹೋಗದಂತೆ ಅಮೃತ ಕುಡಿಸುತ್ತೇನೆ ಎಂದು ನೂರಾರು ಸಭೆಗಳಲ್ಲಿ ಹೇಳುತ್ತಿದ್ದಿರಿ."

"ಹೌದು... ಹೌದು... ಹೌದು."

"ಆದರೆ ನೀವು ಏನನ್ನೂ ಮಾಡಲಿಲ್ಲ"  ವಿಷಾದ ವ್ಯಕ್ತಪಡಿಸಿದ ಪತ್ರಕರ್ತ.

"ನನ್ನ ಗೆಲುವಿಗೆ ಅದೇ ಆಧಾರವಲ್ಲವೆ?"  ನಗುತ್ತ ಕೇಳಿದ ಉಗ್ರಪ್ಪ.

ಅವನ ಪ್ರಶ್ನೆಗೆ ದಿಗಿಲುಗೊಂಡ ಪತ್ರಕರ್ತ ತುಸು ಏರುಧ್ವನಿಯಲ್ಲಿ ಹೇಳಿದ "ನೀವು ರಾಜಕಾರಣಿಗಳು ಬರಿ ಸುಳ್ಳು ಹೇಳುತ್ತೀರಿ.  ಭರವಸೆಯ ಗಾಳಿ ಊದಿ ಜನರನ್ನು ರಬ್ಬರಿನ ಬಲೂನ್ ಆಗಿಸುತ್ತೀರಿ."

"ಎಷ್ಟೇ ಆಗಲಿ ನೀವೂ ಪತ್ರಕರ್ತರು.  ರಾಜಕಾರಣದ ಸಿದ್ಧಾಂತವನ್ನು ಚೆನ್ನಾಗಿ ಅರ್ಥಮಾಡಿಕೊಂಡಿದ್ದೀರಿ"  ಹ್ಹ ಹ್ಹ ಹ್ಹ.... ಎಂದು ಹಗುರಾಗಿ ನಕ್ಕ ಉಗ್ರಪ್ಪ.  ಆ ಲಜ್ಜೆಗೇಡಿ ನಗೆ ಕಂಡು ಕೋಪಿಸಿಕೊಂಡ ಪತ್ರಕರ್ತ "ಇಂಥ ರಾಜಕಾರಣದಿಂದ ದೇಶಕ್ಕೇನು ಲಾಭ?" ಎಂದು ವ್ಯಂಗ್ಯದ ಬಾಣ ಎಸೆದ.

"ದೇಶಕ್ಕೇನೋ ಗೊತ್ತಿಲ್ಲ.  ನನಗಂತೂ ಇದೆ.  ನನ್ನ ನಂಬಿಕೊಂಡವರಿಗೂ ಅನುಕೂಲವಿದೆ" ಯಾವ ಮುಜುಗರವಿಲ್ಲದೆ ಹೇಳಿದ ಉಗ್ರಪ್ಪ.

"ಒಂದಿಲ್ಲ ಒಂದಿನ ಜನ ನಿಮ್ಮ ಸ್ವಾರ್ಥದ ಎದುರು ನಿಂತರೆ?"

"ಬಲೂನಿಗೆ ಗಾಳಿ ತುಂಬುವುದರಲ್ಲಿ ನಾನು ಚಾಣಾಕ್ಷ.  ಹಾಗೆಯೇ ಉಬ್ಬಿದ ಬಲೂನುಗಳ ಗಾಳಿ ತೆಗೆಯುವ ತಂತ್ರದಲ್ಲಿ ನಾನು ಎಕ್ಸ್‌ಪರ್ಟು ಮಾರಾಯರೆ!"  ಆತ್ಮವಿಶ್ವಾಸ ವ್ಯಕ್ತಪಡಿಸಿದ ಉಗ್ರಪ್ಪ.

ಪತ್ರಕರ್ತ ತುಟಿ ಹೊಲಿದುಕೊಂಡಂತೆ ಕುಳಿತ.

            *****

ಕೀಲಿಕರಣ: ಕಿಶೋರ್‍ ಚಂದ್ರ

ಅಗ್ಗದರವಿಯ ತಂದು ಹಿಗ್ಗಿ ಹೊಲೆಸಿದೆನಂಗಿ

-ಶಿಶುನಾಳ ಶರೀಫ್

ಅಗ್ಗದರವಿ ತಂದು
ಹಿಗ್ಗಿ ಹೊಲೆಸಿದೆನಂಗಿ
ಹೆಗ್ಗಣ ವೈತವ್ವ ತಂಗಿ ಈ ಅಂಗೀ                    ||ಪ||

ಅಗಣಿತ ವಿಶಯದ
ಆರು ಗೇಣಿನ ಕವಚ
ಬಗಲು ಬೆವರನು ಕಡಿದು
ಸಿಗದೆ ಹೋಯಿವ್ವ ತಂಗಿ ಈ ಅಂಗೀ                ||೧||

ಬುದ್ಧಿಗೇಡಿಗಳಾಗಿ
ನಿದ್ದಿ ಕೆಡಿಸಿಕೊಂಡು
ಎದ್ದು ನೋಡಲು ಕರ್ಮ
ಗುದ್ದಿನೊಳಡಗಿಕೊಂಡಿತವ್ವ ತಂಗೀ ಈ ಅಂಗೀ   ||೨||

ಕಳನೀಪರಿ ರಾತ್ರಿ
ಬೆಳಗಾಗೋ ಸಮಯದಿ
ಚಲುವ ಶಿಶುನಾಳದೀಶ-
ನುಳುವಿ ಕೊಟ್ಟಾನವ್ವ ತಂಗಿ ಈ ಅಂಗೀ            ||೩||

****

ಕೀಲಿಕರಣ: ಎಂ.ಎನ್.ಎಸ್. ರಾವ್

ಜನ ಮೆಚ್ಚಿದ ಶಿಕ್ಷಕ

-ಅಬ್ಬಾಸ್ ಮೇಲಿನಮನಿ

ಕಾರ್ಯಾಲಯದಲ್ಲಿ ಶಿಕ್ಷಣಾಧಿಕಾರಿಗಳು ಕಡತ ನೋಡುವಲ್ಲಿ ಮಗ್ನರಾಗಿದ್ದರು.  ಹೊರಗೆ ಕೂಗಾಟ ಕೇಳಿಸಿತು.  "ಧಿಕ್ಕಾರ.... ಧಿಕ್ಕಾರ.... ಹಲ್ಕಾ ಶಿಕ್ಷಕನಿಗೆ ಧಿಕ್ಕಾರ."  ಧ್ವನಿ ಜೋರಾಗಿತ್ತು.  ಸಾಹೇಬರು ಎದ್ದು ಹೊರಗೆ ಬಂದರು.  ಆವರಣದ ತುಂಬ ಜನ.  ಸಾಹೇಬರನ್ನು ಮತ್ತು ಅವರ ಹಿಂದೆ ಬಂದ ಸಿಬ್ಬಂದಿಯನ್ನು ಕಂಡು ಜನರ ಕೂಗು ಇನ್ನೂ ಮುಗಿಲಿಗೇರಿತ್ತು.

ಬಂದವರೆಲ್ಲ ಗ್ರಾಮಸ್ಥರು, ಅವರಲ್ಲಿ ಕೆಲವರನ್ನು ಗುರುತಿಸಿದ ಸಾಹೇಬರು "ಏನ್ರಿ ಗೌಡರೆ ಇದೆಲ್ಲ?" ಎಂದು ಕೇಳಿದರು.  ಹಳ್ಳಿಯ ಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷರಾಗಿದ್ದ ಅವರು ಮತ್ತು ಉಳಿದ ಸದಸ್ಯರು ಮುಂದೆ ಬಂದರು.  "ನಮ್ಮೂರಿನ ಸಾಲಿಗೆ ಆ ಬೆಂಕಿಮಠ ಮಾಸ್ತರ ಬ್ಯಾಡ ಸಾಹೇಬರ" ಗೌಡರು ಪ್ರತಿಭಟನೆಯ ಧ್ವನಿಯಲ್ಲಿ ಹೇಳಿದರು.  ಪರಿಸ್ಥಿತಿ ಗಂಭೀರವಾಗಿದೆಯೆಂದು ಸೂಕ್ಷ್ಮವಾಗಿ ಗ್ರಹಿಸಿಕೊಂಡ ಸಾಹೇಬರು ಅವರನ್ನು ಒಳಗೆ ಕರೆದುಕೊಂಡು ಹೋದರು.

ಕುಳಿತುಕೊಳ್ಳುತ್ತಿದ್ದಂತೆ ಗೌಡರು "ಸಾಹೇಬರ ಈಗಿಂದೀಗ ಆ ಹಲ್ಕಾ ಮಾಸ್ತರನನ್ನ ಟ್ರಾನ್ಸ್‌ಫರ್‍ ಮಾಡ್ರಿ.  ನಮ್ಮ ಸಾಲಿಗೆ ಬ್ಯಾರೆ ಮಾಸ್ತರನ್ನ ಕೊಡ್ರಿ" ಎಂದು ತೀವ್ರವಾಗಿ ಒತ್ತಾಯಿಸಿದರು.  ಈಗವರು ಬೇಡವೆನ್ನುತ್ತಿರುವ ಶಿಕ್ಷಕರಿಗೆ ಇದೇ ಗೌಡರು ಕಳೆದ ವರ್ಷ `ಜನ ಮೆಚ್ಚಿದ ಶಿಕ್ಷಕ' ಪ್ರಶಸ್ತಿ ಕೊಡಿಸಿಕೊಂಡು ಮೆರವಣಿಗೆ ಹೋಗಿದ್ದರ ದೃಶ್ಯ ಕಣ್ಮುಂದೆ ತೇಲಿ ಹೋಯಿತು.  ಈಗವರೇ ಮೆರವಣಿಗೆಯಲ್ಲಿ ಬಂದು ಅವನ ಬಗ್ಗೆ ಧಿಕ್ಕಾರ ಹೇಳುತ್ತಿರುವುದು ಸೋಜಿಗವೆನಿಸಿ "ಏನ್ರಿ ಗೌಡ್ರೆ ಹಕೀಕತ್ತು?" ಎಂದು ಪ್ರಶ್ನಿಸಿದರು.

"ಅಂವಾ ಮಾಸ್ತರ ಆಗಾಕ ಅಯೋಗ್ಯದಾನ ಸಹೇಬರ" ಎಂದು ಬೆಂಕಿಮಠನ ಬಗ್ಗೆ ವಿವರ ನೀಡಿದರು ಗೌಡರು.  ಶಾಲೆಗೆ ಗೈರು ಆಗುವುದು, ಶಿಕ್ಷಕಿಯೊಂದಿಗೆ ಅಸಭ್ಯವಾಗಿ ನಡೆದುಕೊಳ್ಳುವುದು.  ಪುಸ್ತಕ ಮಾರಿಕೊಳ್ಳುವುದು, ಶಾಲೆಯಲ್ಲಿ ವಾಸ್ತವ್ಯ ಹೂಡಿ ಇಸ್ಪೀಟ್ ಆಡುವುದು, ಕುಡಿಯುವುದು, ತಿನ್ನುವುದು, ಎಂಟು ದಿನಗಳ ಹಿಂದೆ ಏಳನೆಯ ತರಗತಿಯ ಹುಡುಗಿಯೊಬ್ಬಳ ಮೇಲೆ ಬಲಾತ್ಕರಿಸಲು ಯತ್ನಿಸಿದ್ದರ ಬಗ್ಗೆ ಹೇಳಿ "ಆ ನಾಲಾಯಕ ಮಾಸ್ತರ ನಮ್ಮ ಕೈಯಾಗ ಸಿಗಲಿಲ್ಲ.  ಇಷ್ಟು ದಿನಾತು ಅವನ ಪತ್ತಾನೂ ಇಲ್ಲ.  ಅಂವಾ ಶಿಕ್ಷಣ ಇಲಾಕೆಯಾಗ ಇರ್ಲಿಕ್ಕೆ ಅಯೋಗ್ಯ ಅದಾನ" ಎಂದು ಆಕ್ರೋಶ ವ್ಯಕ್ತಪಡಿಸಿದರು.

"ಗೌಡರೆ, ಕಳೆದ ವರ್ಷ ಆ ಶಿಕ್ಷಕ ಛಲೋ ಸಜ್ಜನ ಮನುಷ್ಯ ಅದಾನ, ನೀವು ಅವನಿಗೆ ಪ್ರಶಸ್ತಿ ಕೊಡದಿದ್ರ ಇಲಾಖೆ ಎದುರು ಉಪವಾಸ ಕುಂದ್ರಿತೀನಿ ಅಂದ್ರಿ.  ರಾಜಕೀಯ ಮಂದಿಯ ಒತ್ತಡ ತಂದ್ರಿ.  ಅವನ ವರ್ತನೆ ನಿಮ್ಮ ಗಮನಕ್ಕೆ ಬಂದಿದ್ದಲೇನ್ರಿ?"  ಸಾಹೇಬರು ಕೇಳಿದರು.

"ಹುತ್ತಿನ್ಯಾಗಿಂದ ಹೊರಗ ಬಂದಾಗ ಗೊತ್ತಾಗೊದಲ್ರಿ ಯಾವ ಹಾವು ಅಂತ!"

ಗೌಡರ ಮಾತು ಕೇಳುತ್ತಲೇ ಸಂಬಂಧಿಸಿದ ಕಾರಕೂನರನ್ನು ಕರೆಯಿಸಿದ ಸಾಹೇಬರು "ಈಗಿಂದೀಗ ಆ ಬೆಂಕಿಮಠ ಶಿಕ್ಷಕರನ್ನ ಸಸ್ಪೆಂಡ್ ಮಾಡಿದ ಕಾಗದ ಟೈಪ್ ಮಾಡಿಸ್ಗಂಡು ಬರ್‍ರಿ" ಎಂದರು.

"ಸಸ್ಪೆಂಡ್ ಮಾಡಿದ್ರ ಮತ್ತ ಆ ಮಾಸ್ತರಗ ಬಲ ಹೆಚ್ಚಿಗ ಬರ್ತೈತಿ ಸಾಹೇಬರ.  ದೊಡ್ಡ ದೊಡ್ಡವರ ಕೈಗಳು ಸಸ್ಪೆಂಡ್ ಆದವರನ್ನು ಉಳಿಸಿಕೊಳ್ಳಾಕ ನೋಡ್ತಾವು.  ಆ ಮಾಸ್ತರನ ಡಿಸ್ಮಿಸ್ ಮಾಡಬೇಕು.  ಒಂದು ಹುಳಾ ನೂರು ಹುಳಾನ್ನ ಹುಟ್ಟುಸ್ತಾವು!"  ಗೌಡರು ಒತ್ತಾಯಿಸಿದರು.

"ಗೌಡರೆ ನನ್ನ ಅಧಿಕಾರದ ಮಿತಿಯಾಗ ನಾನು ಕೆಲಸ ಮಾಡಬೇಕು.  ನೀವು ಅದರ ಬಗ್ಗೆ ಕಾಗದ ಕೊಡ್ರಿ.  ನಾನು ಮೇಲಿನ ಸಾಹೇಬರಿಗೆ ಕಳಿಸ್ತೀನಿ"  ಹೀಗೆ ಹೇಳಿ ಕುಳಿತರು ಸಾಹೇಬರು.

ಹೊರಗೆ ಬೆಂಕಿಮಠ ಮಾಸ್ತರನ ವಿರುದ್ಧದ ಕೂಗು ಕೇಳಿಸುತ್ತಲೇ ಇತ್ತು.

            *****

ಕೀಲಿಕರಣ: ಕಿಶೋರ್‍ ಚಂದ್ರ

ಆ ರಾತ್ರೆಯ ಮೊರೆತ

- ಮಂಜುನಾಥ ವಿ ಎಂ

ಆಗ ನಾವೆಲ್ಲರೂ ರೈಲಿನಲ್ಲಿ ಪ್ರಯಣ ಮಾಡುತ್ತಿದ್ದೆವು;
ಆಲಿಕಲ್ಲುಗಳು ಬಂಡೆಗಲ್ಲಿನಂತೆ ಬಿದ್ದು ನೀರಾಗುತ್ತಿದ್ದವು.
ಲಾವಣಿ ಪದ, ಒಣಗಿಸಿ ಸುಟ್ಟ ಹಸುಮಾಂಸ, ಕಾಯಿಸಿದ
ರಮ್ ಹೀರುತ್ತಿದ್ದೆವು. ಅವನ ತರಡಿನ ದರಿದ್ರ ಹೇನುಗಳು
ನಮ್ಮ ತಲೆ ತಿನ್ನುತ್ತಿದ್ದವು. ಅದು ಕನಸುಗಳಲಿ ಮೈ ಮರೆವ
ಹೊತ್ತು-ಶೀತಲ ಗಾಳಿ ಹಾವಿನಂತೆ ಸುಳಿದು ಹೊಗೆಯಾಡುತ್ತಿತ್ತು.
ಮಲಗಿದಲ್ಲೇ ಕಕ್ಕಸು ಮೂತ್ರ ಮಾಡಿಕೊಂಡ.  ರೋಮನ್
ಕ್ಯಾಥೊಲಿಕ್ ಸನ್ಯಾಸಿನಿಯರ ಹಿಂಸೆಯಿಂದ ಪಾರಾಗಿ ಬಂದ ವೃದ್ಧೆ;
ಸುಖವನ್ನು ಬಚ್ಚಿಟ್ಟುಕೊಂಡ ರಕ್ತನಾಳಗಳು ದುಃಖಸೂಚಕ
ರಾತ್ರೆಗಳನ್ನು ತಿರುವಿ ಹಾಕುತ್ತಿದ್ದವು.  ಹಿಂದೊಮ್ಮೆ ಇದೇ ಹಳ್ಳಿಯ
ಹಾದಿ ಬದಿಯ ಹೂರೆಕ್ಕೆಗಳು ನಮ್ಮನ್ನು ಬಡಿದೆಬ್ಬಿಸಿದ್ದವು.

ಆಗ ನಾವು ಮಗ್ಗಲು ಬದಲಿಸಿದೆವು; ಒಬ್ಬೊಬ್ಬರಾಗಿ ಪ್ರೇಮಿಸಲು
ಯತ್ನಿಸಿದೆವು.
      *****

ಜಾತಿ ಮಾಡಬ್ಯಾಡಿರಿ

- ಡಾ || ರಾಜಪ್ಪ ದಳವಾಯಿ

ಜಾತಿ ಮಾಡಬ್ಯಾಡಿರಿ
ಪಂಚಾಯ್ತಿ ವಳಗೆ ||

ಜಾತಿ ಎಂಬುದು ಒಳರೋಗ
ನ್ಯಾಯ ನೀತಿಗದು ಮೋಸಾದಗ
ಜಾತಿ ಮಾಡಬ್ಯಾಡಿರಿ
ಓಟು ಹಾಕುವಾಗ ||

ನಮ್ಮವನೆಂಬುದು ಸರಿಯಲ್ಲ
ಒಂದೆ ಜಾತಿಗೆ ಅಧಿಕಾರವಲ್ಲ
ಜಾತಿ ಮಾಡಬ್ಯಾಡಿರಿ
ಸವಲತ್ತು ಕೇಳುವಾಗ ||

ಜಾತಿ ಮೀರಬೇಕೊ ಅಣ್ಣ
ಅದಕು ಘನ ಮನುಷನಣ್ಣ
ಜಾತಿ ಮಾಡಬ್ಯಾಡಿರಿ
ಸಹಾಯ ಮಾಡುವಾಗ ||

ದೇಶಪ್ರಗತಿಗೆ ಜಾತಿ ಅಡ್ಡಿ
ಲಾಭ ಪಡೆವರು ಇದನೊಡ್ಡಿ
ಜಾತಿ ಮಾಡಬ್ಯಾಡಿರಿ
ಸರಕಾರ ನಡೆಸುವಾಗ ||

        *****

ಕೀಲಿಕರಣ: ಕಿಶೋರ್‍ ಚಂದ್ರ

ಬೇಕುಗಳು ಬೇಕು

-ಹಾರಾಸನ

ಎಲ್ಲ ಬೇಕುಗಳಾಚೆ ನಾನಿರಬೇಕು
ಎಂಬುದೊಂದೇ `ಬೇಕು' ನನಗಿರಬೇಕು
ಮಿಕ್ಕೆಲ್ಲ ಬೇಕುಗಳ ನಾ ತೊರೆಯಬೇಕು
ಒಂದಲ್ಲ ಎರೆಡಲ್ಲ ಕೋಟೀರಬೇಕು

ಅದಕೆ ನಿರಂತರ ಸಾಧನೆಯು ಬೇಕು
ಕಠಿಣ ಪರಿಶ್ರಮದನುಭವವು ಬೇಕು
ಆತ್ಮವಿಶ್ವಾಸವದು ಶತಸ್ಸಿದ್ಧ ಬೇಕು
ಗುರಿಯ ಸಾಧಿಪ ಛಲವು ಮಿಗಿಲಾಗಿ ಬೇಕು

ಬೇಕು-ಬೇಡಗಳ ವಿವೇಕಬೇಕು
ಎಲ್ಲವನು ಬಿಡುವ ವೈರಾಗ್ಯಬೇಕು
ಸಕಲ ಪಾಶವ ಕಳೆವ ಯುಕ್ತಿಯದು ಬೇಕು
ನಿಶ್ಕಲ ತೋಷವ ಪಡೆವ ಮನಶ್ಶಕ್ತಿ ಬೇಕು

ಬೇಕು-ಬೇಕುಗಳಾಚೆಗಿರಲೂ ಬೇಕು,
ಈ ಅಸಂಖ್ಯ ಬೇಕುಗಳು ಬೇಕು
ಇದುವೇ ಸೃಷ್ಟಿಯ ವಿಪರ್ಯಾಸವಿರಬೇಕು
ಅದುವೇ ವ್ಯಷ್ಟಿಯ ಪರಿಹಾಸವಿರಬೇಕು
            *****

ಛಾಯೆ

- ಗಿರಿಜಾಪತಿ ಎಂ. ಎನ್

ಯಾವ ತೀರದಿ ನಿಲ್ಲಲಿದೆಯೋ
ಜಗದ ಜೀವನ ನೌಕೆಯು...
ಭೀತ ಛಾಯೆಯು ನಿತ್ಯ ಕಾಡಿದೆ
ಯುದ್ಧ ಕಾರಣ ಛಾತಿಯು...

ಕ್ಷಿಪಣಿ-ಯಕ್ಷಿಣಿ ನಭದ ರಂಗದಿ
ರುದ್ರ ತಾಂಡವ ತಾಲೀಮಿದೆ...
ನಂಬಿ-ನಂಬದ ಮಾತಿನೊರೆಯಲಿ
ಜೀವ ಮಹತಿಯು ಸೊರಗಿದೆ...

ವಿನಾಶಿಯಾಗಲು ವಿಜ್ಞಾನ ಸಾಗಿದೆ
ಅವಿನಾಶಿಯಾಗಲು ವಿಜ್ಞಾನ ಸಾಗಿದೆ
ಅವಿನಾಶಿ ಆತ್ಮನ ತೊರೆದಿದೆ...
ಯಾವ ಸಾಧನೆಗಾಗಿ ಶೋಧನೆ
ನಾಳೆ ಬಿತ್ತಿ-ಬೆಳೆಸಲು ವೇದನೆ...

        *****

ಕೀಲಿಕರಣ: ಕಿಶೋರ್‍ ಚಂದ್ರ

ರಾಜನೀತಿಯಲ್ಲಿ ಜಯವೋ

-ಶಿಶುನಾಳ ಶರೀಫ್

ರಾಜನೀತಿಯಲ್ಲಿ ಜಯವೋ
ಬಂತೋ ಇಂಗ್ಲಂಡ ದೇಶಕ್ಕೆ ಬೆಂಕಿಯ ಮಳಿಯೋ    ||ಪ||

ರಾಣಿ ರಾಜರ ವೈಭವಕೆ
ಪ್ರಾಣಹಾನಿಗಳಾದಾವು ಎಣಿ ಇಲ್ಲ ಇದಕೆ
ಜಾಣ ಕಲಿಗಳ ಸೈನ್ಯ ಹೊಕ್ಕಿತೋ
ಯೂರೋಪುಖಂಡಕೆಲ್ಲ ಮುಸುಕಿತೋ
ಕಾಣದಂಥಾ ಐದು ವ್ಯಕ್ತಿ
ಕ್ಷೋಣಿ ಗದಗದ ನಡುಗಿ ಹೋದೀತು                     ||೧||

ಹಿಂದುಸ್ಥಾನಕ ಬಂತು ಶೋಕ
ಮಂದಿ ಕುಂಡ್ಲಾಕ ನರಬೈಲಿ ಹೋತೋ ಕೈಲಾಕ
ಹಣದ ತೆರಿಗೆಯ ತೆಲಿಗೆ ಏಳು
ಏಣಿಸಿ ಹಡಗವ ತುಂಬಿ ಹೂರಣವ
ಹವಳ ದೇಶಕ್ಕೆಲ್ಲ ಇದು
ಕುಣಿದು ಕುಣಿದು ದಣಿವು ಆದಿತು                          ||೨|| 

ಬರದೆ ಬಾರದೆ ಸುಜ್ಞಾನ
ಗುರು ಶಿಶುನಾಳಧೀಶನ ಕುರುವಿನ ವಚನ
ಸತ್ಯ ಜಗಕೆಲ್ಲ ಇದು
ಬಿದ್ದಿತೋ ಜಗಳದ ಬೀಜ
ಮತ್ತೆ ಅಣ್ಣಿಗೇರಿ ಈಶನ
ಚಿತ್ರಗುಪ್ತರು ಕಾಣದೆ ಹೋದೀತು                         ||೩||

****

ಕೀಲಿಕರಣ: ಎಂ.ಎನ್.ಎಸ್. ರಾವ್

ಲೆವೆಲ್ ಕ್ರಾಸಿಂಗ್

- ಮಂಜುನಾಥ ವಿ ಎಂ

ಡೀಸೆಲ್ ಫ್ಯಾಕ್ಟರಿಯ ಮಗ್ಗುಲಿನ ಕಿರಿದಾದ ಓಣಿಯಿಂದ ಹಾದುಬಂದರೆ,
ಮನುಷ್ಯನೊಬ್ಬನ ತಲೆಯನ್ನು ಸವರಿದಂತೆ ಕಾಣುವ ಹಿಪ್ಪೆಮರ ಭೀತಿ ಹುಟ್ಟಿಸುತ್ತದೆ.

ರೈಲ್ವೆ ಲೆವೆಲ್ ಕ್ರಾಸಿಂಗ್ ಕಾವಲುಗಾರ ಅಲ್ಲಿ,
ಆ ಮರಕ್ಕೆ ಆನಿಕೊಂಡು ಕುಳಿತಿರುತ್ತಾನೆ ಅಥವಾ ತೂಕಡಿಸುತ್ತಿರುತ್ತಾನೆ.

ಹಳೆ ಸಂಬಂಧಿಕರು ಅವನ ಯೋಗಕ್ಷೇಮ ವಿಚಾರಿಸಿದರೂ,
ಅಷ್ಟುದೂರ ಹೋದ ನಂತರ ಯಾಕೋ ತಿರುಗಿ ನೋಡುತ್ತಾರೆ.

ಸಂಜೆ ರೈಲು ಮರೆಯಾಗುತ್ತಿದ್ದಂತೆ
ಅವನು ಅಲ್ಲೇ ಗೂಟ ಹೊಡೆದುಕೊಂಡು ಬಿದ್ದಿರುವುದಿಲ್ಲ.

ಕರೆದವಳ ಮನೆಗೆ ಹೋಗಿ ಆತಿಥ್ಯ ಸ್ವೀಕರಿಸುತ್ತಾನೆ;
ಹಾಲು ಕರೆದು ಆಕಳು ಬಿಡುತ್ತಾನೆ.

ನಡುಮನೆಯ ಸರುವೆಗಳಕ್ಕೆ ಬೆನ್ನು ಮಾಡಿ ಕುಳಿತು ಬಹಳ ಹೊತ್ತು
ಮಾತನಾಡುತ್ತಾರೆ. ಮನೆ ಕಂದಾಯ ಕಟ್ಟಲು ಕೇಳಿಕೊಳ್ಳುತ್ತಾಳೆ;

ನಾಳೆ ಹಂದಿದೊಡ್ಡಿಗೆ ತಡಿಕೆ ಕಟ್ಟಬಹುದೆನ್ನುತ್ತಾಳೆ.
ನಾಯಿಗಳು ಬೊಗಳುವ ಸದ್ದು ಕೇಳಿಸುತ್ತದೆ.

ಸರಿಯೆಂದು ಎದ್ದು, ಓಣಿ ಹಾದಿಗೆ ಬೀಳುತ್ತಿದ್ದಂತೆ-
ಇವನನ್ನು ಕಂಡೊಡನೇ ಉಚ್ಚೆ ಹೊಯ್ಯುವ ಹೆಂಗಸರು ಕಣ್ಣಿಗೆ ಕಟ್ಟಿಕೊಳ್ಳುವರು.

               *****

ಏಡಿ ಮತ್ತು ಧವಳಪ್ಪನ ಗುಡ್ಡ

-ಕಂನಾಡಿಗಾ ನಾರಾಯಣ

ಗಿಡ್ಡಜ್ಜ ಚಂದ್ರವಳ್ಳಿ ಕೆರೆ ಏರಿಯ ಮೇಲೆ ಕುಂತು, ಗಾಣ ಹಾಕಿ ಬಲಗೈಯಿಂದ ಅವಾಗವಾಗ ಮೇಲಕ್ಕೆತ್ತುತ್ತಾ ಕೆಳಕ್ಕೆ ಬಿಡುತ್ತಾ ಮೀನು ಸಿಕ್ಕಿದೆಯೇ ಎಂದು ಪರೀಕ್ಷಿಸುತ್ತಿದ್ದ. ಕಿವಿಯ ಬಳಿಯೇ ಎಡೆಬಿಡದೇ ಗುಯ್‌ಗುಟ್ಟುತ್ತಿದ್ದ ಸೊಳ್ಳೆಗಳನ್ನೂ, ತಲೆಯ ಸುತ್ತಲೂ ಎಲ್ಲಿ ಹೋದರೂ ಬಿಡದಂತೆ ಸುತ್ತುಹಾಕುತ್ತಿರುವ ನೊಣಗಳನ್ನೂ ತನ್ನ ಮೊಣಕೈವರೆಗೆ ಮಾತ್ರವಿದ್ದ ಎಡಗೈಯಿಂದ ಬೆದರಿಸುತ್ತಿದ್ದ. ಆದರೆ ಅವನ ಗಮನವೆಲ್ಲಾ ಏರಿಯ ರಿವೆಟ್‌ಮೆಂಟ್ ಕಲ್ಲುಗಳ ಸಂದಿಯಿಂದ ಹೊರ ಬರುವ ಕಲ್ಲೇಡಿಗಳ ಕಡೆಗೇ ಇತ್ತು. ಹುಲ್ಲೇಡಿ, ಮಣ್ಣೇಡಿಗಿಂತ ಕಲ್ಲೇಡಿಯ ರುಚಿಯೇ ರುಚಿ -ತಲೆ ಕಾಲು ಮಟನ್ ಥರಾ- ಅನ್ನೋದು ಅವನ ಬಲವಾದ ನಂಬಿಕೆಯಾಗಿತ್ತು...

ರಿನ ಮಟ್ಟಕ್ಕಿಂತಲೂ ಅರ್ಧ ಅಡಿ ಕೆಳಗೆ ಎಂತದೋ ಕರ್ರನೆಯ ವಸ್ತು ಚಲಿಸಿದಂತಾಗಿ ಸರ್ರನೆ ಅತ್ತ ಕಣ್ಣನ್ನು ಕೇಂದ್ರೀಕರಿಸಿದ. ಗಾಣದ ಕಡ್ಡಿಯನ್ನು ಆ ಕಡೆಗೆ ಎಸೆದು ಅರೆ ಂತ ಭಂಗಿಯಲ್ಲೇ ಕೆಳಗಿಳಿದುಬಂದ. ಛಕ್ಕನೆ ಕೈಹಾಕಲೂ ಭಯ. ಅದು ಹಾವಾಗಿದ್ದರೆ ಎಂಬ ಅಳುಕು. ಆದರೂ ಅದು ಇನ್ನಷ್ಟು ಚಲಿಸಲಿ ಎಂದು ಕಾದು ಕುಳಿತ. ಮುಖಕ್ಕಿಂತಲೂ ಮುಂದೆ ಇರುವ ಕೊಂಬನ್ನು ಅತ್ತ ಇತ್ತ ಗತ್ತಿಂದ ಆಡಿಸುವ ಘೇಂಡಾಮೃಗದಂತೆ, ಎರಡು ಕೊಂಡಿಗಳನ್ನು ಮುಂದೆ ಆಡಿಸುತ್ತಾ, ದಾರಿ ಮಾಡಿಕೊಳ್ಳುತ್ತಾ ಹೊರಬಂದು, ಕಾರಿನ ವೈಪರ್ ಥರಾ ಕಣ್ಣು ಆಡಿಸುತ್ತಾ, ಯಾರೂ ವೈರಿಗಳು ಎದುರಿಗೆ ಇಲ್ಲವೆಂದುಕೊಂಡು ಇನ್ನೊಂದು ಕಲ್ಲು ಸಂದಿಗೆ ಅಡ್ಡಡ್ಡಲಾಗಿ ನಡೆಯಲಾರಂಭಿಸಿತು. ಗಿಡ್ಡಜ್ಜಗೆ ಬೇಟೆ ಸಿಕ್ಕ ಖುಷಿಯಲ್ಲಿ ಗಾಣದ ಕಡ್ಡಿಯನ್ನು ಮರೆತು ಏಡಿಯನ್ನು ಹಿಡಿಯಲು ತಂತ್ರ ರೂಪಿಸಲಾರಂಭಿಸಿದ. ಬರಿಗೈಯಲ್ಲಿ ಹಿಡಿಯಬೇಕೆಂದರೆ ಒಂದೋ ಹೊರಭಾಗದಿಂದ ಏಕಕಾಲದಲ್ಲಿ ಎರಡು ಕೈಯಿಂದ ಅದರ ಕೊಂಡಿಗಳನ್ನು ಗಟ್ಟಿಯಾಗಿ ಹಿಡಿದುಕೊಳ್ಳಬೇಕು, ಇಲ್ಲವೇ ಹಿಂದುಗಡೆಯಿಂದ ಅವುಚಿಕೊಳ್ಳಬೇಕು. ಹಾಗೆ ಅವುಚಿಕೊಳ್ಳಲು ಇವನ ಕೈಯ ಅಗಲಕ್ಕಿಂತ ಅದರ ಕೊಂಡಿಗಳ ನಡುವಿನ ಅಂತರವೇ ವಿಶಾಲವಿದ್ದು ಎರಡೂ ಕಡೆಯಿಂದ ಆಕ್ರಮಣ ನಡೆಸುವ ಸಾಧ್ಯತೆ ಅಧಿಕವಿತ್ತು. ಇನ್ನು ಎರಡು ಕೈಯ್ಯಿಂದ ಹಿಡಿಯೋಣವೆಂದರೆ ಗಿಡ್ಡಜ್ಜಗಿರುವುದು ಒಂದೇ ಕೈ. ಎಡಗೈ ಮೊಣಕೈಗಿಂತ ಮುಂದೆ ಇರಲಿಲ್ಲ. ಆದಾಗ್ಯೂ ತಕ್ಷಣಕ್ಕೆ ಕೈಗೆ ಸಿಕ್ಕ ಚೋಟುದ್ದದ ಕಡ್ಡಿಯನ್ನು ಅದರ ಒಂದು ಕೊಂಡಿಗೆ ಕೊಟ್ಟು, ಇನ್ನೊಂದು ಕೊಂಡಿಯನ್ನು ಹಿಡಿದು ಏರಿ ಮೇಲಕ್ಕೆ ಎಸೆದು, ಆ ಬಯಲಲ್ಲಿ ಅದನ್ನು ಹೇಗಾದರೂ ಗ್ರಹಿಸಲು ರ್ಧರಿಸಿದ್ದ. ಹಾಗೆ ಮಾಡುವ ವೇಳೆಗಾಗಲೇ, ಮೀಗೆಂದು ಇಟ್ಟಿದ್ದ ಗಾಣ ಅತ್ತ ಇತ್ತ ಎಗರಾಡಲಾರಂಭಿಸಿತು. ಎಲ್ಲಿ ಆ ಮೀನು ಗಾಣವನ್ನೂ ರಿಗೆ ಎಳಕೊಂಡು ಬಿಡುತ್ತದೋ ಎಂಬ ಆತಂಕದಲ್ಲಿ ಅತ್ತ ಕೈಹಾಕಬೇಕೆನ್ನುವಷ್ಟರಲ್ಲಿ, ಏಡಿಯು ತನ್ನ ಎಡಗಡೆಯ ಕೊಂಡಿಗೆ ಕೊಟ್ಟಿದ್ದ ಒಣಗಿದ ಕಡ್ಡಿಯನ್ನು ತನ್ನ ಇಕ್ಕಳದಂತಿರುವ ಕೊಂಡಿಯಿಂದ ಕತ್ತರಿಸಿ ಹಾಕಿ ಗಿಡ್ಡಜ್ಜನ ಕೈಬೆರಳುಗಳ ಮೇಲೆ ಆಕ್ರಮಣ ಮಾಡಿತು.

ಎರಡೂ ಕೊಂಡಿಗಳೂ ಗಿಡ್ಡಜ್ಜನ ಎರಡು ಬೆರಳುಗಳನ್ನು ಹಿಡಿದು ಕ್ಷಣ ಮಾತ್ರದಲ್ಲಿ ರಕ್ತವನ್ನು ಜಿಗಣೆಯಂತೆ ಹೀರದೇ ಹೊರಚೆಲ್ಲಲಾರಂಭಿಸುತ್ತಿದ್ದಂತೆಯೇ -ಎಲ್ಲಿ ತನ್ನ ಇರುವ ಒಂದು ಕೈನ ಬೆರಳುಗಳೂ ಕತ್ತರಿಸಿ ಹೋಗಿಬಿಡುವವೋ ಎಂಬ ಆತಂಕದಿಂದಲೂ- ಕೈಕಾಲನ್ನು ಯದ್ವಾತದ್ವಾ ಬಡಿಯುತ್ತಾ ಕಿರುಚಾಡಲಾರಂಭಿಸಿದ. ಆ ಚೀರಾಟಕ್ಕೆ ಚಂದ್ರವಳ್ಳಿ ನೋಡಲೆಂದು ಬರುತ್ತಿದ್ದ ಇಬ್ಬರು ಯುವಕರು ಏನಾಯಿತೋ ಎಂದು ಇವನ ರಕ್ಷಣೆಗೆ ಓಡೋಡಿ ಬಂದರು. ಬಂದವರು ಏನು ಮಾಡುವುದೆಂದು ತಿಳಿಯದೇ ಒಬ್ಬೊಬ್ಬರೂ ಒಂದೊಂದು ಕೊಂಡಿಯನ್ನು ಹಿಡಿದು ಬಲವಂತದಿಂದ ಅದರ ಹಿಡಿತದಿಂದ ಬಿಡಿಸಿದರು.

ಪಾಟೀಲನಂತೂ ಹಿತಾಚಿ ಯಂತ್ರದ ಕೈನಂತಿರುವ ಅದರ ಕೊಂಡಿಯ ಸಂರಚನೆಗೆ ಮನಸೋತು, ಜೀವಂತವಾಗಿಯೋ, ಸ್ಮಾರಕದಂತೆಯೋ ಒಟ್ಟಿನಲ್ಲಿ ಅದನ್ನು ತನ್ನ ಬಳಿ ಇಟ್ಟುಕೊಳ್ಳಬೇಕೆಂದುಕೊಂಡು, ಬೆಗೆ ಹಾಕಿಕೊಂಡಿದ್ದ ಬ್ಯಾಗಿಂದ ನೈಲಾನ್ ದಾರವನ್ನು ತೆಗೆದು ಅದರ ಎರಡೂ ಕೊಂಡಿಗಳಿಗೂ ಕಟ್ಟಿ ಜೀರುಂಡೆಯಂತೆ ಉಯ್ಯಾಲೆ ಆಡಿಸುತ್ತಾ ಆಟವಾಡಲಾರಂಭಿಸಿದ. ಓಬಳಪ್ಪ ತೋಟಹಾಳು ಗಿಡವನ್ನು ಹುಡುಕಿ ತಂದು ಅದರ ರಸವನ್ನ ಗಾಯದ ಮೇಲೆ ಹಿಂಡಿ ಮೆತ್ತೆಯಂತೆ ಆ ಸೊಪ್ಪನ್ನೇ ಮೆತ್ತಿ ತನ್ನ ಕರ್ಚೀಫಿಂದ ಬ್ಯಾಂಡೇಜು ಹಾಕಿದ.
***

ಗಿಡ್ಡಜ್ಜ ರಕ್ತ ಸುರಿಯುವುದು ಂತ ಮೇಲೆ ಆ ಇಬ್ಬರು ಯುವಕರ ಪರಿಚಯ ಕೇಳಿದ. ಪಾಟೀಲ ತಾನು ಅಮೇರಿಕನ್ ಬೇಸ್ಡ್ ಕಂಪ್ಯೂಟರ್ ಕಂಪೆಯಲ್ಲಿ ಉದ್ಯೋಗಿಯೆಂದೂ, ತಿಂಗಳಿಗೆ ಎಂಟು ಸಾವಿರ ಡಾಲರ್ ಸಂಬಳವೆಂದೂ ಹೇಳಿದ. ಎಂಟು ಸಾವಿರ ಡಾಲರ್! ಅಂದರೆ ಸುಮಾರು ನಾಲ್ಕು ಲಕ್ಷ! ಗಿಡ್ಡಜ್ಜ ಆಶ್ಚರ್ಯದಿಂದ ಅವನನ್ನು ಮೇಲಿಂದ ಕೆಳಗಿನ ತನಕ ನೋಡಿದ. ಸುಮಾರು ಇಪ್ಪತ್ತಾರೋ ಇಪ್ಪತ್ತೇಳೋ ವಯಸ್ಸಿರಬಹುದು. ತೆಳ್ಳಗೆ ಉದ್ದಕ್ಕೆ ಇದ್ದ ಅವನ ಪ್ಯಾಂಟಿನ ತುಂಬಾ ಎಲ್ಲೆಂದರಲ್ಲಿ ಅಲ್ಲಾಡುತ್ತಿದ್ದ ಜೇಬುಗಳನ್ನು ನೋಡಿ ಮನಸ್ಸಿನಲ್ಲಿ ಏನೋ ಗೊಣಗಿಕೊಂಡು ಸುಮ್ಮನಾದ.

ಓಬಳಪ್ಪ ಪಿ.ಯು.ಸಿ.ಯಲ್ಲಿ ತನ್ನ ಕ್ಲಾಸ್‌ಮೆಟ್ ಎಂತಲೂ, ಅವನು ಇದೇ ಊರಿನವನೆಂತಲೂ, ತನಗೆ ಈಗ ತಾನೇ ಚಿತ್ರದುರ್ಗದ ಕೋಟೆ ತೋರಿಸಿಕೊಂಡು ಬಂದನೆಂತಲೂ ಪರಿಚಯಿಸಿದ. ಓಬಳಪ್ಪ ಮಾತ್ರ ತನಗೆ ಇಂಥದೊಂದು ಕೆಲಸ ಸಿಕ್ಕಲಿಲ್ಲವೆಂದು ಸರ್ಕಾರವನ್ನು ಬೈಯ್ಯಲಾರಂಭಿಸಿದ. ಗಿಡ್ಡಜ್ಜ ಸುಮ್ಮನೇ ಅವನ ಮುಖ ನೋಡಿದ.

ಓಬಳಪ್ಪ ತನ್ನ ಗೆಳೆಯಗೆ ಅಂಕಲಿ ಮಠವನ್ನು ತೋರಿಸಲು ಬಂದಿರುವುದಾಗಿಯೂ, ಯಾರೂ ಗೈಡ್ ಇಲ್ಲದೇ ಇದ್ದರೆ ಒಳಗೆ ಹೋಗಿ ಹೊರಬರುವ ದಾರಿ ತಿಳಿಯದೇ ಇರುವುದರಿಂದ ದಯವಿಟ್ಟು ಸಹಾಯ ಮಾಡಬೇಕೆಂದು ಕೋರಿಕೊಂಡ. ತಾವು ಸ್ಥಳೀಯರಾದ್ದರಿಂದ ತಮಗೆ ಇವೆಲ್ಲಾ ಚೆನ್ನಾಗಿ ಗೊತ್ತಿರುತ್ತವೆ ಎಂದು ಹೊಗಳುವಂತೆ ಹೇಳಿ ಉಬ್ಬಿಸಿದ. ಗಿಡ್ಡಜ್ಜ ತನ್ನ ಗಾಯವಾಗಿರುವ ಕೈ ಮುಂದೆ ತಂದು ನೋಡಿಕೊಂಡ. ಪಾಟೀಲ ಈ ಏಡಿಯೇ ಅಲ್ಲವೇ ಮ್ಮ ಕೈಯ್ಯನ್ನು ಕಚ್ಚಿ ಈ ಸ್ಥಿತಿಗೆ ತಂದದ್ದು ಎಂದು ಏಕಕಾಲದಲ್ಲಿ ಅದರ ಮೇಲೆ ಸೇಡು ತೀರಿಸಿಕೊಳ್ಳುವವನಂತೆಯೂ, ಗಿಡ್ಡಜ್ಜನ ಮೇಲೆ ಅನುಕಂಪ ತೋರಿಸುವವನಂತೆಯೂ ಅದನ್ನು ನೆಲದಲ್ಲಿ ಕೂರಿಸಿ ಎರಡೂ ಕೊಂಡಿಗಳಿಗೆ ಕಟ್ಟಿದ್ದ ನೈಲಾನ್ ದಾರವನ್ನು ಕಾಲಲ್ಲಿ ತುಳಿದುಕೊಂಡು, ಏ... ಏ... ಏ... ಏನು ಮಾಡುತ್ತಿದ್ದೀಯಾ? ಎಂದು ಗಿಡ್ಡಜ್ಜ ತಡೆಯುವಷ್ಟರಲ್ಲಿ ಅದರ ಹಿಂದಿನ ಎರಡು ಕಾಲುಗಳನ್ನು -ಒಣಗಿದ ಲಡ್ಡು ಕಡ್ಡಿಯನ್ನು ಮುರಿಯುವಂತೆ- ಲಟಲಟನೇ ಮುರಿದು ಬಿಸಾಕಿ, ಸೇಡು ತೀರಿಸಿಕೊಂಡ ಹುಮ್ಮಸ್ಸಿನಲ್ಲಿ ನಗಲಾರಂಭಿಸಿದ.

ಅದರದ್ದು ತಪ್ಪಲ್ಲ. ತನ್ನ ಸ್ವರಕ್ಷಣೆಗಾಗಿ ಅದು ಹಾಗೆ ಮಾಡಿತು... ದೇಶ ರಕ್ಷಣೆ, ಸ್ವರಕ್ಷಣೆ ವಿಷಯ ಬಂದಾಗ ಹಾಗೆ ಮಾಡಬೇಕು ಕೂಡಾ... ಅದರ ಜಾಗದಲ್ಲಿ ನು ಇದ್ದರೂ ಅದನ್ನೇ ಮಾಡುತ್ತಿದ್ದೆ.... ಎಂದು ಗಿಡ್ಡಜ್ಜ ಅಸಹನೆ ವ್ಯಕ್ತಪಡಿಸುತ್ತಾ, ಈ ಪ್ರಪಂಚದಲ್ಲಿರುವ ಸುಮಾರು ಎಂಬತ್ನಾಲ್ಕು ಲಕ್ಷ ಪ್ರಭೇದದ ಜೀವಿಗಳಲ್ಲಿ ತಲೆಯೇ ಇಲ್ಲದ ಒಂದು ಪ್ರಾಣಿ ಇದೆ. ಯಾವುದು ಗೊತ್ತಾ...? ಎಂದು ಹುಬ್ಬು ಹಾರಿಸುತ್ತಾ ಪ್ರಶ್ನೆ ಹಾಕಿ ತನ್ನ ಪಾಡಿಗೆ ತಾನು ಎನ್ನುವಂತೆ ಅಂಕಲಿ ಮಠದತ್ತ ನಡೆಯಲಾರಂಭಿಸಿದ. ಇಬ್ಬರೂ ಪರಸ್ಪರ ಒಬ್ಬರ ಮುಖ ಒಬ್ಬರು ನೋಡಿಕೊಂಡರು. ತನಗೇ ಹೇಳಿದ್ದಿರಬಹುದೆಂದು ಪಾಟೀಲ ಭಾವಿಸಿ ಮಂಕಾದ. ತನ್ನ ಕೈಕೆಳಗೆ ಹದಿನೈದಿಪ್ಪತ್ತು ಜನ ಕೆಲಸ ಮಾಡುತ್ತಿದ್ದಾರೆಂದು, ಅವರೆಲ್ಲಾ ತನ್ನ ಬುದ್ದಿವಂತಿಕೆಗೆ ಎಷ್ಟೆಲ್ಲಾ ಗೌರವ ಕೊಡುತ್ತಾರೆಂದು ಈ ಕಾಡು ಮನುಷ್ಯಗೇನು ಗೊತ್ತು? ಎನ್ನುವಂತೆ ಮುಖ ಸಿಂಡರಿಸಿಕೊಂಡು ಂತ. ಹಾಗೆ ಂತರೆ ಸ್ವತಂತ್ರವಾಗಿ ಅಂಕಲಿ ಮಠದ ಗವಿಯೊಳಕ್ಕೆ ಹೋಗಿ ಹೊರಬರಲು ತನಗೆ ದಾರಿ ತಿಳಿಯದಿರುವ ಅಸಹಾಯಕತೆಗೆ ಓಬಳಪ್ಪ ಬಲವಂತದಿಂದ ಪಾಟೀಲನ ಕೈಹಿಡಿದು ಎಳಕೊಂಡು ಹಿಂಬಾಲಿಸಿದ.
***

ಅಂಕಲೀಮಠದ ಗುಹೆಯಲ್ಲಿ ಬಾವಲಿಗಳ ಹಿಚಿಕೆಯ ಕಮಟು ವಾಸನೆಯ ನಡುವೆಯೂ ಗೈಡ್ ತನ್ನ ದಿನತ್ಯದ ವ್ಯವಹಾರವೆನ್ನುವಂತೆ ರಾತಂಕವಾಗಿ ಬ್ಯಾಟರಿ ಬೆಳಕಿನಲ್ಲಿ ಮೆಟ್ಟಿಲುಗಳನ್ನು ಎಣಿಸಿ ಹೇಳುತ್ತಾ ಇಂತಿಷ್ಟು ಮೆಟ್ಟಿಲುಗಳನ್ನು ಇಳಿಯುವಂತೆ ರ್ದೇಶನ ಡುತ್ತಾ ಅಲ್ಲಲ್ಲಿ ಂತು ವಿವರಣೆ ಡುತ್ತಿದ್ದ. ಬುದ್ಧನ ಕಾಲದಿಂದ ಇಲ್ಲಿ ಋಷಿಮುಗಳು ವಾಸಿಸುತ್ತಿದ್ದರೆಂದು, ಹಿಂದೆ ರಾಜರ ಆಸ್ಥಾನ ಗುರುಗಳು ಇಲ್ಲಿ ರಹಸ್ಯವಾಗಿ ವಾಸಿಸುತ್ತಾ, ರಾಜ್ಯದ ಅಳಿವು ಉಳಿವಿನಂತಹ ಗೌಪ್ಯವಾದ, ಗಹನವಾದ ಚರ್ಚೆಗಳನ್ನು ಇಲ್ಲಿಯೇ ಮಾಡುತ್ತಿದ್ದರೆಂದು ತಡೆಯಿರದಂತೆ ವಿವರಿಸುತ್ತಿದ್ದ. ಅವರು ಬಳಸುತ್ತಿದ್ದ ಒರಗು ಮಂಚ, ನೆಲದಾಳದಲ್ಲೇ ಇದ್ದ ಬಚ್ಚಲು, ಆ ತೊಟ್ಟಿಗೆ ಮೇಲಿಂದ ರು ಹರಿದು ಬರುವಂತೆ ಮಾಡಿಕೊಂಡಿದ್ದ ಹಾಗೂ ಸ್ನಾನದ ರು ಹೊರಹೋಗುವಂತೆ ಮಾಡಿಕೊಂಡಿದ್ದ ಗಾರೆಯ ಸಣ್ಣ ಕಾಲುವೆ ಇತ್ಯಾದಿಗಳನ್ನೆಲ್ಲಾ ನೋಡಿ ಪಾಟೀಲ ಮೂಕವಿಸ್ಮಿತನಾದ. ಒಂದು ದೊಡ್ಡ ರಾಜ್ಯ, ಆ ರಾಜ್ಯದ ದೊರೆ ಇಲ್ಲಿಗೆ ವೇಷ ಮರೆಸಿಕೊಂಡು ಬಂದು, ಸಂನ್ಯಾಸಿಗಳ ಕಾಲಿಗೆ ಬಿದ್ದು, ಅವರ ಸಲಹೆ-ಮಾರ್ಗದರ್ಶನಗಳನ್ನು ಪಡೆಯುತ್ತಿದ್ದುದು... ಅಂದರೆ ಪರಮಾಧಿಕಾರಿ ಎಂದುಕೊಂಡ ಒಂದು ಸಾಮ್ರಾಜ್ಯದ ದೊರೆಯೂ ಇನ್ನೊಬ್ಬರ ಮುಂದೆ ತಲೆ ತಗ್ಗಿಸಿ ಂತು ಅವರು ಹೇಳಿದ್ದನ್ನು ಶಿರಸಾವಹಿಸಿ ಪಾಲಿಸುವಂತಹ ಮಹಿಮೆಯುಳ್ಳ ಒಂದು ಜಾಗ... ಹತ್ತಾರು ಸಾಮ್ರಾಜ್ಯಗಳ ಅಳಿವು ಉಳಿವಿನ ತೀರ್ಮಾನವಾಗುತ್ತಿದ್ದಂತಹ ಜಾಗ... ಪಾಟೀಲ ಅದರ ಮುಂದೆ ತನ್ನ ಅಧಿಕಾರವನ್ನು ತುಲನೆ ಮಾಡಿಕೊಂಡು ತಾನೆಷ್ಟು ಕುಬ್ಜ ಎಂದುಕೊಂಡು ನಾಚಿಕೆಯಿಂದ, ಆ ಕತ್ತಲಲ್ಲೂ ಗಿಡ್ಡಜ್ಜನ ಮುಖವನ್ನು ಕದ್ದು ನೋಡಲು ತವಕಿಸಿದ.

ಒಂದು ಸಲ ಇದ್ದಕ್ಕಿದ್ದಂತೆ ಗೈಡ್ ಕೈಯ್ಯಲ್ಲಿದ್ದ ಬ್ಯಾಟರಿ ಕೆಳಗೆ ಬಿದ್ದು ಆರಿಹೋಯಿತು. ಕೂಡಲೇ ಪಾಟೀಲ ಓಬಳಪ್ಪನನ್ನು ಅಪ್ಪಿಕೊಂಡು ಜೋರಾಗಿ ಕಿರುಚಿಕೊಂಡ. ಬೆಂಕಿಕಡ್ಡಿ ಗೀರಿ ಬೆಳಕು ಮಾಡಿದ ಗೈಡ್ ಬ್ಯಾಟರಿ ಹುಡುಕಿ, ಪೇಟೆ ಜನಗಳಿಗೆ ಕಗ್ಗತ್ತಲಿನ ಅನುಭವವೇ ಇರುವುದಿಲ್ಲವಲ್ಲ... ನೋಡಿ, ಅಫ್ಟರಾಲ್ ಒಂದು ಬೆಂಕಿಕಡ್ಡಿ ಎಷ್ಟೊಂದು ಬೆಳಕನ್ನ, ಧೈರ್ಯವನ್ನ ಡಬಲ್ಲದು ಎಂದು ಮುಗುಳ್ನಕ್ಕ. ಗಿಡ್ಡಜ್ಜ, ಅದೇ ಒಂದು ಕಡ್ಡಿಯಿಂದ ಒಂದು ದೇಶವನ್ನೇ ಬೇಕಾದರೂ ರ್ನಾಮ ಮಾಡಿಬಿಡಬಹುದು... ಎಂದು ಮಾರ್ಮಿಕವಾಗಿ ನುಡಿದದ್ದು ಯಾರಿಗೂ ಅರ್ಥವಾಗಲಿಲ್ಲ.

ಆ ಗವಿಯಲ್ಲಿರುವ ಆನೆಗಳು, ಗಾರೆಯ ಶಿಲ್ಪಗಳು, ಚಿತ್ರಗಳು, ಬಣ್ಣದ ಬಳಕೆ ಎಲ್ಲವನ್ನೂ ವಿವರಿಸುತ್ತಿದ್ದ ಗೈಡು ಈ ಬಣ್ಣದ ಚಿತ್ರಗಳನ್ನು ರಾಜಾ ರವಿವರ್ಮನನ್ನು ಕರೆಸಿ ಬರೆಸಿದ್ದೆಂದು ಹೇಳಿದ.

ಅಂದರೆ ಈ ಚಿತ್ರಗಳನ್ನು ಬರೆದು ಎಷ್ಟು ನೂರು ವರ್ಷಗಳಾಗಿರಬಹುದು? ಎಂಬ ಸರಳ ಪ್ರಶ್ನೆ ಹಾಕಿದ ಗಿಡ್ಡಜ್ಜ.
ಕಷ್ಟ ನಾನೂರು-ಐನೂರು ವರ್ಷಗಳಾಗಿರಬಹುದು ಎಂದ ಆ ಗೈಡ್. ಕೂಡಲೇ, ರವಿವರ್ಮ ಯಾರ ಆಸ್ಥಾನದಲ್ಲಿದ್ದ ಗೊತ್ತೇ? ಎಂಬ ಮತ್ತೊಂದು ಪ್ರಶ್ನೆ.
ಮೈಸೂರು ಅರಸರ ಆಸ್ಥಾನದಲ್ಲಿ...

ಜ. ಯಾವ ಶತಮಾನದಲ್ಲಿ?

ಗೈಡ್ ತಬ್ಬಿಬ್ಬಾದ. ರವಿವರ್ಮ ಇದ್ದದ್ದು ಹತ್ತೊಂಬತ್ತನೇ ಶತಮಾನದಲ್ಲಿ. ಅವನು ಹುಟ್ಟುವುದಕ್ಕಿಂತ ಮುನ್ನೂರು ನಾನೂರು ವರ್ಷಗಳ ಹಿಂದೆಯೇ ಇಲ್ಲಿಗೆ ಬಂದು ಚಿತ್ರ ಬರೆಯಲು ಹೇಗೆ ಸಾಧ್ಯ? ಎಂದವನೇ, ನಾಲ್ಕು ಕಾಸಿನ ಆಸೆಗೋಸ್ಕರ ಅಟ್ರಾಕ್ಟೀವ್ ಆಗಿ ಹೇಳಬೇಕು ಅಂತ ಯಾಕ್ರೀ ಸುಳ್ಳು ಸುಳ್ಳು ಹೇಳ್ತೀರಾ? ಅವನ್ಯಾವನೋ ಹೇಳ್ತಾನೆ - ಓಬವ್ವ ಸತ್ತಾಗ ಅವಳ ಹೆಣದ ಮೇಲೆ ದೇಶದ ಬಾವುಟ ಹಾಸಿ, ಬಂದೂಕಿಂದ ಗುಂಡು ಹಾರಿಸಿ ಧ್ವಜವಂದನೆ ಸಲ್ಲಿಸಿದರು ಅಂತ. ಯಾವಾಗ್ರೀ ಈ ಕಾನ್ಸೆಪ್ಟ್ ಬಂದಿದ್ದು... ಇಪ್ಪತ್ತನೇ ಶತಮಾನದಲ್ಲಿ. ಓಬವ್ವ ಇದ್ದಿದ್ದು ಯಾವಾಗ್ರೀ?... ಹದಿನೆಂಟನೇ ಶತಮಾನದಲ್ಲಿ... ನಾನ್‌ಸೆನ್ಸ್... ನಾನ್‌ಸೆನ್ಸ್ ಫೆಲೋಸ್... ಎನ್ನುತ್ತಾ ಸಿಡುಕಿಕೊಂಡು ಕತ್ತಲಲ್ಲಿಯೂ ತಡವರಿಸದಂತೆ ಮೆಟ್ಟಿಲು ಹತ್ತಿಕೊಂಡು ಮೇಲೆ ಬಂದುಬಿಟ್ಟ ಗಿಡ್ಡಜ್ಜ!
***

ಗೈಡ್‌ಗೆ ಮಾತನಾಡಿದ್ದಂತೆ ಐವತ್ತು ರೂಪಾಯಿ ಕೊಟ್ಟು, ಆಚೆ ಅಷ್ಟು ದೂರದಲ್ಲಿ ಕುಳಿತಿದ್ದ ಗಿಡ್ಡಜ್ಜನ ಕಡೆಗೆ ಹೊರಟರು. ಪಾಟೀಲ ಓಬಳಪ್ಪಗೆ, ಈತ ಸಮ್‌ಥಿಂಗ್ ಡಿಫರೆಂಟ್... ಬಟ್ ಪರ್‌ಫೆಕ್ಟ್ ಕೂಡಾ ಅಸುತ್ತೆ... ಎಂದ. ಗಿಡ್ಡಜ್ಜ ಮಾತ್ರಾ ಅಂಕಳೀ ಮಠದ ಹಿಂದಿರುವ, ಒಂದೇ ಬಂಡೆಯಿಂದ ಒಡೆದು ಎರಡಾಗಿರುವ, ಕವಣೆಯಿಂದ ಬೀಸಿ ಹೊಡೆದರೂ ತುದಿ ಮುಟ್ಟಲಾರದಷ್ಟು ಎತ್ತರದ ಬೃಹತ್ ಬಂಡೆಗಳನ್ನು ಹಗ್ಗ ಹಾಕಿ ಹತ್ತುತ್ತಿರುವ ಎನ್.ಸಿ.ಸಿ.ಹುಡುಗರನ್ನು ನೋಡುತ್ತಾ ಕುಳಿತುಬಿಟ್ಟಿದ್ದ.

ಆಗಲೇ ಮಧ್ಯಾಹ್ನದ ಬಿಸಿಲು. ಬೆಳಗ್ಗಿಂದ ಕೋಟೆ ಹತ್ತಿ, ಅಂಕಲೀ ಮಠಕ್ಕೆ ಇಳಿದು ಸುಸ್ತಾಗಿದ್ದ ಪಾಟೀಲ. ನಾಳೆ ಸೋಮವಾರ, ವೀಕೆಂಡ್ ಮುಗೀತು. ಬೆಂಗಳೂರಿಗೆ ಹೋಗಬೇಕು... ಎಂದು ಹಿಂದಿರುಗಲು ಅವಸರಿಸಿದ. ಹೊರಟು ಬಂದರು. ಚಂದ್ರವಳ್ಳಿ ಕೆರೆ ಏರಿ ದಾಟುತ್ತಿದ್ದಂತೆಯೇ ಮೌನವನ್ನು ಮುರಿದ ಗಿಡ್ಡಜ್ಜ, ಮಯೂರನ ಶಾಸನ ನೋಡಿದ್ದೀರೇ...? ಎಂದು ಗತ್ತಿಂದ ಹಾಗೆಯೇ ಏಕವಚನದ ಶೈಲಿಯಲ್ಲಿ ಕೇಳಿದ. ರುತ್ತರರಾದ ಅವರನ್ನ ಕರೆದು, ಇಲ್ಲಿ ನೋಡಿ. ಏನಾದರೂ ಅಕ್ಷರ ಕಾಣುತ್ತಾ? ಎಂದ. ಇಬ್ಬರೂ ಮುಖ ಮುಖ ನೋಡಿಕೊಂಡರು. ಒಂದು ದೊಡ್ಡ ಬಂಡೆಯ ಮುಂದೆ ಂತು, ಅದರ ಮೇಲೆ ಬೆರಳು ಆಡಿಸುತ್ತಾ ಆ ಶಾಸನದ ಅಕ್ಷರಗಳನ್ನು ಮೂಡಿಸುತ್ತಾ ಪಟಪಟನೇ ಓದಿಬಿಟ್ಟ. ಇದು ಪ್ರಾಕೃತದಲ್ಲಿದೆ ಅಂತ ಡಾ. ಎಂ.ಎಚ್.ಕೃಷ್ಣ ೧೯೨೯ ರಲ್ಲಿ ಓದಿದ್ದರು. ಆದರೆ ಡಾ. ಬಿ.ರಾಜಶೇಖರಪ್ಪ ಇದು ಸಂಸ್ಕೃತದಲ್ಲಿದೆ ಅಂತ ೧೯೮೪ ರಲ್ಲಿ ಪ್ರೂವ್ ಮಾಡಿ ತೋರಿಸಿದರು. ಅ ಶಾಕ್‌ಗೆ ಅವರಿಗೆ ಎರಡು ದಿನ ಜ್ವರವೇ ಬಂದು ಮಲಗಿಬಿಟ್ಟಿದ್ದರಂತೆ...

ಇಲ್ನೋಡಿ ಈ ದೇವಸ್ಥಾನದ ಮುಂದೆ ಕಾಣುತ್ತಲ್ಲ, ಈ ಪ್ಲಾಸ್ಟಿಕ್ ಶೀಟಿನ ಚಪ್ಪರ, ಇದನ್ನ ನೆರಳಿಗೋಸ್ಕರ ಯಾರೋ ಭಕ್ತರು ಹಾಕಿಸಿದ್ದು. ಆದರೆ ಈ ಶಾಸನವನ್ನು ಗಾಳಿ, ಮಳೆ, ಬಿಸಿಲಿಂದ ರಕ್ಷಣೆ ಮಾಡೋಕ್ಕೆ ಅಂತ ತಾನೇ ಹಾಕಿಸಿರೋದು ಅಂತ ಯಾರೋ ಒಬ್ಬ ಬೃಹಸ್ಪತಿ ಪೇಪರ್‍ನಲ್ಲಿ ಬರೀತಾನೆ. ಇದು ಹಂಗೆ ಕಾಣ್ಸುತ್ತೇ? ಅದಕ್ಕೂ ಇದಕ್ಕೂ ಎಷ್ಟು ದೂರ ಇದೆ ನೋಡಿ... ಅದೂ ಅಲ್ದೇ ಆರ್ಕ್ಯಾಲಜಿಕಲ್ ಸರ್ವೇ ಆಫ್ ಇಂಡಿಯಾದ ರೂಲ್ಸ್‌ನಲ್ಲಿ ಶಾಸನಗಳಿಗೆ ಹಾಗೆಲ್ಲಾ ಚಪ್ಪರ ಗಿಪ್ಪರ ಹಾಕೋಂಗಿಲ್ಲ ಅನ್ನೋ ಕಾಮನ್‌ಸೆನ್ಸೂ ಇಲ್ಲ ಇವರಿಗೆ... ಎಂದು ಸಿಡುಕುತ್ತಾ ನಡೆದೇ ಬಿಟ್ಟ.

ಪಾಟೀಲ ಮ್ಮೂರಿನ ಜನರೇ ಹಿಂಗಾ...? ಅಂತ ಓಬಳಪ್ಪನನ್ನ ಪ್ರಶ್ನಿಸಿದ. ನಮ್ಮೂರಿನ ಜನ ಒಂದೇ ಸಲಕ್ಕೆ ಯಾರನ್ನೂ ನಂಬಿಬಿಡುವುದಿಲ್ಲ. ಹಾಗೇ ಒಂದು ಸಲ ನಂಬಿದರೆ, ಕೊನೆವರೆಗೆ ಯಾರನ್ನೂ ಕೈಬಿಡುವುದಿಲ್ಲ. ಇದಕ್ಕೆ ಬಹುಶಃ ಐತಿಹಾಸಿಕವಾದ ಅನುಭವಗಳು ಕಾರಣವಾಗಿರಬಹುದು... ಎಂದು ಸಮಜಾಯಿಷಿ ಡಿದ.
***

ಸ್ವಾಗತ ಗೇಟಿನ ಮುಂದಿದ್ದ ಸ್ಕೋಡಾ ಕಾರನ್ನು ತೆಗೆಯುತ್ತಾ ಪಾಟೀಲ, ತುಂಬಾ ಥ್ಯಾಂಕ್ಸ್ ಸರ್. ಒಳ್ಳೆ ಗೈಡೆನ್ಸ್ ಡುದ್ರೀ... ನಾವಿನ್ನು ಬರ್‍ತೀವಿ ಎಂದ.
ದುರ್ಗ ಪೂರ್ತಿ ನೋಡುದ್ರಾ ಹಾಗಾದ್ರೆ? ಎಂದದ್ದಕ್ಕೆ, ಓಬಳಪ್ಪ, ನಾನೂ ಇದೇ ಊರಿನವನು ಸಾರ್ ಎಂದು ಹೆಮ್ಮೆಯಿಂದ ಕೋಟೆಯ ಅನೇಕ ಸ್ಥಳಗಳ ವಿವರ ಹೇಳಿದ.
ಮತ್ತೆ ಧವಳಪ್ಪನ ಗುಡ್ಡ...? ಗಿಡ್ಡಜ್ಜ ಪ್ರಶ್ನಿಸಿದ.

ಇಬ್ಬರೂ ಒಬ್ಬರ ಮುಖ ಒಬ್ಬರು ನೋಡಿದರು.

ಅಗೋ ನೋಡಿ, ಘೇಂಡಾ ಮೃಗ ಮಲಗಿದಂಗೆ ಕಾಣುತ್ತಲ್ಲಾ, ಅದೇ... ಜವಾದ ಚಿತ್ರದುರ್ಗದ ಮಹತ್ವ ಇರೋದು ಕೇವಲ ಆ ಕೋಟೇಲೋ, ಅಂಕಲೀ ಮಠದಲ್ಲೋ ಅಲ್ಲ. ಆ ಧವಳಪ್ಪನ ಗುಡ್ಡದಲ್ಲಿ... ಎಂದವನೇ, ಅದನ್ನು ಈಗ ಹೋಗಿ ನೋಡಕ್ಕಾಗಲ್ಲ. ಬೆಳಗಿಂದ ಸಂಜೆವರೆಗೆ ಒಂದು ಇಡೀ ದಿನ ಬೇಕು. ನಾಳೆ ಬೆಳಗ್ಗೆ ಹೋಗೋಣ ಅಂದು, ಹೇಳದೇ ಕೇಳದೇ ಕಾರು ಹತ್ತಿ ಕುಂತು ಮನೆ ಕಡೆಗೆ ಕಾರು ತಿರುಗಿಸಲು ಹೇಳಿದ.

ಹೇಳಿ ಕರೆಸಿದಂತೆ ಮಳೆ ಹಯಲಾರಂಭಿಸಿತು. ಬರುಬರುತ್ತಾ ಬಿರುಸೂ ಆಯಿತು. ಬರ್‍ತಾ ಬರ್‍ತಾ ಚಿತ್ರದುರ್ಗನೂ ಮಲೆನಾಡಾಗ್ತಾಯಿದೆ... ಎಂದು ತನ್ನೊಳಗೇ ಹುಸಿನಗು ನಕ್ಕ. ಉಳಿದಿಬ್ಬರಿಗೆ ಅದರರ್ಥ ತಿಳಿಯದೇ ಸುಮ್ಮನುಳಿದರು. ಒಂದು ಕಿಲೋಮೀಟರ್ ಬರುವುದರೊಳಗೆ ಮಳೆ ಬಿರುಸಾಗಿ ಸುರಿಯಲಾರಂಭಿಸಿತು. ಕಾರಿನ ವೈಪರ್ ಬಹಳ ದಿನಗಳಿಂದ ಕೆಲಸ ಇಲ್ಲದ್ದರಿಂದಲೋ ಏನೋ, ಏನು ಮಾಡಿದರೂ ಸ್ಟಾರ್ಟ್ ಆಗಲಿಲ್ಲ. ರು ಧಾರಾಕಾರವಾಗಿ ಕಾರಿನ ಮುಂದಿನ ದಾರಿಯೇ ಕಾಣದಂತಾಯಿತು. ಪಾಟೀಲ ಅಸಹಾಯಕನಾದ. ಮುಂದೆ ಮುಖ್ಯ ರಸ್ತೆಯಿದೆ, ದೊಡ್ಡ ದೊಡ್ಡ ವಾಹನಗಳು ಅಡ್ಡಾಡುತ್ತಿರುತ್ತವೆ ಎಂಬ ಆತಂಕ ಆತನದು. ಅವನ ಪರದಾಟ ನೋಡಲಾರದೇ ಒಂದು ಡಬ್ಬದಂಗಡಿಯ ಮುಂದೆ ಕಾರು ಲ್ಲಿಸಿಸಿ, ಎರಡು ಚಾರ್‌ಮಿನಾರ್ ಸಿಗರೇಟು ತರುವಂತೆ ಹೇಳಿದ. ಪಾಟೀಲನ ಇಗೋಗೇ ಪೆಟ್ಟುಬಿದ್ದಂತಾಯಿತು- ಛಳಿಗೆ ಈತ ಸಿಗರೇಟು ಸೇದಲು ತಾನು ತಂದುಕೊಡಬೇಕೇ ಎಂದು. ಹಿಂದೆ ಮುಂದೆ ನೋಡಿ, ಆ ಮಳೆಯಲ್ಲೇ ಇಳಿದು ಡೋರನ್ನ ಕಾಲಿಂದ ಒದ್ದು ಮುಚ್ಚಿದ. ಕಾರಲ್ಲಿ ಸೇದುವಂತಿಲ್ಲವೆಂದು ಮುಖದ ಮೇಲೆ ಹೊಡೆದಂತೆ ಹೇಳಿಬಿಡಬೇಕೆಂದುಕೊಂಡ.

ಸಿಗರೇಟನ್ನು ಕೈಗಿಡುತ್ತಿದ್ದಂತೆಯೇ ಮುದುರಿ ಪುಡಿಪುಡಿಮಾಡಿಬಿಟ್ಟ ಗಿಡ್ಡಜ್ಜನನ್ನ ಕಂಡು ಪಿತ್ತ ನೆತ್ತಿಗೇರಿತು. ಮಳೆಯಲ್ಲೇ ಕೆಳಗಿಳಿದ ಗಿಡ್ಡಜ್ಜ ಕಾರಿನ ಗ್ಲಾಸಿನ ಮೇಲೆ ಹಾಕಿ ತಿಕ್ಕಲಾರಂಭಿಸಿದ. ಪಾಟೀಲಗೆ ಉರಿದುಹೋಯಿತು -ಎಂಟು ಹತ್ತು ಸಾವಿರದ ಗ್ಲಾಸನ್ನ ಸ್ಕ್ರಾಚ್ ಮಾಡಿಬಿಡುತ್ತಿದ್ದಾನಲ್ಲ ಎಂದು. ಹಾಗೆ ಸ್ಕ್ರಾಚಾದರೆ ಇನ್ಸೂರೆನ್ಸೂ ಬರುತ್ತದೋ ಇಲ್ಲವೋ ಎಂಬ ಆತಂಕ ಅವನದು.

ಡ್ಯಾಶ್ ಬೋರ್ಡಿನ ಮೇಲೆ ಕುಂತ ಕೊಂಡಿ ಕಟ್ಟಿದ್ದ ಏಡಿ, ಉಳಿದಿದ್ದ ಕಾಲುಗಳಲ್ಲೇ ಎಡಕ್ಕೂ ಬಲಕ್ಕೂ ಚಲಿಸುತ್ತಾ ಪರಪರ ಸದ್ದು ಮಾಡುತ್ತಿತ್ತು. ಅದು ಪಾಟೀಲನ ತಲೆಯೊಳಕ್ಕೇ ಕಾಲುಹಾಕಿ ಕೆರೆದಂತಾಗಿ ಸಿಟ್ಟು ಬಂದು ಒಂದು ಕಡೆಯ ಎರಡು ಕಾಲನ್ನ ಮುರಿದುಬಿಟ್ಟ. ಮತ್ತೆ ಗಿಡ್ಡಜ್ಜ ಬಯ್ಯುವನೇನೋ ಎಂದು ಹೆದರಿ ಮುರಿದು ಹೋದ ಕಾಲುಗಳನ್ನ ಗೊತ್ತಿಲ್ಲದವನಂತೆ ಅದರ ಪಕ್ಕವೇ ಇಟ್ಟುಬಿಟ್ಟ.

ಅಷ್ಟರಲ್ಲಿ, ನಾವು ಹಿಮಾಲಯದಲ್ಲಿ ಮಿಲಿಟರಿ ಜೀಪಿಗೆ ಹಿಂಗೇ ಮಾಡ್ತಿದ್ದುದು ಅನ್ನುತ್ತಾ, ಮಳೆಯಲ್ಲಿ ನೆಂದುಹೋಗಿದ್ದ ಗಿಡ್ಡಜ್ಜ ಸೀಟಲ್ಲಿ ಕುಂತ ತಕ್ಷಣ ಸಾವಿರಾರು ರೂಪಾಯಿಯ ಸೀಟ್ ಕವರ್ರು ಒದ್ದೆಯಾಗಿದ್ದರಿಂದ ಒಳಗೊಳಗೇ ಕಸಿವಿಸಿಗೊಂಡ ಪಾಟೀಲ. ಆದರೆ ಗಾಜಿನ ಮೇಲೆ ಬೀಳುತ್ತಿದ್ದ ರು ಸರಾಗವಾಗಿ ಹರಿದುಹೋಗಿ ಮುಂದಿನ ದಾರಿ ಚ್ಚಳವಾಗಿದ್ದರಿಂದ ಏನೋ ಒಂಥರಾ ಖುಷಿಯಾಗಿ ಥ್ಯಾಂಕ್ಸ್ ಹೇಳಿದ. ಅಷ್ಟರೊಳಗೆ ಏಡಿಯ ಮುರಿದ ಕಾಲನ್ನ ಗಿಡ್ಡಜ್ಜ ನೋಡಿದ್ದನ್ನ ಗಮಸಿದ ಪಾಟೀಲ ತಾನಾಗಿಯೇ, ಅದು ಅತ್ತ ಇತ್ತ ಅಡ್ಡಾಡೋಕ್ಕೋಗಿ ಕಾಲು ಉದುರಿಸ್ಕೊಂಡು ಬಿಟ್ಟದೆ. ಎಂದ. ಗಿಡ್ಡಜ್ಜ ಅವನ ಮುಖವನ್ನೊಮ್ಮೆ ನೋಡಿ ಮುಗುಳ್ಕಕ್ಕು, ಆಗಲೆ ಕೇಳಿದ್ನಲ್ಲ, ಇದೇ ನೋಡಿ ತಲೆಯಿಲ್ಲದ ಆ ಏಕೈಕ ಪ್ರಾಣಿ ಎಂದು ನಕ್ಕ. ಹೌದಲ್ಲ!... ಅಂತ ಆಶ್ಚರ್ಯದಿಂದ ಪಾಟೀಲ ಅದರ ಅಂಗಾಂಗಗಳನ್ನೆಲ್ಲಾ ಪರಿಶೀಲಿಸಲಾರಂಭಿಸಿದ. ಆದರೆ ಆತ ನಕ್ಕದ್ದರಲ್ಲಿ ತನಗೇ ತಲೆಯಿಲ್ಲದವನೆಂಬ ಅರ್ಥ ಧ್ವಸಿದಂತಾಗಿ ಮಂಕಾದ.
***

ಹಳೇ ಕಾಲದ ಒಂದು ಮನೆ. ಕಾರ್ವಿಂಗ್ ಮಾಡಿರುವ ಮರದ ಪಿಲ್ಲರ್‌ಗಳು ಅದರ ಅಂದವನ್ನ ಹೆಚ್ಚಿಸಿದ್ದವು. ಒಳಗೆ ಹೋದರೆ ವಿಶಾಲವಾದ ಹಾಲ್... ಒಂದೆರಡು ಮರದ ಖುರ್ಚಿಗಳು, ಮಂಚ... ಪಾಟೀಲಗೆ ಯಾವುದೋ ಹಳ್ಳಿಯ ಗೌಡನ ಮನೆಗೆ ಬಂದ ಅನುಭವ.

ಗಿಡ್ಡಜ್ಜ ಗ್ರಾಮಫೋನ್ ಹಚ್ಚಿದ. ಇದೇನ ಸಭ್ಯತೆ, ಇದೇನ ಸಂಸ್ಕೃತಿ... ಎಂಬ ಹಳೆಯ ಕಾಲದ ಹಾಡು ಸುಶ್ರಾವ್ಯವಾಗಿ ಉಲಿಯಲಾರಂಭಿಸಿತು. ಅದು ಯಾಕೋ ಪಾಟೀಲಗೆ ತನ್ನನ್ನೇ ಉದ್ದೇಶಿಸಿ ಹಾಕಿದ ಹಾಡೇನೋ ಅಸಬಹುದೆಂದುಕೊಂಡ ಗಿಡ್ಡಜ್ಜ ಮುಳ್ಳನ್ನು ಎತ್ತಿ ಇನ್ನೊಂದು ಹಾಡಿನ ಮೇಲೆ ಇಟ್ಟ. ಅಮ್ಮ ನ್ನ ತೋಳಿನಲ್ಲಿ ಕಂದ ನಾನು... ಎಂದು ಓತಪ್ರೋತವಾಗಿ ಹರಿಯಲಾರಂಭಿಸಿದ ತಕ್ಷಣ, ಇದು ಪುಟ್ಟಣ್ಣ ಕಣಗಾಲರ ಸಿನೆಮಾದ್ದು, ಇದರಲ್ಲಿ ಎಷ್ಟೊಂದು ಅರ್ಥಗಳಿವೆಯಲ್ಲಾ? ಅಂದ. ಪಾಟೀಲಗೆ ಅದರಲ್ಲಿ ಯಾವ ಅರ್ಥಗಳೂ ಹೊಳೆಯದಿದ್ದರೂ ಬಹಳ ಚೆನ್ನಾಗಿದೆ ಎಂದವನು, ಇದರಲ್ಲಿ ಎಷ್ಟು ಹಾಡು ಬರ್‍ತವೆ? ಎಂದು ಕೇಳಿದ. ಒಂದು ಪ್ಲೇಟಲ್ಲಿ ನಾಲ್ಕು ಇಲ್ಲ ಐದು ಹಾಡು ಇರ್‍ತವೆ... ಎಂದ ಗಿಡ್ಡಜ್ಜ. ಪಾಟೀಲ ತನ್ನ ಬ್ಯಾಗಿಂದ ಏನನ್ನೋ ಹುಡುಕಲು ಮುಂದಾದ. ಈಗಾಗಲೇ ಲಹರಿಗೆ ಬಂದಿದ್ದ ಗಿಡ್ಡಜ್ಜ, ಯಾಕೆ ಬೇಜಾರಾಯ್ತ. ರೇಡಿಯೋ ಹಾಕಲೇನು? ಎಂದು ಟಿ.ವಿ.ಯಷ್ಟು ದೊಡ್ಡಗಿನ ಹಳೆಯ ಕಾಲದ ಕರೆಂಟಿನ ರೇಡಿಯೋ ಹಚ್ಚಿದ. ಅದು ಹೊಟ್ಟೆಯೊಳಗಿನ ಗ್ಯಾಸಿನಂತೆ ಗುರುಗುಟ್ಟಲಾರಂಭಿಸಿತು.

ಪಾಟೀಲ ಬ್ಯಾಗಿಂದ ಹೆಬ್ಬೆರಳಿನ ಒಂದಿಂಚಿನಷ್ಟಿದ್ದ ಐ-ಪೋಡ್ ತೆಗೆದು, ಇದರಲ್ಲಿ ಹತ್ತು ಸಾವಿರಕ್ಕಿಂತ ಹೆಚ್ಚು ಹಾಡು ಇರ್‍ತವೆ ಎಂದ. ತನ್ನ ತಳ್ಳನೆಯ ಮೊಬೈಲು ತೆಗೆದು ತೋರಿಸುತ್ತಾ, ಇದರಲ್ಲಿ ಇಷ್ಟು ದಪ್ಪಗಿನ ರೇಡಿಯೋದಲ್ಲಿ ಬರೋ ಎಲ್ಲಾ ಸ್ಟೇಷನ್‌ಗಳನ್ನ, ಟಿ.ವಿ.ಯಲ್ಲಿ ಬರೋ ಎಲ್ಲಾ ಚಾನೆಲ್ಲುಗಳನ್ನ, ಒಂದು ಸಾವಿರ ಮಣ್ಣಿನ ಪ್ಲೇಟಿನಲ್ಲಿರಬಹುದಾದ ಎಲ್ಲಾ ಹಾಡುಗಳನ್ನ ಸ್ವಲ್ಪವೂ ಡಿಸ್ಟರ್ಬೆನ್ಸ್ ಇಲ್ಲದೇ ಕೇಳಬಹುದು. ಅಲ್ಲದೇ ಆ ಮೂಲೆಯಲ್ಲಿದೆಯಲ್ಲಾ, ಆ ಡಯಲ್ ತಿರುಗಿಸುವ ಫೋನ್, ಅದಕ್ಕಿಂತ ನೂರು ಪಟ್ಟು ವೇಗವಾಗಿ ಫೋನ್ ಮಾಡಬಹುದು... ಆ ಡೈರೆಕ್ಟರಿಯಲ್ಲಿ ಬರೆದಿರಬಹುದಾದದ್ದಕ್ಕಿಂತ ಹತ್ತು ಪಟ್ಟು ಹೆಸರು ನಂಬರುಗಳನ್ನ ಸ್ಟೋರ್ ಮಾಡಬಹುದು... ಇನ್ನೂರು ವರ್ಷದ ಕ್ಯಾಲೆಂಡರ್ ನೋಡಬಹುದು... ರೀಲ್ ಇಲ್ಲದೇ ಫೋಟೋ ತೆಗೆಯಬಹುದು, ಕ್ಯಾಸೆಟ್ ಇಲ್ಲದೇ ವೀಡಿಯೋ ರೆಕಾರ್ಡಿಂಗ್ ಮಾಡಬಹುದು... ಇನ್ನೂ ಏನೇನೋ... ಎಂದು ಹೇಳಿ ಅವನ ಕೈಗೆ ಕೊಟ್ಟ. ಮಕ್ಕಳ ಆಟದ ವಸ್ತುವಿನಂತೆ ಕಂಡ ಅದನ್ನು ನಂಬಲು ಸಾಧ್ಯವೇ ಆಗಲಿಲ್ಲ ಗಿಡ್ಡಜ್ಜಗೆ. ಒಂದೊಂದನ್ನೇ ತೋರಿಸುತ್ತಾ ಹೋದ ಹಾಗೆ ನಂಬಿಕೆ ಬರಲಾರಂಭಿಸಿತು. ಆದರೂ ಮಂತ್ರವಾದಿ ಪುಟ್ಟಯ್ಯ ಅಂಜನ ಹಾಕಿ ತೋರಿಸುತ್ತಿದ್ದಂತೆ ಪಾಟೀಲ ಏನಾದರೂ ಮ್ಯಾಜಿಕ್ ಮಾಡುತ್ತಿರುವನೇನೋ ಎಂಬ ಅನುಮಾನ.

ಆದರೂ ಗಿಡ್ಡಜ್ಜಗೆ ಅವು ಅಪೀಲ್ ಆಗಲಿಲ್ಲ. ಐ ಪೋಡ್‌ನ ಹಾಡಿಗಿಂತ ಪ್ಲೇಟಿನಲ್ಲಿ ಬರುವ ಹಾಡೇ ಸುಮಧುರ ಅಂತಲೂ, ಮೊಬೈಲ್‌ನಲ್ಲಿ ಮಾತಾಡುವುದಕ್ಕಿಂತ ಡಯಲ್ ತಿರುಗಿಸಿ ಮಾತಾಡುವುದರಲ್ಲೇ ಮಜಾ ಇರುವುದು ಎಂತಲೂ ವಾದ ಮಾಡಿದ. ನೋಡ್ದಂಗೆ ಮ್ಮ ಮನೆ ಫೋನ್ ನಂಬರ್ ಹೇಳಿ ನೋಡೋಣ? ಅಂದಾಗ, ಅವನು ಹೇಳಲು ಪ್ರಯತ್ನಿಸಿ ವಿಫಲನಾದಾಗ, ಈ ಹಳೇ ಫೋನಲ್ಲಿ ಎರಡು ಸಲ ನಂಬರ್ ತಿರಿಗಿಸಿದರೆ ಎಲ್ಲವೂ ತಲೆಯಲ್ಲಿರುತ್ತವೆ ಅಂದವನು, ನಮ್ಮ ಕಾಲದ ಹಾಡುಗಳು ಮೂವತ್ತು ನಲವತ್ತು ವರ್ಷ ಆಗಿದ್ದರೂ ಇನ್ನೂ ಕೇಳಬೇಕು ಅಸ್ತದೆ, ಅದೇ ಮ್ಮ ಕಾಲದ ಹಾಡುಗಳು ಮೂವತ್ತು ನಲವತ್ತು ದಿನಾನೂ ಇರಲ್ಲ... ಎಂದಂದು ತಬ್ಬಿಬ್ಬುಗೊಳಿಸಿದ. ಒಳ್ಳೆ ಗಾಂಧಿ ಕಾಲದವನ ಸಹವಾಸವಾಯಿತಲ್ಲ ಎಂದು ಇಬ್ಬರೂ ತಲೆ ಕೆರೆದುಕೊಂಡರೂ ಅದರಲ್ಲೂ ಏನೋ ಲಾಜಿಕ್ ಇದೆ ಅಸದಿರಲಿಲ್ಲ. ಅದನ್ನು ಗಮಸಿದವನಂತೆ, ಇದಕ್ಕೇ ಜನರೇಷನ್ ಗ್ಯಾಪ್ ಅನ್ನುವುದು... ಎಂದು ಹೇಳಿ ತಾನು ತುಂಬಾ ಜನರಸ್ ಅನ್ನುವುದನ್ನು ಬಿಂಬಿಸಿದ.

***

ಬೆಳೆದಿದ್ದ ಮುಳ್ಳುಗಂಟಿಗಳನ್ನೆಲ್ಲಾ ಒತ್ತುತ್ತಾ ದಾರಿ ಮಾಡಿಕೊಂಡು, ದಕ್ಷಿಣಕ್ಕೆ ಮುಖ ಮಾಡಿ ಂತಿರುವ ಧವಳಪ್ಪನ ಗುಡ್ಡದ ಬಾಗಿಲಲ್ಲಿ ಬೆಳಗ್ಗೆ ಎಂಟು ಗಂಟೆಗೆಲ್ಲಾ ಂತಿದ್ದರು. ಪ್ರವೇಶ ದ್ವಾರದಲ್ಲೇ ಇದ್ದ ಒಂದು ಶಾಸನವನ್ನು ತೋರಿಸಿ, ಶಿವಭಕ್ತರಲ್ಲದವರು ಹೊಗಬಾರದು ಎಂದು ಇದರ ಅರ್ಥವೆಂತಲೂ, ವಿಷ್ಣುಭಕ್ತರು ಭೋಜನ ಪ್ರಿಯರಾದ್ದರಿಂದ ಅವರ ದೇಹ ಒಳಗಿನ ಇಕ್ಕಟ್ಟಾದ ಜಾಗದಲ್ಲಿ ಸಿಕ್ಕಿಹಾಕಿಕೊಂಡುಬಿಡುತ್ತದೆ ಎಂದೂ ಇರಬಹುದು ಅನ್ನುತ್ತಾ ತಾನೊಬ್ಬನೇ ನಕ್ಕ. ಹಿಂದೆ ಶೈವರಿಗೂ ವೈಷ್ಣವರಿಗೂ ಹಗೆತನವಿದ್ದುದರಿಂದ ಇದು ಶಿವಭಕ್ತರ ತಾಣ ಎಂಬುದನ್ನು ಹಕ್ಕಿನ ಪ್ರತೀಕವಾಗಿ ಹೇಳಿರಬಹುದೆಂದ. ಅಲ್ಲದೇ ಒಳಗೆ ಅಲ್ಲಲ್ಲಿ, ಬಂಡೆಯಲ್ಲೇ ಕೆತ್ತಿರುವ ಇಪ್ಪತ್ತೊಂದು ಶಿವಲಿಂಗಗಳಿರುವುದರಿಂದ ಬಹುಶಃ ಇದು ಬಹಳ ವರ್ಷಗಳ ಕಾಲ ಶೈವರ ಆಶಯ ತಾಣವಾಗಿದ್ದಿರಲೂಬಹುದೆಂದ.

ಕಿರಿದಾದ ಇಕ್ಕಟ್ಟಾದ ಜಾಗಗಳಲ್ಲೆಲ್ಲಾ, ಒಂದೊಂದು ಕಡೆ ತೆವೆಯುತ್ತಾ, ಇನ್ನೊಂದೊಂದು ಕಡೆ ದೇಕುತ್ತಾ, ಕೆಲವು ಕಡೆ ನೆಗೆಯುತ್ತಾ, ಇನ್ನೂ ಕೆಲವು ಕಡೆ ಅಡ್ಡಡ್ಡಲಾಗಿ ಹೆಜ್ಜೆ ಇಡುತ್ತಾ ಅಷ್ಟಷ್ಟು ದೂರ ಬರುತ್ತಿದ್ದಂತೆ ಇಬ್ಬರೂ ಸುಸ್ತಾಯಿತೆಂದು ಂತರು. ಕೂರಲೂ ಜಾಗವಿಲ್ಲದಷ್ಟು ಕಿರಿದಾದ ಜಾಗ. ಮೊದಲು ಗಿಡ್ಡಜ್ಜ, ಮಧ್ಯದಲ್ಲಿ ಪಾಟೀಲ, ಕೊನೆಯಲ್ಲಿ ಓಬಳಪ್ಪ.

ಕೈಲಿದ್ದ ಬ್ಯಾಗಿಂದ ಏನನ್ನಾದರೂ ತೆಗೆದು ತಿನ್ನಬೇಕೆಂದು ಬಲವಾಗಿ ಅಸುತ್ತಿದ್ದರೂ ಗಿಡ್ಡಜ್ಜನ ಭಯದಿಂದ ತೆಗೆಯಲಾರದೇ ತವಕಿಸುತ್ತಿದ್ದ ಪಾಟೀಲ. ಸ್ಟೀಲಿನ ಖಾಲಿ ಟಿಫನ್ ಬಾಕ್ಸ್‌ನಲ್ಲಿ ಕೂಡಿ ಹಾಕಿಕೊಂಡು ತಂದಿದ್ದ ಏಡಿ ಉಸಿರು ಕಟ್ಟಿದಂತಾಗಿಯೋ ಏನೋ ಪರಪರ ಕೆರೆಯುತ್ತಿತ್ತು. ಇಕ್ಕಟ್ಟಾದ ಜಾಗದ ಭಯದಿಂದ ಬೆವರುತ್ತಿದ್ದ ಪಾಟೀಲ, ಏಡಿಗೆ ಏನೋ ತೊಂದರೆಯಾಗಿದೆ ಎಂದು ನೆಪ ಮಾಡಿ, ಒಂಟಿ ಕಾಲಲ್ಲೇ ಂತು, ಚೀಲ ಬಿಚ್ಚಿದ. ಒಂದೆರಡು ಹಣ್ಣು, ಚಿಪ್ಸ್‌ಗಳನ್ನ ತಿಂದು, ಏಡಿಗೆ ಏನಾಯಿತೋ ಎಂದು ನೋಡುವ ಕುತೂಹದಲ್ಲಿ ಟಿಫನ್ ಬಾಕ್ಸ್‌ನ ಕ್ಯಾಪನ್ನ ತೆರೆಯುತ್ತಿದ್ದಂತೆಯೇ, ಅದನ್ನೇ ಕಾಯುತ್ತಿತ್ತೇನೋ ಎನ್ನುವಂತೆ, ಅತ್ತ ಇತ್ತ ಅಡ್ಡಡ್ಡ ನಡೆಯುತ್ತಾ ಪಾಟೀಲನ ಕೈಯಿಂದ ತಪ್ಪಿಸಿಕೊಂಡು ಕೆಳಗಿಂದ ಹತ್ತಿ ಬರಲು ಂತಿದ್ದ ಓಬಳಪ್ಪನ ತಲೆ ಮೇಲೆ ಬಿದ್ದು, ಅಲ್ಲಿಂದಲೂ ಕೆಳಗೆ ಬಿದ್ದು ಸರಸರ ಹರಿದುಹೋಗಿ ತಪ್ಪಿಸಿಕೊಳ್ಳಲು ಒಂದು ಸಂದಿಯಲ್ಲಿ ಸೇರಿಕೊಂಡಿತು.

ಮೇಲೆ ಒಂದು ಹದದಲ್ಲಿ ಹತ್ತುವುದು ಸುಲಭ, ಮತ್ತೆ ಇಳಿಯುವುದೆಂದರೆ ಕಷ್ಟ. ಲಕ್ಷಾಂತರ ವರ್ಷಗಳ ಹಿಂದೆ ಯಾವತ್ತೋ ಒಡೆದಿರಬಹುದಾದ ಆ ಬಂಡೆಯ ನಡುವೆ ಒಬ್ಬರನ್ನು ಲ್ಲಿಸಿ ಇನ್ನೊಬ್ಬರು ದಾಟಿ ಬರುವುದು ಅಸಾಧ್ಯವಾಗಿರುವಂತಹ ಇಕ್ಕಟ್ಟು ಜಾಗ. ಅಂತದರಲ್ಲಿ ಸ್ವಲ್ಪ ದುಂಡಗಿನ ಶರೀರದ ಓಬಳಪ್ಪ ಕೆಳಗೆ ಇಳಿದು ಏಡಿಯನ್ನು ಹಿಡಿದು ತರಲು ಮುಂದಾಗಲಿಲ್ಲ. ಇಳಿದರೆ ಮತ್ತೆ ಎಲ್ಲಿ ಹತ್ತಲಾಗದೋ ಎಂಬ ಭಯ. ಮೊದಲೇ ಒಬ್ಬರೇ ಹತ್ತಲಾರದಂತಹ ಕಡಿದಾದ ಜಾಗ. ಮೊದಲು ಹತ್ತುವವರನ್ನು ಹಿಂಬದಿಗೆ ಸಪೋರ್ಟ್ ಡಿ ಹತ್ತಿಸಬೇಕು, ನಂತರದವರನ್ನು ಕೈಡಿ ಎಳಕೊಳ್ಳಬೇಕು ಅಂತಹ ಪರಿಸ್ಥಿತಿ ಇರುವ ಜಾಗ. ಹಿಮಾಲಯದಲ್ಲಿ ಹೀಗೇ ಹತ್ತಬೇಕಾಗುತ್ತಿತ್ತು ಎಂದು ಆಗಾಗ ಗಿಡ್ಡಜ್ಜ ಹೇಳುತ್ತಿದ್ದರೆ, ಈತ ಆಲ್ಲಿಗೇಕೆ ಹೋಗಿದ್ದ ಎಂದು ಕೇಳಬೇಕೆಸುತ್ತಿತ್ತು. ಆದರೆ ಎಡಗೈ ಇಲ್ಲದೆಯೂ ಗುಡ್ಡ ಹತ್ತುವುದನ್ನ ತನ್ನಷ್ಟಕ್ಕೇ ಎಂಜಾಯ್ ಮಾಡುತ್ತಿರುವಂತೆ ಖುಷಿಯಾಗಿದ್ದ ಗಿಡ್ಡಜ್ಜ.

ಕೊನೆಗೆ ಏಡಿಯನ್ನು ಅದರ ಪಾಡಿಗೆ ಅದನ್ನು ಬಿಟ್ಟುಬಿಡಲಾರದೇ ಪಾಟೀಲನೇ ಓಬಳಪ್ಪನನ್ನ ಬೈದುಕೊಳ್ಳುತ್ತಾ ಸುಮಾರು ಇಪ್ಪತ್ತು ಅಡಿಗಳಷ್ಟು ಇಳಿದುಬಂದು, ಅದು ಅಡಗಿಕೊಂಡಿದ್ದರೂ ಅದರ ಕಾಲಿಗೆ ಕಟ್ಟಿದ್ದ ನೈಲಾನ್ ದಾರದ ಆಧಾರದ ಮೇಲೆ ಸುಲಭವಾಗಿ ಕಂಡುಹಿಡಿದು ಹಿಡಿದುಕೊಳ್ಳಲು ಹೋದರೆ ಅದು ಮತ್ತೆ ಮತ್ತೆ ಅತ್ತ ಇತ್ತ ಓಡಾಡಿ ಆಟ ಆಡಿಸಲಾರಂಭಿಸಿತು. ಹಾಗೂ ಹಿಡಕೊಳ್ಳಲು ಮುಂದಾದರೆ ಸಣ್ಣ ಕಾಲುಗಳಿಂದ ಎದ್ದು ಲ್ಲುತ್ತಾ ಎರಡು ಕೊಂಡಿಗಳನ್ನೂ ಗುರಿಸುತ್ತಾ ಕಡಿಯಲು ಪ್ರಯತ್ನಿಸಿತು. ಉಪಾಯವಾಗಿ ಹಾವನ್ನು ಹಿಡಿಯುವಂತೆ ಎಡಗೈಯ್ಯನ್ನು ಒಂದು ಕಡೆ ಆಡಿಸುತ್ತಾ, ಯಾಮಾರಿಸಿ ಬಲಗೈಯ್ಯಿಂದ ಹಿಡಿದುಬಿಟ್ಟ. ಸರೆಂಡರ್ ಆದ ಅದು ಕಡ್ಡಿಯಂತಹ ಕಣ್ಣನ್ನ ಮುಚ್ಚುತ್ತಾ ಬಿಡುತ್ತಾ ಮುಂದೇನಾಗುವುದೋ ಎಂದು ನೋಡಲಾರಂಭಿಸಿತು. ಗಿಡ್ಡಜ್ಜಗೆ ಮೇಲಿಂದ ತಾನು ಏನು ಮಾಡುತ್ತಿರುವನೆಂದು ಕಾಣದಂತಿರುವುದನ್ನು ಖಾತ್ರಿ ಪಡಿಸಿಕೊಂಡು, ಈ ಕಾಲುಗಳು ಇದ್ದರೆ ತಾನೆ ಓಡಿಹೋಗುವುದು ಎಂದು ಉಳಿದಿದ್ದ ಎಲ್ಲಾ ಕಾಲುಗಳನ್ನು ಮುರಿದು ಬಿಸಾಕಿದ -ಗಿಡ್ಡಜ್ಜ ಕೇಳಿದರೆ ಕೆಳಗೆ ಬಿದ್ದಾಗ ಎಲ್ಲಾ ಕಾಲುಗಳೂ ಮುರಿದು ಹೋಗಿಬಿಟ್ಟಿವೆಯೆಂದು ಹೇಳಿದರಾಯ್ತು ಎಂದುಕೊಂಡ. ಮತ್ತೆ ಟಿಫನ್ ಬಾಕ್ಸ್‌ನಲ್ಲಿ ಬಂಧಿಸಲ್ಪಟ್ಟಿತು ಆ ಏಡಿ.

ಮುಕ್ಕಾಲು ಭಾಗ ಹತ್ತಿದಾಗ ಸ್ವಲ್ಪ ವಿಶಾಲ ಜಾಗ ಕಂಡು, ಸದ್ಯ ಸಲೀಸಾಗಿ ಕುಳಿತು ವಿಶ್ರಾಂತಿ ತೆಗೆದುಕೊಳ್ಳಬಹುದೆಂಬ ಖುಷಿ. ಎಲ್ಲರೂ ಕೈಕಾಲು ಚೆಲ್ಲಿ ತಂದದ್ದನ್ನು ಬಿಚ್ಚಿ ತಿಂದರು. ಇಷ್ಟೊತ್ತಿನವರೆಗೆ ಈ ಚೀಲವೇ ಒಂದು ಭಾರವಾಗಿತ್ತು ಎಂದು ಪಾಟೀಲ ಜೋಕು ಹಾರಿಸಿದಂತೆ ನಕ್ಕರೂ ಯಾರೂ ನಗದೇ ಇದ್ದಾಗ ಅದರಲ್ಲಿ ಹಾಸ್ಯವೇನೂ ಇಲ್ಲವೇನೋ ಎಂದು ಸುಮ್ಮನಾದ. ಅದನ್ನೆಲ್ಲಾ ಆ ಬ್ಯಾಗಿಗಿಂತ ಪ್ಯಾಂಟಿನ ಜೇಬುಗಳಲ್ಲೇ ತುಂಬಿಕೊಂಡು ಬಂದಿದ್ದರೆ ಭಾರವಾಗುತ್ತಿರಲಿಲ್ಲವೇನೋ ಎಂದು ವ್ಯಂಗ್ಯವಾಗಿ ನಕ್ಕ ಗಿಡ್ಡಜ್ಜ. ಅಷ್ಟಕ್ಕೇ ಬಿಡದೇ, ಆ ಏಡಿಯನ್ನ ಆ ಸ್ಟೀಲಿನ ಬಾಕ್ಸಿನಲ್ಲಿ ಬಂಧಿಸಿಡುವುದಕ್ಕಿಂತ ಈ ಜೇಬುಗಳಲ್ಲೇ ಇಟ್ಟುಕೊಳ್ಳಬಹುದಿತ್ತಲ್ಲ. ಆಗಾಗ ಮೂತ್ರದ ಜಾಗದಲ್ಲಿ ರಕ್ತ ಬರುವಂತೆ ಮಾಡುತ್ತಿತ್ತು... ಎಂದು ಅಪಹಾಸ್ಯ ಮಾಡಿದ. ಓಬಳಪ್ಪ ಜೋರಾಗಿ ನಕ್ಕದ್ದಕ್ಕೆ ಪಾಟೀಲಗೆ ಅವಮಾನ ಆದಂಗಾಯ್ತು.

ಪಾಟೀಲ, ಓಬಳಪ್ಪ ಎಲ್ಲ ಸಾಮಾನುಗಳನ್ನು ಎತ್ತಿಕೊಂಡು ಹಿಂಬಾಲಿಸಿದರು. ಮುಂದೆ ಮುಂದೆ ಗಿಡ್ಡಜ್ಜ, ಹಿಂದೆ ಹಿಂದೆ ಪಾಟೀಲ, ಓಬಳಪ್ಪ... ಇಕ್ಕಟ್ಟಾದ ಸಂದಿಯಿಂದ ಮೇಲೇರುತ್ತಿದ್ದಂತೆ ಲ್ಯಾಂಡಿಂಗ್ ಥರ ಇದ್ದ ಒಂದು ಜಾಗದಲ್ಲಿ ಬಿದ್ದಿದ್ದ, ಅಸ್ಥಿಪಂಜರವನ್ನು ನೋಡಿ ಅಯ್ಯೋ.. ಸ್ಕೆಲೆಟನ್.. ಎಂದು ಕಿರುಚಿದ. ಅಷ್ಟರಲ್ಲಾಗಲೇ ರಾತಂಕವಾಗಿ ಅದನ್ನ ದಾಟಿಕೊಂಡು ಮುನ್ನಡೆದಿದ್ದ ಗಿಡ್ಡಜ್ಜ ಏನಾಯಿತೋ ಎಂದು ಹಿಂದಿರುಗಿ ಂತ. ಅದಾ... ಅದು ಯಾರೋ ಆತ್ಮಹತ್ಯೆ ಮಾಡಿಕೊಂಡವರದಿರಬೇಕು ಎಂದು ಮುಂದುವರೆದ.

ಇರಲಿಕ್ಕಿಲ್ಲ. ಯಾರೋ ಇವನನ್ನು ಕೊಲೆ ಮಾಡಿರಬಹುದು? ಪಾಟೀಲನೆಂದ.

ಅದು ಗಂಡೇ ಏಕೆ, ಹೆಣ್ಣೂ ಆಗಿರಬಹುದಲ್ವಾ? ಆಕೆಯ ಪ್ರೇಮಿಯೇ ಯಾಕೆ ಕೊಲೆ ಮಾಡಿರಬಾರದು? ಓಬಳಪ್ಪ ಪ್ರತಿಕ್ರ್ರಿಯಿಸಿದ.
ಏನೂ ಆಗಿರಬಹುದು. ನಾನು ನಾಲ್ಕೈದು ವರ್ಷದ ಹಿಂದೆ ನೋಡಿದಾಗಿಂದಲೂ ಇದು ಇಲ್ಲೇ ಇದೆ. ಗಿಡ್ಡಜ್ಜನೆಂದ.
ಹಾಗಿದ್ದರೆ ಪೋಲೀಸರಿಗೆ ತಿಳಿಸೋದಲ್ವ...? ಪಾಟೀಲನೆಂದ.

ತಿಳಿಸಿ ಏನು ಪ್ರಯೋಜನ. ಇವೆಲ್ಲಾ ಕಾಮನ್ ಬಿಡ್ರೀ ಅಂತಾರೆ. ಮೇಲಾಗಿ ಇನ್ವೆಸ್ಟಿಗೇಷನ್, ಅದೂ ಇದೂ ಯಾಕೆ ತಲೆನೋವು. ಹೆಂಗೂ ಎಲ್ಲೋ ಒಂದು ಕಡೆ ಮಿಸ್ಸಿಂಗ್ ಅಂತ ಕೇಸಾಗಿರುತ್ತೆ. ಏಳು ವರ್ಷ ಟ್ರೇಸ್ ಆಗಲಿಲ್ಲ ಅಂತ ಆಟೋಮೆಟಿಕ್ಕಾಗಿ ಡೆತ್ ಅಂತ ರೆಕಾರ್ಡ್ ಮಾಡಿ ಫೈಲ್‌ನ ಬಿಸಾಕಿರ್‍ತಾರೆ. ಯಾರು ಯಾಕೆ ತಲೆ ಕೆಡುಸ್ಕೋತಾರೆ. ವೊಳ್ಳೆ... ಎಂದು ಮುಂದುವರೆದ.

ಗಿಡ್ಡಜ್ಜ ಮುಂದುವರೆದರೂ ಪಾಟೀಲ ಪಟ್ಟು ಬಿಡಲಿಲ್ಲ. ಇಲ್ಲ, ಇದಕ್ಕೆ ಏನಾದರೊಂದು ಪರಿಹಾರ ಕಂಡು ಹಿಡೀಲೇಬೇಕು. ತಪ್ಪು ಮಾಡಿದವರಿಗೆ ಶಿಕ್ಷೆ ಆಗಲೇಬೇಕು... ಎಂದು ಕುಂತ.

ನಾಳೆ ನೇ ಈ ಕೊಲೆ ಮಾಡಿರೋದು ಅಂತಲೋ, ಇಲ್ಲ ಹೆಚ್ಚಿನ ವಿಚಾರಣೆಗೆ ಅಂತಲೋ ನ್ನನ್ನೇ ಒಳಗೆ ಹಾಕಿ ಚಮ್ಡ ಸುಲೀತಾರೆ ಗೊತ್ತಾ.. ಏನೋ ಮಾಡಕ್ಕೆ ಹೋಗಿ ಇನ್ನೇನೋ ಆಯ್ತು ಅಂತಾರಲ್ಲ, ಹಂಗೆ... ಬೇಕಾ ಂಗಿದು? ನೋಡು ಅದರ ಸ್ಕಲ್ ಇಲ್ಲ. ಆ ತಲೆಬುರುಡೇನ ಏನು ಮಾಡಿದೆ ಅಂತ ಇನ್ನೂ ನಾಲ್ಕು ಒದೀತಾರೆ... ಅಷ್ಟಕ್ಕೂ ಇದು ಎಷ್ಟು ವರ್ಷ ಹಿಂದಿನದು ಅಂತ ಂಗೊತ್ತಾ?...

ಸ್ವಾತಂತ್ರ್ಯ ಹೋರಾಟ ಕಾಲದಲ್ಲಿ ಬ್ರಿಟಿಷರಿಗೆ ಚಳ್ಳೆಹಣ್ಣು ತಿಸಿದ ಯಾರೋ ದೇಶಪ್ರೇಮಿ ಇಲ್ಲಿ ತಲೆಮರೆಸಿಕೊಂಡು ಕೊನೆಗೆ ಆಹಾರ ಸಿಗದೇ ಸತ್ತಿರಲೂಬಹುದು... ಅದಕ್ಕಿಂತಲೂ ಹಿಂದೆ ಅಂದರೆ ಕ್ರಿಸ್ತಶಕ ನಾಲ್ಕನೇ ಶತಮಾನದಲ್ಲಿ ಈ ಗುಡ್ಡವನ್ನೇ ಶ್ರೀಪರ್ವತವೆಂದು ಕರೆಯುತ್ತಿದ್ದರೆಂದೂ, ಸುತ್ತಲೂ ಭಯಂಕರವಾದ ಕಾಡು ಇದ್ದುದರಿಂದ ಮಯೂರವರ್ಮನು ಇಲ್ಲಿಯೇ ಅಡಗಿಕೊಂಡು ಸೈನ್ಯ ಕಟ್ಟಿ ಪಲ್ಲವರನ್ನು ಸೋಲಿಸಿ ಮೊಟ್ಟಮೊದಲ ಕನ್ನಡರಾಜ್ಯವನ್ನು ಕಟ್ಟದನೆಂತಲೂ ಒಳ್ಳೆ ಇತಿಹಾಸದ ಮೇಸ್ಟ್ರರಂತೆ ಮೈನವಿರೇಳುವಂತೆ ವಿವರಿಸಿದ.
ಬಹುಶಃ ಈ ಸೆಲೆಟನ್ ಮಯೂರ ಬಂಧಿಸಿ ತಂದ ಯಾವದಾದರೂ ಪಲ್ಲವರಾಜನದ್ದಿರಲೂಬಹುದಲ್ಲವೇ? ಎಂದು ಇನ್ನಷ್ಟು ಅಳುಕು ಮೂಡಿಸಿದ. ಈ ಮೂಳೆ ಮಣ್ಣಿನ ಸಂಪರ್ಕವಿರದೇ ಪೂರ್ಣ ಬಂಡೆಗಲ್ಲಿನ ಮೇಲೆಯೇ ಇರುವುದರಿಂದ ಬಹುಶಃ ಹಾಳಾಗದೇ ಉಳಿದಿರಲೂಬಹುದು ಎಂಬ ಸಾಧ್ಯತೆಯನ್ನು ಮುಂದಿಟ್ಟ. ಪಾಟೀಲ, ಈ ಮೂಳೆಯ ಹಿಂದೆ ಇಷ್ಟೆಲ್ಲಾ ಸಾಧ್ಯತೆಗಳಿರಲಿಕ್ಕಿಲ್ಲ ಎಂದು ಅನುಮಾನ ವ್ಯಕ್ತಪಡಿಸಿದ್ದರಿಂದ, ಹಾಗಾದರೆ ಬಹುಶಃ ಈ ಮೂಳೆ ಮನುಷ್ಯನದೇ ಆಗಿರಲಿಕ್ಕಿಲ್ಲ ಬಿಡಿ... ಎಂದು ವಿಷಯಾಂತರ ಮಾಡಿ ಮುಂದುವರೆದ.

ಗುಡ್ಡದ ತುಟ್ಟ ತುದಿಯನ್ನು ಏರಿ ಹಿಮಾಲಯವನ್ನೇ ಏರಿದವನಂತೆ ಬೀಗಿದ. ಈ ಗುಡ್ಡವನ್ನು ಅದೆಷ್ಟನೇ ಬಾರಿಗೆ ಏರಿದ್ದನೋ! ಆದರೂ ಹಿಮಾಲಯವನ್ನು ಎಷ್ಟನೆ ಬಾರಿಗೆ ಏರಿದ್ದರೂ ಅದರಲ್ಲೇನೋ ಹೊಸತನವಿರುವಂತೆ ಗಿಡ್ಡಜ್ಜನ ಪಾಲಿಗೆ ಧವಳಪ್ಪನಗುಡ್ಡ ಒಂದೊಂದು ಸಲವೂ ಒಂದೊಂದು ಹೊಸ ಸಾಧ್ಯತೆಯನ್ನು ತೋರುತ್ತಿತ್ತು. ಪಾಟೀಲ ಮತ್ತು ಓಬಳಪ್ಪ ಎರಡೂ ಕೈಯ್ಯನ್ನೂ ಬಾಯಿಗೆ ಅಡ್ಡಯಿಟ್ಟು -ಜೀವಮಾನದಲ್ಲಿ ಮೊದಲ ಬಾರಿಗೆ ಈ ಎತ್ತರವನ್ನು ಏರಿದವರಂತೆ- ಕೂಗು ಹಾಕಲಾರಂಭಿಸಿದರು. ಉತ್ತುಂಗದ ತುಟ್ಟ ತುದಿಯಲ್ಲಿ ತಮ್ಮ ಇರುವನ್ನೇ ಮರೆತು ದೂರ ದೂರ ನೋಡಿದರು. ಅಲ್ಲೆಲ್ಲೋ ದೂರದಲ್ಲಿ ಹೈವೇ ಮೇಲೆ ಓಡಾಡುತ್ತಿರುವ ಲಾರಿಗಳು ಸಾಲು ಹಿಡಿದು ಹೋಗುತ್ತಿರುವ ಇರುವೆಗಳಂತೆಯೂ, ವಿಶಾಲವಾಗಿದ್ದ ಚಂದ್ರವಳ್ಳಿ ಕೆರೆ ಸಣ್ಣ ಹೊಂಡದಂತೆಯೂ ಕಾಣುತ್ತಿತ್ತು. ನಾವು ಮೇಲೆ ಮೇಲೆ ಏರಿದಂತೆಲ್ಲಾ ಕೆಳಗಿನ ನಮ್ಮ ಆಸೆ ಮತ್ತು ಆಶಯಗಳು ಸಣ್ಣದಾಗಿಯೂ, ಕ್ಷುಲ್ಲಕವಾಗಿಯೂ ಕಾಣಲಾರಂಭಿಸುತ್ತವೆ ಎಂದು ತನ್ನಷ್ಟಕ್ಕೇ ತಾನೇ -ಒಳ್ಳೆ ದಾರ್ಶಕನಂತೆ- ಹೇಳಿಕೊಂಡ.

ಅಷ್ಟರಲ್ಲಿ ಸುಮ್ಮದ್ದ ಸ್ಟೀಲಿನ ಟಿಫನ್ ಕ್ಯಾರಿಯರ್ ಅಲುಗಾಡಲಾರಂಭಿಸಿದ್ದು ಉರುಳಲಾರಂಭಿಸಿತು. ಹಾಗೇ ಉರುಳಿ ಬಿದ್ದು ಹೋದರೆ ಅಲ್ಲಿಗೆ ಇಳಿದು ಎತ್ತಿ ತರುವುದು ಅಸಾಧ್ಯವೆಂದರಿತ ಪಾಟೀಲ ಛಂಗನೆ ಎಗರಿ ಹಿಡಿದುಕೊಂಡ. ಅಷ್ಟರೊಳಗೆ ಅದರ ಬಾಯಿ ಬಿಚ್ಚಿಕೊಂಡು ಏಡಿ ಒಂದು ಕಡೆ, ಬಾಕ್ಸ್ ಒಂದು ಕಡೆ, ಕ್ಯಾಪ್ ಒಂದು ಕಡೆ ಬಿದ್ದವು. ರ್ಜೀವ ವಸ್ತುಗಳು ಗಿರಕಿ ಹೊಡೆದು ಸುಮ್ಮನೇ ಂತರೆ, ಏಡಿ ಮಾತ್ರ ಅಳಿದುಳಿದಿದ್ದ ಕಾಲುಗಳಲ್ಲೇ ಕುಂಟುತ್ತಾ ಅಡ್ಡಡ್ಡ ನಡೆಯುತ್ತಾ ಎಲ್ಲಾದರೂ ಸಂದಿಗೊಂದಿ ಇದೆಯೇ ಎಂದು ಹುಡುಕಲಾರಂಭಿಸಿತು. ಪಾಟೀಲ ಅದನ್ನು ಹಿಡಿಯಲು ಪ್ರಯತ್ನಿಸಿದಷ್ಟೂ ಅದು ಗಾಬರಿಗೊಂಡು ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿತ್ತು. ಆದರೂ ಅದರ ಕಾರಣದಿಂದ ತಾನು ಎಲ್ಲಿ ಜಾರಿ ಬಿಡುವೆನೋ ಎಂಬ ಆತಂಕದಲ್ಲಿ ಅದರ ಒಂದು ಕೊಂಡಿಯನ್ನು ಹಿಡಿದ. ಅದೂ ಇನ್ನೊಂದು ಕೊಂಡಿಯಿಂದ ಅವನ ಕೈಯ್ಯನ್ನು ಹಿಡಿದುಕೊಂಡಿತು. ಇವನು ಕೈ ಬಿಟ್ಟರೂ ಅದು ಇವನನ್ನು ಬಿಡದಂತೆ ಹಿಡಿದುಕೊಂಡಿತು -ಹಿಂದೆ ಗಿಡ್ಡಜ್ಜನ ಕೈಯ್ಯನ್ನು ಹಿಡಿದಿದ್ದಂತೆ. ಪಾಟೀಲ ಕಿರುಚಲಾರಂಭಿಸಿದ. ಓಬಳಪ್ಪ ಆತಂಕಗೊಂಡ. ಆದರೆ ಗಿಡ್ಡಜ್ಜ, ಅದರ ಕಾಲು ಮುರಿದಿದ್ದೆಯಲ್ಲಾ ಅನುಭವಿಸು ಎಂದು  ನಗಲಾರಂಭಿಸಿದ. ಆದರೂ ಅದರ ಕೊಂಡಿಯನ್ನು ಹಿಗ್ಗಲಿಸಿ ಅದರ ಹಿಡಿತದಿಂದ ಬಿಡಿಸಲು ತನ್ನ ಒಂದು ಕೈಯ್ಯಿಂದಲೇ ಓಬಳಪ್ಪಗೆ ಸಹಕರಿಸಿದ.
ಅದು ಕೈಬಿಟ್ಟ ಮೇಲೆ ಪಾಟೀಲ ಹಲ್ಲು ಹಲ್ಲು ಕಡಿದ. ತನ್ನ ಕೈಯ್ಯಲ್ಲಿ ಹರಿಯುತ್ತಿರುವ ರಕ್ತವನ್ನೂ ಲೆಕ್ಕಿಸದೇ, ಇಕ್ಕಳದಂತೆ ಆಡುವ ಎರಡೂ ಕೊಂಡಿಗಳ ಹೆಬ್ಬೆರಳನ್ನು, ಕಡಿತಿಯಾ... ಈಗ ಕಡಿ... ಎನ್ನುತ್ತಾ ಮುರಿದು ಹಾಕಿದ. ಆದರೂ ಒಂದು ಕೊಂಡಿಯಿಂದಲೇ ತಿವಿಯುವಂತೆ ಮಾಡುತ್ತಾ ಉಳಿದಿದ್ದ ಕಾಲುಗಳಲ್ಲಿ ಅತ್ತ ಇತ್ತ ಚಲಿಸಲಾರಂಭಿಸಿತು. ಓ... ಈ ಕಾಲುಗಳು ಇರೋದಕ್ಕೆ ತಾನೇ ಇನ್ನೂ ಹಿಂಗೆ ಆಡ್ತಾ ಇರೋದು... ಎಂದು ಅವುಗಳನ್ನೂ ಮರಿದುಹಾಕಿದ.
ವಿಕಲಾಂಗನಂತೆ ಬಿದ್ದುಕೊಂಡ ಅದು ಅತ್ತ-ಇತ್ತ ಚಲಿಸಲಾರದೇ ಬಾಯಿಯನ್ನು ಲಲುವುತ್ತಾ, ಕಣ್ಣನ್ನು ಮೇಲೆತ್ತುವುದು ಬಿಡುವುದು ಮಾಡುತ್ತಿತ್ತು. ಪಾಟೀಲ, ನೋಡ್ರೀ ಸಾಹೇಬ್ರೇ, ಇಷ್ಟಾದರೂ ಅದು, ಮುರಿದುಹೋಗಿರೊ ಮ್ಮ ಎಡಗೈ ತರ ಆಡುಸ್ತಾ ಮ್ಮನ್ನ ಅಣಗಿಸ್ತಾಯಿದೆ ಎಂದು ಗಿಡ್ಡಜ್ಜಗೆ ಕಿಚಾಯಿಸಿದ. ಗಿಡ್ಡಜ್ಜ ಒಂದು ಕ್ಷಣಕ್ಕೆ ನಕ್ಕರೂ, ಈ ಕೈಯ್ಯದ್ದು ಒಂದು ದೊಡ್ಡ ಕಥೆ ಎನ್ನುತ್ತಾ ಗಂಭೀರನಾಗಿ, ಗುಡ್ಡದ ತುದಿಯಲ್ಲಿ ಮಿಂಚುಸೆಳವಿನಂತಿರುವ -ಬಾವುಟ ಕಟ್ಟುವಂತೆಯೂ ಇರುವ- ಕಳಸ ಇಡಲೆಂದು ಮಾಡಿರಬಹುದಾದ ತಾಮ್ರದ ಕೋಲನ್ನು ಹಿಡಿದು, ಬಹುಶಃ ನೂರಾರು ವರ್ಷಗಳ ಹಿಂದೆ ಈ ಬೃಹತ್ ಬಂಡೆಗೆ ಸಿಡಿಲು ಬಡಿದು ಹೀಗೆ ಬಾಯಿ ಬಿಟ್ಟಿರಬಹುದೇನೋ...? ಎಂದ -ಹಿಂದಿನ ಕಾಲದ ಸಿಡಿಲುಗಳೂ ಕೂಡ ಈಗಿನದಕ್ಕಿಂತ ಪವರ್‌ಫುಲ್ ಆಗಿರುತ್ತಿದ್ದವೇನೋ ಎನ್ನುವಂತೆ.

೧೯೬೨ ರ ಭಾರತ-ಚೈನಾ ಯುದ್ಧದಲ್ಲಿದ್ದಾಗ ಬಾರ್ಡರ್‌ನಲ್ಲಿ ಆ ಸಿಡಿಲಿಗಿಂತಲೂ ಶಕ್ತಿಯುತವಾದ ಬಾಂಬ್‌ವೊಂದು ಸ್ಫೋಟಿಸಿತ್ತು... ನನ್ನ ಕೈಕಾಲುಗಳಿಗೆ ಬಲವಾದ ಪೆಟ್ಟುಬಿದ್ದು, ಎರಡು ದಿನ ಪ್ರಜ್ಞೆ ತಪ್ಪಿಹೋಗಿತ್ತಂತೆ... ಆ ಬಾಂಬ್‌ನ ವಿಷದ ಅವಶೇಷವೊಂದು ನನ್ನ ಎಡಗೈಯ್ಯನ್ನು ಹೊಕ್ಕಿತ್ತಂತೆ... ಕೈಯ್ಯನ್ನು ಕತ್ತರಿಸದಿದ್ದರೆ ಜೀವಕ್ಕೇ ಅಪಾಯವಿತ್ತು ಅಂತ ನಮ್ಮ ಮಿಲಿಟರಿ ಡಾಕ್ಟರರು -ಎಲ್ಲಾ ಮುಗಿದಾದ ಮೇಲೆ- ನನಗೆ ಹೇಳಿದರು... ಎಂದು ತನ್ನ ಕರುಣಾಜನಕ ಕಥೆ ಹೇಳಿ ಯುದ್ಧದ ಕಲ್ಪನೆಯೇ ಇರದ ಹುಡುಗರ ಮೈನವಿರೇಳುವಂತೆ ಮಾಡಿದ.

ಸೀರಿಯಸ್ಸಾಗಿದ್ದ ಗಿಡ್ಡಜ್ಜ, ಏಕದಂ ತಮಾಷೆಯ ಮೂಡಿಗೆ ಬಂದು, ನೋಡಿ, ಪಾಟೀಲ್ ಹೇಳಿದಂತೆ ಹೇಗೆ ನನ್ನ ಕೈ ಏಡಿಯ ಅಸಹಾಯಕ ಕಣ್ಣಿನಂತೆ ಆಗಿದೆ...! ಎಂದು ಮೋಟು ಕೈಯ್ಯನ್ನು ಅಲ್ಲಾಡಿಸಿ ಅಲ್ಲಾಡಿಸಿ, ಲಘುವಾಗಿ ನಕ್ಕ. ಕಣ್ಣಂಚಿನ ರ ಹ ಹಾಗೆಯೇ ಇತ್ತು. ಆದರೆ ಯಾಕೋ ಪಾಟೀಲಗೆ ನಗಲಾಗಲಿಲ್ಲ ! ಏಡಿಯ ಕಣ್ಣನ್ನೇ ನೋಡುತ್ತಾ ಕುಂತುಬಿಟ್ಟ!

ಅದರ ಕಣ್ಣಿನಲ್ಲೇ ನೂರಾರು ಅರ್ಥಗಳು ಹೊಳೆಯಲಾರಂಭಿಸಿದವು !
                         *****

ಜಗತ್ತು ಬದಲಾತು

- ಡಾ || ರಾಜಪ್ಪ ದಳವಾಯಿ

ಜಗತ್ತು ಬದಲಾತು
ಬುದ್ದಿಯ ಕಲಿಬೇಕು ||

ಮಡಿ ಮೈಲಿಗೆಯ
ಕೈಬಿಡಬೇಕು
ದೆವ್ವ ಪಿಶಾಚಿಯ
ಭಯ ಬಿಡಬೇಕು ||

ಜಾತಿ ಭೇದ ಮರೆತು
ಸಹಮತ ತರಬೇಕು
ರಾಹು ಗುಳಿಕಾಲಗಳ
ಲೆಕ್ಕವ ಬಿಡಬೇಕು ||

ಹಲ್ಲಿಯ ಶಕುನ ನಂಬಬೇಡಿ
ತೀರ್ಥಧೂಪ ನಂಬಿಕೆ ಬಿಡಿ
ಆರೋಗ್ಯ ಕೆಟ್ಟರೆ ಆಸ್ಪತ್ರೆ
ಬುದ್ದಿ ಕೆಟ್ಟರೆ ಶವಯಾತ್ರೆ ||

ಮಕ್ಕಳ ಶಾಲೆಗೆ ಕಳಿಸಬೇಕು
ಪೌಷ್ಠಿಕ ಆಹಾರ ನೀಡಬೇಕು
ಶುದ್ಧ ಗಾಳಿ ಶುದ್ಧ ನೀರಿಗೆ
ಪರಿಸರವನ್ನು ಕಾಪಾಡಬೇಕು ||

        *****

ಕೀಲಿಕರಣ: ಕಿಶೋರ್‍ ಚಂದ್ರ

ಊರ್ಮಿಳೆ

- ಗಿರಿಜಾಪತಿ ಎಂ. ಎನ್

ಕವಿಯ ಬರಹದಕ್ಷರದಲಿ
ನಿನ್ನ ಬಾಳಿನಕ್ಕರ ತೋರಲಾಗದು...
ಓ ಸೌಮಿತ್ರಾ ಪ್ರಿಯೆ ಊರ್ಮಿಳಾ...

ಎಲ್ಲೆ ಇರಲಿ, ಹೇಗೆ ಇರಲಿ
ಒಲಿದವಗೆ ಕೊರಳ ನೀಡಿದ ಚಿತ್ಕಳಾ
ಶಬ್ದಮೀರಿದ ನಿಃಶಬ್ಧದಲ್ಲಿ
ತವಸಿಯಾಗಿ ಸಾಗಿದೆ,
ಸಂಗ ತೊರೆದ ನಿಸ್ಸಂಗದಲ್ಲಿ
ಚೈತನ್ಯವಾಗಿ ಸೇರಿದೆ...,
ಇದ್ದು ಇರದಾ ನಂದನದಲಿ
ಸಿದ್ಧ ಸಾಧನೆ ಬಯಸಿದೆ....
ಕಣ್ಣರೆಪ್ಪೆಯಂಚಿನಲ್ಲಿ
ಇನಿಯನನಿಟ್ಟು ತೂಗಿದೆ,
ಮೇಘ ಸಾಲಿನ ಮಾಲೆಯಲ್ಲಿ
ಶ್ರೀ ಸಂದೇಶವ ಕೋರಿದೆ
ನೀನೇ ಧನ್ಯಳು, ನೀನೇ ಮಾನ್ಯಳು,
ನೀನೇ ಶೂನ್ಯದ ಬೆಳದಿಂಗಳು.

        *****

ಕೀಲಿಕರಣ: ಕಿಶೋರ್‍ ಚಂದ್ರ

ಹೋಗಿ ನೋಡುವ ಬಾರೆ

-ಶಿಶುನಾಳ ಶರೀಫ್

ಹೋಗಿ ನೋಡುವ ಬಾರೆ
ಸಾಗಿ ಸೊಗಸ ದೊರಿ
ಡಾಕ್ಟರ ಸಾಹೇಬನೀತಾ                        || ಪ ||

ಬೇಗ ವನಸ್ಪತಿ ಔಷದ ಮೂಲಕ
ತೂಗಿ ಕೊಡುವ ಘನ ಆಗಮ ವಂದಿತ
ರಾಗದಿಂದ ನಾ ಬಂದು ಉಸುರಿ ಮನ
ಯೋಗದಿ ನೋಡಿದೆ ಹೋಗಿ ಈ ಕ್ಷಣ        || ೧ ||

ವೇದವೇದ್ಯನಾದರಶದಿ ಬಂದು
ಶೋಧನೆ ಸುಜನರ ಕಾಯ್ದುಕೊಂಡು ಕಮಲಾನ್ವಿತ
ಮೇದಿನಿವಾಸನೆ ಗಾದಿಯ ಮೇಲೆ ಗಮಕದಲಿ ಕುಳಿತು
ಬ್ರಹ್ಮಾಂಡಕನಂದದ ರೋಗದ ಮೇದಕ    || ೨ ||

ಮನಸಿಜನಂದದಿ ಮಾತನಾಡುವ ಘನರೂಪನೆ
ಶಾಶ್ವತ ಅನುಸರಿಸೀತನ ಸನ್ಮುಖಕೆ ವಂದಿಸಲಾರೆನೆ ?
ಎನಿತು ವಿಸ್ತರಸಿ ಪೇಳುವೆ ತಕ್ಷಣ
ಚಿನುಮಯ ಶಿಶುನಾಳಧೀಶನ ದಯದಿಂ
ಮನಒಲಿದುಸುರಿದೆ ನಿನಗರಿಕಿರಲಿ
ಗುಣದಿ ನಿನ್ನೊಳು ತಿಳಿದು ನೋಡಿಕೋ     || ೩ ||

****

ಕೀಲಿಕರಣ: ಎಂ.ಎನ್.ಎಸ್. ರಾವ್

ಪಂಪನ ಶಾಂತಿಯ ತೋಟ

- ಡಾ || ರಾಜಪ್ಪ ದಳವಾಯಿ

ಪಂಪನ ಶಾಂತಿ ತೋಟದಲಿಂದು
ಬರೀ ಕೊಲೆ ಸುಲಿಗೆ
ಧರ್ಮ ಇಟ್ಟಿಗೆ ಗುಡಿಯೆಂದು
ಸಾಗಿದೆ ಹಿಂಸೆ ಎಲ್ಲಿಗೆ

ಛಲದಭಿಮಾನದಲಿ ಬಲೀ ಕುಲವು
ಭೂತ ಗಣದ ನರ್ತನ
ಕಮರಿ ತ್ಯಾಗ ವೈರಾಗ್ಯವೆಲ್ಲವು
ಸಗಿದೆ ಹಿಂಸಾ ಕೀರ್ತನ

ಕವಿಕಲಿ ಸವ್ಯಸಾಚಿಯಿಂದ
ನಾವು ಕಲಿತದ್ದೇನು
ಮನ ಮತಯುದ್ಧದಿಂದ
ನಾವು ಗಳಿಸಿದ್ದೇನು

ಯುದ್ಧ ಭೂಮಿಯ ಪಡೆ
ಕರ್ಣರ ನಿಂತು ಕೊಲಿಸಿ
ಗಡಿ ಗುಜರಾತುಗಳೆಲ್ಲೆಡೆ
ಮತಾಯುಧ ಪಡೆ ನಿಲ್ಲಿಸಿ

ಪಂಪನ ಶಾಂತಿ ತೋಟದಲ್ಲಿ
ಮತವೆಂದರೆ ಧರ್ಮ
ಗೋಳ ಮುಕ್ಕಾಲು ಅಶಾಂತಿಯಲ್ಲಿ
ತಿಳಿಯದು ಓಟಿನ ಮರ್ಮ

ಶಾಂತಿಯ ತೋಟ ತುಂಬೆಲ್ಲ
ಆಯುಧ ಫಲ ಪೈರು
ಚಿಗುರು ಬೆಳದಿಂಗಳೊಳಗೆ
ಖಡ್ಗ ಕಾರುಬಾರು

(ಒತ್ತಾಸೆ - ಅನ್ನಪೂರ್ಣ ವೆಂಕಟನಂಜಪ್ಪ, ತುಮಕೂರು)

        *****

ಕೀಲಿಕರಣ: ಕಿಶೋರ್‍ ಚಂದ್ರ

ತುಂತುರು ಸೋನೆಯಲ್ಲೊಂದು ಪ್ರೇಮಕಥೆ..

- ಕವೀಶ್ ಶ್ರಿಂಗೇರಿ

ಚಿತ್ರ: ರಾಂಗೋಪಾಲ್ ರಾಜಾರಾಮ್
ಭೂಮೀನ ನೋಡಲು ಸೂರ್ಯ ಓಡೋಡಿ ಬಂದು, ಆಕೆಯ ಮುಖದಲ್ಲಿ ನಗು ನೋಡಿ ಪುಳಕಗೊಂಡು.. ಭೂಮಿನ ನೋಡುತ್ತಾ.. ನಿಂತಿದ್ದಾನೆ! ಮೊಗ್ಗು ಹೂವಾಗಿ ತನ್ನ ಕಂಪನ್ನು ಸೂಸುತ್ತಿದೆ...! ಇಬ್ಬನಿಯು ಆ ಹೂವ ಎದೆಯನ್ನು ಚುಂಬಿಸಿ ತೃಪ್ತಿಯಾಗಿದೆ.  ದುಂಬಿಗಳು ಹೂವ ಮಧುವನ್ನು ಹೀರಲು ನಾ ಮುಂದು ತಾ ಮುಂದು ಎಂದು ಹಂಬಲಿಸುತ್ತಿವೆ. ಈ ಸಮಯದಲ್ಲಿ ಹೊಸದಿನಕ್ಕೆ ಸ್ವಾಗತ ಕೋರಲು, "ಶಾಂತಿ" ಮನೆಯ ಶ್ರೀ ತುಳಸಿಯ ಮುಂದೆ ಗುಡಿಸಿ, ಸಗಣಿಯಿಂದ ಸಾರಿಸಿ... ರಂಗವಲ್ಲಿ ಇಡುತ್ತಿದ್ದಾಳೆ! ಒಂದು ಸಂಸ್ಕೃತಿ... ಸಂಸ್ಕಾರ ಇರುವ ಮನೆತನ ಶಾಂತಿಯ ಕುಟುಂಬ. ಹೌದು ಇದು ಪಕ್ಕಾ ಮಲೆನಾಡಿನ ಅಂದರೆ ತೀರ್ಥಹಳ್ಳಿ ಅಂತ.. ಕೂಗಿ ಹೇಳಲೇಬೇಕಾಗಿಲ್ಲ...!

ಪ್ರತಿದಿನ ಬೆಳಗಾದ್ರೆ ಆಕೆಯ ದಿನ ಆರಂಭವಾಗುವುದೇ ಇಲ್ಲಿಂದ..! ಮನೆಮುಂದೆ ಗುಡಿಸಿ-ಸಾರಿಸಿ-ರಂಗವಲ್ಲಿ ಇಡೋದೆಂದ್ರೆ ಶಾಂತಿಗೆ ಎಲ್ಲಿಲ್ಲದ ಸಂಭ್ರಮ.  ಈ ಸಂಭ್ರಮಕ್ಕೆ ಕಾರಣ ಏನು ಗೊತ್ತಾ? ಇನ್ನೂ ೧೬-೧೭ ರ ಹರೆಯದ ಶಾಂತಿ ಮನೆಮುಂದೆ ರಂಗವಲ್ಲಿ ಇಡುವ ಸಮಯದಲ್ಲಿ ಪ್ರತಿ ದಿನವೂ ಹಾಲು ಮಾರುವ ಹುಡುಗ `ರಾಜೇಶ್' ಶಾಂತಿಯ ಮನೆ ಮುಂದೆ ಹಾದು ಹೋಗುವಾಗ ತನ್ನ ಸೈಕಲ್‌ನ ಬೆಲ್ ಅನ್ನು 'ಟ್ರಿಣ್' ಅನ್ನಿಸಿ ಇತ್ತ ಒಂದು ನಗೆ ಬೀರಿ, ಶಾಂತಿಯ ಉದ್ದನೆಯ ಜಡೆಯನ್ನು ನೋಡಿ ಅವಳ ಮಂದಹಾಸ ನಗೆಯನ್ನು ನಿರೀಕ್ಷಿಸಿ ನಂತರ ಆ ನಗೆಯ ದರುಶನ ಸಿಕ್ಕ ನಂತರವೇ ಅವನ ಹಾಲಿನ ಸೈಕಲ್ ಮುಂದೆ ಹೋಗುತ್ತಿತ್ತು.  ಅವನು ನಿರೀಕ್ಷಿಸಿದ ಆ ಮಂದಹಾಸ ನಗೆ ನಿರೀಕ್ಷಿಸಿದಂತೆಯೇ ಅವನಿಗೆ ದೊರೆಯುತ್ತಿತ್ತು ಆಹಾ! ಅದೃಷ್ಟ ಅಂದ್ರೆ ಇದೇ ರೀ...!

ರಾಜೇಶ್ ಹಾಲು ಮಾರಿ ಮತ್ತೆ ವಾಪಾಸ್ ಅವನ ಮನೆಗೆ ಹಿಂತಿರುಗುತ್ತಿರುವಾಗ ಶಾಂತಿ ಮನೆ ಮುಂದೆಯೇ ಹೋಗಬೇಕಾಗಿತ್ತು.  ಇದು ಅನಿವಾರ್ಯವಾದರೂ ಒಂಥರಾ ಅದೃಷ್ಟ. ಇರಲಿ ಅದರ ಬಗ್ಗೆ ನಮಗೇಕೆ ಹೊಟ್ಟೆ ಕಿಚ್ಚು...!  ಹೀಗೆ ರಾಜೇಶ್ ಶಾಂತಿ ಮನೆಮುಂದೆ ವಾಪಾಸ್ ಹೋಗುವಾಗಲೆಲ್ಲ ಅವನ ಹಾಲಿನ ಸೈಕಲ್ ಬೆಲ್ `ಟ್ರಿಣ್' ಅಂತ ತಪ್ಪದೇ ಹೊಡೆಯುತ್ತಿದ್ದ... ಅದೇ ಸಮಯದಲ್ಲಿ ಶಾಂತಿ ಮನೆಮುಂದೆ ಗಿಡದಿಂದ ಹೂವನ್ನು ಕೊಯುತ್ತಾ ನಿಂತಿರುತ್ತಿದ್ದಳು.  ಇಬ್ಬರ ಮುಖದಲ್ಲೂ ಮಂದಹಾಸ.. ಒಂಥರಾ ಖುಷಿ... ಎಲ್ಲಿ ಯಾರಾದ್ರೂ ನೋಡುತ್ತಾರೋ ಎಂಬ ಭಯ ಬೇರೆ...!  ಆಗ ಶಾಂತಿ ಮನಸಲ್ಲಿ ಅನಿಸಿದ್ದು ಹೀಗೆ...!

ಸುಮ್ಮನೆ.. ಸುಮ್ಮನೆ.. ಎದೆಯ ಒಳಗೇನೋ ಕಚಗುಳಿ.. ಮೆಲ್ಲನೆ ಹಾಗೇನೆ.. ಹೃದಯದೊಳಗೇನೋ ಚಿಲಿಪಿಲಿ..

ಮನಸು ಬಯಸಿದೆ ಹೊಂಗನಸು...
ಹೊಂಗನಸು ಬಯಸಿದೆ ಪಿಸುಮಾತು..
ಈ ವಯಸ್ಸೇ.. ಹೀಗೇನಾ...!
ಆ ರವಿಮಾಮ ದಿನವೂ ಭೂಮಿಯ ನೋಡಲು ಬಂದೇ ಬರುತ್ತಾನೆ...
ಈ ನನ್ನ ಮಾಮ ದಿನ ಬೆಳಗಾಗೋದನ್ನೇ ಕಾಯ್ತಾ ಇರುತಾನೆ...

ನನ್ನ ನೋಡಲು ಅವನಿಗೆ ಆತುರ....!
ಜೊತೆ ಮಾತಾಡಲು ಅವನಿಗೆ ಕಾತುರ....!
ಅನುರಾಗದ ಕಚಗುಳಿಯು ಹೀಗೇನಾ...!

ಪಾಪ ಆಗತಾನೆ ಒಂದು ಸುಂದರ ಪ್ರಪಂಚವನ್ನು ಹಂಬಲಿಸುತ್ತಾ ಆ ಹಾಡನ್ನು ಗುನುಗುವ ಆ ಶಾಂತಿಯ ಹೃದಯದಲ್ಲಿ `ಲಬ್-ಡಬ್' ಸದ್ದಿನ ಜೊತೆಗೆ `ಅನುರಾಗದ ಆಲಾಪನೆಯೂ' ಕೇಳಿ ಬರುತ್ತಿತ್ತು...

ಮರುದಿನ ಪಕ್ಕದ ಊರಿನ ಚಂದ್ರಣ್ಣ ಮನೆಯಲ್ಲಿ "ಸತ್ಯನಾರಾಯಣ ಪೂಜೆ" ಇತ್ತು.  ಶಾಂತಿ ಅಲ್ಲಿಗೆ ಹೋಗಿದ್ದಳು... ರಾಜೇಶನು ಅಲ್ಲಿಗೆ ಬಂದಿದ್ದ.. ಅಲ್ಲಿಗೆ ಬರುವ ವಿಷಯ ಪರಸ್ಪರರಿಗೂ ತಿಳಿದಿರಲಿಲ್ಲ.  ಇಷ್ಟಕ್ಕೂ ಇವರಿಬ್ಬರೂ ಇದುವರೆಗೂ ಒಂದು ಮಾತನ್ನು ಆಡಿಲ್ಲ.. !

ಅಲ್ಲಿ ಸತ್ಯನಾರಾಯಣ ಪೂಜೆನೂ ಆಯ್ತು.  ನಂತರ ಊಟದ ಸಮಯದಲ್ಲಿ ರಾಜೇಶ್ ಊಟವನ್ನು ಬಡಿಸಲು ತನ್ನ ಗೆಳೆಯರೊಂದಿಗೆ ಮುಂದಾದ.  ಅವನಿಗೆ ಎಲ್ಲಿಲ್ಲದ ಖುಷಿ.  ಶಾಂತಿಯು ಮೊದಲ ಪಂಕ್ತಿಯಲ್ಲಿ ಊಟಕ್ಕೆ ಕುಳಿತಿದ್ದಾಳೆ..  ಅವಳ ಜೊತೆಯಲ್ಲಿ ಅವಳ ಗೆಳತಿಯರೂ ಇದ್ದಾರೆ..  ರಾಜೇಶ್ ಊಟ ಬಡಿಸುತ್ತಿದ್ದಾನೆ.  ಅಲ್ಲಿ ನೆರೆದವರೆಲ್ಲರ ಕಣ್ಣು ಶಾಂತಿಯ ಮೇಲೆಯೇ.  ಕಾರಣ ಶಾಂತಿ ನಕ್ಕರೆ ಅವಳ ಮುಖದಲ್ಲಿ ಎಡಗಡೆ `ಗುಳಿಬೀಳುತ್ತಿತ್ತು'.  `ಗುಳಿಬಿದ್ದ' ಕೆನ್ನೆಯ ಹುಡುಗಿ ಶಾಂತಿಯ ನಗುವಿಗಾಗಿ ಹಂಬಲಿಸುತ್ತಿದ್ದವರು ಅದೆಷ್ಟೋ ಜನ...

ಇದೇ ಸಮಯದಲ್ಲಿ ಸಣ್ಣಗೆ ತುಂತುರು ಮಳೆ ಶುರುವಾಯಿತು... ಮಲೆನಾಡಿನ ಆ ಮಣ್ಣ ಕಂಪು... ತಂಗಾಳಿ... ಎಲ್ಲವೂ ಮತ್ತಷ್ಟು ಮೆರಗು ತಂದಂತ್ತಿತ್ತು..! ಶಾಂತಿಗೆ ಮಳೆಯಲ್ಲಿ ನೆನೆಯುವ ಆಸೆ.. ಆ ಮಳೆ ನೀರಿನೊಂದಿಗೆ ಆಟವಾಡುವ ಹಂಬಲ.  ರಾಜೇಶ್‌ಗೂ ಆ ತುಂತುರು ಸೋನೆಯ ಮಳೆಯಲ್ಲಿ ನೆನೆಯಬೇಕೆಂಬ ಆಸೆ... ಜೊತೆಗೆ ಕ್ಷಣ ಕ್ಷಣಕ್ಕೂ ಶಾಂತಿನಾ ನೋಡುತ್ತಾ ತನ್ನ ಕೈಯಲ್ಲಿ ತಲೆ ಬಾಚಿಕೊಳ್ಲುತ್ತಿದ್ದ.  ಅವನಿಗೆ ಆ ಕ್ಷಣದಲ್ಲಿ ಅವನ ಕಾಲುಗಳು ಭೂಮಿ ಮೇಲೆ ನಿಲ್ಲಲಾರದ ಸ್ಥಿತಿಯಲ್ಲಿ ಇದ್ದವು.... ಅಂದರೆ... ಅವನ ಮನಸಿನ ಭಾವನೆಗೆ ಅವನ ದೇಹವು ತಕಧಿಮಿ ಅನ್ನುತ್ತಿತ್ತು.. ಅದೇ ಅಲ್ವಾ ಪ್ರೇಮ ನಿವೇದನೆ...!

ಆ ಮಳೆಯಲ್ಲೆ ರಾಜೇಶ್ ಶಾಂತಿಯ ನೋಡಲೆಂದೇ ಕೆಲವು ಕೆಲಸಗಳನ್ನು ನೆನೆಯುತ್ತಲೇ ಮಾಡುತ್ತಿದ್ದ.  ಶಾಂತಿಗೂ ಅವನ ತಳಮಳ ಅರ್ಥವಾಗುತ್ತಿತ್ತು.  ಒಮ್ಮೊಮ್ಮೆ ಮುಗುಳ್ ನಗುತ್ತಿದ್ದಳು.. ಹಾಗೇ ತನ್ನನ್ನು ಯಾರಾದ್ರೂ ನೋಡುತ್ತಿದ್ದಾರಾ ಎಂದು ಒಮ್ಮೆ ಗಮನಿಸುತ್ತಿದ್ದಳು.  ಎಷ್ಟಾದ್ರೂ ಮಲೆನಾಡಿನ ಹೆಣ್ಣು ಮಕ್ಕಳಿಗೆ ಅವರ ಸೌಂದರ್ಯ ಪ್ರಜ್ಞೆಯ ಜೊತೆಗೆ ತಮ್ಮ ಇಮೇಜಿಗೆ ಎಲ್ಲಿ ತೊಂದರೆ ಆದೀತೋ ಎಂಬ ಭಯ ಮತ್ತು ಕಾಳಜಿಯೂ ಇರುತ್ತದೆ.

ಮಳೆ ಸ್ವಲ್ಪ ಕಡಿಮೆ ಆಯಿತು.. ಅಲ್ಲಿ ನೆರೆದವರೆಲ್ಲ ಹೊರಟಿದ್ದಾರೆ.  ಆದರೆ ರಾಜೇಶ್‌ಗೆ ಶಾಂತಿಯನ್ನು ಬಿಟ್ಟು ಹೊರಡಲು ಮನಸ್ಸೇ ಬರ್ತಿಲ್ಲ..! "ವೈದ್ಯರು ಹೇಳಿದ್ದೂ ಹಾಲು ಅನ್ನ ರೋಗಿ ಬಯಸಿದ್ದೂ ಹಾಲು-ಅನ್ನ" ಎಂಬಂತೆ ಅದೇ ಸಮಯಕ್ಕೆ ಸರಿಯಾಗಿ ಮತ್ತೆ ಮಳೆ ಶುರುವಾಯಿತು.  ತಥ್ ತೇರಿಕಿ..! ಅಲ್ಲಿ ಸತ್ಯ ನಾರಾಯಣ ಪೂಜೆಗೆ ಬಂದವರ ಪೈಕಿ ಉಳಿದವರು ಶಾಂತಿ ಮತ್ತು ರಾಜೇಶ್ ಹಾಗೂ ಶಾಂತಿಯ ಗೆಳತಿಯರು... ಇಲ್ಲಿದೆ ನೋಡಿ ತಳಮಳ.. ಕನ್‌ಫ್ಯೂಷನ್.. ಟೆನ್ ಷನ್... ಹಂಬಲ... ಎಲ್ಲ ಮಿಕ್ಸ್ ಆಗಿ ಇವರಿಬ್ಬರ ಅಂತರಂಗದ ಮೃದಂಗ.." ಧೀಂ ತಕಿಟ.. ತಕಿಟ....ಧೀಂ.. ತಕಿಟ ಎಂದಿತು.

ಹಿಂದಿನಿಂದ ಯಾರೋ ಕೂಗಿದರು. "ರಾಜೇಶ್ ಎಲ್ಲರಿಗೂ ಕಾಫಿಕೊಡು ಬಾ" ಅವರ್ಯಾರೋ ಮಾತಿನಂತೆ ರಾಜೇಶ್ ಎಲ್ಲರಿಗೂ ಕಾಫಿ ಕೊಡಲು ಮುಂದಾದ.  ಹಾಗೆಯೇ ಶಾಂತಿಯ ಬಳಿ ಹೋದಾಗ ಅವಳು ನಾಚುತ್ತ ಕಾಫಿ ಲೋಟ ತೆಗೆದುಕೊಂಡಳು.  ಇವನು ಶಾಂತಿಯ ಕಣ್ಣುಗಳನ್ನು ಅಲ್ಲೇ ಹತ್ತಿರದಿಂದ ಆಗಲೇ ನೋಡಿದ್ದು.  ಆಗಲೇ ಅಂದುಕೊಂಡ `ಹೆಣ್ಣೆ ನಿನ್ನ ಕಣ್ಣಿನಲ್ಲಿ ಅನುರಾಗದ ಆಲಾಪನೆ.. ಕಂಡೆನಾ" ಹಾಗಂತ ಆ ಕ್ಷಣದಲ್ಲಿ ತುಂಟತನದಿಂದ ಹಾಡಿದನು...!

ಈ ದಿನ ರಾಜೇಶ್ ಮತ್ತು ಶಾಂತಿ ಒಬ್ಬರನ್ನೊಬ್ಬರು ಪದೇಪದೇ ಕದ್ದು-ಕದ್ದು ನೋಡುತ್ತಿದ್ದುದನ್ನು ಶಾಂತಿಯ ಪಕ್ಕದ ಮನೆಯ ಅಂಕಲ್ ನೋಡಿಯೇ ಬಿಟ್ಟರು.  ಶಾಂತಿಯ ಜೊತೆಯಲ್ಲಿ ಆ ಪೂಜೆಗೆ ಬಂದಿದ್ದ ಗೆಳತಿಯರೆಲ್ಲಾ ಹೊರಡುವ ವೇಳೆಗೆ ಶಾಂತಿಯನ್ನು ಕೂಗಿದರು.  ಆಗ ಸ್ವಲ್ಪ ಮಳೆ ಕಡಿಮೆ ಆಗುತ್ತಿತ್ತು... ಅವರ ಮಾತಿನಂತೆ ಶಾಂತಿಯು ಅವರ ಜೊತೆಯಲ್ಲಿ ಹೊರಟಳು. ರಾಜೇಶ್ ಅಲ್ಲಿಯೇ ಶಾಂತಿಯನ್ನು ನೋಡುತ್ತ ನಿಂತಿದ್ದಾನೆ.

"ಮಳೆ ನಿಂತರೂ.. ಮರದ ಹನಿ ನಿಂತಿರಲಿಲ್ಲ.." ಇವರಿಬ್ಬರೂ ಒಬ್ಬರನ್ನೊಬ್ಬರು ಅಂದು ಕದ್ದು-ಕದ್ದು ನೋಡಿದ್ದು ..ಊಟ ಬಡಿಸಿದ್ದು, ಕಾಫಿ ಕೊಟ್ಟಿದ್ದು, ಹಾಡು ಹೇಳಿದ್ದು ಎಲ್ಲಾ ಈಗ ರಾಜೇಶ್ ಮತ್ತು ಶಾಂತಿ ಎದೆಯಲ್ಲಿ ತಕಧಿಮಿ ಹಾಡಿ ಕುಣಿಯಲು ಶುರುವಾಯಿತು.

-ಇಂತಿ "ಎಳೆಯ ಹೃದಯಗಳಿಗೆ ಪ್ರೀತಿಯ ಅಮೃತ ಉಣಿಸುವ"


"If you miss one issue of my Bhavayaana
You will lose lots of feelings in your life Bhavayaana"
                                                                                                          By Kavish Sringeri
                              *****
ಕೀಲಿಕರಣ: ಕವೀಶ್ ಶ್ರಿಂಗೇರಿ

ಯಶೋಧರೆ...ಗೆ

- ಗಿರಿಜಾಪತಿ ಎಂ. ಎನ್

ಏಕೆ ನೀನು ಮೌನ ವಹಿಸಿದೆ,
ಮಾತನೊಲ್ಲದ ಶಿಲ್ಪವಾದೆ
ಹೇಳೆ... ನೀ ಯಶೋಧರೆ?

ಯಾವ ಕಾರಣ,
ಯಾವ ಹೂರಣ,
ತೋರಣದಿ ನಡೆದಿತು ನಿನ್ನ ಹರಣ,

ಏನೋ ಅರ್ಥವ
ಹುಡುಕೋಗಣ್ಣಿಗೆ,
ತಿಳಿಯದಾಯಿತೆ ನಿನ್ನೊಲವ ಚರಣ,

ಸತ್ಯ ಶುದ್ಧ ಜೀವನ
ಬಾಳ ಬೆಸುಗೆಗೆ
ಅರ್ಥವಿರದವರಿಂದಲಿ ನೊಂದೆಯೊ?

ಕಣ್ಣ ಮುಂದಿನ
ಜಗವ ಕಾಣಲು ಬೋಧಿ ವೃಕ್ಷವಾಗಿ ರೂಪನು ತಳೆದೆಯೊ?

ಸಿದ್ಧ-ಅರ್ಥವಳಿದು
ಬುದ್ಧನಾದರೂ
ನಿನ್ನ ಶುದ್ಧ ಪ್ರೇಮಕೆ ತುಂಬಲಿಲ್ಲವೇ ನೇಸರ?

ನಾಳೆ ಕಾಣದ
ಕಣ್ಣ ನೋಟಕೆ...
ರಾಹುಲನೆಂದುದೇತಕೊ ಅಪಸ್ವರ

ನಿನ್ನ ಕಾವ್ಯವು
ನಿನ್ನದಲ್ಲದ ಭಾವದಲಿ
ಭಾರವಾಗಿದೆ.

ಇವಳಿಗಿಷ್ಟೇ ಸಾಕು
ಎನ್ನುವ ಕೂಪನಿಷ್ಠದಿ
ಎಲ್ಲೋ ಒಂದೆಡೆ ಸೊರಗಿದೆ...!

        *****

ಕೀಲಿಕರಣ: ಕಿಶೋರ್‍ ಚಂದ್ರ

ಭ್ರಮೆಯೆಂಬ ಸತ್ಯ

- ಫಣಿಕುಮಾರ್ ಟಿ ಎಸ್

ನೀಲಿ ನಭದ ತಳಿಗೆಯಲ್ಲಿ ಚೆಲ್ಲಿ ಹೊಳೆವ ತಾರೆಗಳು ಸುಧಾಕರನಲ್ಲಿ ಇಂದು ಸಂಭ್ರಮ ಮೂಡಿಸುತ್ತಿಲ್ಲ. ಶುಭ್ರ ಶ್ವೇತ ಚಂದಮಾಮ ಅವನಿಗಿಂದು ನಿಸ್ತೇಜ, ನೀರಸ ಹಾಗೂ ನಿಶ್ಯಕ್ತ. ಪ್ರತಿ ಇರುಳ ನೆರಳಿನಲ್ಲಿ ಮನತಣಿಸುತ್ತಿದ್ದ ನಸುಗಾಳಿ ಅವನಿಗೆ ಈ ದಿನ ಅಸಹನೆಯ ನಿಟ್ಟುಸಿರು. ಅರಳಿ ನಿಂತ ನೆಚ್ಚಿನ ಹಳದಿ ಹೂವಿನೊಳಗಿರಬಹುದಾದ ಜೇನಹನಿ ಅವನಿಗಿಂದು ನಂಜು. ಅವನ ಜೀವಸೆಲೆಯಾದ ನಾಲ್ಕು ವರ್ಷದ ನಿರ್ಮಲೆ ಈ ರಾತ್ರಿ ಆ ದೊಡ್ಡ ಆಸ್ಪತ್ರೆಯ ಬಿಳಿ ಹಾಸಿಗೆಯ ಮೇಲೆ ಸಮವಸ್ತ್ರ ಹೊದ್ದು 'ಕೈ'ಚೆಲ್ಲಿ ಮಲಗಿದ್ದಾಳೆ. ಹಿಂದೆ ಎಷ್ಟೋ ಪುಟ್ಟ ದೇಹಗಳು ಅದೇ ಸಮವಸ್ತ್ರದಲ್ಲಿ ಮಲಗಿ ಎದ್ದು ಹೋಗಿರುವ ಕಡೆಯೇ. ಆಕೆ ಮಲಗಿರುವ ಹಾಸಿಗೆಯ ಮೇಲೆ ಒರಗಿ ಎದ್ದು ಹೋದ ಮಕ್ಕಳಲ್ಲಿ ಉಳಿದು ಸಡಗರವಾದವೆಷ್ಟೊ? ಅಳಿದು ಕೊನೆಯಿಲ್ಲದ ನೋವಾಗಿ ಹೋದವೆಷ್ಟೊ? ಪಕ್ಕದಲ್ಲಿ ಕುಳಿತ ಸುಧಾಕರನಲ್ಲಿ ಆತಂಕದ ಜಿಜ್ಞಾಸೆ.

ನಿರ್ಮಲೆಯ ಲವಲವಿಕೆಯ ಚೈತನ್ಯದ ಅಧೀನತೆಯನ್ನು ರುಜುವಾತು ಮಾಡುತ್ತಿರುವ ಆ ಚಿಕ್ಕ ದೇಹದ ಮೇಲೆ ಆವರಿಸಿರುವ ಬಿಳಿಯ ಹೊದಿಕೆ, ಹೊರಗೆ ಇಣುಕಿರುವ ಪುಟ್ಟ ಬಲಗೈಯ ಅಡಿಯಲ್ಲಿನ ನರವೊಂದಕ್ಕೆ ಹೆಟ್ಟಿರುವ ಸೂಜಿ, ಸೂಜಿಗೆ ಆಯವಾಗಿ ಕಟ್ಟಿರುವ ಹಲಗೆ, ಅದನ್ನು ಬಂಧಿಸಿರುವ ಬ್ಯಾಂಡೇಜು, ಬಳಿಯಲ್ಲಿ ನಿಂತ ಲೋಹದ ಸ್ಟ್ಯಾಂಡಿನ ಮೇಲೆ ತೂಗುಹಾಕಿರುವ ಸೀಸೆಯೊಳಗೆ ಹಾದಿರುವ ತೆಳ್ಳನೆಯ ನಳಿಕೆ, ಅದರ ಮೂಲಕವೇ ಕೆಳಗಿಳಿಯುತ್ತಿರುವ ಔಷಧದ ಝರಿ, ನಿರ್ಮಲೆಯ ದೇಹದೊಳಕ್ಕೆ ಹೆಟ್ಟಿರುವ ಸೂಜಿಯ ಇನ್ನೊಂದು ತುದಿಯ ಮುಖಾಂತರ ಆ ಔಷಧಿಯನ್ನು ಹರಿಯಗೊಟ್ಟು ಎದ್ದುಹೋಗಿರುವ ಆಸ್ಪತ್ರೆಯ ವೈದ್ಯರು - ಎಲ್ಲರ, ಎಲ್ಲದರ ಬಗ್ಗೆ ಸುಧಾಕರನಲ್ಲೊಂದು ತೀರದ ಆಕ್ರೋಶ. ಸೊರಗಿರುವ ಆ ಪುಟ್ಟ ಸುನೀತ ಕೈ ಬೆರಳುಗಳು, ನೀಲಿಗಟ್ಟಿದ ತುಟಿಗಳು, ಅವಳ ಕ್ಷೀಣ, ಸುಂದರ ಮುಖ, ನೋಡು ನೋಡುತ್ತಲೇ ಸುಧಾಕರನ ಕಣ್ಣಲ್ಲಿ ಪದೇ ಪದೇ ಕಂಡೂ ಕಾಣದ ಕಂಬನಿ.

ಆ ಪುಟ್ಟ ಕೈಗಳಿಂದಲೇ ಅಲ್ಲವೇ ತಾನು ಅವಳಿಗೆ ಮೋಡ ಪಲ್ಲಕ್ಕಿಗಳನ್ನು, ಚುಕ್ಕೆ ಚಂದಿರನನ್ನು ಸೋಕಿಸಿ ಸಂಭ್ರಮಿಸುತ್ತಿದ್ದು, ತಂಬೆಳಗಿನ ಕ್ಷಣಗಳಲ್ಲಿ ಹಸಿರ ಮೇಲಿನ ಹೊಳೆವ ಇಬ್ಬನಿಯ ತಣಿವನ್ನು ಸ್ಪರ್ಶಿಸಿ ಮುದಗೊಳ್ಳುತ್ತಿದ್ದು, ಗಿಡದಲ್ಲಿ ಮೂಡಿದ ಹಳದಿ ಹೂವಿನ ಪಕಳೆಗಳನ್ನೊಡೆದ ಮರುಕ್ಷಣ ಉರುಟುವ ಜೇನಹನಿಯನ್ನು ಅವಳ ಬೆರಳುಗಳಿಂದ ನೆಕ್ಕಿ ಚಪ್ಪರಿಸಲು ಅನುವು ಮಾಡಿಕೊಟ್ಟು ನಿರುಮ್ಮಳನಾಗುತ್ತಿದ್ದು, ಹನಿಮಳೆಯ ತೊಟ್ಟನ್ನು ಬೊಗಸೆಯಲ್ಲಿ ಸೆಳೆದು ಅದರ ಸವಿಯನ್ನು ಒಲೆದಾಡುತ್ತಿದ್ದು, ಇಳಿಸಂಜೆಯ ಅಡ್ಡಾಟದ ನೆಪದಲ್ಲಿ ತನ್ನ ತೋರು ಬೆರಳ ಸುತ್ತ ಅವಳ ಬೆರಳುಗಳ ಮುಷ್ಟಿಯನ್ನು ಬಿಗಿಸಿಕೊಂಡು ತನ್ನೆದೆಯಲ್ಲಿ ಹೆಮ್ಮೆಯನ್ನು ಹುದುಗಿಸಿಕೊಳ್ಳುತ್ತಿದ್ದು, ಬಳಿಯಲ್ಲಿ ಮಲಗಿ ಎದೆಯ ಮೇಲಿಟ್ಟುಕೊಂಡ ಆ ಪುಟ್ಟಬೆರಳುಗಳ ಮೃದುಸ್ಪರ್ಶದಿಂದ ಪ್ರತಿ ದಿನದ ಬಳಲಿಕೆಯನ್ನು ಕ್ಷಣವೊಂದರಲ್ಲಿ ಪರಿಹರಿಸಿಕೊಳ್ಳುತ್ತಿದ್ದು. ಆ ಕೈಯ ಮಿದುವಿನಲ್ಲಿ, ಆ ಬೆರಳುಗಳ ನವಿರಿನಲ್ಲಿ, ಅವಳ ಪರಿಶುದ್ಧ ನಗುವಿನಲ್ಲಿ ಇನ್ನೆಂಥಹ ಮಾಂತ್ರಿಕ ಶಕ್ತಿಯಿದೆಯಪ್ಪಾ ಎಂಬುದೇ ಸುಧಾಕರನಲ್ಲಿ ಎಷ್ಟೋ ಬಾರಿ ಸಂಭ್ರಮದ ವಿಸ್ಮಯವನ್ನು ಮೂಡಿಸುತ್ತಿತ್ತು.


ಅಪ್ಪ, ಅಮ್ಮನಿಲ್ಲದ ಸುಧಾಕರನಿಗೆ ನಿರ್ಮಲೆಯೇ ಅಮ್ಮ. ಸಾವಿನ ಅನುಭವ ಅವನನ್ನು ಪ್ರಬುದ್ಧನನ್ನಾಗಿಸಿಲ್ಲ. ನಿರ್ಮಲೆಯ ಲವಲವಿಕೆ, ಅವಳ ಕೆನೆಯ ಹಲ್ಲುಗಳ ಸಾಲುಗಳ ಹಿಂದಿನಿಂದ ಒಡಮೂಡಿ ಹರಡುತಿದ್ದ ಮುದ್ದು ಮಾತಿನ ಸಂಭ್ರಮದ ತಂಗಾಳಿ, ಅವಳ ಗಲ್ಲದ ಮೇಲಿನ ಪುಟ್ಟಗುಳಿಯ ಸ್ನಿಗ್ಧ ಚೆಲುವು, ಅವಳ ರಚ್ಚೆಯಲ್ಲಿ ವ್ಯಕ್ತವಾಗುವ ಸ್ವತಂತ್ರ್ಯಪ್ರಜ್ಞೆಯ ಅಪೇಕ್ಷೆಯ ಆನಂದ ಸುಧಾಕರನ ಅನಾಥಪ್ರಜ್ಞೆಯನ್ನು, ಸಾವಿನ ಅನುಭವದ ಸುಳ್ಳೇ ಮೇಧಾವಿತನವನ್ನು ಮಸುಕಾಗಿಸಿತ್ತು. ಸುಧಾಕರನ ಅನುಭವದ ವಾಸ್ತವ, ಭರವಸೆಯ ಭವಿಷ್ಯ, ಅವನ ಸಂತೋಷ, ಸಹನೆ, ಸಾಂತ್ವನ ಎಲ್ಲವೂ ಆದ ನಿರ್ಮಲೆ ಅವನ ಭಾವಬದುಕಿನ ಅನ್ಯೋನ್ಯ ಅಂಗವಾಗಿಬಿಟ್ಟಿದ್ದಳು. ಅವಳ ಕನವರಿಕೆಯೇ ಅವನಲ್ಲಿ ದೈತ್ಯ ಅಂತ:ಶಕ್ತಿಯನ್ನು ಮೂಡಿಸುತ್ತಿತ್ತು. ಬದುಕಿನ ನಿರಂತರತೆ, ನಿರರ್ಥಕತೆಗಳ್ಯಾವುವೂ ಅವನಿಗೆ ಪರಿವೆಯಿಲ್ಲ.
ಹಾಗಾಗಿ, ಸುಧಾಕರನ ಈ ಯಾತನೆಯ ತಾರ್ಕಿಕತೆ ನಿರ್ಮಲೆಯಡೆಗಿನ ನಿಸ್ವಾರ್ಥ, ನಿತ್ಯಪ್ರೀತಿಯಲ್ಲಿ ಸೇರಿಹೋಗಿತ್ತು. ಬೆಳಗಾಗೆದ್ದರೆ ಶಸ್ತ್ರಕ್ರಿಯೆಯೆಂಬ ಬದುಕಿನ ಅತಿದೊಡ್ಡ ಪರೀಕ್ಷೆಗೆ ಅಯಾಚಿತವಾಗಿ ಒಡ್ಡಿಕೊಂಡಿರುವ ಪುಟ್ಟ ನಿರ್ಮಲೆ ಅದನ್ನು ದಿಟ್ಟವಾಗಿ ಎದುರಿಸಿ ತನ್ನ ಹಿಂದಿನ ಸಂಭ್ರಮಕ್ಕೆ ಮರು ಸಾಕ್ಷಿಯಾಗುತ್ತಾಳೆಯೇ? ಆ ನೀರವ ರಾತ್ರಿಯ ಪ್ರತಿಕ್ಷಣವೂ ಸುಧಾಕರನೊಂದಿಗೆ ತಕರಾರಿಗಳಿಯುತ್ತದೆ, ಅವನೊಂದಿಗೆ ಆಕ್ರಂದಿಸುತ್ತದೆ. ಉಳಿದಿರುವ ಕ್ಷಣಗಳೆಡೆಗೆ ಆತಂಕ ಹೊಂದುತ್ತಲೇ ಅದರಾಚೆಗಿನ ಅನಿರೀಕ್ಷತೆ ಮೂಡಿಸುತ್ತಿರುವ ಅಗಾಧ ಉದ್ವೇಗದಿಂದ ಸುಧಾಕರ ತಲ್ಲಣಗೊಳ್ಳುತ್ತಾನೆ. ತನ್ನೊಳಗೆ ನುಸುಳಿ ಕೆರಳುತ್ತಿರುವ ನೋವನ್ನು ಮುಚ್ಚಿಟ್ಟುಕೊಳ್ಳಲಾಗದೇ ಕಂಪಿಸುತ್ತಾನೆ.

ಸಾವಿನ ಕಠೋರ ಹಿನ್ನೆಲೆಯಲ್ಲಿ ಬದುಕಿನರ್ಥ ಅರಸುತ್ತಲೇ ಮುಡಿಗೊಳ್ಳುವ ಸಾಮಾನ್ಯ ಮನುಷ್ಯನಿಗೆ ಪ್ರತಿ ಸಾವಿನ ಭಯವೂ ತಂದೊಡ್ಡುವ ಬೇಗುದಿ, ಅನುಭವ ಅವನನ್ನು ಮಾಗಲು ಬಿಡುವುದಿಲ್ಲವೆಂಬುದನ್ನು ನಿರೂಪಿಸುವ ಸಂಗತಿಗೆ ಈ ಕಥೆಯ ನಾಯಕ ಸುಧಾಕರನೂ ಹೊರತಲ್ಲ. ಅವನ ಪ್ರೀತಿ ಈಗ ತನ್ನ ನಾಲ್ಕು ವರ್ಷದ ನಿರ್ಮಲೆಯ ಸಾವನ್ನು ಗೆಲ್ಲಲು ತವಕಿಸುತ್ತಿದೆಯಷ್ಟೆ. ಅಮ್ಮನನ್ನು ಕಳೆದುಕೊಂಡಾಗಲೂ, ಅಪ್ಪನನ್ನು ಕಳೆದುಕೊಂಡಾಗಲೂ ಅವನ ಪ್ರೀತಿ ಸಾವನ್ನು ಗೆಲ್ಲುವುದಕ್ಕಷ್ಟೇ ತವಕಿಸಿ ತಲ್ಲಣಿಸಿತ್ತು. ಯಾರಾದರೂ ಆಸ್ಪತ್ರೆಗೆ ಓಡಿ ಬರುವ ಉದ್ದೇಶವೂ ಅಷ್ಟೆ. ಬದುಕಬೇಕೆನ್ನುವ ಅಪೇಕ್ಷೆ. ಯಾಕೆ ಬದುಕಬೇಕೆಂಬ ಪ್ರಶ್ನೆಯೇ ಇಲ್ಲ. ಸಾವನ್ನು ಗೆಲ್ಲಬೇಕೆಂಬುದೇ ಮನುಷ್ಯನ ದಿಟ್ಟ, ಅನರ್ಥ ಹಠ. ಸಾವು ನಿಶ್ಚಿತವಾದರೂ ಆ ಕ್ಷಣದ ಅನಿಶ್ಚಿತತೆ ಅದಕ್ಕೆ ಕಾರಣವೇ?

ನಿರ್ಮಲೆಯನ್ನು ಎದೆಗವಚಿ ನಿಂತ ಸುಧಾಕರನ ಮುಂದೆ ವೈದ್ಯರು ನಿಂತಿದ್ದರು. ಅದೆಂತಹುದೋ ಮದ್ದನ್ನು ಅವಳ ಪುಟ್ಟ ಬಾಯಿಯಲ್ಲಿ ಹಾಕಿದಾಗ ಮಂಪರಿನ ನಿಯಂತ್ರಣಕ್ಕೆ ಸಿಕ್ಕ ಆಕೆಯ ಕ್ಷೀಣ ನಗು ಕಾಣೆಯಾಯಿತು. ಅವನ ಅಪ್ಪುಗೆಯಲ್ಲಿದ್ದ ನಿರ್ಮಲೆಯನ್ನು ಶಸ್ತ್ರಕ್ರಿಯೆಯ ಪರೀಕ್ಷೆಗೆ ಕೊಠಡಿಯೊಳಕ್ಕೆ ಕರೆದೊಯ್ದ ವೈದ್ಯರಲ್ಲಿ ಸುಧಾಕರ ಹುಟ್ಟು ನೀಡುವ ದೇವರನ್ನು ಕಂಡಿದ್ದ. ಕಂಡೂ ಕಾಣದ, ಇದ್ದೂ ಅರಿಯದ ನಿಗೂಢ ಲೋಕಕ್ಕೆ ತೆರಳಿದ ನಿರ್ಮಲೆ ಒಳಗೇ ಉಳಿದಳು. ಸುಧಾಕರ ತನಗರಿವಿಲ್ಲದ, ಕನಸಿಲ್ಲದ ಭ್ರಮೆಯ ಲೋಕಕ್ಕೆ ಸೇರಿಹೋಗಿದ್ದಾನೆ, ಮೌನ ಅವನನ್ನು ಮುತ್ತಿಕೊಂಡಿದೆ. ಅವನ ಮಡದಿಯೂ ಸೇರಿದಂತೆ ಯಾರೂ ಅವನನ್ನು ವಿರೋಧಿಸುವ ಮನಸ್ಥಿತಿಯಲ್ಲಿ ಇಲ್ಲ.
ಕ್ಷಮಿಸಿ, ಈ ಕಥೆಯನ್ನು ಮುಂದುವರೆಸುವ ಮನಸ್ಸಾಗುತ್ತಿಲ್ಲ. ಕ್ಷಣವೊಂದರ ತಲ್ಲಣವನ್ನು ಹಿಡಿದಿಡುವ ಪ್ರಧಾನ ಉದ್ದೇಶವನ್ನು ಮಾತ್ರ ಹೊಂದಿರುವ ಇದಕ್ಕೆ ಇನ್ಯಾವ ಪಾತ್ರಗಳೂ, ಮತ್ಯಾವ ಭಾವಗಳೂ ಸ್ಪಂದಿಸಿಲ್ಲ. ಹಾಗಾದರೂ ಅಪ್ರಸ್ತುತ ಪಾತ್ರಗಳ, ಅನಗತ್ಯ ಭಾವನೆಗಳ ಅಭಿವ್ಯಕ್ತಿಗೆ ತೊಡಗಿಸಿಕೊಂಡರೆ ಅವು ಅನವಶ್ಯಕ ಸಹಾನುಭೂತಿ ಗಿಟ್ಟಿಸಿಕೊಂಡೀತು ಎಂಬ ಸಂದೇಹ ಲೇಖಕನದು.
                 ****

ಬರಕೋ ಪದಾ ಬರಕೋ

-ಶಿಶುನಾಳ ಶರೀಫ್

ಬರಕೋ ಪದಾ ಬರಕೋ
ಇದರನ್ವಯ ತಿಳಿಕೋ                          ||ಪ||

ಸದಮಲಜ್ಞಾನದ ಕುದಿಉಕ್ಕಿ ಬರುವಾಗ
ನದರಿಟ್ಟು ನಿನ್ನೊಳು ಸದಮಲ ತತ್ವದಿ     ||ಅ.ಪ.||

ಅಡಿಗಣ ಪ್ರಾಸಕೆ ನಿಲುಕದ ಪದವು
ನುಡಿಶಬ್ದಕೆ ನಿಲುಕದ ಪದವು
ಎಡತೆರವಿಲ್ಲದೆ ನಡುವಿನಕ್ಷರದಿ
ಕಡುಶೂನ್ಯದ ಗುರುತದ ಗುರು ಪದವು      ||೧||

ಸರಿಗಮ ಸ್ವರ ಬಳೆದ ಅಸಮ ಸುಪದವು
ಹಸನಾಗಿ ನಿನ್ನೊಳು ಎಸೆಯುವ ಪದವು
ಕುಶಲದ ಐದಕ್ಷರವಿಹ ಪದವು
ರಸಿಕ ಸಾಧುಜನ ಹಾಡುವ ಪದವು           ||೨||

ಗುರುಗೋವಿಂದನ ಧ್ಯಾನದ ಪದವು
ವರ ಓಂಕಾರ ಪ್ರಣಮದ ಪದವು
ಧರೆಯೊಳು ಶಿಶುನಾಳಧೀಶನ ಪದವು
ದುರಿತ ದುರ್ಗುಣ ದೂಡುವ ಪದವು           ||೩||

****

ಕೀಲಿಕರಣ: ಎಂ.ಎನ್.ಎಸ್. ರಾವ್