ಪ್ರೇಯಸಿ


-ರವಿ ಕೋಟಾರಗಸ್ತಿ

ಮಲೆನಾಡ ಸಿರಿಯಲಿ
ಹಸಿರಾದ ಧರೆಯು
ಆ ಕೆರೆಯ ದಡದಲಿ
ಕನಸಿನಾಳದಲಿ-ನಾನಿರುವಾಗ

ನಿನ್ನಾ.. ಸವಿ ನೆನಪು
ಕೆದಕಿ... ಕೆದಕಿ ಬರುತಿರಲು
ತನು-ಮನ ದಾಹದಿ
ನಿನ್ನ ಸಂಗ ಬಯಸಿತು

ಜಿನಗು ಮಳೆಯಲಿ...
ತಂಪಾದ ಸುಳಿ-ಗಾಳಿಯಲಿ
ಮಾಗಿಯ ಚಳಿ ಮುತ್ತುತ...
ನಿನ್ನ ಸೇರುವಾಸೆ ಮೂಡಿತು

ನಮ್ಮ ಪ್ರೀತಿ-ಪ್ರೇಮ
ಅಮರ ಎಂದೆಂದೂ...
ಹೇಳುವಾ... ಸಾರಿ... ಜಗಕ್ಕಿಂದು

         ***

ಕೀಲಿಕರಣ: ಕಿಶೋರ್‍ ಚಂದ್ರ

ನಗೆ ಡಂಗುರ - ೨೧

- ಪಟ್ಟಾಭಿ ಎ ಕೆ
ಆತ: ಸಾರ್, ಇಲ್ಲೇ ಹತ್ತಿರದಲ್ಲಿ ‘ನಮ್ಮೂರು ಹೊಟೆಲ್’ ಇದೆಯಂತೆ.  ಎಲ್ಲಿದೆ ಅಂತ ಕೊಂಚ ಹೇಳ್ತೀರಾ?
ಈತ: ನಿಮ್ಮೂರು ಹೊಟೆಲ್ ಇಲ್ಲಿ ಹೇಗೆ ಇರಲು ಸಾಧ್ಯ? ಅದು ನಿಮ್ಮೂರಲ್ಲೇ ಇರುತ್ತದೆ.
ಆತ: ‘ನಮ್ಮೂರು ಹೊಟೆಲ್’ ಇಲ್ಲೇ ಹತ್ತಿರದಲ್ಲಿ ಇದೆ, ಯಾರನ್ನೂ ವಿಚಾರಿಸಿದರೂ ಹೇಳ್ತಾರಂತೆ.
ಈತ: ನಿಮಗೆಲ್ಲೋ ಭ್ರಾಂತು. ಯಾರ್ಯಾರ ಮಾತನ್ನೋ ಕಟ್ಟಿಕೊಂಡು ನಿಮ್ಮೂರ ಹೊಟೆಲ್ ನಮ್ಮೂರಲ್ಲಿ ಹುಡುಕಬೇಡಿ.
****

ಹ್ಯಾಂಗ ಬಳಕಿ ಮಾಡಬೇಕಣ್ಣಾ

- ಶಿಶುನಾಳ ಶರೀಫ್

ಹ್ಯಾಂಗ ಬಳಕಿ ಮಾಡಬೇಕಣ್ಣಾ
ಹೀಂಗಾದಮ್ಯಾಲಿನ್ಹ್ಯಾಂಗ ಬಳಕಿ ಮಾಡಬೇಕಣ್ಣಾ     ||ಪ||

ಹ್ಯಾಂಗ ಬಳಕಿ ಮಾಡಬೇಕು
ಹಂಗು ಹರಿದು ನಿಂತ ಮೇಲೆ
ಬಂಗಿ  ತಂಬಾಕ ಸೇದುವ ಮರುಳ
ಮಂಗ್ಯಾಗಂಜಿದ ಮೇಲೆ                     ||೧||

ಪಡೆದ ತಂದೆ ತಾಯಿ ಯಾರಣ್ಣಾ
ದುಡಿದುಡಿದು ಸತ್ತರೆ
ಮಡದಿ ಮಕ್ಕಳ  ಪರವೆ ಇಲ್ಲಣ್ಣಾ
ಮಡದಿ ಮಕ್ಕಳ  ಪರವೆ ಇಲ್ಲ
ಒಡೆದು ಹೇಳುವ ಮಾತು ಅಲ್ಲ
ಬಿಡದೆ ಶರೆಯ ಶೇಂದಿ ತಂದು  
ಸಿಡದ ಬೀಳುವ ಹಾಂಗ ಕುಡಿದು ಬಳಿಕ         ||೨||

ಪುಂಡರಾಗಿ  ತಿರುಗುತಾರಣ್ಣಾ
ಬಂಡಾಟ  ಕೇಳಿನ್ನ ಹೆಂಡ ಹೇಸಿಕಿ ನಾಚಿಕಿಲ್ಲಣ್ಣಾ
 ಹೆಂಡ ಹೇಸಿಕಿ ನಾಚಿಕಿಲ್ಲಾ
ಬಂಡ ಬಂಡರು ಕೂಡಿಕೊಂಡು
ಗಂಡರಿಲ್ಲದ ಮನಿಯೊಳಗೆ
ರಂಡಿಗೂಳು ಉಂಡಮ್ಯಾಲೆ                    ||೩||

ದೇಶದೊಳಗೆ ಹೇಸಿ ಕಾಣಣ್ಣಾ  ತಾ
ಸೋಸಿ ನೋಡಲು ಘಾಸೆಪಾಸೆಗಳಾಗತಾವಣ್ಣಾ
ಘಾಸೆಪಾಸೆಗಳಾಗತಾವ
ಮೋಸ ಮೊದಲಾದಷ್ಟು ಕೇಳುವ
ವಾಸು  ಶಿಶುನಾಳಧೀಶನಲ್ಲೆ
ಘಾಸಿಯಾಗ  ಪಾರನಾಗದೆ                     ||೪||

        *****

ಕೀಲಿಕರಣ: ಎಮ್.ಎನ್.ಎಸ್.ರಾವ್

ನಗೆ ಡಂಗುರ - ೨೦

- ಪಟ್ಟಾಭಿ ಎ ಕೆ
ವೈದ್ಯನಿಗೂ ವಕೀಲನಿಗೂ ಏನು ವ್ಯತ್ಯಾಸ? ಹೇಳು ನೋಡೋಣ, ತನ್ನ ಸ್ನೇಹಿತನನ್ನು ಕೇಳಿದ.
ಸ್ನೇಹಿತ: ವಕೀಲ ಕೇಸು ಸೋತರೆ ಕಕ್ಷಿದಾರ ಆರಡಿ ಎತ್ತರದಿಂದ ನೇಣುಹಾಕಿಕೊಂಡು ಸಾಯ್ತಾನೆ.  ಆದರೆ ವೈದ್ಯನ ಚಿಕಿತ್ಸೆ ಫಲಕಾರಿಯಾಗದಿದ್ದಲ್ಲಿ ಆರಡಿ ಗುಂಡಿ ತೋಡಿ ರೋಗಿಯನ್ನು ಹೂಳಬೇಕಾಗುತ್ತದೆ.
***

ಅಂತರಂಗ

- ಪರಿಮಳಾ ರಾವ್ ಜಿ ಆರ್‍
ಹನಿಯ
ಅಂತರಂಗ
ನುಡಿಸುತಿದೆ
ಕಡಲ
ಜಲತರಂಗ
****

ಅಮೃತ ಹಸ್ತ

- ಅಬ್ಬಾಸ್ ಮೇಲಿನಮನಿ

ಭೂಮಿ ಆ ಅಡಿಗಲ್ಲುಗಳನ್ನು ಎಷ್ಟೋ ದಿನಗಳಿಂದ ನೋಡುತ್ತಲೇ ಇತ್ತು.  ಶಾಲೆ, ಹಾಸ್ಟಲ್ಲು, ಆಸ್ಪತ್ರೆ, ಮಾರ್ಕೆಟ್ಟು, ಕಾಂಪ್ಲೆಕ್ಸ್, ಸಮುದಾಯ ಭವನಗಳ ನಿರ್ಮಾಣಕ್ಕೆಂದು ಶಾಸಕರು, ಸಂಸದರು, ಮಂತ್ರಿಗಳು ಸಂಭ್ರಮದಿಂದ ಅನಾವರಣ ಮಾಡಿದ ಅಡಿಗಲ್ಲುಗಳನ್ನು ಭೂಮಿ ಸಂತೋಷದಿಂದಲೇ ಗಮನಿಸಿತ್ತು.  ಆಗೆಲ್ಲಾ ಅತ್ಯಂತ ಉತ್ಸಾಹದಿಂದ ಬೀಗಿಕೊಂಡಿದ್ದ ಅಡಿಗಲ್ಲುಗಳು ದಿನಗಳೆದಂತೆ ಅನಾಥ ಪ್ರಜ್ಞೆಯಿಂದ ನರಳತೊಡಗಿದ್ದವು.

ಋತುಮಾನದ ವೈಪರೀತ್ಯಗಳಿಗೆ ಸಿಕ್ಕು ಕೆಲವು ಅಡಿಗಲ್ಲಗಳು ಸೊರಗಿದ್ದರೆ ಇನ್ನೂ ಕೆಲವು ವಿಧ್ವಂಸಕರ ದಾಳಿಗೆ ಸಿಕ್ಕು ವಿರೂಪಗೊಂಡಿದ್ದವು.  ಅವುಗಳಿಗೆ ಆಧಾರವಾಗಿದ್ದ ಗೋಡೆಗಳು ಕುಸಿದು ಹೋಗಿದ್ದವು.  ಅಸ್ತಿತ್ವಕ್ಕಾಗಿ ಚಡಪಡಿಸುತ್ತ ಅವಶೇಷಗಳಂತೆ ನಿಂತಿರುವ ಅಡಿಗಲ್ಲುಗಳಿಗೆ ದನಕರುಗಳು ಮೈತಿಕ್ಕಿ ತಮ್ಮ ತುರಿಕೆಯನ್ನು ಶಮನಗೊಳಿಸಿಕೊಳ್ಳುತ್ತಿದ್ದವು.  ನಾಯಿಗಳು ಆರಾಮಾಗಿ ಬಂದು ಉಚ್ಚೆ ಹೊಯ್ದರೆ, ಕಾಗೆಗಳು ಮಲ ವಿಸರ್ಜಿಸುತ್ತಿದ್ದವು.

ಅದನ್ನೆಲ್ಲವನ್ನು ಮೌನವಾಗಿ ಅನುಭವಿಸುತ್ತಿರುವ ಅಡಿಗಲ್ಲುಗಳನ್ನು ಕಂಡು ಭೂಮಿ ಒಂದಿನ "ಅಡಿಗಲ್ಲುಗಳೇ, ಏನಿದು ನಿಮ್ಮ ಅವಸ್ಥೆ?  ನಿಮ್ಮ ಸ್ಥಿತಿ ನೋಡಿದರೆ ನನಗೆ ಅಯ್ಯೋ ಅನಿಸುತ್ತದೆ" ಎಂದು ಮರುಕ ವ್ಯಕ್ತಪಡಿಸಿತು.

"ನಮ್ಮ ಹಣೆಯ ಬರಹ ಇದು.  ಎನು ಮಾಡುವುದು?"  ಅಡಿಗಲ್ಲು ತಹತಹಿಸಿದ್ದವು.

"ಬಹಳ ವರ್ಷಗಳ ಹಿಂದೆಯೇ ನೀವು ಭವ್ಯ ಕಟ್ಟಡಗಳ ಭಿತ್ತಿಗಳಲ್ಲಿ ಕಂಗೊಳಿಸಬೇಕಾಗಿತ್ತು."

"ದೇವರು ನಮಗೆ ಅಂಥ ಭಾಗ್ಯ ನೀಡಲಿಲ್ಲ."

"ನೀವು ಶಾಸನ ಪ್ರಭುಗಳ ಅಮೃತಹಸ್ತಗಳಿಂದ ಪ್ರತಿಪ್ಠಾಪನೆಗೊಂಡಿದ್ದೀರಿ" ಅಭಿಮಾನ ವ್ಯಕ್ತಪಡಿಸಿತು ಭೂಮಿ.

"ಹೌದು, ನಾವು ಶಾಪಗ್ರಸ್ಥರಾಗಿ ಇಲ್ಲಿ ಬಿದ್ದಿರುವುದಕ್ಕೆ ರಾಜಕಾರಣಿಗಳಮೃತಹಸ್ತಗಳೇ ಕಾರಣ" ನಿಟ್ಟುಸಿರಿದವು ಅಡಿಗಲ್ಲು.

        *****

ಕೀಲಿಕರಣ: ಕಿಶೋರ್‍ ಚಂದ್ರ

ನಗೆ ಡಂಗುರ - ೧೯

- ಪಟ್ಟಾಭಿ ಎ ಕೆ
ಹುಲಿಯೊಂದು ಬೋನಿನಲ್ಲಿ ಸಿಕ್ಕಿಕೊಂಡು ಎಲ್ಲರ ಮುಂದೆ ಗುರುಗುಟ್ಟುತ್ತಾ ಆರ್ಭಟಿಸುತ್ತಿತ್ತು.  ಮಲ್ಲ ಬಂದು ಬೋನಿನ ಎದುರು ನಿಂತು ಗಮನಿಸಿದ. ಅದರ ಆರ್ಭಟ ಕಂಡು ಹೇಳಿದ. "ನಿನಗಿಂತ ಹೆಚ್ಚು ಆರ್ಭಟ ನನಗೆ ಬರುತ್ತಿತ್ತು. ಆದರೆ ಏನು ಮಾಡಲಿ? ಈಗ ನನಗೆ ಮದುವೆ ಆಗಿದೆ!"
***

ಮರುಳೆ ಮರೆತಿರಬೇಡ

- ಶಿಶುನಾಳ ಶರೀಫ್

ಮರುಳೆ ಮರೆತಿರಬೇಡ  ಗುರುವಿನ
ಮಾಡೋ ಶ್ರೀ ಶಿವಭಜನ  ನೇಮದಿ
ಮಾಡೋ ಶ್ರೀ ಶಿವಭಜನ              ||ಪ||

ಅಳಿವುದು ಕಾಯ ಉಳಿವುದು ಕೀರ್ತಿ
ತಿಳಿದು ನೋಡೆಲೋ  ರೀತಿ
ಬಿಡು ಅವಿಚಾರ ಮಾಡೋ  ವಿಚಾರ
ಸ್ಥಿರವಲ್ಲೋ  ಈ ಸಂಸಾರ  ಮರುಳೇ
ಮಾಡೋ ಶ್ರೀ ಶಿವಭಜನ              ||೧||

ಎಲ್ಲಿಯ ತನಕ ಹಂಬಲಿಸುವಿ  ನೀ
ನಂದೇಶನ  ಮರೆತು
ಕಂದ ನಿನಗೊಂದಿಲ್ಲ  ಈ ಭವದಿ
ಸುಂದರ ಗುರುವಿನ ಪಾದಕ ಹೊಂದಿ
ಮಾಡೋ ಶ್ರೀ ಶಿವಭಜನ            ||೨||

ಅಡಿಗಡಿಗೆ ಶಿವನಾಮವ  ಸ್ಮರಿಸೋ
ದೃಢಭಕ್ತಿಯ  ನಿಲ್ಲಿಸೋ
ಶಿಶುನಾಳಧೀಶ  ಈಶ ಬಸವೇಶನ
ಮಾಡೋ ಶ್ರೀ ಶಿವಭಜನ              ||೩||

        *****

ಕೀಲಿಕರಣ: ಎಮ್.ಎನ್.ಎಸ್.ರಾವ್

ನಗೆ ಡಂಗುರ - ೧೮

- ಪಟ್ಟಾಭಿ ಎ ಕೆ
ಮಲ್ಲಿ: ರಾಮನ ಜೊತೆ ಸೀತೆಯೂ ವನವಾಸಕ್ಕೆ ಅರಮನೆ ಬಿಟ್ಟು ಹೊರಟಳಲ್ಲಾ, ಏಕೆ ಹೇಳಿ ನೋಡೋಣ.
ಮಲ್ಲ: ಕಾಡಿಗೆ ಹೋಗದೆ ಇನ್ನೇನು ಮಾಡ್ತಾಳೆ?  ಒಬ್ಬ ಅತ್ತೆಯ ಸಂಗಡ ಬೇಯುವುದೇ ಸೊಸೆಗೆ ಸಾಕು ಸಾಕಾಗಿ ಹೋಗುತ್ತದೆ.  ಅಂತಹುದ್ದರಲ್ಲಿ ಸೀತೆ ಮೂರು ಜನ ಅತ್ತೆಯರೊಂದಿಗೆ ಹೇಗೆ ಬಾಳ್ಯಾಳು ? ಅದಕ್ಕೇ ಪತಿಯ ಜೊತೆ ವನವಾಸಕ್ಕೆ ತೆರಳಿದಳು.
***

ಬಲುನಾತಾ ಬಲುನಾತಾ

- ಶಿಶುನಾಳ ಶರೀಫ್

ಬಲುನಾತಾ  ಬಲುನಾತಾ  ಮನ
ಮಲಿನ ತೊಳಿಯದಿರೆ ಹೊಲಸಾಯ್ತವ್ವಾ   ನಾತಾ        ||ಪ||

ನಾಯಿ ಸತ್ತು ಕೊಳೆತರೆ  ನಾತಲ್ಲಾ
ಕಾಯಿ ಕೆಟ್ಟು  ಹುಳಿತರೆ  ನಾತಲ್ಲಾ
ಬಾಯಿ ಕಚ್ಚಿ  ಕಂಡ ಹೆಂಡ ತಿಂಬುವಾ
ಪಾಯಗಟ್ಟಿ  ಮನುಜರು ನಾತಲ್ಲಾ             ||೧||

ಉಂಡುಬ್ಬಳಿಸುವದು  ನಾತಲ್ಲಾ
ಕುಂಡ್ಯಾಗ ಬರುವದು ಬಲು  ನಾತಲ್ಲಾ
ಕಂಡ ಕಂಡ ಜನ ಕಾಲ್ಮಡಿದರೆ
ಮಂಡಲ ಮಧ್ಯದೊಳದು  ನಾತಲ್ಲಾ              ||೨||

ಬಂಗಿ ಸೇದಿದರೆ ಬಾಯ್ನಾತಲ್ಲಾ
ನುಂಗಿ ಕಾರಿಕೊಂಡುದು  ನಾತಲ್ಲಾ
ಮಂಗಳಾತ್ಮಕ  ಗುರುಗೋವಿಂದನ
ಸಂಗ  ಮಾಡದಿರುವದು  ನಾತವ್ವಾ            ||೩||

        *****

ಕೀಲಿಕರಣ: ಎಮ್.ಎನ್.ಎಸ್.ರಾವ್

ನಗೆ ಡಂಗುರ - ೧೭

- ಪಟ್ಟಾಭಿ ಎ ಕೆ
ಗುರುಗಳು (ತರಗತಿಯಲ್ಲಿ): "ಶ್ಯಾಮಾ ಮಧ್ಯಾನ್ನದ ಟೈಂ ಟೇಬಲ್ ಓದು ಏನೇನಿದೆ ತಿಳಿಯೋಣ." ಅಂದರು.
ಶ್ಯಾಮ: ಗುರುಗಳೇ ೧-೩೦ಕ್ಕೆ ರಾಧಾ, ೨-೦೦ಕ್ಕೆ ಬದುಕು, ೨-೩೦ಕ್ಕೆ ಬೃಂದಾವನ, ೩-೦೦ಕ್ಕೆ ಮತ್ತೆ ಬರುವನು ಚಂದಿರ, ೩-೩೦ಕ್ಕೆ ಮೂಡಲ ಮನೆ, ೪-೦೦ಕ್ಕೆ ಸಿಲ್ಲಿ ಲಲ್ಲಿ,
ಗುರುಗಳು: ಸಾಕು ನಿಲ್ಲಿಸು ನಿನ್ನ ಟೈಂಟೇಬಲ್; ಈ ಟಿವಿ ಪ್ರೋಗ್ರಾಂ ಅಲ್ಲ ನಾನು ಕೇಳಿದ್ದು. ‘ಸಿಲ್ಲಿ ಅಂತೆ ಲಲ್ಲಿ’ ರೇಗಿದರು.
***

ಅಂತರ

- ಪರಿಮಳಾ ರಾವ್ ಜಿ ಆರ್‍
ಅತ್ತೆಮೇರು ಶಿಖರ
ಸುಪ್ಪತ್ತಿಗೆ ಮೇಲೆ
ಮಗಳು ಮೃದು ಬಾಲೆ
ಮಂಚದ ಮೇಲೆ
ಸೊಸೆ ದುಡಿವ ಗಾಣದೆತ್ತಿನ
ನೊಗದ ಕೆಳಗೆ

 *****

ನಗೆ ಡಂಗುರ - ೧೬

- ಪಟ್ಟಾಭಿ ಎ ಕೆ
ಆತ: ರಾಜಕಾರಣಿಗೂ ಜ್ಯೋತಿಷಿಗೂ ಏನು ವ್ಯತ್ಯಾಸ?
ಈತ: ರಾಜಕಾರಣಿ ಹಣ, ಹಣ ಎಂದರೆ ಜ್ಯೋತಿಷಿ ಗ್ರಹಣ, ಗ್ರಹಣ ಎನ್ನುತ್ತಾನೆ.
***

ಸಾಗಿದ ದಾರಿ

- ರವಿ ಕೋಟಾರಗಸ್ತಿ
ಹುಟ್ಟಿದ ಊರು ತೊರೆದು
ಸಾಗಿಹೆನು ದೂರದ ನಾಡಿಗೆ..
ಕಾಡಿನ ಮಡಿಲ ಮಧ್ಯದಿ...
ಬೆರೆತು-ಬಾಳಬೇಕಾಗಿದೆ

ತಂದೆ-ತಾಯಿ-ಬಳಗ
ಪ್ರೀತಿ-ಸೆಲೆಯ-ನೆಲೆಯ
ಒಡನಾಡಿ... ಬಂಧುಗಳೆಲ್ಲಾ
ತೊರೆದು ದೂರ ಬಂದಿಹೆನು
ನೋವಲಿ ಮನ ಕುದಿಯುತಿಹದು

ಹೊಸತನದ ಹರುಷ
ಕಳೆದ ಬಾಲ್ಯದ ನೆನಪು
ಜೀವನದಾಟದ ಗೆಲುವು ಈ ಕಡೆ
ಬದುಕಿನ ನಲಿವು ಆ ಕಡೆ

ನೆಲ-ಭಾಷೆಗಳ ಹೊಸತನದ
ಏಕಾಂತದ-ಬಲೆಯಲಿ
ಹೃದಯದಾಳದಿ ಮೀಟುವ
ನೆನಪಿನಲೆಯು ನೋವಾಗಿ
ತನು-ಮನ ಮಂಕಾಗಿಸುತಿಹದು

ಬದುಕಿನ ದೂರದಲ್ಲೊಂದು
ಮಿನುಗುತಿಹದು ಆಶಾಕಿರಣ
ಎಚ್ಚರಿಸುತಿಹದು ಇದು ಮಂಕಲ್ಲ
ಜೀವನದ ಗೆಲುವು ಎಂದು

         ***

ಕೀಲಿಕರಣ: ಕಿಶೋರ್‍ ಚಂದ್ರ

ನಗೆ ಡಂಗುರ - ೧೫

- ಪಟ್ಟಾಭಿ ಎ ಕೆ
ಮಲ್ಲು ಮನೆಗೆ ಇದ್ದಕ್ಕಿದ್ದಂತೆಯೇ ಒಂದು ದಿನ ಹಾವು ನುಗ್ಗಿತು. ಇದನ್ನು ಕಂಡು ಹೆದರಿದ ಮಲ್ಲು ‘ಲೇ ಹಾವು ಬಂದಿದೆ ಯಾರಾದರೂ ಗಂಡಸರು ಹೊರಗಿದ್ದರೆ ಕರಿಯೇ ಬೇಗ.’
ಹೆಂಡ್ತಿ: ‘ಗಂಡಸರೆ? ಏಕೆ ನೀವು ಗಂಡಸರಲ್ಲವೇ’
ಮಲ್ಲು: ‘ಓಹ್, ಹೌದಲ್ಲವೆ? ಹಾವು ಕಂಡು ಬೆದರಿಬಿಟ್ಟಿದ್ದೆ!’
***

ದಿನವು ಸಂಧಿಸಿ ಹೋಗುತದೆ ಮರುಳೆ


- ಶಿಶುನಾಳ ಶರೀಫ್


ದಿನವು ಸಂಧಿಸಿ ಹೋಗುತದೆ ಮರುಳೆ
ಘನಮೂರ್ತಿನಾಮವನು ನೆನಹಿಕೋ ಮೂರ್ಖಾ
ಕನಸಿನಂತೆ  ಶರೀರ ಮನವೆಂಬ ಆಲಯದಿ
ಅನುದಿನ ಜೀವನೇಶ್ವರನಿರುವತನಕಾ            ||ಪ||

ಧರೆಯೊಳಗೆ ನರದೇಹ ಸ್ಥಿರವಲ್ಲ ಸಹಜವಿದು
ಇರುತಿಹುದು  ನೀರಮೇಲಿನ ಗುಳ್ಳೆಯಂತೆ
ಕರಗಿಹೋದರೆ ಬರುವದು ಈ ಪರಿ ಕಷ್ಟ
ಕರುಣಬಲದಿಂದ  ಅರಿತುಕೊಳ್ಳಯ್ಯಾ             ||೧||

ಪೊಡವಿಯೊಳಗೆ  ಛಂದ  ಮೃಡನ ತಂತ್ರದ ಗೊಂಬೆ
ಹಿಡಿದಾಡಿಸುತ್ತಲಿಹ ಗುರುಸೂತ್ರದಿಂದ
ಒಡೆಯನಂತಃಕರುಣ ತಪ್ಪಿದರೆ  ಯಮಗಾಳಿ
ಬಡಿದು ಹೋಗಿಹ ಸೊಡರಿನ ತೆರನಂತೆ            ||೨||

ಕೆಸರೊಳಗೆ ಕಮಲ ಉದ್ಭವಿಸಿ  ಸುವಾಸನೆಯು
ಹಸನಾಗಿ ದೆಸೆದೆಸೆಗೆ ಎಸಗುತಿಹುದು
ಮುಸುಕಿರ್ದ ಮಾಯಾಂಧಕಾರವನು ಬೆಳಗಿಸುವ
ಶಿಶುರೇಶನ  ಹೊಂದಿ ಪರಮಸುಖವ ಬಯಸೋ      ||೩||

        *****

ಕೀಲಿಕರಣ: ಎಮ್.ಎನ್.ಎಸ್.ರಾವ್

ನಗೆ ಡಂಗುರ - ೧೪

ಹೆಂಡತಿ: ‘ನಿಮ್ಮನ್ನು ಲಗ್ನವಾದಾಗಿನಿಂದಲೂ ನಾನು ಕಣ್ಣೀರಿನಲ್ಲೇ ಕೈತೊಳೆಯುತ್ತಾ ಇದ್ದೇನೆ; ಈ ವಿಚಾರ ನಿಮಗೆ ಗೊತ್ತಾ?
ಗಂಡ: ‘ಮನೇಲಿ ನೀರಿಗೆ ಬರ ಬಂದಿದೆಯಾ? ಕಣ್ಣೀರಲ್ಲೇ ಕೈ ಏಕೆ ತೊಳೆಯ ಬೇಕು? ಮನೆಯಲ್ಲಿ ನಲ್ಲಿ‌ ಇದೆ.  ಸದಾ ನೀರು ಸುರಿಯುತ್ತಿರುತ್ತದೆ- ಅಲ್ಲದೆ ಹಿತ್ತಲಲ್ಲಿ ಸೇದುವ ಬಾವಿ ಸಹ ಇದೆ. ಕಣ್ಣೀರಲ್ಲೇ ಏಕೆ ನೀನು ಕೈತೊಳೆಯ ಬೇಕು?’
***

ನಿಸರ್ಗ ಸ್ವರ್ಗ

- ರವಿ ಕೋಟಾರಗಸ್ತಿ

ಹಚ್ಚ ಹಸಿರಿನ ಉಡುಪುಟ್ಟ
ನಮ್ಮಯ ಕಾನನ ಧಾಮ
ಸ್ವರ್ಗ ಸಮಾನ ನಿಸರ್ಗ
ಸದಾ ಸಂತಸ ಚೆಲ್ಲುವ
ಜೀವನದುಸಿರಿನ ತಾಣ

ತುಂಬಿಹ ಹಕ್ಕಿಗಳ ಚಿಲಿಪಿಲಿಗಾನ
ಧರೆಯ ಚುಂಬನಗೈಯುತ
ತರು-ಲತೆಗಳ ಸಿಂಚನಗೈಯುತ
ಧಾವಿಸಿ ಹರಿಯುತಿಹದು

ಜಲಧಾರೆಯ ಜುಳು... ಜುಳು... ಗಾನ
ಭ್ರಮರಗಿಡ-ಮರಗಳ ಝೇಂಕಾರ
ಸುಮಧುರ ಸುಮಗಳ ನಾದ
ಸಂತಸಗೊಳಿಸುತ ಸೆಳೆಯುತಲಿ
ತನು-ಮನ ಉಲ್ಲಾಸದಿ ಕುಣಿಯುತಿಹದು

ಅನುಪಮ... ಆನಂದಮಯ
ರಮ್ಯ-ಸೌಂದರ್ಯದ ನೋಟ
ಚೆಲ್ಲಿಹಳು ಮಡಿಲೆಲ್ಲಾ ಮೈಮಾಟ
ಭೂಸಿರಿಗೆ ಹೊಚ್ಚಿಹಳು ಹೊದಿಕೆಯನು
ವಿರಾಜಿಸಿ... ವಿರಮಿಸಿಹಳು ತಾಯಿ...
ಕೈ ಮಾಡಿ ಕರೆಯುತಿಹಳು
ಪ್ರೀತಿ ಪ್ರೇಮದ ಧಾರೆ ಸುರಿಸುತಿಹಳು

         *****

ಕೀಲಿಕರಣ: ಕಿಶೋರ್‍ ಚಂದ್ರ

ಕೆಂಪು ದೀಪದ ಕೆಳಗೆ

- ಡಾ || ರಾಜಪ್ಪ ದಳವಾಯಿ

ಹಾಡು ೧ :    ಯಾರು ಹಚ್ಚಿದರಣ್ಣ
        ಕೆಂಪಾನೆ ದೀಪಾವ
        ಯಾರು ಮಾಡಿದರಣ್ಣ
        ಬಾಳನ್ನು ರಕ್ತಾವ ||

        ನಗುವ ಹೂಗಳನೆಲ್ಲ
        ಕಾಲಲ್ಲಿ ತುಳಿದು
        ಸುಂದರ ಕನಸುಗಳ
        ಬೆಂಕೀಗೆ ಸುರಿದು ||

        ಮೆರೆಯುವ ಜನರ
        ಗಮ್ಮತ್ತು ಕಾಣಿರಿ
        ಬಲಿಯಾದ ಹೆಣ್ಣೀನ
        ಬದುಕನ್ನು ನೋಡಿರಿ ||

ಹಾಡು ೨ :     ಯಾರು ಹೇಳಿದಯ್ಯಾ
        ಇದೆನೆಲ್ಲ ಮಾಡೆಂದು ||

        ನಿನ್ನೆಂಡತಿ ಮನೆಯಲ್ಲಿ
        ಪತಿಯ ಕನವರಿಕೆಯಲಿ
        ನೀನೊ ಇಲ್ಲಿ ಅಬ್ಬಬ್ಬಾ
        ಪರ ಹೆಣ್ಣ ತೆಕ್ಕೆಯಲಿ ||

        ಏಕೆ ಇಂಥ ದಾಹ
        ಕಡಿಮೆಯಾದರೂ ಏನು
        ಹೆಂಡತಿ ಬಾಳಿಸದೆ ನೀನು
        ಇವೆಲ್ಲಾ ಸರಿಯೇನು ||

        ಪರಹೆಣ್ಣ ಕೂಡುವಾಗ
        ನೆನಪಿರಲಿ ನಿನ್ನ ಮಗಳೂ
        ಇಂಥ ಸ್ಥಿತಿಗೆ ಅವಳನ್ನು
        ತಂದವನು ನೀನಲ್ಲವೇನು ||

ಹಾಡು ೩ :     ದುಡ್ಡು ಕೊಟ್ಟು ಹೆಣ್ಣನ್ನು
        ಮಜಾ ಮಾಡೊ ಅಣ್ಣರಿರಾ
        ನಿಮಗೇಕೆ ಸೆಂಟಿಮೆಂಟು
        ಮನಸೆಲ್ಲಾ ಕಾಂಕ್ರೀಟು ||

        ಒಂದು ಹೆಣ್ಣು ಸಾಲದಲ್ಲ
        ಎಷ್ಟಾದರೂ ಪರವಾಗಿಲ್ಲ
        ಬೇಕು ಕೈ ಕಾಲಿಗೆಲ್ಲ
        ಕೈಲಾಗದಿದ್ರು ಪರವಾಗಿಲ್ಲ ||

        ಮನೆ ಬೀದಿ ಊರಲೆಲ್ಲ
        ಮರ್ಯಾದೆಸ್ಥರು ಬರೇ
        ಊರ ಹೊರಗೆ ಬಂದರಂದ್ರೆ
        ಕಚ್ಚೆ ಕಿತ್ತು ಎಸೆದರಲ್ಲಾ ||

ಹಾಡು ೪ :     ತಪ್ಪು ಯಾರದು ಇಲ್ಲಿ
        ಹೇಳಣ್ಣ ಹೇಳೊ
        ಒಪ್ಪಿತವೆಲ್ಲವು ಹಣಕೆ
        ಕೇಳಣ್ಣ ಕೇಳೊ ||

        ಹಿಡಿಗೂಳಿಗಾಗಿ ಬೆತ್ತಲಾಗರು
        ಮುಡಿ ಹೂವಾಗಿ ಅರಳುವರು
        ಬಡತನವೊಂದೆ ಮೂಲವಲ್ಲ
        ನಾನಾ ತರದ ಸಿಕ್ಕುಗಳಲ್ಲ ||

        ಆಹಾ ಜಾರಿಸಿ ನಲಿದರು
        ಅಯ್ಯೊ ಜಾರಿ ನರಳಿದರು
        ಜಾರಲೆಂದು ಬಂದವರಿಗೆ
        ಜಾರುಗುಪ್ಪೆಗಳ್ಯಾರಣ್ಣ ||

ಹಾಡು ೫ :     ಹೆಣ್ಣ ಬಯಸಿ ಹೋಗಿ
        ನಲಿಯುವ ಅಣ್ಣರಿರಾ
        ಒಮ್ಮೆ ಚಿಂತನೆ ಮಾಡಿ
        ಬೇಕೆ ನಿಮಗೀ ಮೋಡಿ ||

        ತಾಯಿ ತಂಗಿ ಅಕ್ಕ ಅಮ್ಮ
        ಈ ಪದಗಳ ಅರ್ಥವೇನು
        ಹೇಳಿರಣ್ಣಾ ಹೇಳಿರೊ
        ಇದೆಲ್ಲ ನಿಜದ ಬದುಕೇನು ||

        ಹಣದ ಎಣಿಕೆಯಲ್ಲಿ
        ಸೆರಗ ಸರಿಸಿ ನಲಿಯೋರೆ
        ನಿಮ್ಮದೆಂಥ ಬಾಳು
        ನೋಡಿ ಹೆಣ್ಣಿನ ಗೋಳು ||

ಹಾಡು ೬ :     ಎಂದಿಗೆ ಕೊನೆಯಣ್ಣ
        ಬಟ್ಟೆ ಸುಲಿಗೆಗೆ ಅಣ್ಣಾ ||

        ಹೆಣ್ಣಿಂದ ಹುಟ್ಟಿ ನೀನು
        ಮುಟ್ಟುವೆ ಏನನ್ನ
        ಮುಚ್ಚಿ ಇಂಥ ಬಾಳನ್ನ
        ಗಳಿಸಿದೆ ಏನನ್ನ ||

        ಮಗಳು ತಾಯಿ ತಂಗಿ
        ಹೆಂಡತಿ ಎಂದರೇನರ್ಥ
        ಬಾಳಿಸದೆ ಹೆಣ್ಣ ಬಾಳು
        ಆಯಿತಲ್ಲ ವ್ಯರ್ಥ ||

        *****


ಕೀಲಿಕರಣ: ಕಿಶೋರ್‍ ಚಂದ್ರ