ಸಂಲಗ್ನ

- ಡಾ || ಲತಾ ಗುತ್ತಿ

ಸಮುದ್ರದಾಳಕ್ಕೆ ಇಳಿಯುತ್ತಿದ್ದಾಗಲೆಲ್ಲ
ನನ್ನ ಆದರ್ಶದ ಮೌಲ್ಯಗಳು
ಗಹಗಹಿಸಿ ನಕ್ಕು
ತರಗೆಲೆಗಳಂತೆ ಮೇಲೆಯೇ
ತೇಲುತ್ತವೆ.
ಕೋರಲ್‌ಗಳಿಂದ ತರಚಿದ ಕಾಲು
ಮಾಂಸ ರಕ್ತದ ಹನಿಗಳ ಸುತ್ತ
ಸುತ್ತುತಲಿರುವ ಭಾವನೆಗಳ
ಸೌಧದೊಳಗೆ ಕುಸಿದು
ತಿರುಗಣಿಯ ಗುಂಡಿಯ
ಸೆಳೆತಕ್ಕೆ ಸಿಗುವಾಗ
ನನ್ನ ನಾ ವಿಮರ್ಶಿಸಿಕೊಳ್ಳುತ್ತೇನೆ
ಬದುಕಿನನ್ವೇಷಣೆಯಲ್ಲಿ
ಏನಾದರೂ ಒಂದಿಷ್ಟು ಕಂಡುಕೊಂಡಿದ್ದೇನೆಂದಾದರೆ
ಸೂರ್ಯನಾಚೆಯ
ಭ್ರಮೆಯ ಆಕಾಶ
ನೆಲದಾಳದೊಳಗಿನ
ಉಪ್ಪು ನೀರಿನ ಏರಿಳಿತಗಳ
ಸಂಲಗ್ನ.
     *****
ಕೀಲಿಕರಣ: ಎಮ್ ಎನ್ ಎಸ್ ರಾವ್

ದಾರಿ ಬಿಡಿ

- ಶ್ರೀನಿವಾಸ ಕೆ ಹೆಚ್

ಚಂದ್ರಪ್ನೋರೇ ಚಂದ್ರಪ್ನೋರೇ
ದಾರಿ ಬಿಡಿ.
ಇಂದ್ರಪ್ನೋರು ಹೇಳಿದಾರೆ
ಭೂಮಿ ದೇವಿಗೆ ಸ್ನಾನ ಮಾಡ್ಸೋಕೆ
ಸ್ನಾನ ಮುಗಿಯೋವರೆಗೂ
ಮೋಡದ ಪರದೆ ಸರಿಸಿ ಇಲ್ಲಿ ಹಣಕಿ ನೋಡದೆ
ಬೇರೆ ಎಲ್ಲಿಗಾದರೂ ಸ್ವಲ್ಪ
ಗಾಡಿ ಬಿಡಿ.
     *****
ಕೀಲಿಕರಣ: ಕಿಶೋರ್‍ ಚಂದ್ರ

ನಿಮ್ಮೊಡನಿದ್ದೂ ನಿಮ್ಮಂತಾಗದೇ ?

- ರೂಪಾ ಹಾಸನ
 
ಪ್ರಿಯ ಸಖಿ,
ಬಾಹ್ಯಶಕ್ತಿಗಳು ಪ್ರಬಲ ವ್ಯಕ್ತಿತ್ವಗಳನ್ನು ತಮ್ಮದಾಗಿಸಿಕೊಳ್ಳಲು ಹೆಣಗುವಾಗಲೆಲ್ಲಾ ನನಗೆ ನೆನಪಾಗುವುದು ಕವಿ ಕೆ. ಎಸ್. ನಿಸಾರ್ ಅಹಮದ್ ಅವರ ‘ನಿಮ್ಮೊಡನಿದ್ದೂ ನಿಮ್ಮಂತಾಗದೇ’ ಎಂಬ ಕವನದ ಸಾಲುಗಳು.

ನಿಮ್ಮೊಡನಿದ್ದೂ ನಿಮ್ಮಂತಾಗದೆ
ಜಗ್ಗಿದ ಕಡೆ ಬಾಗದೆ
ನಾನು ನಾನೇ ಆಗಿ, ಈ ನೆಲದಲ್ಲೇ ಬೇರೂತ್ತಿದರೂ ಬೀಗಿ
ಪರಕೀಯನಾಗಿ
ತಲೆಯೆತ್ತುವುದಿದೆ ನೋಡಿ
ಅದು ಬಲುಕಷ್ಟದ ಕೆಲಸ.

ಹೌದಲ್ಲವೇ ಸಖೀ, ವ್ಯಕ್ತಿತ್ವಗಳಿಗೆ ಪ್ರಲೋಭನೆಗಳನ್ನೊಡ್ಡುವವು ಸಮಾಜ, ಧರ್ಮ, ಸರ್ಕಾರ, ಸಿದ್ಧಾಂತಗಳು, ತರ್ಕಗಳು ......... ಇತ್ಯಾದಿ ಹಲವಾರು.  ಅವುಗಳಿಲ್ಲದಿದ್ದರೆ ಬದುಕು ಸಾಗದಿದ್ದರೂ, ಅವುಗಳ ಜೊತೆಯೇ ಬದುಕಬೇಕಿರುವುದು ಅನಿವಾರ್ಯವಾದರೂ ಅವುಗಳೆಲ್ಲದರ ಹಿಡಿತದಿಂದ ಬಿಡಿಸಿಕೊಂಡು ತಮ್ಮದೇ ಸ್ವತಂತ್ರ ವ್ಯಕ್ತಿತ್ವ ರೂಪಿಸಿಕೊಳ್ಳುವುದು ಎಷ್ಟು ಕಷ್ಟದ ಕೆಲಸ ಅಲ್ಲವೇ?  ಆದರೆ ಅಸಾಧ್ಯವೇನಲ್ಲ!

ಆಂಗ್ಲ ಕವಿ ಬ್ರೌನಿಂಗ್ ಹೀಗೆ ಹೇಳುತ್ತಾನೆ "Best be yourself, imperial. Plain and true' ನಿನಗೆ ನೀನಾಗಿರುವುದು ನೀನೇ ಸಾರ್ವಭೌಮನಾಗಿರುವುದು, ನಿನಗೆ ನೀನು ಸತ್ಯವಾಗಿರುವುದು, ನಿಷ್ಕಪಟವಾಗಿರುವುದು ಉತ್ತಮವಾದುದು
ಎಂದು.  ಹಾಗಾದಾಗ ಯಾವ ಪ್ರಲೋಭನೆಗೆ ಏಕೆ ಮಣಿಯಬೇಕು?

ತಾವರೆಯ ಎಲೆಗೆ ನೀರಿನಲ್ಲಿರುವುದು ಅನಿವಾರ್ಯ. ಆದರೆ ಬೇರುಗಳು, ಎಲ್ಲಾ ಸಾರ ಇರುವುದೂ ನೀರಿನಲ್ಲೇ, ಆದರೆ ಸಾರ ಹೀರಿಯೇ ಬೆಳೆದರೂ ತಾವರೆಯ ಎಲೆ
ತನ್ನದೇ ಸಮರ್ಥ, ಸ್ವತಂತ್ರ ವ್ಯಕ್ತಿತ್ವ ರೂಪಿಸಿಕೊಂಡು ಬೆಳೆದು ತನ್ನ ಮೇಲೆ ಬಿದ್ದ ನೀರಹನಿಯ ಒತ್ತಡಕ್ಕೆ ಮಣಿಯದೇ ಅಂದರೆ ಒದ್ದೆಯೂ ಆಗದೇ, ಮುಳುಗಿಯೂ ಹೋಗದೆ ‘ಇದ್ದೂ ಇಲ್ಲದಂತೆ’ ಇದ್ದರೂ ತನ್ನ ಅಸ್ತಿತ್ವ ಉಳಿಸಿಕೊಳ್ಳುವಂತೆ ನಾವಾಗಬೇಕು. ಎಲ್ಲ ಪ್ರಲೋಭನೆಗಳಿಗೆ ಒಡ್ಡಿಕೊಂಡರೂ, ಅದರ ಸಾರವಷ್ಟೇ ಹೀರಿ ಇದರಲ್ಲೇ (ವ್ಯವಸ್ಥೆಯಲ್ಲೇ) ಇದ್ದೂ, ಇದರಲ್ಲೇ ಬೆಳೆದು, ನಮ್ಮೆದೇ ಪ್ರತ್ಯೇಕ ವ್ಯಕ್ತಿತ್ವ ರೂಪಿಸಿಕೊಳ್ಳುವುದು ನಿಜಕ್ಕೂ ಒಂದು ಚಾಲೆಂಜ್ ಅಲ್ಲವೇ ಸಖಿ?
     *****
ಕೀಲಿಕರಣ: ಎಮ್ ಎನ್ ಎಸ್ ರಾವ್

ನಿನ್ನೊಲುಮೆ

- ನರಸಿಂಹಸ್ವಾಮಿ ಕೆ ಎಸ್

ನಿನ್ನೊಲುಮೆಯಿಂದಲೇ ಬಾಳು ಬೆಳಕಾಗಿರಲು
ಚೆಂದ್ರಮುಖಿ ನೀನೆನಲು ತಪ್ಪೇನೆ ?
ನಿನ್ನ ಸೌಜನ್ಯವೇ ದಾರಿನೆರಳಾಗಿರಲು
ನಿತ್ಯಸುಖಿ ನೀನೆನಲು ಒಪ್ಪೇನೆ ?

ನಿನ್ನ ನಗೆಮಲ್ಲಿಗೆಯ ಪರಿಮಳದ ಪಾತ್ರೆಯಲಿ
ಚೆಲ್ಲಿಸೂಸುವ ಅಮೃತ ನೀನೇನೆ !
ನನ್ನ ಕನಸುಗಳೆಲ್ಲ ಕೈಗೊಳುವ ಯಾತ್ರೆಯಲಿ
ಸಿದ್ಧಿಸುವ ಧನ್ಯತೆಯು ನೀನೇನೆ !

ನಿನ್ನ ಕಿರುನಗೆಯಿಂದ, ನಗೆಯಿಂದ, ನುಡಿಯಿಂದ
ಎತ್ತರದ ಮನೆ ನನ್ನ ಬದುಕೇನೆ!
ಚಂದ್ರನಲಿ ಚಿತ್ರಿಸಿದ ಚೆಲುವಿನೊಳಗುಡಿಯಿಂದ
ಗಂಗೆ ಬಂದಳು ಇದ್ದ ಕಡೆಗೇನೆ!
     *****
ಕೀಲಿಕರಣ: ಎಮ್ ಎನ್ ಎಸ್ ರಾವ್

ಹಳೆಯ ಹಾಡು

- ಅನಂತರನಾರಾಯಣ ಎಸ್

ಯಾವುದಾದರು ಒಂದು
ಹಳೆಯ ಹಾಡೇ ಸಾಕು!
ಹೊಸ ರಾಗ-ಹೊಸ ತಾಳ
ಹೊಸಭಾವಗಳ ಮೇಳ
ಯಾವುದೊಂದೂ ಬೇಡ.
ಹೃದಯದೊಲವನು ಮೀಟಿ
ಒಲವ ನೀರನ್ನು ತರಿಸಿ
ಹೊಸ ರಾಗ-ಹೊಸ ತಾಳ
ಹೊಸ ಭಾವಗಳ ಮೇಳ
ಹಿಗ್ಗಿ ಹರಿಸುವ ಒಂದು
ಹಳೆಯ ಹಾಡು!
     *****
ಕೀಲಿಕರಣ: ಕಿಶೋರ್‍ ಚಂದ್ರ

ಜ್ಞಾನದ ಮೊರೆ

- ವಿದ್ವಾನ್ ಐ ಮಾ ಮುತ್ತಣ್ಣ

ತಾರೆಗಳು ಶತಕೋಟಿ ಉದಿಸಿದರು ಬಾನಿನಲಿ,
ಮೀರಿ ತೆರೆಗಳ ಧೀರ್ಘ ಆರ್ಭಟವೆ ಹೆಚ್ಚಿರಲಿ,
ಶೂರ ಪುರುಷರು ಕಾಯದೊಳವಧಿಯನು ಮುಟ್ಟಿರಲಿ,
ಸಾರ ಸಗ್ಗವು ತೋರ್ಪ ಸ್ತುತಿಹಲವು ಘೂರ್ಮಿಸಲಿ-
   ಯಾರು ನೋಡುವರೆನ್ನ-ಸ್ಮರಪರುಂ ಇಲ್ಲಿ?

ಧಾರೆಧಾರೆಗಳಾಗಿ ಜಗದಿ ನೆತ್ತರವೆ ಪ್ರಹಿಸಲಿ,
ನೀರೆಯರ ಕುಡಿನೋಟದಿಂ ಬಲವೆ ತಗ್ಗಿರಲಿ,
ಭಾರವದು ಧರೆಗೀವ ಅಜ್ಞಾನ ನಾಟಿರಲಿ,
ಚೋರತಂತ್ರಗಳಲವು ನಿರ್ಭಯದಿ ಹಬ್ಬಿರಲಿ-
   ಯಾರು ನೋಡುವರೆನ್ನ-ಸ್ಮರಪರುಂ ಇಲ್ಲಿ?

ಬಡತನದ ಬೇನೆಯಲಿ ಶತವರ್ಷ ಬಳಲಿರಲಿ,
ನಡುನೆಟ್ಟನಿಡಿಕಿಲದೆ ಶತಮಾಸ ಬಾಲಿರಲಿ,
ನಿಡುಮರವು ಕಾನನದಿ ನಿಬಿಡಾಗಿ ಹಬ್ಬಿರಲಿ,
ಜಡದೇಹವದರಂತೆ ನೀರಸದಿ ಇರಲಿರಲಿ-
   ಯಾರು ನೋಡುವರೆನ್ನ-ಸ್ಮರಪರುಂ ಇಲ್ಲಿ?

ಗತಕಾಲ ಸಾಹಿತ್ಯ ಸಮಗ್ರವನು ಜಯಿಸಿರಲಿ,
ಗತವೀರ ಚಾರಿತ್ರ್‍ಯ ಶಾಸನವ ಪಠಿಸಿರಲಿ,
ಗತಲೋಕ ವೈರಾಗ್ಯ ಸಂಪದವ ಬಿಂಬಿಸಲಿ,
ಗತಜೀವ ನಿರ್ವಾಣ ಸಾಯುಜ್ಯ ನೆನೆದಿರಲಿ-
   ಯಾರು ನೋಡುವರೆನ್ನ-ಸ್ಮರಪರುಂ ಇಲ್ಲಿ?

ಕ್ರಿಮಿಯದುವೆ ಸತ್ಕರ್ಮಿ, ಅದರಂತೆ ನಾನೆಲ್ಲಿ?
ನಿಮಿಸಿದ ಬಾಳಿದುವೆ, ಮಾಭೋಗ ಇನ್ನೆಲ್ಲಿ?
ಧರ್ಮಿಧರ್ಮಗಳ ಬಾಳೆಲ್ಲ ಅಂದಾಯ್ತು-ಈಗೆಲ್ಲಿ?
ನಿಮಿಷ ನಿಮಿಷದ ಚಿಂತೆ ಇಂತಲ್ಲದಿನ್ನಿಲ್ಲಿ,
   ಯಾರು ನೋಡುವರೆನ್ನ-ಸ್ಮರಪರುಂ ಇಲ್ಲಿ.
    *****
ಕೀಲಿಕರಣ: ಕಿಶೋರ್‍ ಚಂದ್ರ

ಲಿಂಗಮ್ಮನ ವಚನಗಳು - ೪

ಆಸೆಯನಳಿದು, ರೋಷವ ನಿಲ್ಲಿಸಿ,
ಜಗದ ಪಾಶವನರಿದು,
ಈಶ್ವರನೆನಿಸಿಕೊಂಬ ಶರಣರ
ಜಗದ ಹೇಸಿಗಳೆತ್ತ ಬಲ್ಲರೊ
ಅಪ್ಪಣಪ್ರಿಯ ಚನ್ನಬಸವಣ್ಣಾ?
    *****
ಸಂಗ್ರಹ: ರಾ|| ಸಾ|| ಫ. ಗು. ಹಳಕಟ್ಟಿ
ಕೀಲಿಕರಣ: ಕಿಶೋರ್‍ ಚಂದ್ರ

ಒಂಟೆಗಳಿಗೆ ನಗುವೋ ನಗು

- ಡಾ || ಲತಾ ಗುತ್ತಿ

ಉದ್ದಗಲ ಮರುಭೂಮಿ ಕೊರೆಯುವ ಬಿಸಿಲು
ದಿನಗಳೇ ರಣ ರಣ ಮಟ ಮಟ ಮಧ್ಯಾನ್ಹ
ಕೊನೆ ಇರದ ದಾರಿ ಸತ್ತು ಹೋದ ಮಣ್ಣು
ತಂಪು ಇಂಪಿಲ್ಲದ ಸಂಜೆಗೆ
ಡೇರಿ ಹೂಡುವ ಯಾತ್ರಿಕರ
ಬಿಡುಗಡೆಯಾಗುವ ಒಂಟೆಗಳ ಸಂಭ್ರಮ.
ಗುಂಪು ಗುಂಪುಗಳ ಎಷ್ಟೊಂದು ಒಂಟೆಗಳು
ಮಾತುಕತೆ ಇನ್ನೂ ಎಷ್ಣು ದೂರ
ಮೆಲುಕುತ್ತ ಮೈಲೇಜ್ ಎನಿಸುತ್ತವೇನೋ!
ಓಯಸಿಸ್ ಇಲ್ಲ
ನೀರಿಲ್ಲದ ಊಟವಿಲ್ಲದ ದಂಡಿಗೆ ಸುಸ್ತು
ಆರಿಸಿ ದಷ್ಟಪುಷ್ಟದ ಒಂಟೆ ಎಳೆದು
ಆಯಿತಲ್ಲ ಎರಡೂ
ರುಂಡ ಸಿಡಿಸಿ ಹೊಟ್ಟೆಯೊಡೆದು
ನೀರೆಳೆದು ಬೆಂಕಿಗೆ ತಳ್ಳಿ ಸುಟ್ಟು
ತಿಂದಿದ್ದೇನು ಮಜ ಅವರಿಗೆ
ಕರುಳು ಕಳೆದುಕೊಂಡಿದ್ದೇನು ದುಃಖ
ಇವುಗಳಿಗೆ.
ಶತ ಶತಮಾನದ ದಲಿತಗಳಿವು
ಇದ್ದರೂ ಶಕ್ತಿ ಎದುರಿಸಲಾರದ ಶೋಷಿತಗಳಿವು
ಧ್ವನಿ ಇಲ್ಲದ ಗುಂಪುಗಳಿವು
ಸ್ವತಂತ್ರವಿಲ್ಲದ ದೇಸಿಗಳು
ಅಬ್ಬಬ್ಬಾ ಎಷ್ಟೊಂದು ಸಹನೆ,
ಆದರೂ ಒಳಗೊಳಗೆ ಕೊರಗುವ ದುಃಖ ದುಮ್ಮಾನ
ಈಗೀಗ ಪಾತ್ರವಾಗಿವೆ
ಅಲ್ಲಾನ ನಾಡಿನ ಅಲ್ಲಾನ ಕೃಪೆಗೆ
ಮರುಹುಟ್ಟು ಪಡೆದಿವೆ.

ಈಗ ಉದ್ದಗಲದ ಮರುಭೂಮಿಗೆ
ವಿದೇಶಿ ಕಾರು ವಿಮಾನಗಳ ದಾಳಿ
ಯಾರೊಬ್ಬ ಅರಬ್ ನೋಡುತ್ತಿಲ್ಲ ಮಾತಾಡಿಸುತ್ತಿಲ್ಲ
ಒಂಟೆಗಳೊಂದಿಗೆ
ಕಟ್ಟಿ ಹಾಕುವ ಮಾಲೀಕರಿಲ್ಲ
ಹೊಟ್ಟೆಯೊಡೆದು ನೀರೆಳೆಯುವ ದರೋಡೆ ಕೋರರಿಲ್ಲ
ದಂಡೆಗೆ ಸರಿದಿವೆ ಮರುಭೂಮಿ
ಮುದಿ ಹಡಗುಗಳು
ಕಲಿಸುತಿವೆ ಮರಿಗಳಿಗೆ
ಎಲ್ಲೆಂದರಲ್ಲಿ ಮರ್ಸಿಡಿಸ್ ಬೆಂಜ್‌ನಂತೆ
ಫ್ರೀಯಾಗಿ ಓಡಾಡಲು
ಈಗೀಗ ಶಕ್ತಿ ಬಂದಿದೆ ಬೆಂಜ್
ಡಿಕ್ಕಿ ಹೊಡೆದುರುಳಿಸುವ
ಸ್ವಾತಂತ್ರ್ಯಸಿಕ್ಕಿದೆ ಅಲೆಯುವ
ವಿದೇಶಿ ತೌಡು ತಿಂದು ಮೆಲಕುಹಾಕುತ್ತ
ನಗುತ್ತವೇನೋ!
ಒಂಟೆಗಳಿಗೀಗೀಗ ರಾಯಲ್ ಟ್ರೀಟ್‍ಮೆಂಟ್
ಮಾಲೀಷ್, ವಾಕಿಂಗ್‌ಮಾಡಿಸಲು
ಬಂಗ್ಲಾ ಮಕ್ಕಳು ಬರುತ್ತಿವೆಯಂತೆ
ಒಂಟೆಗಳಿಗೆ ಒಳಗೊಳಗೊ ನಗುವೋ ನಗು.
     *****
ಕೀಲಿಕರಣ: ಎಮ್ ಎನ್ ಎಸ್ ರಾವ್

ಪ್ರತ್ಯಕ್ಷ ದೇವರು

- ಶ್ರೀನಿವಾಸ ಕೆ ಹೆಚ್

ಮುಸ್ಲಿಂರಿಗೆ ಹಿಂದೂಗಳಿಬ್ಬರಿಗೂ ಪ್ರತ್ಯಕ್ಷ ದೇವರೆಂಬುವವನೊಬ್ಬನೆ
ಅವನೇ ನಮ್ಮ ಜತೆಗಿರುವ ಚಾಂದ್ ಯಾನೆ ಚಂದಿರ
ಮೊಹರಂಯಿರಲಿ ಯುಗಾದಿಯಿರಲಿ ಅವನ ಬೆಳ್ಳಿಯ
ಮುಳ್ನಗುವಿನ
ದರ್ಶನಕ್ಕಾಗಿ ಎಲ್ಲೆಡೆ ಕಾತರ
ಮತ್ತೇಕೆ ದೇವರು ಧರ್ಮದ ಹೆಸರಿನಲ್ಲಿ
ಬಾಂಬು ದೊಂಬಿ ದಾಂದಲೆ ಹಿಂಸೆ ಕೊಲೆ ಮುಗಿಯದ ಅವಾಂತರ
ದಿನಬೆಳಗಾದರೆ ಪತ್ರಿಕೆಯ ತುಂಬಾ ಸದಾ ವಾದ, ವಿವಾದ, ಮಸೀದಿ
ಮತ್ತು ಮಂದಿರ.
     *****
ಕೀಲಿಕರಣ: ಕಿಶೋರ್‍ ಚಂದ್ರ

ಕಂದರಗಳು ತೆರೆದಿವೆ!



ಚಿತ್ರ: ಪ್ರಮೋದ್ ಪಿ ಟಿ
- ರೂಪಾ ಹಾಸನ

ಪ್ರಿಯ ಸಖಿ,
ಇತ್ತೀಚಿನ ಮಾಧ್ಯಮಗಳು ಎಷ್ಟು ಶಕ್ತಿಯುತವಾಗಿವೆಯೆಂದರೆ ಅವು ಪ್ರಪಂಚವನ್ನು ಹತ್ತಿರವಾಗಿಸಿವೆ ಎನ್ನುತ್ತಾರೆ. ಇದು ವ್ಯವಹಾರದ ಮಾತಾಯ್ತು. ಆದರೆ ಮಾನವನ ಮನಸ್ಸು? ಮನಸ್ಸುಗಳು ಹತ್ತಿರವಾಗಿವೆಯೆ ? ಕವಿ ಜಿ. ಎಸ್. ಶಿವರುದ್ರಪ್ಪನವರು ವಿಷಾದದಿಂದ ಹೀಗೆ ಹೇಳುತ್ತಾರೆ.
          ಎದೆ ಎದೆಗಳ
         ನಡುವೆ ಇರುವ
    ಸೇತುವೆಗಳು ಮುರಿದಿವೆ
  ಭಯ, ಸಂಶಯ, ತಲ್ಲಣಗಳ
       ಕಂದರಗಳು ತೆರೆದಿವೆ!

ಹೌದಲ್ಲವೇ ಸಖೀ ಇತ್ತೀಚೆಗೆ ಎಲ್ಲಾ ಸಂಬಂಧಗಳಲ್ಲೂ ಎಂತದೋ ಒಂದು ನಾಟಕೀಯತೆಯನ್ನು ಕಾಣುತ್ತಿದ್ದೇವೆ. ಇದು ಭಾವಪೂರ್ಣ, ಹೃದಯದಾಳದಿಂದ
ಬಂದ ಸಂವೇದನೆ ಎನ್ನಿಸುವುದೇ ಇಲ್ಲ. ಎಲ್ಲದರಲ್ಲಿಯೂ ಕೃತ್ರಿಮತೆ, ತೋರಿಕೆಯ ಆತ್ಮೀಯತೆ ಎದ್ದುಕಾಣುತ್ತದೆ. ಮನಸ್ಸು ಗೊಂದಲದಲ್ಲಿ ಸಿಲುಕಿ ಎಷ್ಟು
ಭಯಭೀತಗೊಂಡಿದೆಯೆಂದರೆ ಅದರಲ್ಲಿ ಸದಾ ಸಂಶಯ, ತಲ್ಲಣಗಳು ಧವಧವಿಸುತ್ತಿರುತ್ತವೆ. ಯಾರಮೇಲೆಯೂ ನಂಬಿಕೆ ಇಲ್ಲ. ಸ್ವತಹ ತನ್ನ ಮೇಲೂ ನ೦ಬಿಕೆ ಇಲ್ಲ. ಕವನವನ್ನು ಮು೦ದುವರೆಸುತ್ತಾ ಕವಿ
       ಮುಖ ಮುಖವೂ
        ಮುಖವಾಡವ
     ತೊಟ್ಟುನಿಂತ ಹಾಗಿವೆ
   ಆಡುತಿರುವ ಮಾತಿನೊಳಗೆ
     ಹೃದಯ ಕಾಣದಾಗಿದೆ !

ಎನ್ನುತ್ತಾರೆ, ಇದೆಲ್ಲಾ ಪ್ರಾರಂಭವಾದದ್ದಾದರೂ ಎಲ್ಲಿಂದಾ ? ಮನಸ್ಸುಗಳ ಮಧ್ಯೆ ಮುರಿದು ಬಿದ್ದಿರುವ ಸೇತುವೆಗಳನ್ನು ಇನ್ನಾದರೂ ಸರಿಪಡಿಸಬೇಕಲ್ಲವೇ ಸಖಿ ? ವ್ಯಕ್ತಿ - ವ್ಯಕ್ತಿಯ ನಡುವಿನ ನಂಬಿಕೆಗಳು ಉಳಿಯಬೇಕಾದರೆ, ಉಳಿದು ಬೆಳೆಯಬೇಕಾದರೆ ವ್ಯಕ್ತಿ ಮೊದಲು ಪ್ರಾಮಾಣಿಕನಾಗಬೇಕು. ಅವನು ತೊಟ್ಟ ಎಲ್ಲ ಮುಖವಾಡಗಳನ್ನೂ ಕಿತ್ತೂಗೆದು, ನಿಜದ ಮುಖದೊಂದಿಗೆ ಮುಖಾಮುಖಿ ನಿಲ್ಲಬೇಕು. ಗೆಲ್ಲಬೇಕು. ಆಗಲೇ ಇತರರ ಮೇಲೆಯೂ ನಂಬಿಕೆ ಮೂಡೀತು! ಸೇತುವೆಗಳು ಎದ್ದೀತು! ಅಲ್ಲವೇ ಸಖಿ?
     *****
ಕೀಲಿಕರಣ: ಎಮ್ ಎನ್ ಎಸ್ ರಾವ್

ಬಾರಯ್ಯ

- ಅನಂತರನಾರಾಯಣ ಎಸ್

ಬಾರಯ್ಯ  ಬಂದುದಕೆ ಏನನಾದರು ಕೊಟ್ಟು
ಕಳುಹಿಸುವೆ.  ಕುಳಿತೆನ್ನ ಬಳಿಗೆ ಬಂದು
ಕೇಳುವೊಡೆ ಹಾಡುವೆನು - ಅದು ಒಂದೆ ಸಂಪದವು
ಬೇಕಾದೊಡದನೀವೆ-ಹಾಡುವೆನು ಕೇಳು!
     *****
ಕೀಲಿಕರಣ: ಕಿಶೋರ್‍ ಚಂದ್ರ

ಶ್ರೀಮತಿಯಾದೆ

- ರವಿ ಕೋಟಾರಗಸ್ತಿ

ಅರಿಯದ ಜೀವಕೆ ಸಂಗಾತಿಯಾದೆ
ಕಾಣದ ವಾಸಕ್ಕೆ ಅಣಿಯಾದೆ
ಪ್ರೀತಿಯ ಮಡಿಲಿಗೆ ಸೊಸೆಯಾದೆ

ಒಲುಮೆಯ ಕಣ್ಣಾದೆ
ಅಮೃತದ ಹಣ್ಣಾದೆ
ಕತ್ತಲೆಯ ಬಾಳಿಗೆ ಜ್ಯೋತಿಯಾದೆ
ಕೈ ಹಿಡಿದವನ ಬದುಕಿಗೆ ನೆರಳಾದೆ
ಬಾಳ ಕುಡಿಗೆ ತಾಯಿಯಾದೆ

ಜೀವಕೆ ಗತಿಯಾದೆ
ಜೀವನ ರತಿಯಾದೆ
ಪ್ರೇಮದ ಸತಿಯಾದೆ
ಬಾಳ ಗೆಳತಿಯಾದೆ
ಶ್ರೀಮತಿಯಾದೆ.
         ***

ಕೀಲಿಕರಣ: ಕಿಶೋರ್‍ ಚಂದ್ರ

ಮರಳಿನ ಹಡಗು

- ಮಂಜುನಾಥ ವಿ ಎಂ

ನಾನು ಮರಳಿನಲ್ಲೊಂದು ಹಡಗನ್ನು ಕಟ್ಟಿಕೊಂಡೆ,
ಪ್ರಯಾಣ ಬಹುದೂರದಾದ್ದರಿಂದ.

ಸಮುದ್ರದ ಮಧ್ಯೆ ಬೃಹತ್ ಅಲೆಯೊಂದು ಏರಿ ಬಂದಾಗ
ನಾನು ಧೃತಿಗೆಡಲಿಲ್ಲ;
ತಿಮಿಂಗಿಲವೊಂದು ಢಿಕ್ಕಿಯೊಡೆದು, ರಕ್ತ ಕಾರಿ ಸತ್ತು ಹೋಯಿತು.

ಗಹಗಹಿಸಿ ನಗತೊಡಗಿದೆ, ಆಗ ಮರಳಿನ ಕಣಗಳು ಉದುರತೊಡಗಿದ್ದು
ನನಗೆ ಗೊತ್ತಾಗಲಿಲ್ಲ.

ಹಾಯಿಗಂಬದ ಮೇಲೆ ಮಲಗಿ ಸಮುದ್ರದ ಒಣಗಾಳಿ ಸೇವಿಸುತ್ತಿದ್ದವನು,
ದಡ ಕಂಡಿತೆಂದು ಒಮ್ಮೆಲೇ ಹಾರಿದೆ.

ಅಯ್ಯೋ ನಾನು ಪ್ರೀತಿಯ ಹುಚ್ಚಿನಲ್ಲಿ ಯಾನ ಕೈಗೊಂಡಿದ್ದು
ಅಂತ ಕಾಣುತ್ತೆ, ಕಡಲಿನ ಧೈತ್ಯ ಸುಳಿಗಳಲ್ಲಿ ಗಿರಿಗಿಟ್ಟೆಯಂತೆ ಗಿರಕಿ
ಹೂಡೆಯುತಾ ಪ್ರಪಾತಕ್ಕೆ ಬಿದ್ದೆ.
        *****

ಲಿಂಗಮ್ಮನ ವಚನಗಳು - ೩

ಮನ ಮರವೆಗೆ ಮುಂದುಮಾಡಿತ್ತು.
ತನು ಕಳವಳಕ್ಕೆ ಮುಂದುಮಾಡಿತ್ತು.
ಆಸೆರೋಷವೆಂಬವು ಅಡ್ಡಗಟ್ಟಿದವು.
ಕೋಪ ಕ್ರೋಧವೆಂಬವು ಮುಂದುವರಿದವು.
ಇದರೊಳಗೆ ಜಗದೀಶ್ವರನೆನಿಸಿಕೊಂಬವರ
ನುಡಿಯ ಓಸರಿಸುವದು
ನಮ್ಮ ಅಪ್ಪಣಪ್ರಿಯ ಚನ್ನಬಸವಣ್ಣಾ.
    *****

ಸಂಗ್ರಹ: ರಾ|| ಸಾ|| ಫ. ಗು. ಹಳಕಟ್ಟಿ
ಕೀಲಿಕರಣ: ಕಿಶೋರ್‍ ಚಂದ್ರ

ಚೈತ್ರ

- ಡಾ || ಲತಾ ಗುತ್ತಿ

ಯಾವ ಋತು, ಮಾಸ ಪಕ್ಷಗಳಿಲ್ಲ ಇಲ್ಲಿ
ಆಷಾಡದ ಮಳೆ ನೋಡುವ
ಶ್ರಾವಣ ಭಕ್ತರೊಳಗೊಂದಾಗುವ
ಚೈತ್ರ ವಸಂತದೊಳಗೆ ಚಿಗುರುವಾಸೆ.
ಶ್ರಾವಣದ ಜೋಕಾಲಿಗೆ ನಿಟ್ಟುಸಿರಿಡುತ್ತೇನೆ.....
ಹಳ್ಳ ಹೊಳೆ ಕೊಳ್ಳ ನೆನಪಾದಾಗೆಲ್ಲ
ನಾನೇ ತೇಲಿಬಿಡಲೇನೋ ಎಂದು
ಚಡಪಡಿಸುತ್ತೇನೆ.
ಈ ಉರಿಬಸಿಲಿನ ಮರುಭೂಮಿಯಲ್ಲೂ
ನನ್ನ ನಾಡು ಹಸಿರು ಹೊಲಗದ್ದೆ,
ಹೂವುಗಳ ಮಂದಾರ ನೆನಪಿಸಿಕೊಂಡಾಗೆಲ್ಲ
ಚೈತನ್ಯ ಮೂಡಿ ಚೈತ್ರವಾಗುತ್ತೇನೆ
ನೆನಪುಗಳು ಬಸಿರಾಗುತ್ತವೆ
ವೇದನೆಗೆ ಸಿಕ್ಕು ಕವನಗಳು ಕುದಿಯುತ್ತವೆ.
ಆಷಾಢದ ಮುಸಲಧಾರೆಯಂತೆ
ಕವನಗಳು ಪ್ರಸವಿಸುವಾಗ
ನಾನು ವಸಂತಿಸುತ್ತೇನೆ
     *****
ಕೀಲಿಕರಣ: ಎಮ್ ಎನ್ ಎಸ್ ರಾವ್

ಸಣ್ಣ ಸಂಗತಿ

ಚಿತ್ರ: ಪ್ರಮೋದ್ ಪಿ ಟಿ
ಪ್ರಿಯ ಸಖಿ,
 
ಮೊನ್ನೆ ಕೆ. ಎಸ್. ನರಸಿಂಹಸ್ವಾಮಿಗಳ ‘ಸಣ್ಣ ಸಂಗತಿ’ ಎಂಬ ಒಂದು ಸುನೀತ (ಸಾನೆಟ್)ವನ್ನು ಓದುತ್ತಿದ್ದೆ.. ಕವನದ ಹೆಸರೇ ಸೂಚಿಸುವಂತೆ ಕವಿ ಅಲ್ಲಿ ಹಿಡಿದಿಟ್ಟ ಚಿತ್ರ ಅತ್ಯಂತ ಸಣ್ಣ ಸಂಗತಿ. ಆದರೆ ಅದರಲ್ಲಿರುವ ಧ್ವನಿ ಮಾತ್ರ ಮಹತ್ತರ ವಾದುದು. ಕವಿ ಚಿತ್ರಿಸಿರುವ ಆ ಸಣ್ಣ ಸಂಗತಿಯಾದರೋ ಇಷ್ಟೆ ಸೋನೆ ಮಳೆ ಹಿಡಿದ ನಡುರಾತ್ರಿ. ಇತ್ತ ಮನೆಯೊಳಗೆ ಪುಟ್ಟ ಮಗುವೊಂದು ಮಂಚದ ಬಳಿಯ ತೊಟ್ಟಿಲಲ್ಲಿ ಅರ್ಧ ಕಣ್ಣು ಮುಚ್ಚಿ ಮಲಗಿದೆ. ಅದೂ ಬರಿಮೈಲಿ. ನಿದ್ದೆಗಣ್ಣಿನಲ್ಲೇ ಪಕ್ಕದಲ್ಲಿರುವ ತಾಯಿ ಕೈನೀಡಿ ಹೊದಿಕೆಯನ್ನು ಸರಿಪಡಿಸಿದ್ದಾಳೆ. ಆದರೆ ಮಗು ಮತ್ತೆ ಹೊದಿಕೆಯನ್ನು ಕಿತ್ತೆಸೆದು ಬರಿ ಮೈಲಿ ಮಲಗುತ್ತದೆ. ಸುನೀತದ ಕೊನೆಯ ಎರಡು ಸಾಲು ಹೀಗಿದೆ.

"ನಿದ್ದೆ ಎಚ್ಚರಗಳಲಿ ಪೊರೆವ ಕೈ ದುಡಿಯುತಿದೆ
ಅದನು ಲೆಕ್ಕಿಸದೆ ಮಗು ಹೊದಿಕೆಯನು ಒದೆಯುತಿದೆ
"

ಈ ಎರಡು ಸಾಲುಗಳಲ್ಲಿ ಎಂತಹಾ ಅರ್ಥ ತುಂಬಿದೆ ನೋಡಿದೆಯಾ ಸಖಿ. ತಾಯಿ-ಮಗುವಿನ ಸಂಬಂಧದಲ್ಲಾಗಲಿ ಸೃಷ್ಟಿಯೊಂದಿಗಿನ ಮಾನವನ ಸಂಬಂಧದಲ್ಲಾಗಲಿ ತಾಯಿಯೂ ಸೃಷ್ಟಿಯೂ ಉನ್ನತವಾದ ಸ್ಥಾನದಲ್ಲಿ ನಿಂತು ಮಗುವೂ ಮಾನವನೂ ಅರಿತೂ ಮಾಡಿದ ತಪ್ಪುಗಳನ್ನು ಕ್ಷಮಿಸುತ್ತಲೇ ಇರುತ್ತಾರೆ. ಆದರೆ ಆ ಕ್ಷಮೆಗೆ ಬೆಲೆ ಕೊಡದ ಮಗು ಮಾನವ ತನ್ನ ಅಹಂಕಾರದಿಂದ, ತಾ ಮಾಡಿದ್ದೇ ಸರಿಯೆಂಬ ಗರ್ವದಿಂದ ಅದೇ ತಪ್ಪುಗಳನ್ನು ಮತ್ತೆ ಮತ್ತೆ ಮಾಡುತ್ತಲೇ ಇರುತ್ತಾನೆ. ಬಹುಶಃ ತಾಯಿಯೂ ಸೃಷ್ಟಿಯೂ ತೋರುವ ಕ್ಷಮೆಗೆ, ಮಗುವಿನ-ಮಾನವನ ತಪ್ಪುಗಳಿಗೆ ಕೊನೆಯೆಂಬುದೇ ಇಲ್ಲ! ಆದರೆ ತಾಯಿಯ ಸೃಷ್ಟಿಯ ಅಖಂಡ ಕ್ಷಮೆಗೂ ಮಿತಿಯೆಂಬುದೊಂದಿದೆ ಎಂದು ಅನ್ನಿಸುವುದಿಲ್ಲವೇ?  ಆ ಕ್ಷಮೆಯನ್ನು ಕಳೆದುಕೊಂಡ ಕೊನೆಯ ದಿನ ಬಹುಶಃ ಇಲ್ಲಿ ಏನೂ ಉಳಿದಿರುವುದಿಲ್ಲ! ಅಂತೂ ಮಾಡುವ ಅಂತಹಾ ಕ್ಷಮೆ ಇಲ್ಲದ ತಪ್ಪನ್ನು ನಾವ್ಯಾರೂ ಮಾಡದಂತೆ ಸಮಯ ಮೀರುವ ಮೊದಲೇ ಎಚ್ಚೆತ್ತುಕೊಳ್ಳಬೇಕಲ್ಲವೇ ಸಖಿ?

ಪೊರೆವ ಕೈಗಳ ದುಡಿಮೆಯನ್ನು ಲೆಕ್ಕಿಸದ ಮಗು ಹೊದಿಕೆಯನು ಮತ್ತೆ ಮತ್ತೆ ಒದೆದು ಮುಂದೊಮ್ಮೆ ಪೊರೆವ ಕೈಗಳ ಪ್ರೇಮವನ್ನೇ ಕಳೆದುಕೊಳ್ಳಬಾರದಲ್ಲವೇ ಸಖಿ?
     *****
ಕೀಲಿಕರಣ: ಎಮ್ ಎನ್ ಎಸ್ ರಾವ್

ಕಾರಣ ಯಾರಿಗೆ ಗೊತ್ತು ?

- ನರಸಿಂಹಸ್ವಾಮಿ ಕೆ ಎಸ್

ಮದುವೆಯ ಹೆಣ್ಣು; ನಾಳೆಯೆ ಮದುವೆ; ಇವಳೇಕೆ
ಮೂಲೆಯ ಹಿಡಿದು ಮಲಗಿಹಳು?
ಬಿಳಿವಲ್ಲಿ ಬೆನ್ನ ಹತ್ತಿರವಿಹುದು; ಹೂದಂಡೆ
ಹೆರೆಳಲ್ಲಿ ; ಮಾತಿಲ್ಲ; ಉಸಿರು.

ಥಳ ಥಳಿಸುನ ಕಣ್ಣ ಮುಚ್ಚಿ, ಕೆದರಿದ ಕುರುಳ
ಹತ್ತಾರು ದಿಕ್ಕಿಗೆ ಹರಿಸಿ,
ಹೊದಿಕೆಯ ಹೊರಗೆ ಮುಂಗೈ ಬೀಸಿ, ನಡುಬೆರಳ
ಉಂಗುರದ ನಡುಹರಳ ಜ್ವಲಿಸಿ,

ಬೆನ್ನ ಸೆರಗಿನ ಮೇಲೆ ಅರಿಯದೆ ತಂಗಿದ
ಜರತಾರಿ ಹೂವನು ಮರೆತು,
ತಲೆಯಿಟ್ಟ ತುಂಬುದಿಂಬಿನ ಮೇಲೆ ಹಣೆಗಿಟ್ಟ
ಕುಂಕುಮದ ಒತ್ತನು ಕುರಿತು,

ಏನೇನೊ ಮಾತು- ದೇವರು ಬಲ್ಲ !- ಮಾತೆಲ್ಲ
ಹೊಂದದೆ ಒಡೆದ ಕಿರುಮುತ್ತು;
ಮನಸಿನ ಮೇಲುಮಾಳಿಗೆಯಲ್ಲಿ ಬೆಳೆಕಿಲ್ಲ.
ಕಾರಣ ಯಾರಿಗೆ ಗೊತ್ತು?
     *****
ಕೀಲಿಕರಣ: ಎಮ್ ಎನ್ ಎಸ್ ರಾವ್

ಚಂದ್ರನ ಸವಾಲು

-
 
ನಾನು ಹಾಡಹಗಲೇ ರಾಜಾರೋಷಾಗಿ
ಆಕಾಶದಲ್ಲಿ ತಿರುಗಾಡಿದ್ದನ್ನು ನೀವೇ
ಎಷ್ಟೋ ಸಾರಿ ನೋಡೀದೀರೋ ಇಲ್ಲವೋ ಸತ್ಯ ಹೇಳಿ.
ಸೂರ್ಯ. ಸೂರ್ಯ. ಸೂರ್ಯ ಇವನೊಬ್ಬನೇ ಅಂತ ದೊಡ್ಡದಾಗಿ
ಹೇಳ್ತೀರಲ್ಲ
ಒಂದು ದಿನವಾದರೂ ರಾತ್ರಿ ಹೊತ್ತಿನಲ್ಲಿ ಆಕಾಶದಲ್ಲಿ
ಕಾಲಿಡೋ ಧೈರ್ಯ ಅವನಿಗಿದಿಯಾ?
ಬೇಕಿದ್ದರೆ ಏನು ಬೇಕಾದರೂ ಪಂಥ ಕಟ್ಟಿ ಸವಾಲು ಹಾಕ್ತೇನೆ
ಒಪ್ಕೋತಾನಾ ನೋಡೋಣ ಅವನನ್ನ ಕೇಳಿ.
     *****
ಕೀಲಿಕರಣ: ಕಿಶೋರ್‍ ಚಂದ್ರ

ಉಭಯ ಸಂಕಟ

ಚಿತ್ರ: ಪ್ರಮೋದ್ ಪಿ ಟಿ
- ರೂಪಾ ಹಾಸನ

ಪ್ರಿಯ ಸಖಿ,

ಹೇಳಿದರೆ ಹಾಳಾಗುವುದೋ ಈ ಅನುಭವದ ಸವಿಯು
ಹೇಳದಿರೆ ತಾಳಲಾರನೋ ಕವಿಯು!

ಕುವೆಂಪು ಅವರು ‘ಉಭಯ ಸಂಕಟ’ ಕವನದ ಈ ಸಾಲುಗಳು ಎಷ್ಟೊಂದು ಮಾರ್ಮಿಕ ವಾಗಿವೆಯಲ್ಲವೇ?’

ಎದೆಯೊಳಗೆ ಅವ್ಯಕ್ತವಾಗಿರುವ ಭಾವಗಳು ತಕ್ಕ ಮೂರ್ತರೂಪ ಪಡೆಯುವುದು ಎಂತಾ ಕಷ್ಟದ ಕೆಲಸ! ಆ ಕಷ್ಟ ಕವಿಯೊಬ್ಬಗೇ ಗೊತ್ತು! ಅನುಭವದ ಸವಿಯನ್ನು ಎಂತಾ ತಕ್ಕ ಪದಗಳಿಂದಲೂ ವರ್ಣಿಸಲು ಅಸಾಧ್ಯ. ಇದು ಭಾಷೆಯ ಸೋಲೋ? ಕವಿಯ ಸೋಲೋ? ಯಾವುದೇ ವ್ಯಕ್ತ ಭಾವಗಳೂ ಅವು ಅವ್ಯಕ್ತವಾಗಿದ್ದಾಗಲೆ ಸುಂದರವಾಗಿತ್ತು ಎನ್ನಿಸಿದರೆ ಅಂದೊಂದು ಸೋಲೇ ತಾನೇ? ಬಹುಶಃ ಕವಿಯೊಬ್ಬನ ಮಿತಿಯೂ ಇದೇ ಏನೋ?

ಆದರೆ ಹೇಳದಿದ್ದರೆ ತಾಳಲಾಗುವುದೂ ಇಲ್ಲವೆಂಬ ತುಡಿತ ಕವಿಗೆ ಮೂಡಿದಾಗ ಆತ ಏನು ಮಾಡಬೇಕು ? ಎದೆಯೊಳಗಿಂದಾ ಭಾವಗಳು ಒತ್ತಿ ಬಂದಾಗ ಆತ ಬರೆಯದೆಯೂ ಉಳಿಯಲಾರ! ಸಮರ್ಥ ಕವಿಯೊಬ್ಬ ತನ್ನ ಅಮೂರ್ತ ಭಾವಗಳಿಗೆ ತನ್ನ ಮಿತಿಯಲ್ಲೆ ಸಮರ್ಥ ಮೂರ್ತರೂಪ ಕೊಡಬಲ್ಲನಲ್ಲವೇ?

ಆದರೆ ಇಂಥಾ ಯಾವ ಒತ್ತಡಗಳೂ ಇಲ್ಲದೇ ಬಲವಂತವಾಗಿ ಹುಟ್ಟಿಸಿದ ಕವನ, ಕಷ್ಟಪಟ್ಟು ಪದ ಪದಗಳನ್ನು ಜೋಡಿಸಿ ಮಾಡಿದ ಜಾಳು ಪದ್ಯ. ಇತ್ತ ಭಾವಗಳ ಸಮರ್ಥ ಅಭಿವ್ಯಕ್ತಿಯೂ ಆಗುವುದಿಲ್ಲ. ಅತ್ತ ಸುಂದರ ಕವನ ಎನ್ನಿಸಿಕೊಳ್ಳುವುದೂ ಇಲ್ಲ.

ಹೇಳಿಬಿಟ್ಟಿರೆ ಅನುಭವದ ಸವಿ ಹಾಳಾಗಿ ಬಿಟ್ಟೀತೆಂಬ ಚಡಪಡಿಕೆ ಹೇಳದೇ ಉಳಿದರೆ ತಾಳಲಾಗದಂತಹ ಒತ್ತಡ, ಇಂತಹ ಉಭಯಸಂಕಟದ ಮೂಸೆಯಲ್ಲಿ ಪ್ರತಿಯೊಬ್ಬ ಕವಿಯೂ ಹದವಾಗಿ ಬೇಯಬೇಕು. ಆಗಲೇ ಉತ್ತಮ ಕವನ, ಸಮರ್ಥ ಅಭಿವ್ಯಕ್ತಿ ಹೊರಬೀಳಬಹುದಲ್ಲವೇ? ನೀನೇನನ್ನುತ್ತೀ ಸಖಿ?
     *****
ಕೀಲಿಕರಣ: ಎಮ್ ಎನ್ ಎಸ್ ರಾವ್

ಚಂದ್ರ ಆಗೋದು ಸಾಧ್ಯವಿಲ್ಲ

- ಶ್ರೀನಿವಾಸ ಕೆ ಹೆಚ್

ನೂರು ಅಶ್ವಮೇಧ ಯಜ್ಞ ಮಾಡಿದರೆ
ಯಾರು ಬೇಕಾದರೂ ಆಗಬಹುದು ಇಂದ್ರ ಹೌದೊ ಅಲ್ಲವೊ?
ಆದರೆ ಸಾವಿರ ಯಜ್ಞ ಮಾಡಿದರೂ ಯಾರೂ ಚಂದ್ರ
ಆಗೋದು ಸಾಧ್ಯವಿಲ್ಲ ಗೊತ್ತು ತಾನೇ?
ಸೂರ್ಯ ಅವನೊಬ್ಬನೇ ಇರಬಹುದು ಆದರೆ
ಚಂದ್ರ ನಾನೊಬ್ಬನೆ.  ಸೂರ್ಯನಿಗೂ
ಚಂದ್ರ ಆಗೋದು ಸಾಧ್ಯವಿಲ್ಲ.
     *****
ಕೀಲಿಕರಣ: ಕಿಶೋರ್‍ ಚಂದ್ರ