ದಿನವು ಸಂಧಿಸಿ ಹೋಗುತದೆ ಮರುಳೆ


- ಶಿಶುನಾಳ ಶರೀಫ್


ದಿನವು ಸಂಧಿಸಿ ಹೋಗುತದೆ ಮರುಳೆ
ಘನಮೂರ್ತಿನಾಮವನು ನೆನಹಿಕೋ ಮೂರ್ಖಾ
ಕನಸಿನಂತೆ  ಶರೀರ ಮನವೆಂಬ ಆಲಯದಿ
ಅನುದಿನ ಜೀವನೇಶ್ವರನಿರುವತನಕಾ            ||ಪ||

ಧರೆಯೊಳಗೆ ನರದೇಹ ಸ್ಥಿರವಲ್ಲ ಸಹಜವಿದು
ಇರುತಿಹುದು  ನೀರಮೇಲಿನ ಗುಳ್ಳೆಯಂತೆ
ಕರಗಿಹೋದರೆ ಬರುವದು ಈ ಪರಿ ಕಷ್ಟ
ಕರುಣಬಲದಿಂದ  ಅರಿತುಕೊಳ್ಳಯ್ಯಾ             ||೧||

ಪೊಡವಿಯೊಳಗೆ  ಛಂದ  ಮೃಡನ ತಂತ್ರದ ಗೊಂಬೆ
ಹಿಡಿದಾಡಿಸುತ್ತಲಿಹ ಗುರುಸೂತ್ರದಿಂದ
ಒಡೆಯನಂತಃಕರುಣ ತಪ್ಪಿದರೆ  ಯಮಗಾಳಿ
ಬಡಿದು ಹೋಗಿಹ ಸೊಡರಿನ ತೆರನಂತೆ            ||೨||

ಕೆಸರೊಳಗೆ ಕಮಲ ಉದ್ಭವಿಸಿ  ಸುವಾಸನೆಯು
ಹಸನಾಗಿ ದೆಸೆದೆಸೆಗೆ ಎಸಗುತಿಹುದು
ಮುಸುಕಿರ್ದ ಮಾಯಾಂಧಕಾರವನು ಬೆಳಗಿಸುವ
ಶಿಶುರೇಶನ  ಹೊಂದಿ ಪರಮಸುಖವ ಬಯಸೋ      ||೩||

        *****

ಕೀಲಿಕರಣ: ಎಮ್.ಎನ್.ಎಸ್.ರಾವ್

0 ಕಾಮೆಂಟುಗಳು:

ಕಾಮೆಂಟ್‌‌ ಪೋಸ್ಟ್‌ ಮಾಡಿ