ಹುಬ್ಬಳ್ಳಿಯೊಳು ಮನಿ ಮಾಡಿದ್ಯಾ

-ಶಿಶುನಾಳ ಶರೀಫ್

ಹುಬ್ಬಳ್ಳಿಯೊಳು ಮನಿ ಮಾಡಿದ್ಯಾ
ಅಬ್ಬರದಿ ಮಾಂತನೊಳು ಕೂಡಿದ್ಯಾ               || ಪ||

ಮಂಗಳಾತ್ಮನೊಡನೆ ಮಾತಾಡಿದ್ಯಾ
ಗಂಗಾಧರನಿಗೆ ಕೋರಿಯ ಬೇಡಿದ್ಯಾ               || ೧|| 

ಮರ್ಟಾಳ ಪತಿಯ ಪದವ ಹಾಡಿದ್ಯಾ
ಕಾಟ ಕರ್ಮ ಕಳಿದು ಈಡ್ಯಾಡಿದ್ಯಾ                  || ೨||

ತಾನರಸಿ ವಿಷಯ ಕಲಿ ದೂಡಿದ್ಯಾ
ದೇವ ಶಿಶುನಾಳಧೀಶಗ ಕರವ ಜೋಡಿಸಿದ್ಯ     || ೩ ||
              ****

ಕೀಲಿಕರಣ: ಎಂ.ಎನ್.ಎಸ್. ರಾವ್

ಒಡೆಯ ಬಸವಲಿಂಗಾ

-ಶಿಶುನಾಳ ಶರೀಫ್

ಒಡೆಯ ಬಸವಲಿಂಗಾ ಜಂಗಮ ನೆಲಸಿರ್ದ
ಕಡಕೋಳದಲಿ ವಸತಿ ಮಾಡಿದಿಯೋ                    || ಪ||

ಬಿಡದೆ ಈ ಗ್ರಾಮದ ಜನರೆಲ್ಲ ಕೂಡಲು
ನೋಡಿ ಕನ್ನಡ ಪದ ಹಾಡಿದರಯ್ಯಾ                      ||೧|| 

ಮನಸಿ ನಿನಗೆ ನಾ ಏನಂದೆ ಆತ್ಮದಿ
ನೆಲಸಿಕೊಂಡು ಸುಖವನು ಬೇಡಿಕೊಂಬೆನಯ್ಯಾ      ||೨|| 

ರಸಿಕರಾಜ ಗೋವಿಂದನ ಸೇವಕ
ಆಸಮ ಸಾಹಸಿಯು ಪಾತ್ರಿಯ ಬೇಡುವೆ                ||೩||

ಎನಿಸಿ ತೇಜಪ್ರಕಾಶ ತೋರಿದೆ
ಬಸವನ ಪಾದಕ ಕರವ ಜೋಡಿಸಿ ನಾ                   ||೪||

              ****

ಕೀಲಿಕರಣ: ಎಂ.ಎನ್.ಎಸ್. ರಾವ್

ನೋಡೋಣ ಬಾರಾ ಹಂಪಿ

-ಶಿಶುನಾಳ ಶರೀಫ್

ವಿರುಪಾಕ್ಷಲಿಂಗವಿದ್ದ ಹಂಪಿ
ನೋಡೋಣ ಬಾರಾ ಇಬ್ಬರು ಕೂಡಿ             ||ಪ||

ಆಂಗಲಿಂಗ ಸುಖ ಎರಡು ಕೂಡಿ
ಒಂದೆ ಶಿವ ಶಬ್ಬದೊಳಗೆ                           ||೧||    

ಗಂಗಿ ಸರಸ್ವತಿ ಯಮುನಾ ತೀರ
ಮಧ್ಯದಿ ಹುಡುಕೋಣ ಬಾರೆ                      ||೨||

ಶ್ರೀಶಂಕರನ ಪಾದದಡಿಯಲ್ಲಿ ನೋಡಿದ
ಕೊನೆಯೊಳು ನೋಡೋಣು ಬಾರೆ              ||೩||

ನಾಡ ಜನರು ಕೂಡಿ ನೋಡಲಿಕ್ಕೆ ಬಂದರೆ
ಬೇಡಿದ ವರವ ಕೊಡುತಿಹನು                    ||೪||  

ಬೇಡಿದ ಇಷ್ಟಾಥ೯ ಕೊಡುವಂಥ ಶಿಶುನಾಳ-
ಧೀಶನ ಪಾದಕೆ ಎರಗೋಣ ಬಾರೆ              ||೫||

              ****

ಕೀಲಿಕರಣ: ಎಂ.ಎನ್.ಎಸ್. ರಾವ್

ಜೀ.... ಗಾಂಧೀ

-  ಕಂನಾಡಿಗಾ ನಾರಾಯಣ


ಅರುಣ್‌ಗಾಂಧಿ ಹೆಗಲಿನಿಂದ ಲ್ಯಾಪ್‌ಟಾಪಿನ ಚೀಲವನ್ನು ಕೆಳಗಿಳಿಸಿ ತಿರುಗುವ ಕುರ್ಚಿಯಲ್ಲಿ ಕೂರುತ್ತಿದ್ದಂತೆಯೇ ಬಿಳಿಯ ಸಮವಸ್ತ್ರ ಧರಿಸಿದ್ದ ಸೇವಕ ಬಂದು ಒಂದು ಕವರನ್ನು ಕೊಟ್ಟು ಸಹಿ ಮಾಡಿಸಿಕೊಂಡು ಹೋದ. ಪ್ರತಿದಿನ ಹೀಗೆ ಲೆಟರ್‌ಗಳು ಬರುತ್ತಿದ್ದುದು ಸಹಜವಾಗಿದ್ದರೂ, ಅಸಹಜವಾಗಿ ಕವರಿನ ಮೇಲೆ ತನ್ನ ಹೆಸರು ಇದ್ದುದನ್ನು ನೋಡಿ ಕುತೂಹಲದಿಂದ ಒಡೆದು ಓದಿದ.

ಇದೀಗ ತಾನೇ ಎ.ಸಿ.ಯಿದ್ದ ಹೋಂಡ ಸಿವಿಕ್ ಕಾರಿನಿಂದ ಇಳಿದು ಬಂದಿದ್ದರೂ ಮೈ ಬೆವರಲಾರಂಭಿಸಿತು. ಅದೇಕೋ ಕಣ್ಣಿಗೆ ಕತ್ತಲಾವರಿಸಿದಂತಾಯಿತು. ಮುಂದಿನದೆಲ್ಲಾ ಒಂದು ರೀತಿಯ ನಿರ್ವಾತದಂತೆ, ಖಾಲಿ ಖಾಲಿಯಂತೆ ಕಾಣಲಾರಂಭಿಸಿತು. ಇಂಥದೊಂದು ಸಾಧ್ಯತೆಯನ್ನು ನಿರೀಕ್ಷಿಸಿದ್ದನಾದರೂ ಅದು ಇಷ್ಟು ಬೇಗ ತನ್ನ ಬುಡಕ್ಕೇ ಬಂದು ಕೂರುತ್ತದೆಂದು ನಿರೀಕ್ಷಿಸಿರಲಿಲ್ಲ.

'ಅಮೆರಿಕಾದ ರಿಸೆಷನ್‌ಗೂ ಕರ್ನಾಟಕದ ಕಂಪೆನಿಗೂ ಏನು ಸಂಬಂಧ.. ಇಂಡಿಯನ್ ಎಕಾನಮಿ ತುಂಬಾ ಸ್ಟೇಬಲ್ಲಾಗಿದೆ..' ಎಂದು ನೆನ್ನೆ ತಾನೆ ಲಂಚ್‌ನಲ್ಲಿ ಗೆಳೆಯರೊಂದಿಗೆ ಹರಟುತ್ತಿದ್ದ. ಮೊನ್ನೆ ತಾನೆ ಐವತ್ತು ಜನರನ್ನು ಇಂಟರ್‌ವ್ಯೂ ಮಾಡಿ ಹತ್ತು ಜನರನ್ನು ಆಯ್ಕೆ ಮಾಡಿಕೊಂಡ ಕಮಿಟಿಗೆ ಆತನೇ ಎರಡನೇ ಅತಿ ದೊಡ್ಡ ಹುದ್ದೆಯಲ್ಲಿದ್ದ ವ್ಯಕ್ತಿಯಾಗಿದ್ದ. ಅವರೆಲ್ಲ ತಮಗೆ ಕೆಲಸ ಕೊಡುವಂತೆ ಶಿಫಾರಸ್ಸು ಮಾಡಲಿ ಎಂದು ಇವನನ್ನು ಎಷ್ಟೊಂದು ಇಂಪ್ರೆಸ್ ಮಾಡಲು ಪ್ರಯತ್ನಿಸುತ್ತಿದ್ದರು. ಅದರಲ್ಲಿ ಕೆಲವರು ಅರುಣ್‌ಗಾಂಧಿಯ ತೀರ್ಮಾನವೇ ಅಂತಿಮ ಎಂದು ಗೊತ್ತಿದ್ದು, ಬೇರೆಬೇರೆ ಕಂಪೆನಿಯಲ್ಲಿ ಉನ್ನತ ಹುದ್ದೆಯಲ್ಲಿದ್ದ ಪರಿಚಯದವರಿಂದ ಹಾಗೆ ಸುಮ್ಮನೆ ಎನ್ನುವಂತೆ ಫೋನು ಮಾಡಿಸಿದ್ದರು. ಯಾರು ಯಾರು ಹಾಗೆ ಫೋನು ಮಾಡಿಸಿದ್ದರೋ ಅವರ ಹೆಸರನ್ನೆಲ್ಲಾ ನೋಟ್ ಮಾಡಿಕೊಂಡು, ತನ್ನ ಚಾಕಚಕ್ಯತೆಯಿಂದ, ಅವರು ಈ ಕಂಪೆನಿಗೆ ನಿಜವಾಗಿಯೂ ಯೋಗ್ಯರೇ ಅಲ್ಲ ಎಂದು ಅವರಿಗೇ ಅನ್ನಿಸಿಬಿಡುವಂತೆ ಮಾಡಿದ್ದ. ಆದರೆ ಈಗ...

ಹಾಳೆ ತಿರುಗಿಸಿದ. ಒಂದು ಚೆಕ್. ತನ್ನ ಇಷ್ಟು ದಿನದ ಸಂಬಳವನ್ನು ಲೆಕ್ಕ ಹಾಕಿ ಫೈನಲ್ ಸೆಟಲ್‌ಮೆಂಟ್ ಮಾಡಿದ್ದರು. ಹದಿನಾಲ್ಕು ದಿನದ ಸಂಬಳ ೭೦೦೦೦/-ರೂಪಾಯಿ. ಅಂದರೆ ತಿಂಗಳಿಗೆ ಒಂದೂವರೆ ಲಕ್ಷ. ನಿನ್ನೆತಾನೇ ಕೆಲಸಕ್ಕೆ ತೆಗೆದುಕೊಂಡ ಹತ್ತು ಜನರ ಒಟ್ಟು ಸಂಬಳ ತಿಂಗಳಿಗೆ ಒಂದು ಲಕ್ಷ ಮೀರುತ್ತಿರಲಿಲ್ಲ. ಅಂದರೆ ತನ್ನೊಬ್ಬನನ್ನು ತೆಗೆದಿದ್ದರಿಂದ ಹತ್ತುಜನಕ್ಕೆ ಕೆಲಸ ಕೊಟ್ಟು, ಇನ್ನೂ ಐದು ಜನರ ಸಂಬಳ ಉಳಿತಾಯವಾದಂತಾಯಿತು.

ಎಂ.ಡಿ. ಮುಖದ ಮೇಲೆ ಕವರನ್ನು ಎಸೆದು ನೀನೇನು ಕೆಲಸದಿಂದ ತೆಗೆಯುವುದು, ನಿನ್ನಂತಹ ತಗಡು ಕಂಪೆನಿಯಲ್ಲಿ ಕೆಲಸ ಮಾಡಲು ನನಗೇ ಇಷ್ಟವಿರಲಿಲ್ಲ ಎಂದು ತಾನೇ ರಾಜೀನಾಮೆ ಬಿಸಾಕಿದರೆ ಹೇಗೆ ಎಂದು ವಿಚಾರ ಮಾಡಿದ. ಆದರೂ ಏಳು ವರ್ಷದ ಹಿಂದೆ ಬರಿಗೈಯ್ಯಲ್ಲಿ ಬೆಂಗಳೂರಿಗೆ ಬಂದವನಿಗೆ ಆಶ್ರಯ ನೀಡಿ, ಕೋಟಿ ಬೆಲೆ ಬಾಳುವ ಅಪಾರ್ಟ್‌ಮೆಂಟು, ಮಿಲಯನ್ ಬೆಲೆ ಬಾಳುವ ಐಷಾರಾಮಿ ಕಾರು ಇವನ್ನೆಲ್ಲ ಸಂಪಾದಿಸಲು ದಾರಿಮಾಡಿಕೊಟ್ಟ ಕಂಪೆನಿಯನ್ನು ಹಾಗೆ ನಿಕೃಷ್ಟವಾಗಿ ಬಯ್ದರೆ ತಾನು ಕೃತಘ್ನ ಅನ್ನಿಸಿಕೊಳ್ಳಲಾರೆನೇ ಅನಿಸಿತು. ಆದರೆ ಕಾರು-ಮನೆ ನೆನಪಾಗುತ್ತಿದ್ದಂತೆಯೇ ಇನ್ನೆಷ್ಟು ಇನ್‌ಸ್ಟಾಲ್‌ಮೆಂಟ್ ಬಾಕಿಯಿದೆಯೋ ಎಂದು ಬ್ಯಾಂಕಿಗೆ ರಿಂಗಿಸಿದ. ಅರ್ಧದಷ್ಟು ಸಾಲ ತೀರಿದೆಯೆಂಬ ಉತ್ತರದಿಂದ ಸಮಾಧಾನಗೊಂಡ. ಆದರೆ ಇನ್ನೂ ಅರ್ಧಪಾಲು ಕಂತು ಕಟ್ಟದಿದ್ದರೆ ಆ ಬ್ಯಾಂಕಿನಿಂದ ಸಾಲ ವಸೂಲಾತಿಯ ಸುಪಾರಿ ಪಡೆದಿರುವ ರೌಡಿಗಳಂತಹವರು ಹುಡುಕಿಕೊಂಡು ಬಂದು ಮುಟ್ಟುಗೋಲು ಹಾಕಿಕೊಳ್ಳಲಾರರೇ ಎಂದೂ ಚಿಂತಿತನಾದ.

ಇದುವರೆಗೂ ತಮ್ಮ ಬಾಸ್ ಆಗಿದ್ದವನು ರಿಸೆಷನ್‌ಗೆ ಬಲಿಯಾಗಿದ್ದಾನೆಂದು ತಿಳಿದ ಸಹೋದ್ಯೋಗಿಗಳೆಲ್ಲ ತಮಗೆ ಏನೇನೂ ಗೊತ್ತೇ ಇಲ್ಲವೇನೋ ಎಂಬಂತೆ ನಟಿಸುತ್ತ, ಒಂದು ವಾರೆ ಕಣ್ಣನ್ನು ಇವನ ಮೇಲಿಟ್ಟು, ಇವನ ಎಲ್ಲ ತಲ್ಲಣ-ತಳಮಳಗಳನ್ನ ಖುಷಿಯಿಂದ ಅನುಭವಿಸುತ್ತ ತಮ್ಮ ಕೆಲಸದಲ್ಲಿ ತಾವು ತಲ್ಲೀನರಾದಂತೆ ಕುಳಿತಿದ್ದರು. ಈ ಕ್ಷಣದಲ್ಲೋ ಇನ್ನೊಂದು ಕ್ಷಣದಲ್ಲೋ ತಮಗೂ ಟರ್ಮಿನೇಷನ್ ಲೆಟರ್ ಬಂದುಬಿಡಬಹುದೆಂಬುದನ್ನೇ ಮರೆತು, 'ನಮ್ಮ ಮೇಲೇ ಬಾಸಿಜಂ ಮಾಡ್ತಿದ್ದ ಬಡ್ಡೀಮಗ, ಈಗ ಯಾರ ಮೇಲೆ ಮಾಡ್ತಾನೋ ಮಾಡಲಿ, ನೋಡೋಣ..' ಎಂದು ಸಿಟ್ಟಿನಿಂದ ಆಗಾಗ್ಗೆ ಇವನತ್ತ ಒಂದು ಕೊಂಕುನೋಟ ಹರಿಸುತ್ತಿದ್ದರು.


ಅರುಣ್‌ಗಾಂಧಿಗೆ ಯಾಕೋ ಯಾರಾದರೂ ತನ್ನನ್ನು ಗಮನಿಸುತ್ತಿದ್ದಾರೇನೋ ಅನ್ನಿಸಲಾರಂಭಿಸಿತು. ಒಮ್ಮೆ ಹಾಗೇ ದೃಷ್ಟಿ ಹಾಯಿಸಿದ. ಯಾರೂ ತನ್ನತ್ತ ನೋಡುತ್ತಿಲ್ಲ, ಆದರೆ ಎಲ್ಲರೂ ತನ್ನತ್ತಲೇ ನೋಡುತ್ತಿದ್ದಾರೆ ಎನ್ನಿಸಿ, ಮುಳ್ಳಿನ ಕುರ್ಚಿಯ ಮೇಲೆ ಕೂತಂತಹ ಅನುಭವವಾಗಿ, ಯಾರಿಗೂ ಕಾಣದಂತೆ ಎದ್ದು ಓಡಿಹೋಗಿಬಿಡಬೇಕು ಎನ್ನಿಸಿತು.
ಆದಾಗ್ಯೂ ಎಂ.ಡಿ.ಯನ್ನು ಒಮ್ಮೆ ಮಾತಾಡಿಸಿದರೆ ಹೇಗೆ ಅನ್ನಿಸಿ ಆ ಕೋಣೆಗೆ ಹೋದ. ಆತ ತಲೆಯೆತ್ತಿ ತನಗೆ ಎಲ್ಲಾ ಗೊತ್ತಿದೆ, ನೀನು ಹೇಳಬೇಕಾದ್ದು ಏನೂ ಇಲ್ಲ ಎನ್ನುವಂತೆ ಒಂದೇ‌ಒಂದು ತಿಳಿನಗೆ ಬೀರಿದ. ಗಾಂಧಿಗೆ ಇವನೊಂದಿಗೆ ಮಾತನಾಡುವುದರಿಂದ ಏನೂ ಪ್ರಯೋಜನವಿಲ್ಲ ಅನ್ನಿಸಿ ತಿರಸ್ಕಾರದಿಂದ ಎದ್ದುಬಂದ.
***

ಸೂಟ್‌ಕೇಸಿನಂತ ಲ್ಯಾಪ್‌ಟಾಪ್ ಚೀಲವನ್ನು ಟೀಪಾಯಿಯ ಮೇಲೆ ಎಸೆದು ಸೋಫಾದ ಮೇಲೆ ಕುಸಿದು ಕುಂತ. ಎದುರಿನ ಗೋಡೆಯ ಮೇಲೆ ನೇತುಹಾಕಿದ್ದ ಬೊಚ್ಚುಬಾಯಲ್ಲಿ ನಗುವ ಗಾಂಧಿಯ ಚಿತ್ರ ಕಣ್ಣಿಗೆ ಬಿತ್ತು. ತನ್ನ ಮಾಜಿ ಎಂ.ಡಿ.ಯಂತೆ ಗಾಂಧಿಯೂ ತನ್ನನ್ನು ಕಂಡು ತಿರಸ್ಕಾರದ ನಗೆ ನಕ್ಕಂತೆ ಭಾಸವಾಗಿ ಅವಮಾನವೆನಿಸಿತು.

ಈ ಗಾಂಧಿಯಿಂದಲೇ ಅಲ್ಲವೇ ತಾನು ಎಷ್ಟೆಲ್ಲಾ ಅವಮಾನ ಅನುಭವಿಸುವಂತಾಗಿದ್ದು ಎಂದು ಆ ಫೋಟೋವನ್ನೇ ಹೊಡೆದುಹಾಕಿಬಿಡುವಷ್ಟು ಸಿಟ್ಟುಬಂತು. ತಾನು ಪ್ರೈಮರಿಯಿದ್ದಾಗಿನಿಂದ ಹಿಡಿದು ಬಿ.ಇ. ಮಾಡುವವರೆಗೆ ಎಲ್ಲಾ ಕಡೆ, ಅಂತ ಗಾಂಧಿ.. ಇಂತ ಗಾಂಧಿ.. ಎಂದು ಗೆಳೆಯರು ಅಪಹಾಸ್ಯ ಮಾಡುತ್ತಿದ್ದರು.

ಒಂದು ಸಲ, ಈ ಹೆಸರು ತನಗೆ ಹೇಗೆ ಅಂಟುಕೊಂಡಿತು ಎಂಬ ಬಗ್ಗೆ ಸಂಶೋಧನೆ ಮಾಡಬೇಕೆಂಬ ಉಮೇದು ಬಂದಿತ್ತು. ಕೊರಳಪಟ್ಟಿ ಹಿಡಿದು ಕೇಳೋಣವೆಂದರೆ ಅಪ್ಪ ಸತ್ತು ಇಪ್ಪತ್ತು ವರ್ಷವಾಯಿತಂತೆ. ಅಮ್ಮ ಹೇಳಿದ್ದೇನೆಂದರೆ, ಏಳನೇ ಮಗನಾಗಿ ಗಾಂಧಿ ಹುಟ್ಟಿದ್ದರಿಂದ ಇವತ್ತು ಹೆಸರಿಡೋಣ, ನಾಳೆ ಹೆಸರಿಡೋಣ ಎಂದು ಹಂಗೇ ದಿನಗಳು ಜಾರಿಹೋಗಿ, ಮನೆಯಲ್ಲಿ ಪ್ರೀತಿಯಿಂದ ಕರೆಯುತ್ತಿದ್ದ ಪಾಪಚ್ಚಿ ಎಂಬ ಹೆಸರೇ ಉಳಿದುಬಿಟ್ಟಿತ್ತಂತೆ.

ಮನೆಮನೆಗೆ ಬಂದು ಶಾಲೆಗೆ ಸೇರಿಸಿಕೊಳ್ಳುವ ಅಭಿಯಾನದಲ್ಲಿ, ಆಟ ಆಡುತ್ತಿದ್ದ ಈತನನ್ನು ಹಿಡಿದ ಮೇಸ್ಟರು ಆರು ವರ್ಷ ಆಗಿದೆಯೇ ಎಂದು ಪರೀಕ್ಷಿಸಲು ಬಲಗೈಯ್ಯಿಂದ ಎಡಕಿವಿಯನ್ನು ಮುಟ್ಟಿಸಿ ನೋಡಿ, ಬರೆದುಕೊಳ್ಳಲು ಹೆಸರೇನೆಂದು ಕೇಳಿದಾಗಲೇ, ತನಗೆ ಹೆಸರೇ ಇಟ್ಟಿರದಿದ್ದುದರ ಅರಿವಾಗಿದ್ದಂತೆ. ಡೇಟ್ ಆಫ್ ಬರ್ತ್ ಕಾಲಂ ಬರೆದುಕೊಳ್ಳುವಾಗ ಹೆಸರೇ ಗೊತ್ತಿಲ್ಲ ಅಂದ ಮೇಲೆ ಡೇಟ್ ಇನ್ನೇನು ಗೊತ್ತಿರುತ್ತೆ ಅಂತ ಪಕ್ಕದವನೊಂದಿಗೆ ಮೇಸ್ಟರು ತಮಾಷೆ ಮಾಡುತ್ತಿದ್ದಾಗ, 'ನನಗೆ ಗೊತ್ತು..' ಅಂತ, ಆತನ ಅಣ್ಣ ಓಡಿಹೋಗಿ ತನ್ನ ಎಕ್ಸೈಜ್ ಪುಸ್ತಕದಲ್ಲಿ ತಮ್ಮ ಹುಟ್ಟಿದ್ದ ದಿನಾಂಕ ಬರೆದು ಇಟ್ಟಿದ್ದನ್ನು ಹುಡುಕಿ ತಂದುಕೊಟ್ಟನಂತೆ. ಈತನ ಬರ್ತ್‌ಡೇ ಅಕ್ಟೋಬರ್ ಎರಡು ಎಂದಿರುವುದನ್ನು ಆಶ್ಚರ್ಯದಿಂದ ನೋಡಿದ ಹಳೇಕಾಲದ ಆ ಮೇಸ್ಟರು, 'ಈ ಪ್ರಜಾಪ್ರಭುತ್ವದಲ್ಲಿ ಯಾರ್‍ಯಾರು ಏನೇನು ಆಗ್ತಾರೋ ಯಾರಿಗೆ ಗೊತ್ತು..' ಎಂದು ಗೊಣಗಿಕೊಂಡು, ಈ ಹುಡುಗನೂ ಮುಂದೆ ದೊಡ್ಡವ್ಯಕ್ತಿಯೇ ಆಗಿಬಿಡಲಿ ಎನ್ನುವಂತೆ 'ಗಾಂಧಿ' ಎಂದು ನಾಮಕರಣ ಮಾಡಿಬಿಟ್ಟರಂತೆ.

ಮುಂದೆ ದೊಡ್ಡವನಾಗಿ ಕಾಲೇಜು ಓದುವಾಗ ಒಮ್ಮೆ ಗಾಂಧಿ ಎಂಬ ಈ ಹೆಸರಿನಿಂದ ಬಹಳ ಮುಜುಗರವಾಗಿ ಹೆಸರನ್ನು ಬದಲಾಯಿಸಿಕೊಂಡುಬಿಡೋಣವೆಂದು ನಿರ್ಧರಿಸಿ ನೋಟರಿ ಬಳಿಗೆ ಹೋಗಿದ್ದನಂತೆ. 'ಗಾಂಧಿ ಎಂದಿರುವ ನನ್ನ ಹೆಸರನ್ನು ಅರುಣ್ ಎಂದು ಬದಲಾಯಿಸಿಕೊಂಡಿರುತ್ತೇನೆ' ಎಂದು ಬಾಂಡ್‌ಪೇಪರ್‌ನಲ್ಲಿ ಅಫಿಡೆವಿಟ್ ಬರೆದುಕೊಂಡು ನೋಟರಿಯ ಮುಂದೆ ಇಟ್ಟಾಗ ಅವರು ಇವನ ಮುಖವನ್ನೊಮ್ಮೆ ನೋಡಿ ಆ ಹೆಸರಿಗಿರುವ ಗೌರವಗಳನ್ನೆಲ್ಲ ಪಟ್ಟಿಮಾಡಿ ಉಪದೇಶಿಸಿ, 'ಅರುಣ್‌ಗಾಂಧಿ' ಎಂದು ಬೇಕಾದರೆ ಬದಲಾಯಿಸಿಕೋ ಎಂದು ಸಲಹೆ ನೀಡಿದರಂತೆ. ಅಂದಿನಿಂದಲೇ ಈ ಗಾಂಧಿ ಅರುಣ್‌ಗಾಂಧಿ ಆದದ್ದಂತೆ.
ನೆಲದಲ್ಲಿ ಓಡಾಡಲೇ ವಾಹನವಿಲ್ಲದೇ ಬೆಳೆದ ಅರುಣ್‌ಗಾಂಧಿ ಆಗಸದಲ್ಲಿ ತೇಲುವ ಆ ವಿಮಾನದಲ್ಲಿ ಎಂದಾದರೊಂದು ದಿನ ವಿದೇಶಕ್ಕೆ ಹಾರಬಹುದೆಂಬುದರ ಕಲ್ಪನೆಯನ್ನೇ ಮಾಡಿರಲಿಲ್ಲ. ಆದರೆ ಕೊನೆಯ ವರ್ಷದಲ್ಲಿ ಓದುವಾಗಲೇ ಜ್ಞಾನದ ಬಲದಿಂದ ಕ್ಯಾಂಪಸ್ ಸೆಲೆಕ್ಷನ್ ಮಾಡಿಕೊಂಡ ಕಂಪೆಯೊಂದು ನಿನ್ನ ಬಳಿ ಕಾರಿದೆಯಾ? ಬೈಕಿದೆಯಾ? ಎಂದು ಕೇಳಿರಲಿಲ್ಲ. ವಿಮಾನದಲ್ಲಿ ಹಾರಿಸಿ ವಿದೇಶಕ್ಕೆ ಕಳುಹಿಸಿತ್ತು.

ಇಲ್ಲಿ ಗಾಂಧಿ ಎಂಬ ಈ ಹೆಸರಿನಿಂದ ಎಷ್ಟೇ ಅವಮಾನ ಆಗಿದ್ದರೂ, ಅಲ್ಲೆಲ್ಲಾ ಎಷ್ಟೊಂದು ಗೌರವ ಸಿಗುತ್ತಿತ್ತೆಂದರೆ ಅದನ್ನು ವರ್ಣಿಸಲೇ ಸಾಧ್ಯವಿಲ್ಲ. ಆ ಗಾಂಧಿಯ ವಂಶದ ಕುಡಿಯೇ ಇರಬಹುದೆಂದುಕೊಂಡು ಅನೇಕರು ಅಭಿಮಾನ ತೋರುತ್ತಿದ್ದರು. ಇನ್ನು ಕೆಲವರು ಇಂದಿರಾಗಾಂಧಿಯ ಫ್ಯಾಮಿಲಿಯವರಿರಬೇಕು ಎಂದು ಗೌರವ ತೋರುತ್ತಿದ್ದರು. ಒಟ್ಟಿನಲ್ಲಿ ಬಹುಪಾಲು ಕೆಲಸಗಳು ಸುಲಲಿತವಾಗಿ ಆಗಿಬಿಡುತ್ತಿದ್ದವು.

ಗಾಂಧಿಯ ಫೋಟೋವನ್ನು ಮತ್ತೊಮ್ಮೆ ಹಾಗೆಯೇ ದಿಟ್ಟಿಸಿನೋಡಿದ.. ಏಕತಾನತೆಯಿಂದ ನೋಡಿದ.. ಫೋಟೋದ ಆ ನಗುವಿನಲ್ಲಿ ಏನೋ ಒಂದು ರೀತಿಯ ಆತ್ಮೀಯತೆ ಇತ್ತು, ಪ್ರೀತಿ ಇತ್ತು, ಶಾಂತಿ ಇತ್ತು.. ಬುದ್ಧನ ಮಂದಹಾಸದಲ್ಲಿ, ಬಾಹುಬಲಿಯ ಸ್ಥಿತಪ್ರಜ್ಞತೆಯಲ್ಲಿ, ಬಸವಣ್ಣನ ಅಂತರ್ಮುಖತೆಯಲ್ಲಿ ಏನೆಲ್ಲಾ ಇರಬಹುದೋ ಅಂಥದೆಲ್ಲಾ ಗಾಂಧಿಯ ಆ ನಗುವಿನಲ್ಲೂ ಕಾಣಲಾರಂಭಿಸಿತು....

ಯಾಕೋ ಗಾಂಧಿ ಎಂದಿಗಿಂತಲೂ ಇಂದು ಹೆಚ್ಚು ಆಕರ್ಷಿತನಾಗಿ ಕಂಡ. ಯಾವತ್ತೂ ಗಾಂಧಿಯನ್ನು ನೋಡಿರಲಿಲ್ಲವೇನೋ ಎನ್ನುವಂತೆ ಮತ್ತೆ ಮತ್ತೆ ನೋಡಲಾರಂಭಿಸಿದ. ನೋಡಿದಷ್ಟೂ ಇನ್ನೂ ಇನ್ನೂ ನೋಡಬೇಕೆನಿಸುವಂತೆ, ಆತನ ನಗುವಿನ ಆಳದಲ್ಲಿ ಇನ್ನೂ ಏನೇನೋ ಇರಬಹುದೆನ್ನಿಸುವಂತೆ ಭಾಸವಾಗಲಾರಂಭಿಸಿತು.. ಗಾಂಧಿಯ ಆ ಚಿತ್ರದಲ್ಲಿ ತನ್ನನ್ನೇ ತಾನು ಕಾಣಲಾರಂಭಿಸಿದ.. ತಾನು ಕೆಲಸ ಕಳೆದುಕೊಂಡಿರುವ ಈ ಸಂದರ್ಭದಲ್ಲಂತೂ ಆ ಗಾಂಧಿ ಯಾಕೋ ಇನ್ನೂ ಹೆಚ್ಚು ಹೆಚ್ಚು ಆತ್ಮೀಯವೆನ್ನಿಸಲಾರಂಭಿಸಿದ..

***

ಹೊರಗೆಬಂದರೆ ಅವಮಾನವೆಂದು ವಾರಗಟ್ಟಲೆ ಮನೆಯಲ್ಲಿ ಕುಂತ ಗಾಂಧಿ ಇಂಟರ್‌ನೆಟ್‌ನ್ನೆಲ್ಲಾ ಶೋಧಿಸಿ ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲಾ ತನ್ನ ರೆಜ್ಯೂಮ್ ಜತೆ ಅರ್ಜಿಹಾಕಿದ. ವಿದೇಶಗಳಲ್ಲಿರುವ ಅವಕಾಶಗಳನ್ನೆಲ್ಲಾ ತಡಕಾಡಿದ. ಆದರೆ ಎಲ್ಲೆಲ್ಲೂ ಕೆಲಸ ಸಿಗದೇ ಪರದಾಡಿದ. ಮನೆಯಿಂದ ಹೊರಗೆ ಬಂದು ಪರಿಚಯವಿರುವ ಕಡೆಗಳಲ್ಲೆಲ್ಲಾ ಅಲೆದು ಕೆಲಸ ಹುಡುಕೋಣವೆಂದರೆ, ಹಿಂದೆ ತಾನಿದ್ದ ಕಂಪೆನಿಯ ಓನರ್ ತಾನೇ ಎನ್ನುವಂತೆ ಆ ಕಂಪೆನಿಗಳಿಗೆಲ್ಲ ಸ್ಪರ್ಧೆಯೊಡ್ಡಿದ್ದ. ಈಗ ಕೆಲಸ ಕೇಳಲು ಹೋದರೆ ಬಿಡುತ್ತಾರಾ.. ಅವಮಾನ ಮಾಡುತ್ತಾರೆ.. ಒಂದು ವೇಳೆ ಅವಮಾನ ಮಾಡುವುದಿಲ್ಲವೆಂದುಕೊಂಡರೂ, ನಾಳೆ ಆ ಕಂಪೆನಿಯೂ ಮುಚ್ಚಲಾರದೆಂಬ ಖಾತ್ರಿಯೇನು?

ಈ ತಿಂಗಳು ಮನೆಯ ಕಂತನ್ನು ಕಟ್ಟಲಿಲ್ಲವೆಂದು ಹೆಂಡತಿ ನೆನಪು ಮಾಡಿದಳು. ಬಂದ ಸಂಬಳದ ಕೊನೆಯ ಕಂತನ್ನು ಸಾಲಕ್ಕೆ ಕಟ್ಟಿಬಿಟ್ಟರೆ ಮುಂದೆ ಕೆಲಸ ಸಿಗುವವರೆಗೆ ಹೊಟ್ಟೆಗೇನು ತಿನ್ನುವುದು? ಹೆಂಡತಿಯನ್ನು ಹೇಗೆ ಸಾಕುವುದು? ಹೋದವರ್ಷ ತಾನೇ ಅದ್ದೂರಿಯಾಗಿ ಮದುವೆಯಾಗಿದ್ದ. ವಿದೇಶೀ ಕಂಪೆನಿಯಲ್ಲಿ ಕೆಲಸ, ಒಂದೂವರೆ ಲಕ್ಷ ಸಂಬಳ ಎಂದು ಅಮ್ಮ ಹೆಣ್ಣಿನವರ ಮುಂದೆ ಕೊಚ್ಚಿಕೊಂಡು ಇಷ್ಟುದಪ್ಪ ವರದಕ್ಷಿಣೆ ಕೊಡಲೇಬೇಕೆಂದು ಪಟ್ಟುಹಿಡಿದಿದ್ದಳು. ಆದರೆ ಹುಡುಗಿಯ ತಂದೆ ಮುಗುಳ್ನಕ್ಕು, ತನ್ನ ಜೀವಮಾನದಲ್ಲಿ ಕಂಡು ಕೇಳರಿಯದಷ್ಟು ಕೊಡುತ್ತೇನೆಂದು ಸ್ವತಃ ಘೋಷಿಸಿದಾಗ ಅವ್ವ ತಬ್ಬಿಬ್ಬಾಗಿ ಸಣ್ಣವಳೆನಿಸಿಬಿಟ್ಟಿದ್ದಳು. ಬರೀ ಬಾಯಲ್ಲಿ ಹೇಳುತ್ತಾರಷ್ಟೇ, ನಿಜವಾಗಿಯೂ ಕೊಡುತ್ತಾರಾ.. ಎಂದು ಮಗನ ಮುಂದೆ ಆತಂಕ ತೋಡಿಕೊಂಡಿದ್ದಳು.
ಬ್ಯಾಂಕಿನಿಂದ ಫೋನು ಮಾಡಿದ ಮ್ಯಾನೇಜರ್ ಕಾರಿನ ಕಂತು ಬರಲಿಲ್ಲವೆಂದ. ಇವನು ತಡವರಿಸುತ್ತ ಮುಂದಿನ ವಾರ ಕಟ್ಟುತ್ತೇನೆಂದ. ಆದರೆ ಆತ, 'ನಿಮ್ಮನ್ನ ಕೆಲಸದಿಂದ ತೆಗೆದುಹಾಕಿದರಂತೆ, ಹೌದಾ ಸಾರ್..?' ಎಂದು ಕೊಂಕು ಬೇರೆ ಸೇರಿಸಿದ. ಇವೆಲ್ಲ ಇವನಿಗೇಕೆ ಬೇಕು ಅನ್ನಿಸಿ, ಕೈಗೆ ಸಿಕ್ಕಿದರೆ ನಾಲ್ಕು ತದುಕಿಬಿಡಬೇಕೆನಿಸಿತು.

ಮನೆಯಲ್ಲಿ ಕುಂತುಕುಂತು ಏಕತಾನತೆಯಿಂದ ಮಂಕು ಹಿಡಿದಂತಾಯಿತು. ಒಂದು ದಿನಪೂರ್ತಿ ಹೊರಗೆ ಹೋಗದೇ ಮನೆಯೊಳಗೇ ಇದ್ದರೆ ತನಗೇ ಹೀಗಾಗುತ್ತಲ್ಲ, ಇನ್ನು ಮನೆಯೊಳಗಿನ ಹೆಂಗಸರಿಗೆ, ಜೈಲಲ್ಲಿರುವ ಕೈದಿಗಳಿಗೆ ಹೇಗನ್ನಿಸುತ್ತದೆಯೋ ಎಂದು, ತನ್ನನ್ನು ಇತರರಿಗೆ ಹೋಲಿಸಿಕೊಂಡು ಸಮಾಧಾನಪಟ್ಟುಕೊಂಡ. ಪರಿಚಯವಿದ್ದ ಯಾರಿಗಾದರೂ ತಕ್ಷಣಕ್ಕೆ ಗುರುತು ಸಿಕ್ಕದಂತಿರಲಿ ಎಂದು ತಲೆಗೆ ಟೋಪಿ, ಕಣ್ಣಿಗೆ ಕನ್ನಡಕ ಹಾಕಿಕೊಂಡು ಹೊರಹೊರಟ. ಆದರೆ ಬೆಂಗಳೂರಂತ ಬೆಂಗಳೂರಿನ ಜನ ಇವನನ್ನು ಕೇರೇ ಮಾಡಲಿಲ್ಲ. ಅಂತಹ ದೊಡ್ಡ ಕಂಪೆನಿಯೊಂದರ ಡೆಪ್ಯುಟಿ ಮ್ಯಾನೇಜರ್ ಕೆಲಸ ಕಳೆದುಕೊಂಡು ಬೀದಿಗೆ ಬಿದ್ದಿದ್ದಾನೆಂದರೆ ಯಾರೊಬ್ಬರೂ ಕನಿಷ್ಟ ಸೌಜನ್ಯಕ್ಕಾಗಿಯಾದರೂ ತನ್ನ ಕಡೆ ಮುಖ ತಿರುಗಿಸಿಯೂ ನೋಡದೇ, ತಮಗೂ ಇದಕ್ಕೂ ಸಂಬಂಧವೇ ಇಲ್ಲವೆನ್ನುವಂತೆ, ತಮ್ಮ ಪಾಡಿಗೆ ತಾವು ಇನ್ನೊಬ್ಬರನ್ನು ಹಿಂದೆ ಹಾಕುವ ಭರದಲ್ಲಿ ಓಡುತ್ತಲೇ ಇದ್ದಾರಲ್ಲ ಅನ್ನಿಸಿತು. ಆದರೂ ಒಂದು ಥರಾ ನೆಮ್ಮದಿ, ಸಮಾಧಾನ ಎನಿಸಿತು. ಆದರೆ ಸತತವಾಗಿ ಯಾರೂ ತನ್ನನ್ನು ಮಾತನಾಡಿಸದಾದಾಗ ಕೋಟಿ ಜನರಿರುವ ಬೆಂಗಳೂರಿನಲ್ಲಿ ತಾನೊಬ್ಬನೇ ಒಂಟಿ ಎನಿಸಲಾರಂಭಿಸಿತು. ಟೋಪಿ, ಕನ್ನಡಕ ಎಲ್ಲವನ್ನೂ ತೆಗೆದುಹಾಕಿ ಯಾರಾದರೂ ತನ್ನನ್ನು ಮಾತನಾಡಿಸಬಾರದೇ ಎಂದು ಹಪಹಪಿಸಲಾರಂಭಿಸಿದ.

ಅಪಾರ್ಟ್‌ಮೆಂಟಿನ ಹದಿನಾರನೇ ಮಹಡಿಯಲ್ಲಿರುವ ತನ್ನ ಮನೆಗೆ ಬಂದು ಕುಕ್ಕರಿಸಿ ಕುಂತ. ಫ್ಯಾನು ಹಾಕುವಂತೆ ಹೆಂಡತಿಗೆ ಹೇಳಿದ. ಆದರೆ ಬೆಸ್ಕಾಂನವರು ಕರೆಂಟ್‌ಬಿಲ್ ಕಟ್ಟಿಲ್ಲವೆಂದು ಫ್ಯೂಜ್ ಕಿತ್ತುಕೊಂಡುಹೋಗಿರುವುದಾಗಿ ಹೆಂಡತಿ ಹೇಳಿದಾಗ, 'ಈ ನನ್ಮಕ್ಕಳದು ಬಹಳ ರೂಲ್ಸು. ಬಂದು ಕಟ್ಟಕ್ಕೆ ಪುರುಸೊತ್ತಾಗಿಲ್ಲ, ಕಟ್ಟುಸ್ತೀನಿ ಅಂತ ಹೇಳಕ್ಕಾಗಲಿಲ್ಲವಾ..' ಎಂದು ಹೆಂಡತಿಗೆ ರೇಗಿದ. ಆದರೆ ಆಕೆ 'ನಿಮಗೇ ಬಿಲ್ ಕಟ್ಟೋಕ್ಕೆ ಯೋಗ್ಯತೆಯಿಲ್ಲ.. ಅವರ ಬಗ್ಗೆ ಮಾತಾಡ್ತೀರಾ..' ಎಂದು ರಪ್ಪನೆ ಮುಖಕ್ಕೆ ಹೊಡೆದಂತೆ ಮಾತಾಡಿಬಿಟ್ಟಳು. ಇತ್ತೀಚೆಗೆ ಕೆಲಸವಿಲ್ಲದ ತನ್ನನ್ನು ತನ್ನ ಹೆಂಡತಿಯೂ ನಿಕೃಷ್ಟವಾಗಿ ಕಾಣಲಾರಂಭಿಸಿದ್ದಾಳೆ ಅನ್ನಿಸಲಾರಂಭಿಸಿತು.

ಗಾಂಧಿಫೋಟೋ ಯಾಕೋ ಮತ್ತೆ ತನ್ನನ್ನೇ ನೋಡಿ ನಕ್ಕಂತಾಯಿತು. ಎತ್ತ ಹೋದರೆ ಅತ್ತ ತಿರುಗಿ ನೋಡುತ್ತಿರುವಂತೆನಿಸಿತು. ಸಿಟ್ಟಿನಿಂದ ದಿಟ್ಟಿಸಿ ನೋಡಿದ. ಗಾಂಧಿ ಏನಾದರೂ ತನ್ನ ಅಪ್ಪನೋ ತಾತನೋ ಆಗಿದ್ದರೆ ಕೊರಳಪಟ್ಟಿ ಹಿಡಿದು ಕೇಳಬಹುದಿತ್ತು ಅನಿಸಿತು. ಲಂಚ್ ವೇಳೆ ಬಿಚ್ಚಿಕೊಂಡ ಟಿಫನ್‌ಬಾಕ್ಸ್‌ಗಳ ಮುಂದೆ ಗೆಳೆಯರು ಮಾತಾಡುವಾಗ ಈ ಗಾಂಧಿಯಿಂದಲೇ ನಮ್ಮ ದೇಶ ಹಾಳಾಗಿದ್ದು ಎಂದು ವಿತಂಡವಾದ ಮಾಡುತ್ತಿದ್ದುದು ನೆನಪಾಯಿತು. ನಿಜವಾಗಿಯೂ ಗಾಂಧಿಯಿಂದ ನಮ್ಮ ದೇಶಕ್ಕೆ ಎಷ್ಟು ಲಾಭವಾಯಿತು, ಎಷ್ಟು ನಷ್ಟವಾಯಿತು ಎಂದು ಒಂದು ಸಮೀಕ್ಷೆಯನ್ನೇ ಮಾಡಿಬಿಡಬೇಕೆಂಬ ಮನಸ್ಸಾಯಿತು.

***

ಪ್ರತಿದಿನ ತಪ್ಪದೇ ಗಾಂಧಿಭವನಕ್ಕೆ ಬರಲಾರಂಭಿಸಿದ ಅರುಣ್‌ಗಾಂಧಿ, ಗಾಂಧಿಸಾಹಿತ್ಯವನ್ನೆಲ್ಲಾ ತಿಂದುಬಿಡುವಂತೆ ಓದಲಾರಂಭಿಸಿದ. ತನ್ನ ಕ್ಷೇತ್ರಕ್ಕೆ ಸಂಬಂಧಿಸಿದ್ದು ಎಂಬ ಕಾರಣಕ್ಕೋ ಏನೋ ಗಾಂಧಿಯ ಆರ್ಥಿಕ ಚಿಂತನೆಗಳ ಬಗ್ಗೆ ಆಸಕ್ತನಾದ. ಗಾಂಧಿಯ ಬಗ್ಗೆ ಇನ್ನೂ ಏನೇನೋ ಓದಿದ. ಒಬ್ಬ ಆಧುನಿಕ ಮನೋಧರ್ಮದ ತನ್ನಂತಹವನನ್ನು ಸೆಳೆಯಲು ಆ ಗಾಂಧಿಗೆ ಸಾಧ್ಯವೇ ಇಲ್ಲ ಎಂದುಕೊಂಡಿದ್ದ ಅರುಣ್‌ಗಾಂಧಿಯಂತಹ ಅರುಣ್‌ಗಾಂಧಿಯೇ ಜೀ.. ಎಂದು ಮಾರುಹೋಗಿಬಿಟ್ಟ.
ಕಂತುಗಳನ್ನು ಸರಿಯಾಗಿ ಕಟ್ಟಲಿಲ್ಲವೆಂದು ಮನೆಯನ್ನು, ಕಾರನ್ನು ಮುಟ್ಟುಗೋಲು ಹಾಕಿಕೊಳ್ಳಲು ಬ್ಯಾಂಕಿನವರು ಬಂದಾಗ ಆಶ್ಚರ್ಯವೆಂಬಂತೆ ತಾನೇ ಮುಂದೆ ನಿಂತು ಅವನ್ನೆಲ್ಲಾ ಅವರಿಗೆ ಬಿಟ್ಟುಕೊಟ್ಟ. ಅಡ್ಡಬಂದ ಹೆಂಡತಿಗೆ, ಇಲ್ಲಿಗೆ ಬರುವಾಗ ಏನನ್ನೂ ತಂದಿರಲಿಲ್ಲ, ಹೋಗುವಾಗಲೂ ಏನನ್ನೂ ತೆಗೆದುಕೊಂಡು ಹೋಗುವುದಿಲ್ಲ.. ಏನನ್ನಾದರೂ ಗಳಿಸಿದ್ದರೆ ಅದು ಇಲ್ಲಿಯೇ, ಏನನ್ನಾದರೂ ಕಳೆದುಕೊಂಡರೂ ಅದು ಇಲ್ಲಿಯೇ.. ಎಂದು ಭಗವದ್ಗೀತೆಯ ಉಪದೇಶ ಮಾಡಿದ. ಆದರೆ ಈಗಾಗಲೇ ಕಟ್ಟಿರುವ ಕಂತಿನ ವ್ಯತ್ಯಾಸದ ಮೊತ್ತವನ್ನಾದರೂ ಹಿಂದಿರುಗಿಸುವಂತೆ ಬ್ಯಾಂಕಿನವರೊಂದಿಗೆ ಜಗಳ ಮಾಡಿ ಆಕೆ ಒಪ್ಪಿಸಿಕೊಂಡಳು.

***

ಗಾಂಧಿಜಯಂತಿಯ ದಿನ ಗಾಂಧೀಭವನದ ಸಭಾಭವನದಲ್ಲಿ ಖಾದಿ ಅಂಗಿ ತೊಟ್ಟು ಬಂದ ಯುವಕನನ್ನು ಕಂಡು ಎಲ್ಲರೂ ಆಶ್ಚರ್ಯಚಕಿತರಾದರು. ಅಲ್ಲೆಲ್ಲಾ ಗಾಂಧಿಯ ಒಡನಾಟದಲ್ಲಿದ್ದ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಿದ್ದರು. ಅವರೆಲ್ಲರ ವಯಸ್ಸು ಕನಿಷ್ಟ ಎಪ್ಪತ್ತೈದನ್ನು ಮೀರಿತ್ತು. ಆದರೆ ಗಾಂಧಿ ಸತ್ತು ಮುವತ್ತು ವರ್ಷ ಆದಮೇಲೆ ಹುಟ್ಟಿರಬಹುದಾದ ಏಕೈಕ ಯುವಕ ಇವತ್ತು ತಮ್ಮ ಕಾರ್ಯಕ್ರಮಕ್ಕೆ ಬಂದಿದ್ದು ತುಂಬಾ ಖುಷಿಯಾಗಿದೆ ಎನ್ನುತ್ತಾ, ಎಲ್ಲರೂ ತಮ್ಮ ಹಳೆಯಕಾಲದ ನೆನಪಿನ ಬುತ್ತಿಯನ್ನು ಬಿಚ್ಚಿ, ಬೇಡಬೇಡವೆಂದರೂ ಒತ್ತಾಯಪೂರ್ವಕವಾಗಿ ತುರುಕುತ್ತಾ ಬೋರು ಹೊಡೆಸುತ್ತಿದ್ದರು.
ರೋಸಿಹೋದ ಅರುಣ್‌ಗಾಂಧಿ ಎದ್ದುನಿಂತ. ನಿಜವಾಗಲೂ ಗಾಂಧಿಯನ್ನು ಕೊಂದದ್ದು ನೀವೇ ಎಂದು ನೇರ ಆರೋಪ ಮಾಡಿದ. ಗಾಬರಿಗೊಂಡ ಅವರೆಲ್ಲ ಈತ ಯಾವುದಾದರೂ ಸಂಘದ್ದೋ ಪರಿವಾರದ್ದೋ ಕಟ್ಟಾಬೆಂಬಲಿಗನೇ ಇರಬೇಕೆಂದು ಒಂದು ಕ್ಷಣ ಹೌಹಾರಿದರು.

'ಗಾಂಧಿ ನೀವು ತಿಳಿದಂತೆ ಹುಟ್ಟುತ್ತಲೇ ಬಹಳ ದೊಡ್ಡ ವ್ಯಕ್ತಿಯೇನಾಗಿರಲಿಲ್ಲ.. ಆದರೆ ಸಂದರ್ಭ ಅವರನ್ನು ದೊಡ್ಡವರನ್ನಾಗಿ ಮಾಡಿತು. ಅವತ್ತು ಭಾರತಕ್ಕೆ ಸ್ವಾತಂತ್ರ್ಯದ ದರ್ದು ಇರದಿದ್ದರೆ ಗಾಂಧಿ ಕೇವಲ ಒಬ್ಬ ಒಳ್ಳೆಯ ಲಾಯರ್ ಆಗಿದ್ದುಕೊಂಡು ಸತ್ತುಹೋಗಿರುತ್ತಿದ್ದರು. ಅಷ್ಟೇ.. ನಿಮಗೆ ಯಾರಿಗೂ ಗಾಂಧಿ ಅರ್ಥವೇ ಆಗಿಲ್ಲ. ನೀವು ಯಾರೂ ಗಾಂಧಿಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿಯೂ ಇಲ್ಲ..' ಎಂದು ಮಾತು ಆರಂಭಿಸಿದವನು ತನಗೇ ಅರಿವಿಲ್ಲದೇ ಮೈಮರೆತು ಮಾತನಾಡಿಬಿಟ್ಟ. 'ಗಾಂಧಿ ಇಡೀ ರಾಷ್ಟ್ರವನ್ನು, ರಾಷ್ಟ್ರದ ಭವಿಷ್ಯವನ್ನು ಕಣ್ಣಮುಂದೆ ಇಟ್ಟುಕೊಂಡಿದ್ದರು. ಹಾಗೆ ಸಮಗ್ರವಾಗಿ ನೋಡಿದಾಗ ಮಾತ್ರ ಒಂದು ಸ್ಪಷ್ಟ ಚಿತ್ರಣ ಸಿಗಲು ಸಾಧ್ಯ. ಇನ್ನೂರೈವತ್ತು ವರ್ಷಗಳ ಹಿಂದೆಯೇ ಹುಟ್ಟಿದ ಅಮೆರಿಕಾದಂತಹ ರಾಷ್ಟ್ರವೊಂದು ಒಂದೇ ಒಂದು ಆರ್ಥಿಕ ಹಿಂಜರಿತವನ್ನು ತಡೆದುಕೊಳ್ಳಲು ಸಾಧ್ಯವಾಗದೇ ಪರದಾಡುತ್ತಿರುವಾಗ, ಭಾರತಕ್ಕೆ ಅದರ ಬಿಸಿಯೇ ತಟ್ಟಿಲ್ಲವೆಂದರೆ ಅದು ಗಾಂಧೀಜಿಯವರ ದೂರದೃಷ್ಟಿಯಿಂದ ಮಾತ್ರ ಸಾಧ್ಯವಾದದ್ದು.. ಈವತ್ತು ನಾವು ನಮ್ಮ ಮೇಲೆ ಅವಲಂಬಿತರಾಗಿದ್ದೇವೆ, ಆದರೆ ಇತರರು ಇನ್ನಿತರರ ಮೇಲೆ ಅವಲಂಬಿತರಾಗಿದ್ದಾರೆ. ಅಷ್ಟೇ..

'ಇದುವರೆಗೆ ನಾನೂ ಇನ್ನೊಬ್ಬರ ಮೇಲೆ ಅವಲಂಬಿತನಾಗಿ ಫ್ಲಾಟು, ಕಾರು ಎಲ್ಲವನ್ನೂ ಮಾಡಿಕೊಂಡಿದ್ದು ನಿಜ. ಆದರೆ ನಾನು ನಂಬಿದ್ದ ಒಂದು ಸಣ್ಣ ಕೆಲಸ ಕೈತಪ್ಪುತ್ತಿದ್ದಂತೆಯೇ ನನ್ನದಾಗಿದ್ದ ಎಲ್ಲವೂ ನನ್ನದಾಗಲಿಲ್ಲ. ನಾನು ಸಾಲವನ್ನು ತೀರಿಸಲಾಗದಿದ್ದರಿಂದ, ಬ್ಯಾಂಕಿನ ಹೆಸರಿನಲ್ಲಿದ್ದ ಎಲ್ಲವೂ ಅವರ ಪಾಲಾಯಿತು. ನಾನು ಎಂಬುವ ನಾನು ನನ್ನ ಮೇಲೆ ಅವಲಂಬಿತನಾಗಿದ್ದರೆ ಹೀಗಾಗುತ್ತಿತ್ತೆ? ಇದು ಒಂದು ಸಣ್ಣ ಉದಾರಹಣೆಯಷ್ಟೇ..

'ಹೀಗಾಗಿ ಗಾಂಧಿ ನನಗೆ ಕೇವಲ ಒಬ್ಬ ಸ್ವಾತಂತ್ರ್ಯ ಹೋರಾಟಗಾರನಾಗಿ, ಒಬ್ಬ ರಾಜಕಾರಿಣಿಯಾಗಿ ಮಾತ್ರ ಕಾಣುತ್ತಿಲ್ಲ.. ಬದಲಾಗಿ ಒಬ್ಬ ಅರ್ಥಶಾಸ್ತ್ರಜ್ಞನಂತೆ ಕಾಣುತ್ತಿದ್ದಾನೆ.. ಒಬ್ಬ ಸಮಾಜಶಾಸ್ತ್ರಜ್ಞನಂತೆ ಕಾಣುತ್ತಿದ್ದಾನೆ.. ಹೀಗೇ.. ಏನೆಲ್ಲ ಆಗಿ ಕಾಣುತ್ತಿದ್ದಾನೆ..

'ಒಂದೇ ಗೆರೆಯಲ್ಲಿ ಗಾಂಧಿಯನ್ನು ಬರೆಯಿರಿ ಎಂದರೆ ಕಲಾವಿದರು ಒಂದು ಕ್ವೆಶ್ಚನ್‌ಮಾರ್ಕ್ ಬರೆದುಬಿಡುತ್ತಾರೆ.. ನಿಜವಾಗಿಯೂ ಗಾಂಧಿ ಪ್ರಶ್ನಾರ್ಥಕ ಚಿಹ್ನೆಯೇ! ಆದರೆ ಬರೀ ಪ್ರಶ್ನೆಯಾಗಿ ಮಾತ್ರ ಉಳಿದುಬಿಡುವುದಿಲ್ಲ... ಬದಲಾಗಿ ಎಲ್ಲರಿಗೂ, ಎಲ್ಲದಕ್ಕೂ ಉತ್ತರವಾಗಿಯೂ ಕಾಣಲಾರಂಭಿಸುತ್ತಾರೆ.. ಕಾಡಲಾರಂಭಿಸುತ್ತಾರೆ.. ಅದೇ ಅವರ ಶಕ್ತಿ...' ಎಂದು ಭಾಷಣ ಮಾಡಿ ಕುಳಿತ.
ಗಾಂಧಿಯನ್ನು ಮುಂದುವರೆಸಿಕೊಂಡು ಹೋಗಲು ಪರ್ಯಾಯ ಸಿಕ್ಕಂತಹ ಧನ್ಯತಾಭಾವ ವಯೋವೃದ್ಧರ ಮುಖದಲ್ಲೆಲ್ಲ ಕುಣಿಯಲಾರಂಭಿಸಿತು!
                    *****
(ಮುಗಿಯಿತು)

ಪಾದ ಪೂಜೆಯಾದುದೇನಿದು ಪ್ರಭುವರನ ಕಾಣದೆ

-ಶಿಶುನಾಳ ಶರೀಫ್

ಪಾದ ಪೂಜೆಯಾದುದೇನಿದು
ಪ್ರಭುವರನ ಕಾಣದೆ                                                             || ಪ ||

ಮೇಧಿನಿಯೊಳು ಸಂಶಿಯ ಜನ
ವಿನೋದದಿಂದು ಮಾಡಿದಂಥಾ                                               || ಅ. ಪ. ||

ಧರಿಗೆ ಸಂಶಿ ಮರೆವ ಮೋಜಿನ ಪರಿ
ಬ್ಯಾರೆ ಪ್ಯಾಕಿ ಮಳಗಿ ಸಾಲ್ಗಳೆರದು ಬಾಜಿನ
ನೆರೆ ಶುಭದಿ ಅದರೊಳಗಿರುವರೈ ಆನೇಕ-
ತರ ಜನ ಸರಿಗಾಣೆ ನಾ
ಪಿರಿದು ಕಾಂಬುದುದೀಗ ಬಾಗ್ಯ
ಸಿರಿಗೆ ಸಿಲ್ಕಿ ಶಿವನ ಚರಣ
ಮರೆತು ಮಾಯೆಯೊಳಿರಲು ಪುರಕೆ
ಪರಮಗುರು ನಿರಾಲ ಬಾರದೆ                                                  ||೧||

ಭೂಮಿಯೊಳು ನಿಸ್ಸೀಮಪ್ರೌಢರು ಈ
ಗ್ರಾಮದೊಳು ಧಾಮ ಶಾನುಭೋಗ ಗೌಡರು ಬಹು
ನಾಮವಿಡಿದು ಪಣಿ ಜನರು ಸು-
ಪ್ರೇಮ ರೈತರು ಸಮಸ್ತರು
ಕಾಮಿತಾರ್ಥ ಫಲವ ಬೇಡಿ
ನೇಮ ಹಿಡಿದು ನಿಜಕೆ ನಿಲುಕುತೆ
ಎಮಗೆ ವಿಚಿತ್ತ ಗಣಸಮೂಹ ನೆರಪಿ ಸ್ವಾಮಿ ಇಲ್ಲದೆ                      ||೨||

ಜಗದೊಳಗಿದು ಮಿಗಿಲುವಾಗಿರೆ
ಈಗಳಿದು ಇಂದ್ರನಗರ ಪೊಲ್ವ್ಶೋಭನಾಗಿರೆ
ಬಗೆವಡಿದು ಸೌಖ್ಯ ಸೊಗಸಿನಿಂದ
ನಗುವಳಿಂದಕಿ ಹೀಗಿರುತಿರೆ
ಪೊಗಲ್ವನಂತಸ್ಥಲವ ಕಂಡನಂತಾಪುರದ ಒಡಿಯರುಗಳು
ನೆಗಪಿಸಿದ ಪುರಾತ ಶಿವಗೆ
ಅಘಹರನಂ ಸಿಗದ ಬಳಿಕ                                                      ||೩||

ಊರ ಹೊರಗೆ ಉತ್ರ ದಿಸೆಯೊಳು ನಿರ್ಮಿಸಿದ ಮೂಲ
ಚಾರುತರದ ಚೌಕಬಾಗಿಲೊಳು ಈರೈದುದ್ವಾರ
ಸಾರುಗಟ್ಟಿದ ಮಂಟಪಗಳೊಳ್ ನಿರ್ಬಯಲಿನಲ್ಲಿ
ಆರು ಮೂರು ಹಾದಿ ಮೀರಿ ವೀರಸಿಂಹಾಸನವನೇರಿ
ಮಾರಹರನ ಮಂತ್ರಜಪಿಸಿ ಮಾಯಾಭಂಗ ಮಾಡೋತನಕಾ         ||೪||

ಮಂಡಲಾಗ್ರ ಮಧ್ಯನಾಡಿನೊಳ್ ಮಾಡಿಸಿದಮೋಹ
ಖಂಡಿಗನ್ನ ದಾನ ವಸ್ತ್ರಗಳ್ ಕೊಂಡಿಟ್ಟು ಚೌಕು
ಭಾಂಡ ಜೀನಸನ್ನು ಬಟ್ಟಲೊಳು ಕೊಡುತ್ತಿರಲು ಕೇಳಿ
ಉಂಡು ಉಣ್ಣಲಾರದೆ ಜಂಗಮರ್‍ಹಿಂಡುಗಟ್ಟಿ ತಿರುರುಗುತಿರ್ದ
ಪುಂಡಶಿಶುನಾಳಧೀಶನ ಕಂಡು ಕೈಮುಗಿಯುವತನಕಾ                 ||೫||

              ****

ಕೀಲಿಕರಣ: ಎಂ.ಎನ್.ಎಸ್. ರಾವ್

ತೋಟವ ನೋಡಿರಯ್ಯಾ

-ಶಿಶುನಾಳ ಶರೀಫ್

ತೋಟವ ನೋಡಿರಯ್ಯಾ ಸದ್ಗುರುವಿನ
ಆಟವ ನೋಡಿರಯ್ಯಾ                                     || ಪ ||

ನೀಟಗೂಡಿ ನಿಜ ಬ್ರಹ್ಮಜ್ಞಾನದಿ
ಕೋಟಿ ಕರ್ಮ ಸಂಹರ್ಸಿದ ಧರ್ಮವ                  ||ಅ.ಪ.|| 

ಬೈಲೋಳು ಬೈಲಾಗಿ ಕವಲಿಲ್ಲದ
ಮೂಲ ಸಹಿತವಾಗಿ
ಜೋಲುವ ಫಲಗಳು ಗಾಳಿಗೆ ಒಲಿಯಲು
ಸಾಲು ಸಾಲಿನ ಮೇಲೆನಿಸುವವರ                      ||೧||

ಭೂಮಿಯೊಳಧಿಕವಾದ ಎಲವಿಗಿಯೆಂಬ
ನಾಮದಿಂದಿಹ ಗ್ರಾಮದಾ
ರಾಮಜೋಗಿಯು ತಾನು ಪ್ರೇಮದಿ ಬೆಳಸಿದ
ಕೋಮಲ ವನದೋಳು ರಾಮನು ನೆಲಸಿದ          ||೨||

ಆಡಿಕಿ ತೆಂಗಿನ ಫಲವು
ಬಳಿಕ್ಯಾಡುವ ಬಾಳೀದಿಂಡಿನ ಛಲವೂ
ಕಡಿಕಿನಿಂ ಶಿಶುನಾಳ ಒಡಿಯ ನಿರ್ಮಿಸಿದಂಥಾ
ಆದಿಪ್ರಾಸ ಹೊಂದಿದ ಕಡು ಚಲ್ವ ಪದವೆಂಬ         ||೩||

              ****

ಕೀಲಿಕರಣ: ಎಂ.ಎನ್.ಎಸ್. ರಾವ್

ಎರಗಿ ಬಿನ್ನಾ ಮಾಡದ್ಹೋದರು

-ಶಿಶುನಾಳ ಶರೀಫ್

ಎರಗಿ ಬಿನ್ನಾ ಮಾಡದ್ಹೋದರು
ಗುರುವರನ ಗಣರಿಗೆರಗಿ             
ಬಿನ್ನಾವ್ವ ಮಾಡದ್ಹೋದರು
ನರಗುರಿಗಳು ಪರಿಹಾಸ್ಯದಿ
ಜರಿದರು ಎನ್ನ ಕರೆಸಿದರೈ
ಹರನ ಶಾಸ್ತ್ರಕೆ ವರಪ್ರಸ್ತಕೆ
ಮರಿತರು ನಿಮಗರಿಕಿರಲೈ                  ||ಪ||


ಹಿಂದಕೊಮ್ಮೆ ಪ್ರಥಮರೊಡನೆ
ದ್ವಂದ್ವ ಬಯಸಿ ರೇಚಿತಂದೆ
ಒಂದು ಕರಿಯ ಎಲಿಯ ಕೊಟ್ಟ
ಇಂದು ಪಥಕೆ ಮುಟ್ಟಲಿಲ್ಲಾ
ಆಂದಿನ ಕಥೆ ಇಂದರಿಯದೆ
ಬಂಧನಕ್ಕೊಳಗಾಗುವರೆ
ಕುಂದಿಟ್ಟರು ನಿಂದಿಸುತಲಿ
ಮಂದಾತಮರು ಮಹಾಗರ್ವದಿ               ||೧||

ನಿಷ್ಟಿ ಹಿಡಿದು ನಿಜಗ ನಿಲ್ಲದೆ
ಇಷ್ಟಲಿಂಗದ ಆರವು ಇಲ್ಲದೆ
ಶ್ರೇಷ್ಟ ಭಲಾ ಶಿವ ಜಂಗಮ-
ರಿಷ್ಟು ಬಳಲಿಸಿರುವರಿವರು
ಕೆಟ್ಟರು ಕುಚೇಷ್ಟರು
ಬ್ರಷ್ಟರು ಮಹಾಗರ್ವಿಷ್ಟರು
ತಟ್ಟಲೀ ಪಾಪ ಆವರಿಗೆ
ಕುಟ್ಟಲೀ ಶಿವಾ ಕುಟ್ಟಲೀಗ                      ||೨||

ಪೃಥ್ವಿಪಾಲ ಶಿಶುವಿನಾಳ
ಸತ್ಯಶರಣ ಸಖನ
ಕೃತ್ಯ ಕಪತ ಬಯಸಿದವರು
ಕತ್ತಿ ಜನ್ಮಕೆ ಹೋಗುತಿಹರು ಚಿತ್ತೈಸಿರಿ
ಅರ್ತಿಯಲಿ ಚಿತ್ತೈಸಿರಿ ಇದನರಿತು
ಮತೆ ಕಳಸ ಗ್ರಾಮಕೆ
ಪ್ರಸ್ತವಾಯಿತೋ ಭಕ್ತಿಯಲಿ                    ||೩||
                ****

ಕೀಲಿಕರಣ: ಎಂ.ಎನ್.ಎಸ್. ರಾವ್

ಬಾರದಿರುವೆರೇನೇ ಭಾಮಿನಿ

-ಶಿಶುನಾಳ ಶರೀಫ್

ಬಾರದಿರುವರೇನೇ ಭಾಮಿನಿ
ಬಾರದಿರುವರೇನೇ                                 ||ಪ||

ಬಾರದಿರುವ ಕಾರಣವೇನಲೆ ಸಖಿ
ದೂರದಿಂದ ಮುಖ ತೋರಿ ಸಮಯದಿ       ||ಅ.ಪ. ||

ನಂಬದವನ ಕೂಡ ಭಾಮಿನಿ
ಸಂಭ್ರಮಿಸುವದು ಬ್ಯಾಡ ನೋಡ
ಆಂಬುಜಾಕ್ಷಿಯೇ ಕಂಬುಕಂದರಿಯೇ
ಹಂಬಲಿಸುತ ನಿನ್ನ ಬೆಂಬತ್ತಿ ನಾ                ||೧||

ಕುಸುಮಲೋಚನೆ ಕೇಳೇ ವಿಷಯದ
ಕಸವನು ಕಳದವಳೆ ಭಾಮಿನಿ
ವಸುಧಿಯೊಳಂ ಶಿಶುನಾಳಧೀಶನ
ಆಸಮಸದ್ಗುರು ಗೋವಿಂದನಾಲಯ          ||೨||

                ****

ಕೀಲಿಕರಣ: ಎಂ.ಎನ್.ಎಸ್. ರಾವ್

ಬಾರೇ ನೀರೆ ತೋರೇ ಮುಖ

-ಶಿಶುನಾಳ ಶರೀಫ್

ಬಾರೇ ನೀರೆ ತೋರೇ ಮುಖ ವಾರಿಗ್ಯಾಕೆ ನಿಂತೆ
ದೂರ ಹೋದಳೆಂದು ನಾ ದಾರಿ ನೋಡುತ ಕುಂತೆ        ||ಪ||

ಆರಮುಂದೆ ಹೇಳಿದರೆ ತೀರದೀ ಮಾತು
ಊರಮಂದಿ ಅರಿಯರು ನಮ್ಮ ನಿಮ್ಮ ಗೊತ್ತು
ಬರತೀನಂತಾ ಹೇಳಿಹೋದೆಲ್ಲೆ ಮರೆತು ಮನ
ಕಲ್ಲು ಮಾಡಿದರೇನು ಬಂತು                                     || ಆ. ಪ.||

ಸಣ್ಣಾಕಿ ಇರುತಾ ನಾವು ನೀವು ಜತ್ತು
ಕಣ್ಣಿಟ್ಟು ಕಾಡುವುದೇನಿದು ಮಾತು
ಹುಣ್ಣವಿ ದಿವಸ ಆಮವಾಸಿ ಬಂತು
ಹಣ್ಣಾಗಿ ಉದರುವ ಬಳ್ಳಿ ಹಬ್ಬಿತ್ತು
ಇನ್ನ್ಯಾಕ ಕರುಣಾಗುಣವು ಇರಲಿ ಸ್ಥೂಲದ
ಹರವಿ ಸುಖದಲಿ ಹೊತ್ತು                                              ||೧||

ವಸುಧಿಯೊಳು ಶಿಶುನಾಳಧೀಶನ ಹೊರತು
ಮುಸುಕು ತೆಗೆದು ನೋಡೆ ಮಾಯೆ ಬಲವಾಯ್ತು
ಹಸನಾದ ಹಾಲಿನ ಕೆನಿಯು ನೀರಾಯ್ತು
ವ್ಯಸನವೆಂಬೊ ಮಜ್ಜಿಗಿ ಹುಳಿಯಾಯ್ತು
ದೆಸೆ ದೆಸೆಗಳಗೆ ಆಕ್ಷತೆ ಇಟ್ಟು ಮೋಹವ
ತೊಟ್ಟು ಬಂದೆ ನಾ ಸೋತು                                         ||೨||                  

                ****

ಕೀಲಿಕರಣ: ಎಂ.ಎನ್.ಎಸ್. ರಾವ್

ಇದು ಏನು ಸೋಜಿಗವೇ ಮಾನಿನಿಯಾಗಿ


-ಶಿಶುನಾಳ ಶರೀಫ್

ಇದು ಏನು ಸೋಜಿಗವೇ ಮಾನಿನಿಯಾಗಿ
ಇದು ಏನು ಸೋಜಿಗವೇ                            ||ಪ.||

ಕಲ್ಲಿನೊಳಗೆ ಮುಳ್ಳು
ಮುಳ್ಳಿನೊಳಗೆ ಜೊಳ್ಳು
ಎಳ್ಳು ಕೋಲಿಯ ಕದ್ದು
ಕಳ್ಳ ಕಾಡಿನೊಳೋದ್ದ್ದೇನು ಸೋಜಿಗವೇ       ||೧||

ಹಕ್ಕರಕಿಯ ಗಿಡವನೇರಿ ಹಾವಿನ ಹುತ್ತಾ
ಹೊಕ್ಕಾ ಮುಂದಕ್ಕೆ ಸಾರಿ
ಮುಕ್ಕರಿಸುತಾ ಬಿದ್ದು
ಅಕ್ಕನ ಸೋಬತೊ ಮಾಡಿ ಮೂರು
ಮಕ್ಕಳ್ಹಡದು ಮೈನೆರದ್ದೇನು ಸೋಜಿಗವೇ     ||೨||

ಹೇಸಿ ಮನಿಗೆ ಹೋಗಿ ನಿನಗೆ ಬಹು-
ಲೇಸಾಗೆಂದು ಕೂಡಿ
ಕಾಸಿನ ತೂಕದ ಕಡಲಿ ತಂದು
ಭಾಸುರ ಶಿಶುನಾಳಧೀಶನೊಲಿಸಿ
ನಾಗವಿಲ್ಲದ ಮುಕ್ತಿ ಪಡದದ್ದೇನು ಸೋಜಿಗವೇ  ||೩||
                ****

ಕೀಲಿಕರಣ: ಎಂ.ಎನ್.ಎಸ್. ರಾವ್

ಬಯಸಿದಕೆ ಮೋಹಿಸದಿರುವಂಥಾದ್ದೇನೇ ಭಾಮಿನಿ

-ಶಿಶುನಾಳ ಶರೀಫ್

ಬಯಸಿದಕೆ ಮೋಹಿಸದಿರುವಂಥಾದ್ದೇನೇ ಭಾಮಿನಿ
ಹೇ ಸಾಮಜಗಾಮಿನಿ ಇರುವಂಥಾದ್ದೇನೇ ಭಾಮಿನಿ                            || ಪ ||

ಬಾಳ ದಿವಸಾಯ್ತು ನಿಮ್ಮ್ನ್ನು ಕೇಳಿ ಕೀಳಿ ದಣಿದೆ ನೊಂದೆ
ಗಾಳಿ ವಂಂಟಪದೊಳಗೆ ಕೂಡಿ ಹೇಳಿದ ನುಡಿ ಆಳಾಪವಾಯ್ತು             || ೧ ||

ಚಲುವೆ ಅನಿಮಿಷಾಗ್ರ ಕೊನಿಗೆ ಸುಳಿದರೊಂದು ಘಳಿಗೆಯೊಳಗೆ
ತಿಳಿದು ನೋಡಿದೆ ಲಲನಾಮಣಿಯೇ ಹೋಳಿದು ಹೋದರೋಳಿತೇ ನೀರ  || ೨ ||

ಶಿಶುವಿನಾಳಧೀಶನೊಸಗೆಯೊಳಿರುವ ಕುಶಲವಂತೆ
ಹೊಸತು ಮಾಯಾ ಹರಿಸಿ ನಿಂದು ನಿಶಿತಾತ್ಮಕಿರಣಬಿಂದು                    || ೩ ||
                ****

ಕೀಲಿಕರಣ: ಎಂ.ಎನ್.ಎಸ್. ರಾವ್

ಮರುಳಾದೆ ಮಾನಿನಿ

-ಶಿಶುನಾಳ ಶರೀಫ್

ಮರುಳಾದೆ ಮಾನಿನಿ ಮರುಳಾದೆ
ಮಾರನಾಟದಿ ಮನಸ್ಸುಗೊಂಡೆನೇ                                || ಪ ||

ತರುಳರನ್ನು ನೀನು ಕಾಣುತ ಸ್ಮರನ
ಸರಳ ನಟ್ಟು ವರದಿ ಮರಗಿಸುವದು ರೀತಿಯೇನೇ
ಸರಸಿಜಾಕ್ಷಿ ಕರುಣಿಸು                                                 || ೧ ||

ಸುಂದರಾಂಗಿ ಚಂದ್ರವದನೆ
ಮಂದಗಮನೆ ಹೊಂದಿ ಸುಖಿಸೆ
ಎಂದಿಗಾದರು ಆಗಲದಂಥ ಒಂದು ವಚನ ಲಾಲಿಸೈ           || ೨ ||

ಇಳೆಯೊಳಧಿಕ ಶಿಶುನಾಳ ಭಲರೆ ಗುರುಗೋವಿದನೊಡನೆ
ಕಲಶ ಕುಚವು ಕೈಯೊಳು ಪಿಡಿದು
ತಿಳಿಸಿ ಬೋಧಿಸೇ ಲಲನೆ                                              || ೩ ||
                 ****

ಕೀಲಿಕರಣ: ಎಂ.ಎನ್.ಎಸ್. ರಾವ್

ಏನಾಯ್ತೇ ಮಾನಿನಿ

-ಶಿಶುನಾಳ ಶರೀಫ್

ಏನಾಯ್ತೇ ಮಾನಿನಿ
ಏನಾಯ್ತೇ ಮಾನಿನಿ                               || ಪ. ||

ಭಾನು ಕಿರಣ ಕಾಣಿಸುವ ಪ್ರಕಾಶವು
ಜ್ಞನದೋಳಗೆ ಶುಭ ತಾನೇ ತಾನೆ            || ಅ. ಪ. ||

ನಿನ್ನ ಮಾರಿ ನೋಡಿದರೆ
ಘನ ಸರಿ ಕೂಡಿದೆ
ಹೀನ ವಿಷಯ ಸಂಹರಿಸುವದಕೆ
ಅನುಮಾನವ್ಯಾಕೆ ವನಜಾಕ್ಷಿಮಣಿಯೇ       || ೧ ||

ಶಿಶುನಾಳಧಿಶನು
ಅಸಮಾಕ್ಷನೀತನು
ಕುಸುಮಗಾತ್ರೆಯನ್ನಸುವ ತೋರದೆ
ಹಸನವಲ್ಲ ಕೋಸರಾಡುವದಿದು               || ೨ ||
                 ****

ಕೀಲಿಕರಣ: ಎಂ.ಎನ್.ಎಸ್. ರಾವ್

ದಯಮಾಡಬೇಕೇ ಮಾನಿನಿಯೆ

-ಶಿಶುನಾಳ ಶರೀಫ್

ದಯಮಾಡಬೇಕೇ ಮಾನಿನಿಯೆ
ಮೋಹದ ಮನಗೋನಿಯೇ                                             ||ಪ.||

ವನಜಾನನೆ ಬಾಳ ದಿನ ಮನಸೋತೆನು
ಕನಕರಿಸುತಲಿರುವೆನು ಕನಕದ ಗಿರಿಜಾನಿಯೆ                      ||೧||

ಚಂದ್ರವದನೇ ಬಾ ಇಂದ್ರಲೋಕದ ರಂಭೆ
ಎಂದಿಗಾದರೂ ಇಂಥಾ ಗುಣವೇನಂದಪುರುಪನ ಖಣಿಯೇ     ||೨||

ವಸುಧಿಯೋಳ್ ಶಿಶುನಾಳಧೀಶನ ಸೇವಕನೋಳು ಮನ
ತುಸು ಕರುಣವಿರಲಿ ಕಾಮಿನಿಯೇ ಕುಸುಮಾಸ್ತ್ರನ ಖಣಿಯೇ    ||೩||
                 ****

ಕೀಲಿಕರಣ: ಎಂ.ಎನ್.ಎಸ್. ರಾವ್

ಎಲ್ಲರಂಥವನಲ್ಲ ನನ ಗಂಡ

-ಶಿಶುನಾಳ ಶರೀಫ್

ಎಲ್ಲರಂಥವನಲ್ಲ ನನ ಗಂಡ
ಬಲ್ಲಿದನು ಪುಂಡ
ಎಲ್ಲರಂಥವನಲ್ಲ ನನ ಗಂಡ         || ಪ ||

ಸೊಲ್ಲು ಸೊಲ್ಲಿಗೆ ಬಯ್ದು ನನ್ನ
ಎಲ್ಲಿಗೋಗದ್ಹಾಂಗ ಮಾಡಿಟ್ಟಾ
ಕಾಲ್ಮುರಿದು ಬಿಟ್ಟಾ                   || ಅ.ಪ ||

ಮಾತಾಪಿತರು ಮನೆಯೊಳಿರುತಿರಲು
ಮನಸೋತು ಮೂವರು
ಪ್ರೀತಿಗೆಳೆತನ ಮಾತಿನೊಳಿರುತಿರಲು
ಮೈನೆರೆತು ಮಾಯದಿ
ಘಾತವಾಯಿತು ಯವ್ವನವು ಬರಲು
ಹಿಂಗಾಗುತಿರಲು
ದೂತೆ ಕೇಳ್ನಿಮ್ಮವರು ಶೋಭನ
ರೀತಿಚಾರವನೆಲ್ಲ ತೀರಿಸಿ
ಆತನೊಳು ಮೈಹೊಂದಿಕೆಯ ಮಾಡಿ
ಮಮತೆಯಲ್ಲಿ ಕೂಡಿ                  || ೧ ||

ಅಕ್ಕತಂಗಿಯರಾರು ಮಂದಿಗಳಾ
ಅಗಲಿಸಿದನೈವರ
ಕಕ್ಕುಲಾತಿಯ ಅಣ್ಣತಮ್ಮಗಳಾ
ನೆದರೆತ್ತಿ ಮ್ಯಾಲಕ
ನೋಡಗೊಡದೇ ಹತ್ತು ದಿಕ್ಕುಗಳಾ
ಮಾಡಿದನೆ ಮರುಳಾ
ತೆಕ್ಕೆಯೊಳು ಬಿಗಿದಪ್ಪಿ ಸುರತಾ-
ನಂದಸುಖ ತಾಂಬೂಲ ರಸಗುಟ-
ಗಿಕ್ಕಿ ಅಕ್ಕರತಿಯಲಿ ನಗುವನು ತಾ
ಬಹು ಸುಗುಣನೀತಾ                 || ೨ ||

ತುಂಟ ಸವತಿಯ ಸೊಂಟಮುರಿ ಹೊಡೆದಾ
ಒಣ ಪಂಟಮಾತಿನ
ಗಂಟಗಳ್ಳರ ಮನೆಗೆ ಬರಗೊಡದಾ
ಹದಿನೆಂಟು ಮಂದಿ
ಕುಂಟಲಿಯರ ಹಾದಿಯನು ಕಡಿದಾ
ಎನ್ನ ಕರವ ಪಿಡಿದಾ
ಕುಂಟಕುರುಡಾರೆಂಟು ಮಂದಿ
ಗಂಟುಬಿದ್ದರೆ ಅವರ ಕಾಣುತ
ಗಂಟಲಕೆ ಗಾಣಾದನೇಳಕ್ಕಾ
ತಕ್ಕವನೇ ಸಿಕ್ಕಾ                    || ೩ ||

ಅತ್ತೆಮಾವರ ಮನೆಯ ಬಿಡಿಸಿದನೇ
ಮತ್ತೆಲ್ಲಿ ಮೂವರ
ಮಕ್ಕಳೈವರು ಮಮತೆಯ ಕೆಡಿಸಿದನೇ
ಎನ್ನನ್ನು ತಂದು
ರತ್ನಜ್ಯೋತಿಯ ಪ್ರಭೆಯೊಳಿರಿಸಿದನೇ
ಎನಗೊತ್ತಿನವನು
ಎತ್ತ ಹೋಗದೆ ಚಿತ್ತವಗಲದೆ
ಗೊತ್ತಿನಲ್ಲಿ ಇಟ್ಟು ಎನ್ನನು
ಮುತ್ತಿನಾ ಮೂಗುತಿಯ ಕೊಟ್ಟಾನೇ
ಅವನೇನು ದಿಟ್ಟನೇ                || ೪ ||

ಕಾಂತೆ ಕೇಳೆ ಕರುಣ ಗುಣದಿಂದ
ಎನಗಿಂಥ ಪುರುಷನು
ಬಂದು ದೊರಕಿದ ಪುಣ್ಯಫಲದಿಂದಾ
ಎನ್ನಂತರಂಗದ
ಕಾಂತ ಶ್ರೀ ಗುರುನಾಥ ಗೋವಿಂದಾ
ಶಿಶುನಾಳದಿಂದ
ಕಾಂತೆ ಬಾರೆಂತೆಂದು ಕರೆದೇ-
ಕಾಂತ ಮಂದಿರದೊಳಗೆ ಒಯ್ದು
ಭ್ರಾಂತಿ ಭವ ದುರಿತವನು ಪರಿಹರಿಸಿ
ಚಿಂತೆಯನು ಮರಸಿ                || ೫ ||
        ***


ಕೀಲಿಕರಣ: ಕಿಶೋರ್‍ ಚಂದ್ರ

ನಿನಗೇನಾತ ಸಖಿ

-ಶಿಶುನಾಳ ಶರೀಫ್

ನಿನ್ನವನು ನಾ
ನಿನಗೇನಾತ ಸಖಿ                  ||ಪ||

ಆನುಮಾನವಿಲ್ಲದೆ
ಆತ್ಮನ ಸವಿಸುಖ
ಚಿನುಮಯನಾಶ್ರಯಕೆ
ಆನುಮೋದಿಸು ವಿಭಾ
ನಿನಗೇನಾತ ಸಖಿ                  ||೧||

ಮೃಡಿಯಡರುತ
ಪೊಡವಿಏಗೆ ಬಿದ್ದು ಮಿಡಕುವಿ
ಕದುಚಿಂತೆಯನು ಕಂಡು
ನಿನಗೇನಾತ ಸಖಿ                  ||೨||

ಕಾಮಿನಿ ಕಲಹದ
ನಲೆ ತಿಳಿದ ಹಮ್ಮಿನೊಳು
ಶ್ರೀ ಮುನಿರಾಯ ನಿನ್ನ್ಹ್ಯಾಂಗ
ಸೈರಿಪನು ವಿಭಾ
ನಿನಗೇನಾತ ಸಖಿ                   ||೩||

ಉಟ್ಟ ಪಿತಾಂಬರ
ಗಟ್ಟ್ಯಾಗಿ ಕಟ್ಟಿಕೋ
ಮುಟ್ಟರೆ ಸಡಿಲದೆ
ಉಟ್ಟು ಮೋದಿಸು ವಿಭಾ
ನಿನಗೇನಾತ ಸಖಿ                   ||೪||

ಇಂದುಮುಖಿಯೆ ಕೇಳೇ
ಕುಂದನಿಡುವರುಂಟೆ
ಸುಂದರ ಶಿಶುನಾಳ-
ದೀಶ ನಿನ್ನವನು ನಾ
ನಿನಗೇನಾತ ಸಖಿ                   ||೫||
                 ****

ಕೀಲಿಕರಣ: ಎಂ.ಎನ್.ಎಸ್. ರಾವ್

ನಮ್ಮನಿಮ್ಮಗಾಗದು

-ಶಿಶುನಾಳ ಶರೀಫ್

ನಮ್ಮನಿಮ್ಮಗಾಗದು
ಸುಮ್ಮನೆ ಹೊತ್ತು ಹೋಗದು                       ||ಪ.||

ಕ್ರಮವಗೆಡಿಸಿ ಮಮತೆವಿಡಿಸಿ
ರಮಿಸಿ ರಮಿಸಿದಲ್ಲೆ ಸಖೀ                          ||ಅ.ಪ.||

ಕರುಣವಿಲ್ಲದೇ ಹಿರಿಯರ ದಣಿಸಿ
ಕಿರಿಯರ ಕುಣಿಸಿದಿ ಸೇರಲಾರದೆ
ಕಿರಿಯರಿ ತಮ್ಮಗೆ ಮಾರಿದೋರದೆ
ಹರಿದು ಹೋದಿಯಲ್ಲೇ ಸಖಿ                        ||೧||

ಬಲ್ಲಿದ ಬಿಡಿಸಿದಿ ಒಳ್ಳೇರ ಕೆಡಸಿದಿ
ಕಳ್ಳರ ಹೋಡೆಸಿದಿ ಸುಳ್ಳರ ಬಡಿಸಿದಿ
ಮಳ್ಳಿಯ ತೆರದಿ ಮಾತನಾಡಿ
ತಳ್ಳಿಯ ದೂರನಾಡಿದೆ ಸಖಿ                      ||೨||

ಪೊಡವಿಪ ಶಿಶುನಾಳ
ಒಡೆಯನ ಮಗನಿಗೆ
ಕಡುಮೋಹಗೊಳ್ಳಲು ನುಡಿಯುವುದೇ ನಿನ್ನಾಟ
ಬಿಡು ಬಿಡು ಸಲ್ಲದು ಕಡುಕೇಡು ತಪ್ಪದು     || ೩ ||
                 ****

ಕೀಲಿಕರಣ: ಎಂ.ಎನ್.ಎಸ್. ರಾವ್

ಸಕ್ರನೆಂಬುವನ ಬಂಡಾಯದ ವೃತ್ತಾಂತವು

-ಅಬ್ಬಾಸ್ ಮೇಲಿನಮನಿ

ಡಾಂಬರಿನ ಆ ದೊಡ್ಡ ರಸ್ತೆ ಕವಲೊಡೆಯುವುದು ರೈಲು ಗೇಟಿನ ಹತ್ತಿರ.  ಒಂದು ರಸ್ತೆ ನೇರ ಊರೊಳಕ್ಕೆ ಹೋದರೆ ಮತ್ತೊಂದು ಬೈಪಾಸ್ ರಸ್ತೆ.  ಅದರ ಮಗ್ಗಲಲ್ಲಿರುವುದೇ ಗಾಂಧಿ ಕಾಲನಿ.  ನೂರಾರು ಗುಡಿಸಲು ಅಲ್ಲಿ ಒತ್ತೊತ್ತಾಗಿ ಉಸಿರುಗಟ್ಟವಂತೆ ಹಬ್ಬಿಕೊಂಡಿವೆ.  ಅದರಾಚೆಗೆ ತುಸು ದೂರದಲ್ಲಿ ನಗರದ ಕೊಳೆ, ಕಸ ಗುಡ್ಡೆಗುಡ್ಡೆಯಾಗಿ ಬಿದ್ದಿದೆ.  ಹೆಗ್ಗಣಗಳು ಒಳಗೊಳಗೆ ಸುರಂಗ ತೋಡುತ್ತವೆ.  ಮಲಿನ ನೀರು ಬಚ್ಚಲುಗುಂಡಿ, ಇಕ್ಕಟ್ಟಾದ ರಸ್ತೆಗಳಲ್ಲಿ ಖಾಯಂ ನಿಂತು ಭಯಂಕರ ಸೊಳ್ಳೆಗಳ ಸಂತಾನ ವೃದ್ಧಿಸಿದೆ.  ಸೂರಿನ ನೆಲ ಶಿಥಿಲವಾದರೂ, ಸೊಳ್ಳೆಗಳು ರಕ್ತ ಹೀರಿದರೂ ಕಂಗೆಡದೆ ಬದುಕಿರುವ ಇಲ್ಲಿನ ಬಡನಿವಾಸಿಗಳ ಜೀವನಪ್ರೀತಿ ಅಗಾಧ.  ಅಂಥ ಪ್ರೀತಿಗಾಗಿ ಹೋರಾಟ ಮಾಡುತ್ತಿರುವವರಲ್ಲಿ ಸಕ್ರಪ್ಪನೂ ಒಬ್ಬ.  ಎಲ್ಲರಿಗೂ ಅವನು ಸಕ್ರನೆಂದೇ ಚಿರಪರಿಚಿತ.

ನಲವತ್ತು-ನಲವತ್ತೈದರ ವಯೋಮಾನ ಅವನದು.  ದೇಹ ಶಕ್ತವಾಗಿಲ್ಲ.  ಕೂಲಿಗಾಗಿ ಸಂತೆ, ಮಾರ್ಕೆಟ್ ಎಂದು ಅಂಡಲೆಯುತ್ತಾನೆ.  ಚಿಕ್ಕ ಚಿಕ್ಕ ನಾಲ್ಕು ಮಕ್ಕಳಿವೆ.  ಬಡತನಕ್ಕೆ ಉಂಬುವ ಚಿಂತೆ ಎನ್ನವಂತೆ ಮಕ್ಕಳು ಯಾವಾಗಲೂ ಹಸಿದುಕೊಂಡಂತೆ ತಿನ್ನಲು ಏನಾದರೂ ಬೇಡುತ್ತಲೋ, ರೊಟ್ಟಿ ರೊಟ್ಟಿ ಎನ್ನುತ್ತಲೋ ಪ್ರಲಾಪಿಸುತ್ತಲೇ ಇರುತ್ತವೆ.  ಮಕ್ಕಳ ಹಸಿವು ಹಿಂಗಿಸುವ ಪರಿಗಾಗಿ ಸಕ್ರ ಚಿಂತಿಸುತ್ತಲೇ ಇರುತ್ತಾನೆ.  ಅವನ ಹೆಂಡತಿ ರುಕ್ಕಿ.  ಅವಳಿಗೂ ರಕ್ತಹೀನತೆ, ಆದರೂ ನಾಲ್ಕಾರು ಶ್ರೀಮಂತ ಮನೆಗಳ ಕಸ-ಮುಸುರೆಗೆ ಹೋಗುತ್ತಾಳೆ.  ಅವರು ಎತ್ತಿಕೊಟ್ಟ ತಿನಿಸನ್ನು, ಬಟ್ಟೆಗಳನ್ನು ಮಕ್ಕಳಿಗೆ ಒದಗಿಸಿ ಸಂಭ್ರಮಿಸುತ್ತಾಳೆ.

ಸಕ್ರ ಮೈಗಳ್ಳನಲ್ಲ, ಸೂರ್ಯನೊಂದಿಗೆ ಎದ್ದು ಕೂಲಿ ಹುಡುಕಿಕೊಂಡು ಹೋಗುತ್ತಾನೆ.  ರೈಲು, ಬಸ್ಸು ನಿಲ್ದಾಣಗಳಲ್ಲಿ ಅವನಿಗೆ ಪ್ರವೇಶ ನಿಷಿದ್ಧ.  ಸಂತೆ, ಮಾರ್ಕೆಟಿನಲ್ಲಿ ಕೂಲಿಯ ಅವಕಾಶವಿದ್ದರೂ ಸರಕು, ಸರಂಜಾಮುಗಳಿಗೆ ತಡಕಾಡಬೇಕು.  ಅಲ್ಲಿ ಕೂಲಿ ಮನುಷ್ಯರಿಗೇನೂ ಕಮ್ಮಿಯಿಲ್ಲ.  ಒಂದು ವಸ್ತು ಕಣ್ಣಿಗೆ ಬಿದ್ದರೆ ಇರುವೆ ಮುಕ್ಕುರುವಂತೆ ಕೂಲಿಗಳು ಧಾಂಗುಡಿಯಿಡುವರು.  ದೊಡ್ಡ ಬಾಯಿಯ, ಗಟ್ಟಿ ದೇಹದವರು ಸಕ್ರನ ಪಾಲಿನ ಅದೃಷ್ಟನ್ನು ಕಬಳಿಸಿ ಬಿಡುವರು.  ಇದರ ನಡುವೆಯೂ ಅವನು ಇಪ್ಪತ್ತು ಮೂವತ್ತು ರೂಪಾಯಿಗಳನ್ನು ಆರಾಮವಾಗಿ ಗಳಿಸಬಲ್ಲ.  ಮನಸು ಮಾಡಿದರೆ ಇದಕ್ಕೂ ಹೆಚ್ಚಿನ ಹಣ ಸಿಗಬಲ್ಲದು ಅವನಿಗೆ.  ತಕರಾರಿನ ಜಾಯಮಾನವಲ್ಲ ಸಕ್ರನದು.  ನಡವಳಿಕೆ ವಕ್ರವಲ್ಲ.  ಎಷ್ಟೋ ಜನ ಕೂಲಿಗಳು ಅಹಂಕಾರಿಗಳು.  ಅವರು ಮನುಷ್ಯರಂತೆ ವರ್ತಿಸುವುದಿಲ್ಲ ಎಂದು ಆರೋಪಿಸುವ ಮಂದಿ ಸಕ್ರನನ್ನು ಪ್ರೀತಿಸುತ್ತಾರೆ.  ಅವನು ಹಣಕ್ಕಾಗಿ ಪೀಡಿಸುವುದಿಲ್ಲ.  ಕೊಟ್ಟಷ್ಟು ಸ್ವೀಕರಿಸುತ್ತಾನೆಂದು ನಂಬುಗೆ ಅವರದು.  ಆದರೆ ಅದು ಸಕ್ರನ ಸಂಸಾರವನ್ನು ಸುಖವಾಗಿ ಇಟ್ಟಿಲ್ಲ.

ಸಕ್ರ ಮನೆಗೆ ಬಂದಾಗ ಮಧ್ಯಾಹ್ನದ ಹೊತ್ತು ರುಕ್ಕಿ ಕಣ್ಣಂಚಿನಲ್ಲಿ ನೀರು ತುಂಬಿಕೊಂಡು ಕುಳಿತಿದ್ದಳು.  ನರಳುತ್ತ ಮಲಗಿದ ಮಗಳ ಮೈ ಕೆಂಡವಾಗಿತ್ತು.  ಅಡುಗೆ ಒಲೆ ತಣ್ಣಗಿತ್ತು.  ನೆಲದ ಮೇಲೆ ಹೊಟ್ಟೆ ಹೊಸೆಯುತ್ತ ಹಸಿವಿನ ತಹತಹಿಕೆಯಲ್ಲಿ ಮೂರು ಗಂಡು ಮಕ್ಕಳು ಸಣ್ಣಗೆ ಆಕ್ರಂದಿಸುತ್ತಿದ್ದವು.  ಸಕ್ರನ ಅಂಗಿಯ ಜೇಬಿನಲ್ಲಿದ್ದುದು ಹತ್ತು ರೂಪಾಯಿ ಮಾತ್ರ, ಮಗಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕೋ?  ಮಕ್ಕಳಿಗೆ ತಿನ್ನಲು ಏನಾದರೂ ತಂದುಕೊಡಬೇಕೋ?  ಚಿಂತೆ ಕಾಡತೊಗಿತ್ತು ಅವನಿಗೆ.

ಇಂಥ ಸಂದಿಗ್ಧ ಹೊತ್ತಲ್ಲಿ ನಾಜೂಕಪ್ಪ ಅವತರಿಸಿದ.  ರಾಜಕೀಯ ಪಕ್ಷವೊಂದರ ಸಂಘಟನಾ ಕಾರ್ಯದರ್ಶಿಯಾದ ನಾಜೂಕಪ್ಪ ಬೆರಗಿನ ಮಾತುಗಾರ.  ಪಕ್ಷದ ಕಾರ್ಯಕ್ರಮಗಳಿಗೆ ಜನರನ್ನು ಸೇರಿಸುವ ತಂತ್ರಗಾರಿಕೆಯಲ್ಲಿ ನಿಪುಣ.  ಗಣ್ಯಾತಿಗಣ್ಯರು ತಮ್ಮ ಭಾಷಣದ ಯಶಸ್ಸಿಗೆ ಅವನನ್ನೇ ಅವಲಂಬಿಸುವರು.  ಈಗಂತೂ ಚುನಾವಣಾ ಸಮಯ ರಾಜಕಾರಣಿಗಳಿಗೆ ಅವನೇ ಉಸಿರು.  ಅವರಿಗೆ ನಾಜೂಕಪ್ಪ ಹೇಗೆ ಅನಿವಾರ್ಯವೋ, ಸಕ್ರನಂಥವರು ನಾಜೂಕಪ್ಪನಿಗೆ ಅನಿವಾರ್ಯ.  ಅದಕ್ಕೇ ಅವನು ಸಕ್ರನನ್ನು ಹುಡುಕಿಕೊಂಡು ಬಂದದ್ದು.  ಸಕ್ರನಿಗೂ ಅವನಿಗೂ ಹಳೆಯ ಪರಿಚಯ.

ನಾಜೂಕಪ್ಪನ ಮುಖ ನೋಡಿದ್ದೆ ಸಕ್ರನ ಕಣ್ಣು ಅರಳಿಕೊಂಡವು.  "ಬರ್‍ರಿ, ನಾಜೂಕಪ್ಪ ಎಷ್ಟು ದಿನ ಆತು ನಿಮ್ಮನ್ನೋಡಿ" ಎಂದು ಚಾಪೆ ಹರಡಿದ.  ಕುಳಿತ ನಾಜೂಕಪ್ಪ ತೆಳ್ಳಗೆ ನಗುತ್ತ "ಪಕ್ಷದ ಕೆಲಸ, ಸಮಾಜದ ಕೆಲಸ ಪುರುಸೊತ್ತಿಲ್ಲೋ ಮಹಾರಾಯ" ಎಂದ.

"ಪ್ರತ್ಯಕ್ಷ ಭಗವಂತನ ದರುಶನ ಮಾಡಿದ್ಹಂಗ ಆತ್ರಿ ನನ್ಗ!"  ಉಲ್ಲಾಸದಿಂದ ಉದ್ಗರಿಸಿದ ಸಕ್ರ.

"ಖರೆ ದೇವರಂದ್ರ ನೀನೊ ಸಕ್ರಣ್ಣ.  ನಿನ್ನಂಥವರ ಸೇವೆಗೆ ಇರೋರು ನಾವು" ವಿನಮ್ರವಾಗಿ ಹೇಳಿದ ನಾಜೂಕಪ್ಪ ಅದನ್ನು ಒಪ್ಪಿಕೊಳ್ಳದ ಸಕ್ರ.

"ಹಂಗ್ಯಾಕಂತೀರಿ ನಾಜೂಕಪ್ಪ?  ನಮ್ಮಂಥ ಬಡೂರ ಪಾಲಿಗೆ ನೀವಽಽ, ಅಲ್ಲೇನು ಆಧಾರ?" ಎಂದ.

"ಬಡತನ-ಸಿರಿತನ ಮುಖ್ಯ ಅಲ್ಲೊ ಸಕ್ರಣ್ಣ.  ಮನುಷ್ಯತ್ವ ದೊಡ್ಡದು" ಎನ್ನುತ್ತ ಗುಡಿಸಲಿನ ವಿದ್ಯಮಾನವನ್ನು ಸೂಕ್ಷ್ಮವಾಗಿ ಅವಲೋಕಿಸಿದ ನಾಜೂಕಪ್ಪ.

"ಯಾಕ, ಗಂಡ-ಹೆಂಡ್ತಿ ಮುಖ ಒಣಗಿಸ್ಕೊಂಡು ಕುಂತೀರಿ?" ಎಂದ.

"ಹುಡುಗಿಗೆ ಜ್ವರಾ ಬಂದಾವರಿ.  ಹುಡುಗರು ಹಸ್ಗೊಂಡು ಅಳಾಕ ಹತ್ತ್ಯವು ಇವತ್ತ ನೋಡಿದ್ರ ಕೂಲೀನಽ, ಸಿಗಲಿಲ್ಲ.  ಕಿಸೆದಾಗ ಹತ್ತು ರೂಪಾಯಿ ಇಟ್ಕೊಂಡು ದಿಕ್ಕು ತಿಳಿಲಾರ್‍ದ ಕುಂತಿನಿ" ನಿಟ್ಟುಸಿರಿಟ್ಟ ಸಕ್ರ.

"ನಾನಿರಾಕಲೇ ನಿನಗ್ಯಾಕ ಚಿಂತಿ?" ಕಾಳಜಿ ಅಭಿವ್ಯಕ್ತಿಸಿದ ನಾಜೂಕಪ್ಪ.

"ಚಿಂತಿ ಬಿಟ್ಟರ ಮತ್ತೇನದರಿ ನಮ್ಗ?" ಹತಾಶೆ ವ್ಯಕ್ತಪಡಿಸಿದ ಸಕ್ರ.

"ಸುಖದ ಕಾಲ ಬರತೈತಿ ತಡ್ಕೋ ಈ ಸಲ ಎಲೆಕ್ಷನದಾಗ ನಮ್ಮ ಪಕ್ಷ ಗೆಲ್ಲೋದು ಗ್ಯಾರಂಟಿಯೇನಪಾ, ನಾವು ಸರಕಾರ ರಚನಾ ಮಾಡಿದ ಮ್ಯಾಲೆ ಈ ನಾಡಿನ್ಯಾಗ ಬಡೂರಽಽ ಇರಬಾರದ್ದು ಹಾಂಗ ಮಾಡ್ತೀವಿ.  ಶ್ರೀಮಂತರು, ಬಡೂರಾಗ, ನಾವು ಸಮಾನತೆ ತರ್ತೀವಿ" ಆಶ್ವಾಸನೆ ಕೊಟ್ಟ ನಾಜೂಕಪ್ಪ.

"ಯಾರಽಽ ರಾಜ್ಯಾ ಆಳಿದ್ರೂ ಬಡೂರ ಬದುಕು ಪತ್ರೋಳಿನಽಽ ಬಿಡ್ರಿ" ಸಕ್ರ ಬೇಸರದ ಧ್ವನಿ ಹೊರಡಿಸಿದ.

"ಇದಽಽ ನೋಡಪ ನಿರಾಶಾ ಅನ್ನುದು.  ಶುಕ್ರ-ವಕ್ರ ಎಲ್ಲಾನೂ ಒಂದಽ ಥರಾ ಇರೂದಿಲ್ಲ ಸಕ್ರಣ್ಣ"

"ಬಡೂರು ಸಾಯೋದ್ರೊಳಗಽಽ ಶುಕ್ರ ಬಂದ್ರ ಚಲೋರಿ" ಎಂದ ಸಕ್ರ.

"ಕತ್ತಲಿನ್ಯಾಗ ಕುಂತವಂಗ ಹೊಸ ಸೂರ್ಯ ಕಾಣಿಸುದಿಲ್ಲ ಸಕ್ರಣ್ಣ.  ಮೊದಲ ನಿನ್ನ ಎದ್ಯಾನ ಚಿಂತಿ ತಗದು ಹಾಕು.  ಬೆಳಕಿನ ದಾರಿ ಹುಡುಕು.  ತಗೋ ಈ ನೂರು ರೂಪಾಯಿ ತಂಗಿಗೆ ಕೊಡು.  ಹುಡುಗರಿಗೆ ಏನಾರ ತಂದು ತಿನಿಸಲಿ.  ಹಸಿವನ್ನು ಹತ್ತಿಕ್ಕಬಾರ್‍ದು.  ಹಸಿದ ಹೊಟ್ಟೆ ಮರಮರ ಅಂದ್ರ ಜಗತ್ತು ಚೂರು ಚೂರು ಆಗತ್ತ.  ರುಕ್ಕವ್ವ ನಾನು ಡಾಕ್ಟರಿಗೆ ಒಂದು ಚೀಟಿ ಬರ್‍ದು ಕೊಡ್ತಿನಿ.  ಸರಕಾರಿ ದವಾಖಾನಿಗೆ ಮಗಳನ್ನು ಕರ್‍ಕೊಂಡು ಹೋಗಿ ತೋರ್‍ಸು.  ಈಗ ನಿನ್ನ ಗಂಡನ್ನ ನನ್ನ ಕೂಡ ಕರ್‍ಕೊಂಡು ಹೋಗ್ತಿನಿ" ನಾಜೂಕಪ್ಪ ಮನ ಕರಗುವಂತೆ ಹೇಳಿದ.

"ಎಲ್ಲಿಗರಿಯಣ್ಣಾ?" ರುಕ್ಕಿ ಕೇಳಿದಳು.

"ಇವತ್ನಿಂದ ಇಲೆಕ್ಷನ್ ಪ್ರಚಾರ ಜೋರಾಗಬೇಕಾಗೇತಿ.  ನಮ್ಮ ಪಾರ್ಟಿ ಲೀಡರು ಬರ್‍ತಾರ.  ಈ ನಗರದಾಗ ಮತ್ತ ಸುತ್ತ ಮುತ್ತಲಿನ ಊರಾಗ ಹಗಲು-ರಾತ್ರಿ ಕಾರ್ಯಕ್ರಮ ನಡಿತಾವು.  ಒಂದು ಟ್ರಕ್ ಮಂದಿನ್ನ ಕರ್‍ಕೊಂಡು ಹೋಗುವ ಜವಾಬ್ದಾರಿ ನನ್ನ ಮ್ಯಾಲೆ ಐತಿ.  ಒಬ್ಬೊಬ್ಬ ಮನಿಷ್ಯಾಗ ದಿವಸಕ್ಕ ನೂರು ರೂಪಾಯಿ ಅಷ್ಟಲ್ಲದಽಽ ಊಟ, ಚಹ, ನಾಷ್ಟಾ ಬ್ಯಾರೇನೂ ಐತಿ".

"ಅಲ್ಲಿ ಕೂಲಿ ಎನು ಮಾಡಬೇಕ್ರಿಯಣ್ಣ?"  ಕೇಳಿದಳು ರುಕ್ಕಿ.

"ಕೂಲಿ-ನಾಲಿ ಏನೂ ಇಲ್ಲ.  ಸುಮ್ಮನ ಕುಂತು ಭಾಷಣ ಕೇಳುದು.  ನಡುನಡುಕ ಚಪ್ಪಾಳಗಿ ಹೊಡೆಯೂದು.   ಆಮ್ಯಾಲೆ ಘೋಷಣಾ ಕೂಗುದು ಅಷ್ಟ....."  ಸಕ್ರ ಹಿಂದಿನ ಚುನಾವಣೆಗಳಲ್ಲಿನ ಅನುಭವವನ್ನು ನೆನಪು ಮಾಡಿಕೊಂಡು ಹೇಳಿದ.

"ಇಷ್ಟು ಹಗರು ಕೆಲಸಕ್ಕ ಅಷ್ಟು ರೊಕ್ಕ ಕೊಡ್ತಾರ ಅವರು?"  ಕೌತುಕದಿಂದ ಕೇಳಿದಳು ರುಕ್ಕು.

"ರೊಕ್ಕಕ್ಕ ಕಿಮ್ಮತ್ತಿಲ್ಲಬೆ ತಂಗಿ.  ಈಗ ನೀರಿನಂಗ ಚೆಲ್ಲತಾರ.  ಆಮ್ಯಾಲೆ ಸಲಿಕಿಯಿಂದ ಬಳ್ಕೋತಾರ.  ಇದೆಲ್ಲ ನಿಮ್ಗ ಅರ್ಥಾಗುದಿಲ್ಲ ಬಿಡ್ರಿ" ಎನ್ನುತ್ತ ಸಕ್ರನನ್ನು ಕರೆದುಕೊಂಡು ಅವಸರದಿಂದ ಹೊರಟ ನಾಜೂಕಪ್ಪ.

ಜನರನ್ನು ತುಂಬಿಕೊಂಡು ಟ್ರಕ್ಕು ಊರಿಂದೂರಿಗೆ ಚಲಿಸುತ್ತಲೇ ಇತ್ತು.  ಬೆಳಗು ಮಧ್ಯಾಹ್ನವೊ, ಸಂಜೆ-ರಾತ್ರಿಯೊ ವೇದಿಕೆಯ ಮುಂದೆ ನೇತಾರರಿಗಾಗಿ ಕಾಯುತ್ತ ಜಯಕಾರ ಹಾಕುತ್ತ ಕುಳಿತಿರುತ್ತಿದ್ದ ಜನರಿಗೆ ತಿನ್ನಲು ತುಸು ಉಪ್ಪಿಟ್ಟು, ವಗ್ಗರಣೆಖಾರಾ ಸಿಕ್ಕುತ್ತಿತ್ತು.  ಊಟವಂತೂ ಇಲ್ಲ.  ಓಡುವ ಕುದುರೆಯ ಮುಂದೆ ಕೋಲು ಹಿಡಿದು, ಅದರ ತುದಿಗೆ ಹುಲ್ಲು ಕಟ್ಟಿದಂತೆ ಹಸಿದ ಜನಕ್ಕೆ ಮುಂದಿನೂರಿನಲ್ಲಿ ಊಟವೆಂದು ಹೇಳಿ ಕಾರ್ಯಕರ್ತರು ಅವರನ್ನು ಭಾಷಣ ಮುಗಿದ ಕೂಡಲೇ ಟ್ರಕ್ಕಿನಲ್ಲಿ ಕುರಿಗಳಂತೆ ತುಂಬಿ ಸಾಗಹಾಕುತ್ತಿದ್ದರು.  ರಸ್ತೆಯ ಮಧ್ಯೆ ನೀರು ಕಂಡಲ್ಲಿ ಜಳಕ.  ಎಲ್ಲೋ ಒಂದು ಕಡೆಗೆ ಉಪ್ಪಿಟ್ಟಿನ ಸಮಾರಾಧನೆ.  ಕುಡಿಯಲು ಒಂದು ಕಪ್ಪು ಚಹ.  ಎಲೆಯಡಿಕೆ ಜಗಿಯಲಾದರೆ, ಸೇದಲು ಬೀಡಿ.  ಸಭೆಯಲ್ಲಿ ಗದ್ದಲವೆಬ್ಬಿಸಿ ಮಿಸುಕಾಡಿದರೆ ಕೈಗಳಿಗೆ ಬ್ರೆಡ್ಡಿನ ತುಂಡೋ, ನಾಲ್ಕಾರು ಬಿಸ್ಕೀಟು ಇಡಲಾಗುತ್ತಿತ್ತು.  ಎರಡು ದಿನ ಅನ್ನ, ರೊಟ್ಟಿಯ ದರ್ಶನವೇ ಇಲ್ಲ.  ಒಡಲ ಬ್ರಹ್ಮಾಂಡದ ಹಸಿವನ್ನು ಹತ್ತಿಕ್ಕಿಕೊಂಡ ಜನ ಕೈಗೆ ದೊರಕಬಹುದಾದ ಹಣದ ಲೆಕ್ಕಾಚಾರದಲ್ಲಿ ನೇತಾರರ ಭಾಷಣವನ್ನು ಆಲಿಸುತ್ತಿದ್ದರು.

ಧುರೀಣರ ಮಾತೆಂದರೆ ಮಾತು.  ಸಭೆಗೆ ಸಭೆಯೇ ಬೆರಗಾಗುತ್ತಿತ್ತು.  ಚಂದದ ಶಬ್ದಗಳು, ಪರಿಣಾಮಕಾರಿ ದೃಷ್ಟಾಂತಗಳು, ರೋಚಕಗೊಳಿಸುವ ಅಡ್ಡಕಥೆಗಳು, ನವರಸಗಳೆ ಹಾವಭಾವದಲ್ಲಿ ಪುಟಿಯುತ್ತಿದ್ದರೆ ಚಪ್ಪಾಳೆಯ ಮೇಲೆ ಚಪ್ಪಾಳೆ, ಕಗ್ಗತ್ತಲಿನಲ್ಲಿ ತಡಕಾಡುವರ ಎದುರು ಸೂರ್ಯನನ್ನು ಬೆಳಗಿಸುತ್ತೇವೆ ಎಂದರು.  ಚಂದ್ರನ ಬೆಳದಿಂಗಳನ್ನು, ನಕ್ಷತ್ರಗಳ ನಗೆಯನ್ನು ಚೆಲ್ಲುತ್ತೇವೆ ಎಂದರು.  ಹಸಿದ ಒಡಲಿಗೆ ಅಮೃತ ಹನಿಸುತ್ತೇವೆ.  ಸ್ವರ್ಗದಲ್ಲಿ ತೇಲಿಸುತ್ತೇವೆ ಎಂದರು.  ಅವರ ಭರವಸೆಯ ವರಸೆಗಳಿಂದ ಜನರು ಭ್ರಮಾಧೀನರಾಗಿ ಬಲೂನು ಉಬ್ಬಿದಂತೆ ಹಿಗ್ಗುತ್ತ ಚಪ್ಪಾಳೆ ತಟ್ಟುತ್ತ ಜಯವಾಗಲಿ ನಾಯಕರಿಗೆ.... ಎಂದು ಏರುಧ್ವನಿಯಲ್ಲಿ ಕೂಗುತ್ತಲೇ ಇದ್ದರು.

"ರೊಟ್ಟಿಯಿಂದ ನಮ್ಮ ಬದುಕು.  ರೊಟ್ಟಿಯಿಂದ ಈ ದೇಶ.  ಈ ಪ್ರಪಂಚ ಉಸಿರಾಡಿಸುವುದಽಽ ಈ ರೊಟ್ಟಿಯಿಂದ....!"  ಧುರೀಣನೊಬ್ಬನ ಈ ಉದ್ಗಾರ ಸಭಿಕರನ್ನು ರೋಮಾಂಚನಗೊಳಿಸಿತು.  ಎಲ್ಲೋ ಕಳೆದುಹೋದವನಂತೆ ಕುಳಿತಿದ್ದ ಸಕ್ರನ ಎದುರು ರೊಟ್ಟಿಯೇ ಕುಣಿಯತೊಡಗಿತ್ತು.  ಅವನ ಎಡಕ್ಕೂ-ಬಲಕ್ಕೂ, ಮೇಲಕ್ಕೂ, ಕೆಳಕ್ಕೂ ರಾಶಿರಾಶಿ ರೊಟ್ಟಿ.  ಜೋಳ, ಸಜ್ಜೆಯ ರೊಟ್ಟಿ, ಅಚ್ಚ ಬಿಳಿಯದು, ಅರಿಷಿಣ ಬಣ್ಣದ್ದು, ಎಳ್ಳು ಹಚ್ಚಿದ್ದು, ತೆಳ್ಳಗಿನದು, ದಪ್ಪನೆಯದು, ಚಿಕ್ಕ-ದೊಡ್ಡಗಾತ್ರದ್ದು.  ಹಿಂಡು ಹಿಂಡಾಗಿ ಬಂದರು ಅಸಂಖ್ಯಾತ ಹಸಿದ ಮಂದಿ.  ನೂಕಿ, ನುಗ್ಗಿ ರೊಟ್ಟಿಯನ್ನು ಕೈಗೆತ್ತಿಕೊಂಡರು.  ಮುರಿದು ಬಾಯಿಗಿಟ್ಟು ಗಬಗಬನೆ ತಿನ್ನತೊಡಗಿದರು.  ಸಕ್ರನ ಮಕ್ಕಳಂತೂ ಎರಡೂ ಕೈಗಳಲ್ಲಿ ರೊಟ್ಟಿ ಹಿಡಿದು ಕುಣಿದಾಡತೊಡಗಿದರು.  ರೊಟ್ಟಿಯ ಹಬ್ಬದ ಸಡಗರ ರುಕ್ಕಿಯ ಮುಖವನ್ನು ಅರಳಿಸಿತ್ತು.

"ಧುರೀಣರಿಗೆ ಜಯವಾಗಲಿ, ಆಳುವ ಪ್ರಭುಗಳಿಗೆ ಜಯವಾಗಲಿ, ಭೋಲೋ ಭಾರತ ಮಾತಾಕೀ ಜಯ್...."  ಆಕಾಶ ಭೇದಿಸುವಂತೆ ಕೂಗಿದ್ದರು ಜನ.  ಸಕ್ರ ವಾಸ್ತವಕ್ಕೆ ಬಂದಿದ್ದ.  ಐದು ದಿನಗಳ ಚುನಾವಣಾ ಪ್ರಚಾರ ಸಮಾರೋಪ ಕಂಡಿತು.  ಊರು, ಹೆಂಡತಿ, ಮಕ್ಕಳನ್ನು ನೆನಪು ಮಾಡಿಕೊಂಡ ಜನ ಟ್ರಕ್ಕಿನ ಹತ್ತಿರ ಬಂದು ಸೇರಿದರು.  ರಣಗುಡುವ ಸೂರ್ಯ ಅವರ ನೆತ್ತಿಯನ್ನು ಉರಿಸುತ್ತ, ಹಟ್ಟೆಗಿಳಿದು ಹಸಿವನ್ನು ಕೆರಳಿಸಿದ.  ಅವರ ಕಣ್ಣು ನಾಜೂಕಪ್ಪನಿಗಾಗಿ ಹುಡುಕಾಡಿದವು.  ಅವನು ಗೆಸ್ಟ್‌ಹೌಸಿನಲ್ಲಿ ಇದ್ದಾನೆಂದು ಯಾರೋ ಪಿಸುಗುಟ್ಟಿದರು.  ಸಕ್ರನ ಹೆಜ್ಜೆಗಳು ಅತ್ತಕಡೆಗೆ ಚಲಿಸಿದವು.  ಉಳಿದವರು ಅವನನ್ನು ಹಿಂಬಾಲಿಸಿಕೊಂಡು ಹೋದರು.

ಗೆಸ್ಟ್‌ಹೌಸಿನ ಹಿಂಬದಿಯಲ್ಲಿ ಹಾಕಿದ್ದ ಶಾಮಿಯಾನದಲ್ಲಿ ಹತ್ತಿಪ್ಪತ್ತು ಜನ ಕುಳಿತು ಮೆತ್ತಗೆ ಮಾತಾಡುತ್ತ ನಗುತ್ತ ವಿಸ್ಕಿ, ರಮ್ಮು ಹೀರುತ್ತ ಖುಷಿಯಾಗಿದ್ದರು.  ನಾಜೂಕಪ್ಪ ಅವರೊಂದಿಗೆ ಬೆರೆತು ಹೋಗಿದ್ದ.  ಒಂದು ಬದಿಗೆ ಬಿಳಿಬಟ್ಟೆ ಹೊದಿಸಿದ ದೊಡ್ಡ ಟೇಬಲ್ ಮೇಲೆ ಕಡಕ್ ರೊಟ್ಟಿ, ಪರೋಟಾ, ಚಿಕನ್, ಮಟನ್, ಫಿಶ್‌ಫ್ರಾಯ್, ಆಮ್ಲೇಟ್, ಮಸಾಲೆ ರೈಸ್ ಘಮಘಮಿಸುತ್ತಿದ್ದವು.

ಅದರ ಜಾಡು ಹಿಡಿದು ಒಳ ನುಗ್ಗಿ ಬಂದರು ಜನ.  ಅವರ ಮುಂದೆ ಸಕ್ರ ಇದ್ದ.  ಅರೆಬರೆ ನಶೆಯಲ್ಲಿದ್ದ ಶಾಮಿಯಾನ ಅವರನ್ನು ನೋಡಿ ತತ್ತರಿಸಿತು.  ನಾಜೂಕಪ್ಪ ದಿಢೀರೆಂದು ಎದ್ದು ಬಂದು ಸಕ್ರನನ್ನು ದಬಾಯಿಸಿದ.  ಮಹಾನ್ ನಾಯಕರ ಎದುರು ಅಗೌರವದಿಂದ ನಡೆದುಕೊಳ್ಳಬಾರದೆಂದು ಎಚ್ಚರಿಸಿದ.  ಅವನ ತಗಡು ಮಾತುಗಳನ್ನು ಧಿಕ್ಕರಿಸಿ "ನಮ್ಗ ಊಟ ಬೇಕು, ರೊಕ್ಕ ಬೇಕು" ಎಂದು ಕೂಗಿದ ಸಕ್ರ.  ಉಳಿದವರ ಅವಾಜು ಅದರೊಂದಿಗೆ ಸೇರಿಕೊಂಡಿತು.  ಜನರನ್ನು ಅಲ್ಲಿಂದ ಪಲ್ಲಟಿಸಲು ನಾಜೂಕಪ್ಪನಿಂದ ಸಾಧ್ಯವಾಗಲಿಲ್ಲ.  ಗೆಸ್ಟ್‌ಹೌಸಿನ ಕೆಲಸಗಾರರೊಂದಿಗೆ ಒಂದಿಬ್ಬರು ದಢೂತಿ ಕಾರ್ಯಕರ್ತರು ಜನರನ್ನು ಚದುರಿಸಲು ತಮ್ಮ ಬಲ ಪ್ರಯೋಗಿಸಿದ್ದು ನಿರ್ವೀರ್‍ಯವೆನಿಸಿತು.  ಜಿಗುಟತನ ನರನಾಡಿ ತುಂಬಿಕೊಂಡಿತೋ ಎನ್ನುವಂತೆ ಸಕ್ರ ಅವರನ್ನು ಸೀಳಿಕೊಂಡು ಹೋಗಿ ರೊಟ್ಟಿಗೆ ಕೈಹಾಕಿದ.  ಉಳಿದವರೂ ಅವನನ್ನು ಅನುಸರಿಸಿದರು.

ದಿಗಿಲುಗೊಂಡ ರಾಜಕೀಯ ಮಂದಿ ಆಕ್ರೋಶದಿಂದ "ಪೋಲಿಸರಿಗೆ ಫೋನ್ ಮಾಡ್ರಿ" ಎಂದರು.  ಒಂದಿಬ್ಬರು ಜನರ ಕೈಯಲ್ಲಿದ್ದ ರೊಟ್ಟಿಯನ್ನು ಕಸಿದುಕೊಳ್ಳಲು ಪ್ರಯತ್ನಿಸಿದರು.  ಸಕ್ರ ಅವರನ್ನು ದೂರಕ್ಕೆ ನೂಕಿ "ಹೊಟ್ತುಂಬ ಉಣ್ಣೂನು ಬರ್‍ರಿ" ಎಂದು ಆಹ್ವಾನಿಸಿದ.  ರೊಟ್ಟಿ, ಪರೋಟಗಳ ಮೇಲೆ ಚಿಕನ್, ಮಟನ್, ಕೈಗೆ ಸಿಕ್ಕಿದ್ದನ್ನು ಬಡಿಸಿಕೊಂಡು ತಿನ್ನಲು ಶುರುವಿಟ್ಟುಕೊಂಡರು ಜನ.  "ನಾಚಿಕಿ ಇಲ್ದವರ, ಭಿಕಾರಿ ಹಾಂಗ ಹಿಂಗ್ಯಾಕ ಮಾಡಾಕ ಹತ್ತೀರಿ" ನಾಜೂಕಪ್ಪ ಕೆಟ್ಟ ಸ್ವರದಲ್ಲಿ ಕೂಗಿಕೊಂಡ.  ಅವನ ಬೈಗಳು ತಮಗೆ ಸಂಬಂಧಿಸಿದ್ದು ಅಲ್ಲವೆಂಬಂತೆ, ಅಂತ ಆಹಾರವನ್ನು ಎಂದಿಗೂ ಕಂಡಿಲ್ಲವೋ ಎಂಬಂತೆ, ತಮ್ಮದು ಅನಂತಕಾಲದ ಹಸಿವು ಎನ್ನುವಂತೆ ಊಟದಲ್ಲಿ ಮೈಮರೆತಿದ್ದರು ಜನ.  ನಾಜೂಕಪ್ಪನ ಹತ್ತಿರ ಬಂದ ಸಕ್ರ `ಅವರು ಬಾಳಾ ಹಸದಾರ ನಾಜೂಕಪ್ಪ.  ಇಲ್ಲೀತನಕ ತಡಕೊಂಡಿದ್ದಽಽ ಹೆಚ್ಚನ್ನು...." ಎಂದ.

ಪೋಲೀಸ್ ವ್ಯಾನ್ ಬಂದು ನಿಂತಿತು.  ಹತ್ತಾರು ಜನ ಪೋಲಿಸರು ಮುಖ ಧುಮುಗುಡಿಸುತ್ತ ವ್ಯಾನ್ ಇಳಿದರು.  ಜೀಪಿನಿಂದಿಳಿದ ಡಿವೈಎಸ್ಪಿ ತ್ವರಿತವಾಗಿ ಶಾಮಿಯಾನದೊಳಗೆ ನುಗ್ಗಿಬಂದ.  ನಿರ್ಭೀತರಾಗಿಯೇ ಇದ್ದರು ಜನ.  "ಒದ್ದು ಎಳಕೊಂಡು ನಡೀರಿ ಈ ಹರಾಮ್‌ಖೋರ ಮಕ್ಕಳನ್ನ" ಮಾಜಿ ಮಂತ್ರಿಯೊಬ್ಬರು ವಿಕಾರವಾಗಿ ಕೂಗಿದರು.  "ನಡೀಲೆ ಬದ್ಮಾಶ್, ಹಲ್ಕಾನನ್ಮಗನೆ....." ಎಂದು ತನ್ನ ಸಂಸ್ಕಾರ ನಾಲಗೆಯಿಂದ ಅನಾಗರಿಕರ ಭಾಷೆ ಬಳಸುತ್ತ ರಾಕ್ಷಸಿ ಕೈಗಳಿಂದ ಒಬ್ಬೊಬ್ಬನ ಚಂಡಿಗೆ ಕೈಹಾಕಿ ವೀರಾವೇಶ ಪ್ರದರ್ಶಿಸಿದ ಡಿವೈಎಸ್ಪಿ.  "ಹಸಿದೋರು ಯಾರಿಗೂ ಅಂಜುದಿಲ್ಲ ಸಾಹೇಬರ" ಸಕ್ರ ಧೈರ್ಯದಿಂದ ಹೇಳಿದ.

"ದಂಗಾ ನಡಸ್ತಿಯೇನಲೆ ಮಿಂಡರಿಗುಟ್ಟಿದವನೆ.  ಓಂದಽಽ ಒದ್ರ ನೆಲಾ ಬಿಟ್ಟು ಏಳಂಗಿಲ್ಲ ನೀನು" ಡಿವೈಎಸ್ಪಿ ಕೆಂಡದ ಕಣ್ಣಿಂದ ಸಕ್ರನನ್ನು ದಿಟ್ಟಿಸಿದ.

"ನಾವು ಬದ್ಮಾಶರು, ಪುಂಡರು, ಮಿಂಡರಿಗುಟ್ಟಿದವರು ಅಲ್ರಿ ಸಾಹೇಬರ.  ಬಡೂರು.  ಕೂಲಿಜನ.  ನಿಮ್ಹಂಗ ಮನಿಷ್ಯಾರು.  ಈ ರಾಜಕೀಯ ಮಂದಿ ನಮ್ಮನ್ನ ದೇವರಂತ ಕರೀತಾರ.  ದೊರೆಗಳು ಅಂತಾರ.  ನಮ್ಮ ಸೇವಾ ಮಾಡ್ತಿವಂತಾರ;  ಈಗ ನೋಡಿದ್ರ ಉಪವಾಸ ಕೊಲ್ಲಾಕ ಹತ್ತ್ಯಾರ" ಕಠೋರ ಸತ್ಯವನ್ನು ಹೇಳಿದ ಸಕ್ರ.

"ಇಂವಾ ಸುಳ್ಳು ಹೇಳಾಕ ಹತ್ತ್ಯಾನ.  ಇವರ್‍ಯಾರೋ ನಮ್ಗ ಗೊತ್ತಿಲ್ಲ, ಒಮ್ಮೇಲೆ ನುಗ್ಗಿ ಬಂದು ಇಲ್ಲಿ ದಾಂಧಲೆ ನಡಿಸ್ಯಾರ" ಅಪ್ಪಟ ಸುಳ್ಳು ಹೇಳದ ಒಬ್ಬ.  ಆ ಮಾತು ಕೇಳಿಯೂ ಕೇಳದಂತೆ ನಿಂತಿದ್ದ ನಾಜೂಕಪ್ಪ.  ಸಹನೆಯ ಕಟ್ಟೆಯೊಡೆದವನಂತೆ ಡಿವೈಎಸ್ಪಿ ಸಕ್ರನ ಎದೆಯ ಮೇಲೆನ ಅಂಗಿ ಹಿಡಿದು ಜೋರಾಗಿ ಎಳೆದ.  ಸಕ್ರ ಗಟ್ಟಿಯಾಗಿ "ಸಾಹೇಬರ ಈ ರೊಟ್ಟಿ, ಅನ್ನದ ಮ್ಯಾಲೆ ನಮ್ಮ ಹಕ್ಕು ಐತಿ" ಎಂದ.  ಅವನನ್ನು ವ್ಯಾನಿನತ್ತ ದೂಡಿದ ಡಿವೈಎಸ್ಪಿ "ಜೈಲಿನ್ಯಾಗ ಚಲೋತಂಗ ತಿನಸ್ತೀನಿ ನಡಿ ಮಗನ" ಎಂದ.

ಜನರ ರಕ್ತ ಕಳಕಳ ಅಂದಿತು.  "ಪೋಲಿಸರ ದಬ್ಬಾಳಿಕೆಗೆ ಧಿಕ್ಕಾರ.... ಬಡವರ ಹೊಟ್ಟೆ ಮ್ಯಾಲೆ ಹೊಡೆವ ಪುಢಾರಿ ರಾಜಕಾರಣಿಗಳಿಗೆ ಧಿಕ್ಕಾರ" ಒಕ್ಕೊರಲಿದರು ಅವರು.  ಸಕ್ರ "ಹೋರಾಟ..... ಹೋರಾಟ....." ಎಂದು ಪ್ರತಿಕ್ರಿಯೆಯ ಧ್ವನಿ ಮೊಳಗಿಸುತ್ತ ಎಲ್ಲರೂ ವ್ಯಾನೊಳಗೆ ತೂರಿಕೊಂಡರು.  ಕೂಗು ಅಬ್ಬರಗೊಳ್ಳುತ್ತಲೇ ಇತ್ತು.  ಅದು ಸಾಮಾನ್ಯವಲ್ಲ ಅನಿಸತೊಡಗಿತ್ತು ನಾಜೂಕಪ್ಪನಿಗೆ.  ಭೂಮಿ ಬಾಯಿ ಬಿಡುವುದೋ ಆಕಾಶ ಛಿದ್ರಗೊಳ್ಳುವುದೋ, ವ್ಯಾನ್ ಸ್ಪೋಟಗೊಳ್ಳುವುದೋ ಎಂದು ದಿಗಿಲುಗೊಳಗಾದ ಅವನಿಗೆ ಸಕ್ರನ ವರ್ತನೆ ವಿಚಿತ್ರವಾಗಿ ತೋರಿತ್ತು.  ಏಕಾಏಕಿ ಸಕ್ರ ಹೀಗೇಕೆ ಬದಲಾದನೆಂದು ತಲೆಕೆದರಿಕೊಂಡ ನಾಜೂಕಪ್ಪ.

ಸಕ್ರ ದೊಡ್ಡ ಧ್ವನಿಯಲ್ಲಿ "ರೊಟ್ಟಿಗಾಗಿ ಜೇಲಾಗ್ಲಿ, ಬೂಟಿನ ಒದೆತ, ಲಾಟಿಯ ಹೊಡೆತ ಬೀಳ್ಲಿ.  ಬಂದೂಕಿನ ಗುಂಡು ಎದಿಯಾಗ ಹೋಗ್ಲಿ" ಎನ್ನುತ್ತಿದ್ದ.  ಜನರು ತತ್‌ಕ್ಷಣ ಅವನ ಮಾತುಗಳನ್ನು ಪ್ರತಿಧ್ವನಿಸುತ್ತಿದ್ದರು.

ಸಕ್ರ ನುರಿತ ಬಂಡಾಯಗಾರನಂತೆ ಗೋಚರಿಸಿದ ನಾಜೂಕಪ್ಪನಿಗೆ.  ತಂಗಾಳಿ ಬಿರುಗಾಳಿಯಾಗುವುದೆಂದರೇನು?  ಮಂಜುಗಡ್ಡೆ ಉರಿದ ಕೆಂಡದಂತೆ ಪ್ರಜ್ವಲಿಸುವುದೆಂದರೇನು?  ಅವನ ತಾಕತ್ತಿನ ಹಿಂದೆ ವಿರೋಧ ಪಕ್ಷದವರ ಕೈವಾಡವೇನಾದರೂ ಇದ್ದಿರಬಹುದೆ?  ಗುಮಾನಿ ನಾಜೂಕಪ್ಪನನ್ನು ತೀವ್ರವಾಗಿ ಆವರಿಸಿಕೊಂಡಿತು.  ಸಕ್ರನದು ಹಸಿವಿನ ಸಿಟ್ಟು ಎಂದು ಅವನಿಗಾಗಲಿ, ರಾಜಕೀಯ ಮುತ್ಸದ್ದಿಗಳಿಗಾಗಲಿ ಹೊಳೆಯಲೇ ಇಲ್ಲ.

ಪ್ರತಿಭಟನೆಗಾರರ ಕೆಚ್ಚು ಪ್ರತಿಕ್ಷಣಗಳ ಮೈತುಂಬಿಕೊಳ್ಳತೊಡಗಿತ್ತು.  ನಾಜೂಕಪ್ಪನ ಸೂಕ್ಷ್ಮಗಳ ಜೀವಿದ್ರವ್ಯ ಬತ್ತಿದಂತಾಗಿದ್ದರೆ, ರಾಜಕಾರಣಿಗಳ ತಂತ್ರಗಳು ನಪುಂಸಕವೆನಿಸಿದವು.  ಕೂಲಿಗಳನ್ನು ಕುರಿಗಳೆಂದು ತಿಳಿದಿದ್ದೆ ತಪ್ಪಾಯಿತೆಂದುಕೊಂಡ ನಾಜೂಕಪ್ಪ.

ವ್ಯಾನಿನ ಒಳಗೂ ಹೊರಗೂ ತುಂಬಿ ತುಳುಕಾಡತೊಡಗಿದ ಜನ ಅಪಾಯಕಾರಿಗಳಂತೆ ಕಂಡು ಬಂದರು.  ಅವರಿಗೆ ಬುದ್ಧಿ ಕಲಿಸಲು ಯೋಚಿಸಿದ ಡಿವೈಎಸ್ಪಿ ಸೊಂಟದಲ್ಲಿನ ಪಿಸ್ತೂಲು ತೆಗೆದು, ಆಕಾಶಕ್ಕೆ ಕೈಯೆತ್ತಿ ಗಾಳಿಯಲ್ಲಿ ಒಂದು ಗುಂಡು ಹಾರಿಸಿದ.  ನಾಜೂಕಪ್ಪನ ಎದೆಗುಂಡಿಗೆ ಝಲ್ಲೆಂದಿತು.  ರಾಜಕೀಯ ಮಂದಿಯ ನಶೆ ಜರ್‍ರನೆ ಪಾದಕ್ಕಿಳಿಯಿತು.

"ಗುಂಡು ಹೊಡೆವ ಪುಂಡರಿಗೆ ಮುರ್ದಾಬಾದ್......." ಜನರ ಸಮೂಹದಿಂದ ಸಿಡಿದು ಬಂದಿತು ಒಂದು ಧ್ವನಿ.  "ಒಬ್ಬೊಬ್ಬರ ಎದಿಗುಂಡಿಗಿ ಒಡೆದು ಹಾಕ್ತೀನಿ" ತಲೆಕೆಟ್ಟವರಂತೆ ಚೀತ್ಕರಿಸಿದ ಡಿವೈಎಸ್ಪಿ.  ಚುನಾವಣೆ ಹೊಸ್ತಿಲಲ್ಲಿ ಅಮಾಯಕರ ಹೆಣ ಉರುಳಿದರೆ ಮತದಾರರು ತಮ್ಮ ಪಕ್ಷದ ಗೋರಿ ಕಟ್ಟುತ್ತಾರೆ.  ಅಧಿಕಾರ ದಕ್ಕಿಸಿಕೊಳ್ಳಲು ತುದಿಗಾಲ ಮೇಲೆ ನಿಂತಿರುವ ವಿರೋಧ ಪಕ್ಷದವರಿಗೆ ತಾವೇ ಈ ಮೂಲಕ ರತ್ನಗಂಬಳಿಯನ್ನು ಹಾಸಿಕೊಟ್ಟಂತಾಗುತ್ತದೆ ಎಂದು ಮಾಜಿ ಶಾಸಕರೊಬ್ಬರು ಕಳವಳಿಸಿದರು.  ಜಾಗೃತರಾದ ಮಾಜಿ ಸಚಿವರು ಈ ಜನರನ್ನು ನಾವು ಸಂಭಾಳಸ್ತೀವಿ.  ನೀವು ವಾಪಸ್ ಹೋಗಿ ಬಿಡ್ರಿ" ಎಂದು ಡಿವೈಎಸ್ಪಿಗೆ ಹೇಳಿ, ವ್ಯಾನಿನಿಂದ ಸಕ್ರನನ್ನು ಕೆಳಗಿಳಿಸಿ "ನಮ್ಮಿಂದ ಸ್ವಲ್ಪ ಎಡವಟ್ಟಾತು ಸಕ್ರಣ್ಣ" ಎನ್ನುತ್ತ ಅವನ ಹೆಗಲ ಮೇಲೆ ಕೈಹಾಕಿಕೊಂಡು ಶಾಮಿಯಾನದತ್ತ ನಡೆದರು.

"ಈ ಪಕ್ಷ ನಿಮ್ಮದು.  ನಾವೂ ನಿಮ್ಮವರು ಸಕ್ರಣ್ಣ."  ಪಕ್ಷದ ಕಾರ್ಯದರ್ಶಿ ದೇಶಾವರಿ ನಗೆಯಾಡುತ್ತ ಹೇಳಿದರು.

"ಇದು ಸತ್ಯ ಅಹಿಂಸೆಯ ಪಕ್ಷ.  ಗಾಂಧೀಜಿ ಸಿದ್ಧಾಂತವನ್ನು ಒಪ್ಕೊಂಡೋರು ನಾವು.  ನಿಮ್ಮಂಥ ಬಡವರು, ಕೂಲಿಕಾರರು ನಮ್ಮ ಪಕ್ಷದ ಜೀವಾಳ.  ನೀವಿಲ್ಲ ಅಂದ್ರ ನಾವ್ಯಾವ ಗಿಡದ ತಪ್ಪಲೊ ಸಕ್ರಣ್ಣ.  ಭಗವಂತ ಈ ಭೂಮಿ ಸೃಷ್ಟಿ ಮಾಡದಾ ನಿಮ್ಮಂಥ ಒಳ್ಳೆ ಮನುಷ್ಯಾರನ ಸೃಷ್ಟಿ ಮಾಡದಾ.  ನೀವು ನಮ್ಗ ಸ್ಥಾನ-ಮಾನ ಕೊಟ್ರಿ.  ನಿಮ್ಮ ಋಣದಾಗ ಇದ್ದೋರು ನಾವು ನಮ್ಮ ತಪ್ಪು ಒಪ್ಕೊಂತೀವಿ.  ಎಲ್ಲಾರ್‍ನೂ ಶಾಮಿಯಾನದೊಳಗೆ ಕರ್‍ಕೊಂಡು ಬಾ ನೀನು, ಹೊಟ್ಟೆ ತುಂಬ ಊಟ ಮಾಡ್ರಿ.  ನಿಮ್ಗ ಕೈ ತುಂಬ ರೊಕ್ಕಾ ಕೊಟ್ಟು, ಸುರಕ್ಷಿತ ನಿಮ್ಮೂರಿಗೆ ಕಳಿಸಿ ಕೊಡ್ತೀವಿ" ಹೊಟ್ಟೆಯಲ್ಲಿನ ಹರಳು ಕರಗುಂತೆ ಮಾತಾಡಿದ ಮತ್ತೊಬ್ಬ ಧುರೀಣ.

ಊರಸವಳ್ಳಿಯಂತೆ ಬಣ್ಣ ಬದಲಾಯಿಸುತ್ತಿರುವ ರಾಜಕಾರಣಿಗಳ ರೀತಿಗೆ ತತ್ತರಗೊಂಡ ಡಿವೈಎಸ್ಪಿ ಕೂಡಲೇ ಜೀಪೇರಿಕೊಂಡು ಹೋದ.  ಅವನ ಹಿಂದೆಯೇ ಪೋಲೀಸ್ ವ್ಯಾನು ತೆವಳುತ್ತ ಸಾಗಿತು.  ನಾಜೂಕಪ್ಪನಂತೂ ತನ್ನೆರಡೂ ಹಸ್ತಗಳನ್ನು ಫೆವಿಕಾಲಿನಿಂದ ಭದ್ರಪಡಿಸಿಕೊಂಡಂತೆ ಸಕ್ರನ ಎದುರಲ್ಲಿ ಮುಗಿದುಕೊಂಡೆ ನಿಂತಿದ್ದ.

ನೆರೆದ ಜನರಲ್ಲಿ ಒಂದಿಬ್ಬರು ಸಕ್ರನನ್ನು ತಮ್ಮ ಹೆಗಲ ಮೇಲೆ ಹೊತ್ತುಕೊಂಡರು.  `ಸಕ್ರಣ್ಣನಿಗೆ ಜಯವಾಗಲಿ' ಹರ್ಷೋದ್ಗಾರ ಮುಗಿಲು ಮುಟ್ಟಿತು.  ವಿವಶರಾಗಿ ನಿಂತಿದ್ದ ಶಾಸನಾಧೀಶರಿಗೆ ಶಾಮಿಯಾನದ ಎತ್ತರಕ್ಕೇರಿದ ಸಕ್ರನ ಕಾಲುಗಳು ವಾಮನನ ಪಾದಗಳಂತೆ ಕಂಡವು.

               ***

ಕೀಲಿಕರಣ: ಕಿಶೋರ್‍ ಚಂದ್ರ

ಎಂಥಾ ನಗಿ ಬಂತೋ ಎನಗೆ

-ಶಿಶುನಾಳ ಶರೀಫ್

ಎಂಥಾ ನಗಿ ಬಂತೋ ಎನಗೆ          
ಗಡ ಮುದುಕಿಯ ಕಂಡು                       ||ಪ||

ನಿಂತು ನೋಡಲಾಗವ್ಲ್ಲದು ಕಣ್ಣಿಲೆ     
ಸಂತ್ಯಾಗ ಮಂದಿ ಕಾಣದವಳೋ           ||ಅ.ಪ.||

ಆರು ಮೂರು ಗೆಳತೇರ ಸ್ನೇಹವನು
ದೂರ ಮಾಡದೆ ಸುಮ್ಮ್ನದಿ ತಾನು
ದಾರಿಹಿಡಿದು ಸಾರುವಳಿದು ಏನು
ದಾರಿ ನಡೆದ ಮುದುಕಿಯ ಕಂಡು           || ೧ ||

ಎಂಟು ಮಂದಿ ನೆಂಟರು ಮನಸೋತು
ಗಂಟುಬೀಳಲವರನು ಕೂಡಿಕೊಂಡು
ಪಂಟುಹಚ್ಚಿ ಪರವಶದಿ ಪೊಗುತಿಹ
ಸೊಂಟಮುದುಕಿಯನು ಕಂಡು              || ೨ ||

ಸಂದಿಗೊಂದಿಯೊಳು ಹುಡಕುತ ಬರಲು
ತಂದೆ ಗುರುಗೋವಿಂದನ ಚರಣವ
ಹೊಂದಿಕೋ ಎಂದರೆ ನಿಂದೆಯನಾಡುತ
ಮುಂದಕೆ ನಡಿವಳು ಮಂದಗಮನದಿ       || ೩ ||
                 ****

ಕೀಲಿಕರಣ: ಎಂ.ಎನ್.ಎಸ್. ರಾವ್

ನಡಿ ನಡಿಯುತ ಗಂಡ ನಡಮುರಿದೊದೆನ್ನ

-ಶಿಶುನಾಳ ಶರೀಫ್

ನಡಿ ನಡಿಯುತ ಗಂಡ ನಡಮುರಿದೊದೆನ್ನ
ಹುಡುಗಾಟ ಬಿಡಿಸಿ ಹೌದೆನಿಸಿದನೇ                ||ಪ||

ಮದನಗಿತ್ತ್ಯಾಗಿ ಬಂದು ಮನೆಯೊಳಗಿರುತಿರೆ
ಬೆದಗಡಿಕಿಯೆಂದು ಹೆಸರಿಡಿಸಿದನೇ
ನದರಿನಮ್ಯಾಲ ತಾ ನದರಿಟ್ಟಿ ಎನಗೆ
ಮುದದಿ ಚುಂಬನಕೊಟ್ಟು ರಮಿಸಿದನೇ          ||೧||

ಹೊಸದಾದ ಸೊಸಿಯಾದ ಆಕ್ಕನಮಗಳಿಗೆ
ಮುಸರಿ ಬಳಸಿ ಕಸ ಹೊಡಿಸಿದನೇ
ವಸುಧಿಯೊಳು ಶಿಶುನಾಳಧೀಶನ ದಯದಿಂದ
ಕಸೂತಿಯ ಕುಪ್ಪಸ ತೋಡಿಸಿದನೇ               ||೨||
                 ****

ಕೀಲಿಕರಣ: ಎಂ.ಎನ್.ಎಸ್. ರಾವ್

ಮುದಿಕ್ಯಾಗಿ ಮುರುಕ ಇನ್ನ್ಯಾಕ

-ಶಿಶುನಾಳ ಶರೀಫ್

ಮುದಿಕ್ಯಾಗಿ ಮುರುಕ ಇನ್ನ್ಯಾಕ
ಎದುರಿಗೆ ನೀರಗಿಗಳ್ ಒದೆಯುವದು ಸಾಕೆ                    ||ಪ||

ಮೊದಲಿಗೆ ಮೂವರು ಕೂಡಿ ಮಾಯ
ಮದನ ಮಂದಿರದೊಳು ಮುದದಿ ಮಾತಾಡಿ
ಹದಗೆಟ್ಟು ಹಾದರ ಮಾಡಿ ಮುಂದೆ
ಬದುಕಿನ ಎಚ್ಚರ ನಿನಗಿಲ್ಲ ಖೋಡಿ                                ||೧||

ಏಳೆಂಟು ಗೆಳತೇರು ಜತ್ತು  ಹಳ್ಳಿ ಹಳ್ಳಿ
ಸೂಳೇರ ತೆರದಲ್ಲಿ ತಿರುಗುತಿ ಎತ್ತ
ಕಾಳ ಕತ್ತಲದೊಳು ಗೊತ್ತು
ಹಾಳು ಗುಡಿಯೊಳು ಬಂದು ಬೀಳುದು ಕತ್ತೆ                    ||೨||


ನೆರ ಹಾಯ್ತು ತೆಲಿ ಬೆಳ್ಳಗಾಯ್ತು ಬುದ್ಧಿ
ಬರಲಿಲ್ಲ ಹಿರಿ ಕಿರಿಯರು ಹೇಳಲಾಗಿ ಜನ
ಹರಲಿಗೆ ಗುರಿಯಾಗಿ ನೀನು
ಶಿಶುನಾಳೇಶಗ ಜೋಡು ಕಾಯಿ ವಡಿಸವ್ವಾ ಮುದಿಕಿ        ||೩||
                 ****

ಕೀಲಿಕರಣ: ಎಂ.ಎನ್.ಎಸ್. ರಾವ್

ಗುರುವಿಗೆ ಮರುಳು ಮಾಡುವರೇನೆ ಮಾನಿನಿ

-ಶಿಶುನಾಳ ಶರೀಫ್

ಗುರುವಿಗೆ ಮರುಳು ಮಾಡುವರೇನೆ ಮಾನಿನಿ ?
ಧರೆಯೊಳು ಪ್ರಭುವರ ದೊರಕುವನೆ ?             ||ಪ.||

ಸರಸಿಜಮುಖಿವರ ಪರಮಮಧುಕೇಶ್ವರ
ನರನಲ್ಲ ತಿಳಿ ನಿನ್ನ ಸರಕೇನೆ ?
ಧರಿಗೆ ಪಾರ್ವತಿ ತನ್ನ ತಾಮಸರೂಪದಿ
ನೆರೆ ಬಂದರೇನಾತ ಬೆರೆಯುವನೇ ?               ||೧||

ಚನ್ನ ಚಲ್ವಿಕೆ ಕಂಡು ಸೋಲದೆ ತಾ ನಿಂದು
ಆನ್ಯರು ಕೇಳಿದರ್‍ಹೇಳುವನೆ ?
ತನ್ನ ನಿಜದಿ ತಾನೆ ಲೀಲೆಯಿಂದಿರುವನು
ಶೂನ್ಯಕ್ಕೆ ಶೂನ್ಯ ತಾನಿರುತಿಹನು                    ||೨||

ಮೊದಲು ಶಿಶುವಿನಾಳ ಸದ್ಗುರು ನಿರ್ಮಳಸ್ಥಳ-
ಕ್ಕೊದಗಿ ಮೃದಂಗವ ಬಾರಿಸಿದ
ಆದನು ತಿಳಿದು ಸುಮನಿರು ನಡಿ ಹಿಂದಕ್ಕೆ
ಇದಕೇನು ಬಯಸುವದು ಬ್ಯಾಡಿನ್ನು                ||೩||
                 ****

ಕೀಲಿಕರಣ: ಎಂ.ಎನ್.ಎಸ್. ರಾವ್

ಎಂಥಿಂಥಾದೆಲ್ಲಾನು ಬರಲಿ

-ಶಿಶುನಾಳ ಶರೀಫ್

ಎಂಥಿಂಥಾದೆಲ್ಲಾನು ಬರಲಿ
ಚಿಂತೆಯಂಬೋದು ನಿಜವಾಗಿರಲಿ            ||ಪ||

ಪರಾತ್ಪರನಾದ ಗುರುವಿನ
ಅಂತಃಕರುಣ ಒಂದು ಬಿಡದಿರಲಿ               ||ಅ.ಪ.||

ಬಡತಾನೆಂಬುದು ಕಡತನಕಿರಲಿ
ವಡವಿ ವಸ್ತ ಹಾಳಾಗಿಹೋಗಲಿ
ನಡುವಂಥ ದಾರಿಯು ತಪ್ಪಿ
ಅಡವಿ ಸೇರಿದಂತಾಗಿ ಹೋಗಲಿ                 ||೧|| 

ಗಂಡಸ್ತಾನ ಇಲ್ಲದಂತಾಗಲಿ
ಹೆಂಡರು ಮಕ್ಕಳು ಬಿಟಗೊಟ್ಟು ಹೋಗಲಿ
ಕುಂಡಿ ಕುಂಡಿ ಸಾಲ್ದವರೊದಿಯಲಿ
ಬಂಡುಮಾಡಿ ಜನರು ನಗಲಿ                     ||೨||

ನಂಬಿಗೆ ಎಳ್ಳಷ್ಟಿಲ್ಲದಂತಾಗಲಿ
ಆಂಬಲಿ ಎನಗ ಸಿಗದೆಹೋಗಲಿ
ಹುಂಬಸುಳೇಮಗನೆಂದು ಬೈಯಲಿ
ಕಂಬಾ ಮುರಕೊಂಡು ಎನ್ನ ಮೇಲೆ ಬೀಳಲಿ  ||೩||

ವ್ಯಾಪಾರುದ್ಯೋಗ ಇಲ್ಲದಾಂತಾಗಲಿ
ಬುದ್ಧಿಯೆಂಬುದು ಮಸಣಿಸಿ ಹೋಗಲಿ
ಮದ್ದುಹಾಕಿ ಎನ್ನನು ಕೊಲ್ಲಲಿ
ಹದ್ದು ಕಾಗಿ ಹರಕೊಂಡು ತಿನ್ನಲಿ               ||೪||

ಭಾಷೆ ಪಂಥ ನಡಿದ್ಹಾಂಗಾಗಲಿ
ಹಾಸ್ಯಮಾಡಿ ಜನರೆಲ್ಲರು ನಗಲಿ
ಈ ಶಿಶುನಾಳಧೀಶ ಸದ್ಗುರುವಿನ
ಲೇಸಾದ ದಯವೊಂದು ಕಡೆತನಕಿರಲಿ     ||೫||
                ****

ಕೀಲಿಕರಣ: ಎಂ.ಎನ್.ಎಸ್. ರಾವ್

ಗುರುನಾಥಾ ರಕ್ಷಿಸೋ

-ಶಿಶುನಾಳ ಶರೀಫ್

ಗುರುನಾಥಾ ರಕ್ಷಿಸೋ ಹೇ
ಕರುಣಾಸಾಗರಾ                                             ||ಪ||

ನರಜೀವಿಗೆ ಈ ದುರಿತ ಭವದ ಭಯ
ಪರಿಹರಿಸೆನುತಲಿ ಮರೆಹೊಕ್ಕೆನು                        ||೧||

ಪಾಪಾಂಬುಧಿಯನು ಪಾರುಮಾಡೆನುತಲಿ
ಶ್ರೀಪಾದಾಂಬುಜ ನಂಬಿಕೊಂಡೆ ಪರಮಾತ್ಮಾ        ||೨||

ವಸುಧಿಯೊಳು ಶಿಶುನಾಳಧೀಶನ ಸೇವಕನ
ವ್ಯಸನಗಳಿದು ಸಂತೋಷದಿ ಸಲಹೋ                  ||೩||
                ****

ಕೀಲಿಕರಣ: ಎಂ.ಎನ್.ಎಸ್. ರಾವ್

ನನ್ನೊಳಗ ನಾ ತಿಳಕೊಂಡೆ

-ಶಿಶುನಾಳ ಶರೀಫ್


ನನ್ನೊಳಗ ನಾ ತಿಳಕೊಂಡೆ
ನನಗ ಬೇಕಾದ ಗಂಡನ್ನ ಮಾಡಿಕೊಂಡೆ ||ಪ||

ಆಜ್ಞಾಪ್ರಕಾರ ನಡಕೊಂಡೆ
ನಾ ಎಲ್ಲಾರ ಹಂಗೊಂದು ಹರಕೊಂಡೆ   ||ಅ.ಪ.||

ಆರು ಮಕ್ಕಳನಡುವಿಗಟ್ಟಿ
ಮೂರು ಮಕ್ಕಳ ಬಿಟ್ಟಗೊಟ್ಟೆ
ಇವನ ಮೇಲೆ ಮನವಿಟ್ಟೆ
ಎನ್ನ ಬದುಕು ಬಾಳೆವೆಲ್ಲಾ ಬಿಟ್ಟಗೊಟ್ಟೆ  ||೧||

ಒಂದನಾಡಿದರೆ ಕಡಿಮೆಯೆಂದೆ
ಮತ್ತೆರಡನಾಡಿದರೆ ಹೆಚ್ಚೆಂದೆ
ಬೆಡಗ ಮಾತಿದು ನಿಜವೈತಂದೆ
ಇದು ಸುಜ್ಞಾನಿಗಳಿಗೇ ತಿಳಿತೆಂದೆ        ||೨||

ಶಿವಶಿವಾಯೆಂಬ ಹಾದಿ ಬೇಡಿಕೊಂಡೆ
ಗುರೂಪದೇಶವ ಪಡಕೊಂಡೆ
ಈ ಭವಕೆ ಬಾರದಂತೆ ಮಾಡಿಕೊಂಡೆ
ಗುರುಗೋವಿಂದನ ಪಾದಾ ಹಿಡಕೊಂಡೆ   ||೩||
                ****



ಕೀಲಿಕರಣ: ಎಂ.ಎನ್.ಎಸ್. ರಾವ್

ಗುರುಧ್ಯಾನವ ಮಾಡಿದಿ

ಗುರುಧ್ಯಾನವ ಮಾಡಿದಿ
ಭಕ್ತಿಯ ನೀಡಿದಿ
ಮುಕ್ತಿಯ ಬೇಡಿದಿ
ಗುರುವಿನ ಕೂಡಿದಿ
ಕುಣಿಕುಣಿದಾಡಿದಿ
ಕೂಸು ನೀನಾಡಿದಿ ಈಶಾಡಿದಿ   || ೧ ||

ಬೆಳ್ಳನ್ನ ಬೆಳದಿಂಗಳಾ
ಹಾಲೂರಿದಂಗಳಾ
ಬೆಳ್ಳಿಯ ಗಂಗಾಳಾ ಬೆಳ್ಳನ್ನಂಗಳಾ
ಜಯ ಜಯ ಮಂಗಳಾ
ಸದಾ ಶಿಶುನಾಳ ಸಾಧುಸಂತ ಮೇಳಾ
ಗುರುಗೋವಿಂದ್ಹೌದೇಳಾ         || ೨ ||
                ****
-ಶಿಶುನಾಳ ಶರೀಫ್


ಕೀಲಿಕರಣ: ಎಂ.ಎನ್.ಎಸ್. ರಾವ್

ಹಾಕಿದ ಜನಿವಾರವಾ ಸದ್ಗುರುನಾಥಾ

ಹಾಕಿದ ಜನಿವಾರವಾ ಸದ್ಗುರುನಾಥಾ
ಹಾಕಿದ ಜನಿವಾರವಾ                                      || ಪ ||

ಹಾಕಿದ ಜನಿವಾರ ನೂಕಿದ ಭವಭಾರ
ಬೇಕೆನುತಲಿ ಬ್ರಹ್ಮಜ್ಞಾನ ಉಚ್ಚರಿಸೆಂದು             || ಅ. ಪ.||

ಸಂದ್ಯಾವಂದನೆ ಕಲಿಸಿ ಆ-
ನಂದದೀವ ಬಿಂದು ವರ್ಗದಿ ನಿಲಿಸಿ
ಹೊಂದಿಸಿ ಯಮುನಾತೀರದ ಮಧ್ಯದಲಿನಿಂದು
ಎಂದೆಂದಿಗೂ ಯಮದಂದುಗನವಳಿಯೆಂದು       || ೧ ||

ಶಿಶುನಾಳಧೀಶನಲ್ಲೇ ಹುಣ್ಣಿವಿನೂಲು
ಹೊಸತಾಗಿ ಹೊಸಿಯುತಲಿ
ಮುಸುಕಿರ್ದವ್ಯಸನದ ಕಸರನು ಕಳಿಯೆಂದು
ಹಸನಾಗಿ ಮೂಲಮಂತ್ರದ ಮನಿಯೊಳುನಿಂದು || ೨ ||
                ****
-ಶಿಶುನಾಳ ಶರೀಫ್


ಕೀಲಿಕರಣ: ಎಂ.ಎನ್.ಎಸ್. ರಾವ್

ನೋಡುನು ಬಾ ಗುರುನಾಥನ

ನೋಡುನು ಬಾ ಗುರುನಾಥನ ಸಖಿ
ನೋಡುನು ಬಾ ಮುಕ್ತಿ ಬೇಡುನು ಬಾರೆ                       || ಪ ||

ಕಾಮಿತ ಫಲವಾ ಪ್ರೇಮದಿ ಕೊಡುವಾ
ನಮ ರೂಪವ ಸಂಜೀವನ ಸಖಿ ನೋಡುನು ಬಾ             || ೧ ||

ಪರಮ ಪ್ರಕಾಶ ಪಾವನಕರ ಜಗದಿಶನೇ ಸಖಿ
ಹೃತಭವತಾಪಾ ಸಂಹೃತ ಕೋಪಾ ಗುಡಿಪುರ
ಕಲ್ಮಠ ಸ್ವರೂಪನ ಸಖಿ ನೋಡುನು ಬಾ                        || ೨ ||

ವಸುಧೆಗೆ ಶಿಶುನಾಳಧೀಶನೆನಸಿದ
ಎಸೆವೆನ್ನಿ ನೇತ್ರನ ವಂದಿಸಿಯಾತನ ಸಖಿ ನೋಡುನು ಬಾ || ೩ ||
                ****
-ಶಿಶುನಾಳ ಶರೀಫ್


ಕೀಲಿಕರಣ: ಎಂ.ಎನ್.ಎಸ್. ರಾವ್

ಗುರುವೆ ಬಿನ್ನಪವುದ್ಧರಿಸೋ

ಗುರುವೆ ಬಿನ್ನಪವುದ್ಧರಿಸೋ ಎನ್ನ
ಪರಮ ಸಖನ ಜ್ಜರದುರಿ ಪರಿಹರಿಸೋ              || ಪ ||

ಇರುತಿರೆ ಆತನ ಘಟಕೆ ರೋಗಬರುವುದಿನ್ನ್ಯಾಕೆ
ಮರಗುವ ಸಂಕಟವ್ಯಾಕೆ
ಮರೆಹೊಕ್ಕೆ ನಿನ್ನಯ ಪದಕೆ
ನಿಮ್ಮ ಸ್ಮರಿಸಲು ಈ ಕರ್ಮ ಸಂಕಟವ್ಯಾಕೆ         || ೧ ||

ದೇಹವೆರಡಾತ್ಮ ಒಂದಾಗಿ
ನಾವು ತಾವು ಗುರುಸೇವೆಗೆ ಆನುಕೂಲವಾಗಿ
ಭವದ ಲಂಪಟ ಕರ್ಮನೀಗಿ
ನಿತ್ಯ ಶಿವಧ್ಯಾನದೊಳು ನಾವು ಇರುತಿರಲಾಗಿ     || ೨ ||

ಬೇಡಿಕೊಂಬುವೆ ಭಕ್ತಿಗಾಗಿ
ದಯಮಾಡಿ ರಕ್ಷಿಸಬೇಕು ಕಲ್ಮಷ ನೀಗಿ
ನೋಡಿ ಕಡಿಯೋ ಭವಬಂದಾ
ರೂಡಿಪ ಶಿಶುನಾಳಧೀಶನ ಕಂದಾ                   || ೩ ||
                ****
-ಶಿಶುನಾಳ ಶರೀಫ್


ಕೀಲಿಕರಣ: ಎಂ.ಎನ್.ಎಸ್. ರಾವ್

ಅಬ್ಬಾಸ್ ಮೇಲಿನಮನಿ

ಸಮಕಾಲೀನ ಪೀಳಿಗೆಯ ಕತೆಗಾರರಲ್ಲಿ ಅಬ್ಬಾಸ್ ಮೇಲಿನಮನಿ ಹೆಸರು ಬಹು ಮುಖ್ಯವಾದುದು.  ಶರಣರು ಮೆಟ್ಟಿದ ನೆಲದಲ್ಲಿರುವ ಅಬ್ಬಾಸ್ ಮೌಲ್ಯಗಳ ಬಿತ್ತು ಕಾಯಕವನ್ನು ತಮ್ಮ ಸಂವೇದನಶೀಲ ಕತೆಗಳ ಮೂಲಕ ಮಾಡುತ್ತ ಬಂದಿದ್ದಾರೆ.  ಆಡು-ನುಡಿ ಸೊಗಡಿನ ಭಾಷೆ; ಕಾವ್ಯದ ಲಯದಲ್ಲಿ ಓದುಗನಿಗೆ ನವನವೀನ ಪ್ರತಿಮೆ, ಆಕೃತಿಗಳನ್ನು ಕಟ್ಟಿಕೊಡುವುದನ್ನು ಇವರು ಕತೆಗಳ ಮೂಲಕ ಮಡಿರುತ್ತಾರೆ.

ಹಿಂದೂ ಮುಸ್ಲಿಂ ಸಮುದಾಯಗಳ ಸಾಮಾಜಿಕ ಸಂಬಂಧಗಳನ್ನು, ಅದರ ಸಂವೇದನೆಗಳನ್ನು ಅಬ್ಬಾಸ್‌ರ ಕತೆಗಳು ಕಟ್ಟಿಕೊಡುತ್ತವೆ.  ಒಂದು ಸಮಾಂತರದ ನೆಲೆಯಲ್ಲಿ ನಿಮತು ಧ್ಯಾನಸ್ಥನಾಗಿ ಕಾಣುವ ಪರಿ ಅನನ್ಯ.  ಸಮಾಜದ ಆ ಬಗೆಯ ವಿವಿಧ ಮುಖಗಳ ಅನುಭೂತಿ ಇವರ ಕತೆಗಳಲ್ಲಿದೆ.

ಕವನ ಸಂಕಲನ:

೧. ಕಥೆಯಾದಳು ಹುಡುಗಿ
೨. ಭಾವೈಕ್ಯ ಬಂಧ
೩. ಪ್ರೀತಿ ಬದುಕಿನ ಹಾಡು

ಕಥಾ ಸಂಕಲನ:

೧. ಪ್ರೀತಿಸಿದವರು
೨. ಕಣ್ಣ ಮುಂದಿನ ಕಥೆ
೩. ಅರ್ಧ ಸತ್ಯಗಳು (ಬನಹಟ್ಟಿಯ ಚಿಕ್ಕೋಡಿ ತಮ್ಮಣ್ಣಪ್ಪ ಸಾಹಿತ್ಯ ಪುರಸ್ಕಾರ)
೪. ಮತ್ತೊಂದು ಕರ್ಬಲಾ (ಮಂಗಳೂರಿನ ಮುಹ್ಯುದ್ದೀನ್ ಸಾಹಿತ್ಯ ಪ್ರಶಸ್ತಿ)
೫. ಅಬ್ಬಾಸರ ಐವತ್ತು ಕಥೆಗಳು (ಡಾ. ಗೊರೂರು ಸಾಹಿತ್ಯ ಪ್ರಶಸ್ತಿ)
೬. ಹುಡುಕಾಟ (ಪಿ.ಲಂಕೇಶ ಕಥಾ ಪ್ರಶಸ್ತಿ ಹಾಗೂ ಶಿವಾನಂದ ಪಾಟೀಲ ಕಥಾ ಪ್ರಶಸ್ತಿ)
೭. ಅರ್ಥ (ಕನ್ನಡ ಸಾಹಿತ್ಯ ಪರಿಷತ್ತಿನ ಸಮೀರವಾಡಿ ದತ್ತಿ ಪ್ರಶಸ್ತಿ)

ಲೇಖನ ಸಂಕಲನ:

ಸೌಹಾರ್ದ ಸಂಸ್ಕೃತಿ

ಸಂಪಾದನೆ:

೧. ಸಣ್ಣ ಕಥೆಗಳು - ೨೦೦೪ (ಕರ್ನಾಟಕ ಸಾಹಿತ್ಯ ಅಕಾಡೆಮಿ)
೨. ಬಾಗಲಕೋಟೆಯ ಮುಳುಗದ ಕಥೆಗಳು (ಜಿಲ್ಲಾ ಪ್ರಾತಿನಿಧಿಕ ಕಥಾ ಸಂಕಲನ, ಉಡುಪಿ ಸಾಹಿತ್ಯ ಸಮ್ಮೇಳನ)
೩. ಏನೆಲ್ಲಾ ಚಿತ್ರಗಳು ತಾಯಿ (ಅವ್ವನ ಕುರಿತಾದ ಪ್ರಾತಿನಿಧಿಕ ಕವನ ಸಂಕಲನ)
೪. ಪ್ರಜ್ಞೆ (ಆಕರ ಗ್ರಂಥ, ಕನ್ನಡ ಪುಸ್ತಕ ಪರಿಷತ್ತು ಬಾಗಲಕೋಟ)

ಈ ದಿನಾಂಕದವರೆಗೆ ಲಭ್ಯವಾದ ಮಾಹಿತಿ:  ೨೦೦೮

ಬದುಕು ಎಂದರೆ ಇಷ್ಟ

-ಅಬ್ಬಾಸ್ ಮೇಲಿನಮನಿ

ನಡೆದು ನಡೆದು ಸುಸ್ತಾಗಿ ಇನು ಮುಂದೆ ಹೆಜ್ಜೆ ಕಿತ್ತಿಡಲು ಸಾಧ್ಯವಿಲ್ಲ ಅನಿಸಿದಾಗ ಜಮೀರುಲ್ಲಾ ಬಂಡೆಗಲ್ಲಿನ ಮೇಲೆ ಕುಕ್ಕರಿಸಿದ.  ಎದುರಿಗೆ ಅಪರಂಪಾರ ಕಡಲು.  ಅದರೊಡಲಿಂದ ತೇಲಿ ಬರುತ್ತಿರುವ ಬೆಡಗಿನ ಅಲೆಗಳು.  ಮುಳುಗುವ ಧಾವಂತದಲ್ಲಿರುವ ಕೆಂಪು ಸೂರ್ಯ.  ಆ ಮನೋಹರ ದೃಶ್ಯ ನೋಡಲು ತೀರದಲ್ಲಿ ಗಿಜಿ ಗಿಜಿಯೆನ್ನತೊಡಗಿದ್ದ ಜನ.  ಜಾತ್ರೆಯ ಬೆರಗು ಹುಟ್ಟಿಸಿದ ತಿನಿಸಿನ ತಳ್ಳು ಗಾಡಿಗಳು.  ತುಂಬಿ ತುಳುಕಾಡತೊಡಗಿದ್ದ ಜೀವನೋತ್ಸಾಹ.  ಅದೆಲ್ಲವನ್ನು ಅಲಕ್ಷಿಸಿ, ಪ್ರಪಂಚದ ಹಂಗು ಹರಿದುಕೊಂಡಂತೆ ಕುಳಿತಿದ್ದ ಜಮೀರುಲ್ಲಾ.



ಆರು ತಿಂಗಳಿನ ಹಿಂದೆ ಇದೇ ಕಡಲ ತೀರದಲ್ಲಿ ಅದಮ್ಯ ಉತ್ಸಾಹದೊಂದಿಗೆ ಓಡಾಡಿದ್ದ ಅವನು.  ಪಕ್ಕದಲ್ಲಿ ಆಗ ಶಬನಮ್ ಇದ್ದಳು.  ಜನರ ಗದ್ದಲದಿಂದ ದೂರ ಸರಿದು, ಅವಳ ಕೈಹಿಡಿದು, ಮೈಗೆ ಮೈ ಹಚ್ಚಿ, ಹಸಿ ಮರಳಿನಲ್ಲಿ ಹೆಜ್ಜೆಯೂರಿ ಆನಂದಿಸಿದ್ದ.  ನೀರಾಟದಲ್ಲಿ ಖುಷಿ ಅನುಭವಿಸಿದ್ದ.  ಹಳ್ಳಿಯ ಹುಡುಗಿ ಶಬನಮ್ ಮೈಚಳಿ ಬಿಟ್ಟು ಗಂಡನೊಂದಿಗೆ ನಲಿದಿದ್ದಳು.

ಅಲೆಯೊಂದು ಅವನು ಕುಳಿತ ಬಂಡೆಗಲ್ಲಿಗೆ ಅಪ್ಪಳಿಸಿ ಬಂದಂತೆ ಹಿಂತಿರುಗಿತು.  ಮಾಯೆ ತೋರಿದ ಹಾಗೆ.  ಅಲೆಯಲ್ಲ ಅದು ಶಬನಮ್ ಎಂದುಕೊಂಡಿತು ಅವನ ಮನಸ್ಸು.  ಹೀಗೆ ಅಲೆಯಂತೆ ಉತ್ಸಾಹದ ನೊರೆ ತುಳುಕಿಸುತ್ತ ಬಂದವಳು, ಪ್ರೀತಿಯ ಹನಿಯಿಂದ ತನ್ನ ಜಿಂದಗಿಯನ್ನು ಮುತ್ತಾಗಿಸುವಳು ಅಂದುಕೊಳ್ಳುತ್ತಿರುವಂತೆ ಮೋಸ ಮಾಡಿ ಹೋದಳು.  ಬದ್ಮಾಶ್ ಹೆಂಗಸು!  ಜಮೀರುಲ್ಲಾ ಒಳಗೇ ಬೈದಾಡಿಕೊಂಡ.

ಸ್ವಂತ ಊರಲ್ಲಿ ಬದುಕು ದುಸ್ತರ ಎಂದ ಮೌಲಾಲಿಯ ಮಾತಿನ ಪ್ರೇರಣೆಗೊಳಗಾಗಿ ಜಮೀರುಲ್ಲಾ ಗೋವಾಕ್ಕೆ ಹೊರಟು ಬಂದಿದ್ದ.  ಅವನ ನಿಕಾಹ್ ಆಗಿ ಪೂರ್ತಿ ತಿಂಗಳು ಗತಿಸಿರಲಿಲ್ಲ.  ಶಬನಮ್‌ಳ ಹಸ್ತಗಳಲ್ಲಿನ ಮೆಹಂದಿಯ ರಂಗು ಮಾಸಿರಲಿಲ್ಲ.  ಹೊಸ ಬದುಕಿಗಾಗಿ ಅವನ ಕಾತರ ಹೆಚ್ಚಿತು.  "ಮೈಮ್ಯಾಲೆ ಬಿದ್ದ ಹಲದಿಪಾನಿ (ಅರಿಷಿಣ ನೀರು) ಇನ್ನು ಆರಿಲ್ಲ.  ಹೋಗಬ್ಯಾಡ ಬೇಟಾ" ಎಂದಿದ್ದಳು ಅವನ ಅಮ್ಮಾ.  ಮಗ ತನ್ನ ಕಣ್ಣೆದುರಿಗೆ ಇರಬೇಕೆನ್ನುವುದು ಅವಳ ಹಂಬಲ.  ಅದರಲ್ಲಿ ಕರುಳಿನ ವಾತ್ಸಲ್ಯವಿದ್ದಿತಾದರೂ ಗಲ್ಲಿಯ ಜನರಿಗೆ ಅದು ಕುರುಡು ಅನಿಸದೇ ಇರಲಿಲ್ಲ.  ಕಾಜಾಬಿ ಮಗನನ್ನು ವಿಪರೀತ ಅಚ್ಛೆ ಮಾಡುವಳೆಂದು ಅವರು ಆರೋಪಿಸುತ್ತಿದ್ದರು.

ಜಮೀರುಲ್ಲಾ ಇನ್ನೂ ಗರ್ಭದಲ್ಲಿರುವಾಗಲೇ ಅವನ ಅಬ್ಬಾ (ತಂದೆ)ನ ಸಾವು ಸಂಭವಿಸಿತ್ತು.  ತನ್ನ ಕರುಳಿನ ಕೊನೆಯ ಕುಡಿಯೆಂದು ಖಾಜಾಬಿ ಮಗನನ್ನು ಎದೆಗಾನಿಸಿಕೊಂಡೆ ಇರುವಳು.  ತೊಡೆಯ ಮೇಲೆ ಕುಳ್ಳಿರಿಸಿ ಅವನ ಬಾಯಿಗೆ ತಿನಿಸನ್ನು ತುರುಕುವಳು.  ಮುದ್ದು ಅಂದರೆ ಅಷ್ಟು ಮುದ್ದು.  "ಮಗನ ಮುಖದಾಗ ಮೀಸೆ, ಚಿಗಿಯಾಕ ಹತ್ತಿದ್ರೂ ಮೊಲಿ ಚೀಪ್ಸೂದು ಬಿಡವಲ್ಲಿ.  ಇದೆಂಥ ಪ್ರೀತೀನ ನಿಂದು.  ನಾಳೆ ಅವನ ಬಗಲಾಗ ಜೋರು (ಹೆಂಡತಿ) ಇರೂದು ಮುಸ್ಕಿಲ್ (ತೊಂದರೆ) ಆದೀತು ನೋಡು" ಎಂದು ಪಕ್ಕದ ಮನೆಯ ತಾಜಬಿ ಮಷ್ಕಿರಿ (ತಮಾಷೆ) ಮಾಡಿದ್ದಳು.  "ಇಂವಾ ನನ್ನ ರಾಜಾಬೇಟಾ.  ಜೋರುಕಾ ಕುಲಾಮ ಆಗಬಾರ್ದು" ಎಂದು ಮಗನ ಹಣೆಗೆ ಮುತ್ತಿಕ್ಕಿ ತನ್ನೆರಡೂ ತೋಳುಗಳಲ್ಲಿ ಬಂಧಿಸಿಟ್ಟು ಕೊಂಡಿದ್ದಳು ಖಾಜಾಬಿ.  ಮಗ ಮಾಮಲೇದಾರ ಆಗಬೇಕೆನ್ನುವುದು ಅವಳ ಆಸೆಯಾಗಿತ್ತು.  ಜಮೀರುಲ್ಲಾ ಏಳನೆಯ ತರಗತಿಯವರೆಗೆ ಶಾಲೆಯ ಪಾವಟಿಗೆ ಹತ್ತಿದ್ದೆ ಖರೆಯಾಯಿತು.  ಖಾಜಾಬಿಯ ಕನಸಿನ ಬೀಜಗಳು ಮಾತ್ರ ಮೊಳಕೆಯೊಡೆಯಲಿಲ್ಲ.  ಅವಳ ವ್ಯಾಮೋಹದ ಪರಿಣಾಮದಿಂದ ಜಮೀರುಲ್ಲಾಕೆಟ್ಟ ಗೆಳೆಯರ ಸಂಗದಲ್ಲಿ ಓ.ಸಿ., ಇಸ್ಪೇಟ್ ನಚ್ಚಿಕೊಂಡು ಮನೆಯ ವ್ಯವಸ್ಥೆಯನ್ನು ತಾರುಮಾರುಗೀಡು ಮಾಡಿದ್ದ.  ಆದರೆ ಯಾವ ಫರಕೂ ಕಾಣಿಸಲಿಲ್ಲ.  ಅವನು ಶುದ್ಧ ಕೊರಡು ಎಂದು ತೀರ್ಮಾನಿಸಿದ ಹಸೀನ ತವರು ಮನೆ ಸೇರಿಕೊಂಡಿದ್ದಳು.  ವರ್ಷೊಪ್ಪತ್ತಿನಲ್ಲಿ ಖಾಜಾಬಿ ಜಿದ್ದಿಗೆ ಬಿದ್ದವಳಂತೆ ತನ್ನ ದೂರದ ಸಂಬಂಧಿಗಳಲ್ಲಿ ಹೆಣ್ಣು ಹುಡುಕಿ ತಂದು, ಹಿರಿಯ ಮಗನ ತಲೆಯ ಮೇಲೆ ಸಾಲದ ಹೊರೆ ಹೇರಿ ಜಮೀರುಲ್ಲಾನ ನಿಕಾಹ್ ನೆರವೇರಿಸಿದ್ದಳು.  ಹಸಿ ಹಸಿ ತುಡಿತದ ಹೊಂಗನಸ್ಸಿನಲ್ಲಿದ್ದಳು ಬೇಗಂ.  ಒಣ ಮನಸ್ಸಿನ ಜಮೀರುಲ್ಲಾನಿಗೋ ಬರೀ ಇಸ್ಪೇಟಿನ ಧ್ಯಾನ.  ಒಮ್ಮೊಮ್ಮೆ ನಿದ್ದೆ, ನೀರಡಿಕೆ, ಮನೆ-ಹೆಂಡತಿ ನೆನಪಿಲ್ಲದಂತೆ ಆಡುತ್ತಿದ್ದ.  ಪದೇ ಪದೇ ಸೋತು ಬಂದು ಮನೆಯವರನ್ನು ಬೈದಾಡುತ್ತಿದ್ದ.  ಅವನ ಚಟಕ್ಕೆ ಬೇಗಂಳ ಲಚ್ಚಾ (ತಾಳಿ), ಕಿವಿಯಲ್ಲಿನ ಆಲಿಖತ್ತು (ಆಭರಣ), ಆಕೆ ಮದುವೆಯಲ್ಲಿ ತಂದಿದ್ದ ಜೇಜಿನ ಸಾಮಾನು ಎಲ್ಲ ಬಿಕರಿಯಾಗಿದ್ದವು.  ಬೇಗಂ ಸಂಕಟ ಅನುಭವಿಸಿದ್ದಳು.  "ನಿನ್ನ ಚಟಕ್ಕೆ ನನ್ನೂ ಒಯ್ದು ಮಾರಾಟ ಮಾಡತ್ತಿಯೇನು ನೋಡು" ಎಂದಿದ್ದಳು ಒಂದು ದಿನ.  ಅವನ ತಲೆಯೊಳಗಿನ ಹುಳು ಕೆರಳಿದ್ದವು.  ಹೆಂಡತಿಯನ್ನು ಬಡಿದು ಹಾಡುಗಲೇ ಅವಳನ್ನು ಲಂಗದ ಮೇಲೆ ಮನೆಯಿಂದ ಓಡಿಸಿದ್ದ.

ಮನೆಯನ್ನು ಕ್ಷುದ್ರವಾಗಿಸುವ ಅವನ ಸ್ವಭಾವಕ್ಕೆ ಬೇಸತ್ತು ಹುಸೇನಮಿಯ್ಯಾ ಬೇರೆ ಮನೆಮಾಡಿಕೊಂಡು ಹೋಗಿದ್ದ.  ಖಾಜಾಬಿ ಮಗನೊಂದಿಗೆ ಉಳಿದಿದ್ದಳು.  ಒಂದೆರಡು ಮನೆಗಳ ಚಾಕರಿ ಮಾಡಿ ಜೀವನ ನಿರ್ವಹಿಸುತ್ತ ತನ್ನ ಬಗ್ಗೆ ಕಾಳಜಿ ಅಭಿವ್ಯಕ್ತಿಸುವ ಅಮ್ಮಾನನ್ನೆ ಹಣಕ್ಕಾಗಿ ಪೀಡಿಸುತ್ತ ಗೋಳು ಹೊಯ್ದುಕೊಳ್ಳುತ್ತಿದ್ದ.  ಹಿರಿಯ ಮಗನ ಪಾಲಿಗೆ ನಿಷ್ಕರುಣವಾಗಿದ್ದ ಅವಳ ಅಂತರಾಳ ಜಮೀರುಲ್ಲಾನ ಉದ್ಧಟತನಗಳನ್ನು ಸಹಿಸಿಕೊಳ್ಳುವುದು ಗಲ್ಲಿಗೆ ಸೋಜಿಗವೆನಿಸಿತ್ತು.

ಅವನಿಗೊಂದು ಜಿಂದಗಿ ಕಲ್ಪಿಸಿಕೊಡುವ ಇರದೆಯೋ, ಮೊಂಡು ಹಠವೋ ಮತ್ತೆ ಆಕೆ ಹೊಸ ಸೊಸೆಗಾಗಿ ಹುಡುಕಾಟ ನಡೆಸಿದ್ದಳು.  "ನಿನ್ನ ಬೇಟಾನ ನಸೀಬು ಮಟಮಟ ಮಧ್ಯಾಹ್ನ ಇದ್ದಂಗೈತಿ.  ಮತ್ತೊಂದು ಶಾದಿ ಮಾಡಿ ಹುಡುಗಿ ಜಿಂದಗಿ ಯಾಕ್ ಬರ್ಬಾದು ಮಾಡ್ತಿ?" ಎಂದು ನೇರವಾಗಿಯೇ ಹೇಳಿದ್ದಳು ತಾಜಬಿ.  ಆಕೆ ಮಾಡುತ್ತಿರುವುದು ಮಷ್ಕರಿಯಲ್ಲ;  ಅಪಮಾನ ಎಂದು, ಅವಳಿಗೆ ಸವಾಲು ಎನ್ನುವಂತೆ ಖಾಜಾಬಿ ನಿಕಾಹ್ ಮಾಡಿದ್ದಳು.  ಸೊಸೆ ಶಬನಮ್ ಅವರೆಯ ಹೂವಿನಂತಿದ್ದಳು.  ಕಾರಂಜಿಯಂತೆ ಪುಟಿಯುತ್ತಿದ್ದ ಅವಳ ಯೌವನ ಜಮೀರುಲ್ಲಾನ ಕಣ್ಣು ಕುಕ್ಕಿತ್ತು.

ಅವಳಿಗೂ ಇದು ಎರಡನೆಯ ಮದುವೆ.  ಅವಳ ದುರಾದೃಷ್ಟವೆಂದರೆ ನಿಕಾಹ್ ಜರುಗಿದ ಒಂದೇ ತಿಂಗಳಲ್ಲಿ ಆಕೆಯ ಗಂಡ ಲಿವರ್‍ ಒಡೆದು ಸತ್ತಿದ್ದ.  ಅತ್ತೆ-ಮಾವ ತಮ್ಮ ಪ್ರಮಾದವನ್ನು ಮರೆಮಾಚಿ, ಸೊಸೆಯ ಕಾಲ್ಗುಣವನ್ನು ದೂಷಿಸಿ ತಿರಸ್ಕರಿಸಿದ್ದರು.  ಕತ್ತಲ ಗೂಡಲ್ಲಿ ಬಂಧಿಯಾಗಿ ವಿಲಿವಿಲಿಸಿದ್ದಳು ಶಬನಮ್.  ಯಾವಾಗ ಜಮೀರುಲ್ಲಾ ಬಂದು ಒಂದೇ ನೋಟದಲ್ಲಿ ತನ್ನನ್ನು ಒಪ್ಪಿಕೊಂಡನೋ ಅವಳಿಗೆ ಬದುಕು ಇಷ್ಟವೆನಿಸಿತ್ತು.

                *        *        *

ಗೋವಾದಲ್ಲಿ ಬಾರ್‍ ಬಿಲ್ಡಿಂಗ್, ಸೆಂಟರಿಂಗ್ ಕಾಂಟ್ರಾಕ್ಟ್ ಮಾಡಿಕೊಂಡಿದ್ದ ಮೌಲಾಲಿ.  ಊರಿಗೆ ಬಂದನೋ ಸೋಮಾರಿಯಾಗಿ ತಿರುಗುತ್ತಿದ್ದ ಹುಡುಗರನ್ನು ಕರೆದುಕೊಂಡು ಹೋಗಿ ಕೆಲಸಕ್ಕೆ ತೊಡಗಿಸುತ್ತಿದ್ದ.  ಹೆಂಡತಿಯೊಂದಿಗೆ ಬಂದ ಜಮೀರುಲ್ಲಾನಿಗೆ ಶೆಡ್ಡಿನ ವ್ಯವಸ್ಥೆ ಮಾಡಿಕೊಟ್ಟು ಕಾಳಜಿಯಿಂದ ಗಮನಿಸಿಕೊಂಡಿದ್ದ.  ಬಾರ್‍ ಬಿಲ್ಡಿಂಗ್ ಕೆಲಸ ಜಮೀರುಲ್ಲಾನಿಗೆ ಹೊಸದು.  ಕಲಿತರೆ ಬರುವಂತಹದ್ದೆ.  ಆದರೆ ಮೈಗಳ್ಳ ಜಮೀರುಲ್ಲಾನಿಗೆ ಕೆಲಸವೆಂದರೆ ಒಗ್ಗದು.  ದುಡಿಯುವವರನ್ನು ಕಂಡರೆ ಮೌಲಾಲಿಗೆ ಪ್ರೀತಿ.  ಅಲ್ಲದೆ ಕಾರಾರುವಾಕ್ ಮನುಷ್ಯ ಅವನು.  ಕೊಡುವ ಸಂಬಳಕ್ಕೆ ಸರಿದೂಗುವ ಶ್ರಮ ಕಲಸಗಾರರಿಮದ ಅಪೇಕ್ಷಿಸುವನು.  ಅವರ ಮೈಯ ಬೆವರು ಆರುವ ಮೊದಲೇ ಹಣ ಕೊಡುವುದು ಅವನ ಪದ್ಧತಿ.  ದುಡಿಯುವವರು ಹಗಲೆಂದರೆ ಹಗಲು, ರಾತ್ರಿಯೆಂದರೆ ರಾತ್ರಿ ಕೆಲಸ ಮಾಡಲೇಬೇಕು.  ಜಮೀರುಲ್ಲಾನಿಗೆ ಹದಿನೈದು ದಿನಗಳಲ್ಲಿ ಜಹೆನ್ನಮ್ (ನರಕ)ದ ಕಠೋರ ಶಿಕ್ಷೆಯನ್ನು ಅನುಭವಿಸಿದಂತಾಗಿತ್ತು.  ತಿರುಗಿ ಊರಿಗೆ ಹೋಗೋಣವೆಂದು ಮನೆ ಹಿಡಿದು ಕುಳಿತಿದ್ದ.  ಗಂಡನ ನಿರ್ಧಾರವನ್ನು ಶಬನಮ್ ಬಿಲ್‌ಕುಲ್ ನಿರಾಕರಿಸಿ, ಬೇರೆ ಕೆಲಸ ಹುಡುಕಲು ಹಚ್ಚಿದ್ದಳು.  ನಾಲ್ಕು ದಿನ ಊರು ತಿರುಗಾಡಿ ಬಂದು ಕಾಲು ಚಾಚಿ, ತಲೆಯ ಮೇಲೆ ಕೈಹೊತ್ತು ಕುಳಿತ ಗಂಡ ಶತ ದಡ್ಡನೆಂದು ತಿಳಿದುಕೊಂಡಿದ್ದಳು ಶಬನಮ್.  ತನ್ನ ಹೊಸ ಜಿಂದಗಿ ಕನಸು ಮತ್ತೆ ಕಫನ್ ಹೊದ್ದುಕೊಳ್ಳುವುದೆ?  ಅವಳ ಒಳಮನಸ್ಸು ತೀವ್ರ ಚಡಪಡಿಸಿತ್ತು.  ಅದರ ಹಸಿಹಸಿಯಲ್ಲಿ ಮೌಲಾಲಿಯ ಹತ್ತಿರ ಹೋಗಿ ಗಂಡನಿಗೆ ಬುದ್ಧಿ ಹೇಳಲು ನಿವೇದಿಸಿಕೊಂಡಿದ್ದಳು.  "ನಾಯಿ ಬಾಲ ನೆಟ್ಟಗ ಮಾಡಾಕ ಬರೂದಿಲ್ಲ.  ಅವನನ್ನು ಕರ್‍ಕೊಂಡು ನೀನು ಊರಿಗೆ ಹೋಗುದು ಚಲೋ" ಎಂದು ಸಾಫ್ ಸಾಫ್ ಹೇಳಿದ್ದ ಮೌಲಾಲಿ.  ಗಂಡನಿಗೆ ತಾನೇ ದುಡಿದು ಹಾಕಿದರೂ ಚಿಂತೆಯಿಲ್ಲ, ಊರಿಗೆ ಮಾತ್ರ ಹೋಗಬಾರದೆಂದು ನಿರ್ಧರಿಸಿಕೊಂಡ ಶಬನಮ್ ಒಂದೆರಡು ದಿನಗಳಲ್ಲಿ ಬೃಹತ್ ಕಟ್ಟಡದ ಕೆಲಸ ನಡೆಯುತ್ತಿರುವಲ್ಲಿ ಹೋಗಿ ನಿಂತಿದ್ದಳು.  ಕಟ್ಟಡದ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದವನು ಚಂದ್ರಕಾಂತರೆಡ್ಡಿ.  ಅವನ ಔದಾರ್ಯದಿಂದ ಆಕೆಗೆ ಕೂಡಲೇ ಕೆಲಸ ಸಿಕ್ಕಿತ್ತು.  ಅವನ ಸಹಾಯವನ್ನು ಶಬನಮ್ ಗಂಡನೆದುರು ಬಣ್ಣಿಸಿ ಹೇಳಿದ್ದಳು.  ಊರಿಗೆ ಹೋಗಿ ಗಲ್ಲಿಯ ಜನರೆದುರು ಮುಖಭಂಗ ಅನುಭವಿಸುವುದನ್ನು ತಪ್ಪಿಸಿದ ಹೆಂಡತಿಯ ಬಗ್ಗೆ ಜಮೀರುಲ್ಲಾನಿಗೆ ಅಭಿಮಾನ ಮೂಡಿತ್ತು.

ಮಧ್ಯ ವಯಸ್ಸಿನ ಮನುಷ್ಯ ಚಂದ್ರಕಾಂತರೆಡ್ಡಿ ಶಬನಮ್‌ಳ ಮೇಲೆ ವಿಶೇಷ ಒಲವು ಅಭಿವ್ಯಕ್ತಿಸುತ್ತಿದ್ದ.  ಅದರ ಪರಿಣಾಮದಿಂದ ಜಮೀರುಲ್ಲಾನ ಸಂಸಾರ ಶೆಡ್ಡಿನಿಂದ ಹೆಂಚಿನಮನೆಗೆ ಸ್ಥಳಾಂತರಗೊಂಡಿತ್ತು.  ಅವನಿಗೆ ವಾಚ್‌ಮನ್ ಕೆಲಸ ದೊರಕಿತ್ತು.  ದೇಹ ದಂಡಿಸುವ ಕೆಲಸವೇ ಅದು?  ಆರಾಮೆನಿಸಿತ್ತು ಜಮೀರುಲ್ಲಾನಿಗೆ.  ರೆಡ್ಡಿ ತನ್ನ ಉಲನ್ ಸ್ವೇಟರ್‍, ತಲೆಗೆ ಮಂಕಿ ಕ್ಯಾಪ್ ಕೊಟ್ಟಿದ್ದ.  ಕೈಯಲ್ಲಿ ಬ್ಯಾಟರಿ ಹಿಡಿದು, ಖುರ್ಚಿಯ ಮೇಲೆ ಕುಳಿತನೆಂದರೆ ಜಮೀರುಲ್ಲಾನ ಕೆಲಸ ಮುಗಿಯಿತು.  ಅಲ್ಲಿಯೇ ಸಖತ್ ನಿದ್ದೆ.  ಬೆಳಿಗ್ಗೆ ಕೆಲಸಗಾರರು ಬರಲಾರಂಭಿಸಿದರೆ ಮನೆಗೆ ಬಂದು ಸ್ನಾನ ಮಾಡುತ್ತಿದ್ದ.  ಊಟಕ್ಕೆ ಫಿಶ್‌ಫ್ರಾಯ್, ಅಂಡಾಕರಿ ಒಂದಿಲ್ಲೊಂದು ಇರುತ್ತಿತ್ತು.  ಗಂಡನಿಗೆ ಪ್ರೀತಿಯಿಂದ ಊಟ ಮಾಡಿಸಿ ಕೆಲಸಕ್ಕೆ ಹೊರಡುತ್ತಿದ್ದಳು ಶಬನಮ್.  ಗಂಡಹೆಂಡರು ಸುಖವಾಗಿರಬೇಕೆಂದು ಚಂದ್ರಕಾಂತರೆಡ್ಡಿ ಹೇಳುತ್ತಿದ್ದ.  ಸತ್ತ ಮೇಲೆ ಮನುಷ್ಯನಿಗೆ ಸ್ವರ್ಗ ಸಿಗುವುದೆಂದು ಷೇಕ್ ಇಮಾಮರು ಮಸೀದಿಯಲ್ಲಿ ಖುತ್ಬಾ (ಪ್ರವಚನ) ಓದುವಾಗ ಹೇಳಿದ್ದು ಕೇಳಿದ್ದ ಜಮೀರುಲ್ಲಾ.  ಆದರೆ ಈಗದು ತನಗೆ ಇರುವಾಗಲೇ ದಕ್ಕಿತಲ್ಲ ಎಂಬ ಅದಮ್ಯ ಖುಷಿಯಲ್ಲಿ ಅವನು ಬೀಗಿಕೊಂಡಿದ್ದ.

ಹಣ ಕೈಯಲ್ಲಿ ಓಡಾಡಲಾರಂಭಿಸಿತ್ತು.  ಇಸ್ಪೇಟ್ ಎಲೆಗಳು ಕಣ್ಣೆದುರು ಕುಣಿಯತೊಡಗಿದ್ದವು.  ಶಬನಮ್ ಕೆಲಸಕ್ಕೆ ಹೋದ ಮೇಲೆ, ಬಾಗಿಲಿಗೆ ಕೀಲಿ ಜಡಿದು ಇಸ್ಪೇಟ್ ಆಟದ ಜಾಗ ಹುಡುಕುತ್ತ ಹೊರಡುತ್ತಿದ್ದ ಜಮೀರುಲ್ಲಾ.  ಅವನ ಬದುಕು ತರಗೆಲೆಯಾದದ್ದೆ ಈ ಆಟದಿಂದ.  ಜನರು ಅವನನ್ನು ರಾಜಾ, ರಾಣಿ, ಜೋಕರ್‍... ಎಂದು ಅಡ್ಡಹೆಸರಿನಿಂದ ಕೂಗುತ್ತಿದ್ದರು.  ಅಂದರ್‌ಬಾಹರ್‍ ಆಟವೆಂದರೆ ಅವನಿಗೆ ಇಷ್ಟ ಒಮ್ಮೆಲೆ ಅದೃಷ್ಟ ಖುಲಾಯಿಸಿಕೊಳ್ಳುವ ತವಕ.  ಅವನಿಗೆ ಇಸ್ಪೇಟ್ ಗೆಳೆಯರು ಕೂಡಲೇ ಸಿಕ್ಕಿದರು.  ಚಟದ ಸಂಬಂಧವೆ ಹಾಗೆಯೆನ್ನುವಂತೆ ಆ ದೋಸ್ತರು ಅವನನ್ನು ಹುಡುಕಿಕೊಂಡು ಬರುವರು.  ಸ್ಟೋರ್‍ ರೂಮಿನ ಎದುರು ರಾತ್ರಿಯಿಡೀ ಆಟ.  ಜಮೀರುಲ್ಲಾನ ವಾಚಮನ್ ಕೆಲಸಕ್ಕೆ ರಂಗೋ ರಂಗು.  ಇಸ್ಪೇಟ್ ಎಲೆಗಳನ್ನು ಕಲಿಸುವಲ್ಲಿನ ಅವನ ಆಸ್ಥೆ ಬೆರಗು ಹುಟ್ಟಿಸುತ್ತಿತ್ತು.  ಆದರೆ ಗೆಲ್ಲುತ್ತಿದ್ದುದು ಅಪರೂಪಕ್ಕೊಮ್ಮೆ ಮಾತ್ರ.  ಹಗಲಿನಲ್ಲಿ ಅವನು ಜನ್ಮಾಂತರದ ನಿದ್ದೆ ಮಾಡುವ ಬಗೆಯಿಂದ ಶಬನಮ್‌ಳಿಗೆ ಬೇಸರ ಅನಿಸುತ್ತಿತ್ತು.  ಕೂಡಿಸಿಟ್ಟ ಹಣ ಕರಗುತ್ತಿರುವ ಬಗ್ಗೆ ಕಂಗೆಡತೊಡಗಿದ್ದ ಆಕೆ ಅವನ ಚಟದ ಬಗ್ಗೆಯೂ ಎಚ್ಚರಿಸಿದ್ದಳು.

ಅವತ್ತು ಮಧ್ಯರಾತ್ರಿಯವರೆಗೂ ಇಸ್ಪೇಟ್ ಎಲೆಗಳನ್ನು ತಿರುವಿ, ಸೋತು ಬೇಸರ ಮಾಡಿಕೊಂಡು ಮಲಗಿದ್ದ ಜಮೀರುಲ್ಲಾನ ನಸೀಬು ಕೆಟ್ಟದ್ದಾಗಿತ್ತು.  ಬೆಳಗಾಗುವಷ್ಟರಲ್ಲಿ ಸ್ಟೋರ್‍ ರೂಮಿನ ಬಾಗಿಲು ಮುರಿದು ಅಲ್ಲಿನ ಸಿಮೆಂಟು ಚೀಲಗಳನ್ನು ಕದ್ದೊಯ್ಯಲಾಗಿತ್ತು.  ಬಯಲಲ್ಲಿ ಇದ್ದ ಒಂದಿಷ್ಟು ಕಬ್ಬಿಣವೂ ಮಾಯವಾಗಿತ್ತು.  ಜಮೀರುಲ್ಲಾನನ್ನು ವಾಚಮನ್ ಕೆಲಸದಿಂದ ತೆಗೆದುಹಾಕಿದ್ದ ಚಂದ್ರಕಾಂತ ರೆಡ್ಡಿ.  ಗಂಡನ ಬೇಜವಾಬ್ದಾರಿ ನಡವಳಿಕೆ ಬಗ್ಗೆ ಸಿಟ್ಟು ಮಾಡಿಕೊಂಡ ಶಬನಮ್ ಅವನನ್ನು ನಾಲಾಯಕ್ ಎನ್ನುವ ಧಾಟಿಯಲ್ಲಿ ಖಂಡಿಸಿದ್ದಳು.  ಮನಸು ಮುದುಡಿಸಿಕೊಂಡು ಹೊರಟು ಹೋಗಿದ್ದ ಜಮೀರುಲ್ಲಾ.  ಸಮಾಧಾನವೆನ್ನಿಸಿ ತಿರುಗಿ ಬಂದವನಿಗೆ ಅದು ತನ್ನ ಮನೆ, ಶಬನಮ್ ತನ್ನ ಹೆಂಡತಿ ಎಂದು ತಿಳಿಯಲಾರದ ಸನ್ನಿವೇಶ.  ಆಕೆ ಚಂದ್ರಕಾಂತರೆಡ್ಡಿಯ ಎದೆಯೊಳಗೆ ಹುದುಗಿರುವುದನ್ನು ಕಣ್ಣುಜ್ಜಿಕೊಂಡು ನೋಡಿದ್ದವನ ಒಡಲಲ್ಲಿ ಲಾವಾ ಕುದ್ದಿತ್ತು.  ಮನೆಯ ಮೇಲಿನ ಹಂಚು ಹಾರಿಬೀಳುವಂತೆ ಹಾರಾಡಿದ್ದ ಅವನು.  "ಜಿಂದಗಿ ಮಾಡಾಕ ಬರದಿ‌ದ್ರೂ ಚೀರಾಟಕ್ಕೇನೂ ಕಮ್ಮಿಯಿಲ್ಲ" ಎಂದು ಶಬನಮ್ ಉರಿಯ ಮೇಲೆ ಉಪ್ಪೆರಚಿದ್ದಳು.  "ಈ ನಸಲಿ ಹರಾಮ್ ನಿನ್ನ ತಲಿ ಖರಾಬ್ ಮಾಡ್ಯಾನ" ಎಂದು ಜಮೀರುಲ್ಲಾ ಚಂದ್ರಕಾಂತರೆಡ್ಡಿಯ ಮೈಮೇಲೇ ಬಿದ್ದಿದ್ದ.  ಅವನ ಕಪಾಳಕ್ಕೆ ರೆಡ್ಡಿ ಬಿಗಿದಿದ್ದು ಒಂದು ಏಟು.  ಕಣ್ಣಿಗೆ ಕತ್ತಲು ಆವರಿಸಿ ಜಮೀರುಲ್ಲಾ ನೆಲಕ್ಕೆ ಕುಸಿದಿದ್ದ.  ಅವನ ಅವಸ್ಥೆ ನೋಡಿ ರೆಡ್ಡಿ ಬಿದ್ದು ಬಿದ್ದು ನಕ್ಕಿದ್ದ.  ಶಬನಮ್ ಅವನ ನಗೆಗೆ ಚಪ್ಪಾಳೆ ತಟ್ಟಿದಂತಿತ್ತು.

ಕುದಿದ ಲಾವಾಕ್ಕೆ ಸ್ಫೋಟಗೊಳ್ಳುವ ಧಾವಂತ ಎನ್ನುವಂತೆ ಮರುದಿನ ಜಮೀರುಲ್ಲಾ ಒಂದಿಬ್ಬರು ಇಸ್ಪೇಟ್ ಗೆಳೆಯರನ್ನು ಕರೆದುಕೊಂಡು ಹಾಡುಹಗಲೇ ಚಂದ್ರಕಾಂತರೆಡ್ಡಿಯ ಎದುರು ಚಾಕು ಹಿಡಿದು ನಿಂತಿದ್ದ.  ತಕ್ಷಣ ಅಲ್ಲಿದ್ದ ಕೆಲಸಗಾರರು ಅವನ ಕೈಯಲ್ಲಿನ ಚಾಕು ಕಿತ್ತುಕೊಂಡು ಮುರಿದು ಬೀಸಾಡಿ ಅವನ ಮೂಳೆ ಸಡಿಲಾಗುವಂತೆ ತದುಕಿದ್ದರು.  ಶಬನಮ್ ಈ ಪ್ರಸಂಗವನ್ನು ದಿವ್ಯ ನಿರ್ಲಕ್ಷದಿಂದಲೇ ಗಮನಿಸಿದ್ದಳು.  ಅವಳ ಬಗ್ಗೆ ರೋಷ, ಬೇಸರ ಒಟ್ಟಿಗೆ ಹುಟ್ಟಿಕೊಂಡಿದ್ದವು ಜಮೀರುಲ್ಲಾನಿಗೆ.  ಅವಳು ತನಗೆ ಸಂಬಂಧಿಸಿದವಳಲ್ಲ ಎಂಬ ತಿಳಿವಳಿಕೆ ದಟ್ಟಗೊಳ್ಳುತ್ತಿರುವಂತೆ ಅವನು ಅಲ್ಲಿಂದ ತೆವಳುತ್ತ ನಡೆದು ಹೋಗಿದ್ದ.  ನೆಲ, ತಲೆಯ ಮೇಲಿನ ಆಕಾಶ, ಮುಖಾಮುಖಿ ಯಾಗುತ್ತಿರುವ ಜನರ ನಡುವೆ ತಾನು ಒಬ್ಬಂಟಿ ಅನಿಸತೊಡಗಿತ್ತು.

        *        *        *

ಆರ್ಭಟದ ಅಲೆಯೊಂದು ಬಂಡೆಗಲ್ಲಿಗೆ ಬಡಿದು, ಹಿಂತಿರುಗುವಾಗ ತನ್ನ ಕಾಲನ್ನು ಹಿಡಿದು ಎಳೆಯುತ್ತಿರುವಂತೆ ಅನಿಸಿ ನೆನಪಿನಾಳದಿಂದ ಫಕ್ಕನೆ ಎಚ್ಚತ್ತುಕೊಂಡಿದ್ದ ಜಮೀರುಲ್ಲಾ.  ಅಗಲೇ ಸೂರ್ಯ ಅಸ್ತಮಿಸಿ ಕತ್ತಲು ಆವರಿಸತೊಡಗಿತ್ತು.  ಜನರು ಒಬ್ಬರೂ ಕಾಣಿಸಲಿಲ್ಲ.  ತಳ್ಳುಗಾಡಿಗಳೂ ಇಲ್ಲ.  ಬರಿದು ಬರಿದಾಗಿ ತೋರಿದ ಕಡಲತೀರ ಅವನ ಮನಸ್ಸನ್ನು ಇನ್ನಷ್ಟು ಶೂನ್ಯಗೊಳಿಸಿತು.  ನಿರ್ಜನ ಪ್ರದೇಶವನ್ನು ಭೀತಿಗೊಳಪಡಿಸುವಂತಿತ್ತು ಕಡಲಿನ ಮೊರೆತ.  ಅದರೊಂದಿಗೆ ಬೆರೆತುಕೊಂಡಂತೆ ಚಂದ್ರಕಾಂತರೆಡ್ಡಿಯ ಅಟ್ಟಹಾಸದ ನಗು ಜಮೀರುಲ್ಲಾನ ಎದೆಯಲ್ಲಿ ಅಗ್ನಿಯನ್ನು ಹೊತ್ತಿಸತೊಡಗಿತ್ತು.  ತನ್ನ ಬದುಕನ್ನು ನುಂಗಿದ ತಿಮಿಂಗಿಲು ಅವನು.  "ಏ, ಹರಾಮ್ ಜಾದೆಽಽ..."  ಜಮೀರುಲ್ಲಾ ಎದ್ದು ನಿಂತು ಕೂಗಾಡಿದ.  ರೆಡ್ಡಿಯ ಅಟ್ಟಹಾಸ ಇನ್ನೂ ವರ್ಧಿಸಿತ್ತು ಶಬನಮ್ ಅದರಿಂದ ಪುಳಕಗೊಂಡಂತೆ ಕಿಲಕಿಲ ನಗತೊಡಗಿದ್ದಳು.  "ದೋಖಾ (ಮೋಸ) ಹೆಂಗಸ್ಸೆ.... ಚಿನಾಲ್ ರಾಂಡ್ಽಽ..." ಜಮೀರುಲ್ಲಾ ಆವೇಶಕ್ಕೊಳಗಾದವನಂತೆ ಜೋರಾಗಿ ಕೂಗುತ್ತ ನೀರಿಗಿಳಿದ.  ಸೊಂಟ ದಾಟಿತ್ತು ನೀರು.  ಮೈಮೇಲೆ ಖಬರು ಇಲ್ಲದವನಂತೆ ಅವನ ಹೆಜ್ಜೆಗಳು ಕೀಳುತ್ತಲೇ ಇದ್ದವು.  ಅಷ್ಟು ದೂರದಲ್ಲಿ ಕಡಲಗರ್ಭದಿಂದ ಮೈದುಂಬಿಕೊಂಡು ಅಲೆಯೊಂದು ಬರತೊಡಗಿತ್ತು.

"ಏ.... ಯಾರು ನೀನು?  ಸಾಯಬೇಕು ಅಂದಿದ್ದಿಯೇನು?"  ಅವನ ರಟ್ಟೆಯನ್ನು ಬಲವಾಗಿ ಹಿಡಿದು ಅವಸರವಸರವಾಗಿ ಎಳೆದು ತಂದು ದಂಡೆಯ ಮೇಲೆ ನಿಲ್ಲಿಸಿದ್ದ ಆ ಮನುಷ್ಯ.  ಆ ಹೊತ್ತಿಗೆ ಅವರ ಮೇಲೆ ಎರಗಿದ ಅಲೆ ಬಂದಂತೆ ಹಿಂದೆ ಸರಿದಿತ್ತು.  ಕುಸಿದು ಕುಳಿತ ಜಮೀರುಲ್ಲಾ ರೊಂಯ್ಽಽ ಎಂದು ಅಳತೊಡಗಿದ.

"ಏನಾಗಿದೆ ನಿನಗೆ?  ಹೀಗೇಕೆ ಅಳುತ್ತಿ ಹೆಂಗಸರ ಹಾಗೆ?"  ಆ ಮನುಷ್ಯ ಜಮೀರುಲ್ಲಾನ ಮೈ ತಿವಿದು ಕೇಳಿದ.  "ನನ್ನ ಜಿಂದಗಿ ಸಮುದ್ರ ಪಾಲಾತು"  ಜಮೀರುಲ್ಲಾ ಮತ್ತೆ ಬಿಕ್ಕಿದ್ದ.

"ಅದಕ್ಕೆ ಸಮುದ್ರಕ್ಕೆ ಬಿದ್ದು ಸಾಯಲು ಹೊರಟಿದ್ದಿಯೇನು"?

"ನನ್ನ ಶಬನಮ್ ಮೋಸಾ ಮಾಡಿದ್ಲು"  ಜಮೀರುಲ್ಲಾ ನಡೆದ ಘಟನೆಯನ್ನು ವಿವರಿಸಿದ.  ಅವನೆದುರು ಕುಳಿತ ಆ ಮನುಷ್ಯ "ಹೆಂಡತೀನ ಆಳಲಿಕ್ಕೆ ಬರಲಾರದವನಿಗೆ ಅಳುವೇ ಗತಿ ನೋಡು" ಎಂದು ಪಕಪಕನೆ ನಕ್ಕ.

"ನಾನು ಆಕಿಮ್ಯಾಲೆ ಭರೋಸಾ ಇಟ್ಟು ಈ ಊರಿಗೆ ಬಂದೆ"

"ಹೆಂಗಸರು ಅಂದರೆ ಈ ಸಮುದ್ರ ಇದ್ದ ಹಾಗೆ.  ನೋಡಲು ಸುಂದರ, ಒಳಗೆ ಭಯಂಕರ! ಅಪಾಯಕಾರಿ!!"  ಉದ್ಗರಿಸಿದ ಆ ಮನುಷ್ಯ.  ಅವನು ಹೇಳುವುದರಲ್ಲಿ ವಾಸ್ತವ ಇದೆಯೆನ್ನಿಸಿತು.  ಶಬನಮ್‌ಳ ಸೋಗಲಾಡಿತನ ಜಮೀರುಲ್ಲಾನ ಕಣ್ಮುಂದೆ ಸುಳಿದಾಡಿತು.

"ಹೆಂಗಸರ ಪುಕ್ಕ ಬೆಳೆಯಲು ಅವಕಾಶ ಕೊಡಬಾರದು.  ಪುಕ್ಕ ಬೆಳೆದರೆ ಅವರ ಹಾರಾಟ ಜೋರಾಗುವುದು.  ಹಾರಿ, ಆಕಾಶಕ್ಕೆ ನೆಗೆದು, ನಮ್ಮ ನೆತ್ತಿ ಕುಕ್ಕುವರು".  ಹೆಂಗಸರ ಬಗೆಗಿನ ಆ ಮನುಷ್ಯನ ಅಭಿಪ್ರಯ ಕಠೋರವಾಗಿತ್ತು.  ಜಮೀರುಲ್ಲಾ ಅವನ ಮುಖ ದಿಟ್ಟಿಸುತ್ತ ಕೇಳಿದ "ನನ್ನ ಹೆಂಡ್ತಿ ಹಾಂಗ ನಿನ್ನ ಹೆಂಡ್ತೀನೂ...?"

ಅವನ ಪ್ರಶ್ನೆ ಪೂರ್ತಿಯಾಗುವ ಮೊದಲೇ ಆ ಮನುಷ್ಯನ ಧ್ವನಿ ಗಡುಸಾಗಿತ್ತು.

"ಏಽಽ ಪಾಗಲ್ ಬುದ್ಧಿಯವನೆ.  ನನ್ನ ನೋಡಿದರೆ ನಿನಗೆ ಅಂಥ ಗುಮಾನಿ ಬರುವುದೇನು?  ಮರ್ದ್ ಇದ್ದೇನೆ ನಾನು.  ನನ್ನಾಕೆಯ ಪುಕ್ಕಗಳನ್ನು ಬೇರು ಸಹಿತ ಕತ್ತರಿಸಿ ಹಾಕಿದ್ದೇನೆ.  ನನ್ನ ಆವಾಜು ಕೇಳಿದರೆ ಪ್ರಾಣ ಹೋದವರಂತೆ ಒದ್ದಾಡುತ್ತಾಳೆ ಆಕೆ"  ಹೆಮ್ಮೆ ವ್ಯಕ್ತಪಡಿಸಿದ ಅವನು.

ಈ ಮನುಷ್ಯನ ಗಡಸುತನ ತನ್ನಲ್ಲಿಯೂ ಇದ್ದಿದ್ದರೆ ಶಬನಮ್‌ಳನ್ನು ಹದ್ದುಬಸ್ತಿನಲ್ಲಿಟ್ಟುಕೊಂಡು ತಾನೂ ಜಬರಾಗಿ ಇರಬಹುದಾಗಿತ್ತು ಎಂದುಕೊಂಡ ಜಮೀರುಲ್ಲಾ.

ಆಕಾಶದಲ್ಲಿ ನಕ್ಷತ್ರಗಳು ಹೊಳೆದಿದ್ದವು.

"ನಿನ್ನ ಹೆಸರೇನು?" ಕೇಳಿದ್ದ ಆ ಮನುಷ್ಯ.

"ಜಮೀರುಲ್ಲಾ"

"ನನ್ನ ಹೆಸರು ಮುನೀರ್‍.  ನಿನ್ನ ಮುಖದಲ್ಲಿ ಕಣ್ಣೀರು ಬತ್ತಿದೆ.  ಹೋಗಿ ತೊಳೆದುಕೊಂಡು ಬಾ.  ನಿನಗೆ ಪೆನ್ನಿ ಕೊಡುತ್ತೇನೆ"

"ಪೆನ್ನಿ...!  ಏನದು?"

"ನೀನು ಸಾರಾಯಿ ಕುಡಿಯುದಿಲ್ಲವೆ?"

"ಇಲ್ಲ"

"ಅದಕ್ಕೆ ನೀನು ಜಡವಾಗಿದ್ದಿ.  ಹೆಂಗಸರ ಹಾಗೆ ಅಳುತ್ತಿ.  ಈ ಪೆನ್ನಿ ಕುಡಿದರೆ ನೋವು ಅನ್ನುವುದೇ ಇರೋದಿಲ್ಲ.  ಇದು ಎಲ್ಲ ದುಃಖಕ್ಕೆ ರಾಮಬಾಣ."

"ನಿನ್ಗ ದುಃಖ ಐತೇನು?"

"ಇದೆಯೆಂದರೆ ಇದೆ,  ಇಲ್ಲವೆಂದರೆ ಇಲ್ಲ.  ಅದರ ಕಡೆಗೆ ನಾನು ಲಕ್ಷ್ಯ ಕೊಡುದಿಲ್ಲ.  ನನಗೆ ಜಿಂದಗಿ ಬೇಕು.  ಪೆನ್ನಿ ನನ್ನ ಜಿಂದಗಿ ಕಾಪಾಡುವುದು.  ನಿನಗೆ ಯಾವ ಚಟವೂ ಇಲ್ಲವೆ?"

"ಊರಲ್ಲಿ ಓ.ಸಿ. .... ಆಡ್ತಿದ್ದ್ಯಾ.  ಇಸ್ಪೇಟು ಅಂದ್ರ ನನಗ ಪಂಚಪ್ರಾಣ".

"ಹಾಗಾದರೆ ನೀನು ನನ್ನ ದೋಸ್ತ್.  ಈಗ ಇನ್ನೊಂದಿಷ್ಟು ಪೆನ್ನಿ ಕುಡಿ.  ಮನೆಗೆ ಹೋಗೋಣ.  ಜರೀನಾ ಮೀನಿನ ಸಾರು ಮಸ್ತಮಾಡ್ತಾಳೆ.  ಊಟ ಮಾಡಿ ಮಲಗು.  ನೀನು ನಾಳೆಗೆ ಹೊಸ ಮನುಷ್ಯ ಆಗಬೇಕು.  ನಿನ್ನ ರಾಂಡ್ ಶಬನಮ್‌ಳನ್ನು ಆ ದಗಾಖೋರ ರೆಡ್ಡಿಯನ್ನು ಮರೆಯಬೇಕು.  ಮನುಷ್ಯನಿಗೆ ಜಿಂದಗಿ ಒಂದೇ ಸಲ ಇರುವುದು" ದಾರ್ಶನಿಕನಂತೆ ಮಾತಾಡಿದ ಮುನೀರ.  ಜಮೀರುಲ್ಲಾ ಎದ್ದು ಹೋಗಿ ಕಡಲ ನೀರಲ್ಲಿ ಮುಖ ತೊಳೆದುಕೊಂಡು ಬಂದ.  ತಣ್ಣಗೆ ಬೀಸುತ್ತಿದ್ದ ಗಾಳಿ ಅವನ ಮೈಗೆ ಹಿತವನ್ನುಂಟು ಮಾಡಿತ್ತು.  ಗಾಜಿನ ಸೀಸೆಯೊಂದರ ಮುಚ್ಚಳಿಕೆ ತೆಗೆದು "ಕುಡಿ" ಎಂದು ಮುನೀರ."

"ಇದು ಪೆನ್ನಿ ಏನು?"

"ಹೂಂ"

"ನನಗೆ ರೂಢಿ ಇಲ್ಲ"

"ರೂಢಿ ಮಾಡಿಕೊ.  ಜಿಂದಗಿ ಬೇಕು ಅಂದರೆ" ಆಸೆ ಹುಟ್ಟಿಸಿದ ಮುನೀರ.

ಜಮೀರುಲ್ಲಾ ಸೀಸೆಯೆತ್ತಿ ಒಂದು ಗುಟುಕು ಗಂಟಲಿಗೆ ಸುರವಿಕೊಂಡ.  ಹೊಟ್ಟೆಯೊಳಗೆ ಕೆಂಡ ಸುರಿದ ಅನುಭವವಾಗಿ ಸಂಕಟದಿಂದ ಮುಖ ಕಿವುಚಿದ ಜಮೀರುಲ್ಲಾನನ್ನು ಕಂಡು ಮತ್ತೆ ಫಕ ಫಕ ನಕ್ಕ ಮುನೀರ ಸಾವಧಾನವಾಗಿ ಉಲಿದ "ಗುಟುಕಿನ ಮೇಲೆ ಗುಟುಕು ಇಳಿದರೆ ಪೆನ್ನಿ ಅಮೃತ ಅನ್ನಿಸುವುದು"

"ನನ್ಗ ಇದಽ ಒಂದು ಗುಟುಕು ಸಾಕು" ಎಂದ ಜಮೀರುಲ್ಲಾ.

"ನಾನು ನಿನಗೆ ಒಮ್ಮೆಲೆ ಒತ್ತಾಯ ಮಾಡೋದಿಲ್ಲ" ಎಂದು ಮುನೀರ ಸೀಸೆಯನ್ನು ಇಸಿದುಕೊಂಡು ತನ್ನ ಗಂಟಲಿಗೆ ಗಟಗಟನೇ ಸುರುವಿಕೊಂಡ.  ಜಮೀರುಲ್ಲಾಗೆ ಅವನ ಸಾಮರ್ಥ್ಯ ಅಗಾಧವೆನ್ನಿಸಿತು.

            *    *    *

ಜರೀನಾ ಚಂದದ ಹೆಂಗಸು.  ಫಳ ಫಳ ಹೊಳೆವ ಕಣ್ಣು.  ಚಂದ್ರನ ಮುಖಕ್ಕೆ ಒಪ್ಪುವ ಮಾಟವಾದ ಮೂಗು, ಕೆಂಪು ತುಟಿ.  ತಲೆಯನ್ನು ಸಿಂಗರಿಸಿದ ದಟ್ಟ ಕಪ್ಪು ಕೂದಲು, ಲವಲವಿಕೆಯನ್ನು ಪುಟಿಸುವೆ ದೇಹಸಿರಿ.  ಮುನೀರ ಆ ಚೆಲುವೆಗೆ ಗುಂಜಿಯಷ್ಟು ಸರಿದೂಗುವವನಲ್ಲ ಎಂದುಕೊಂಡ ಜಮೀರುಲ್ಲಾ.

"ಇವನು ಜಮೀರುಲ್ಲಾ.  ನನ್ನ ಹೊಸ ದೋಸ್ತ್.  ಪಾಪ, ಜೀವನದಲ್ಲಿ ನೊಂದಿದ್ದಾನೆ.  ಸಮುದ್ರಕ್ಕೆ ಬೀಳಲು ಹೋಗಿದ್ದ.  ನಾನೇ ರಕ್ಷಿಸಿದೆ.  ಮೀನಿನ ಸಾರು ಮಾಡು.  ಅದನ್ನು ಕುಡಿದರೆ ಇವನಿಗೆ ಜಿಂದಗಿ ಮೇಲೆ ಆಸೆ ಹುಟ್ಟಿರಬೇಕು.  ತಿಳಿತೋ..." ಜಬರು ಧ್ವನಿಯಲ್ಲಿ ಹೇಳಿದ ಮುನೀರ.  ಬಾಗಿಲಲ್ಲಿಯೆ ನಿಂತಿದ್ದ ಜರೀನಾ ತೆಳ್ಳಗಿನ ಸ್ವರದಲ್ಲಿ ಹೂಂಗುಟ್ಟಿ ಒಳಗೆ ಸರಿದು ಹೋದಳು.

ಗುಡಿಸಲಿನ ಹೊರಗೆ ಹಾಕಿದ ಹಗ್ಗದ ಮಂಚದ ಮೇಲೆ ಜಮೀರುಲ್ಲಾನೊಂದಿಗೆ ಕುಳಿತುಕೊಂಡ ಮುನೀರ ಮತ್ತೊಂದು ಸೀಸೆಯ ಮುಚ್ಚಳಿಕೆ ತೆರೆದ.  ಪಕ್ಕದ ಮಂಚದಲ್ಲಿ ಕುಳಿತಿದ್ದ ಮುದುಕ "ನಿನಗೆ ಮನೆಯ ಖಬರು ಇಲ್ಲಾ.  ಮುಸಾಫಿರ್‍ (ಪ್ರವಾಸಿಗ) ಬಂಗ್ಲೆ ಮಾಡಿದ್ದಿ ನೀನು" ಎಂದು ಗೊಣಗಿಕೊಂಡು ಕೆಮ್ಮತೊಡಗಿದ.

ಎರಡು ಗುಟುಕು ಪೆನ್ನಿಯನ್ನು ಬಾಯಿಗೆ ಹಾಕಿಕೊಂಡು "ಈ ಗೂರಲು ಮುದುಕನ ಕಿರಿಕಿರಿ ದಿನಾಲೂ ಇದ್ದದ್ದೆ" ಎಂದು ಉದಾಸೀನದ ಮಾತಾಡಿ ಸೀಸೆಯನ್ನು ಮುದುಕನ ಎದುರು ಹಿಡಿದು "ಗೋರಿಗೆ ಹೋಗಲು ಬಂದಿ, ಗೂರುವುದು ನಿಲ್ಲಿಸಲಿಲ್ಲ.  ಈಗಲಾದ್ರೂ ಈ ಪೆನ್ನಿ ಕುಡಿ.  ಜನ್ನತ್(ಸ್ವರ್ಗ) ಆದ್ರೂ ಸಿಕ್ಕೀತು" ಎಂದು ನಕ್ಕ.  ಅವನ ತಮಾಷೆಯಲ್ಲಿನ ವ್ಯಂಗ್ಯವನ್ನು ಗ್ರಹಿಸಿಕೊಂಡ ಮುದುಕನ ಮೂಗಿನ ಹೊರಳೆ ಹಿಗ್ಗಿತ್ತು.  "ಬೇಶರ್ಮ್‌ನಿಗೆ ಮಾತೊಂದು ಕೇಡು" ಎಂದು ಜೋರಾಗಿ ಹೇಳಿ ಅಸಾಧ್ಯವಾಗಿ ಕೆಮ್ಮತೊಡಗಿದ.

"ಯಾರವರು?" ಜಮೀರುಲ್ಲಾ ಕೇಳಿದ.

"ಅವನು ನನ್ನ ಸಸುರಾ (ಮಾವ) ನನ್ನ ಅಮ್ಮನ ಭೈ ಇವನು.  ಜರೀನಾ ಇವನ ಮಗಳು.  ನನ್ನ ಅಮ್ಮಾನಿಂದ ಜರೀನಾಳ ಅಮ್ಮಾ ಸಾಯುವಾಗ ಮಾತು ತೆಗೆದುಕೊಂಡಿದ್ದಳಂತೆ.  ಜರೀನಾಳೊಂದಿಗೆ ನನ್ನ ಶಾದಿ ಆಯಿತು.  ಈ ಮುದುಕನಿಗೆ ನಾನು ಮನೆಯ ಅಳಿಯನಾಗುವುದು ಬೇಕಾಗಿರಲಿಲ್ಲ.  ಈಗಲೂ ನನ್ನನ್ನು ಕಂಡರೆ ಮುಖ ಉಬ್ಬಿಸುತ್ತಾನೆ.  ನಾನು ಸೊಪ್ಪು ಹಾಕೋದಿಲ್ಲ" ಎನ್ನುತ್ತ ಮತ್ತೆ ಸೀಸೆಯನ್ನು ಬಾಯಿಗಿಟ್ಟುಕೊಂಡ ಮುನೀರ.

ಮುನೀರನ ವ್ಯಕ್ತಿತ್ವದ ಪರಿಚಯ ಜಮೀರುಲ್ಲಾನಿಗೆ ನಾಲ್ಕು ದಿನದಲ್ಲೇ ಆಯಿತು.  ಅವನು ಯಾವ ಕೆಲಸವನ್ನು ಮಾಡುತ್ತಿರಲಿಲ್ಲ.  ಮಾತು ಸೊಗಸಿದಾದರೆ, ನಡವಳಿಕೆ ದಬ್ಬಾಳಿಕೆಯದು.  ಮಾವ ಒಣ ಮೀನುಗಳ ವ್ಯಾಪಾರ ಮಾರುತ್ತಿದ್ದ ಮಾರ್ಕೆಟಿನಲ್ಲಿ ಅವನದೊಂದು ದುಖಾನ್ ಇತ್ತು ಶಾದಿಯಾದ ಹೊಸದರಲ್ಲಿ.  ದುಖಾನ್‌ದ ಜವಾಬ್ದಾರಿ ಮುನೀರನದಾಗಿತ್ತು.  ಮಾವನ ಕಣ್ಣು ತಪ್ಪಿಸಿ ಅವನು ಪೆಟ್ಟಿಗೆಯಿಂದ ಹಣ ಕದಿಯುತ್ತಿದ್ದ.  ಇಸ್ಪೆಟಿನ ಮೂರೆಲೆಯ ಆಟವಾಡುತ್ತಿದ್ದ.  ಹಾಗೆಯೇ ಪೆನ್ನಿಯ ಚಟವೂ ಅಂಟಿಕೊಂಡಿತ್ತು.  ಮಾವನಿಗೆ ಅದು ಇಷ್ಟವಾಗಿರಲಿಲ್ಲ.  ಅವನು ದುಖಾನನ್ನು ದಿವಾಳಿ ಮಾಡುತ್ತಾನೆಂದು, ಅಲ್ಲಿಗೆ ಬರುವುದಕ್ಕೆ ನಿರ್ದಾಕ್ಷಿಣ್ಯವಾಗಿ ನಿಷೇಧಿಸಿದ್ದ.  ತಂದೆಗೆ ಆರಾಮ ಇಲ್ಲ ಅನಿಸಿದಾಗ ಜರೀನಾ ದುಖಾನಲ್ಲಿ ಕುಳಿತು ಬೇಪಾರ ಮಾಡುತ್ತಿದ್ದಳು.  ಹಣ ಬೇಕೆಂದಾಗ ದುಖಾನ್ ಮುಂದೆ ಬಂದು ರಾದ್ಧಾಂತ ಮಾಡುತ್ತಿದ್ದ ಮುನೀರ.  ಮಾವ ರೇಗಿ, ಬೈದಾಡುವನು.  ಮುನೀರ ಅವನ ಮೇಲೆ ಬೀಳುವನು.  ತಂದೆಯನ್ನು ರಕ್ಷಿಸಲು ಹೋಗಿ ಜರೀನಾ ಗಂಡನಿಂದ ಹೊಡೆತ ತಿನ್ನುವಳು.  ತಂದೆ, ಮಗಳನ್ನು ವಾಚಮಗೋಚರವಾಗಿ ಬೈದು, ಹಿಂಸಿಸಿ "ದುಖಾನಿಗೆ ಬೆಂಕಿ ಹಚ್ಚಿ ನಿಮ್ಮನ್ನು ಸುಟ್ಟು, ನಾನು ಮೀನು ಬೇಯಿಸಿಕೊಂಡು ತಿನ್ನುತ್ತೇನೆ" ಎಂದು ಹೆದರಿಸುತ್ತಿದ್ದ ಮುನೀರ.

ಜರೀನಾ ಗಂಡನ ಅಬ್ಬರಕ್ಕೆ ಥರಗುಟ್ಟುತ್ತಿದ್ದಳಾದರೂ ಆವೇಶದ ರಭಸದಲ್ಲಿ "ನೀನು ಕಡಲಿಗೆ ಬಿದ್ದು ಸಾಯಿ" ಎನ್ನುತ್ತಿದ್ದಳು.  "ನಾನು ಸತ್ತರೆ ನಿನಗೆ ಹೊಸ ಮಿಂಡ ಸಿಗುತ್ತಾನೇನು?" ಎಂದು ಅವನು ಗಟ್ಟಿ ಗಟ್ಟಿಯಾಗಿ ಚೀರಿ ಜನರನ್ನು ಸೇರಿಸುವನು.  ಅವರೆದುರಿಗೆ ಆಕೆ ಹಾದರದವಳೆಂದು ದೂಷಿಸುವನು.  ತನಗೆ ತಿನ್ನಲು ಅನ್ನ ಕೊಡುವುದಿಲ್ಲ.  ಕುಡಿಯಲು ಮೀನಿನ ಸಾರು ಕೊಡುವುದಿಲ್ಲ.  ಪೆನ್ನಿ ಕುಡಿಯಲು ದುಡ್ಡು ಕೊಡುವುದಿಲ್ಲ ಎಂದು ಆರೋಪಿಸುವನು.  ಜರೀನಾಳ ಕೂದಲು ಹಿಡಿದು, ನೆಲಕ್ಕೆ ಕುಕ್ಕಿ, ಪೆಕಪೆಕನೆ ಒದೆಯುವನು.

ಜಮೀರುಲ್ಲಾ ಅವನ ನಡತೆಯನ್ನು ಅಸಹನೆಯಿಂದ ನೋಡುತ್ತಿದ್ದ.

ಒಳಗೊಳಗೆ ನೋವು ಅನುಭವಿಸುತ್ತ ಮುಖದಲ್ಲಿ ಯಾವಾಗಲೂ ನಗೆ ಅರಳಿಸಿ ಕೊಂಡಿರುತ್ತಿದ್ದ ಜರೀನಾ ದಿಟ್ಟೆಯೆನಿಸಿತ್ತು ಅವನಿಗೆ.  ಗಂಡನ ಆಕ್ರಮಣವನ್ನು, ಹಿಂಸೆಯನ್ನು ತನ್ನ ತಂದೆಯ ಸಲುವಾಗಿ ಆಕೆ ಸಹಿಸಿಕೊಂಡಿದ್ದಾಳೆಂದು ಅವನು ಗ್ರಹಿಸಿಕೊಂಡಿದ್ದ.

ಆ ದಿನ ಮೀನಿನ ಸಾರು ಮಾಡಲಿಲ್ಲವೆಂಬ ಕಾರಣಕ್ಕೆ ಜರೀನಾಳ ಮೈ, ಮುಖ ಎನ್ನದೆ ಥಳಿಸಿತೊಡಗಿದ ಮುನೀರ.  ಆಕೆ ಸಂಕಟದಿಂದ ಚೀತ್ಕರಿಸಲಾರಂಭಿಸಿದಳು.  ಜಮೀರುಲ್ಲಾ ಮುನೀರನಿಗೆ ಸಮಾಧಾನ ಮಾಡಲು ಯತ್ನಿಸಿದ್ದು ವ್ಯರ್ಥವೆನಿಸಿತು.  ಹೊಟ್ಟೆಗೆ ಬಿದ್ದ ಪೆಟ್ಟಿನಿಂದ ಜರೀನಾ ನೆಲದ ಮೇಲೆ ಬಿದ್ದು ಒದ್ದಾಡ ತೊಡಿಗಿದ್ದಳು.  ಮಗಳ ಹಿಂಸೆಯನ್ನು ನೋಡಲಾರದೆ ಅವಳ ಅಬ್ಬಾಜಾನ್ ಅಳಿಯನನ್ನು ಹೊಡೆಯಲು ಕೈಯೆತ್ತಿದ.  ಮುನೀರ ಮಾವನ ಎದೆಗೆ ಬಿಗಿದ ಮುಷ್ಟಿಯಿಂದ ಬಿರುಸಾಗಿ ಗುದ್ದಿದ.  ಕುಸಿದು ಬಿದ್ದ ಮುದುಕನ ಉಸಿರು ನಿಶ್ಚಲವಾಗಿತ್ತು.  ಜರೀನಾ ಕಡಲು ಭೋರ್ಗರೆಯುವಂತೆ ಭಯಂಕರವಾಗಿ ಆಕ್ರಂದಿಸಿದಳು.  ಈ ಸುದ್ದಿ ಪೊಲೀಸರಿಗೆ ತಿಳಿದು, ಇಬ್ಬರು ಪೇದೆಗಳು ಬಂದು ಮುನೀರನನ್ನು ಸ್ಟೇಶನ್ನಿಗೆ ಕರೆದುಕೊಂಡು ಹೋದರು.

ಪೊಲೀಸರು ಮತ್ತು ಮುನೀರನ ನಡುವೆ ಅದೇನು ಸಂಬಂಧವಿತ್ತೊ ಕೊಲೆಯ ಕೇಸನ್ನು ದಾಖಲಿಸಿಕೊಳ್ಳದೆ ಅವನನ್ನು ನಾಲ್ಕು ದಿನ ಲಾಕಪ್‌ನಲ್ಲಿಟ್ಟಂತೆ ನಾಟಕ ಮಾಡಿ ಹೊರಗೆ ಬಿಟ್ಟಿದ್ದರು.

ಮಾವ ಸತ್ತಿದ್ದರ ದರದು ಇಲ್ಲದಂತೆ ಅವನು ಹೆಂಡತಿಯೆದುರು ಬಂದು ನಿಂತು "ನಾನು ಪೆನ್ನಿ ಕುಡಿಯಬೇಕು ಹಣ ಕೊಡು" ಎಂದು ಕಾಡಿದ.

ಜರೀನಾ ಅವನ ಕಪಾಳಕ್ಕೆ ಬಿರುಸಾಗಿ ಹೊಡೆದು "ನನ್ನ ಉಚ್ಚೆ ಕುಡಿ" ಎಂದಳು.

ಒಡಲಿಗೆ ಬೆಂಕಿ ಬಿತ್ತೊ, ಮುನೀರ ಅವಳ ತುರುಬು ಹಿಡಿದು ಎಳೆದಾಡುತ್ತ "ನನ್ನ ಪೊಲೀಸರಿಗೆ ಹಿಡಿದುಕೊಡಲು ಮಸಲತ್ತು ಮಾಡಿದಿಯಲ್ಲ ಸೊಕ್ಕಿನ ಹೆಂಗಸ್ಸೆ.  ನಿನ್ನಪ್ಪನ ಕೊಂದಂತೆ ನಿನ್ನ ಕೊಂದು ನಾನು ಜೇಲು ಸೇರುತ್ತೇನೆ" ಎಂದು ಹೊಡೆಯಲು ಧಾವಿಸಿದಾಗ ಅವನ ಕಿಬ್ಬೊಟ್ಟೆಗೆ ಜರೀನಾ ತನ್ನ ಮೊಣಕಾಲಿಂದ ತಿವಿದಿದ್ದಳು.  ಹಾಂ ಎಂದವನು ಅಂಗಾತಾಗಿ ನೆಲದ ಮೇಲೆ ಉರುಳಿದ.  ಪೆಟ್ಟು ತಾಗಿದ್ದು ಅವನ ಕಿಬ್ಬೊಟ್ಟೆಗಲ್ಲ, ವೃಷಣಕ್ಕೆ, ಜರೀನಾ ಗಾಬರಿಯಿಂದ ನಡುಗತೊಡಗಿದಳು.  ಜಮೀರುಲ್ಲಾ ಭೀತನಾಗಿ "ಮುನೀರ ಭೈ" ಎಂದು ಮೈದಡವಿದ.  ಅದು ತಣ್ಣಗಾಗತೊಡಗಿತ್ತು.

ಜಮೀರುಲ್ಲಾ ಜರೀನಾಳಿಗೆ ಧೈರ್ಯ ಹೇಳಿದ.  ಅಂಗಳದಲ್ಲಿ ಬಿದ್ದಿದ್ದ ಮುನೀರನ ದೇಹವನ್ನು ಒಳಗೆ ತಂದು ಹಾಕಿದ.  ಮಧ್ಯರಾತ್ರಿ ಹೊತ್ತಿಗೆ ಆ ಮೃತದೇಹವನ್ನು ಹೆಗಲ ಮೇಲೆ ಹೊತ್ತುಕೊಂಡು ಹೋಗಿ ಕಡಲ ದಂಡೆಯಲ್ಲಿ ಮಲಗಿಸಿ, ಪಕ್ಕದಲ್ಲಿ ಎರಡು ಪೆನ್ನಿ ತುಂಬಿದ ಸೀಸೆಗಳನ್ನು ಇರಿಸಿ ಬಂದ ಜಮೀರುಲ್ಲಾ.

ಸೂರ್ಯನ ಉದಯದೊಂದಿಗೆ ಮುನೀರನ ಸಾವಿನ ಸುದ್ದಿ ಹರಡಿತ್ತು.  ಅವನು ವಿಪರೀತ ಪೆನ್ನಿ ಕುಡಿದು ಸತ್ತಿದ್ದಾನೆಂದು ಜನರು ತಿಳಿದರು.  ಮುನೀರ ತಣ್ಣಗೆ ಕಬರಸ್ತಾನದಲ್ಲಿ ಮಲಗಿಕೊಂಡ.  ಅವನೊಂದಿಗೆ ನಿಜ ಸಂಗತಿ ಕೂಡ.

            *    *    *

ಜಮೀರುಲ್ಲಾ ಈಗ ಶಬನಮ್‌ಳನ್ನು, ದಗಾಖೋರ ಚಂದ್ರಕಾಂತ ರೆಡ್ಡಿಯನ್ನು ಪೂರ್ತಿಯಾಗಿ ಮರೆತಿದ್ದಾನೆ.  ಮುನೀರ ಹೇಳಿದ ಹಾಗೆ ಅವನೀಗ ಹೊಸ ಮನುಷ್ಯನಾಗಿದ್ದಾನೆ.  ಜೀವನ ಪ್ರೀತಿಯಲ್ಲಿ ಧ್ಯಾನಸ್ಥನಾಗಿದ್ದಾನೆ.  ಜರೀನಾ ಅವನಿಗೆ ವ್ಯವಹಾರದ ಕೌಶಲ್ಯವನ್ನು ಕಲಿಸಿದ್ದಾಳೆ.  ಒಣ ಮೀನುಗಳ ವ್ಯಾಪಾರದೊಂದಿಗೆ ಹಸಿ ಮೀನುಗಳ ವ್ಯಾಪಾರವೂ ಭರ್ಜರಿಯಾಗಿ ನಡೆಯುತ್ತಿದೆ, ಜರೀನಾ ಅವನ ಪಾಲಿಗೆ ಮೇಮ್‌ಸಾಬ ಅನಿಸಿದ್ದಾಳೆ.  ಊರಿಂದ ತನ್ನ ಅಮ್ಮಾನನ್ನು ಕರೆಯಿಸಿಕೊಂಡ ಅವನು ಚಂದದ ಮನೆ ಕಟ್ಟಿಕೊಂಡಿದ್ದಾನೆ.  ಬಂಗಾರದಂಥ ಇಬ್ಬರು ಗಂಡು ಮಕ್ಕಳಿಗೆ ಅವನು ತಂದೆಯೆನಿಸಿದ್ದಾನೆ.  ಆ ಮಕ್ಕಳ ಅಮ್ಮಾ ಜರೀನಾಳೆ ಆಗಿದ್ದಾಳೆ.  ಮೀನು ಖರೀದಿಸಲು ಬರುವಾಗ ಜಮೀರುಲ್ಲಾ ದಿನಾಲೂ ಹೊಸ ಸೂರ್ಯನನ್ನು ನೋಡಿ ಪುಳಕಗೊಳ್ಳುತ್ತಾನೆ.  ಅವನಿಗೆ ಇಷ್ಟವಾಗುವುದು ಹೊಸ ಸೂರ್ಯ ಮಾತ್ರ.

               ***

ಕೀಲಿಕರಣ: ಕಿಶೋರ್‍ ಚಂದ್ರ

ಶ್ರೀಗುರುನಾಥನ ಆಲಯದೊಳು

ಶ್ರೀಗುರುನಾಥನ ಆಲಯದೊಳು ನಾವ್-
ಈರ್ವರು ನಲಿದಾಡುನು ಬಾ ಬಾ                   ||ಪ||

ಬಾರದಿದ್ದರೆ ನಿನ್ನ ಮಾರಿಗೆ ಹೊಡೆವೆನು
ಸಾರಿ ಈರ್ವರು ನಲಿದಾಡುನು ಬಾ ಬಾ           ||೧||

ಯೋಗದ ಕುದುರೆಯ ಬ್ಯಾಗನೆ ಏರುತ
ಮ್ಯಾಗೇರಿಯವಮಠಕ್ಹೋಗುನು ಬಾ ಬಾ         ||೨||

ನಡಿ ನಡಿ ಶಿಶುನಾಳಧೀಶನ ಗುಡಿಯೊಳು
ಅಡಗಿದ ಪ್ರಣಮವ ನೋಡುನು ಬಾ ಬಾ          ||೩||
                ****
-ಶಿಶುನಾಳ ಶರೀಫ್


ಕೀಲಿಕರಣ: ಎಂ.ಎನ್.ಎಸ್. ರಾವ್