ನಗೆ ಡಂಗುರ - ೧೩

- ಪಟ್ಟಾಭಿ ಎ ಕೆ
ಒಬ್ಬ ಭಾಷಣಕಾರ ಯಾವುದೇ ಉದಾಹರಣೆ ಕೊಡುವ ಸಂದರ್ಭದಲ್ಲಿ ‘ನನ್ನ ಹೆಂಡತಿ, ನನ್ನ ಹೆಂಡತಿ’ ಎಂದು ಹೇಳುತ್ತಲಿದ್ದನು- ಇದನ್ನು ಪದೇ ಪದೇ ಕೇಳಿಸಿಕೊಳ್ಳುತ್ತಿದ್ದ ಸಭಿಕನೊಬ್ಬನು ಬೇಸರದಿಂದ ‘ನೀವು ಪದೇಪದೇ ನನ್ನ ಹೆಂಡತಿ, ನನ್ನ ಹೆಂಡತಿ ಎಂದು ಒತ್ತಿ ಒತ್ತಿ ಹೇಳುತ್ತಲಿದ್ದೀರಿ’ ಎಂದ.  ಭಾಷಣಗಾರನಿಗೆ ಕೋಪಬಂದು, ‘ಅವಳು ನನ್ನ ಹೆಂಡತಿ; ಎಲ್ಲಿ ಬೇಕಾದರೂ ಎಷ್ಟು ಬೇಕಾದರೂ’ ಒತ್ತುತ್ತೇನೆ. ಆದನ್ನು ಕೇಳಲು ನಿಮಗೆ ಹಕ್ಕಿಲ್ಲ’ ಎಂದನಂತೆ.
***

ಚಿರ ಋಣಿ

- ಗಿರಿಜಾಪತಿ ಎಂ. ಎನ್

ಜನನಿ ಜನ್ಮಭೂಮಿ
ನಿಮ್ಮಯ ಕರುಣೆಗೆ ನಾ ಚಿರ ಋಣಿ
ನಿನ್ನ ಮಡಿಲ ಕಂದನೆಂಬ
ಭಾಗ್ಯ ಬೆಳಕಿನ ಕಣ್ಮಣಿ

ಜನುಮ ಜನುಮ ಬಂದರೂನು
ತಾಯಿ ನಿನ್ನ ರಕ್ಷ ಎನಗಿದೆ
ಕಾಮಧೇನು ಕಲ್ಪತರುವಾಗಿ
ಬಲ ನೀಡೋ ನಿನ್ನ ಕೃಪೆಯಿದೆ

ಅಂಗಳಂಗಳವೆಲ್ಲ ಪಾವನ
ನಿನ್ನೆದೆಯಂಗಳ ವೃಂದಾವನ
ಹಿಮದ ಶೃಂಗದಂದದಿ ಧುಮ್ಮಿಕ್ಕೋ
ಧಾರೆಯ ನಿತ್ಯನೂತನ ಚೇತನ

ಧಮನಿದಮನಿಗೊಳೊಳಗೆ
ಮಿಡಿದಿದೆ ನಿನಗಾಗಿ ದುಡಿವಾ ಹಂಬಲ
ಯಾವವಡೆತಡೆಗಳಿಗೆ ಬಾಗದೆ
ಮಡಿದು ನಿನ್ನ ಸೇರುವ ಹಿರಿಛಲ ||

        *****

ಕೀಲಿಕರಣ: ಕಿಶೋರ್‍ ಚಂದ್ರ

ನಗೆ ಡಂಗುರ - ೧೨

- ಪಟ್ಟಾಭಿ ಎ ಕೆ
ಸೇಲ್ಸ್ ಗರ್ಲ್ ಕಾಲಿಂಗ್‌ಬೆಲ್ ಒತ್ತಿದಳು. ಮನೆಯ ಒಡತಿ ಬಾಗಿಲು ತೆರೆದು, ‘ಸೇಲ್ಸ್ ಮೆನ್ ನಾಟ್ ಅಲೋಡ್’ ಎಂಬ ಬೋರ್ಡ್ ಇದೆಯಲ್ಲಾ, ನೀನು ಅದನ್ನು ಓದಲಿಲ್ಲವೆ?
ಸೇಲ್ಸ್‌ ಗರ್ಲ್ : ‘ಓದಿದೆ ‘ಸೇಲ್ಸ್ ಮೆನ್ ನಾಟ್ ಅಲೋಡ್’ ಅಂತ ಇದೆ. ಆದರೆ ನಾನು ಸೇಲ್ಸ್ ಗರ್ಲ್!
***

ಹೆಂಗಸರ ಸುಖ ಬಲ್ಲವನೇ ಬಲ್ಲ

ಹೆಂಗಸರ ಸುಖ ಬಲ್ಲವನೇ ಬಲ್ಲ   ಪರ-ಹೆಂಗಸರ ಸುಖ  ಸವಿ ಕ್ಕರಿ ಬೆಲ್ಲ             ||ಪ||

ಆರಿಗೆ ಬಿಡಲಿಲ್ಲ   ಕಾಮನ ಹೊಯಿಲೆಲ್ಲ
ಇದರ ಇಂಗಿತ ಗಂಡಸರಿಗೆ ತಿಳಿದಿಲ್ಲ        ||೧||

ಹೆಣ್ಣು  ಜರಿದರೇನು ಬಿಟ್ಟಿಲ್ಲ  ಅದಕೆ
ಮಣ್ಣುಗೂಡಿ ಮೈ ಕೆಟ್ಟಿಲ್ಲ                    ||೨||

ಇಳೆಯೊಳು ಈ ಮಾತು ಸುಳ್ಳಲ್ಲ
ಸುಳ್ಳೆ  ಬಲು ವಿಷಯದೊಳು  ನೀ ಕುಳಿತೆಲ್ಲ        ||೩||

ಶಿಶುನಾಳಧೀಶಗ ಅರಿತಿಲ್ಲ ಬಲು -
ಕಸಿವಿಸಿ ಸೂಳೇರ ಮುರುಕೆಲ್ಲ                        ||೪||

        *****

ಕೀಲಿಕರಣ: ಎಮ್.ಎನ್.ಎಸ್.ರಾವ್

ನಗೆ ಡಂಗುರ - ೧೧

- ಪಟ್ಟಾಭಿ ಎ ಕೆ
ಪ್ರಶ್ನೆ: ‘ಮೂವತ್ತರ ನಂತರ ನಿಮ್ಮ ಮಗಳಿಗೆ ಮಕ್ಕಳಾಗ ಬಹುದೆ?
ಉತ್ತರ: ‘ಬೇಡ ಮೂವತ್ತು ಅತಿಯಾಯಿತು’
***

ಅಕ್ಷರ ಮಾಲೆ

- ಪರಿಮಳಾ ರಾವ್ ಜಿ ಆರ್‍
ಅಕ್ಷರ ಮಾಲೆಯಲಿ
ಸಾಕ್ಷರದ ಮೌಲ್ಯ
ಅಷ್ಟೇ ಕಂಡದ್ದು
ನನ್ನ ಮೌಢ್ಯ
ಎದೆಯ ಕ್ಷಾರವ ತೊಳೆಯೆ
ಅಕ್ಷರದಿ ಪ್ರತ್ಯಕ್ಷ
ಬ್ರಹ್ಮ ಸಾಕ್ಷಾತ್ಕಾರ!

 *****

ನಗೆ ಡಂಗುರ - ೧೦


- ಪಟ್ಟಾಭಿ ಎ ಕೆ

ಹೆಂಡತಿ: ‘ರೀ ನಾನು ಕಾರು ಕಲಿಯಲು ಹೋಗುತ್ತಿದ್ದೇನೆ.  ಕೇಳಿಸಿಕೊಂಡಿರಾ ?’
ಗಂಡ: ‘ಕೇಳಿಸಿಕೊಂಡೆ: ನಾನು ಖಂಡಿತಾ ನಿನ್ನ ದಾರಿಗೆ ಅಡ್ಡ ಬರುವುದಿಲ್ಲ.  ಆಗಬಹುದು ತಾನೆ?’
***

ಜೀವನತೆರೆ

- ರವಿ ಕೋಟಾರಗಸ್ತಿ

ಜೀವನವೆಂಬ ಸಾಗರದಲಿ
ಕಾಣದ ನಾವಿಕನಾಶ್ರಯದಿ
ಪಯಣಿಸುವ ಪಯಣಿಗರು
ಪ್ರಯಾಸ-ಪರಿಶ್ರಮದಲಿ...
ದೃಢ-ವಿಶ್ವಾಸಗಳ ಹುಟ್ಟುಗೋಲಾಡಿಸುತ
ನಿರ್ಭೀತಿ-ನಿರ್ಲಿಪ್ತತೆ... ಹೊರದೂಡುತ
ಗೆಲುವನು ದೂರದಲಿ ಕಾಣುತ...
ಧೈರ್ಯದ ಸವಾರಿಯಲಿ ನಡೆಯುವಾ

ನಿರಾಶೆಯ ತೆರೆಗಳ ತಳ್ಳುತ...
ಆಶಾ-ಹಕ್ಕಿಗಳಾಗಿ ಹಾರುತ
ಬಯಕೆಯ ಬಾನಲಿ ತೇಲುತ
ಸಾಗೋಣ ದಡ ಸೇರುವ ಗುರಿಯಲಿ

ಜೀವನವು ಸಂಘರ್ಷಗಳ ತಾಣ
ಅವಿರತ ಹೋರಾಟದ ಕಣ
ದಿಟ್ಟತನದ ಬಾಳಲ್ಲಿ...
ಸೋಲು ಸವಾಲಾಗಿಸುತ
ಎದ್ದೇಳುವ ಕಲೆ ರೂಢಿಸುತ
ಸೌಹಾರ್ದತೆಯ ಸಮಬಾಳಲಿ
ಅರಳೋಣ-ಮಿಂದು ಬೆಳಗುತಲಿ

         *****

ಕೀಲಿಕರಣ: ಕಿಶೋರ್‍ ಚಂದ್ರ

ನಗೆ ಡಂಗುರ - ೯

- ಪಟ್ಟಾಭಿ ಎ ಕೆ

ಮನೆಯೊಡತಿ: ‘ತೋಟದ ಆಳಿನ ಮೇಲೆ ಒಂದು ಕಣ್ಣು ಇಟ್ಟಿರು’.
ಕೆಲಸದಾಕೆ: ‘ಒಂದು ಕಣ್ಣೇನಮ್ಮ ಎರಡು ಕಣ್ಣು ಇಟ್ಟಿದ್ದೇನೆ.  ಅವ ಒಪ್ಪಿದರೆ ಮದುವೇನೂ ಆಗುತ್ತೇನೆ’
     ***

ರೈತಹತ್ಯಾ

(ಬೀದಿ ನಾಟಕದ ಹಾಡು)
- ಡಾ || ರಾಜಪ್ಪ ದಳವಾಯಿ

ಹಾಡು - ೧

ಎಲ್ಲಿಹುದೊ ಬಾಳ ಬೆಳಕು
ಅದೆಲ್ಲಿಹುದೊ ಜೀವ ತಳುಕು ||

ಜೀವ ಜಲ ಹನಿಹನಿ ರಾಶಿ
ಸುರಿಯೆ ಧಾರೆ ಹಸಿರು ಕಾಣಿ
ಹೂವರಳಿಸಿ ನಗು ಮಿಂಚಿಸಿ
ಜೀವಕೆಲ್ಲ ಚೇತನವ ಪೂಸಿ ||

ಮುಗಿಲಾಗಿರೆ ಬಟ ಬಯಲು
ನೆಲವೆಲ್ಲ ದ್ವೇಷಾಗ್ನಿ ಬುಗಿಲು
ಎಲ್ಲಿ ನಮ್ಮ ಬೆಳ್ಳಿ ಬೆಳಕು
ಅದೆಲ್ಲಿಹುದೊ ಜೀವ ತಳುಕು ||

ಹಾಡು - ೨

ಯಾರು ಕಾಯುವರಣ್ಣ
ರೈತಾಪಿ ಜನರನ್ನ ||

ತೆಂಗೀಗೆ ಜಂಗಲು ಹಿಡಿದು
ಜುಂಗು ಹತ್ತಿತು ಬದುಕು
ಮಳೆಯಿಲ್ಲ ಬೆಳೆಯಿಲ್ಲ
ದನ ಕರುಗೆ ಮೇವಿಲ್ಲ ||

ಕಣಜದೋರಿಗೆ ಕರುಣೆಯಿಲ್ಲ
ಜಣ್‌ಜಣ್ ಹಣ ಕಾಣಲಿಲ್ಲ
ಕೀಟ ಕಳೆಯ ಔಸದೀಯ
ಭಾಗ್ಯವಲ್ಲ ನಾವೆ ಕುಡಿಯೊ ||

ಹಾಡು - ೩

ದುಡ್ಡು ಕೊಡ್ತಾರೆ ಇವರು
ಜಪ್ತಿ ಮಾಡ್ತಾರೆ ||

ಸಾಲ ಮಾಡಿ ಅಂತಾರೆ
ಸಬ್ಸಿಡಿ ಮಾತ ಹೇಳ್ತಾರೆ
ಸಾಲದ ಶೂಲಕೆ ಹಾಕುತ್ತ
ನಮ್ ಗೋಣು ಮುರಿತಾರೆ ||

ಸಾಲ ಎಣಿಸಿ ಕೊಡುತಾರೆ
ಮೇಲೆ ಬಡ್ಡಿ ಹಾಕ್ತಾರೆ
ಸರ್ವಿಸ್ ಪರ್ವಿಸ್ ಚಾರ್ಜು
ಅಂತ ಟಾರ್ಚರ್‍ ಮಾಡ್ತಾರೆ ||

ಹಾಡು - ೪

ಮಾರುವಾಡಿ ಮುಂದೆ ಬಂದ
ಅಡಮಾನವೆಲ್ಲ ಹರಾಜು ಎಂದ ||

ಬೆಳ್ಳಿ ಬಂಗಾರದ ಅಂಗಡಿ
ಕಾಲೂರಲು ಜಾಗ ಒಂದಡಿ
ಬೆಳೆದ ವಾಮನ ತ್ರಿವಿಕ್ರಮ
ಹಿಡಿಯೋರ್‍ಯಾರವನ ಕ್ರಮ ||

ಬಡ್ಡಿ ಬಡ್ಡಿ ಚಕ್ರ ಬಡ್ಡಿ
ಹೊಟ್ಟೆ ಬೆಳೆದಂತೆ ಅಡ್ಡಾದಿಡ್ಡಿ
ತಕಡಿಗಾಕಿದರೆ ಬಂಗಾರ
ಬಂದಿತಲ್ಲಾ ಸಂಚಕಾರ ||

ಹಾಡು - ೫

ಜಮೀನುದಾರ ಮುರುದಾರ
ಬಡವರ ಭೂಮಿ ಬಕಾಸುರ ||

ಬಡತನ ಭಂಗದ ಪಿತಾಮಹ
ಜೀತ ಬೆವರಿನ ರಣಪಂತ
ಹಸಿಮಾಂಸದ ನರಭಕ್ಷಕ
ಮಾಡೋರ್‍ಯಾರಿವಗೆ ಶಿಕ್ಷಾ ||

ಮೂರಕೆ ಆರು ಲೆಕ್ಕ ಬರೆದು
ಸಾಲಕೆ ಕಟ್ಟಿನ ಗೆರೆಯ ಕೊರೆದು
ಬಿಡದೆ ಮಾಡುವ ವಸೂಲಿಕೋರ
ಊರ ಜುಟ್ಟಿನ ಸೂತ್ರಧಾರ ||

ಹಾಡು - ೬

ಹರಿದೀತು ಕಣ್ಣಗಂಗೆ
ಗಂಗಮ್ಮ ತಾಯಾಗೆ
ಒಡ್ಡು ಕಟ್ಟುವರ್‍ಯಾರು
ಬೋಯಿಗಳು || ಅಣ್ಣಾ ||

ಮುದ್ದೆ ಕೂಡಿಸಲಿಕ್ಕೆ
ಹಿಟ್ಟಿಲ್ಲ ಸೊಪ್ಪಿಲ್ಲ
ಹಿಡಿ ಹಿಟ್ಟು ಆಯಿತೊ
ಹಂಬಲಿಯು || ಅಣ್ಣಾ ||

ತಿನ್ನಲಾರೆವು ಎಂದು
ಅನ್ನ ಚೆಲ್ಲುವ ಮಂದಿ
ಕೊಡಿರಯ್ಯೊ ಹಿಡಿಗೂಳು
ನಿಮ್ಮ ಧರ್ಮ || ಅಣ್ಣಾ ||

ಹಾಡು - ೭

ಕೊಳ್ಳುವಿರಾ ಅಣ್ಣಾ ಕೊಳ್ಳುವಿರಾ
ಜೀವಗಳು ಬಿಕರಿಗಿವೆ ಕೊಳ್ಳುವಿರಾ ||

ಜೀವಾವ ಕೊಂಡು ದುಡ್ಡಾ ಕೊಟ್ಟಾರೆ
ಅದೆ ನಮ್ಮ ಮನೆ ಮಂದಿ ಹೊಟ್ಟಹೊರೆ
ಜೀವ ಉಳಿಸಲು ಜೀವ ಮಾರಾಟವೆ
ಜೀವ ಕೊಂಡು ಜೀವ ಉಳಿಸಿರಣ್ಣಾ ||

ನಮ್ಮ ಹಸಿವು ದುಃಖ ನಿಮ್ಮದಾಗಲಿಲ್ಲ
ಕನಸ ಕೊಂಡು ಮಹಲಲಿ ಕುಣಿದಿರಲ್ಲ
ಹೊಟ್ಟೆ ಕೇಳಲಿಲ್ಲ ಸುಮ್ಮನಿರಲಾಗಿಲಿಲ್ಲ
ಉರಿಬೆಂದು ಬೂದಿ ಆದೆವಲ್ಲ ||

ಹಾಡು - ೮

ಸಹಾಯವ ಮಾಡೀರಣ್ಣ
ನಾವು ಸಾಯಬೇಕ್ರಣ್ಣ ||

ಇದ್ದು ನಾವು ಬದುಕಲಾರೆವು
ನಿಮಗೆ ಏನೂ ಮಾಡಲಾರೆವು
ಬದುಕಿಗಂತೂ ಏನೂ ಇಲ್ಲ
ಸಾವಿಗಾದ್ರೂ ಕೊಡ್ರಿ ಬೆಲ್ಲ ||

ನಮ್ಮ ಸಾವಿಗೆ ನೀವೇ ಸಾಕ್ಷಿ
ಅದುವೆ ಸದ್ಯ ನಮಗೆ ಮೋಕ್ಷ
ಮನಕರಗದವರ ನಡುವೆ
ಸಾವೆ ಪರಮ ಒಡವೆ ||


        *****

ಕೀಲಿಕರಣ: ಕಿಶೋರ್‍ ಚಂದ್ರ

ನಗೆ ಡಂಗುರ - ೮

- ಪಟ್ಟಾಭಿ ಎ ಕೆ

ಅವರು: "ಮದುವೆ ಮಂಟಪದಲ್ಲಿ ಗಂಡು ಹೆಣ್ಣಿನ ಕೈ ಹಿಡಿದು ಅಗ್ನಿ ಪ್ರದಕ್ಷಿಣೆ ಮಾಡುತ್ತಾನಲ್ಲಾ ಏಕಿರಬಹುದು?"
ಇವರು: "ಗಂಡನಾದವನು ಮುಂದೆ ಅಗ್ನಿ ಎದುರು ನಿಂತು ಅಡಿಗೆ ಬೇಯಿಸಿ ಹಾಕಬೇಕಲ್ಲಾ- ಆದಕ್ಕೆ!"
***

ಮಲಪ್ರಭೆ

-ರವಿ ಕೋಟಾರಗಸ್ತಿ

ಹಸಿರು ತುಂಬಿದ ವನಸಿರಿಯು
ಚೆಲುವು ಧರೆಯ ಶೃಂಗರಿಸಿಹದು
ಗಿರಿಕಾನನಗಳ ಮೆರಗು
ರಂಗುಸಿರಿಯು ಹೆಚ್ಚಿಹದು

ಮೋಡಗಳಿಗೆ ಮುತ್ತಿಡುತ
ಧರೆಗೆ ಜಲಧಾರೆ ಚೆಲ್ಲುತಲಿ
ರೈತನ ಸಂತಸ ಹೆಚ್ಚಿಸುತ
ನೊಂದ-ಬೆಂದ ಜನಗಳಿಗೆ
ನೀ ಧಾಮ ಕಾಮಧೇನು

ನಿನ್ನಡಿಯಲಿ ಕುಣಿಯುತಿಹಳು
ಮಹಾತಾಯಿ ಮಲಪ್ರಭೆ
ಭೋರ್ಗರೆಯುತ ರಭಸದಿ
ಗಿರಿ ಬೆಟ್ಟ ತಿರುವುಗಳಲಿ
ಕರುನಾಡನು ಸಿರಿಗೊಳಿಸುತ

ಆ ಹಸಿರ ಮಡಿಲ
ಒಲವಿನ ಒಡಲು
ಹಕ್ಕಿಗಳ ಮುರಳಿನಾದವು
ಕಾಡೆಲ್ಲಾ ಝೇಂಕರಿಸುತಿಹದು
ನಿರ್ಭಯದಿ ನಿಸರ್ಗ ಭೂಮಡಿಲು
ಸ್ವರ್ಗಕ್ಕಿಂತಲೂ... ಮಿಗಿಲು

         *****

ಕೀಲಿಕರಣ: ಕಿಶೋರ್‍ ಚಂದ್ರ

ನಗೆ ಡಂಗುರ - ೭

- ಪಟ್ಟಾಭಿ ಎ ಕೆ
ಮಂತ್ರಿ: ಸಹಾಯ ಕೇಳಿಕೊಂಡುಬಂದ ಹಳ್ಳಿಯ ಯುವಕನಿಗೆ "ನಿನಗೆ ಎರಡು ಎಕರೆ ಜಮೀನು ಸರ್ಕಾರದಿಂದ ಕೊಡಿಸುತ್ತೇನೆ, ವ್ಯವಸಾಯ ಮಾಡಿಕೊಂಡು ಬದುಕಿಕೊ".
ಯುವಕ: "ಯಾಕೆ ಬುದ್ದಿ, ಆತ್ಮಹತ್ಯೆ ಮಾಡಿಕೊಂಡು ಸಾಯ ಬೇಕೆಂತಲೋ?" ಪ್ರಶ್ನಿಸಿದ.
        *****

ಕೀಲಿಕರಣ: ಎಮ್ ಎನ್ ಎಸ್ ರಾವ್

ಆಟ

ದೇವಕಣ್ಣು
ಬಿಟ್ಟರೆ
ಬಾಳು
ಹೂದೋಟ
ದಾನವ
ಕಣ್ಣಿಟ್ಟರೆ
ಭಸ್ಮ
ಭವದ
ಆಟ

****

ಟಿಪ್ಸ್ ಸುತ್ತ ಮುತ್ತ

- ಶೇಖರ್‌ಪೂರ್ಣ


"ಕಾಫಿಗೆ ಬರ್‍ತಿಯೇನೊ?"

ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು.

ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ.
"ಕಾಸಿಲ್ಲ ಕೊಡಿಸ್ತೀಯ?"
"ಬಾ ಹೋಗೋಣ..."

-ಹೊರಗಡೆ ಸಣ್ಣದಾಗಿ ಮಳೆ. ಮತ್ತೊಂದು ಸಂಜೆ ಕತ್ತಲೆಗೆ ತಿರುಗುತ್ತಿತ್ತು. ಪ್ರಿನ್ಸಿಪಾಲರ ರೂಮಿನಿಂದ ಹೊರಬಿದ್ದರು. ಅವಳು ಉಪಾಧ್ಯಾಯಿನಿ. ಅವನು ಗುಮಾಸ್ತ. ಅವಳ ಮನೆಯಲ್ಲಿ ಅಪ್ಪ, ಅಮ್ಮ, ಅಣ್ಣ. ಅವನ ಮನೆಯಲ್ಲಿ ಹೆಂಡತಿ, ಮಕ್ಕಳು, ಅಪ್ಪ, ಅಮ್ಮ, ದೊಡ್ಡ ಪರಿವಾರ. ಬೆಳಗಾದರೆ ಕಾಲೇಜು. ಕಾಲೇಜಾದರೆ ಮನೆ. ಮಧ್ಯೆ ಒಂದಷ್ಟು ಜಗಳ. ಮನೆಯಲ್ಲೂ, ಕಾಲೇಜಿನಲ್ಲೂ. ಯಾರಿಗಾದರೂ ಸರಿ-ತನ್ನನ್ನು ತಾನು ತೆರೆದಿಡಲೇ ಬೇಕು ಎಂಬ ಗಳಿಗೆಗಳು ಬಂದೇ ಬರುತ್ತವೆ. ಮಾತನಾಡಲು ತೊಡಗುತ್ತಾರೆ. ಒಳಗೊಂದು- ಹೊರಗೊಂದು. ಆ ಹೊರಗಿಗೂ ಒಂದು ಅರ್ಥವಿರುತ್ತದೆ. ಆ ಆರ್ಥದಲ್ಲೂ ಸಾರ್ಥಕತೆ ಕಾಣುವಾಸೆ... ಹೊರಗಿನದೂ ಕೇಂದ್ರವಾಗುತ್ತಾ ಸಾಂದ್ರವಾಗುತ್ತಾ ಹೋಗುತ್ತದೆ. ಅವರಿಬ್ಬರೂ ಮಾತನಾಡಲು ತೊಡಗುತ್ತಾರೆ. ಹೆಚ್ಚಾಗಿ ಅವಳನ್ನೇ ಅವನು ಮಾತನಾಡಲು ಬಿಡುತ್ತಾನೆ. ಶೋತೃವಾಗುತ್ತಾನೆ-ಪ್ರೇಕ್ಷಕನಾಗುತ್ತಾನೆ. ಗೋಚರಿಸದ್ದನ್ನೆಲ್ಲ ತಬ್ಬಿಕೊಳ್ಳುತ್ತಾನೆ. ಶ್ರದ್ಧೆಯಾಗುತ್ತಾ ಹೋಗುತ್ತದೆ...

ಎಷ್ಟೋ ಬಾರಿ ಅವನು ಅವಳ ಮಾತುಗಳನ್ನು ನಿರಾಕರಿಸಿಬಿಡುತ್ತಿದ್ದ. ಅವನ ನಿಲುವನ್ನೆಲ್ಲ, ನಿರಾಕರಣೆಯನ್ನೆಲ್ಲ ಅವಳು ತಾತ್ಸಾರದಿಂದ ಕಡಿದು ಉಗಿದು ಬಿಡುತ್ತಿದ್ದಳು. ಈ ಆವಾಹನೆ - ವಿಸರ್ಜನೆಗಳ ನಡುವೆ ಒಬ್ಬರನ್ನೊಬ್ಬರು ಅಪ್ಪಿಕೊಳ್ಳುತ್ತಾ...ಇಲ್ಲದಿದ್ದರೆ ಕುಡಿಯುತ್ತಿದ್ದ ಕಾಫಿಗಾಗಲಿ, ಆಡುವ ಮಾತಿಗಾಗಲಿ ಅರ್ಥವೆಲ್ಲಿಯದು? ಅಪ್ಪಿಕೊಂಡಾಗ ಅವನಿಗಂತು ಅಂತರಂಗ ಸೇರಿ ಅಲ್ಲೊಂದಿಷ್ಟು ಇಲ್ಲೊಂದಿಷ್ಟು ಪರಿವರ್ತನೆ.

ಒಮ್ಮೆ ಹೀಗೆ ಔಪಚಾರಿಕವಾಗಿ ಏನಾದರೂ ಮಾತನಾಡಲೆಬೇಕಲ್ಲ ಎಂಬ ಧ್ವನಿಯಲ್ಲಿ-
"ರವೀಂದ್ರ ಕಲಾಕ್ಷೇತ್ರದಲ್ಲಿ ನಾಟಕ ಇದೆ..ಚಿಕ್ಕಹುಡುಗ.  ಇನ್ನೂ ಹದಿನೆಂಟು ವರ್ಷ, ನಿರ್ದೇಶಿಸ್ತಾ ಇರೋದು..ಒಳ್ಳೆಯವನು, ಬರ್‍ತಿಯೇನೋ?" ಕೇಳಿದ್ದಳು.
"ಹದಿನೆಂಟು ವರ್ಷ...ದುರಹಂಕಾರ.." ಅವನು ಕೆಂಡ ಕಾರಿದ. ಅವಳ ಅಹ್ವಾನದಲ್ಲಿನ ಔಪಚಾರಿಕತೆಗೋ ಅಥವ..  ಆಹ್ವಾನವನ್ನು ತಿರಸ್ಕರಿಸಿದ್ದಕ್ಕೋ ಅಥವ ಅವನ ತಾತ್ಸಾರಕ್ಕೋ ಅವಳಿಗೂ ರೇಗಿತು. ತಟಕ್ಕನೆ ಕೇಳಿದ್ದಳು:  "ನಿನಗಿರೋ ಕೊಬ್ಬು ನೋಡು.. ಆ ಹುಡುಗನ ಬಗ್ಗೆ ನಿನಗೇನೂ ಗೊತ್ತಿಲ್ಲ. ನಿನಗೇನು ಹಕ್ಕಿದೆ ಮಾತನಾಡೋಕ್ಕೆ?" ಆಹ್ವಾನದ ಹಿಂದಿನ ಔಪಚಾರಿಕ ಭಾವ ಕಳೆದು ಅವಳು ಹೂಡಿದ ವಾದದಲ್ಲಿ : ಹೌದು ನಿಜ- ಎಂದನ್ನಿಸಿ ಬಿಟ್ಟಿತು.

ಸಂಜೆ ಅವನೂ ರವೀಂದ್ರ ಕಲಾಕ್ಷೇತ್ರಕ್ಕೆ ಹೋದ. ಹತ್ತು ರೂ ತೆತ್ತು ನಾಟಕ ಪೂರ್ತಿ ನೋಡಿದ. ನಾಟಕ ಕೆಟ್ಟದಾಗಿತ್ತು. ರವೀಂದ್ರ ಕಲಾಕ್ಷೇತ್ರದ ವಿರುದ್ಧವೇ ಅವನ ಹಠ ಮತ್ತಷ್ಟು ಗಟ್ಟಿಯಾಗಿತ್ತು. ಆದರೆ ಅವನು ಅಂದು ರವೀಂದ್ರ ಕಲಾಕ್ಷೇತ್ರಕ್ಕೆ ಹೋದ ಬಗೆಗೆ ಪಶ್ಚಾತ್ತಾಪವಿರಲಿಲ್ಲ. ಅವನ ಮಟ್ಟಿಗೆ ಅದು ಸಣ್ಣ ಪರಿವರ್ತನೆಯೇನು ಅಲ್ಲ. ಎಲ್ಲವನ್ನೂ ತೆರೆದ ಕಣ್ಣಿನಿಂದ ನೋಡು ನಂತರ ಮಾತನಾಡುವ ಹಾದಿಗೆ ಬಿದ್ದ. ಅವಳನ್ನು ಅವನು ತನ್ನನ್ನೂ ಮೀರಿ ಗುರುಸ್ಥಾನಕ್ಕೇರಿಸಿದ್ದ. ಮೊದಲು ನೋಡು, ನಂತರ ಮಾತನಾಡು- ಇದು ಅವಳ ಥಿಯರಿಯಾಗಿರಲಿಲ್ಲ. ಅವಳ ಸ್ವಭಾವದಲ್ಲೇ ಇತ್ತು, ಇರಲಿಲ್ಲ. ಅದು ಅವನಿಗೆ ಬೇಕಾಗಿರಲಿಲ್ಲ. ಇದೆ - ಅವಳಲ್ಲಿ ಇದೆ ಎಂಬ ನಂಬಿಕೆಯೆ ಅವಳನ್ನು ಅಪ್ಪಿಕೊಳ್ಳುವ ಶ್ರದ್ಧೆಯಾಗಿತ್ತು.  ಆಧಾರವಾಯ್ತು.  ಸಾಕು , ಅರ್ಥಗಳು ಗೋಚರಿಸಲಾರಂಭಿಸಿತು....

ಹೋಟೆಲ್ಲಿಗೆ ಹೋಗುವ ಹಾದಿಯಲ್ಲಿ ಫುಟ್‌ಪಾತಿನ ಮೇಲೆ ರಾಶಿ ರಾಶಿ ಬಟ್ಟೆಗಳು. ಬಳಿಗೆ ಹೋಗಿ ರಾಶಿಯಿಂದ ಒಂದು ಅಂಗಿಯನ್ನು ಆರಿಸಿಕೊಂಡು ಅಳತೆಯನ್ನು ಅಂದಾಜು ನೋಡತೊಡಗಿದಳು. "ಅಣ್ಣನಿಗಾ?" - ಕೇಳಿದ. "ಹೂಂ" ಅಳತೆಯಲ್ಲಿ ಮಗ್ನಳಾದಳು. ಅವನು ಅವಳನ್ನು ಮತ್ಸರದಿಂದ ನೋಡತೊಡಗಿದ. ಅವಳ ಮಗ್ನತೆ ಅವನಿಗೆ ಸಾಧ್ಯವಿರಲಿಲ್ಲ. ಅವಳು ಖರೀದಿಸಲಿಲ್ಲ. ಕಾರಣವೇನೆಂದು ಅವನೇನೂ ಕೇಳಲಿಲ್ಲ. ಸುಮ್ಮನೆ ಮೆಜೆಸ್ಟಿಕ್‌ನ ಫುಟ್‌ಪಾತಿನ ಮೇಲೆ ಇನ್ನೂ ಕಡಿಮೆ ಕಾಸಿಗೆ ಸಿಕ್ಕುತ್ತೆ ಎಂದಷ್ಟೆ ಗೊಣಗಿದ. ಅವಳು ಹೂಂ ಅನ್ನಲಿಲ್ಲ- ಊಹೂಂ ಅನ್ನಲಿಲ್ಲ. ಹೋಟೆಲ್‌ನಲ್ಲಿ ಕಾಫಿಗೆ ಆರ್ಡರ್ ಮಾಡಿ ತಟಕ್ಕನೆ ತಪ್ಪು ಅರಿವಾದವಳಂತೆ "ಏನಾದ್ರೂ ತಿಂತೀಯೇನೋ?" ಪ್ರಶ್ನಿಸಿದಳು. ರೋಟಿ ಆರ್ಡರ್ ಮಾಡಿದ.

ಅವ್ನಿಗೆ ರೋಟಿಯೆಂದರೆ ಬಹಳ ಇಷ್ಟ. ಬಯಸಿ ಬಯಸಿ ತಿನ್ನುತ್ತಿದ್ದ. ಬ್ರೆಡ್ ಬಟರ್ ಜಾಮ್, ಕಟ್ಲೆಟ್, ಸ್ಯಾಂಡ್‌ವಿಚ್, ಸ್ಕ್ರಾಂಬಲ್ಡ್ ಎಗ್, ಫ್ರೆಂಚ್ ಟೋಸ್ಟ್, ಹೀಗೆ ಮೆನುವನ್ನೆ ಮೆತ್ತಿಕೊಂಡು ಬೆಳೆದಿದ್ದ ಹೋಟೆಲ್ಲನ್ನು ಕಂಡರೆ ಅವನಿಗೆ ಆಗುತ್ತಿರಲಿಲ್ಲ. ಶುದ್ಧ ಭಾರತೀಯ ಹೆಮ್ಮೆಯ ಘೋಷಣೆ ಬರಿಯ ಕವಚವಾಗಿದ್ದದ್ದನ್ನು ಕಂಡು ತೀರಾ ಅಸಹ್ಯಿಸಿಕೊಂಡಿದ್ದ. ಆ ರಸ್ತೆಯ ತುಂಬಾ ಅಂತಹ ಹೋಟೆಲ್ಲುಗಳೆ. ಊಳಿದದ್ದು ಪಬ್‌ಗಳು. ಅಲ್ಲೊಂದು ಇಲ್ಲೊಂದು ಪಾನಿಪುರಿ, ಭೇಲ್ ಪುರಿ ಗಾಡಿಗಳು. ಅವುಗಳ ಮುಂದೆ ರಸ್ತೆಯಲ್ಲಿ ಕಾರುಗಳು.

"ನಾನು ಹಳ್ಳಿಗೆ ಹೋದಾಗ ನಮ್ಮತ್ತೆ - ಅಜ್ಜಿ ಹೀಗೆ ಕೆಂಡದ ರೊಟ್ಟಿ ಸುಟ್ಟು ಕೊಡುತ್ತಿದ್ದರು." - ಯಾಕೆ ರೋಟಿಯನ್ನು ಇಷ್ಟ ಪಡುತ್ತೇನೆ ಎಂಬುದಕ್ಕೆ ಕಾರಣ ಅವಳ ಸಮ್ಮುಖದಲ್ಲಿ ಬಯಲಾಗಿ, ಅವನ ಅರಿವಿಗೂ ಗೋಚರವಾದದ್ದು ಅವನಿಗೆ ಆಶ್ಚರ್ಯವಾಯ್ತು- ಆಗಲಿಲ್ಲ.  ಅವಳ ಬಗೆಗೆ ಮತ್ತಷ್ಟು ಗೌರವ.
"ನಾನು ನಿನ್ನನ್ನು ಪ್ರೀತಿಸುತ್ತೇನೆ.." ಒಳಗೆ ಗಟ್ಟಿಯಾದ ಭಾವವನ್ನು ಹೊರಗೆಡವಲು ನಾಲಿಗೆ ತುದಿಗೆ ಬಂದಿದ್ದ ಪದಗಳನ್ನು ಕತ್ತರಿಸಿದ. "ಹಾಗಂದರೆ ಏನು?"- ಅವಳು ಕೇಳೆ ಕೇಳುತ್ತಾಳೆ.  ಒಳಗೆ ತಡಕಿಕೊಂಡಾಗ ಉತ್ತರ ಅವನಿಗೆ ಸ್ಪಷ್ಟವಿರಲಿಲ್ಲ. ಹೀಗೆ ಸ್ಪಷ್ಟವಾಗದ್ದರ ಕುರಿತು ಏನೆ ಹೇಳಿದರೂ ಸುಳ್ಳಾಗುತ್ತದೆ. ಬೇಡವೆಂದು ನಿರ್ಣಯಿಸಿ ಸುಮ್ಮನಾದ. ಹೊರಗಡೆ ಕತ್ತಲು- ಒಳಗೆ ಮಂಕು ಬೆಳಕು. ರೊಟ್ಟಿ ತಿನ್ನುತ್ತಲೇ ಅವಳ ಮುಖವನ್ನು ನೋಡತೊಡಗಿದ.
"ನನಗೆ ಬೆಂಗಳೂರು ಬೇಜಾರಾಗಿ ಹೋಗಿದೆ.  ದೂರ ಹೋಗ್ಬೇಕೂಂತನ್ನಿಸ್ತಿದೆ."  ಅವಳ ಮಾತುಗಳಲ್ಲಿ ಅವನ ಭಾವ ಧ್ವನಿಯೊಡೆದಿತ್ತು.  ವಯಕ್ ಎಂದು ನಾಸಿಯಾ. "ಯಾಕೆ?" ಕಷ್ಟ ಪಟ್ಟು ಕೇಳಿದ.  ಅನುಚಿತವಾದರೆ...ಆತಂಕ.  ತೀರಾ ವೈಯಕ್ತಿಕವಾದದ್ದನ್ನು ಕೇಳಲು ಸಂಕೋಚ.  ಅವಳು: "ಮನೇಲಿ ಮದುವೆ ಮಾಡ್ಕೋಂತ ಹಠ ಹಿಡಿದಿದ್ದಾರೆ...ನನಗೆ ಯಾರೋ ಅಪರಿಚಿತನ ಜೊತೆ ...ಆಗೋಲ್ಲ..."
"ನಿನ್ನ ತಂದೆ ತಾಯಿ ಸಂಕಟಾನ ಅರ್ಥ ಮಾಡಿಕೋಬಲ್ಲೆಯ..?  ತಪ್ಪೂಂತನ್ನಿಸೋಲ್ವ?"
"ಆಯ್ತು- ಅರ್ಥವಾಗುತ್ತೆ...ಆದ್ರೂ ನನಗಾಗೋಲ್ಲ...ಅದಕ್ಕೇ ಈ ಕೆಲಸ ಬಿಟ್ಟು ಬೇರೆ ಕಡೆ ಹೋಗ್ಬೇಕೂಂತನ್ನಿಸ್ತಿದೆ..."

"ಆಗ ಅವರ ಸಂಕಟವೇನೂ ಕಮ್ಮಿಯಾಗೋಲ್ಲ. ನೀನು ನಿನ್ನ ನಿರ್ಣಯ ಏನೂನ್ನೋದನ್ನ ಅವರಿಗೆ ಹೇಳು. ಮನದಟ್ಟು ಮಾಡಿಸು..."

"ಅವರಿಗೆ ಅರ್ಥವಾಗೋಲ್ಲ. ಯಾರನ್ನಾದರೂ ಸರಿ ಮದ್ವೆ ಮಾಡ್ಕೋಂತ ಹಠ ಹಿಡೀತಾರೆ"

"ಈ ಪಲಾಯನದಿಂದ ಯಾರಿಗೂ ಏನೂ ಪರಿಹಾರ ಸಿಕ್ಕೋಲ್ಲ."

"ನಿಜ ಇರಬಹುದು... ಆದರೂ.."

ಅವಳ ಹಠ ಅವಳ ತಳಮಳ ಅವನಿಗೆ ಅರ್ಥವಾಗುತ್ತೆ.  ಆದರೂ ಅವನು ಅವಳ ತಾಯ್ತಂದೆಯರ ಪರವಾಗೇ ವಾದಿಸುತ್ತಾನೆ.  ಹಾಗೆ ವಾದಿಸುವುದೂ ಪ್ರಯೋಜನವಿಲ್ಲ.- ನಿರ್ಣಯ ಅವಳದೇ ಅಲ್ಲವೆ..ಅವನಿಗೆ ಗೊತ್ತು. ಆದರೂ ಒಳಗೇ ಗೊಣಗಿಕೊಳ್ಳುತ್ತಾನೆ- ಅಪ್ಪ ಅಮ್ಮನ ಮಾತುಗಳನ್ನ ಕೇಳಿಕೊಂಡು ಇರೋಕ್ಕೆ ಯಾಕಾದ್ರು ಆಗೋಲ್ಲ?  ಹಾಳಾಗಿ ಹೋಗಲಿ ಒಂದು ನಿರ್ಣಯಕ್ಕಾದರೂ ಬಂದು.. ಆಚೆಗೂ ನಿಲ್ಲದ ಈಚೆಗೂ ನಿಲ್ಲದ... ಹ್ಯಾಗೂ ಕಾಲ ಕಳೀತಿದೆ.  ಜೀವನದಲ್ಲಿ ಮದ್ವೇನೆ ಎಲ್ಲವೂ ಅಲ್ಲ. ಅದು ಅವ್ನಿಗೂ ತಿಳಿದಿದೆ..ಆದರೂ ..ಮತನ್ನಾಡಿದರೆ ಜಗಳವಾಗುತ್ತೆ.

"ಅತಿಯಾಗಾಡ್ಬೇಡ " ಗದರಿಸ್ತಾಳೆ. ಸಹಮತ ಯಾವುದರಲ್ಲೂ ಇಲ್ಲ.  ಸದಾಜಗಳ.  ಒಮ್ಮೊಮ್ಮೆ ಇಬ್ಬರಿಗೂ ಸಿಟ್ಟು ಬರುತ್ತೆ.  ಕಪಾಳಕ್ಕೆ ಹೊಡೆಯುವಷ್ಟು. ಹಾಗಂತ ಅವಳೂ ಹೇಳಿದ್ದಾಳೆ.  ಅವನೂ ಹೇಳಿದ್ದಾನೆ.  ಒಮ್ಮೆ ಹೊಡೆದು ಬಿಡುವಷ್ಟು ಕೋಪ.

"ಹೊಡೀತೀನಿ ಈಗ.."

"ನಮ್ಮಪ್ಪ ಅಮ್ಮನೇ ಹೊಡೆದಿಲ್ಲ" - ತಟಕ್ಕನೆ ಅವಳು ಮಾತುಗಳಲ್ಲಿ ಹೊಡೆದೇ ಬಿಟ್ಟಳು.

ಅವನಿಗೇನೂ ಬೇಸರವಾಗಲಿಲ್ಲ.  ಗೆರೆ ಹಾಕಲೇ ಬೇಕಿತ್ತು.  ಹಾಕಿಯಾಯ್ತು.  ಅವಳಿಗೂ ಬೇಸರವಾಗಲಿಲ್ಲ.

ರೋಟಿ ತಿಂದು ಮುಗಿಸಿದ್ದ. ಕಾಫಿ ಆಯ್ತು. ಬಿಲ್ ಕೊಟ್ಟು ಒಂದು ರೂಪಾಯಿ ಟಿಪ್ಸ್ ಬಿಟ್ಟಳು.

"ಟಿಪ್ಸ್ ಯಾಕೆ ಬಿಡ್ತೀಯ?" ಜಗಳ ಆಡಬಾರದು ಎಂದು ಎಷ್ಟೇ ನಿರ್ಣಯಿಸಿದ್ದರೂ ಒಮ್ಮೊಮ್ಮೆ ಅತಿಯಾಗಿ ಆಡುತ್ತಾನೆ - ಬಫೂನ್.

ಅವಳ ಕಣ್ಣಲ್ಲಿ ಉರಿ ಕಾಣಿಸಿಕೊಂಡಿತು. ಈ ಪ್ರಶ್ನೆಯನ್ನು ಅವನು ನಾಲ್ಕನೆ ಬಾರಿ ಕೇಳುತ್ತಿರುವುದು. ಆದರೂ ಕೇಳಿದ ಪ್ರಶ್ನೆಗೆ ಸಂಕಟದ ಉತ್ತರ.

"ನನಗೆ ಗೊತ್ತಿಲ್ಲ.  ನಮ್ಮಪ್ಪ ಅಮ್ಮನ ಜೊತೆ ಹೋಟೆಲ್‌ಗೆ ಹೋದಾಗ ಟಿಪ್ಸ್ ಬಿಡೋದು ನೋಡಿರಬೇಕು.  ಬಹುಶಃ ಟಿಪ್ಸ್ ಬಿಡೋದು ನಮ್ಮಪ್ಪನಿಂದ ಕಲಿತಿದ್ದಿರಬೇಕು..."

ಅವನಿಗೆ ನಿಜವಾಗಿಯೂ ಕೋಪ ಉಮ್ಮಳಿಸಿಕೊಂಡು ಬಂದಿತ್ತು.  ಕೋಪವನ್ನು ಮುಷ್ಠಿಗೆ ರವಾನಿಸಿ ಬೆರಳುಗಳ ಮೂಲಕ ಹೊರಗೆ ಹಾಕಿದ.  ಆದರೂ ಅದು ಜಿಗುಟು ಸ್ವರದಲ್ಲಿ ಒಡೆದಿತ್ತು.  "ಸುಳ್ಳು.." ಕಿರುಚಿದ.

"ಹೋಗೋ ಎಲ್ಲವನ್ನೂ ಕಾನ್ಶಿಯಸ್ಸಾಗೆ ಮಾಡ್ಬೇಕಾಗಿಲ್ಲ..ಯಾಕೇಂತ ನನಗೆ ಗೊತ್ತಿಲ್ಲ.."- ಅವಳಿಗೂ ಸಿಟ್ಟು-ವಾಕರಿಕೆ-ಅಸಹ್ಯ.

"ನನಗೆ ಗೊತ್ತು ಯಾಕೇಂತ, ನೀನು ಈ ಹ್ಯಾಬಿಟ್ಟನ್ನ ಎಲ್ಲಿ ಪಿಕಪ್ ಮಾಡಿದ್ದೀಯಾನ್ನೋದು.."

ಇದನ್ನು ಈವರೆಗೆ ಅವನು ಕಾಲೇಜಿನ ವಲಯದಲ್ಲಿ ಸಹೋದ್ಯೋಗಿಗಳ ನಡುವೆ ಸಾಕಷ್ಟು ಬಾರಿ ಹೇಳಿದ್ದ.  ಬಹಳ ಜನಕ್ಕೆ ಹೇಳುತ್ತಲೇ ಇರುತ್ತಾನೆ.  ಒಳ್ಗೆ ಮುಷ್ಠಿ ಹಿಡಿದು ಕಟಕಟಿಸಿ, ದ್ರವಿಸಿ...

"ಹೇಳು ಹಾಗಾದೆರೆ.." ಅವಳು ಸವಾಲು ಹಾಕಿದಳು.

"ಈಗಲ್ಲ , ಸಮಯ ಬರಲಿ ಸಾಧ್ಯಾವಾದರೆ ನೀನೆ ಯೋಚಿಸು, ಹೊಳೆದರೆ ಹೇಳು.."

"ಹೀಗೆ ಆಲೋಚಿಸ್ತಾ ಕೂತರೆ ಸಿಗೋ ಸಣ್ಣ ಪುಟ್ಟ ಸಂತೋಷಗಳನ್ನೂ ಕಳ್ಕೋಬೇಕಾಗುತ್ತೆ.  ನಿನ್ನ ತರಹ ಎಲ್ಲವನ್ನೂ ಗಂಭೀರವಾಗಿ ಯೋಚಿಸಬಾರದು.."

ಇಬ್ಬರೂ ಹೋಟೆಲ್ಲಿಂದ ಎದ್ದು ಆಚೆಗೆ ಬಂದರು.  ಸಣ್ಣದಾಗಿ ಮಳೆ ಹನಿಯುತ್ತಿತ್ತು.  ಅಸಹನೆಯನ್ನೂ ಕೋಪವನ್ನು ಮುಚ್ಚಿಟ್ಟುಬಿಡುವಷ್ಟು ನಯಗಾರಿಕೆ ಅವಳಿಗಿಲ್ಲದ್ದು ಅವನಿಗೆ ಮೆಚ್ಚಿಗೆಯಾದ ಅಂಶ. ಕೋಪವನ್ನು ತೋರಿಸಿಕೊಳ್ಳೋದಕ್ಕೂ ಒಳಗಡೆ ಎಲ್ಲೋ ಇಂಟಗ್ರೆಟಿ ಇರಬೇಕು.  ಅಸಲಿ ಗುಣವನ್ನ ಯಾವ ಎಗ್ಗೂ ಇಲ್ಲದೆ, ಅಪರೂಪಕ್ಕೊಮ್ಮೆ ಇಂತಹವರು ಕಾಣ ಸಿಗೋದು...ಕಾಲೇಜಿನ ಒಳಗೆ ಬಂದಿದ್ದರು.

"ಹ್ಯಾಗೆ ಹೋಗ್ತೀಯ?" ಕೇಳಿದ.

"ಬಸ್ ಸ್ಟಾಪಿಗೆ ನಡ್ಕೊಂಡು ಹೋಗ್ತೀನಿ."- ಕಾಲೇಜಿನಿಂದ ಬಸ್ ಸ್ಟಾಪಿಗೆ ಐದು ನಿಮಿಷದ ಹಾದಿ.

"ಜೊತೆಗೆ ಬರಲ?"

"ಬೇಡ ಒಬ್ಬಳೆ ಹೋಗ್ತೀನಿ."

ಕತ್ತಲಲ್ಲಿ ಒಬ್ಬಳೇ ನಡೆಯ ತೊಡಗಿದಳು. ಜನರೊಂದಿಗೆ ಅವಳು ಬೆರೆತರೂ ಅವಳು ಒಬ್ಬಂಟಿ ಎಂದನ್ನಿಸಿತವನಿಗೆ. ನಡೆಯುತ್ತಾ ಹೋಗುತ್ತಿದ್ದವಳನ್ನು ಬೆರಗುಗಣ್ಣಿನಿಂದ ನೋಡುತ್ತಾ ನಿಂತ. ಕ್ರಮೇಣ ಅವನ ದೃಷ್ಟಿಯಾಚೆಗೆ ಕರಗಿದಳು.  ಅವಳಿಗೆ ಗೊತ್ತಿಲ್ಲ.  ಸಣ್ಣ ಸಣ್ಣ ಸಂಗತಿಗಳಲ್ಲಿ ಅವನೂ ಸಂತೋಷಿಸುತ್ತಾನೆಂದು. ಅವನು ಹೇಳುವುದೂ ಇಲ್ಲ- ಅವಳು ಕೇಳುವುದೂ ಇಲ್ಲ. ಇಬ್ಬರಿಗೂ ಗೊತ್ತು.

"ಬೆಳೆಗಾಂ ಡಿಸ್ಟ್ರಿಕ್ಟ್‌ನಲ್ಲಿ ಒಂದು ಅಮೆರಿಕನ್ ಫ್ಯಾಕ್ಟ್ರಿ ಇದೆ. ಅದರ ಸುತ್ತಮುತ್ತಲಿನ ಗ್ರಾಮಗಳನ್ನು ದತ್ತು ತೆಗೆದುಕೊಂಡು ಅಭಿವೃದ್ಧಿ ಮಾಡ್ಬೇಕೂಂತಿದ್ದಾರೆ. ಅವರಿಗೆ ಸೋಷಿಯಲ್ ವೆಲ್‌ಫೇರ್ ಆಫಿಸರ್ ಬೇಕಂತೆ. ನನಗೆ ಇಂಟೆರ್‌ವ್ಯೂ ಬಂದಿದೆ, ಹೋಗ್ತೀನಿ. ಯಾರೀಗೂ ಹೇಳ್ಬೇಡ.."

ಒಂದು ದಿನ ದಿಢೀರನೆ ಹೇಳಿದಳು.  ಅವನಿಗೆ ಒಂದು ನಿಮಿಷ ಕಳವಳವಾಯ್ತು. ಆ ಕಳವಳಕ್ಕೆ ಎರಡು ಕಾರಣಗಳು ಅವನಿಗೆ ಸ್ಪಷ್ಟವಾಯ್ತು.  ಒಂದನ್ನು ಹೇಳಿದ ಒಂದನ್ನು ಮುಚ್ಚಿಟ್ಟ.  ಬಹಿರಂಗವಾದರೆ ಅದಕ್ಕೊಂದು ಲೆಜಿಟಿಮಸಿ ಹುಡುಕುವ ಪ್ರಯತ್ನ..ಥೂ ಹೇಳುವುದೇ ಬೇಡ.  ಇನ್ನೊಂದು ಕಾರಣ ಅವನು ಪ್ರಾಮಾಣಿಕವಾಗಿ ಶ್ರದ್ದೇಯಾಧಾರದಲ್ಲಿ ನಂಬಿಕೊಂಡು ಬಂದದ್ದು.  ಅದನ್ನು ಹೇಳಿದ:

"ಅಮೆರಿಕನ್ ಕಂಪನಿ ಅಂತೀಯಾ.  ಅಲ್ಟಿಮೇಟ್ಲಿ ಅದು ಲಾಭಬಡುಕ ಸಂಸ್ಥೆ.  ಆ ಫ್ಯಾಕ್ಟ್ರೀ ಅಲ್ಲಿಲ್ಲದೆ ಹೋಗಿದ್ದರೆ ಅವರು ಯಾವ ಕುಗ್ರಾಮವನ್ನೂ ದತ್ತು ತೊಗೋತಾ ಇರ್‍ಲಿಲ್ಲ.  ಪ್ರಾದೇಶಿಕವಾಗಿ ಯಾವುದೇ ವಿರೋಧ ಬರದೇ ಇರ್‍ಲೀಂತ ಅವರು ಈ ತರಹ ಮಾಡೋದು ಉಂಟು.  ಒಲೈಸ್ತಾರೆ, ಮಣಿಯದೆ ಇದ್ದರೆ ಕರಾಮತ್ತು ಮಾಡ್ತಾರೆ. ಅಂತಹವರ ಮಧ್ಯೆ ನೀನು..?  ಕಲ್ಪಿಸಿಕೊಳ್ಳೋಕ್ಕೂ ಆಗ್ತಿಲ್ಲ.."

" ಅಲ್ಲಿ ಸೇವಾಗ್ರಾಮದಲ್ಲಿ ಎಷ್ಟೊಂದು ಜನ ಮುಂದೆ ನಿಂತು ಶ್ರದ್ಧೆಯಿಂದ ಪ್ರಾಮಾಣಿಕತೆಯಿಂದ ದುಡೀತಿರ್‍ತಾರೆ ಗೊತ್ತಾ?  ಇಲ್ಲಿ ಕೂತ್ಕೊಂಡು ಕಾಫಿ ಕುಡೀತ ಇಂಟಗ್ರಟಿ ಬಗ್ಗೆ ಮಾತಾಡೋದೂದ್ರೆ ಅಸಹ್ಯವಾಗಿಬಿಟ್ಟಿದೆ."
"ಆದರೆ ನೀನು ಅಲ್ಲಿಗೆ ಹೋಗ್ಬೇಕೂಂತಿರೋದಕ್ಕೆ ನಿಜವಾದ ಕಾರಣ ಅದಲ್ಲ."
"ನಿಜ, ಆದ್ರೆ ನಾನು ಹೋದ ಕಡೆ ಪ್ರಾಮಾಣಿಕವಾಗಿರ್‍ತೀನೀಂತ ನನಗನ್ನಿಸುತ್ತೆ.  ಜನಸೇವೆ, ಸಮಾಜಸೇವೆಯ ಮಾತುಗಳನ್ನೇನೂ ಆಡೋದಿಲ್ಲ ಹೆದರ್‍ಕೋಬೇಡ..."

ಅವಳ ಮಾತುಗಳಲ್ಲಿ ಪ್ರಾಮಣಿಕತೆಯಿತ್ತು.  ಅವನು ಸುಮ್ಮನೆ ಅವಳು ತೊಟ್ಟಿದ್ದ ಖಾದಿ ಸೆಲ್ವಾರ್ ಕಮೀಜನ್ನೇ ನೋಡತೊಡಗಿದ್ದ.  ಒಮ್ಮೆ ಅವಳು ಹೇಳಿದ್ದಳು:

" ಖಾದಿ ನನಗೆ ಬಹಳ ಅನುಕೂಲ. ಮೂವತ್ತೊಂಬತ್ತು ರೂಪಾಯಿ ಮೀಟರ್.  ಯಾರು ಕೊಡ್ತಾರೆ ಹೇಳು.  ನಾನು ಅದನ್ನ ಹಾಕಿಕೊಂಡು ದೇಶಭಕ್ತಿಯ ಸೋಗು ಹಾಕ್ತಾ ಇಲ್ಲ. ಆ ಮಾತುಗಳನ್ನ ಆಡ್ತಲೂ ಇಲ್ಲ.  ಅನುಕೂಲವಾಗಿದೆ, ಉಪಯೋಗಿಸ್ತಿದೀನಿ, ಅಷ್ಟೆ."

ಅಮೆರಿಕನ್ ಫ್ಯಾಕ್ಟರಿ, ಸೋಷಿಯಲ್ ವೆಲ್‌ಫೇರ್, ಖಾದಿ, ಮನೆ ಹೀಗೆಲ್ಲ ಅವಳು ಅಂದು ಸುದೀರ್ಘವಾಗಿ ಮಾತನಾಡತೊಡಗಿದಳು. ಅವಳ ಧ್ವನಿಯಲ್ಲಿನ ಮುಗ್ಧತೆ, ಪ್ರಾಮಾಣಿಕತೆ, ಏಕಾಕಿತನವೆಲ್ಲ ಅವನಿಗೆ ಹೊಸ ಅರ್ಥಗಳೊಂದಿಗೆ ಗೋಚರವಾಗತೊಡಗಿ ಗೊಂದಲದಲ್ಲಿ ಅವಳೇ ಹುಟ್ಟಿಹಾಕಿಕೊಂಡಿದ್ದ ವಿಪರ್ಯಾಸಗಳನ್ನೆಲ್ಲ ಬದಿಗೊತ್ತಿ ಅವನು ಭಾವುಕನಾದ.

ಆಗ ಅವನಿಗೆ ಕಾಣಿಸಿದ್ದು- ಶ್ರದ್ಧೆ ಹುಟ್ಟಿಕೊಳ್ಳುವ ಮುನ್ನದ ಪೂರ್ವಾವಸ್ಥೆಯಾದ ಗೊಂದಲಗಳು.. ಆಲೋಚಿಸುತ್ತಲೇ ನಿರ್ಣಯ ಏನಾಗಬಹುದು ಎಂಬ ಕುತೂಹಲಕ್ಕೆ ಸಿಕ್ಕಿಕೊಂಡ.

ಬೆರಗಿನಿಂದ ನೋಡುತ್ತಿದ್ದ ಅವನ ಕಣ್ಣುಗಳಿಗೆ ಅವಳು ಹಿರಿಯವಳಾಗಿ ಅವನು ಕುಗ್ಗತೊಡಗಿದ್ದ.  ಆದರೂ ಅವಳು ಹೋಗದೆ ಇದ್ದರೆ ಎಷ್ಟು ಚೆಂದವಲ್ಲವೆ. ಹೀಗೆಯೆ ಇವಳು ಮಾತನಾಡುತ್ತಿದ್ದರೆ ಎಷ್ಟು ಚೆಂದವಲ್ಲವೆ ಎಂದನ್ನಿಸ ತೊಡಗಿ ಹೋಗಿಯೇ ಬಿಡುತ್ತಾಳೆ ಎಂಬ ಆತಂಕವೂ ಅಧಿಕವಾಗಿ "ಹೋಗ್ಬೇಡಾ" ಎಂದು ಚೀರಬೇಕನ್ನನಿಸಿತು. ಅವನಿಗೆ ಆ ಸ್ವಾತಂತ್ರ್ಯವೂ ಇಲ್ಲ. ಆತ್ಮೀಯತೆ- ಸಲಿಗೆಗಳೂ ಸೋಗಾಗಿಬಿಡುವ ಅಸಹ್ಯ ಚೀರಾಟ, ಒಳಗೇ ಹುತು ಹೋಗಿ ಗೊಗ್ಗರು ಧ್ವನಿ ಹೊರಡತೊಡಗಿ ಜೋಕರ್ ಆದ, ‘ಪಾಪ’ ಎಂದು ಕಣ್ಣು ಆಡತೊಡಗಿದಂತೆ ಭಾಸವಾಗಿ ನಿಲ್ಲಿಸಿ ಎಂದು ಚೀರಬೇಕನ್ನಿಸಿತು. ಸಾಧ್ಯವಾಗದೆ ಹೋಯಿತು.

ಕಾಲೇಜಿಗೆ ಸಣ್ಣ ಬ್ರೀಫ್ ಕೇಸಿನೊಂದಿಗೆ ಬಂದಿದ್ದಳು.  ಅಂದಿನ ಕೆಲಸ ಮುಗಿಸಿ ನೇರ ಸ್ಟೇಷನ್‌ಗೆ ಅಲ್ಲಿಂದ ಬೆಳಗಾಂಗೆ ಪ್ರಯಾಣ.

"ಸ್ಟೇಷನ್‌ಗೆ ನಾನು ಬರಲ..?" - ಕೇಳಿದ.
"ಬೇಡ , ನಾನು ನೇರ ಸ್ಟೇಷನ್‌ಗೆ ಹೋಗ್ತಾ ಇಲ್ಲ"

ಅವಳು ಬ್ರೀಫ್‌ಕೇಸ್ ಹಿಡಿದು ಹೊರಟಾಗ:

"ನನ್ನನ್ನ ಸೀರಿಯಸ್ಸಾಗಿ ತೊಗೋಬೇಡ.."

ಅವಳು ಬೇರೆ ಜನರ ನಡುವೆ ಮರೆಯಾಗುತ್ತಲೆ ಇವನೂ ಬೇರೆಯವರ ತೆಕ್ಕೆಗೆ ಬಿದ್ದ.  ಅಷ್ಟು ಜನರ ನಡುವೆಯೂ ಏಕಸಕಿತನ ಖಾಲಿ ಖಾಲಿ.  ಕಾಫಿ ತಿಂಡಿ ಮಾತುಗಳಲ್ಲಿ ತೊಡಗಿಸಿಕೊಳ್ಳಲಾಗದ ಒಳ ಚೀರಾಟ.

ಸ್ಟೇಷನ್‌ಗೆ ಹೋಗಲೋ ಬೇಡವೋ- ಸಂದಿಗ್ಧದ ನಡುವೆಯೇ ಅಂತೂ ಹೋಗಬೇಕೆಂಬ ಹಠ ಬೆಳೆದು ಜಿಟಿಜಿಟಿ ಮಳೆಯ ನಡುವೆಯೇ ಹೊರಟ.  ಟ್ರೈನು ಹೊರಡುವುದಕ್ಕೆ ಇನ್ನೂ ಬಹಳ ಸಮಯವಿತ್ತು. ಬಂದಿರಲಾರಳೆ?  ಹುಡುಕಿದ.  ಶಬರಿಮಲೈಗೆ ಹೊರಟಿದ್ದ ದೊಡ್ಡ ಗುಂಪೊಂದರ ಮಧ್ಯೆ ಅವಳು ಕಾಣಿಸಲಿಲ್ಲ.  ಬದಲಿಗೆ ಮುರುಗೇಸನ್ ಕಂಡ.  ಮುರುಗೇಸನ್‌ಗೂ ಇವನನ್ನು ಕಂಡು ಸೋಜಿಗ.  ದಡ ದಡ ಹೆಜ್ಜೆ ಹಾಕುತ್ತ ಅದೇ ಹಳೆ ಪ್ರೀತಿಯನ್ನು ಜಿನುಗಿಸಿ-

"ಏನ್ಗುರೂ ಸ್ಟೇಷನ್‌ನಲ್ಲಿ..?" - ತಮಿಳಿನಲ್ಲಿ.
"ಮುರುಗೇಸಾ ಏನೋ ಇದು- ಶಬರಿಮಲೈಗೆ ಹೊರಟಿದ್ದೀಯ..?"
"ಹೂಂ..ಎಂಟನೆ ವರ್ಷ...ನಿನ್ನನ್ನ ನೋಡಿ ಎಷ್ಟು ವರ್ಷಗಳಾಗೋಯ್ತು..!  ನಿನ್ನ ಕತೇನೆಲ್ಲಾ ಒದ್ತಾ ಇರ್‍ತೀನಿ."
"ಅದ್ಸರಿ ಈಗೇನ್ಮಾಡ್ತಾ ಇದ್ದೀಯ?"

"ಬಿನ್ನಿ ಮಿಲ್ಸ್ ಹತ್ತಿರ ಸಣ್ಣ ಹೊಟೆಲ್ ಇಟ್ಟೀದೀನಿ ಹೆಂಡ್ತಿ, ಅವಳ ತಮ್ಮ ಎಲ್ರೂ ಹೋಟೆಲ್ ನಡ್ಸೋಕ್ ಸಹಾಯ ಮಾಡ್ತಾರೆ.  ಊಟ ತಿಂಡಿ ಬಾಡಿಗೆಗೇನೂ ಕೊರತೆ ಇಲ್ಲ. ಅದೇ, ಬೆಂಗಳೂರ್ ಯೂನಿವರ್ಸಿಟಿ ಕ್ಯಾಂಟೀನ್‌ನಲ್ಲಿ ಸಪ್ಲಯರ್ ಆಗಿದ್ದಾಗ ಎಷ್ಟು ಸಂತೋಷವಾಗಿದ್ನೋ ಅಷ್ಟೆ ಸಂತೋಷವಾಗಿದೀನಿ.  ನೀನು ಕಾಮತ್ ಹೋಟ್ಲು ಬಿಟ್ಟು ಸಪ್ಲಯರ್ ಕೆಲಸ ಬಿಟ್ಟು ದೊಡ್ಡೋನಾಗಿದ್ದೀ. ನೀನು ಹ್ಯಾಗಿದ್ದೀ?"
"ಏನೋ ಇದೀನಿ.  ನಾನೂ ನೀನು ಟಿಪ್ಸ್ ಕಾಸೆಲ್ಲಾ ಕೂಡಿಹಾಕಿ ಎಂಜಿ‌ಆರ್ ಸಿನಿಮಾ ನೋಡ್ತಿದ್ದು ಜ್ಞಾಪ್ಕ ಇದ್ಯ?"
"ಇಲ್ದೇ ಏನು ಗುರು, ನಿನ್ನ ಜತೆ ಸಿನಿಮಾ ನೋಡ್ಬೇಕೂಂತ ಆವಾಗಾವಗ್ ಅನ್ಸುತ್ತೆ.  ನಾನು ಮಲೈನಿಂದ ವಾಪಸ್ ಬಂದ್ಮೇಲೆ ತಿರ್‍ಗಾ ಹೋಗೋಣ.  ದರಿದ್ರ ಟಿಪ್ಸ್ ಕಾಸು ಬೇಡ.  ನಂದೆ ಕಾಸು.  ಏನಂತೀಯ?"

- ಮುರುಗೇಸನ ಮಾತುಗಳನ್ನ ಮತ್ಸರದಿಂದ ಕೇಳುತ್ತಾ ನಿಂತಾಗ ಒಳಗೆ ಖಾಲಿ ಖಾಲಿ- ಬಿಕ್ಕಿ ಬಿಕ್ಕಿ ಅಳಬೇಕನ್ನಿಸಿತು.  ಅವಳು ಹೋಗುತ್ತಾಳೆ ಎಂಬ ವ್ಯಥೆಗೋ ಅಥವ ಮುರುಗೇಸನಂತ ಪ್ರೀತಿಯ ಒಡನಾಡಿ ಸಿಕ್ಕಿದ ಸಂತೋಷಕ್ಕೋ?  ಗೊತ್ತಿಲ್ಲ.

"ಸಿಗರೇಟು ಸೇದ್ತೀಯೇನೊ?"
"ಬೀಡಿ ಗುರು, ಆದರೆ ಈಗ ವ್ರತ ಹಿಡಿದ್ದೀನಲ್ಲ....ಆಗಲ್ಲ.  ಗುರುಚಾಮಿ ಕರೀತಾ ಅವ್ರೆ. ಬಂದ್ಮೇಲೆ ಸಿಗ್ತೀನಿ."

ಮುರುಗೇಸ ಹೊರಟ. ಅವನ ಗುಂಪು- ಸ್ಥಳ ಬದಲಾಯಿಸುವುದನ್ನು ಇವನು ನೋಡುತ್ತಾ ನಿಂತ.  ಖಾಲಿ ಖಾಲಿ.  ಸಿಗರೇಟಿನ ಮೇಲೆ ಸಿಗರೇಟನ್ನ ಸುಟ್ಟ.  ಅವಳು ಬಂದಿರುತ್ತಾಳೇನೊ ಎಂದು ಹುಡುಕಲಾರಂಭಿಸಿದ.  ದೊಡ್ಡ ಉದ್ದದ ಟ್ರೈನಿನ ಪ್ರತಿಯೊಂದು ಬೋಗಿಯನ್ನೂ ಜಾಲಾಡಿದ.  ಕಾಣಿಸಲಿಲ್ಲ.  ತಟಕ್ಕನೆ ತಲೆ ಮೇಲೊಂದು ಏಟು ಬಿತ್ತು! ಹಿಂದಕ್ಕೆ ತಿರುಗಿದ- "ಏನೋ" ಎಂದು ಮುಗುಳ್ನಕ್ಕಳು!  ಟ್ರೈನೂ ಹೊರಡುವುದಕ್ಕೆ ಐದು ನಿಮಿಷಗಳಷ್ಟೆ ಇತ್ತು.

"ಒಂದನ್ನು ಹೇಳ್ಬೇಕೂಂತನ್ನಿಸ್ತು. ಬಂದೆ. ಹೇಳದೆ ಹೋಗಿದ್ದಿದ್ದರೆ ನಿದ್ದೆ ಬರ್‍ತಿರಲಿಲ್ಲ."

ತಟಕ್ಕನೆ ಅವನ ಎದುರಿಗೆ ಅರ್ಧ ಅಡಿಯೂ ಇರಲಿಲ್ಲ ಅಷ್ಟು ಸಮೀಪ ಬಂದು ನಿಂತು ಕಣ್ಣುಗಳಲ್ಲಿ ಜೀವಧ್ವನಿಯನ್ನು ತುಂಬಿಕೊಂಡು ಈಗಲಾದರೂ ಹೇಳುತ್ತಾನೆ- "ಏನದು? ಏನು ಹೇಳೋ.." ಎಂದು ಕೇಳಿದಳು.

ಅವಳನ್ನೇ ನೋಡುತ್ತಾ - ಆಕಾರವನ್ನು ಮನಸ್ಸಿನಲ್ಲಿ ನಿಲ್ಲಿಸಿಕೊಂಡು ಅದರ ಬೆರಗಿನಲ್ಲಿ ಮೈಮರೆತು-

ಮರೆತು ಹೋದಾತು- ಹೇಳಿಯೇ ಬಿಡಬೇಕು ಎಂದು ಅನ್ನಿಸಿ ರಿಹರ್ಸಲ್ ಮಾಡಿಕೊಂಡು ಬಂದಿದ್ದ ಸಾಲುಗಳನ್ನು ಸಕಲ ಶಕ್ತಿಯನ್ನು ಕ್ರೋಢೀಕರಿಸಿಕೊಂಡು ಹೇಳಿದ-

"ನಾನು ಯಾವಾಗ್ಲಾದ್ರೂ ನೀನು ಹೋಗ್ಬೇಡಾ ಅಂತ ಹೇಳಿದ್ರೆ ಮರೆತು ಬಿಡು. ನೀನು ಹೋಗ್ಬೇಕೂಂತಿದ್ರೆ, ನಿರ್ಧಾರ ಅಚಲವಾಗಿದ್ರೆ ಸ್ನೇಹದ ಹೆಸರಿನಲ್ಲಿ ನಿರ್ಧಾರದ ಅಚಲತೆಯ ಶಕ್ತಿಹರಣ ಮಾಡೋದು ತಪ್ಪು.."

ಟ್ರೈನು ಹೊರಡುವ ಸೂಚನೆ ಕಾಣಿಸಿಕೊಡು ಲಗುಬಗೆಯಿಂದ ಅವಳು ಹತ್ತಿ ತನ್ನ ಸೀಟಿನಲ್ಲಿ ಕುಳಿತಿರಬೇಕು. ಕಿಟಕಿಯಲ್ಲೂ ಕಾಣಿಸಲಿಲ್ಲ.

ಕೈ ಬೀಸಲಿಲ್ಲ. ಅವನು ಪೆಚ್ಚು ಮುಖ ಹಾಕಿಕೊಂಡು ಒಂದೆರಡು ಸಿಗರೇಟು ಸುಟ್ಟು ಏನನ್ನೋ ಯೋಚಿಸಿದವನಂತೆ ಕರಿಮುಂಡು ಅಂಗಿಗಳಲ್ಲಿ, ಗುಂಪು ಗುಂಪಾಗಿ ನಿಂತಿದ್ದ ಯಾತ್ರಿಕರ ನಡುವೆ ಕರಗಿದ. ಅವನ ಮನಸ್ಸು ತುಟಿಗಳು ಒಂದಾಗಿ ಹಳೆ ಎಂಜಿ‌ಆರ್ ಚಿತ್ರದ ಹಾಡೊಂದನ್ನು ಗುಣಗುಣಿಸುತ್ತಿತ್ತು.

ವಾಳ್ಕೈ ಎನ್ರೊರು ಪಯಣತ್ತಿಲೆ
ಪಲರ್ ವರುವಾರ್ ಪೋವಾರ್ ಭೂಮಿಯಿಲೆ
ವಾನತ್ತು ನಿಲವಾಯ್ ಸಿಲರಿರುಪ್ಪಾರ್
ಅಂದ ವರಿಸೈಯಿಲ್ ಮುದಲ್ವನ್ ತೊಳಿಲಾಳಿ.

ಜೊತೆಗೆ ಮನಸ್ಸಿನಲ್ಲಿ ಅಚ್ಚಾಗಿ ಹೋಗಿದ್ದ ಆಕಾರ ಮತ್ತಷ್ಟು ತುಂಬಿಬಂದಂತಾಗಿ

ಅವಿದ್ಯಾನಾಮಂತಸ್ತಿಮಿರಮಿಹಿರ ದ್ವೀಪನಗರಿ
ಜಡಾನಾಂ ಚೈತನ್ಯಸ್ತಬಕ ಮಕರಂದ ಸ್ರುತಿಝರಿ
ದರಿದ್ರಾನಾಂ ಚಿಂತಾಮಣಿ ಗುಣನಿಕಾ ಜನ್ಮಜಲಧೌ
ನಿಮಗ್ನಾನಾಂ ದಂಷ್ಟ್ರಾ ಮುರರಿಪು ವರಾಹಸ್ಯ ಭವತಿ

ಜೊತೆಗೆ-
ಓಂ-ಹರಿಃ ಓಂ-ಚತುಸ್ಸಾಗರ ಪರ್‍ಯಂತಂ
ಆತ್ರೇಯ ಗೋತ್ರಸ್ಯ ಋಗ್‌ಶಾಖಾಧ್ಯಾಯಿ
ಸೋಮಶೇಖರ ಶರ್ಮನ್
ಅಹಂಬೋ ಅಭಿವಾದಯೇ.."


ಬರುತ್ತಾಳೋ ಬರುವುದಿಲ್ಲವೋ- ಬಂದರೂ ಚೆನ್ನ- ಬರದಿದ್ದರೂ ಚೆನ್ನ
ಅವಳು ಬರದೆ ಇದ್ದರೆ- ಪತ್ರ ಒಂದನ್ನು ಬರೆದ-
ಒಂದೇ ಒಂದು ಸಾಲಿನ ಪತ್ರ:

‘ಕ್ಷಮಿಸು, ನಿನ್ನನ್ನು ತಬ್ಬಿಕೊಂಡದ್ದಕ್ಕೆ-ವಾಸ್ತವವಾಗಿ ತಬ್ಬಿಕೊಳ್ಳದ್ದಕ್ಕೆ’ ಕಂಗಾಲಾದ.
         *****

ಕೀಲಿಕರಣ: ಶೇಖರ್‌ಪೂರ್ಣ
ವ್ಯಾಕರಣ ದೋಷ ತಿದ್ದುಪಡಿ: ಕಿಶೋರ್ ಚಂದ್ರ

ಅಗತ್ಯತೆ

- ಪರಿಮಳಾ ರಾವ್ ಜಿ ಆರ್‍

ದೇಶಕ್ಕೆ ಬೇಕು
ಸ್ವಚ್ಛ ಶೌಚಾಲಯ
ಆಮೇಲೆ ಕಟ್ಟಿರಿ
ನ್ಯಾಯಾಲಯ
ದೇವಾಲಯ

 *****

ಯಲ್ಡಕ್ಕೆ ಹೋಗದೆಲ್ಲಿ?

(ಬೀದಿ ನಾಟಕದ ಹಾಡು)
- ಡಾ || ರಾಜಪ್ಪ ದಳವಾಯಿ

ಹಾಡು - ೧

ಯಲ್ಡಕ್ಕೆ ಹೋಗದೆಲ್ಲಿ
ಕೇಳೊ ಅಣ್ಣಾ ಕೇಳೊ
ಯಲ್ಲಾ ಕಡೆಯೂ ಇಸ್ಸಿಸ್ಸಿ
ನೋಡೊ ಅಣ್ಣಾ ನೋಡೊ ||

ಊಟವು ಶುದ್ಧ ಅಂತಾದ್ರೆ
ಇದ್ಕೂ ಗಮನ ಬೇಕಲ್ವೆ
ಎಲ್ರಿಗೂ ಆರೋಗ್ಯ ಬೇಕಂದ್ರೆ
ಇದೂನು ಸೈತ ಮುಖ್ಯಲ್ವೆ ||

ಎಲ್ಲೆಲ್ಲೂ ಹೋದ್ರೆ ಅಲ್ಲೆಲ್ಲ
ನೀ ರೋಗ ಹಂಚುತೀಯ
ಒಂದ್ಕಡೆ ಸ್ವಚ್ಚ ಹೋದ್ರೆ
ಜೀವನ ಹರ್ಷ ಇಡ್ತೀಯ ||

ಅಣ್ಣಾ ತಗಿಯೊ ತರವಲ್ಲ
ದರಿದ್ರ ಮೈಲಿಗೆ ಮಡಿನೆಲ್ಲ
ಕಕ್ಕಸ ಜಗದ ಜನಕೆಲ್ಲ
ಮರ್‍ಯಾದಿ ತರೊ ಮಹಲಣ್ಣ ||

ಹಾಡು - ೨

ಬುದ್ಧಿ ಕೊಡಲಿ ದೇವರು
ಊಟ ಮಾಡೊ ಜನಕೆಲ್ಲ ||

ಚೊಂಬು ಹಿಡಿದು ನಿತ್ಯವು
ಪರರ ಬೇಲಿಗೆ ಹೋಗದಂಥ ||

ಹಾಡು - ೩

ಕೇಳ್ರಯ್ಯಾ ಗಂಡಸರೆ
ನಿತ್ಯಗೋಳು ಹೆಂಗಸರ ||

ಮಾನ ಮುಚ್ಚಲು ಬಟ್ಟೆಯು
ಅಂತೇ ಕಕ್ಕಸದಾ ಮನೆಯು ||

ಹಾಡು - ೪

ಬೇಕೊ ಅಣ್ಣಾ ಮರ್‍ವಾದೆ
ಅನ್ನಬಟ್ಟೆಗಿಂತ ಮಿಗಿಲಾದ್ದೆ ||

ಆರು ಮೂರು ದಿನದ ಬದುಕು
ಮಾನದಿಂದ ಕೂಡಿರಬೇಕು ||

ಹಾಡು - ೫

ಅರಿವು ಬೇಕಣ್ಣ
ತಿಳಿವು ಬೇಕಣ್ಣ
ಪಶುವಾಗಿರದ
ಮನುಜನಿಗೆ ||

ಬಾಳೆಲ್ಲ ಬಡಸ್ತನ
ದಿನದಿನ ಅವಮಾನ
ಎಲ್ಲವ ನುಂಗುತ
ಬದುಕಣ್ಣ ನಗುತ ||

ಬಡವನಾದರೇನು
ದರಿದ್ರನಾಗಲ್ಲ
ಸ್ವಚ್ಛ ಬದುಕಿಂದ
ಘನತೆ ಬಂತಲ್ಲ ||

ಬದುಕೆಂಬುದೇ ಮಲ
ಆಗಬೇಕು ನಿರ್ಮಲ
ಮುಂದೆ ಅಬಲರೆಲ್ಲ
ಸಬಲರಾಗುವರಲ್ಲ ||

        *****

ಕೀಲಿಕರಣ: ಕಿಶೋರ್‍ ಚಂದ್ರ

ಪ್ರೀತಿಗೆ

- ಗಿರಿಜಾಪತಿ ಎಂ. ಎನ್

ಮಾತು ಬಲ್ಲವರಲ್ಲಿ ಕೇಳಿದೆ
ಅರ್ಥವಾವುದು ‘ಪ್ರೀತಿಗೆ’.....
ಮಾತ-ಮಾತಿಗೆ ನಿಲುಕಲಾಗದ
ಮೌನದಳವಿನ ರೀತಿಗೆ
ಬರೆದೆ ಬರೆದರು ‘ಪ್ರೀತಿ’ಸುತ್ತಲು
ಭಾಷೆ-ಭಾಷ್ಯವ ಬಗೆ... ಬಗೆ
ಇನ್ನೂ ಬರೆವರ ಸಾಲ ಕಂಡು
ಮನದಿ ಹೊಮ್ಮಿತು ಚಿರುನಗೆ....
ಎಲ್ಲೆ ಹೋದರು.... ಎಲ್ಲೆ ಕಂಡರು
ಅಲ್ಲಿ ಪ್ರೀತಿಯ ಸೆಲೆ ಇದೆ
ಮರಳುಗಾಡಲೂ ನಗುತ ಬಾಳುವ
ಜೀವ್ಯ ಜಾಲದೆ ಬಲವಿದೆ....
ದಿಗಂತದಲ್ಲಿನ ಪ್ರೀತಿ ಛಾಯೆಯು
ಇಳೆಗೆ, ದಿನವನು ನೀಡಿದೆ.....
ಇಳೆಯ ಕಣದಲಿ ಮೊಳೆವ ಪ್ರೀತಿಯು
ಬಾನ ಮೆರುಗಿಗೆ ಕಾದಿದೆ.....
ಮನ-ಮನದಾಳದರಮನೆ
ಪ್ರೀತಿಯಾ ಸಿರಿ ನಂದನ.....
ಅರ್ಥ ಮೀರಿದ ಸಾರ್ಥಕತೆಯ
ಒಲವಿನೈಸಿರಿ ಚೇತನ.....

        *****

ಕೀಲಿಕರಣ: ಕಿಶೋರ್‍ ಚಂದ್ರ

ನಗೆ ಡಂಗುರ - ೬

- ಪಟ್ಟಾಭಿ ಎ ಕೆ

ಒಬ್ಬ ದೊಡ್ಡದೊಂದು ಶನಿದೇವರ ಪಟವನ್ನು ಹೆಗಲಿಗೆ ಬಿಗಿದುಕೊಂಡು ಮನೆಮನೆಗೂ ‘ಶನಿದೇವರ ಭಕ್ತಿ’ ಎಂದು ಕೂಗುತ್ತಾ ಭಿಕ್ಷ ಕೇಳುತ್ತಿದ್ದನು.  ಶಾಮಣ್ಣ ನವರ ಮನೆ ಬಾಗಿಲಲ್ಲಿ ಬಂದು ನಿಂತಾಗ "ಏನಪ್ಪಾ, ಶನಿ ನಿನ್ನ ಹೆಗಲೇರಿಬಿಟ್ಟಿದ್ದಾನೆ, ಅಷ್ಟಮ ಶನಿ ಆಂತ ಕಾಣುತ್ತೆ" ಛೇಡಿಸಿದರು.
ಭಿಕ್ಷುಕ: "ಅದಕ್ಕೇ ಅಲ್ಲವೆ ಸಾ, ನಾನು ಭಿಕ್ಷೆ ಪಾತ್ರೆ ಹಿಡಿದಿರೋದು ?" ಮರುತ್ತರ ಕೊಟ್ಟ!

        *****

ಕದ್ದವರ್‍ಯಾರಣ್ಣ ಬೀಜಗಳ

(ಬೀದಿ ನಾಟಕದ ಹಾಡು)
- ಡಾ || ರಾಜಪ್ಪ ದಳವಾಯಿ

ಆಆ .... ಹೊಹೊ....
ಕದ್ದವರ್‍ಯಾರಣ್ಣ ಬೀಜಗಳ
ಮೆದ್ದವರ್‍ಯಾರಣ್ಣ ಲಾಭಗಳ
ಆಆ... ಹೊ ಹೊ... ||
*****

ನಗೆ ಡಂಗುರ - ೫

- ಪಟ್ಟಾಭಿ ಎ ಕೆ

ಆತ: ಅಪರೂಪಕ್ಕೆ ಸಿಕ್ಕಿದ ತನ್ನ ಸ್ನೇಹಿತನನ್ನು ಮಾತಿಗೆ ಎಳೆದು
         "ನಿನ್ನ ಮಗ ಪೋಲಿ ಅಲೆಯುತ್ತ ಕಾಲ ಕಳೆಯುತ್ತಿದ್ದನಲ್ಲಾ ಈಗಲೂ ಹಾಗಯೇ?"
ಈತ: "ಈಗ ಅವ್ನುMBBS ಕಣಪ್ಪಾ"
ಆತ: "ಪರವಾಗಿಲ್ಲವೆ; ಮೆಡಿಕಲ್ ಓದಿ ಡಾಕ್ಟರ್ ಆದ ಅನ್ನು"
ಈತ: "ಅಯ್ಯೋ ಡಾಕ್ಟರ್ ಆಗೋದು ಎಲ್ಲಿ ಬಂತು? ಅವನು ಡಿಗ್ರಿ ಪಡೆದಿಲ್ಲ. Mನೆ Bಟ್ಟು Bದಿ Sತ್ತೋದು ಮುಂದುವರಿಸುತ್ತಿದ್ದಾನೆ ಅಷ್ಟೆ!"


        *****

ಕೀಲಿಕರಣ: ಎಮ್ ಎನ್ ಎಸ್ ರಾವ್

ಮಗೂ......

- ಚಿಂತಾಮಣಿ ಕೊಡ್ಲೆಕೆರೆ

ಈ ಮೂಗು ಚಂದ ಈ ಬಾಯಿ ಚಂದ
ಈ ಕಣ್ಣು ಈ ಕಾಲು ಈ ಕೈಯ್ಯಿ ಈ ಮೈಯ್ಯಿ
ಚಂದ ನಿನ್ನ ನಗೆ ಚಂದ
ನೀನತ್ತ ಅಳುವೂ ಚಂದ
ನೀನೇ ಚಂದ ಸ್ವಚ್ಚಂದ

ನೀನೇನಾಗಲಿದ್ದಿಯಾ?
ನನಗೆ ಗೊತ್ತಿಲ್ಲ
ಆದರೆ ಇದು ಖಾತ್ರಿ

ಈ ಪುಟ್ಟ ಶರೀರ
ಇಷ್ಟುದ್ದ ಬೆಳೆಯುತ್ತದೆ
ಈ ಬತ್ತಲೆ ಶರೀರ ಹೀಗೇ ಇರುವುದಿಲ್ಲ
ಇದರ ಮೇಲೊಂದು ಅಂಗಿ
ಕೆಳಗೊಂದು ಚಡ್ಡಿ
ಈ ಸ್ತಬ್ದ ಜಗದಿಂದ ಶಬ್ಬ ಲೋಕಕೆ ಪಯಣ
"ಈತ ನಾಳೆಯ ದಿವಸ ಹೀಗಾಗಬಹುದು
ಹಾಗಾಗಬಹುದು ಅಲ್ಲ
ಹೇಗಾಗಬಹುದು ?"

ಒಂದೊಂದ್ಲೆ...ಎರಡೊಂದ್ಲೆ....
ಅ ಆ ಇ ಈ ಉ ಊ
ನಾಲ್ಕು ಗೋಡೆಗಳ ಮಧ್ಯೆ
ಈ ಮೃದು ಬೆನ್ನು ಈ
ಮೃದು ಕೈಯ್ಯಿ
ಗಟ್ಟಿಯಾಗಲೇ ಬೇಕು

ಈ ಮೂಗ ಕೆಳಗೊಂದು
ಮೀಸೆ-ಕರಿಮೀಸೆ
ಈ ಮೃದು ಕಪಾಲದ ಮೇಲೆ
ಗಡ್ಡ
ಗುಡ್ಡವನ್ನೇ ತಂದು ಕೆಳಗಿಡುವ
ಲವಲವಿಕೆ
ಹತ್ತರ ಜತೆ ಹನ್ನೊಂದಾಗುವ
ಚಡಪಡಿಕೆ

ಮಕ್ಕಳು..ಹೆಂಡತಿ...
ಈ ಪುಟ್ಟ ದೇಹಕ್ಕೆ ಯಜಮಾನಿಕೆಯ ಪಟ್ಟ
ಕೆಲಸ...ಹಣ,..ರೂಪಾಯಿ
ಏ ಮಗೂ ಏ ಮಗೂ
ಶಬ್ಬಗಳ ಸಂತೆಯಲಿ ಮಾರಿ ಹೋದೀಯ ಅಪ್ಪಿ
ತಪ್ಪಿ ಕ್ಷುಬ್ಬಗಳ ಚಿಂತೆಯಲಿ ಜಾರಿ ಹೋದೀಯ
ದುಡಿಮೆ ಬದುಕಲ್ಲ
ಮಗನೇ-ಈ ಮಕ್ಕಳೇ
ನಿನ್ನ ಹಿರಿಮೆಯಲ್ಲ-ಗುರಿಯಲ್ಲ
...ನಿನಗರ್ಥವಾಗುವುದೇ ಇಲ್ಲವಲ್ಲ !
ತಾಳ ತಪ್ಪಿದೆ ಮರೀ ನಿನ್ನ ಕುಣಿತ
ಯಾವನಾ ಭಾಗವತ ?
ಎಲ್ಲಿಯದು ಮೃದಂಗ?

ಈ ರೂಪಾಯಿಗಳಲ್ಲಿ ಮುಖವಾಡಗಳಲ್ಲಿ
ನೀನೇ ಕಳೆಯುತ್ತಿದ್ದೀಯಾ
ಕೊನೆಗೊಮ್ಮೆ ಶಬ್ಬಕ್ಕೂ
ನಿಲುಕದ ನಿತ್ರಾಣ
ಆವರಿಸಿ ಉದುರುತ್ತೀಯಾ
ಉದುರಿ ಬರೀ ಉಗುರು
ಹಣ್ಣುಗೂದಲು
ದೊಣ್ಣೆ ಹೀನ
ಅಸ್ಥಿಪಂಜರದ
ಪಠಿಸುತ್ತೀಯ ಪೊಳ್ಳು ವೇದಾಂತ
ಅಥವಾ ವಾಚ್ಯದುರಂತ

ಈಗ ಹೇಳು ನೀನು ಏನಾದೆ?
ಈ ಜಗವನ್ನುದ್ಧರಿಸಿದೆಯಾ?
ಗಾಂಧಿ ಆದೆಯಾ ? ಲೋಹಿಯಾ ಆದೆಯಾ ?
ಆಟ...ನಲಿದಾಟ...ಊಟ
ಮದುವೆ...ಸಂತಾನೋತ್ಪತ್ತಿ..ದುಡಿಮೆ
ಹೇಳು ಇದೇ ಜೀವನವೆ
ಮುಗಿದೇ ಹೋಯಿತೆ ನಿನ್ನ ಕತೆ?

ಬೇಡ ಮಗು
ನಿನಗಿದೆಲ್ಲ ಏಕೆ
ಈ ಕೈಯ್ಯಿ ಈ ಪುಟ್ಟ ಬಾಯಿ
ಹಾಲುಗಲ್ಲ-ಆಹಾ !
ಈಗಿದ್ದಂತೆಯೇ ಖಾಯಂ
ಇದ್ದು ಬಿಡಲಾರೆಯಾ ?

     *****

ಕೀಲಿಕರಣ:ಎಮ್.ಎನ್.ಎಸ್.ರಾವ್

ಆಂತರ್ಯ

- ಪರಿಮಳಾ ರಾವ್ ಜಿ ಆರ್‍

ಹುಳಿಯ
ಹೊಟ್ಟೆ
ಯಲ್ಲಿಟ್ಟು
ಬಂಗಾರ
ಬಣ್ಣದಲಿ
ತೂಗಿದೆ
ನಿಂಬೆ
ಹಣ್ಣು

****

ಕೀಲಿಕರಣ: ಕಿಶೋರ್‍ ಚಂದ್ರ

ದುಡ್ಡು ಕೆಟ್ಟದ್ದೊ ಮನುಜಾ

- ಶಿಶುನಾಳ ಶರೀಫ್

ದುಡ್ಡು ಕೆಟ್ಟದ್ದೊ  ಮನುಜಾ  ಈ ಲೋಕದಿ
ದುಡ್ಡು ಕೆಟ್ಟದ್ದೊ  ಮನುಜಾ                        ||ಪ||
ಹೆಡ್ಡ ಮೂಢಾತ್ಮನೆ  ದೊಡ್ಡ ದೊಡ್ಡವರನು
ಮಡ್ಡು ಇಳಿಸುತ್ತಲೀ ಅಡ್ಡಬೀಳಿಸುವದು        ||ಅ.ಪ||

ಹರನ  ಪೂಜೆಯ ಕೆಡಿಸಿ ಸದ್ಗುರುವಿನ
ವರಮಂತ್ರವನು  ಬಿಡಿಸಿ
ಗುರುಶಿಷ್ಯಭಾವವನರುಹಿ  ಲಕ್ಷ್ಮೀಯೆಂಬ
ಕೊರವಿಯು ನರರನು ಅರವುಗೆಡಿಸುವಳು    ||೧||

ಆಸೆಯ  ಮನಗೊನಿಯು
ಸಂಸಾರವು ಕಸಿನ ಘನತೆನಿಯು
ಭಾಸುರ ಶಿಶುನಾಳಧೀಶ ಸದ್ಗುರುವಿಗೆ
ಆಸೆಯ ಕಲಿಸಲು  ಏಸರವಳವ್ವ  ಈಕಿ         ||೨||

        *****

ಕೀಲಿಕರಣ: ಎಮ್.ಎನ್.ಎಸ್.ರಾವ್

ಓದುಗರಿಗಾಗಿ ಕಾಯುತ್ತಿರುವ ಕನ್ನಡ ಪುಸ್ತಕಗಳು

-ಕಿಶೋರ್‍ ಚಂದ್ರ

ಹೈದರಬಾದಿನ ಹೃದಯ ಭಾಗದಲ್ಲಿರುವ ಅಫ್ಜಲ್ ಗಂಜ್‌ನ ಬಳಿಯಿರುವ ಆಸ್ಫಿಯ ಸರ್ಕಾರಿ ಕೇಂದ್ರ ಗ್ರಂಥಾಲಯದಲ್ಲಿ ೧೫೦೦೦ ಸಾವಿರ ಕನ್ನಡ ಪುಸ್ತಕಗಳಿದ್ದು ಓದುಗರಿಲ್ಲದೆ ಧೂಳು ಹಿಡಿದಿದೆ.  ಗ್ರಂಥಪಾಲಕರು ಹೇಳುವ ಪ್ರಕಾರ ಮೂರು ನಾಲ್ಕು ವರ್ಷಗಳಿಂದ ಯಾರೊಬ್ಬರೂ ಕನ್ನಡ ಪುಸ್ತಕಗಳನ್ನು ಓದಲು ಬಂದಿಲ್ಲ.  ಆದ ಕಾರಣ ಕನ್ನಡ ವಿಭಾಗ ಒಂದು ಕಸದ ತೊಟ್ಟಿಯಂತಾಗಿದೆ.  ಕನ್ನಡ ವಿಭಾಗವನ್ನು ಹಳೆಯ ವೃತ್ತಪತ್ರಿಕೆಗಳನ್ನು ಇಡಲು ಬಳಸಲಾಗುತ್ತಿದ್ದು ಯಾರೊಬ್ಬರೂ ಈ ಕೋಣೆಯ ಬಳಿ ಸುಳಿಯಲಾರರು.

ಆಸ್ಫಿಯ ಗ್ರಂಥಾಲಯ ನಿಜಾಮರು ಕಟ್ಟಿದ ಒಂದು ಭವ್ಯ ಗ್ರಂಥಾಲಯ ಕಟ್ಟಡ.  ಅದರಲ್ಲಿ ತೆಲುಗು ವಿಭಾಗ ಮತ್ತು ಆಂಗ್ಲ ವಿಭಾಗಗಳು ಸ್ವಚ್ಫವಾಗಿಯೇ ಇವೆ.   ಆದರೆ ಓದುಗರ ಕೊರತೆಯಿಂದಾಗಿ ಕನ್ನಡ ವಿಭಾಗವು ಆಪ್ತಮಿತ್ರ ಚಿತ್ರದಲ್ಲಿನ ಹಳೆಯ ಕೋಣೆಯಂತೆ ಕಂಡುಬರುತ್ತಿದೆ.  ಕನ್ನಡ ವಿಭಾಗದಲ್ಲಿ ಮೈಸೂರು, ಧಾರವಾಡ - ವಿಶ್ವವಿದ್ಯಾಲಯಗಳು ಪ್ರಕಟಿಸಿದ ಪುಸ್ತಕಗಳು, ಕನ್ನಡ-ಆಂಗ್ಲ ನಿಘಂಟುಗಳು, ಸಣ್ಣಕಥೆ, ಕಾದಂಬರಿ ಪುಸ್ತಕಗಳು ಲಭ್ಯ. 

ಕನ್ನಡ ಪುಸ್ತಕಗಳನ್ನು ಹೈದರಾಬಾದಿನ ನಿಜಾಮರ ಕಾಲದಲ್ಲಿನ ಮುದ್ರಣಾಲಯಗಳಲ್ಲಿ ಮುದ್ರಿಸಲಾಗುತ್ತಿತ್ತು, ಆ ಪುಸ್ತಕಗಳೂ ಇಲ್ಲಿ ಲಭ್ಯ.  ಇಲ್ಲಿ ಅಪರೂಪದ "ಹೈದರಾಬಾದ ಸಮಾಚಾರ" ೧೯೪೧-೪೨ ರಲ್ಲಿ ಪ್ರಕಟಗೊಂಡ ಕನ್ನಡ ಪತ್ರಿಕೆಯ ಪ್ರತಿಯೂ ಲಭ್ಯ.

ಈ ಗ್ರಂಥಾಲಯದಲ್ಲಿ ಪುಸ್ತಕಗಳನ್ನು ಎರವಲು ನೀಡುತ್ತಾರೆ.  ನೂರಾಐವತ್ತು ರೂಪಾಯಿ ನೀಡಿ ಸದಸ್ಯರಾಗಿ ಮುಂದಿನ ವರ್ಷದಿಂದ ಐವತ್ತು ರೂಪಾಯಿ ನವೀಕರಣ ಹಣ ನೀಡಬೇಕಾಗುತ್ತದೆ.  ಒಮ್ಮೆ ಎರಡು ಪುಸ್ತಕಗಳನ್ನು ಮಾತ್ರ ನೀಡಲಾಗುವುದು.  ಒಂದು ಪುಸ್ತಕದ ಬೆಲೆ ನೂರಾಐವತ್ತು ರೂಪಾಯಿಗಿಂತ ಹೆಚ್ಚಾದಲ್ಲಿ ಒಂದೇ ಪುಸ್ತಕವನ್ನು ವಿತರಿಸಲಾಗುವುದು.  ಪ್ರತಿ ಪುಸ್ತಕವನ್ನು ಹದಿನೈದು ದಿನಗಳವರೆಗೆ ಓದಲು ನೀಡಲಾಗುವುದು.  ನಂತರ ಮತ್ತೆ ನವೀಕರಿಸಬೇಕು.  ನವೀಕರಣ ತಡವಾದಲ್ಲಿ ದಿನಕ್ಕೆ ಪ್ರತಿ ಪುಸ್ತಕಕ್ಕೆ ೨೫ ಪೈಸೆ ದಂಡ ನೀಡಬೇಕಾಗುವುದು.

ಮಹಾತ್ಮಗಾಂಧಿ ಅಂತರರಾಜ್ಯ ಬಸ್ಸುನಿಲ್ದಾಣದ ಬಳಿ ಮೂಸಿ ನದಿಯ ದಂಡೆಯ ಮೇಲಿರುವ ಈ ಗ್ರಂಥಾಲಯದ ಬಳಿ ಹಲವಾರು ಕರ್ನಾಟಕ ಸಾರಿಗೆಯ ಬಸ್ಸುಗಳು ದಿನಂಪ್ರತಿ ಕನ್ನಡಿಗರನ್ನು ಹೈದರಾಬಾದಿಗೆ ತಲುಪಿಸುತ್ತಿದ್ದರೂ ಹೈದರಾಬಾದಿನ ಕನ್ನಡಿಗರು ಇತ್ತ ಮುಖಮಾಡದಿರುವುದು ಅರಿವಿನ ಕೊರತೆಯಿಂದಲೋ ಆಲಸ್ಯದಿಂದಲೋ ತಿಳಿಯದು.
     *****

ಪಾರಿವಾಳ ಮತ್ತು ಮನುಷ್ಯ

- ಅಬ್ಬಾಸ್ ಮೇಲಿನಮನಿ

ಆ ಊರು ಪ್ರಕ್ಷುಬ್ಧವಾಗಿತ್ತು.  ಅಲ್ಲಿನ ಜನರಿಗೆ ಬದುಕು ಎನ್ನುವುದು ದುಸ್ತರವೆನಿಸಿತ್ತು.  ಆಗಾಗ ಹಲವಾರು ಕೋಮುಗಳ ನಡುವೆ ಕಲಹ ಉದ್ಭವಿಸುತ್ತಿದ್ದವು.  ಕ್ಲುಲ್ಲಕ ಕಾರಣಗಳು ಮನುಷ್ಯರಲ್ಲಿ ಹಿಂಸಾ ಪ್ರವೃತ್ತಿ ಹುಟ್ಟುಹಾಕಿ ಊರೆಂಬೋ ಊರನ್ನು ಸ್ಮಶಾನಮಾಡುತ್ತಿದ್ದವು.  ಒಂದಿಷ್ಟು ದಿನ ಶಾಂತ ವಾತಾವರಣ ನೆಲೆಸಿದ್ದರೆ ಧರ್ಮಾಂಧರ ಮನಸ್ಸುಗಳಿಗೆ ಕಸಿವಿಸಿ ಆಗುವುದು.  ಮೈಗಳ್ಳರು, ಪುಂಡ ಪೋಕರಿಗಳು, ಹರಾಮಿ ಗಬ್ಬು ಗೌಲಿನ ಆಸೆಬುರುಕರು ಆಯಾ ಧರ್ಮಗಳ ಲಾಂಛನ ಧರಿಸಿ ಭಯೋತ್ಪಾದಕ ತಲ್ಲಣ ಹುಟ್ಟಿಸುವುದರಿಂದ ದೇವರು, ಧರ್ಮಗಳೇ ನಡುಗ ತೊಡಗಿದ್ದರಿಂದ ಅಮಾಯಕರ ಆರ್ತತೆಯನ್ನು ಕೇಳುವವರೆ ಇರಲಿಲ್ಲ.

ಉರಿಯುವ ಮನೆಯಂಗಳ ಹಿರಿದುಕೊಳ್ಳುವ ಕ್ಷುದ್ರ ಚಾಳಿಯ ರಾಜಕಾರಣಿಗಳಿಂದ ಸೈತಾನರ ಅಟ್ಟಹಾಸ ಹಗಲೆಂಬೊ ಹಗಲನ್ನು, ರಾತ್ರಿಯೆಂಬೊ ರಾತ್ರಿಯನ್ನು ಭಯಾನಕಗೊಳಿಸಿದ್ದವು.  ಇವರೊಂದಿಗೆ ಕೈಜೋಡಿಸಿದಂತೆ ವದಂತಿ ಎಂಬ ಖೋಜಾ ಮಿಥ್ಯದ ಸಂಗತಿಗಳಿಗೆ ಜೀವದುಂಬಿ, ಬಣ್ಣತುಂಬಿ ಮನುಷ್ಯ ಸಂಬಂಧಗಳ ಮೇಲೆ, ಮಾನವೀಯತೆಯ ಮೇಲೆ ಗದಾ ಪ್ರಹಾರ ಮಾಡುತ್ತಲೇ ಚಾಕು, ಚೂರಿ, ಹತ್ಯಾರ-ತ್ರಿಶೂಲ, ಬಂದೂಕು-ಬಾಂಬು, ಆಸಿಡ್ಡು-ಚೈನು, ಹಿಂದೂ-ಮುಸ್ಲಿಮ, ಜೈನ-ಬೌದ್ಧ, ಕ್ರೈಸ್ತ-ಸಿಖ್, ಪಾರಸಿಗಳನ್ನು ಬಲಿ ತೆಗೆದುಕೊಳ್ಳುತ್ತಲೇ ಇದ್ದವು.  ಧರ್ಮಗಳ ಗುತ್ತಿಗೆದಾರರು ಸತ್ತವರಲ್ಲಿ ಯಾರು ಹೆಚ್ಚುಯೆಂದು ಲೆಕ್ಕವಿಡುತ್ತಲೇ ಮತ್ಸರದ ಕೊಳ್ಳಿ ಉರಿಸುತ್ತಿದ್ದರು.

ಈ ಸಲದ ಗಲಭೆ ಭೀಕರವಾಗಿತ್ತು.  ಊರಿನ ಬೀದಿ ಬೀದಿಗಳಲ್ಲಿ ಪೋಲೀಸರ ಬೂಟು ಗಾಲಿನ ಸದ್ದು ಕೇಳಿಸುತ್ತಿತ್ತು.  ಜನರು ಮುಚ್ಚಿಕೊಂಡ ಬಾಗಿಲು ತೆರೆದು ಹೊರಬರುವ ಧೈರ್ಯ ತೋರಿರಲಿಲ್ಲ.  ಯಾರದೋ ಸ್ವಾರ್ಥಕ್ಕೆ ಅವರ ಬದುಕು ಹಿಂಸೆ ಅನುಭವಿಸತೊಡಗಿತ್ತು.  ಆದರೆ ಅವರೊಂದಿಗೆ ಗೂಡುಗಳಲ್ಲಿ ಬೆಚ್ಚಗಿರುತ್ತಿದ್ದ ಸುಂದರ ಪಾರಿವಾಳಗಳು ಮಾತ್ರ ಪ್ರಳಯಾಂತಕರ ಕ್ರೌರ್ಯ ಲೆಕ್ಕಿಸದೆ, ಪೋಲಿಸರ ಗುಂಡಿನ ಸದ್ದಿಗೆ ಧೈರ್ಯಗೆಡದೆ ಕರ್ಫ್ಯೂವನ್ನು ಉಲ್ಲಂಘಿಸಿ ನೆಲದಿಂದ ಆಕಾಶಕ್ಕೆ ಆಕಾಶದಿಂದ ನೆಲಕ್ಕೆ ಸ್ವಚ್ಛಂದವಾಗಿ ಹಾರಾಡಿಕೊಳ್ಳುತ್ತಿದ್ದವು.

ಪಾರಿವಾಳ ಸಾಕಿದ ಮನುಷ್ಯ ಕಿಟಕಿಯೊಳಗಿಂದಲೆ ಕಾಳು ತೂರಿ,

"ಪಾರಿವಾಳಗಳೇ, ಊರಲ್ಲಿ ಕರ್ಫ್ಯೂ ಇದೆ.  ನೀವು ಗೂಡು ಬಿಟ್ಟು ಹೋಗಬೇಡಿರಿ" ಎಂದಿದ್ದ.

"ನಮಗೆ ಬಂಧನ ಹಿಡಿಸುವುದಿಲ್ಲ ಹಾರುವುದು ನಮ್ಮ ಸಹಜ ಸ್ವಭಾವ."

"ಜನರ ಗಲಭೆ, ಗುಂಡಿನ ಸದ್ದು ನಿಮಗೆ ಭಯ ತರುವುದಿಲ್ಲವೆ?"

"ನಾವು ಮನುಷ್ಯರಂತಲ್ಲ."

"ಅಂದರೆ?"

"ಮನುಷ್ಯರು ಅತ್ಮತೃಪ್ತರು.  ಅವರಿಗೆ ಗಲಭೆ ಮುಖ್ಯ.  ನಮಗೆ ಶಾಂತಿ ಮುಖ್ಯ."

"ಊರು ಆತಂಕದಲ್ಲಿರುವಾಗ ನೀವು ಶಾಂತಿಯಿಂದ ಇರಲು ಹೇಗೆ ಸಾಧ್ಯ?"

"ನಮ್ಮಲ್ಲಿ ಮತೀಯ ಭಾವನೆ ಇಲ್ಲ ಅದಕ್ಕೆ."

"ನಾವೂ ನಿಮ್ಮಂತೆ ಇರಲು ಏಕೆ ಸಾಧ್ಯವಾಗುವುದಿಲ್ಲ?"

"ನಮಗೆ ಈ ಜಗತ್ತು ಒಂದೇ.  ಇಲ್ಲಿನ ಗಾಳಿ, ನೀರು, ಬೆಳಕು ಒಂದೆ.  ನಾವು ಅನೇಕ ಸಲ ಮಸೀದಿಯ ಮಿನಾರುಗಳಲ್ಲಿ ಕುಳಿತು ಇಮಾಮನ ಕುರ್‌ಆನ್ ಉಕ್ತಿ ಕೇಳುತ್ತೇವೆ.  ಮತ್ತೆ ಕೆಲವು ಸಲ ಮಂದಿರದ ಗೋಪುರದ ಮೇಲೆ ಕುಳಿತು ವೇದ ಉಪನಿಷತ್ತುಗಳ ಸಾರ ಅರಿಯುತ್ತೇವೆ.  ಇನ್ನೊಮ್ಮೆ ಚರ್ಚಿನ ಗಂಟೆಯ ಬಳಿ ಕುಳಿತು ಫಾದರನ ಪ್ರೀತಿಯ ಸ್ತುತಿ ಆಲಿಸುತ್ತೇವೆ.  ದೇವರು ದಯಾಮಯ.  ನಮಗೆ ಅಂಥ ಭಾಗ್ಯವನ್ನು ಕರುಣಿಸಿದ್ದಾರೆ" ಎಂದು ಪುರ್‍ರನೆ ಆಕಾಶದತ್ತ ಪಾರಿವಾಳ ಹಾರಿ ಹೋದವು.

ಕಿಟಕಿಯ ಸರಳುಗಳ ಹಿಂದೆ ನಿಂತ ಮನಷ್ಯ ಮುಖ ತಗ್ಗಿಸಿದ್ದ.

                        *****

ಕೀಲಿಕರಣ: ಕಿಶೋರ್‍ ಚಂದ್ರ

ನರಿ ಸತ್ತು ಹೋಯ್ತು ಬೇಡಿ ಹುಲಿಯ ಬಣ್ಣಾ

- ಶಿಶುನಾಳ ಶರೀಫ್

ನರಿ ಸತ್ತು ಹೋಯ್ತು ಬೇಡಿ ಹುಲಿಯ ಬಣ್ಣಾ
ನೀರೊಳಗೆ ಕರಗಿ ಸುಟ್ಟು  ಹೋಯ್ತು  ಸುಣ್ಣಾ                                   ||ಪ||

ಸತ್ಯವಿದು ಮಿಥ್ಯವಲ್ಲ  ತಿಳಿಯೋ ಕಾಮಣ್ಣಾ                                    ||ಅ.ಪ||

ಹೊನ್ನು ಹೆಣ್ಣು ಮಣ್ಣು  ಈ ಮೂರು  ಸುಳ್ಳಣ್ಣಾ
ತಿಳಿದುನೋಡು  ಗುರುವು ಕೊಟ್ಟ  ಅವು ಮೂರು ಕಣ್ಣಾ                      ||೧||

ಕಳವ ಕಳಕೊಂಡೆಲ್ಲೊ  ಕಾಮಣ್ಣಾ
ನರಿ ಸತ್ತು ಹೋಯ್ತು ಬೇಡಿ ಹುಲಿಯ ಬಣ್ಣಾ                                   ||೨||

ನೀರೊಳಗಿ ಕರಗಿ ಸುಟ್ಟಂಗಾತೋ ಸುಣ್ಣಾ
ಶಿಶುನಾಳ ಶರೀಫಗೆ ಹಾಲು ಅನ್ನ ತಪ್ಪದೆ ಅರ್ಪಿಸುವೆ  ಮುಕ್ಕಣ್ಣಾ      ||೩||

        *****

ಕೀಲಿಕರಣ: ಎಮ್.ಎನ್.ಎಸ್.ರಾವ್

ಜಾತಿ ಮಾಡಬ್ಯಾಡಿರಿ ಅಧಿಕಾರದೊಳಗ

(ಬೀದಿ ನಾಟಕದ ಹಾಡು)
- ಡಾ || ರಾಜಪ್ಪ ದಳವಾಯಿ

ಜಡುಗುಡ್ಡಿ ಜಡ್ಡಿ ನಕ್ಕ
ನನ್ನ ನೋಡಿ ಚಂದ್ರ ನಕ್ಕ ||

"ಯಾಕಪ್ಪೋ" ಅಂದ್ರೆ
ಅಂದ "ಆದೆಲ್ಲೊ ಮೆಂಬ್ರು" ||

ಜಡುಗುಡ್ಡಿ ಜಡ್ಡಿ ನಕ್ಕ
ನನ್ನ ನೋಡಿ ಸೂರ್ಯ ನಕ್ಕ ||

"ಯಾಕಪ್ಪೊ" ಅಂದ್ರೆ
ಅಂದ "ಆದೆಲ್ಲೊ ಮೆಂಬ್ರು" ||

        *****

ಕೀಲಿಕರಣ: ಕಿಶೋರ್‍ ಚಂದ್ರ

ಕರುನಾಡು

- ರವಿ ಕೋಟಾರಗಸ್ತಿ

ಕನ್ನಡವೇ.. ನನ್ನ ಉಸಿರು
ಕನ್ನಡವೇ.. ನಮ್ಮ ಹಸಿರು

ಕನ್ನಡದಿ ನಾವುಗಳು
ಏಳ್ಗೆಯನು ಸಾಧಿಸಲು
ಜೀವನವು ಸಾರ್ಥಕವು

ಕನ್ನಡದ ಭೂಮಿಯಲಿ
ಅನ್ನ, ನೀರು, ಕನ್ನಡವಾಗಿಸಿ
ಬೆಳೆದು ಬಾಳುತಿರುವ ಕನ್ನಡಿಗರು

ಪ್ರಾಣವನು ನೀಡಿಯಾದರೂ
ಉಳಿಸಬೇಕು ಕನ್ನಡವಾ...
ಜೀವನ ತೊರೆದಾದರೂ
ಬೆಳೆಸಬೇಕು ಕನ್ನಡವ...

ಕನ್ನಡ ಮಂತ್ರವರಿಯದೇ
ನಾವಾಗಲಾರೆವು
ಕರುನಾಡಿನ ಕಲಿಗಳು...
ಉಳಿಸಲಾರೆವು ನಾಡು-ನುಡಿ ಸಂಸ್ಕೃತಿಯ
ಈ ಸತ್ಯ ಅರಿತಾಗಲೆ...
ಈ ನಾಡು ಕರುನಾಡು

         ***

ಕೀಲಿಕರಣ: ಕಿಶೋರ್‍ ಚಂದ್ರ