ಅರ್ಪಣ ಉಷೆಗೆ

ಯುಗಯುಗಗಳೇಕಾಂತ ಗೀತಹಾಡುತನಂತ
ನೋವಿನಲಿ ಕಾತರಿಸೆ ನನ್ನ ಉಷೆ ಬಂದೆ!
ನಿನ್ನ ಬೆಳಕಲಿ ನಿನಗೆ ನನ್ನೆದೆಯ ಕಿರುಹಣತೆ
ಅರ್ಪಿಸಿದೆ.  ನೀನೊಪ್ಪಿ ಒಲವ ಬಾಳಿಸಿದೆ!

ನಾನು ಕವಿ-ನೀ ಕಾವ್ಯ  ನಾ ಬರೆದ ಗೀತಗಳು
ನಿನ್ನ ಒಲವಿನ ನೂರು ಸೊಗಸು ನೆರಳು.
ನೀ ಬೆಳೆಸಿ ಬಾಳಿಟ್ಟ ನನ್ನ ಕಾವ್ಯದ ಬಳ್ಳಿ
ಹೂವಿಡುವ ಮುನ್ನವೇ ನೀ ಬಾಡಿಹೋದೆ!

ಅಂದು ನೀನಿದ್ದಾಗ ಈ ಕವಿತೆಗಳ ಮಾಲೆ
ಒಲವ ಮಂಗಳ ಸೂತ್ರ ನಿನ್ನ ಕೊರಳಲ್ಲಿ!
ಆ ಅಸೆ ಇಂದೆಲ್ಲಿ-ಇವು ನಿನ್ನ ನೆನಪಿನಲಿ
ಒಲವು ನೀಡುತಲಿರುವ ಭಾವದಶ್ರುಗಳು!
     *****
ಕೀಲಿಕರಣ: ಕಿಶೋರ್‍ ಚಂದ್ರ

0 ಕಾಮೆಂಟುಗಳು:

ಕಾಮೆಂಟ್‌‌ ಪೋಸ್ಟ್‌ ಮಾಡಿ