ಮುಳ್ಳು

- ನರಸಿಂಹಸ್ವಾಮಿ ಕೆ ಎಸ್

ತೋಟವಿದೆ ತನಗೆ, ಸುಖಿ ತಾನು, ಎಂದನು ಮಾಲಿ;
ಎಳನೀರು, ರಸಬಾಳೆ, ಕಸಿಮಾವು, ಚೆಂಜೇನು!
ಬೇಕು ಬಾಳಿಗೆ ಒಂದು ತೋಟ, ಏನೇ ಇರಲಿ !-
ಚಿಂತೆಯೂ ಒಂದಿದೆ : ಇವನು ಕಾಯುವುದೆಂತು?

ಬೇಲಿಯಿದೆ ಎಂದು ನಂಬಿದೆ ತೋಟ ; ಆ ಬೇಲಿ
ಮುಳ್ಳಿರುವ ತನಕ ಆತಂಕ ತನಗಿಲ್ಲೆಂದು
ನೆರೆ ನಂಬಿ ತಾನು ತುಂಬಿದ ಹೂವ ತೊಟ್ಟಿಹುದು.
ತೋಟಕ್ಕೆ ಮುಳ್ಳು ಕಾವಲು ಎಲ್ಲ ಕಾಲದಲಿ.
ಒಡೆಯನಿಗೆ ಹೇಳಿ ಬಾಗಿಲ ತೆರೆದು ಬರಬಹುದು ;
ಕದ್ದು ಬಂದವರಿಗಿಲ್ಲಿದೆ ಮದ್ದು ; ಮುಳ್ಳಿಹುದು.

ಕಾಯುತಿದೆ ಮುಳ್ಳು ತೋಟವನು. ಈ ಭೂಮಿಯನು
ಕಾಯುತಿದೆ ಒಂದು ಕಾಣದ ಮುಳ್ಳು. ಮುಳ್ಳೆಂದು
ಲಘುವಾಗಿ ನುಡಿದರಾಶಕ್ತಿಗೆಲ್ಲಿದೆ ಹಾನಿ?
ಲೋಕವನು ರಕ್ಷಿಸುವ ಮುಳ್ಳಲ್ಲ ನಿರಭಿಮಾನಿ!
     *****
ಕೀಲಿಕರಣ: ಎಮ್ ಎನ್ ಎಸ್ ರಾವ್

0 ಕಾಮೆಂಟುಗಳು:

ಕಾಮೆಂಟ್‌‌ ಪೋಸ್ಟ್‌ ಮಾಡಿ