ಗೆಳೆಯ

-ರವಿ ಕೋಟಾರಗಸ್ತಿ

ಮುಂಜಾವಿನಮಂಜಿನಂತೆ
ತುಂತುರ ಮಳೆ ಹನಿಯಂತೆ
ನೈದಿಲೆಯ ಚಲುವಿನಂತೆ
ಒಲವು ಸೂಸುತಾ ಮರೆಯಾದೆ

ಸ್ನೇಹ-ಪ್ರೀತಿಗಳ
ಸಂಗಮದ ಸಾಕಾರದಲಿ
ಫಲಾಪೇಕ್ಷ ಬಯಸದ
ನಿರ್‍ಮಲ ಸ್ನೇಹ ಸೇತುವೆ

ಬದುಕು-ಬವಣೆಗಳೆನ್ನದೆ
ಜನಸ್ಪಂದನೆಯಲಿ ಸಂತಸ ಕಾಣುತ
ನಂಬಿಗೆಯ ಬಂಧನದ
ಬಾಂಧವ್ಯದ ಕ್ಷೀರ... ಧಾರೆ...

ನಗುತ ಬೆರೆಯುತಲೆ
ಜತೆ ಜತೆ ಸಾಗುತ..
ಸಂತಸದ ಸಂಭ್ರಮದಿ
ಮರೆಯಾದ ಕಾಣದ ಸೆಳೆತಕೆ

ಹಲವು ಹತ್ತು ಕನಸುಗಳ
 ಕನ್ನಡ ಮರಾಠಿಗರ ಮನಗೆದ್ದ
ಗರಿ ಮುಡಿಸುವ ಗೆಳೆತನದ
ಸುಧಾಮ-ಸಂಕಷ್ಟದ... ಚಾಣಕ್ಯ

ಪಂಚಭೂತದಲಿ ಲೀನವಾಗಿ
ಬದುಕು ಭವ ಗೆದ್ದವ
ಅಮರ ಸಂಜೀವಿನಿಯಾದೆ
ಸದಾ ಸ್ನೇಹದ ಸಾಕಾರದಲಿ

ಉದಯಿಸುವ ರವಿಯಾಗಿ
ಬಾಳಿದ ಕೊನೆಗಳಿಗೆ ತನಕ
ಕತ್ತಲೆದೂಡುತ ಬೆಳಗುತಲೆ
ಮರಳದ ನಾಡಿಗೆ ನಡೆದೆ

ಸುಳಿದಾಡುತ ನೆನಪು
ಅಗಲಿಕೆಯ ನೋವಲಿ
ಅಂತರಾಳದ ಆತ್ಮೀಯತೆಗೆ
ಇರಿಯುತ ಕೆದುಕುತಿಹದು

         *****

ಕೀಲಿಕರಣ: ಕಿಶೋರ್‍ ಚಂದ್ರ

0 ಕಾಮೆಂಟುಗಳು:

ಕಾಮೆಂಟ್‌‌ ಪೋಸ್ಟ್‌ ಮಾಡಿ