ರೈತಹತ್ಯಾ

(ಬೀದಿ ನಾಟಕದ ಹಾಡು)
- ಡಾ || ರಾಜಪ್ಪ ದಳವಾಯಿ

ಹಾಡು - ೧

ಎಲ್ಲಿಹುದೊ ಬಾಳ ಬೆಳಕು
ಅದೆಲ್ಲಿಹುದೊ ಜೀವ ತಳುಕು ||

ಜೀವ ಜಲ ಹನಿಹನಿ ರಾಶಿ
ಸುರಿಯೆ ಧಾರೆ ಹಸಿರು ಕಾಣಿ
ಹೂವರಳಿಸಿ ನಗು ಮಿಂಚಿಸಿ
ಜೀವಕೆಲ್ಲ ಚೇತನವ ಪೂಸಿ ||

ಮುಗಿಲಾಗಿರೆ ಬಟ ಬಯಲು
ನೆಲವೆಲ್ಲ ದ್ವೇಷಾಗ್ನಿ ಬುಗಿಲು
ಎಲ್ಲಿ ನಮ್ಮ ಬೆಳ್ಳಿ ಬೆಳಕು
ಅದೆಲ್ಲಿಹುದೊ ಜೀವ ತಳುಕು ||

ಹಾಡು - ೨

ಯಾರು ಕಾಯುವರಣ್ಣ
ರೈತಾಪಿ ಜನರನ್ನ ||

ತೆಂಗೀಗೆ ಜಂಗಲು ಹಿಡಿದು
ಜುಂಗು ಹತ್ತಿತು ಬದುಕು
ಮಳೆಯಿಲ್ಲ ಬೆಳೆಯಿಲ್ಲ
ದನ ಕರುಗೆ ಮೇವಿಲ್ಲ ||

ಕಣಜದೋರಿಗೆ ಕರುಣೆಯಿಲ್ಲ
ಜಣ್‌ಜಣ್ ಹಣ ಕಾಣಲಿಲ್ಲ
ಕೀಟ ಕಳೆಯ ಔಸದೀಯ
ಭಾಗ್ಯವಲ್ಲ ನಾವೆ ಕುಡಿಯೊ ||

ಹಾಡು - ೩

ದುಡ್ಡು ಕೊಡ್ತಾರೆ ಇವರು
ಜಪ್ತಿ ಮಾಡ್ತಾರೆ ||

ಸಾಲ ಮಾಡಿ ಅಂತಾರೆ
ಸಬ್ಸಿಡಿ ಮಾತ ಹೇಳ್ತಾರೆ
ಸಾಲದ ಶೂಲಕೆ ಹಾಕುತ್ತ
ನಮ್ ಗೋಣು ಮುರಿತಾರೆ ||

ಸಾಲ ಎಣಿಸಿ ಕೊಡುತಾರೆ
ಮೇಲೆ ಬಡ್ಡಿ ಹಾಕ್ತಾರೆ
ಸರ್ವಿಸ್ ಪರ್ವಿಸ್ ಚಾರ್ಜು
ಅಂತ ಟಾರ್ಚರ್‍ ಮಾಡ್ತಾರೆ ||

ಹಾಡು - ೪

ಮಾರುವಾಡಿ ಮುಂದೆ ಬಂದ
ಅಡಮಾನವೆಲ್ಲ ಹರಾಜು ಎಂದ ||

ಬೆಳ್ಳಿ ಬಂಗಾರದ ಅಂಗಡಿ
ಕಾಲೂರಲು ಜಾಗ ಒಂದಡಿ
ಬೆಳೆದ ವಾಮನ ತ್ರಿವಿಕ್ರಮ
ಹಿಡಿಯೋರ್‍ಯಾರವನ ಕ್ರಮ ||

ಬಡ್ಡಿ ಬಡ್ಡಿ ಚಕ್ರ ಬಡ್ಡಿ
ಹೊಟ್ಟೆ ಬೆಳೆದಂತೆ ಅಡ್ಡಾದಿಡ್ಡಿ
ತಕಡಿಗಾಕಿದರೆ ಬಂಗಾರ
ಬಂದಿತಲ್ಲಾ ಸಂಚಕಾರ ||

ಹಾಡು - ೫

ಜಮೀನುದಾರ ಮುರುದಾರ
ಬಡವರ ಭೂಮಿ ಬಕಾಸುರ ||

ಬಡತನ ಭಂಗದ ಪಿತಾಮಹ
ಜೀತ ಬೆವರಿನ ರಣಪಂತ
ಹಸಿಮಾಂಸದ ನರಭಕ್ಷಕ
ಮಾಡೋರ್‍ಯಾರಿವಗೆ ಶಿಕ್ಷಾ ||

ಮೂರಕೆ ಆರು ಲೆಕ್ಕ ಬರೆದು
ಸಾಲಕೆ ಕಟ್ಟಿನ ಗೆರೆಯ ಕೊರೆದು
ಬಿಡದೆ ಮಾಡುವ ವಸೂಲಿಕೋರ
ಊರ ಜುಟ್ಟಿನ ಸೂತ್ರಧಾರ ||

ಹಾಡು - ೬

ಹರಿದೀತು ಕಣ್ಣಗಂಗೆ
ಗಂಗಮ್ಮ ತಾಯಾಗೆ
ಒಡ್ಡು ಕಟ್ಟುವರ್‍ಯಾರು
ಬೋಯಿಗಳು || ಅಣ್ಣಾ ||

ಮುದ್ದೆ ಕೂಡಿಸಲಿಕ್ಕೆ
ಹಿಟ್ಟಿಲ್ಲ ಸೊಪ್ಪಿಲ್ಲ
ಹಿಡಿ ಹಿಟ್ಟು ಆಯಿತೊ
ಹಂಬಲಿಯು || ಅಣ್ಣಾ ||

ತಿನ್ನಲಾರೆವು ಎಂದು
ಅನ್ನ ಚೆಲ್ಲುವ ಮಂದಿ
ಕೊಡಿರಯ್ಯೊ ಹಿಡಿಗೂಳು
ನಿಮ್ಮ ಧರ್ಮ || ಅಣ್ಣಾ ||

ಹಾಡು - ೭

ಕೊಳ್ಳುವಿರಾ ಅಣ್ಣಾ ಕೊಳ್ಳುವಿರಾ
ಜೀವಗಳು ಬಿಕರಿಗಿವೆ ಕೊಳ್ಳುವಿರಾ ||

ಜೀವಾವ ಕೊಂಡು ದುಡ್ಡಾ ಕೊಟ್ಟಾರೆ
ಅದೆ ನಮ್ಮ ಮನೆ ಮಂದಿ ಹೊಟ್ಟಹೊರೆ
ಜೀವ ಉಳಿಸಲು ಜೀವ ಮಾರಾಟವೆ
ಜೀವ ಕೊಂಡು ಜೀವ ಉಳಿಸಿರಣ್ಣಾ ||

ನಮ್ಮ ಹಸಿವು ದುಃಖ ನಿಮ್ಮದಾಗಲಿಲ್ಲ
ಕನಸ ಕೊಂಡು ಮಹಲಲಿ ಕುಣಿದಿರಲ್ಲ
ಹೊಟ್ಟೆ ಕೇಳಲಿಲ್ಲ ಸುಮ್ಮನಿರಲಾಗಿಲಿಲ್ಲ
ಉರಿಬೆಂದು ಬೂದಿ ಆದೆವಲ್ಲ ||

ಹಾಡು - ೮

ಸಹಾಯವ ಮಾಡೀರಣ್ಣ
ನಾವು ಸಾಯಬೇಕ್ರಣ್ಣ ||

ಇದ್ದು ನಾವು ಬದುಕಲಾರೆವು
ನಿಮಗೆ ಏನೂ ಮಾಡಲಾರೆವು
ಬದುಕಿಗಂತೂ ಏನೂ ಇಲ್ಲ
ಸಾವಿಗಾದ್ರೂ ಕೊಡ್ರಿ ಬೆಲ್ಲ ||

ನಮ್ಮ ಸಾವಿಗೆ ನೀವೇ ಸಾಕ್ಷಿ
ಅದುವೆ ಸದ್ಯ ನಮಗೆ ಮೋಕ್ಷ
ಮನಕರಗದವರ ನಡುವೆ
ಸಾವೆ ಪರಮ ಒಡವೆ ||


        *****

ಕೀಲಿಕರಣ: ಕಿಶೋರ್‍ ಚಂದ್ರ

0 ಕಾಮೆಂಟುಗಳು:

ಕಾಮೆಂಟ್‌‌ ಪೋಸ್ಟ್‌ ಮಾಡಿ