ಓದುಗರಿಗಾಗಿ ಕಾಯುತ್ತಿರುವ ಕನ್ನಡ ಪುಸ್ತಕಗಳು

-ಕಿಶೋರ್‍ ಚಂದ್ರ

ಹೈದರಬಾದಿನ ಹೃದಯ ಭಾಗದಲ್ಲಿರುವ ಅಫ್ಜಲ್ ಗಂಜ್‌ನ ಬಳಿಯಿರುವ ಆಸ್ಫಿಯ ಸರ್ಕಾರಿ ಕೇಂದ್ರ ಗ್ರಂಥಾಲಯದಲ್ಲಿ ೧೫೦೦೦ ಸಾವಿರ ಕನ್ನಡ ಪುಸ್ತಕಗಳಿದ್ದು ಓದುಗರಿಲ್ಲದೆ ಧೂಳು ಹಿಡಿದಿದೆ.  ಗ್ರಂಥಪಾಲಕರು ಹೇಳುವ ಪ್ರಕಾರ ಮೂರು ನಾಲ್ಕು ವರ್ಷಗಳಿಂದ ಯಾರೊಬ್ಬರೂ ಕನ್ನಡ ಪುಸ್ತಕಗಳನ್ನು ಓದಲು ಬಂದಿಲ್ಲ.  ಆದ ಕಾರಣ ಕನ್ನಡ ವಿಭಾಗ ಒಂದು ಕಸದ ತೊಟ್ಟಿಯಂತಾಗಿದೆ.  ಕನ್ನಡ ವಿಭಾಗವನ್ನು ಹಳೆಯ ವೃತ್ತಪತ್ರಿಕೆಗಳನ್ನು ಇಡಲು ಬಳಸಲಾಗುತ್ತಿದ್ದು ಯಾರೊಬ್ಬರೂ ಈ ಕೋಣೆಯ ಬಳಿ ಸುಳಿಯಲಾರರು.

ಆಸ್ಫಿಯ ಗ್ರಂಥಾಲಯ ನಿಜಾಮರು ಕಟ್ಟಿದ ಒಂದು ಭವ್ಯ ಗ್ರಂಥಾಲಯ ಕಟ್ಟಡ.  ಅದರಲ್ಲಿ ತೆಲುಗು ವಿಭಾಗ ಮತ್ತು ಆಂಗ್ಲ ವಿಭಾಗಗಳು ಸ್ವಚ್ಫವಾಗಿಯೇ ಇವೆ.   ಆದರೆ ಓದುಗರ ಕೊರತೆಯಿಂದಾಗಿ ಕನ್ನಡ ವಿಭಾಗವು ಆಪ್ತಮಿತ್ರ ಚಿತ್ರದಲ್ಲಿನ ಹಳೆಯ ಕೋಣೆಯಂತೆ ಕಂಡುಬರುತ್ತಿದೆ.  ಕನ್ನಡ ವಿಭಾಗದಲ್ಲಿ ಮೈಸೂರು, ಧಾರವಾಡ - ವಿಶ್ವವಿದ್ಯಾಲಯಗಳು ಪ್ರಕಟಿಸಿದ ಪುಸ್ತಕಗಳು, ಕನ್ನಡ-ಆಂಗ್ಲ ನಿಘಂಟುಗಳು, ಸಣ್ಣಕಥೆ, ಕಾದಂಬರಿ ಪುಸ್ತಕಗಳು ಲಭ್ಯ. 

ಕನ್ನಡ ಪುಸ್ತಕಗಳನ್ನು ಹೈದರಾಬಾದಿನ ನಿಜಾಮರ ಕಾಲದಲ್ಲಿನ ಮುದ್ರಣಾಲಯಗಳಲ್ಲಿ ಮುದ್ರಿಸಲಾಗುತ್ತಿತ್ತು, ಆ ಪುಸ್ತಕಗಳೂ ಇಲ್ಲಿ ಲಭ್ಯ.  ಇಲ್ಲಿ ಅಪರೂಪದ "ಹೈದರಾಬಾದ ಸಮಾಚಾರ" ೧೯೪೧-೪೨ ರಲ್ಲಿ ಪ್ರಕಟಗೊಂಡ ಕನ್ನಡ ಪತ್ರಿಕೆಯ ಪ್ರತಿಯೂ ಲಭ್ಯ.

ಈ ಗ್ರಂಥಾಲಯದಲ್ಲಿ ಪುಸ್ತಕಗಳನ್ನು ಎರವಲು ನೀಡುತ್ತಾರೆ.  ನೂರಾಐವತ್ತು ರೂಪಾಯಿ ನೀಡಿ ಸದಸ್ಯರಾಗಿ ಮುಂದಿನ ವರ್ಷದಿಂದ ಐವತ್ತು ರೂಪಾಯಿ ನವೀಕರಣ ಹಣ ನೀಡಬೇಕಾಗುತ್ತದೆ.  ಒಮ್ಮೆ ಎರಡು ಪುಸ್ತಕಗಳನ್ನು ಮಾತ್ರ ನೀಡಲಾಗುವುದು.  ಒಂದು ಪುಸ್ತಕದ ಬೆಲೆ ನೂರಾಐವತ್ತು ರೂಪಾಯಿಗಿಂತ ಹೆಚ್ಚಾದಲ್ಲಿ ಒಂದೇ ಪುಸ್ತಕವನ್ನು ವಿತರಿಸಲಾಗುವುದು.  ಪ್ರತಿ ಪುಸ್ತಕವನ್ನು ಹದಿನೈದು ದಿನಗಳವರೆಗೆ ಓದಲು ನೀಡಲಾಗುವುದು.  ನಂತರ ಮತ್ತೆ ನವೀಕರಿಸಬೇಕು.  ನವೀಕರಣ ತಡವಾದಲ್ಲಿ ದಿನಕ್ಕೆ ಪ್ರತಿ ಪುಸ್ತಕಕ್ಕೆ ೨೫ ಪೈಸೆ ದಂಡ ನೀಡಬೇಕಾಗುವುದು.

ಮಹಾತ್ಮಗಾಂಧಿ ಅಂತರರಾಜ್ಯ ಬಸ್ಸುನಿಲ್ದಾಣದ ಬಳಿ ಮೂಸಿ ನದಿಯ ದಂಡೆಯ ಮೇಲಿರುವ ಈ ಗ್ರಂಥಾಲಯದ ಬಳಿ ಹಲವಾರು ಕರ್ನಾಟಕ ಸಾರಿಗೆಯ ಬಸ್ಸುಗಳು ದಿನಂಪ್ರತಿ ಕನ್ನಡಿಗರನ್ನು ಹೈದರಾಬಾದಿಗೆ ತಲುಪಿಸುತ್ತಿದ್ದರೂ ಹೈದರಾಬಾದಿನ ಕನ್ನಡಿಗರು ಇತ್ತ ಮುಖಮಾಡದಿರುವುದು ಅರಿವಿನ ಕೊರತೆಯಿಂದಲೋ ಆಲಸ್ಯದಿಂದಲೋ ತಿಳಿಯದು.
     *****

0 ಕಾಮೆಂಟುಗಳು:

ಕಾಮೆಂಟ್‌‌ ಪೋಸ್ಟ್‌ ಮಾಡಿ