ಕಂದರಗಳು ತೆರೆದಿವೆ!



ಚಿತ್ರ: ಪ್ರಮೋದ್ ಪಿ ಟಿ
- ರೂಪಾ ಹಾಸನ

ಪ್ರಿಯ ಸಖಿ,
ಇತ್ತೀಚಿನ ಮಾಧ್ಯಮಗಳು ಎಷ್ಟು ಶಕ್ತಿಯುತವಾಗಿವೆಯೆಂದರೆ ಅವು ಪ್ರಪಂಚವನ್ನು ಹತ್ತಿರವಾಗಿಸಿವೆ ಎನ್ನುತ್ತಾರೆ. ಇದು ವ್ಯವಹಾರದ ಮಾತಾಯ್ತು. ಆದರೆ ಮಾನವನ ಮನಸ್ಸು? ಮನಸ್ಸುಗಳು ಹತ್ತಿರವಾಗಿವೆಯೆ ? ಕವಿ ಜಿ. ಎಸ್. ಶಿವರುದ್ರಪ್ಪನವರು ವಿಷಾದದಿಂದ ಹೀಗೆ ಹೇಳುತ್ತಾರೆ.
          ಎದೆ ಎದೆಗಳ
         ನಡುವೆ ಇರುವ
    ಸೇತುವೆಗಳು ಮುರಿದಿವೆ
  ಭಯ, ಸಂಶಯ, ತಲ್ಲಣಗಳ
       ಕಂದರಗಳು ತೆರೆದಿವೆ!

ಹೌದಲ್ಲವೇ ಸಖೀ ಇತ್ತೀಚೆಗೆ ಎಲ್ಲಾ ಸಂಬಂಧಗಳಲ್ಲೂ ಎಂತದೋ ಒಂದು ನಾಟಕೀಯತೆಯನ್ನು ಕಾಣುತ್ತಿದ್ದೇವೆ. ಇದು ಭಾವಪೂರ್ಣ, ಹೃದಯದಾಳದಿಂದ
ಬಂದ ಸಂವೇದನೆ ಎನ್ನಿಸುವುದೇ ಇಲ್ಲ. ಎಲ್ಲದರಲ್ಲಿಯೂ ಕೃತ್ರಿಮತೆ, ತೋರಿಕೆಯ ಆತ್ಮೀಯತೆ ಎದ್ದುಕಾಣುತ್ತದೆ. ಮನಸ್ಸು ಗೊಂದಲದಲ್ಲಿ ಸಿಲುಕಿ ಎಷ್ಟು
ಭಯಭೀತಗೊಂಡಿದೆಯೆಂದರೆ ಅದರಲ್ಲಿ ಸದಾ ಸಂಶಯ, ತಲ್ಲಣಗಳು ಧವಧವಿಸುತ್ತಿರುತ್ತವೆ. ಯಾರಮೇಲೆಯೂ ನಂಬಿಕೆ ಇಲ್ಲ. ಸ್ವತಹ ತನ್ನ ಮೇಲೂ ನ೦ಬಿಕೆ ಇಲ್ಲ. ಕವನವನ್ನು ಮು೦ದುವರೆಸುತ್ತಾ ಕವಿ
       ಮುಖ ಮುಖವೂ
        ಮುಖವಾಡವ
     ತೊಟ್ಟುನಿಂತ ಹಾಗಿವೆ
   ಆಡುತಿರುವ ಮಾತಿನೊಳಗೆ
     ಹೃದಯ ಕಾಣದಾಗಿದೆ !

ಎನ್ನುತ್ತಾರೆ, ಇದೆಲ್ಲಾ ಪ್ರಾರಂಭವಾದದ್ದಾದರೂ ಎಲ್ಲಿಂದಾ ? ಮನಸ್ಸುಗಳ ಮಧ್ಯೆ ಮುರಿದು ಬಿದ್ದಿರುವ ಸೇತುವೆಗಳನ್ನು ಇನ್ನಾದರೂ ಸರಿಪಡಿಸಬೇಕಲ್ಲವೇ ಸಖಿ ? ವ್ಯಕ್ತಿ - ವ್ಯಕ್ತಿಯ ನಡುವಿನ ನಂಬಿಕೆಗಳು ಉಳಿಯಬೇಕಾದರೆ, ಉಳಿದು ಬೆಳೆಯಬೇಕಾದರೆ ವ್ಯಕ್ತಿ ಮೊದಲು ಪ್ರಾಮಾಣಿಕನಾಗಬೇಕು. ಅವನು ತೊಟ್ಟ ಎಲ್ಲ ಮುಖವಾಡಗಳನ್ನೂ ಕಿತ್ತೂಗೆದು, ನಿಜದ ಮುಖದೊಂದಿಗೆ ಮುಖಾಮುಖಿ ನಿಲ್ಲಬೇಕು. ಗೆಲ್ಲಬೇಕು. ಆಗಲೇ ಇತರರ ಮೇಲೆಯೂ ನಂಬಿಕೆ ಮೂಡೀತು! ಸೇತುವೆಗಳು ಎದ್ದೀತು! ಅಲ್ಲವೇ ಸಖಿ?
     *****
ಕೀಲಿಕರಣ: ಎಮ್ ಎನ್ ಎಸ್ ರಾವ್

0 ಕಾಮೆಂಟುಗಳು:

ಕಾಮೆಂಟ್‌‌ ಪೋಸ್ಟ್‌ ಮಾಡಿ