ಉಭಯ ಸಂಕಟ

ಚಿತ್ರ: ಪ್ರಮೋದ್ ಪಿ ಟಿ
- ರೂಪಾ ಹಾಸನ

ಪ್ರಿಯ ಸಖಿ,

ಹೇಳಿದರೆ ಹಾಳಾಗುವುದೋ ಈ ಅನುಭವದ ಸವಿಯು
ಹೇಳದಿರೆ ತಾಳಲಾರನೋ ಕವಿಯು!

ಕುವೆಂಪು ಅವರು ‘ಉಭಯ ಸಂಕಟ’ ಕವನದ ಈ ಸಾಲುಗಳು ಎಷ್ಟೊಂದು ಮಾರ್ಮಿಕ ವಾಗಿವೆಯಲ್ಲವೇ?’

ಎದೆಯೊಳಗೆ ಅವ್ಯಕ್ತವಾಗಿರುವ ಭಾವಗಳು ತಕ್ಕ ಮೂರ್ತರೂಪ ಪಡೆಯುವುದು ಎಂತಾ ಕಷ್ಟದ ಕೆಲಸ! ಆ ಕಷ್ಟ ಕವಿಯೊಬ್ಬಗೇ ಗೊತ್ತು! ಅನುಭವದ ಸವಿಯನ್ನು ಎಂತಾ ತಕ್ಕ ಪದಗಳಿಂದಲೂ ವರ್ಣಿಸಲು ಅಸಾಧ್ಯ. ಇದು ಭಾಷೆಯ ಸೋಲೋ? ಕವಿಯ ಸೋಲೋ? ಯಾವುದೇ ವ್ಯಕ್ತ ಭಾವಗಳೂ ಅವು ಅವ್ಯಕ್ತವಾಗಿದ್ದಾಗಲೆ ಸುಂದರವಾಗಿತ್ತು ಎನ್ನಿಸಿದರೆ ಅಂದೊಂದು ಸೋಲೇ ತಾನೇ? ಬಹುಶಃ ಕವಿಯೊಬ್ಬನ ಮಿತಿಯೂ ಇದೇ ಏನೋ?

ಆದರೆ ಹೇಳದಿದ್ದರೆ ತಾಳಲಾಗುವುದೂ ಇಲ್ಲವೆಂಬ ತುಡಿತ ಕವಿಗೆ ಮೂಡಿದಾಗ ಆತ ಏನು ಮಾಡಬೇಕು ? ಎದೆಯೊಳಗಿಂದಾ ಭಾವಗಳು ಒತ್ತಿ ಬಂದಾಗ ಆತ ಬರೆಯದೆಯೂ ಉಳಿಯಲಾರ! ಸಮರ್ಥ ಕವಿಯೊಬ್ಬ ತನ್ನ ಅಮೂರ್ತ ಭಾವಗಳಿಗೆ ತನ್ನ ಮಿತಿಯಲ್ಲೆ ಸಮರ್ಥ ಮೂರ್ತರೂಪ ಕೊಡಬಲ್ಲನಲ್ಲವೇ?

ಆದರೆ ಇಂಥಾ ಯಾವ ಒತ್ತಡಗಳೂ ಇಲ್ಲದೇ ಬಲವಂತವಾಗಿ ಹುಟ್ಟಿಸಿದ ಕವನ, ಕಷ್ಟಪಟ್ಟು ಪದ ಪದಗಳನ್ನು ಜೋಡಿಸಿ ಮಾಡಿದ ಜಾಳು ಪದ್ಯ. ಇತ್ತ ಭಾವಗಳ ಸಮರ್ಥ ಅಭಿವ್ಯಕ್ತಿಯೂ ಆಗುವುದಿಲ್ಲ. ಅತ್ತ ಸುಂದರ ಕವನ ಎನ್ನಿಸಿಕೊಳ್ಳುವುದೂ ಇಲ್ಲ.

ಹೇಳಿಬಿಟ್ಟಿರೆ ಅನುಭವದ ಸವಿ ಹಾಳಾಗಿ ಬಿಟ್ಟೀತೆಂಬ ಚಡಪಡಿಕೆ ಹೇಳದೇ ಉಳಿದರೆ ತಾಳಲಾಗದಂತಹ ಒತ್ತಡ, ಇಂತಹ ಉಭಯಸಂಕಟದ ಮೂಸೆಯಲ್ಲಿ ಪ್ರತಿಯೊಬ್ಬ ಕವಿಯೂ ಹದವಾಗಿ ಬೇಯಬೇಕು. ಆಗಲೇ ಉತ್ತಮ ಕವನ, ಸಮರ್ಥ ಅಭಿವ್ಯಕ್ತಿ ಹೊರಬೀಳಬಹುದಲ್ಲವೇ? ನೀನೇನನ್ನುತ್ತೀ ಸಖಿ?
     *****
ಕೀಲಿಕರಣ: ಎಮ್ ಎನ್ ಎಸ್ ರಾವ್

0 ಕಾಮೆಂಟುಗಳು:

ಕಾಮೆಂಟ್‌‌ ಪೋಸ್ಟ್‌ ಮಾಡಿ