ಚೈತ್ರ

- ಡಾ || ಲತಾ ಗುತ್ತಿ

ಯಾವ ಋತು, ಮಾಸ ಪಕ್ಷಗಳಿಲ್ಲ ಇಲ್ಲಿ
ಆಷಾಡದ ಮಳೆ ನೋಡುವ
ಶ್ರಾವಣ ಭಕ್ತರೊಳಗೊಂದಾಗುವ
ಚೈತ್ರ ವಸಂತದೊಳಗೆ ಚಿಗುರುವಾಸೆ.
ಶ್ರಾವಣದ ಜೋಕಾಲಿಗೆ ನಿಟ್ಟುಸಿರಿಡುತ್ತೇನೆ.....
ಹಳ್ಳ ಹೊಳೆ ಕೊಳ್ಳ ನೆನಪಾದಾಗೆಲ್ಲ
ನಾನೇ ತೇಲಿಬಿಡಲೇನೋ ಎಂದು
ಚಡಪಡಿಸುತ್ತೇನೆ.
ಈ ಉರಿಬಸಿಲಿನ ಮರುಭೂಮಿಯಲ್ಲೂ
ನನ್ನ ನಾಡು ಹಸಿರು ಹೊಲಗದ್ದೆ,
ಹೂವುಗಳ ಮಂದಾರ ನೆನಪಿಸಿಕೊಂಡಾಗೆಲ್ಲ
ಚೈತನ್ಯ ಮೂಡಿ ಚೈತ್ರವಾಗುತ್ತೇನೆ
ನೆನಪುಗಳು ಬಸಿರಾಗುತ್ತವೆ
ವೇದನೆಗೆ ಸಿಕ್ಕು ಕವನಗಳು ಕುದಿಯುತ್ತವೆ.
ಆಷಾಢದ ಮುಸಲಧಾರೆಯಂತೆ
ಕವನಗಳು ಪ್ರಸವಿಸುವಾಗ
ನಾನು ವಸಂತಿಸುತ್ತೇನೆ
     *****
ಕೀಲಿಕರಣ: ಎಮ್ ಎನ್ ಎಸ್ ರಾವ್

0 ಕಾಮೆಂಟುಗಳು:

ಕಾಮೆಂಟ್‌‌ ಪೋಸ್ಟ್‌ ಮಾಡಿ