ಕಂಗಳಿಂದಲಿ ನಿನ್ನ ನೆನಪ ದೂಡುವುದೆಂತು?

- ಅನಂತರನಾರಾಯಣ ಎಸ್

ಕಂಗಳಿಂದಲಿ ನಿನ್ನ ನೆನಪದೂಡುವುದೆಂತು?
ಬೇಡಬೇಡಂದರೂ, ಅಲೆಮೇಲೆ ಅಲೆ ಬಂದು
ದಡವನೆಡೆಬಿಡದೆಯೇ ಮುತ್ತಿ ಮುತ್ತಿಕ್ಕುವೊಲು
ಕಳೆದ ಕಾಲದಲಳಿದ ಕನಸುಗಳು ಹೊರಬಂದು
ದುಗುಡ ಹರಡುತಲಿಹವು.  ದಡದ ಮೇಲಿನ ಮರಳು
ಹನಿನೀರಿಗಾಗೊರಲಿ ಕೊರಗಿ ಬಿಸಿಯಾಗುವೊಲು
ಹೃದಯ ಹಸಿದಿದೆಯಿಂದು ಒಲವಿಗಾಗರಸುತಲಿ,
ಬಾರೆಂದು ಕರೆಯುತಿದೆ ನಿನಗಾಗಿ ಕಾತರದಿ!

ಹೊಸನೆಲೆಗಳರಸುತಲಿ ಹಳೆಯ ಪಳಕೆಯ ಹರಿದು,
ಒಂದು ಚಣ ಒಂದೆಡೆಗೆ ನಿಲ್ಲದೆಯೆ ಜಾರುತಿಹ
ಮುಗಿಲಮೋಡದ ರೀತಿ ಮೆಲ್ಲಮೆಲ್ಲನೆ ಸರಿದು
ನುಸುಳಿದಳು ನನ್ನಿಂದ-ಅರಸುತ್ತ ಹೊಸಜನರ!
ಹೃದಯಶಾಂತಿಯೆ ಆಕೆ ಎನುವ ಭ್ರಾಂತಿಯಲಾನು
ಹೆಣ್ಣಹುಡುಕುತ ಹೋಗಿ ಮುಳ್ಳ ಮುತ್ತಿಕ್ಕಿದೆನು!
     *****
ಕೀಲಿಕರಣ: ಕಿಶೋರ್‍ ಚಂದ್ರ

0 ಕಾಮೆಂಟುಗಳು:

ಕಾಮೆಂಟ್‌‌ ಪೋಸ್ಟ್‌ ಮಾಡಿ