ಸ್ವತಂತ್ರ ಭಾರತ

- ವಿದ್ವಾನ್ ಐ ಮಾ ಮುತ್ತಣ್ಣ

(ಆಗಸ್ಟ್ ೧೫-೧೯೪೭)
ಭಾರತೀ ಸತೀಯ ಗೆಲವು ಮಂದಹಾಸ ನೋಡೊ!  ||ಪಲ್ಲ||

ತ್ರಿವರ್ಣದಾ ಧ್ವಜವ ಬೀಸಿ ಶೂರಕುವರಿ ಏರಿ
ಬಂದಳದೋ ಪಾರತಂತ್ರ್‍ಯಪಾಶ ಮುರಿದು ನಾರೀ!  ||ಅ.ಪ||

ನೊಂದಮೊಗವು ಅಂದಸೊಗವು ಎಲ್ಲ ಮ್ಲಾನವಾಗಿದೆ,
ನೂರುವೆರಡು ವರುಷವೆಲ್ಲ ದಾಸ್ಯತನದೊಳಡಗಿರೆ;
ತನ್ನ ತಾನು ಮರೆತು ಜೊಳ್ಳು ಪುತ್ರರನ್ನು ನಂಬಿರೆ,
ಆತ್ಮಖ್ಯಾತಿ ಘನತೆಗಳನು ಕಳೆದು ತಾಯಿ ನೊಂದಳೊ!  ||ಭಾ||

ಬಡತನದಿ ಬೇನೆಯಿಂದ ಬೆಂದು ಬಳಲಿ ಬಾಡಿತು
ದೇಶದಲ್ಲಿ ಶಾಂತಿ ಕಾಂತಿ ಕಳೆದು ಭ್ರಾಂತಿ ತುಂಬಿತು,
ಹಿಂದೂದೇಶ ಕರ್ಮಭೂಮಿ ಧರ್ಮಕ್ಷೇತ್ರ ಖ್ಯಾತಿಯು
ಶೂರ ಆರ್ಯಜನರ ಸ್ಥೈರ್ಯ ಶೂನ್ಯವಾಗಿ ಪೋದುವೊ!  ||ಭಾ||

ಒಲಿದು ನಲಿದು ಮುಗುಳು ನಗೆಯ ತೋರಿ ಹಾಡಿ ಬರುವಳು
ಹೂವ ಮುಡಿದು ತಿಲಕ ಹಚ್ಚಿ ಧ್ವಜವ ಹಾರ್‍ಸಿ ಮೆರೆವಳು,
ಕಾಲಗೆಜ್ಜೆ ಝಣಽ ಝಣರೆಂದೆನಿಸಿ ಕುಣಿದು ಕರೆವಳು
ನಲಿದಳೀ ನಲ್ವತ್ತು ಕೋಟಿ ಕುರವರರೊಡನೆ ಹರುಷದಿ!  ||ಭಾ||

ಅಹೋ ಏನು ಧಣಿದರವಳ ವೀರ ತ್ಯಾಗಿ ಪುತ್ರರು,
ದೇಶಬಂಧು ಲೋಕಮಾನ್ಯ ಮೋತಿಲಾಲ ಶಿಷ್ಟರು;
ಆ ನೇತಾಜಿ ನೆಹುರು ವಲ್ಲಭಾದಿ ಗೋಕಲೇಯರು,
ದಣಿದು ಕಾದು ಸತ್ತ ಹಿರಿಯ ಕಿರಿಯ ಹಲವು ವೀರರು!  ||ಭಾ||

ರಕ್ತ ಹರಿಸಿ ತನುವ ಸವೆಸಿ ಧಣಿದರಲವು ಜನಗಳು
ಏಸು ಕಾಲ ಪಾರತಂತ್ರ್‍ಯದಿಂದ ಇರ್ದ ದೇಶದೊಳ್;
ಶೂರಗಾಂಧಿ ರಾಜಋಷಿಯು ಬಡವಗೊಲಿದ ದೇವನು
ಸತ್ಯಾಗ್ರಹಾದಾಯುಧವೇ ದೇಶ ವಿಜಯಕಾಯ್ದನು!  ||ಭಾ||

ಬಂದಳದೋ ವಿಜಯಭೇರಿಯನ್ನು ಮೊಳಗಿ ಮಾನಸಿ,
ಗಳಿಸಿದೊಂದು ಕೀರ್ತಿಯನ್ನು ಕಂದರೊಳಗೆ ಹಬ್ಬಿಸಿ;
ಧರೆಯ ರಾಷ್ಟ್ರಗಳಲಿ ನಮ್ಮ ಪ್ರಭೆಯು ಇನ್ನು ಬೀರ್ವುದು,
ಧವಳ ಕೇತು ಹಾರ್‍ಸಿ ತಂದಳದೋ ಭಾರತೀವಧು!  ||ಭಾ||
    *****
ಕೀಲಿಕರಣ: ಕಿಶೋರ್‍ ಚಂದ್ರ

0 ಕಾಮೆಂಟುಗಳು:

ಕಾಮೆಂಟ್‌‌ ಪೋಸ್ಟ್‌ ಮಾಡಿ