೨೬-೧-೫೦

- ನರಸಿಂಹಸ್ವಾಮಿ ಕೆ ಎಸ್

ತಲೆಯ ಮೇಲಿನ ಹೆಜ್ಜೆ ಎಂದೋ ತೆರಳಿತು
ಪಡುವಲಿನ ಬಿಳಿ ಕೆಂಪು ನೀಲಿ ನೀರನು ದಾಟಿ,
ಮರಕತ ದ್ವೀಪದಮನೆಗೆ. ದಣಿಗೂ ದಣಿವು!
ಇತ್ತ ಈ ಬಿಡುಗಡೆಯೂ ಮೈಮುರಿದು ಪರಶಿವನ
ತ್ರಿಶೂಲದಂತಾಯ್ತು ನೋಡುನ ಕಣ್ಣಿಗೆ!

ತಲೆಯ ಮೇಲಿನ ಹೆಜ್ಜೆ. -ಈ ಮಾತು ಮುಗಿಯಿತು;
‘ಹೆಜ್ಜೆಯೇ ಅಲ್ಲ ಮಕುಟದ ಮುತ್ತು ಅದು,
ಇರಲಿ ರಾಜತ್ವ ನೆಪಮಾತ್ರ’ ಎನುವಂತಿಲ್ಲ,-
ಮಕುಟ ರಹಿತ ಸಾಮ್ರಾಜ್ಞಿ ಭಾರತಲಕ್ಷ್ಮಿ,
ರಾಜತ್ವ ರಹಿತ ರಾಜ್ಯಾಂಗ ಮನೋಮಂದಿರೆ.

ನೆನೆ ನೆನೆ ಓ ಮನನೆ ನಿನ್ನ ಎದೆಗತ್ತಲೆಯೆ
ಬಲಿಗೊಟ್ಟ ತಂದೆ ಬಾಳಿನ ಚಂದ್ರಬಿಂಬವನು.
ಆ ನೋಟ ನಿನ್ನ ಕಣ್ಣಾಗಿ, ಅಮೃತವೆ ತುಂಬಿ,
ಗಾಂಧಿಜಿಯ ಮಂದಹಾಸವೆ ಗುರುವಾಗಲಿ !

ಬಾಂಬಿನ ಅಲಂಕಾರ ನಿನಗಿಲ್ಲ, ತಾಯೆ,
ಶಾಂತಿ ಪ್ರಿಯೆ, ಚಂದ್ರಕಾಂತಿ ಪ್ರಿಯೆ,
ಗಂಗಾ ಯಮುನಾ ನದನದೀ ಸ್ನಾತೆ,
ಉಪನಿಷದ್ವಿಪಿನ ಹೋಮಾಗ್ನಿ ಸಂಜಾತೆ !

ಚಳಿಗಾಲ ಬಂದಿರಲು, ಮುದುಕಿ ಮುಮ್ಮೂಲೆಯಲಿ
ಒಂದು ಕಿಡಿ ಕೆಂಡದೆದುರಿನಲಿ ಮೈ ಹಿಡಿಯಾಗಿ
ಬೆದರಿ ಕುಳಿತಂತೆ, ಚಿಂತೆಗೆ ಆತ್ಮನನು ತೆತ್ತು
ಸಂಗ್ರಾಮ ಭೀತಿಯಲಿ ಸೋತು ಸೊರಗಿ ಜಗತ್ತು
ದೂರ ಸಭೆಗಳಲಿ ಮುಗಿಯುವ ಮುನ್ನ ಎಚ್ಚರಿಸು.
ನಿನ್ನ ಗಂಭೀರವಾಣಿಯ ಪಾರಿವಾಳಗಳ
ಬೆಳ್ಗರಿಯ ಬೀಸಿ ಶಾಂತಿಯ ಶಿಶುವನುಪಚರಿಸು;
ಅದು ಬೆಳೆದು ಲೋಕನಾಯಕನಾಗಿ ರಾರಾಜಿಸಲಿ!

ಜಗಜ್ಜನನಿಯಲ್ಲ ನೀನು; ಜಗನ್ಮೋಹಿನಿಯೂ ಅಲ್ಲ;
ಜಗದ್ಧಾತ್ರಿಯಾಗಿರು ನೀನು; ಅಹಿಂಸಾವತ್ಸಲೆ,
ನಿನ್ನ ಶಾಸನವಿದು (ನಡೆ ನಗಾರಿಯ ಮೇಲೆ;
ಈ ಧರ್ಮ ನಿನ್ನ ಬಾವುಟದ ಇನ್ನೂ ಮೇಲೆ):

"ವಯಂ ಪುನಃ ಏವಂ ಆಚಕ್ಷಾಮಹೇ,
ಏನಂ ಭಾಷಾಮಹೇ, ಏವಂ ಪ್ರರೂಯಾಮಃ,
ಏವಂ ಪ್ರಜ್ಞಾಪಯಾಮಃ,-
ಸರ್ವೇ ಪ್ರಾಣಾಃ, ಸರ್ವೇ ಭೂತಾಃ, ಸರ್ವೇ ಜೀವಾಃ,
ಸರ್ವೇ ಸತ್ವಾಃ,
ನ ಹಂತಾವ್ಯಾಃ
ನ ಆಜ್ಞಾಪರಿಯಿತವ್ಯಾಃ
ನ ಪರಿಗ್ರಹೀತವ್ಯಾಃ
ನ ಪರಿತಾಪಯಿತವ್ಯಾಃ
ನ ಉಪದ್ರೋತವ್ಯಾಃ
  ಆರ್ಯವಚನಮೇತತ್
    ಓಂ ತತ್‍ಸತ್."
     *****
ಕೀಲಿಕರಣ: ಎಮ್ ಎನ್ ಎಸ್ ರಾವ್

0 ಕಾಮೆಂಟುಗಳು:

ಕಾಮೆಂಟ್‌‌ ಪೋಸ್ಟ್‌ ಮಾಡಿ