ಝೇಂಕಾರ ಪಲ್ಲವಿ

- ಪರಿಮಳಾರಾವ್ ಜಿ ಆರ್‍

ಉಸಿರಿನ ಏರಿಳಿತಕೆ, ಗಾಳಿಯ-ಹೂ ನಾಟ್ಯಕೆ
ಹಕ್ಕಿಯ ಒಲವಿಗೆ, ಚುಕ್ಕಿಯ ಚೆಲುವಿಗೆ
ಸ್ಪಂದಿಸುತಿದೆ ಬುದ್ಧ!  ನಿನ್ನ ಮಂದಸ್ಮಿತ.

ಎತ್ತರ ಆಕಾಶದಿ, ಭೂಮಿಯ ಎದೆ ಆಳದಿ
ಮೂಡಿದೆ ನಿನ್ನ ಮಧುರ ಮಂದಸ್ಮಿತ ವಿಸ್ತಾರ
ಮನದಾಳದಿ ಹಾಕುತಿರುವೆ ನಾ ಸ್ವರ ಪ್ರಸ್ತಾರ.

ಭೂಮಿಯ ಬಿರುಕಲಿ, ನೋವಿನ ನಂಜಲಿ
ಕಣ್ಣಿನ ಕುರುಡಲಿ, ಮಣ್ಣಿನ ಮನದಲಿ
ಬಾ!  ಬುದ್ಧನೆ ಕಾರುಣ್ಯಕೆ ಕಾಮಧೇನುವಾಗಿ.

ಬಿದಿರಿನ ಕೊಳಲಲಿ, ಉಸಿರಿನ ಹಸಿರಲಿ
ಪದರಿನ ಒಳ ಆಳದಿ, ಗರಿಗೆದರಿದ ಎದೆಯಲಿ
ಬುದ್ಧ!  ನಿನ್ನ ಕಠಿಣ ಉಯ್ಯಾಲೆ ತೂಗುತಿದೆ.

ಮನ ಜೋಕಾಲಿ ಯಾಡುತ್ತಿದೆ
ಸಿದ್ಧ ನಿನ್ನ ಪ್ರಣವ ಲೀಲೆಯಲಿ
ಹೃದಯ ವಿಹಾರದ, ಭಿಕ್ಷು ಸುಳಿದಾಟದಲಿ.

ಬದ್ಧತ್ವದ ಒಲವಲಿ ಅದ್ದುತ ಲೇಖನಿ
ಬರೆದಿರುವೆ ಝೆನ್ ಝೇಂಕಾರವಾಗಿ
ಕಾಡು ಹೂ ಹೃದಯದ ಸತ್ಯ ಸಾಕಾರವಾಗಿ

ಬೇಡೆನೆಗೆ ರಂಗಿನ ಕಮಲದ ಶತದಳವು
ಮನಸ್ಥಿತವಾಗಿದೆ ಶುಭ್ರ ಶ್ವೇತ ಕಮಲದಲಿ
ಸಿದ್ಧ ಬುದ್ಧನ ವಿಮಲ ಮಂದಸ್ಮಿತದಲಿ.

ಮೊಗ್ಗಿನ ಮನದಲಿ, ಬುದ್ಧನ ಪ್ರತಿಮೆ
ಅರಳಿದ ಹೂವಲಿ, ಬುದ್ಧತ್ವದ ಪ್ರಜ್ಞೆ
ಫಲದಲಿರಿಸಿ ಭೋಧಿಸತ್ವದ ಸವಿ ರುಚಿ
ಒಲವಲಿರಿಸಿ ಬೌದ್ಧ ತತ್ವದ ಸವಿ ಶುಚಿ.
ಹೊಮ್ಮಿಸಿದೆ ಝೆನ್ ಝೇಂಕಾರದ ರುಚಿ.

        *****

ಕೀಲಿಕರಣ: ಕಿಶೋರ್‍ ಚಂದ್ರ

0 ಕಾಮೆಂಟುಗಳು:

ಕಾಮೆಂಟ್‌‌ ಪೋಸ್ಟ್‌ ಮಾಡಿ