ತತ್ವಬೋಧದೊಳಗಿದ್ದು ಭವಬಾಧೆಯನು ಗೆದ್ದು

ತತ್ವಬೋಧದೊಳಗಿದ್ದು ಭವಬಾಧೆಯನು ಗೆದ್ದು;
ಪರನಾದದೊಳಗಿದ್ದ ಮೇಲೆ ಮರುಳೆ
ಬೋದವಾದಿಕರು ಬಹುತರದಿ ಬಗಳುವ ಜನರಪ-
ವಾದಕಂಜುವದ್ಯಾಕಲೇ ಮರುಳೆ                           ||೧||

ಗುರುಕರುಣ ತೀರ್ಥ ಪ್ರಸಾದ ತುಂಬಿದ ಪಾತ್ರೆ
ಕರಮುಟ್ಟಿ ಸವಿದು ಸುಖದಿ ಮೆರೆದು ಶರೀರವನು
ಮರೆದು ಮನ ಪರವಶದಿ ತಿರುಗುತಿರೆ
ನರಗುರಿಗಳ ಹಂಗೇನಲೇ ಮರುಳೆ                        ||೨||

ಮಿಥ್ಯಾವಾಸನೆಯನಳಿದು ಮಾಯಾ ಮೋಹವ ತುಳಿದು
ಸಿದ್ಧಜ್ಞಾನ ಮನೆಯೊಳು ಇರುತಿರೆ
ಕದ್ದಡಲಿಬ್ಯಾಡ ಕರ್ಮಿಗಳ ಕಂಡರೆ ಕಾಲಿ-
ಲೊದ್ದು ಮುಂದಕೆ ನಡಿಯಲೋ ಮರುಳೆ                ||೩||

ತಂದೆ ಶಿಶುನಾಳ ಸದ್ಗುರುವರನು ಪಾಲಿಸಿದ
ಬಿಂದು ವಸ್ತುವಿನ ರುಚಿಯಾ ಕೊಂಡು
ಮಂದಮತಿಗಳು ನುಡಿದ ಮಾತಿಗೆ ಅಳುಕದೆ
ಅಂದದಲಿ ನಡಿದಾಡುತಿರೆ ಮರುಳೆ                       ||೪||
****
-ಶಿಶುನಾಳ ಶರೀಫ

0 ಕಾಮೆಂಟುಗಳು:

ಕಾಮೆಂಟ್‌‌ ಪೋಸ್ಟ್‌ ಮಾಡಿ