ಸಾಧುಗಳೆಲ್ಲಾ ಚನ್ನಾಗಿ ಕೇಳಿರಣ್ಣಾ

ಇನ್ನಾರಿಗೆ ಹೇಳಲೆಣ್ಣಾ ಸಾಧುಗಳೆಲ್ಲಾ
ಚನ್ನಾಗಿ ಕೇಳಿರಣ್ಣಾ                                                ||ಪ|| 

ನೆನ್ನೆ ಮೊನ್ನೆಯೆಂದು
ತನ್ನೊಳಗೆ ತಾ ತಿಳಿದು
ತನ್ನೇಸ್ಹುಣ್ಣಿವಿ ದಿನಾ
ಕನ್ನೆ ಮಾಸಿ ಕೂಡಿ ಬಂದು                                       ||ಅ.ಪ.||

ಹಾವು ಇಲ್ಲದ ಹುತ್ತಾ ಕಚ್ಚಲು ಸರ್ಪಾ
ಜೀವ ಹೋದಿತು ಸತ್ತಾ
ಮೋಹ ಮದಗಳು ತಾನು
ತಾಯಿಗಂಡನ ಕೂಡಿಕೊಂಡು
ದೇವರ ಮನಿಯಾಗ ಹಾಸಿಗೆ ಮಾಡಿ
ಕ್ಯಾವಿ ಹಚ್ಚಡ ಹೊಚ್ಚಿದ ಮೇಲೆ                                ||೧||

ಆಕಾಶ ನೆಲೆಯಾಗಿ ನಿಂತಲ್ಲೆ ನಿಂತು
ಭೂಕಾಂತೆ ತಲೆದೂಗಿ
ಮೂಕನೊಬ್ಬನ ಕೂಡ
ಹಾಕ್ಯಾಡಿ ತಕ೯ಮಾಡಿ
ಪಾಕದ ಗಡಿಗೆ ವಡಿದು ಜಡಿದು
ಕಾಕೀಗಿಡವ ಕಡಿದ ಮೇಲೆ                                     ||೨||

ಮುತ್ತಲಮರವನೇರಿದೆ ಆದರೊತ್ತಲಿರುವ
ಗೊತ್ತಿನ ಭೂತವ ತಡದೆ
ಅತ್ತ ಇತ್ತ ನೋಡಲಾಗಿ
ಸುತ್ತಲೂ ಭಯವಾಗಿ
ನೆತ್ತಿ ಬಿರಿದು ಬತ್ತಲಾಗಿ
ಸತ್ಯ ಶಿಶುನಾಳಧೀಶನ ಕಂಡೆ                                ||೩||
                        * * *
-ಶಿಶುನಾಳ ಶರೀಫ

ಕೀಲಿಕರಣ: ಎಂ.ಎನ್.ಎಸ್. ರಾವ್ 

0 ಕಾಮೆಂಟುಗಳು:

ಕಾಮೆಂಟ್‌‌ ಪೋಸ್ಟ್‌ ಮಾಡಿ