ಅಭಿಮಾನವಿಡು


- ಗಿರಿಜಾಪತಿ ಎಂ. ಎನ್

ಅಭಿಮಾನವಿರಲೀ,
ದೇಶ, ಭಾಷೆಯ ರೀತಿ, ನೀತಿಯ ಸಿರಿಯುಸಿರಲಿ,
ವಿಶ್ವಕೋಶದ,
ಧಮನಿ ದಮನಿಯ, ಬಿತ್ತಿ ಬೆಳೆಸಿದ ತೋಳಲಿ....
ಎಲ್ಲ ಲೋಕದ,
ನಾಕವಿದುವೆ ಪುಣ್ಯ, ಸಗ್ಗಕೆ ಭೂಮಿಕೆ,
ಜ್ಞಾನವೆಲ್ಲಕೂ
ಮೂಲವಿದುವೆ, ಧ್ಯಾನ ನಂದನ ಚಂದ್ರಿಕೆ,
ಧೃವಗಳೆಲ್ಲಕೂ
ಧೃವವ ತೋರಿದೆ ಈ ಮಣ್ಣಿನೆದೆಯ ಬಾಂದಳ,
ವಿಶ್ವನೇಹದೊಸುಗೆಗೆ
ಕೈಯ ಚಾಚಿದೆ ಕಂದದಂದದ ಜೋಗುಳ,
ಎಲ್ಲ ಸಂಸ್ಕೃತಿ ಸಾರವಿಲ್ಲಿ,
ಉತ್ಕೃತಿಯ ತೆರದ ಹರಹಿನಲ್ಹಬ್ಬಿದೆ
ನೂರು-ಸಾವಿರ-ಕೋಟಿ ತತ್ವವ
ಮಾನ್ಯ ಭಾವ ದೇಶದಿ ತಬ್ಬಿದೆ
ಬರಿಮಣ್ಣಲ್ಲದ
ಈ ಮಣ್ಣಲಿ ವಿಶ್ವದೈವದ ಬಲವಿದೆ,
ವ್ಯಷ್ಠಿಯಲ್ಲದ
ಸಮಷ್ಠಿಬಲದಲಿ ಜೀವನವು ತಾ ಸಾಗಿದೆ.

        *****

ಕೀಲಿಕರಣ: ಕಿಶೋರ್‍ ಚಂದ್

0 ಕಾಮೆಂಟುಗಳು:

ಕಾಮೆಂಟ್‌‌ ಪೋಸ್ಟ್‌ ಮಾಡಿ