ಬೆಟ್ಟದಾ ಮೇಲೊಂದು

- ಪ್ರಭಾಕರ ಶಿಶಿಲ

ಆ ಊರಲ್ಲಿ ಇಳಿಯಬೇಕಿದ್ದರವರಲ್ಲಿ ಅವನೂ ಒಬ್ಬ.  ಆಪರಿಚಿತ ಊರಲ್ಲಿ ತನ್ನ ಫೀಲ್ಡ್ ಸ್ಟಡಿಗೆ ಸಹಾಯ ಮಾಡುವವರು ಯಾರಾದರೂ ಸಿಕ್ಕಾರೇ ಎಂದು ಸುತ್ತಲೂ ಕಣ್ಣಾಡಿಸುತ್ತಿದ್ದಂತೆ ಅವನನ್ನು ಆಲ್ಲಿಗೆ ಹೊತ್ತು ತಂದ ಬಸ್ಸು ಇಳಿಸಿದ್ದಕ್ಕಿಂತ ಹೆಚ್ಚು ಮಂದಿಯನ್ನು ಹತ್ತಿಸಿಕೊಂಡು ಮುಂದಕ್ಕೆ ಓಡಿತು.  ಅವನು ಕಾಲೆಳೆದುಕೊಂಡು ಎದುರಲ್ಲಿ ಕಾಣುವ ಹೋಟೆಲಿಗೆ ಹೋಗಬೇಕು ಎನ್ನುವಾಗ ಆವನಿಗೆ ಕಂಡದ್ದು ಅವಳು.

ಆವಳು ಇದ್ದದ್ದು ದೊಡ್ಡದೊಂದು ಫ್ಯಾನ್ಸಿ ಸ್ಟೋರಿನಲ್ಲಿ. ಅವನನ್ನು ದೂರದಿಂದಲೇ ನೋಡಿದ ಅವಳ ಮುಖ ಆರಳಿತು.  ಈಗ ಆವನ ಕಾಲುಗಳು ದಾರಿ ತಪ್ಪಿಸಿ ಅವನನ್ನು ಫ್ಯಾನ್ಸಿ ಸ್ಟೋರಿನತ್ತ ಒಯ್ದುವು.  ಅವಳು ಸಂಭ್ರಮದಿಂದ ಹೊರಬಂದಳು.  ಜತೆಗೆ ಎರಡು ಬದಿಗಳಲ್ಲಿ ಜೋತು ಬಿದ್ದಂತೆ ಇಬ್ಬರು ಹೆಣ್ಣುಮಕ್ಕಳು.  ಅವುಗಳ ಮುಖದಲ್ಲಿ ಪೆದ್ದು ಕಳೆ.  ನಿರಾಸಕ್ತಿಯ ನೋಟ.  ಒಂದು ಕ್ಷಣ ಗಲಿಬಿಲಿಗೊಳಗಾದ ಅವನನ್ನು ಕಂಡು ಅವಳು ನಗುತ್ತಾ ನಮಸ್ಕಾರ ಮಾಡಿದಳು.  ಅದರಲ್ಲಿ ಗೌರವಕ್ಕಿಂತ ಹೆಚ್ಚಾಗಿ ಹುಡುಗಾಟ ಇದ್ದುದನ್ನು ಗಮನಿಸಿ ಆವನು  ನಕ್ಕು ಕೇಳಿದ, "ಏನಮ್ಮಾ... ಹೇಗಿದ್ದೀಯಾ?

ಈಗವಳು ಗಟ್ಟಿಯಾಗಿ ನಕ್ಕಳು. ಫ್ಯಾನ್ಸಿ ಸ್ಟೋರಿನಲ್ಲಿದ್ದವರೆಲ್ಲಾ ಆವರತ್ತ ನೋಡುತ್ತಿರುವುದನ್ನು ಕಂಡು ಅವನಿಗೆ ಕಸಿವಿಸಿಯಾಯಿತು.  ಅವಳಿಗೆ ಆರ್ಥವಾಯಿತು. ಅವನ ಕ್ಕೆಯಲ್ಲಿದ್ದ ಬ್ಯಾಗು ಎತ್ತಿಕೊಳ್ಳುತ್ತಾ "ನಡೀರಿ ಗಾಬರಿ ಬೇಡ. ಇದು ನಮ್ಮದೇ ಅಂಗಡಿ" ಎಂದು ಮು೦ದಕ್ಕೆ ನಡೆದಳು.  ನಡೆಯುತ್ತಾ "ನೆನಪಿದ್ಯಾ ಸಾ.. ನೀವೇ ಹೇಳ್ತಿದ್ರಿ. ಹೇಗಿದ್ದೀರಿ ಆಂತ ಕೇಳುವುದು ಇನ್ನೇನೂ ತೋಚದೆ ಇರುವಾಗ ಆಂತ.  ಅದಕ್ಕೆ ನಗು ಬಂತು" ಆಂದಳು.

ಆವನಿಗೂ ನಗು ಬಂತು.  ಸ್ಟೋರಿನ ಒಳ ಹೊಕ್ಕಾಗ ಅವನಿಗೆ ದಂಗು ಬಡಿದಂತಾಯಿತು.  ಫಾನ್ಸಿ ಎಂದರೆ ಬಳೆ, ಪೌಡರ್, ಲಿಪ್‍ಸ್ಟಿಕ್ ಎಂದೇ ತಿಳಿದಿದ್ದ ಅವನಿಗೆ  ಅವುಗಳೊಂದಿಗೆ ಬಟ್ಟೆ , ಸ್ಟೇಶನರಿ, ಆಟದ ಸಾಮಾನು ಮತ್ತು ವಿಧವಿಧದ ಪಾದರಕ್ಷೆ ಕಂಡು ಆಶ್ಚರ್ಯ.  ವಿಶಾಲವಾದ ಅಂಗಡಿಯಲ್ಲಿ ನಾಲ್ಕೈದು ಮಂದಿ  ಸೇಲ್ಸ್‍ಮನ್‍ಗಳಿದ್ದರು.  ಜತೆಗೆ ಫೋನು, ಟಿ. ವಿ., ಫ್ಯಾನು ಎಲ್ಲವೂ.

"ನಮ್ದೇಸಾ ಹೇಗಿದೆ ?  ಅವ್ರನ್ನು ನೀವು ನೊಡಿಲ್ಲ ಅಲ್ವಾ?  ಬಾಂಬೆಗೆ ಹೋಗಿದ್ದಾರೆ ನಾಲ್ಕು ದಿನ ಬಿಟ್ಟು ಬರ್ತಾರೆ."  ಅವನ ಕಣ್ಣಲ್ಲಿನ ಶಂಕೆಗೆ ಅವಳು ಉತ್ತರಿಸಿದಳು.

"ಕೂತ್ಕೊಳ್ಳಿ, ಏನ್ ಕುಡೀತಿರಿ" ಎಂದವಳೇ, ಅವನ ಉತ್ತರಕ್ಕೆ ಕಾಯದೆ" ನೋಡಪಾ ಎರಡು ಲೆಮನ್ ಸೋಡಾ ತಗೊಂಬಾ" ಎಂದು ಸೇಲ್ಸ್‍ ಮ್ಯಾನ್ ಒಬ್ಬನನ್ನು ಓಡಿಸಿದಳು. "ಸೆಕೆಗೆ ಅದೇ ವಾಸಿ ಅಲ್ವೇ?" ಎಂದು ಸೇರಿಸಿದಳು.

ಅವನು ಕೂತುಕೊಂಡ.  "ಇಲ್ಲಿಗೇನ್ ಬಂದ್ರಿ ಸಾ?" ಈಗವನು ಬಿಚ್ಚಿಕೊಂಡ.  ಅವನು ರಿಸರ್ಚ್ ಮಾಡಲು ತೊಡಗಿರುವುದು, ಇದೀಗ ಅವಳ ಊರಿನ ಪಶುಪತಿ ದೇವಾಲಯದ ಬಗ್ಗೆ ಆಧ್ಯಯನ ಮಾಡಲು ಬಂದಿರುವುದು ಹೀಗೆ.

"ಅಯ್ಯೋ ಅಲ್ಲಿಗೆ ನಮ್ಮ ಮನೆ ಮುಂದ್ಲಿಂದ್ಲೇ ಹೋಗಬೇಕು ನೀವು. ಅಲ್ಲಿಂದ ಆರೇ ಫರ್ಲಾಂಗು.  ಅಂದ್ಹಾಗೆ ಎಷ್ಟು ದಿನ ಉಳ್ಕೊಳ್ತೀರಿ ಸಾ ಇಲ್ಲಿ?"

"ಸ್ಟಡಿ ಅಂದ್ಮೇಲೆ ಇಷ್ಟೇ ದಿನಾಂತ ಹೇಳೋಕಾಗಲ್ಲ.  ಮೊದ್ಲು ದೇವಸ್ಥಾನ ನೋಡ್ಬೇಕು.  ಶಿಲ್ಪಗಳ ಬಗ್ಗೆ ಆಧ್ಯಯನ ಮಾಡಬೇಕು.  ಅರ್ಚಕರನ್ನು ಕಾಣಬೇಕು.  ಊರ ಹಳಬ್ರನ್ನು ಭೇಟಿಯಾಗಬೇಕು.  ಕೆಲವು ಪೋಟೋ ತೆಗೀಬೇಕು.  ಅದ್ರಿಂದ ನಾಲ್ಕೈದು ದಿನಾ ಇರ್ಬೇಕಾಗಿ ಬರ್ಬೋದು.  ಎಲ್ಲಾದ್ರೂ ಹೋಟ್ಲಲ್ಲಿ ರೂಮು ಸಿಗುತ್ತೋ ನೋಡಬೇಕು."

ಆವಳ ಕಣ್ಣುಗಳು ಆರಳಿದವು.  "ಹೋಟೆಲ್ಲಿಗ್ಯಾಸಾ ದುಡ್ಡು ಸುರೀತೀರಿ? ನಮ್ಮನೇಲೇ ಇರಿ.  ಮನೇಲಿ ಮಾವ ಇದ್ದಾರೆ.  ಈ ಊರ ಬಗ್ಗೆ ಅವರೆಷ್ಟು ತಿಳುಕೊಂಡಿರೋರು ಯಾರೂ ಇಲ್ಲ.  ಅದೇನೋ ಎನ್‍ಸೈಕ್ಲೋಪೇಡಿಯಾ ಅಂತಾರಲ್ಲಾ ಹಾಗೆ.  ದೇವಸ್ಥಾನ ಇಂದೇ ಒಮ್ಮೆ ನೋಡ್ಕಂಬನ್ನಿ.  ಅಲ್ಲಿಂದ ನೇರ ನಮ್ಮನೇಗೆ.  ಇವ್ನೆ ನಿಮ್ಗೆ ಕಂಪನಿ." ಆಗ ತಾನೆ ಜ್ಯೂಸ್ ತಂದುಕೊಟ್ಟವನನ್ನು ತೋರಿಸಿದಳು.

ಜ್ಯೂಸ್ ಕುಡಿದು ಅವನು ಎದ್ದು ಬ್ಯಾಗು ಕೈಗೆತ್ತಿಕೊಂಡ.  ಅವಳು ತಡೆದಳು.  "ಆದೆಲ್ಲಾ ಇಲ್ಲೇ ಇರ್ಲಿ.  ಬೇಕಿದ್ರೆ ಪೆನ್ನು, ಬುಕ್ಕು, ಕ್ಯಾಮರಾ ತಗಳ್ಳಿ.  ಬ್ಯಾಗು ನಮ್ಮನೆಗೆ ಹೋಗುತ್ತೆ.  ನಿಮ್ಮ ಜವಾಬ್ದಾರಿಯೆಲ್ಲಾ ಸದ್ಯಕ್ಕೆ ಇವಂದು."

ಆವನು ಸುಧಾರಿಸಿಕೊಂಡ. ಅವಳ ಮಕ್ಕಳಿಗೆ ಏನನ್ನೂ ಕೊಡದ್ದು ನೆನಪಾಗಿ ಜೇಬಿಗೆ ಕ್ಕೆ ಹಾಕಿ ಸಿಕ್ಕಿದ ಎರಡು ನೋಟು ತೆಗೆದು ಮಕ್ಕಳ ಕ್ಕೆಯಲ್ಲಿ ಇರಿಸಹೋದ. ಆವಳು ತಡೆದಳು. "ನಿಮ್ಗೇನಾಗಿದೆ ಸಾ?  ನಮ್ಗೇನ್ಸಾ ಕಡಿಮೆಯಾಗಿರೋದು?  ಒಳ್ಳೇ ಸಂಪ್ರದಾಯವಾದಿ ಆಗ್ಬಿಟ್ರಲ್ಲಾ?"

ಅವನಿಗೆ ಪಿಚ್ಚನಿಸಿತು. "ಇದ್ರಲ್ಲಿ ಸಂಪ್ರದಾಯ ಏನ್ಬಂತು ? ನಿನ್ಮಕ್ಳಿಗೆ ಇಷ್ಟಾದ್ರೂ ಕೊಡ್‍ಬೇಡ್ವೇ ನಾನು.  ಅವಳು ಮತ್ತೆ ನಕ್ಕಳು "ಈಗ ನೀವು ಹೋತ್ತಿರೋ ದೇವಾಲಯದ ಅರ್ಚಕರಿಗೆ ತುಂಬಾ ಮಕ್ಳು. ಅವ್ರಲ್ಲಿ ಯಾರಿಗಾದ್ರೂಕೊಟ್ಟು ಪುಣ್ಯ ಕಟ್ಕೊಳ್ಳಿ."

ಆವನು ಮುದುಡಿ ಹೋದ. ನೋಟು ಬುಕ್ಕು, ಪೆನ್ನು, ಕ್ಯಾಮರಾ ಹಿಡ್ಕೊಂಡು ಹೊರ ಬಂದ. ಮುರ್ಳೀ, ದೇವಸ್ಥಾನದಿಂದ ನೇರ ನಮ್ಮನೆಗೇ ಕರ್‍ಕೊಂಬಂದ್ಬಿಡು" ಎಂದು ಅವನ ಮಾರ್ಗದರ್ಶಕನನ್ನು ಎಚ್ಚರಿಸಿದಳು. "ಬೆಟ್ಟಕ್ಕೆ ಕಾರಲ್ಲಿ ಹೋಗ್ತೀರಾ" ಎಂದು ಆವಳು ಕೇಳಿದ್ದಕ್ಕೆ, "ಇಲ್ಲ, ಊರು ನೋಡ್ಬೇಕು" ಅಂದ.

ಮುರ್ಳಿ ಮುಂದಿನಿಂದ, ಅವನು ಹಿಂದೆ.  ಒಳಹಾದಿಯಲ್ಲಿ ಹೋಗುವಾಗ ಊರನ್ನು ವೀಕ್ಷಿಸುತ್ತಾ ನಡೆದ.  ಪೇಟೆ ಸಣ್ಣದು.  ಊರಾಚೆ ಮೈದಾನ.  ಅದರ ತುದಿಯಲ್ಲಿ ಎಡಭಾಗಕ್ಕೆ ಬೆಟ್ಟ.  ಅದರ ಮೇಲೆ ಬಹುದೂರಕ್ಕೆ ಕಾಣುವ ದೇವಾಲಯ.

ಮುರ್ಳಿ ಅವನಿಗೆ ತುಂಬಾ ಗೌರವ ಕೊಡುತ್ತಿದ್ದ.  ದನಿಯ ಹೆಂಡತಿ "ಸಾ" ಎಂದು ಕರೆಯುತ್ತಿದ್ದುದನ್ನು ಅವನು ಕೇಳಿಸಿಕೊಂಡಿದ್ದ.  ಬಿ. ಎ. ವರೆಗೆ ಓದಿದ್ದ ಹುಡುಗ  ಚುರುಕಾಗಿದ್ದ ಮುರ್ಳಿಯನ್ನು ಅವನೇ ಮಾತಿಗೆಳೆಯಬೇಕಾಯಿತು. ಅವಳ ಬಗ್ಗೆ, ಅವಳ ಸಂಸಾರದ ಬಗ್ಗೆ ಕೇಳಿದ್ದಕ್ಕೆ ಮುರ್ಳಿ ಗೌರವದಿಂದ ಉತ್ತರಿಸಿದ.  ದನಿಗಳ ಬಗ್ಗೆಯೂ ಹೇಳಿದ. "ಇಬ್ರೂ ಬಾಳಾ ಒಳ್ಳೇವ್ರು ಸಾ.  ಒಂದು ದಿನಾನೂ ಜಗ್ಳಾ ಆಡಿದ್ದನ್ನು ಯಾರೂ ಕಂಡಿಲ್ಲ.  ಅಮ್ಮ ನಮ್ಗೆ ಹಬ್ಬಕ್ಕೆ ಹೊಸ ಬಟ್ಟೆ ಕೊಡಿಸ್ತಾರೆ.  ತಿಂಗ್ಳಿಗೊಂದು ಪೂಜೆ ಮಾಡ್ಸಿ ಊಟ ಹಾಕ್ತಾರೆ. ಪ್ರತಿವರ್ಷ ಸಂಬ್ಳಾ ಏರಿಸ್ತಾರೆ.  ಆದ್ರೆ ಸಾ ದೇವ್ರಿಗೆ ಕಣ್ಣಿಲ್ಲ.  ಇರೋ ಇಬ್ಬರು ಮಕ್ಳಿಗೂ ಮಂದ ಬುದ್ದಿ. ರಕ್ತ ಸಂಬಂಧದಲ್ಲೇ ಮದ್ವಿಯಾಗಿರೋದ್ರಿಂದ್ಲೇ ಹಿಂಗಾಯ್ತಂತೆ.  ಅಮ್ಮಾವ್ರ ನಂತ್ರ ಇವ್ರ ಹಣಕ್ಕಾಗಿ ಏನೇನೋ ನಡಿಯೋದೂಂತ ಜನಾ ಆಡ್ಕೋತಾರೆ ಸಾ."

ಮುರ್ಳಿಯ ದನಿಯಲ್ಲಿನ ವಿಷಾದದ ಛಾಯೆ ಅವನನ್ನು ಮುತ್ತಿಕೊಂಡಿತು.  ಅವಳು ಕಾಲೇಜಿನಲ್ಲಿ ಇದ್ದಾಗಿನ ದಿನಗಳನ್ನು ನೆನೆದುಕೊಂಡ.  ಸಾಹಿತ್ಯದ ಬಗ್ಗೆ ಅವನು ಚುರುಕಾಗಿ ಓಡಾಡಲು ಕಾರಣವಾಗಿದ್ದವಳು ಅವಳೇ.  ಅವನ ವಿಚಾರಗಳಿಗೆ ಹೊಸ ದಿಕ್ಕನ್ನು ಕೂಡಾ ಆಕೆ ಒಮ್ಮೊಮ್ಮೆ ತೋರಿಸುತ್ತಿದ್ದಳು.  ಸಂಪ್ರದಾಯಗಳೆಲ್ಲಾ ಸ್ತ್ರೀ ಶೋಷಣೆಯ ಪರಿಕರಗಳೆಂದೂ, ಗಂಡಿನಷ್ಟೇ ಸ್ವಾತಂತ್ರ್ಯ ನೀಡದ ಸಮಾಜ ವೈಜ್ಞಾನಿಕವಾಗಿ ಎಂದಿಗೂ ಮುಂದುವರಿಯದೆಂದೂ ಆಕೆ ಆಗಾಗ ವೇದಿಕೆಗಳಲ್ಲಿ ಹೇಳುತ್ತಿದ್ದುದು ಅವನಿಗೆ ನೆನಪಾಯಿತು.  ಅವಳಿಗೆ ಮಂದ ಬುದ್ದಿಯ ಮಕ್ಕಳು !

ಅವನಿಂದ ಅದನ್ನು ಕಲ್ಪಿಸಿಕೊಳ್ಳುವುದೇ ಕಷ್ಟವಾಯಿತು.  ಅವರಾಗ ಮೈದಾನ ದಾಟಿ ಬೆಟ್ಟ ಹತ್ತಲು ತೊಡಗಿದ್ದರು.  ತಂಗಾಳಿ ಮೃದುವಾಗಿ ತೀಡತೊಡಗಿತ್ತು.  ಹತ್ತುತ್ತಿದ್ದಂತೆ ಮುರ್ಳಿ ಹೇಳಿದ.  "ಇದಕ್ಕೆ ತಿಮ್ಮನ ಬೆಟ್ಟ ಅಂತಾರೆ."

ಆವನ ಕಿವಿಗಳು ಚುರುಕಾದವು.  ಎಲ್ಲಿಯ ತಿಮ್ಮ, ಎಲ್ಲಿಯ ಪಶುಪತಿ?  ಅವನು ಕುತೂಹಲದಿಂದ ಕೇಳಿದ. "ಯಾಕೇಂತ ನಿಂಗೆ ಗೊತ್ತಾ ಮುರ್ಳಿ?"  ಮುರ್ಳಿ ಹೇಳುತ್ತಾ ಹೇಳುತ್ತಾ ಹೋದ.  "ಇಲ್ಲಿ ವರ್ಷಕ್ಕೊಮ್ಮೆ ಜಾತ್ರೆ ನಡೆಯುತ್ತೆ ಸಾ. ಜಾತ್ರೆಗೆ ಹತ್ತು ದಿನಕ್ಕೆ ಮೊದ್ಲು ಧ್ವಜಾ ಏರಿಸ್ತಾರೆ.  ಇಲ್ಲಿನ ಧ್ವಜಕಂಬ ಭಾಳಾ ಎತ್ರದ್ದು. ಒಂದ್ಸಲಾ ಧ್ವಜಾ ಏರ್ಸೋವಾಗ ಹಗ್ಗ ಸಿಕ್ಕೊಂಬುಡ್ತು.  ಧ್ವಜಾ ಮೇಲೇರ್ಲೇ ಇಲ್ಲ.  ಸೇರಿದ್ದ ಜನ ಅಪಶಕುನ ಆಗೋಯ್ತು ಅಂತಾ ಆಡ್ಕೊಂಡ್ರು.  ಅಷ್ಟೆತ್ರದ ಕಂಬ ಹತ್ತಿ ಹಗ್ಗ ಸರಿ ಮಾಡೋ ಧೈರ್ಯ ಯಾರ್‍ಗೂ ಬರ್ಲಿಲ್ಲ.  ಆಗ ಧೈರ್ಯ ಮಾಡಿ ಹತ್ತಿದೋನು ಈ ತಿಮ್ಮ."

"ಓ ! ಅದ್ಕೇ ಇದು ತಿಮ್ಮನ ಬೆಟ್ಟ ಆಗೋಯ್ತಾ?"

"ಇಲ್ಲಿ ಕೇಳಿ ಸಾ. ತಿಮ್ಮ ಆಷ್ಟೆತ್ರದ ಕಂಬಕ್ಕೆ ಹತ್ತಿ ಹಗ್ಗ ಬಿಡಿಸೋವಾಗ ಆ ಮರದ ಕಂಬ ಲಟಾರ ಮುರಿದೋಯ್ತು. ಆಯತಪ್ಪಿ ತಿಮ್ಮ ಬಿದ್ಬಿಟ್ಟ. ಧ್ವಜಕಂಬದ ಎದ್ರು ಬಲಿಕಲ್ಲೂಂತ ಇದೆಯಲ್ಲಾ ಸಾ.  ಆದ್ಕೆ ತಲೆ ತಾಗಿ ದೇವ್ರಿಗೆ ಕಾಯಿ ಒಡೀತಾರಲ್ಲಾ ಸಾ.  ಹಾಗೆ ಚೂರು ಚೂರು ಆಗೋಯ್ತು."

ಮುರ್ಳಿ ಮುಖ ಕಿವುಚಿಕೊಂಡ.  ಅವನೂ ಒಂದು ಕ್ಷಣ ವಿಷಾದದ ಮೌನದಲ್ಲಿದ್ದ.  ಮತ್ತೆ ನಿಧಾನವಾಗಿ ಕೇಳಿದ.  "ಇದೆಲ್ಲಾ ನೀನು ನೋಡಿದ್ದಾ?"

"ಅಯ್ಯೋ ಎಲ್ಬಂತು ಸಾ?  ಇದು ನಮ್ಮಜ್ಜ ಹೇಳಿದ ಕತೆ.  ಎಷ್ಟು ವರ್ಷ ಹಿಂದ್ಲಿದ್ದೋ !  ಆ ವರ್ಷ ಜಾತ್ರೆ ನಿಂತು ಹೋಯ್ತಂತೆ.  ಕೇರಳದಿಂದ ಯಾರನ್ನೋ ಕರ್‍ಸಿ ಅಷ್ಟಮಂಗ್ಲ ಪ್ರಶ್ನೆ ಕೇಳಿದ್ರಂತೆ.  ದೇವಸ್ಥಾನ ಮೈಲಿಗೆ ಆಯ್ತೂಂತ ಅದ್ರಲ್ಲಿ ಕಂಡುಬಂತಂತೆ.  ಆ ಮೇಲೆ ಕಲ್ಲಿನ ಕಂಬ ಮಾಡ್ಸಿ ಬ್ರಹ್ಮಕಳ್ಸಾ ಅಂತೇನೇನೋ ನಡ್ಸೀ, ಮರುವಷ ಜಾತ್ರೆ ಮಾಡಿದ್ರಂತೆ.  ತಿಮ್ಮ ಹೀರೋ ಆಗ್ಬಿಟ್ಟ.  ಆಲ್ಲೀವರ್ಗೆ ಪಶುಪತಿ ಬೆಟ್ಟ ಆಂತಿದ್ದದ್ದು ಜನ್ರ ಬಾಯಲ್ಲಿ ತಿಮ್ಮನ ಬೆಟ್ಟ ಅಂತಾಗೋಯ್ತು."

"ಒಳ್ಳೆ ಹೆಸ್ರು ಬಿಡು. ಹಾಗಾದ್ರೂ ತಿಮ್ಮ ಉಳ್ಕೊಂಡ್ನಲ್ಲಾ?"

"ಅದೂ ಹೋಗಿ ಬಿಡೋದ್ರಲ್ಲಿತ್ತು ಸಾ.  ಈ ಊರು ಚಿಕ್ಕದಾದ್ರೂ‌ ಇಲ್ಲಿನ ಪಾಲ್ಲಿಟಿಕ್ಸು ತುಂಬಾ ಜೋರು.  ಮೊನ್ನೆ ಮೊನ್ನೆ ಇಲ್ಲಿ ಕೆಲ್ಸಾ ಇಲ್ದ ಪುಂಡ್ರು ಸೇರ್‍ಕೊಂಡು ಬೆಟ್ಟಕ್ಕೆ ವಿಷ್ಣುಗಿರಿ ಆಂತ ಹೆಸರಿಡೋದಕ್ಕೆ ಹೊರಟ್ರು ಆದ್ರೆ ಇಲ್ಲಿ ತಿಮ್ಮನ ಜಾತಿಯವರದ್ದೇ ಮೆಜಾರಿಟಿ.  ಮೇಲಾಗಿ ಇಲ್ಲಿನ ಅರ್ಚಕರು ಶೈವ್ರು.  ವಿಷ್ಣುವಿನ ಹೆಸ್ರಿಡೋದಕ್ಕೆ ಸುತಾರಾಂ ಒಪ್ಪೇ ಇಲ್ಲ.  ಆಗ ದೊಡ್ಡ ಹೊಡ್ದಾಟ ನಡೀತು ಸಾ.  ಸೆಂಟ್ರಲ್ ರಿಸರ್ವು ಬಂದು ಟಿಯರ್ ಗ್ಯಾಸ್ ಬಿಟ್ಟು.  ಒಂದು ವಾರ ಇಲ್ಲೇ ಜಂಡಾ ಹೊಡದ್ರು. ಊರ ಹಿರೀರೆಲ್ಲಾ ಸೇರಿ ಶಾಂತಿ ಸಭೆ ಮಾಡಿ, "ಹೆಸ್ರಿಗೊಂದು ಇತಿಹಾಸ ಇರತ್ತೆ.  ಆದ್ರಿಂದ ಯಾವುದೇ ಹೆಸ್ರನ್ನು ಬದಲಾಯಿಸೋದು ತಪ್ಪು" ಅಂತ ತೀರ್ಮಾನಕ್ಕೆ ಬಂದ್ರು. ಕೊನಿಗೂ ತಿಮ್ಮನ ಬೆಟ್ಟ ಅನ್ನೋ ಹೆಸ್ರೇ ಉಳಿಸಿಕೊಂಡ್ರು. "

ಮಾತಾಡುತ್ತಾ ಆವರು ದೇವಾಲಯದ ಆಂಗಣಕ್ಕೆ ಬಂದು ಮುಟ್ಟಿದರು.  ಅಲ್ಲಿಂದ ಇಡೀ ಊರು ಕಾಣುತ್ತಿತ್ತು.  ಬೆಂಕಿ ಪೊಟ್ಟಣದ ಹಾಗೆ ಮನೆಗಳು.  ಇರುವೆಗಳ ಹಾಗೆ  ಮನುಷ್ಯರು.  ಊರನ್ನು ಸುತ್ತಲೂ ತಬ್ಬಿಕೊಂಡಿರುವ ಹಸಿರು.  ಊರಾಚೆ ವಿಶಾಲವಾದ ಕೆರೆ.  ಅದಕ್ಕೂ ಆಚೆ ಚೌಕಾಕಾರದ ಹೊಲಗಳು.

ಅಂಗಣ ಸಾಕಷ್ಟು ದೊಡ್ಡದಿತ್ತು.  ಬಲಬದಿಯಲ್ಲಿ ಉದ್ದಕ್ಕೊಂದು ಕಟ್ಟಡ.  ಎಡಬದಿಯಲ್ಲೊಂದು ಚಪ್ಪರ.  "ಆಲ್ಲಿ ಬಲಕ್ಕಿರೋದು ಬಾಮಿನ್ಸಿಗೆ ಸಾ. ಎಡಕ್ಕಿರೋದು ಶೂದ್ರರಿಗೆ.  ಮುಟ್ಟಿಸ್ಕೋಬಾರ್ದೋರು ಅಲ್ಲಿ ದೂರ ನಿಂತ್ಕೋತಾರೆ.  ಭಾರಿ ಕಾರ್ಣಿಕದ ದೇವಸ್ಥಾನ ಸಾ ಇದು.  ಅದ್ಕೆ ಮಡಿ ಜಾಸ್ತಿ.  ಜಾತ್ರೆಗೆ ದಿನಾ ಊಟ ಇರತ್ತೆ. ಹತ್ತೂರ ಜನಾ ಸೇರ್ತಾರೆ.  ಭಾರೀ ಮಜಾ ಇರತ್ತೆ ಸಾ.  ನೀವು ಜಾತ್ರೆಗೆ ಬರ್ಬೇಕಿತ್ತು."  ಮುರ್ಳಿ ಮಾತಲ್ಲೇ ಜಾತ್ರೆಯ ಸುಖ ಅನುಭವಿಸಿದ.

ಮುರ್ಳಿ ಹೇಳಿದ್ದಕ್ಕೆಲ್ಲಾ ಅವನು ಹೂಂಗುಟ್ಟುತ್ತಿದ್ದ.  ಪ್ರವೇಶ ದ್ವಾರದ ಬಳಿ ಬಂದಾಗ ಅವನ ದೃಷ್ಟಿ ಧ್ವಜ ಕಂಬದತ್ತ ಹೋಯಿತು. ಅಷ್ಟೆತ್ತರದಿಂದ ಬಿದ್ದು  ಬಲಿಕಲ್ಲಿಗೆ ತಲೆಯನ್ನು ತೆಂಗಿನಕಾಯಿಯಾಗಿಸಿದ ತಿಮ್ಮನ ನೆನಪಾಗಿ ಕಸಿವಿಸಿಯಾಯಿತು.  ಪ್ರವೇಶದ್ವಾರದ ಕೆತ್ತನೆಯ ಕೆಲಸಗಳು ಆಕರ್ಷಕವಾಗಿದ್ದರೂ ಅವುಗಳಲ್ಲಿ ಅವನಿಗೆ ವಿಶೇಷವಾದುದೇನೂ ಕಾಣಿಸಲಿಲ್ಲ.

ಪ್ರವೇಶದ್ವಾರದ ಒಳಬದಿಗೆ ಬಂದು ಮೇಲ್ಭಾಗದತ್ತ ದೃಷ್ಟಿ ಹಾಯಿಸಿದ.  ಎತ್ತರದ ಭಾಗದಲ್ಲಿ ಅವನಿಗೆ ಬೇಕಾದುದು ಕಣ್ಣಿಗೆ ಬಿತ್ತು.  ವಿವಿಧ ಭಂಗಿಯ ಮಿಥುನ ಶಿಲ್ಪಗಳು!  ಅವನು ನೋಡುತ್ತಾ ಹಾಗೇ ನಿಂತುಬಿಟ್ಟ.  ಭುಜಕ್ಕೆ ತೂಗು ಹಾಕಿದ ಕ್ಯಾಮರಾದಿಂದ ನಾಲ್ಕೈದು ಫೋಟೋ ಹೊಡೆದ. ಮುರ್ಳಿ ಇದನ್ನು ನೋಡಿ "ಆಲ್ಲೇನಿದೇಂತ ಪೋಟೋ ಹೊಡೀತೀರಾ ಸಾ?  ಇಲ್ಲಿ ಬನ್ನಿ. ದೇವ್ರು ಇಲ್ಲಿದ್ದಾನೆ" ಎಂದು ಗರ್ಭಗುಡಿಯತ್ತ ಕ್ಕೆ ತೋರಿಸಿದ.

ಅವನು "ನೀನಿವುಗಳನ್ನು ನೋಡಿದ್ದೀಯಾ ಮುರ್ಳಿ" ಎಂದು ಶಿಲ್ಪಗಳನ್ನು ತೋರಿಸಿದ.  ಅದೇನೆಂದು ಮುರ್ಳಿಗೆ ನಿಧಾನವಾಗಿ ಆರ್ಥವಾಗತೊಡಗಿ ಅವನು ಕೆಂಪೇರುತ್ತಾ  ಹೋದ.  "ಥೂ ಪೋಲಿ ಶಿಲ್ಪಗಳು ಸಾ. ಅಸಯ್ಯ" ಎಂದು ಮುಖ ಕಿವುಚಿದ.  "ಇಲ್ಲಿಗೆ ವಾರಕ್ಕೊಮ್ಮೆ ಬರ್ತಿರ್ತೀನಿ ಸಾ ‌ಆದ್ರೆ ಇವನ್ನ ನೋಡೋದು ಇದೇ ಮೊದ್ಲು.  ಇವನ್ನು ನೋಡ್ತಾ ಇದ್ರೆ ದೇವ್ರ ನೆನಪಾಗೋದುಂಟಾ ಬನ್ನಿ ಸಾ ದೇವರತ್ರ ಹೋಗಾನ" ಎಂದು ಕೈ ಹಿಡಿದೆಳೆದ.

ಅಲ್ಲಿದ್ದದ್ದು ಅರ್ಚಕರು ಮಾತ್ರ.  ಅವರಿಬ್ಬರ ಮಾತು ಕೇಳಿ ದೂರದಲ್ಲಿದ್ದ ಅವರು ಕುತೂಹಲದಿಂದ ಹತ್ತಿರ ಬಂದರು.  ದೇವಾಲಯಗಳ ಬಗ್ಗೆ ಸಂಶೋಧನೆ ನಡೆಸುತ್ತಿದ್ದ ಅವನ ವಿಚಾರ ತಿಳಿದು ಸಂತೋಷಪಟ್ಟರು.  ಅರ್ಚಕರು ಒಂದು ಒಂದು ಫೋಟೋ ತೆಗೆದಾಗ ಅವರು ಖುಷಿಯಿಂದ ಜನಿವಾರ ನೀವಿಕೊಂಡರು. ಮುರ್ಳಿಯೂ ಒಂದು ಪೋಸು ಕೊಟ್ಟ.  ಮುರ್ಳಿ ಅಡ್ಡಬಿದ್ದು ಪ್ರಸಾದ ತೆಗೆದುಕೊಳ್ಳುವಾಗ ಆತ ಇನ್ನೊಂದು ಫೋಟೋ ಹೊಡೆದ.  ಮುರ್ಳಿಗೆ ತುಂಬಾ ಖುಷಿಯಾಯಿತು.

ಒಳಭಾಗದ ಕಲ್ಲು ಹಾಸಿನ ಮೇಲೆ ಮೂವರೂ ಕೂತರು.  ದೇವಾಲಯದ ಇತಿಹಾಸ ಅರ್ಚಕರಿಗೆ ಗೊತ್ತಿರಲಿಲ್ಲ.  ಸ್ಥಳ ಪುರಾಣದ ಬಗ್ಗೆ ತುಂಬಾ ಹೇಳಿದರು.  "ನೀವು ಮುರ್ಳಿಗೆ ತೋರಿಸುತ್ತಿದ್ರಲ್ಲಾ ಆ ಶಿಲ್ಪಗಳು.  ಅವುಗಳನ್ನು ದೇವಸ್ಥಾನದಲ್ಲೇಕೆ ಕೆತ್ತುತ್ತಾರೆ ಆನ್ನೋದು ನನಗೆ ಇನ್ನೂ ಗೊತ್ತಾಗಿಲ್ಲ.  ಮುರ್ಳಿಗೆ ಹೇಳುತ್ತಿದ್ದುದೆಲ್ಲಾ ನನಗೆ ಕೇಳಿಸ್ತು. ಆದ್ರೆ ಸಂಶಯ ಹಾಗೆ ಉಳ್ಕೊಂಬಿಟ್ಟಿದೆ."

ಅವನು ನಕ್ಕ.  "ನಾನು ಓದಿ ತಿಳ್ಕೊಂಡಿರೋದನ್ನ ಹೇಳಬಲ್ಲೆ.  ಬಹಳ ಹಿಂದೆ ದೇವಾಲಯಗಳು ಊರಿನ ಇಡೀ ಸಾಂಸ್ಕೃತಿಕ ಬದುಕನ್ನು ರೂಪಿಸುತ್ತಿದ್ದುವಂತೆ.  ಬರೀ ನಮಸ್ಕಾರ ಮಾಡಲು ಜನ ದೇವಾಲಯಕ್ಕೆ ಬರುತ್ತಿದ್ದುದಲ್ಲ.  ಹುಟ್ಟು, ಮದುವೆ, ಸಾವು, ಹಬ್ಬ ಎಲ್ಲಾ ದೇವಾಲಯಗಳಲ್ಲೇ ಆಚರಿಸಲ್ಪಡುತ್ತಿದ್ದುವಂತೆ.  ಸೃಷ್ಟಿಗೂ ದೇವಾಲಯಗಳು ಮಹತ್ವ ನೀಡುತ್ತಿದ್ದವಂತೆ.  ಅದಕ್ಕೇ ಪೂಜಾಸ್ಥಳಗಳಲ್ಲಿ ಮೈಥುನದ ಶಿಲ್ಪಗಳನ್ನು ಕೆತ್ತಿದರು.  ಸೃಷ್ಟಿ ಕ್ರಿಯೆಯಲ್ಲಿ ದ್ಯೆವತ್ವವನ್ನು ಕಂಡರು.  ಲಿಂಗ ಮತ್ತು ಪಾಣಿ ಪೀಠಗಳ ಸಂಕೇತ ನಿಮಗೆ ಗೊತ್ತಲ್ಲಾ?"

ಅವನ ಪ್ರಶ್ನೆಗೆ ಅರ್ಚಕರು ಗಹಗಹಿಸಿ ನಕ್ಕರು.  ಮುರ್ಳಿ ತನ್ನ ಕೈಯ ಕರವಸ್ತ್ರವನ್ನು ತಿರುಚಿದ ಕೆಳತುಟಿಯನ್ನು ಕಚ್ಚಿಕೂಂಡ.  "ನೀವು ಹೇಳೋದನ್ನು ನಾನು ನಂಬೋಲ್ಲ ಸಾ" ಎಂದು ಕಷ್ಟಪಟ್ಟು ಹೇಳಿದ.

ಅರ್ಚಕರ ಮುಖದಲ್ಲಿ ನಗು ಲಾಸ್ಯವಾಡುತ್ತಿತ್ತು.  "ನಿಮ್ಮ ತರ್ಕ ಸರಿ.  ಇಲ್ಲಿಗೆ ಬರೋ ಜನನ್ನ ನೋಡಿದ್ರೆ ನಂಗೇ ಒಮ್ಮೊಮ್ಮೆ ಬೇಸರ ಆಗುತ್ತೆ.  ಎಲ್ಲಾ ಆಚಾರ ಮತ್ತು ಶೋ ಮಾತ್ರ.  ವಿಚಾರ ಏನೂ ಇರೋದಿಲ್ಲ.  ವಿಚಾರವೇ ಇಲ್ಲದ ಆಚಾರಕ್ಕೆ ಏನು ಆರ್ಥವಿದೆ ಆಲ್ವೆ?"

ಆವನು ತಲೆದೂಗಿದ.  "ನನ್ನ ಆಧ್ಯಯನಕ್ಕೆ ನಿಮ್ಮ ಸಹಾಯ ಬೇಕು.  ಈ ದೇವಾಲಯದ ಇತಿಹಾಸ ನನಗೆ ಎಲ್ಲಿ ಸಿಗಬಹುದು ಹೇಳ್ತೀರಾ?"

"ಓಹೋ ಅದಕ್ಕೇನು? ನೀವು ಇವರ ದೊಡ್ಡ ದನಿಗಳನ್ನು ನೋಡಿದ್ರಾಯ್ತು.  ಪಾಪ ವಯಸ್ಸಾಗಿದೆ.  ಅವರಷ್ಟು ತಿಳ್ಕೊಂಡಿರೋರು ಈ ಫಾಸಲೆಯಲ್ಲಿ ಯಾರೂ ಇಲ್ಲ.  ದೇವಾಲಯದ ಕಲ್ಲು ಕಲ್ಲೂ ಆವರಿಗೆ ಗೊತ್ತು.  ಅವ್ರನ್ನೇ ಕೇಳಿ ತಿಳ್ಕೊಂಡ್ರಾಯ್ತು ಬಿಡಿ" ಎಂದು ಅರ್ಚಕರು ಮುರ್ಳಿಗೆ ಒಂದು ಪೊಟ್ಟಣ ಕೊಟ್ಟು "ಯಜಮಾನ್ರಿಗೆ ಪ್ರಸಾದ" ಎಂದು ಇವನತ್ತ ನೋಡಿ "ನೀವು ನಮಸ್ಕಾರ ಮಾಡಿದ್ದನ್ನ ನೋಡ್ಲಿಲ್ಲ.  ಬಲವಂತತಕ್ಕೆ ಪ್ರಸಾದ ಕೊಡೋವನಲ್ಲ ನಾನು" ಎನ್ನುತ್ತಾ ನಕ್ಕರು.

ಅವನೂ ನಕ್ಕ.  "ಸಾಂಸ್ಕೃತಿಕವಾಗಿ ದೇವಾಲಯಗಳು ಮಹತ್ವ ಪಡೆದರೆ, ಎಲ್ಲಾ ಜಾತಿಗಳ ಜನರನ್ನು ಸಮಾನವಾಗಿ ದೇವಾಲಯಗಳಿಗೆ ನೋಡೋಕ್ಕೆ ಸಾಧ್ಯವಾದರೆ  ಎಷ್ಟು ಒಳ್ಳೆಯದಿತ್ತು ಅಲ್ವಾ?  ಹಣ ಮತ್ತು ಜಾತಿಯೇ ದೇವರಿಗೆ ಮುಖ್ಯ ಎಂದಾಗ ಕೂಡದು ಎನ್ನುವವ ನಾನು.  ಆದುದರಿಂದ ಇನ್ನೂ ನನ್ನ ಕೆಲವು ಸಂಶಯಗಳು ಹಾಗೆ  ಉಳಿದಿವೆ" ಅಂದ.

ಅವನು ನಿಧಾನವಾಗಿ ಎದ್ದ.  "ಪ್ರಯಾಣದ ಸುಸ್ತು.  ನಾಳೆ ಬೆಳಿಗ್ಗೇ ಬಂದ್ಬಿಡ್ತೀನಿ.  ನಿಮ್ಮಿಂದ ತುಂಬಾ ತಿಳ್ಕೋಬೇಕು ನಾನು" ಎಂದದ್ದಕ್ಕೆ ಅರ್ಚಕರು, "ನೀವು  ಎಷ್ಟೊಂದು ಓದ್ಕೊಂಡಿದೀರಿ!  ಬಾಳಾ ಇಂಟ್ರೆಸ್ಟಿಂಗ್ ಇದ್ದೀರಿ ನೀವು!  ನಾಳೆ ಸಂಜೆ ನನಗೆ ಬಿಡುವಿರತ್ತೆ.  ದೇವಾಲಯಗಳ ಬಗ್ಗೆ ನೀವು ಓದಿದ್ದನ್ನು ಹೇಳಿದ್ರೆ ಸಾಕು. ನಂಗೂ ಒಂದು ಚೇಂಜು ಸಿಗುತ್ತೆ" ಎಂದು ಅವನನ್ನು ಬೀಳ್ಕೊಟ್ಟರು.

ವಾಪಸ್ಸು ಬರುವಾಗ ಮುರ್ಳಿ ಮಾತಾಡಲೇ ಇಲ್ಲ.  ಶಿಲ್ಪಗಳನ್ನು ನೋಡಿದ ಶಾಕ್‍ನಿಂದ ಆತ ಹೊರಬಂದಿರಲಿಲ್ಲ.  ಅರ್ಚಕರ ಮಾತು ಆವನನ್ನು ಮತ್ತಷ್ಟು, ಗೊಂದಲಕ್ಕೆ ದೂಡಿತ್ತು.  ಮೌನದಲ್ಲಿ ದಾರಿ ಸಾಗಿತು.

ಅವಳ ಮನೆಗೆ ಮುಟ್ಟುವಾಗ ಮಬ್ಬುಗತ್ತಲು ಕವಿಯುತ್ತಿತ್ತು.  ಮುರ್ಳಿ ಕಂಪೌಂಡು ಗೇಟಿನಿಂದಲೇ ಆವನನ್ನು ಬೀಳ್ಕೊಂಡ.  "ನಾಳೆ ಬೆಳಿಗ್ಗೆ ದೇವಸ್ಥಾನಕ್ಕೆ  ಬರ್ತಿಯಾ ಮುರ್ಳಿ" ಎಂದು ಕೇಳಿದ್ದಕ್ಕೆ  "ನೋಡೋಣ" ಎಂದು ವಿಶ್ವಾಸವೇ ಇಲ್ಲದ ದನಿಯಲ್ಲಿ ಅವನು ಉತ್ತರಿಸಿದ.

ಅವಳದು ದೊಡ್ಡ ಮನೆ.  ಮಾವನಿಗೆ ಪಾರ್ಶ್ವವಾಯು.  ಅತ್ತೆ ಹಿಂದಿನ ವರ್ಷ ತೀರಿಕೊಂಡಿದ್ದರು.  ಮನೆಯಲ್ಲಿ ಇಬ್ಬರು ಆಳುಗಳು.  ಅವಳು ಮನೆಯನ್ನು ತೋರಿಸುತ್ತಾ ಅವನನ್ನು ದೊಡ್ಡದಾದ ಕೋಣೆಯೊಂದಕ್ಕೆ ಕರೆದುಕೊಂಡು ಹೋದಳು.  ಅಲ್ಲಿ ಆರು ಕಪಾಟು ಭರ್ತಿ ಪುಸ್ತಕಗಳು!  ಇದು ನಿಮ್ದೇ ಪ್ರಭಾವ ಸಾ.  ಈಗ್ಲೂ ಎಷ್ಟೊಂದು ಓದ್‍ತಿರ್ತೀನಿ ಗೊತ್ತಾ?"  ಎಂದು ಹೆಮ್ಮೆಯಿಂದ ಹೇಳಿಕೊಂಡಳು.  ನಿಮಗೆ ಇಲ್ಲಿ ವ್ಯವಸ್ಥೆ ಮಾಡಿದ್ದೀನಿ" ಎಂದು ಮಹಡಿ ತೋರಿಸಿ ಮೇಲಕ್ಕೆ ಹತ್ತಿದಳು.  ಒಂದು ಕೋಣೆಯ ಬಾಗಿಲು ತೆಗೆದು, "ನಿಮ್ಮ ಸ್ಟಡಿ ಮುಗಿಯೋವರ್ಗೂ ಇದು ನಿಮ್ದೇ" ಎಂದಳು.

ಡಬಲ್‍ಕಾಟ್ ಹಾಕಿದ ದೊಡ್ಡ ಕೋಣೆ ಅದು.  ವಾರ್ಡ್ರೋಬ್, ನಿಲುವುಗನ್ನಡಿ, ಬುಕ್‍ರ್‍ಯಾಕ್, ಟೇಬಲ್ಯಾಂಪು, ಸ್ಟೀರಿಯೋ ಉಳ್ಳ ಏರ್ಕಂಡಿಶನ್ಡ್ ರೂಮು.  ಅದಕ್ಕೆ ಅಟ್ಯಾಚ್ಡ್ ಬಾತ್‍ರೂಂ ಮತ್ತು ಟ್ಯಾಲೆಟ್ಟು.  ಅವನ ಬ್ಯಾಗು ಆಲ್ಲೇ ಟೇಬಲ್ ಮೇಲೆ ಅವನನ್ನು ಕಾಯುತ್ತಿತ್ತು.  "ನಲ್ಲಿಯಲ್ಲಿ ಬಿಸಿನೀರು ಬರ್ತದೆ.  ಆರ್ಧ ಗಂಟೆಯಲ್ಲಿ ಎಲ್ಲಾ ಮುಗ್ಸಿ ಊಟಕ್ಕೆ ಕೆಳಕ್ಕೆ ಬಂದ್ಬಿಡಿ. ಮಾವ ಕಾದಿರ್ತಾರೆ" ಎಂದು ಕೆಳಗಿಳಿದು ಹೋದಳು.

ಹಿತವಾದ ಬಿಸಿನೀರು ಸ್ನಾನ ಮುಗಿಸಿ ಅವನು ಕೆಳಗಿಳಿದ.  ಮಾವ ವೀಲ್‍ಚೇರ್ನಲ್ಲಿ ಕೂತು ಟಿ.ವಿ. ನೋಡುತ್ತಿದ್ದರು. ಅವನು ನಮಸ್ಕಾರ ಮಾಡಿದಾಗ ಬಲದ ಕೈ ಎತ್ತಿದರು.  ಅವಳು ಮಾವನ ಪಕ್ಕದ ಚೇರೊಂದರಲ್ಲಿ ಕೂತು ಅವನನ್ನು ಕಾಯುತ್ತಿದ್ದಳು.  ಮಾವ ನಿಧಾನವಾಗಿ "ನಿಮ್ಮ ಬಗ್ಗೆ ಎಲ್ಲಾ ಹೇಳಿದ್ಲು. ನೀವು ದೇವಸ್ಥಾನಗಳ ಬಗ್ಗೆ ಏನೋ ರಿಸಚ್೯ ಮಾಡ್ತೀದ್ದೀರಂತೆ." ಯಾವ ಸಬ್ಜೆಕ್ಟು ಎಂದು ಕೇಳಿದರು.

ಅವರ ನೇರಕ್ರಮ ಅವನಿಗೆ ತುಂಬಾ ಹಿಡಿಸಿತು.  "ದೇವಾಲಯಗಳ ಮಿಥುನ ಶಿಲ್ಪಗಳು ನನ್ನ ಸಬ್ಜೆಕ್ಟು.  ಆರಾಧನಾ ವಿಧಾನಗಳ ವಿಕಾಸದ ಬಗ್ಗೆಯೂ ಟಚ್ಚ್ ಮಾಡ್ತಿದೀನಿ.  ನಿಮ್ಮ ದೇವಾಲಯದಲ್ಲಿ ಕೆಲವು ಹೊಸ ಶಿಲ್ಪಗಳನ್ನು ನೋಡಿದೆ" ಎಂದ.

ಅವರ ಬಲ ಹುಬ್ಬು, ಒಮ್ಮೆ ಮೇಲೇರಿತು.  "ನನಗೆ ಇನ್ನೂ ಅರ್ಥವಾಗಿಲ್ಲ ನೋಡಿ ಸಾಮಾನ್ಯವಾಗಿ ವಿಷ್ಣುವಿನ ದೇವಾಲಯಗಳಲ್ಲಿ ಅಂತಹ ಶಿಲ್ಪಗಳಿರುತ್ತವೆ. ಪಶುಪತಿಯನ್ನು ಲಿಂಗ ರೂಪದಲ್ಲಿ ಆರಾಧಿಸಲಾಗುತ್ತದೆ.  ಶೈವ ದೇವಾಲಯಗಳಲ್ಲಿ ಈ ತೆರನ ಶಿಲ್ಪಗಳಿರೋದನ್ನ ಬೇರೆಲ್ಲೂ ಕಂಡಿಲ್ಲ"

"ಹಾಗೇನೂ ಇಲ್ಲ.  ಮೈಥುನನ್ನು ಅತ್ಯಂತ ಸಹಜ ಅವಸ್ಥೆ ಎಂದು ಸ್ವೀಕರಿಸಿದ ಹಿರಿಯರು ಶೈವ ದೇವಾಲಯಗಳಲ್ಲೂ ಅಂತಹ ಶಿಲ್ಪಗಳಿಗೆ ಅವಕಾಶ  ನೀಡಿದ್ದಾರೆ" ಆವನೆಂದ.

"ಹಾಗೇನು?  ಉರ್ಳಿ ನಿಮ್ಗೆ ಒಂದಷ್ಟು ತಿಳಿಸಿಬೇಕು.  ಇಮ್ಮನ ಬೆಟ್ಟದ ಗಲಾಟೆ ಬಗ್ಗೆ.  ಬೆಟ್ಟಕ್ಕೆ ಆ ಹೆಸರು ಬಂದ ಬಗ್ಗೆ.  "ಅವನು ಹೌದೆಂದು ತಲೆಯಾಡಿಸಿದ.  ಅವರು ಮುಂದುವರಿಸಿದರು.  "ಈಗಿನವರಿಗೆ ಗೊತ್ತಿರದ ವಿಷಯ ಒಂದುಂಟು.  ತಿಮ್ಮನ ಸಾವು ಆಕಸ್ಮಿಕ ಅಲ್ಲ.  ಅದೊಂದು ಯೋಚಿತ ಕೊಲೆ!"

ಅವನು ಸ್ತಬ್ಬನಾದ.  ಅವಳದ್ದೂ ಅದೇ ಅವಸ್ಥೆ.  ಅವರಿಬ್ಬರನ್ನೂ ಗಮನಿಸಿದ ಮಾವ ನಿಧಾನವಾಗಿ ಮಾತು ಮುಂದುವರಿಸಿದರು. "ನಿಮ್ಮ ರಿಸರ್ಚ್ಗೆ ನೆರವಾದೀತು ಎಂದು ಇದನ್ನು ಹೇಳುತ್ತಿದ್ದೇನೆ.  ದೇವಸ್ಥಾನದ ಧ್ವಜ ಕಂಬ ಗೆದ್ದಲು ತಿಂದು ಮುರಿಯುವುದರಲ್ಲಿತ್ತು.  ಅದು ಅರ್ಚಕರಿಗೆ ಚೆನ್ನಾಗಿ ಗೊತ್ತಿತ್ತು.  ತಿಮ್ಮನ ಸಾಹಸದ ಮೇಲೆ ನಂಬಿಕೆಯಿದ್ದುದರಿಂದ ಧ್ಚಜ ಏರಿಸುವಾಗ ಹಗ್ಗದ ಗಂಟು ಬಿಗಿಯುವಂತೆ ಮಾಡಿದ್ದು ಆವರೇ.  ತಿಮ್ಮ ದೇವಸ್ಥಾನದ ಕಾವಲುಗಾರ ನೋಡಿ, ಧೈರ್ಯ ಮಾಡಿ ದ್ವಜಕಂಬಕ್ಕೆ ಹತ್ತಿದ.  ಮುಂದಿನದ್ದು ನಿಮಗೆ ಗೊತ್ತೇ ಇದೆ".

ಅವನಿಗೆ ನಂಬಿಕೆ ಬರಲಿಲ್ಲ.  "ತಿಮ್ಮನನ್ನು ಅವರು ಯಾಕೆ ಕೊಲ್ಲಿಸಬೇಕಿತ್ತು ಅದೂ ಜಾತ್ರೆ ನಿಲ್ಲುತ್ತದೆಂದು ತಿಳಿದೂ?"  ಅವರ ಮುಖದಲ್ಲಿ ಮಂದಹಾಸ ಜಿನುಗಿತು.  ಸ್ವರ ತಗ್ಗಸಿ ನಿಧಾನವಾಗಿ ಹೇಳಿದರು. "ಆಗಿನ ಆರ್ಚಕರಿಗೆ ಸಂತಾನ ಲಕ್ಷ್ಮಿ ಒಲಿದಿರಲಿಲ್ಲ.  ಅವರ ಹೆಂಡತಿ ಹೇಗಿದ್ದರಂತೆ ಗೊತ್ತಾ? ನಮ್ಮ ಸಿನಿಮಾದವರನ್ನು ಅವರ ಮುಂದೆ ನಿವಾಳಿಸಿ ಒಗೆಯಬೇಕು.  ಪಶುಪತಿಯನ್ನು ಏಳುರಾತ್ರಿ ಏಕಾಂತದಲ್ಲಿ ಪ್ರಾರ್ಥಿಸಿ ಒದ್ದೆ ಬಟ್ಟಿಯಲ್ಲಿ ಉರುಳುಸೇವೆ ಮಾಡಿದ್ರೆ ಪಶುಪತಿ ಸಂತಾನಭಾಗ್ಯ ಕರುಣಿಸುತ್ತಾನೆ ಎನ್ನುವುದು ಇಲ್ಲಿನ ನಂಬಿಕೆ ಸೋಡಿ.  ಆ ಅಮ್ಮ ಏಳು ರಾತ್ತಿ ಸೇವೆ ಮಾಡಿದ್ದು.  ಗರ್ಭವತಿಯೂ ಆದ್ಲು."  ಅವರು ಮಾತು ನಿಲ್ಲಿಸಿದರು.

"ಅದಕ್ಕೆ ತಿಮ್ಮನನ್ನು ಯಾಕೆ ಕೊಲ್ಲಿಸಬೇಕಿತ್ತು?"

ಅವನ ಪ್ರಶ್ನೆಗೆ ಅವರು ನಕ್ಕರು.  "ಅಯ್ಯೋ ನಿಮ್ಮ!  ನಿಮಗೆ ಅರ್ಥ ಆಗಲಿಲ್ಲ?  ಆ ಚೆಂದುಳ್ಳಿ ಹಸಿ ಹೆಣ್ಣು ರಾತ್ರೆ ಒದ್ದೆ ಬಟ್ಟೆಯಲ್ಲಿ ಒಂಟಿಯಾಗಿ ದೇವಸ್ಥಾನಕ್ಕೆ ಹೋಗುತ್ತಿದ್ದಾಗ ಅಲ್ಲಿರುತ್ತಿದ್ದುದು ತಿಮ್ಮ ಮಾತ್ರ.  ಆಗ ಅವನಿಗೆ ನಲುವತ್ತು ಇರಬಹುದೇನೋ?  ಕಷ್ಟಪಟ್ಟು ಬೆಳೆದ ಗಟ್ಟಿಜೀವ.  ಉಪ್ಪು ಹುಳಿ ತಿಂದ ದೇಹ ನೋಡಿ.  ಅದೂ ಆ ಅಮ್ಮ ಅವಳಾಗಿಯೇ ಬಂದು ಇವನನ್ನು ತಬ್ಬಿಕೊಂಡಾಗ ಏನಾಗಬೇಕೋ ಆದು ಆಯ್ತು.  ಅರ್ಚಕರಿಗೂ ಗೊತ್ತಿತ್ತು.  ಉರುಳುಸೇವೆಯಿಂದ ಮಕ್ಕಳಾಗುವುದಿಲ್ಲ ಎಂದು.  ಹಿಂದಿನ ಅರ್ಚಕರಿಗೆ ಸಂತಾನಭಾಗ್ಯ ನೀಡುವ ಶಕ್ತಿ ಇತ್ತು.  ಇವರಿಗೆ ಅದು ಇರಲಿಲ್ಲ.  ಅರ್ಚಕರಿಗೇ ಮಕ್ಕಳಾಗದಿದ್ದರೆ ಸ್ಥಳದ ಕಾರ್ಣಿಕವನ್ನು ಯಾರು ನಂಬುತ್ತಾರೆ?  ಹೇಗಾದರೂ ಸ್ಥಳದ ಕಾರ್ಣಿಕವನ್ನು ಉಳಿಸಿಕೊಳ್ಳಬೇಕಿತ್ತು.  ಗುಟ್ಟನ್ನೂ ಕಾಪಾಡಿಕೊಳ್ಳಬೇಕಿತ್ತು.  ಸಾಧುಪ್ರಾಣಿ ತಿಮ್ಮ ಅದಕ್ಕೆ ಹೇಳಿಮಾಡಿಸಿದಂತಿದ್ದ.  ಆದರೂ ಎಲ್ಲಾದರೂ ಗುಟ್ಟು ರಟ್ಟಾದೀತೆಂದು ಹೆದರಿ ಅವನನ್ನು ಮುಗಿಸಿಬಿಟ್ಟರು.  ಈಗಲೂ ಇಲ್ಲಿನ ಮುಖ್ಯ ಆಕರ್ಷಣೆ ಈ ಕಾರಣಿಕವೇ".

ಅವರು ಜೋರಾಗಿ ನಕ್ಕರು.  ಅವಳಿಗೂ ನಗು ತಡೆಯಲಾಗಲಿಲ್ಲ.  ಅವನು ಮಾತ್ರ ನಗಲಿಲ್ಲ.  ಮಾವ ಅವನನ್ನು ಗಮನಿಸಿ "ನಿಯೋಗ ಕ್ರಮದಿಂದ ಮಕ್ಕಳನ್ನು ಪಡೆಯುವುದಕ್ಕೆ ಶಾಸ್ತ್ರಾಧಾರವಿದೆಯಲ್ಲಾ?" ಎಂದು ಕೇಳಿದರು.

"ಅದೇನೋ ಸರಿಯೇ.  ಆದರೆ ನಿಯೋಗ ಕ್ರಿಯೆಗೆ ಬುದ್ದಿವಂತರನ್ನು ಮಾತ್ರವೇ ಆರಿಸುತ್ತಿದ್ದರು.  ಪ್ಲೇಟೋನ ರಿಪಬ್ಲಿಕ್ ಓದಿದ್ದೀರೇನೋ?  ಆದರಲ್ಲಿ ಮಕ್ಕಳನ್ನು ಮೇಧಾವಿ ಗಂಡಸಿಂದ ಮಾತ್ರ ಪಡೆಯಬೇಕೆಂದಿದೆ.  ಆದರೆ ನಿಮ್ಮ ತಿಮ್ಮ ಎಂಥ ಮೇಧಾವಿ?"

ಅವಳ ಮಾವ ಮತ್ತೊಮ್ಮೆ ನಕ್ಕರು.  "ಶಾಸ್ತ್ರದಲ್ಲಿ ಆನುಕೂಲ ಶಾಸ್ತ್ರ ಅಂತ ಒಂದಿದೆ ನೋಡಿ.  ಸಂತಾನ ಅಗುವುದು ಇಲ್ಲಿ ಮುಖ್ಯವಾಗಿತ್ತು.  ಎಂತಹ ಬೀಜ ಎಂಬುದಲ್ಲ.  ಕಾರಣಿಕ ಮತ್ತು ಗುಟ್ಟು ಉಳಿಸುವುದಕ್ಕೆ ತಿಮ್ಮನಂತ ವ್ಯಕ್ತಿ ಬೇರೆ ಇರಲಿಲ್ಲ.  ಕೊನೆಗೂ ಮಾತೃತ್ವ ಮಾತ್ರ ವಾಸ್ತವ ಮತ್ತು ಪಿತೃತ್ವ ಕಲ್ಪನೆಯೇ ಅಲ್ಲವೇ?"

ಈಗ ಅವನಿಗೂ ನಗು ಬಂತು. "ಹಾಗಾದರೆ ಈ ಗುಟ್ಟು ಹೊರಬಂದದ್ದು ಹೇಗೆ?"

"ಓ ಅದೋ? ತಿಮ್ಮ ಸತ್ತ ದಿನದಿಂದ್ಲೇ ಆಯಮ್ಮ ಮಂಕಾಗಿದ್ಲಂತೆ.  ಏನೇನೋ ಮಂತ್ರ, ತೀರ್ಥ, ತಾಯಿತ ಯಾವುದೂ ಪ್ರಯೋಜನಕ್ಕೆ ಬರ್ಲಿಲ್ಲ. ದೇವರ ದಯೆಯಿಂದ  ಗರ್ಭಕ್ಕೇನೂ ತೊಂದರೆಯಾಗಲಿಲ್ಲ.  ಮಗು ಕೂಡಾ ಆರೋಗ್ಯವಾಗೇ ಇತ್ತು.  ಆದರೆ ಆಯಮ್ಮ ಮತ್ತೂ ಮಂಕಾಗಿಯೇ ಇದ್ಲಂತೆ.  ಹೆರಿಸಲಿಕ್ಕೆ ಬಂದ ಸೂಲಗಿತ್ತಿಯಲ್ಲಿ ಈ  ಮಗುವಿನ ಅಪ್ಪ ಧ್ವಜಕಂಬದಿಂದ ಬಿದ್ದು ಸತ್ತ ಎಂದದ್ದೇ ಊರಿಗೆಲ್ಲಾ ವಿಷಯ ಗೊತ್ತಾಯಿತು.  ಮಗುವಿಗೆ ಒಂದು ತಿಂಗಳಾಗುವಾಗ ಅಮ್ಮ ನೇಣು ಹಾಕ್ಕೊಂಡ್ಳಂತೆ.  ಅದು ತಿಮ್ಮನ ಪ್ರೇತ ಚೇಷ್ಟೆ ಎಂದು ಅರ್ಚಕರು ಶಾಂತಿ ಹೋಮ ಮಾಡಿಸಿದ್ರಂತೆ.  ಊರವರು ನಂಬಿದ್ರು.  ಕಾಲ ಎಲ್ಲವನ್ನೂ ನುಂಗಿ ಬಿಡುತ್ತೆ ನೋಡಿ."

ಸ್ವಲ್ಪ ಹೊತ್ತು ವಿಷಾದದ ಮೌನ. ಅವನು ಮೌನದ ಚಿಪ್ಪನ್ನೊಡೆದ. "ಮಗುಬೇಕೆಂದು ಹಂಬಲಿಸಿ ವ್ರ್‍ಅತ ಮಾಡಿ ತಿಮ್ಮನಿಂದ ಮಗುವನ್ನು ಪಡೆದ ಆ ಅಮ್ಮ ಆತ್ಮಹತ್ಯೆ ಮಾಡಿಕೊಳ್ಳುವಷ್ಟು ದುರ್ಬಲ ಮನಸ್ಸಿನವರಾಗಿರಲು ಸಾಧ್ಯವೇ?  ಇಲ್ಲೂ ಒಂದು ಕೊಲೆಯ ಸಂಚು ಇರಲಾರದೇಕೆ?"

ಅವಳ ಮಾವ ಒಂದು ಬಾರಿ ಕೆಮ್ಮಿದರು.  "ನಿಮ್ಮ ತರ್ಕವೇನೋ ಸರಿಯೇ.  ಆ ಅಮ್ಮ ಪಾಪಪ್ರಜ್ಞೆ ಕಾಡಿ ದುರ್ಬಲ ಗಳಿಗೆಯೊಂದರಲ್ಲಿ ಹಗ್ಗ ತಗೊಂಡದ್ದೆಂದು ನನಗನಿಸುವುದಿಲ್ಲ.  ತಿಮ್ಮನನ್ನು ಕೊಂದದ್ದೇ ಅಮ್ಮನ ಮನಸ್ಸು ಅಸ್ವಸ್ಥವಾಗಲು ಕಾರಣವಾಗಿರಬೇಕು.  ಮಗು ಪಡೆದದ್ದು ಗಂಡನ ಸಮ್ಮತಿ ಇದ್ದೇ ಅಲ್ಲವೇ? ಅದು ಪಾಪ ಎಂಬ ಭಾವನೆ ಇದ್ದಿದ್ದರೆ ಅವರು ಉರುಳುಸೇವೆಗೆ ಹೋಗ್ತಾನೇ ಇದ್ದಿರಲಿಲ್ಲ.  ತಿಮ್ಮನ ಕೊಲೆಗೆ ತಾನೇ ಕಾರಣನಾದೆ ಎಂಬ ನೋವಿನಿಂದ ಅವರು ಹಗ್ಗ ತೆಗೊಂಡಿರಬೇಕು."

ಅವನು ತಲೆದೂಗಿದ. "ಇನ್ನೂ ಒಂದು ಸಂಶಯ ಉಳ್ಕೊಂಬಿಡ್ತು ನೋಡಿ. ಗುಡ್ಡೆಗೆ ವಿಷ್ಣು ಅಂತ ಹೆಸರಿಡಲು ಹೋಗಿ ಗಲಾಟೆ ಆಯ್ತೂಂತ ಮುರ್ಳಿ ಹೇಳ್ದ.  ಹೆಸರು ಬದಲಾವಣೆಗೆ ಮುಖ್ಯ ವಿರೋಧ ಅರ್ಚಕರದ್ದೇ ಅಂತೆ!  ಇಲ್ಲಿ ಶೈವ ವೈಷ್ಣವ ಭಾವನೆ ಅಷ್ಟೊಂದು ತೀವ್ರವಾಗಿದ್ಯಾ?"

ಆವಳ ಮಾವ ಗಟ್ಟಿಯಾಗಿ ನಕ್ಕರು.  "ಛೆ!ಛೆ! ಹಾಗೇನಿಲ್ಲ.  ಕತೆ ಆಲ್ಲಿಗೆ ಮುಗೀಲಿಲ್ಲ ಹೀಗೆ ಹುಟ್ಟಿದ ಮಗುವಿಗೆ ಉಪನಯನ, ವೇದಾಧ್ಯಯನ ಎಲ್ಲಾ ನಡೆಯಿತು. ಊರ ಇನ್ನೊಂದು ವೈದಿಕ ಕುಟುಂಬ ಆ ಮಗುವಿನ ಮೂಲವನ್ನು ಪ್ರಶ್ನಿಸಿ ಅರ್ಚಕವೃತ್ತಿ ತನಗೆ ಸಿಗಬೇಕೆಂದು ತಗಾದೆ ತೆಗೆಯಿತು.  ಆದ್ರೆ ಅರ್ಚಕರು ಆದೆಲ್ಲಾ ಆಗದವರ ಮಾತು.  ಅವಳಿಗೆ ವ್ರತ ಮೆಟ್ಟಿ ಏನೇನೋ ಹೇಳಿದ್ದನ್ನು ನಂಬುವವರಿಗೆ ಬುದ್ದಿ ಇಲ್ಲ.  ಗರ್ಭಿಣಿಯರಿಗೆ ಮತ್ತು ಹೆತ್ತವರಿಗೆ ಪ್ರೇತಚೇಷ್ಟೆ ಇರೋದೇ. ಅದಕ್ಕಾಗಿ ಶಾಂತಿ ಹೋಮ ಮಾಡಿ, ಪ್ರೇತ ಉಟ್ಟಾಟನೆ ಆದ ಮೇಲೆ ಇನ್ನೇನು?" ಎಂದು ದಬಾಯಿಸಿದರು.  ಸೂಲಗಿತ್ತಿಗೆ ಸ್ವಲ್ಪ ಕೊಟ್ಟು ಅಮ್ಮ ಹಾಗೆಲ್ಲಾ ಹೇಳಲೇ ಇಲ್ಲ.  ಪ್ರೇತಚೇಷ್ಟೆಯಿಂದ ಹುಚ್ಚು ಹಿಡ್ದು ಏನೇನೋ ಅರ್ಥವಾಗದ್ದು ಬಡಬಡಿಸುತ್ತಿದ್ದುದು ಹೌದು ಎಂದು ಹೇಳಿಸಿದ್ರು.  ಆಗಿನ ಅರ್ಚಕರಲ್ಲಿ ಊರವ್ರಿಗೆ ತುಂಬಾ ವಿಶ್ವಾಸವಿತ್ತು.  ಹಾಗಾಗಿ ಆ ವಿಷಯ ಆಲ್ಲಿಗೇ ಮುಚ್ಚಿಹೋಯ್ತು.  ತಿಮ್ಮನಿಗೆ ಹುಟ್ಟಿದ ಮಗು ಅರ್ಚಕನಾಗಲು ಆ ಮೇಲೆ ಯಾವ ತಕರಾರೂ ಬರ್ಲಿಲ್ಲ.  ಈಗಿನ ಅರ್ಚಕರಿಗೆ ಮಗು ಮುತ್ತಜ್ಜನಾಗಬೇಕು.  ಈಗ ನಿಮಗೆ ಹೆಸರು ಬದಲಾವಣೆಗೆ ಇವ್ರ ವಿರೋಧದ ಕಾರಣ ಗೊತ್ತಾಯ್ತಲ್ಲಾ?"  ಎಂದು ಮತ್ತೊಮ್ಮೆ ನಕ್ಕರು.  ಅವನು ಮತ್ತು ಅವಳು ಆವರ ನಗುವಿನಲ್ಲಿ ಸೇರಿಕೊಂಡರು.

ನಗುತ್ತಲೇ ಅವಳು ಎದ್ದಳು.  ಅವರೆಗೆ ಎಲ್ಲೋ ಒಳಗಿದ್ದ ಅವಳ ಮಕ್ಕಳು ಅವರಿದ್ದಲ್ಲಿಗೆ ಬಂದರು.  ಅವರನ್ನು ನೋಡಿ ಅವಳ ಮಾವನ ಮುಖದಲ್ಲಿ ವಿಷಾದ ಮೂಡಿತು.  ಅವಳು ಆದನ್ನು ಗಮನಿಸಿ, "ನೀವಿನ್ನೂ ಮಲಗಿಲ್ವಾ?  ಬನ್ನಿ" ಎಂದು ಆವರನ್ನು ಕರೆದುಕೊಂಡು ಒಳಹೋದಳು.  ಅದನ್ನೇ ನೋಡುತ್ತಿದ್ದ ಅವಳ ಮಾವ ಅವನೊಡನೆ ಹೇಳಿದರು.  "ನನಗೆ ಇದೊಂದೇ ಚಿಂತೆ ನೋಡಿ. ಎರಡಕ್ಕೂ ಮಂದಬುದ್ಧಿ. ಇವಳದ್ದೇನೂ ತಪ್ಪಿಲ್ಲ. ನಮ್ಮ ಕುಟುಂಬದಲ್ಲಿ ಇದು ಇದ್ದದ್ದೇ.  ಹಾಗಿದ್ದೂ ರಕ್ತಸಂಬಂಧದಲ್ಲೇ ಮದ್ವೆ ಮಾಡಿ ಒಳ್ಳೆ ಹುಡ್ಗಿಗೆ ಅನ್ಯಾಯ ಮಾಡಿಬಿಟ್ಟೆ ಅನ್ನಿಸ್ತದೆ.  ಇವ್ಳು ಮಾಡೋ ಸೇವೆ ನೋಡಿದ್ರೆ, ಇವಳೆಲ್ಲೋ ನಂಗೆ ತಾಯಿಯಾಗಬೇಕಿತ್ತು.  ಆದ್ರೆ ಎಲ್ಲಾ ಇದ್ರೂ ಪಶುಪತಿ ಕಣ್ಣು ಬಿಡ್ಲಿಲ್ಲ."

ಅವನೇನೂ ಮಾತಾಡಲಿಲ್ಲ.  ಈಗ ಮಾತಿಗಿಂತ ಮೌನವೇ ವಾಸಿಯಂದು ಸುಮ್ಮನಿದ್ದ.  ವಿಷಾದದ ಗಳಿಗೆಗಳು ಕಳೆದುಹೋಗುತ್ತಿರುವಾಗ ಅವಳು ಬಂದಳು.  "ಮಲಗಿಸಿ ಬಂದೆ. ನಾವು ಊಟ ಮಾಡೋಣ್ವಾ" ಎಂದು ಅವನನ್ನು ಕೇಳಿದಳು.  ಅವನು ಅವಳ ಮಾವನನ್ನು ನೋಡಿದ.  "ನಾನು ರಾತ್ರಿ ಊಟ ಬಿಟ್ಟು ಅದೆಷ್ಟೋ ವರ್ಷವಾಯ್ತೋ! ಈಗ ತಗೊಳ್ಳೋದು ಎರಡು ಮಾತ್ರೆ ಮಾತ್ರ.  ಅದೂ ನಿದ್ದೆಗಾಗಿ.  ಹೋಗಿ ನೀವು ಊಟ ಮಾಡಿ. ಬೆಳಿಗ್ಗೆ ಮಾತಾಡೋಣ" ಎಂದು ವೀಲ್‌ಚೇರ್ ಬೆಡ್‍ರೂಮಿನತ್ತ ತಿರುಗಿಸಿದರು.

ಅವನು ಪೊಗದಸ್ತಾಗಿ ಊಟ ಮಾಡಿ ಮಹಡಿ ಹತ್ತಿ ಮಂಚದಲ್ಲಿ ಬಿದ್ದುಕೊಂಡ.  ಅವನನ್ನು ಇಡಿಯಾಗೆ ತಿಮ್ಮ ಆವರಿಸಿಕೊಂಡಿದ್ದ.  ತನ್ನ ಸಂಶೋಧನೆಯಲ್ಲಿ ತಿಮ್ಮನಿಗೆ ಎಲ್ಲಿ ಸ್ಥಾನ ಕಲ್ಪಿಸುವುದು ಎನ್ನುವುದು ಅವನಿಗೆ ಹೊಳೆಯಲೇ ಇಲ್ಲ.  ರಾತ್ರೆ ತುಂಬಾ ಹೊತ್ತಾಗಿರಬಹುದು.  ಇನ್ನೇನು ಜೊಂಪು ಹತ್ತಬೇಕು ಅನ್ನುವಷ್ಟರಲ್ಲಿ ಬಾಗಿಲ ಮೇಲೆ  ಮೃದುವಾದ ಬಡಿತ.  ಗಾಬರಿಯಿಂದ ಎದ್ದು ಬಾಗಿಲು ತೆರೆದರೆ ಅವಳು!  ಒಳಗೆ ಬಂದವಳೇ ಬಾಗಿಲು "ಮುಚ್ಚಿ ಅವನನ್ನು ಪೂರ್ತಿಯಾಗಿ ಆವರಿಸಿಕೊಂಡು ನನಗೊಂದು ಬುದ್ಧಿವಂತ ಮಗು ಬೇಕು" ಎಂದು ಕಂಪಿಸುತ್ತಾ ಪಿಸುಗುಟ್ಟಿದಳು.

            *****
೧೯೯೭

ಕೀಲಿಕರಣ: ಎಂ.ಎನ್.ಎಸ್. ರಾವ್

0 ಕಾಮೆಂಟುಗಳು:

ಕಾಮೆಂಟ್‌‌ ಪೋಸ್ಟ್‌ ಮಾಡಿ