ಶೀಗಿಹುಣ್ಣಿವೆದಿನ ಉಣ್ಣಲಿಕ್ಕೆ ಕರೆಯುವರೆಲ್ಲಾ

-ಶಿಶುನಾಳ ಶರೀಫ್

ಶೀಗಿಹುಣ್ಣಿವೆದಿನ ಉಣ್ಣಲಿಕ್ಕೆ ಕರೆಯುವರೆಲ್ಲಾ
ಕರೆದರೆ ಹೋಗದೆ ಬಿಡಲಿಲ್ಲಾ                       || ಪ ||

ಹುರಿಯಕ್ಕಿ ಹೋಳಿಗಿ ಹೂರಣಗಡಬು
ಕಡಲೀ ಪಚ್ಚಡಿ ಕಟ್ಟಿನಾಂಬರಾ
ಉಂಡಗಡಬು ಪುಂಡಿಯ ಪಲ್ಲೆ
ಬುಟ್ಟಿಯೊಳಿಟ್ಟೆಲ್ಲಾ
ಕೆಮ್ಮಣ್ಣು ಬುಟ್ಟಿಗೆ ಬಡದೆಲ್ಲಾ
ಆದರನುಭವ ತಿಳಿಲಿಲ್ಲಾ                              ||೧||

ಆಂದು ಇಂದು ಬಂದು ಬಹುದಿನ
ಹೊಲದೊಳು ಕುಂತೆಲ್ಲಾ
ಮನಸಿನ ಮೈಲಿಗೆ ತೊಳಿಲಿಲ್ಲಾ
ಗಂಧದ ಬೊಟ್ಟು ಗಮಕಿಲೆ ಇಟ್ಟು
ಹಂಗನೂಲು ಹಾಕಿಯೆಷ್ಟು
ಬಟ್ಟನ್ನ ಕಲ್ಲಿಗೆ ಸುಣ್ಣಾ ತೊಟ್ಟು
ಕಣ್ಣಿಗೆ ಕಂಡೆಲ್ಲಾ
ಆ ಕಲ್ಲೇನು ಉಣಲಿಲ್ಲಾ
ಎಡೆಮಾಡಿ ನೀನೆ ಉಂಡೆಲ್ಲಾ                       ||೨||

ಮಂಗಳಾತ್ಮ ಶಿಶುನಾಳಧೀಶನಲ್ಲೆ
ಬಲ್ಲವರು ಕೂಡಿದರಲ್ಲೆ
ಶೃಂಗಾರವಾದ ನಾರೇರೆಲ್ಲಾ
ರಂಗಿನಿಂದ ಕೋಲ ಪಿಡಿದು
ಯೋಗದಿಂದ ತ್ಯಾಗಮಾಡಿ
ರಾಗದಲ್ಲೆ ಶಿವಶರಣರಲ್ಲೆ
ಶೀಗಿಗೆ ಕರೆದಾರಲ್ಲೆ                                     ||೩||
****

ಕೀಲಿಕರಣ: ಎಂ.ಎನ್.ಎಸ್. ರಾವ್

0 ಕಾಮೆಂಟುಗಳು:

ಕಾಮೆಂಟ್‌‌ ಪೋಸ್ಟ್‌ ಮಾಡಿ