ಜಿ.ಎಸ್. ಶಿವರುದ್ರಪ್ಪನವರ ಕಾವ್ಯದಲ್ಲಿ ಸಾಮಾಜಿಕ ಸಾಮರಸ್ಯದ ಆಶಯಗಳು

- ತಾರಿಣಿ ಶುಭದಾಯಿನಿ ಆರ್

ಗಣಕ-ತಂತ್ರಜ್ಞಾನವು ಜನಪ್ರಿಯವಾಗುತ್ತಿರುವ ಕಾಲ ಇದಾಗಿರುವುದಿಂದ ಮಾಹಿತಿ ಸಂಗ್ರಹ ಮತ್ತು ಒದಗಿದ ಮಾಹಿತಿಯನ್ನು ಆಯಾ ಆವಶ್ಯಕತೆಗಳಿಗೆ ಆನುಗುಣವಾಗಿ ವಿಭಜಿಸಿ ನೋಡುವ ತಂತ್ರವೂ ಕ್ಕೆಗೆಟುಕುವಂತಿದೆ. ಸಾಹಿತ್ಯದ ಸಂದರ್ಭದಲ್ಲಿಯೂ ಈ ರೀತಿಯ ವಿಭಜನೆಯ ಕ್ರಮಗಳು ಚಾಲ್ತಿಗೆ ಬಂದಂತೆ ಕಾಣುತ್ತಿವೆ. ಸಾಹಿತಿಯೊಬ್ಬನ ಜೀವನ ಚರಿತ್ರೆಯ ವಿವರಗಳು, ಆವನ ಸಾಧನೆಗಳು, ಪಡೆದ ಪುರಸ್ಕಾರಗಳು-ಇವೆಲ್ಲವನ್ನು ಮಾಹಿತಿಯಾಗಿ ಸಂಗ್ರಹಿಸಿ, ನಮಗೆ ಬೇಕಾದ ವಾದಗಳಿಗಾಗಿ ಅವನ ಸಾಹಿತ್ಯವನ್ನು ವಿಭಜಿಸಿ ನೋಡುತ್ತಿದ್ದೇವೇನೋ ಎಂಬ ಆನುಮಾನ ಕಾಡುತ್ತದೆ. ಜಿ‌ಎಸ್‌ಎಸ್ ಆವರೇ ಒಂದು ಕಡೆ ಬರೆಯುವಂತೆ,
  ತುಂಬಿದ
  ಮೈಮಾಂಸರಕ್ತ
  ಎಲ್ಲವನ್ನು ಹೀರಿ
  ಬರಿಯ ಮೂಳೆಯನ್ನಷ್ಟನ್ನೇ
  ಉಳಿಸಿ ಪಟ್ಟಿ ಹಾಕಿದ್ದೀರಿ.
  ಕವಿಯನ್ನು ಸಲೀಸಾಗಿ ಜೀರ್ಣಿಸಿಕೊಂಡು

  ಕವಿ ತನ್ನ ಜೀವಮಾನದಲ್ಲಿ ಬರೆಯುವುದು ಒಂದೇ ಕವಿತೆಯ ಎನ್ನುವ ಮಾತಿದೆ. ಅವನು ಹೊಳೆಯಿಸುವ ವಿಚಾರಗಳಾಗಲಿ, ಭಾವಗಳಾಗಲಿ ಒಂದು ಮೂಲದ ವೈಚಾರಿಕ, ಭಾವುಕ ವಿಸ್ತರಣೆಯೂ ಆಗಿರುತ್ತದೆ. ಈ ಮಾತಿನ ಹಿನ್ನೆಲೆಯಲ್ಲಿ ಜಿ‌ಎಸ್‌ಎಸ್ ಕವಿತೆಗಳನ್ನು ಸಾಮಾಜಿಕ ಕವಿತೆ, ಪ್ರಕೃತಿ ಕವಿತೆ ಎಂದೆಲ್ಲ ವಿಭಜಿಸಿ ನೋಡುವುದಕಿಂತ ಅವನ್ನೆಲ್ಲ ಕವಿ ತನ್ನ ತಾತ್ವಿಕ ನೆಲೆಗಟ್ಟಾಗಿ ರೂಪಿಸಿಕೊಳ್ಳುವುದರ ಬಗ್ಗೆ ನನಗೆ ಆಸಕ್ತಿಯಿದೆ.  ಪ್ರಕೃತಿ, ಸಾಮಾಜಿಕತೆ, ವೈಯಕ್ತಿಕತೆ, ತತ್ವ- ಇವುಗಳೆಲ್ಲವನ್ನು ಅವರು ಮೇಳವಿಸಿಕೊಂಡು ಆಭಿವ್ಯಕ್ತಿಗೆ ಕ೦ಡುಕೊಳ್ಳುವ ಕ್ರಮಗಳು, ವಿವೇಚಿಸುವ ಸಂದರ್ಭಗಳು ಯಾವ ರೀತಿಯದು ಎಂದು ವಿವೇಚಿಸುವ ಪ್ರಯತ್ನವನ್ನು ಇಲ್ಲಿ ಮಾಡಲು ಯತ್ನಿಸಿದ್ದೇನೆ.

೧೯೫೧ ರಿಂದ ತೀರಾ ಇತ್ತೀಚಿನವರೆಗು ಕಾವ್ಯರಚನೆಯಲ್ಲಿ ಆಸಕ್ತಿ ಉಳಿಸಿಕೊಂಡು ಆದರಲ್ಲಿ ತೊಡಗಿಸಿಕೊಂಡ ಕವಿ ಜಿ. ಎಸ್. ಶಿವರುದ್ರಪ್ಪ ಅವರ ಕಾವ್ಯವು ಕಾಲಕ್ಕೆ ತಕ್ಕ ಸಂವೇದನೆಗಳನ್ನು ರೂಪಿಸಿಕೊಳ್ಳುತ್ತ ನಿರಂತರವಾಗಿ ಪ್ರಯೋಗಶೀಲತೆಯಿಂದ ಕೂಡಿದೆ.  ವಿಮರ್ಶಕರಾದ ಕೆ. ಜಿ. ನಾಗರಾಜಪ್ಪನವರು ಗುರುತಿಸುವಂತೆ, "ಆವರ ಸಾಹಿತ್ಯ ಬದುಕು ಪ್ರಜ್ಞಾಪೂರ್ವಕವಾಗಿ ಸಂವೇದನಾತ್ಮಕವಾದುದು ಮತ್ತು ಪ್ರತಿಕ್ರಿಯಾತ್ಮಕವಾದುದು".  ಸಂವೇದನೆಗಳನ್ನು ಬದಲಾಯಿಸಿಕೊಳ್ಳುವುದು ಕಷ್ಟ ಎಂದು ಟಿ. ಎಸ್. ಎಲಿಯಟ್ ಯೇಟ್ಸ್, ಕವಿಯ ಬಗ್ಗೆ ಬರೆಯುವಾಗ ಹೇಳುತ್ತಾನೆ.  ಸಂವೇದನೆಗಳು ಕಾಲಕ್ಕೆ ತಕ್ಕಂತೆ  ರೂಪುಗೊಳ್ಳುವಂತಿವೆ ಎನ್ನುವುದನ್ನು ಇಲ್ಲಿ ಗಮನಿಸಬಹುದಾಗಿದೆ. ರಮ್ಯಸಂವೇದನೆಯಿಂದ ಕಾವ್ಯ ಬರೆಯಲಾರಂಭಿಸಿದ ಕವಿ ಜಿ‌ಎಸ್‌ಎಸ್ ಆನಂತರ ತಮ್ಮ ಸಂವೇದನೆಗಳನ್ನು ಬದಲಾಯಿಸಿಕೊಳ್ಳುವಂತೆ ಕಾಣುತ್ತಾರೆ.  ಆದರೆ ಅವರಲ್ಲಿ ರಮ್ಯಕನಸುಗಾರಿಕೆಯು ಉಳಿದಿದೆ.  ಕಾಲಕ್ಕೆ ತಕ್ಕ ಪ್ರತಿಸ್ಪಂದನ ನೀಡುತ್ತಲೇ  ತಮ್ಮ ತಾತ್ವಿಕ ನಿಲುವುಗಳಿಗೆ ಆವನ್ನು ಒಗ್ಗಸಿಕೊಳ್ಳುವುದು ಜಿ‌ಎಸ್‌ಎಸ್ ಆವರ ರೀತಿ.

(ಅ)

ಜಿ‌ಎಸ್‌ಎಸ್ ಆವರ ಕಾವ್ಯದಲ್ಲಿ ಸಾಮಾಜಿಕ ಸಾಮರಸ್ಯದ ಆಶಯಗಳೆಂಬ ವಿಷಯವನ್ನು ನೆನೆಯುವಾಗ ಕನ್ನಡ ಕಾವ್ಯ ಸಂದರ್ಭದಲ್ಲಿ ಸಾಮಾಜಿಕ  ಸಾಮರಸ್ಯವನ್ನು ಪ್ರತಿಪಾದಿಸುವ ಎರಡು ಕವಿ-ಪರಂಪರೆಗಳ ನೆನಪಾಗುತ್ತದೆ.  ಅವರೇ ಬಸವಣ್ಣ ಮತ್ತು ಕುವೆಂಪು. ಈ ಇಬ್ಬರ ಸಾಮಾಜಿಕ ಕಾಳಜಿಯ ಸತ್ವಗಳನ್ನು ಜಿ‌ಎಸ್‌ಎಸ್ ತಮ್ಮ ಕಾವ್ಯದಲ್ಲಿ ಬಲಗೊಳಿಸಿ ಪ್ರತಿಪಾದಿಸುತ್ತಾರೆ ಎನ್ನಬಹುದು.

ಬಸವಣ್ಣನವರ ಸಾಮಾಜಿಕ ಕಾಳಜಿಯು ಭಕ್ತಿಯಿಂದ ಪ್ರೇರೇಪಿತವಾಗಿದೆ.  ಇಹವು ಸರಿಯಾಗಿದ್ದರೆ ಪರವೂ ಸರಿಯಾಗಿದ್ದೀತು ಎನ್ನುವ ಆಶಯಗಳು  ಬಸವಣ್ಣನವರದು. ಇದಕ್ಕಾಗಿ ಬಸವಣ್ಣನದು ಸುಧಾರಣಾವಾದಿ ನೆಲೆಯಲ್ಲಿ ನಿಲ್ಲುತ್ತಾರೆ. ಆದೇ ಪಾತಳಿಯಲ್ಲಿ ಸಾಮಾಜಿಕ ಕಳಕಳಿಯು ಹುಟ್ಟುತ್ತದೆ. ಬಸವಣ್ಣ ಕೂಡಲ ಸಂಗಮನನ್ನು ಎಷ್ಟು ಆದ್ರತೆಯಿಂದ ನಿರ್ವಚಿಸಿಕೊಳ್ಳುತ್ತಾರೋ ಆಷ್ಟೇ ಭಾವದಲ್ಲಿ ಸಮಾಜದ ಕ್ಕೆಂಕರ್ಯವನ್ನು ಮಾಡಬಲ್ಲರು. ಭಕ್ತಿಯೆಂಬುದು ಶ್ರದ್ದೆಯ ಉನ್ನತ ಸ್ಥಿತಿ. ಈ ಜಗತ್ತಿನ ಆಗುಹೋಗಳ ಬಗ್ಗೆ ಶ್ರದ್ಧೆಯಿರುವ, ಅದರ ಉನ್ನತಿಗಾಗಿ ಬಯಸುವ ಭಾವವನ್ನೇ ಜಿ‌ಎಸ್‌ಎಸ್ ಕಾವ್ಯವು ತೋರುತ್ತದೆ.

ಬಸವಣ್ಣನವರ ಸಾಮಾಜಿಕ ಕಳಕಳಿಯು ಭಕ್ತಿಯ ಬಲದಿಂದ ಬಂದರೆ,  ಕುವೆಂಪು ಆವರಲ್ಲಿ ಆದು ಬೇರೆ ಸ್ವರೂಪದ್ದಾಗಿದೆ. ಆವರ ಸಾಮಾಜಿಕ ಸಾಮರಸ್ಯದ ಆಶಯಗಳು ಸ್ಪೂರ್ತಿ ಪಡೆದುಕೊಂಡಿದ್ದು ಇಪ್ಪತ್ತನೆಯ ಶತಮಾನದ ಆರಂಭಕಾಲದಲ್ಲಿ ರೂಪುಗೊಳ್ಳುತ್ತಿದ್ದ ಸ್ವಾತಂತ್ರ್ಯ ಚಳವಳಿಯ ಭಾಗವಾಗಿ ಬಂದ ಸುಧಾರಣಾವಾದಿ ತತ್ವಗಳಿಂದ.  ಆ ತತ್ವಗಳು ಜ್ಞಾನೋದಯದ ದರ್ಶನಗಳೂ ಆಗಿದ್ದವು. ಈ ಹಿನ್ನೆಲೆಯಲ್ಲಿ ಕುವೆಂಪು ಪಡೆದುಕೊಂಡ ಪರಂಪರೆಯ ಕಲ್ಪನೆಗಳಾದ `ಶಿವ' `ಅಶಿವ'ಗಳು ಸಾಮಾಜಿಕ ಅನಿಷ್ಟಗಳನ್ನು ನಿವಾರಿಸಿಕೊಳ್ಳುವ ಬಲ ಅವರಿಗೆ ತಂದುಕೊಡುತ್ತವೆ.  ಪರಿಷ್ಕರಣೆಯ ಮಾರ್ಗದ ವಿವೇಕಾನಂದರ೦ತಹ ವ್ಯಕ್ತಿತ್ವಗಳು ಕುವೆಂಪು ಸಾಮಾಜಿಕ ಕಲ್ಪನೆಯ ಆಧಾರಗಳು.  ಈ ಇಬ್ಬರು ಕವಿಪರಂಪರೆಗಳನ್ನು ಸಂಚಯನ ಮಾಡಿಕೊಂಡು ಜಿ.ಎಸ್.ಎಸ್ ಕಾವ್ಯ ತನ್ನ ಹಾದಿಯನ್ನು ನಿರ್ಮಿಸುತ್ತದೆ.  ಒಂದು ಆಧ್ಯಾತ್ಮಿಕ ಒಳನೋಟವೇ ಅವರ ಕಾವ್ಯದ ಆದಿಯಿಂದ ಅಂತ್ಯದವರೆಗು ಮುಂದುವರೆಯುತ್ತದೆ.  ಬಹುಷಃ `ತೀರ್ಥವಾಣಿ'ಯಂತಹ ಸಂಕಲನವು ಬಂದಿದ್ದು ಈ ಆಳದ ಶ್ರದ್ಧಯಿಂದಲೇ ಇರಬಹುದು.  ಅವರ ಮೊದಲ ಪ್ರಕೃತಿ ಕವಿತೆಗಳಲ್ಲಿ ಕಾಣುವ ಮೆಟಫಿಸಿಕಲ್ ಅಂಶವು ಸಾಮಾಜಿಕ ಆಶಯಗಳಲ್ಲಿಯೂ ಸಾಮಾಜಿಕ ಗುಪ್ತಗಾಮಿನಿಯಾಗಿ ಚಲಿಸುವುದನ್ನು ಗುರುತಿಸಬಹುದು.

ಸತ್‍ ಶಕ್ತಿಯನ್ನು ಆಶಿಸುವ ಕವನಗಳನ್ನು ತಮ್ಮ ಆರಂಭದ ಕಾವ್ಯದಲ್ಲಿ ಬರೆದಿರುವ ಜಿ‌ಎಸ್‌ಎಸ್ ಅವರಿಗೆ ಆತೀವವಾಗಿ ಕಾಡುವುದು ಕೃಷ್ಣಶಕ್ತಿ ಎಂಬ ಸಂಕೇತ. ಗಾಢಾಂಧಕಾರದಲ್ಲಿ ಕಾಯುವ, ಪೊರೆಯುವ ಶಕ್ತಿಯಾಗಿ ಅದನ್ನು ಅವರು ಪರಿಭಾವಿಸುತ್ತಾರೆ.
  ಕತ್ತಲ ಗೋವರ್ಧನವನ್ನೆತ್ತುವ
  ಸಾಸಿರ ಶ್ರೀಕೃಷ್ಣನ ಬೆರಳು
                (ದೀಪಾಪಳಿ)
`ಕೃಷ್ಣಶಕ್ತಿ'ಯ ಸಾಲುಗಳನ್ನು ಇಲ್ಲಿ ಉಲ್ಲೇಖಿಸಬಹುದು:
  ಸುತ್ತಮುತ್ತ ಅಂಧಕಾರ
  ಮಳೆಹನಿಗಳ ಪಂಜರ
  ದೈತ್ಯಸೆರೆಯ ಕಂಬಿಯೊಳಗೆ
  ಬಂತು ದೇವಕು೦ಜರ
             (ಕೃಷ್ಣಶಕ್ತಿ)
ಕೊಳಲು ಕೂಡ ಈ ವಿಶಾಲಶಕ್ತಿಯ ಸಂಕೇತವಾಗಿಯೇ ಬರುತ್ತದೆ.

ಹಾಗೆಯೇ ಕತ್ತಲು-ಬೆಳಕು ಆವರ ಕಾವ್ಯದಲ್ಲಿ ಬರುವ ಎರಡು ಆಂಶಗಳು. ಅವು ಪರಸ್ಪರ ವಿರೋಧಿ ಗುಣವುಳ್ಳವು.  ಬೆಳಕಿನ ಎದುರಿಗೆ `ಕಡುಮೌನದ ಇರುಳಿದೆ'.  ಬೆಳಕು ಚೈತನ್ಯಶಾಲಿಯಾದಾದರೆ ಕತ್ತಲೆ ಜಡ ಎಂಬ ನಿಲುವು ಇದೆ :
  ಜೀವಜೀವಾಳದಲಿ
  ಬಾಳಿನೊಳ್ಪನೆ ಬಗೆದು
  ಉದ್ಧಾರ ಯೋಗದಲಿ ತೊಡಗಿರುವ ಬೆಳಕೇ
             (ಆಹ್ವಾನ)
ಈ ರೀತಿ ಹೇಳುವಾಗ `ಜೀವ ಕತ್ತಲೊಳಿದೆ ! ಜಡದ ವೋಲದು ಬಿದ್ದಿದೆ' ಎನ್ನುವ ಸ್ಥಿತಿಯನ್ನು ವಿವರಿಸಲಾಗಿದೆ.  ಇದರ ಜೊತೆಯಲ್ಲಿಯೇ ಆಗಾಧವಾಗಿ ಹರಡಿದ ಕತ್ತಲಿನಂತೆ ಕಾಡುವ ಬಿರುಗಾಳಿಯೂ ಇದೆ (`ಬಿರುಗಾಳಿಯಬ್ಬರ' ಎನ್ನುವುದು ಆವರ ಕಾವ್ಯದಲ್ಲಿ ಸಾಧಾರಣವಾಗಿ ಬಳಕೆಯಾಗುವ ಪದಪುಂಜ) ಆದರೆ ಇವುಗಳಲ್ಲಿ ಯಾವುದೇ ಸತ್‍ಶಕ್ತಿಯ ಮೇಲಿನ ಆವರ ನಂಬಿಕೆಯನ್ನು ಕುಂದಿಸುವಂತವಲ್ಲ. ಕೇಡು (evil) ಕೊನೆ ಮುಗಿಯುವಂತದ್ದಲ್ಲ ಎಂದು ತಿಳಿದರೂ ಅದನ್ನು ಬೆಳಕಿನ ಮೂಲಕ ದೂರಸರಿಸಬಹುದೆಂಬ ನಂಬಿಕೆ, ಶ್ರದ್ಧೆಗಳು ಕವಿಗಿದೆ.  ಆದ್ದರಿಂದಲೇ ಬೆಳಕನ್ನು ಆವರು `ಮುದ್ದು ಬೆಳಕೇ', `ಸ್ವರ್ಣಬೆಳಕೇ' ಎಂದು ಕರೆಯುತ್ತಾರೆ. ಅಷ್ಟೇ ಆಲ್ಲದೆ ಬೆಳಕು ಒಂದು ಸಣ್ಣ ಹಣತೆಯ ರೂಪದಲ್ಲಿ ಒದಗಿ ಬಂದರು ಸರಿ ಅದು ಕೇಡನ್ನು ಅಷ್ಟರ ಮಟ್ಟಿಗೆ ದೂರಸರಿಸುವ ಶಕ್ತಿಯೆನ್ನುವ ನಂಬಿಕೆ ಅವರದ್ದು.  ಈ ತಾತ್ವಿಕತೆಯೇ ಅವರ ಮುಂದಿನ ಕಾವ್ಯಕ್ಕೆ ಮೂಲಾಧಾರವಾಗಿ ಉಳಿಯುತ್ತದೆ. ಹಣತೆಯೆನ್ನುವುದು ಈ ದೃಷ್ಪಿಯಲ್ಲಿ ಒಂದು ಆಶಯದ ರೂಪಕವೂ ಆಗಿ ಉಳಿಯುತ್ತದೆ.

(೪)
ಜಿ‌ಎಸ್‌ಎಸ್ ಆವರ ಕಾವ್ಯದಲ್ಲಿ ಕಾಣಿಸುವ ನಾನು, ನೀನು ಎಂಬ ಪದ ಗಮನಿಸಬೇಕು. `ನಾನು' ಎಂಬುದಲ್ಲಿ ತನ್ನೊಳಗನ್ನು ಕಂಡುಕೊಳ್ಳುವ ಆತ್ಮನಿರೀಕ್ಷಣೆ ಕ್ರಿಯಾಚೇತನ, `ನೀನು' ಎಂಬುದು ಸ್ವಯಂಪೂರ್ಣವಾದ ಎದುರು ಚೇತನ.  ನಾನು ಎಂಬ ಭಾವವು ಇದರ ಜೊತೆ ಸಾಮರಸ್ಯವನ್ನು ಸಾಧಿಸುವ ಪ್ರಕ್ರಿಯೆಯನ್ನು ನಿರೀಕ್ಷಿಸುತ್ತದೆ. ಇದನ್ನು ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ನಾನು ಎಂಬುದು ಸ್ವಯಂಪೂರ್ಣವಾಗಿ ಬೆಳೆದು ಮಹತ್ತಿನೊಡನೆ ಗುರುತಿಸಿಕೊಳ್ಳುವ ಅಸ್ತಿತ್ವ. ಇದನ್ನೇ ಡಿ. ಆರ್. ನಾಗರಾಜ್ ಆವರು ಜಿ.ಎಸ್.ಎಸ್.ಕುರಿತ ತಮ್ಮ ಲೇಖನದಲ್ಲಿ ಜಿ‌ಎಸ್‌ಎಸ್ ಕಾವ್ಯದ ಮೊದಲಘಟ್ಟ ಸೌಂದರ್ಯಾತ್ಮಕ, ಅನಂತರದ್ದು ಮೆಟಫಿಸಿಕಲ್ ಮತ್ತು ಕೊನೆಯಲ್ಲಿ ಅದು ರುದ್ರತಿಳಿವಿನದಾಗಿರುತ್ತದೆ ಎಂದು ಗುರುತಿಸಿದ್ದಾರೆ.

ಶಿವರುದ್ದಪ್ಪನವರ ಪ್ರಕೃತಿ ಕವನದಲ್ಲಿ ಕಾಣುವ ಆಧ್ಯಾತ್ಮಿಕ ಭಾವದ ನಾನು ಕ್ರಮೇಣ ಆತ್ಮನಿರೀಕ್ಷಣೆಯ ಸ್ವರೂಪವನ್ನು ಪಡೆದುಕೊಳ್ಳುತ್ತದೆ. ಅಂದರೆ ಇದು ಬಸವಣ್ಣನವರ ವಚನಗಳಲ್ಲಿ ಎದ್ದುಕಾಣುವ ಆತ್ಮನಿರೀಕ್ಷಣೆಯ ಗುಣಕ್ಕೆ ಹತ್ತಿರವಿದೆ.  ಆಗಿದೆ.  ಸುತ್ತಲ ಪ್ರಪಂಚದ ಆಸ್ತವ್ಯಸ್ತಗಳನ್ನು ಕಾಣುವ ಕವಿಗೆ ನಾನು ಎಂಬುದು ಶುದ್ಧಭಾವದಿಂದ ಒದಗದಿದ್ದರೆ ಆತ್ಮನಿರೀಕ್ಷಣೆ ಸಾಧ್ಯವಿಲ್ಲ. ಈ ಪ್ರೇರಣೆಯಿಂದಲೇ ಆತ್ಮನಿರೀಕ್ಷಣೆಯಲ್ಲಿ ತೊಡಗುವ ಕವಿ ಸಾಮಾಜಿಕ ಆವಸ್ಥೆಯ ಪಾಲುದಾರಿಕೆಯ ಹೊಣೆಯನ್ನು ಹೊರುತ್ತಾರೆ.  `ಅವಸ್ಥೆ' ಕವನವನ್ನೇ ಗಮನಿಸಿದರೆ, `ಚಳಿಗೆ ಗಡಗಡ ನಡುಗಿ ಮುದುರಿ ಮೂಲೆಗೆ ಕೂತ ಹರಕು ಚಿಂದಿಯ ಪುಟ್ಟ ಹುಡುಗ', `ಗೇಟಿನಾಚೆ ತಿರುಪೆಯ ಮುದುಕಿ ಆನ್ನಕ್ಕೆ ಅರಚುವುದು',  `ಕೊಳೆಗೇರಿಯಲ್ಲಿ ಚಿಂದಿಛಾವಣಿಯಲ್ಲಿ ಬದುಕಿರುವಸಂಖ್ಯರು'- ಇವರೆಲ್ಲಾ ಹೀಗಿರೋದಕ್ಕೆ ನಾನೂ ಕಾರಣ ಆನ್ನಿಸುತ್ತೆ.  ಬೆಚ್ಚನೆ ಮನೆಯಲ್ಲಿ ನಾ ಹೇಗೆ ತೆಪ್ಪಗಿರಲಿ?  ಎಂದು ಕೇಳಿಕೊಳ್ಳುವ ಕವಿ ಇಲ್ಲಿದ್ದಾರೆ.  ಹಾಗೆಯೇ ಈ ತಳಮಳ ಇದೆ :
  ಈ ಕೂಗುಗಳು, ನೋವುಗಳು
  ಈಟಿಯ ಹಾಗೆ ನಾಟಿ ನುಗ್ಗುತ್ತವೆ
  ಮನೆಯೊಳಕ್ಕೆ, ಮನದೊಳಕ್ಕೆ
  ನಿದ್ದೆಯೊಳಕ್ಕೆ ಕನಸಿನೊಳಕ್ಕೆ
  ನಾನೇನೂ ಮಾಡಲಾರದ ಆಸಹಾಯತನಕ್ಕೆ
  ತಿವಿದು ನನ್ನೆಲ್ಲವನ್ನೂ
  ಗಾಯಗೊಳಿಸುತ್ತದೆ.
             (ಅವಸ್ಥೆ)

   (ಈ)
ಆತ್ಮ ನಿರೀಕ್ಷಣೆಯ ಭಾವದ ಜೊತೆಯಲ್ಲಿಯೇ ಕಾಣಿಸಿಕೊಳ್ಳುವ ಸಿಟ್ಟು, ಸಾತ್ವಿಕ ರೋಷಗಳು ಜಿ‌ಎಸ್‌ಎಸ್ ಕಾವ್ಯದಲ್ಲಿ ಇರದೇ ಇಲ್ಲ- ವ್ಯವಸ್ಥೆಯ ಬಗ್ಗೆ 'ಅವಸ್ಥೆ' ಕವಿತೆಯಲ್ಲಿ ಅವರು ಬರೆಯುವಂತೆ,
  ರೇಗುತ್ತೇನೆ ನನ್ನ ಮೇಲೆ
  ನನ್ನಂಥವರ ಮೇಲೆ
  ನನ್ನಂಥವರ ಒಳಗೊಂಡ ಈ
  ಸಮಾಜದ ಮೇಲೆ
  ಇದರ ಪ್ರತಿನಿಧಿಯಾದ ವ್ಯವಸ್ಥೆಯ ಮೇಲೆ
  ಆದು ನಿರಂತರವಾಗಿ ಉಳಿಸಿರುವ ಈ
  ಅವಸ್ಥೆಯ ಮೇಲೆ.
            (ಆವಸ್ಥೆ)

ಇಲ್ಲಿ ಒಂದು ಅಂಶವನ್ನು ಗಮನಿಸಬೇಕು. ಆದೆಂದರೆ ವ್ಯವಸ್ಥೆಯಲ್ಲಿ ನಂಬಿಕೆಯಿಲ್ಲದಿದ್ದರೆ, ಆದರ ಮೇಲೆ ಸಿಟ್ಟು, ಆಕ್ರೋಶಗಳು ಹುಟ್ಟುವುದಿಲ್ಲ. ಈ ದೃಷ್ಟಿಯಲ್ಲಿ ಜಿ‌ಎಸ್‌ಎಸ್ ಆದರ ಕಾವ್ಯ ಚಿಕಿತ್ಸಕ ನೆಲೆಯದ್ದಾಗುತ್ತದೆ.

ವ್ಯವಸ್ಥೆಯಲ್ಲಿ ಉಂಟಾದ ಏರುಪೇರುಗಳು ಒ೦ದು body politicsನ ಸ್ವರೂಪವನ್ನು ಕೆಡಿಸಿ, ಸಾಮರಸ್ಯಕ್ಕೆ ತಡೆಯೊಡ್ಡುತ್ತವೆ ಎನ್ನುವುದು ಕವಿಯ ಗ್ರಹಿಕೆ.  ಆ ಏರುಪೇರುಗಳಲ್ಲಿ ನಗರೀಕರಣ ಆಥವಾ ಜಾಗತೀಕರಣ ಇರಬಹುದು ;  ಸ್ವಾತಂತ್ರ್ಯೋತ್ತರ ಕಾಲದಲ್ಲಿ ಉಂಟಾದ ರಾಜಕೀಯ ಸ್ಥಿತ್ಯಂತರಗಳಿಂದ ಆಥವಾ ಮೌಲ್ಯಪಲ್ಲಟಗಳಿಂದ ಸಾಮರಸ್ಯಕ್ಕೆ ಆಡ್ಡಿಯುಂಟಾಗುತ್ತದೆ ಎಂಬುದೇ ಇಲ್ಲಿನ ಗ್ರಹಿಕೆ.

ನಗರಪ್ರಜ್ಞೆ ಉದಯಿಸಿದಂತೆಲ್ಲ ಅಸ್ತಿತ್ವವಿಲ್ಲದ ಜನ ಸಮೂಹ ಸೃಷ್ಟಿಯಾಗಿ ಬೇರುಗಳಿಲ್ಲದೆ ಬದುಕುವುದನ್ನು ಕಾಣುವ ಕವಿಗೆ ಅದರ ಬಗೆ ಹೇವರಿಕೆಯಿದೆ.  ಜನರನ್ನು ಎಬ್ಬಿಸಲು ಕೋಳಿಯ ಆವಶ್ಶಕತೆಯಿಲ್ಲವೆಂದೂ, ಇಲ್ಲಿಯ `ಕಪ್ಪು ಹೊಗೆಯನ್ನು ಬಳಿದ ಮಿಲ್ಲುಗಳ ಜೀವವ ಸೇದಿಕೊಲ್ಲುವ ಕೂಗು' ಎಬ್ಬಿಸುತ್ತದೆ ಎಂದು ಆವರ ಕವನ `ಕೋಳಿಕೂಗಿತು' ಹೇಳುತ್ತದೆ. `ಮುಂಬೈಜಾತಕ' ಕವನವಂತು ನಗರೀಕರಣದ ಬಗ್ಗೆ ಆನಾದರವನ್ನೇ ತೋರುವಂತಿದೆ. ಇದು ಆಧುನಿಕವಾದದ ಕಾಣ್ಕೆ ಆಷ್ಟೇ ಅಲ್ಲ, ರೊಮ್ಯಾಂಟಿಕ್ ಭಾವವೂ ಹೌದು.

ಎಂಭತ್ತರ ದಶಕದ ರಾಜಕೀಯವನ್ನು ನವ್ಯರು ಸಿನಿಕತೆಯಿಂದ ನೋಡುವುದುಂಟು. ಆಧುನಿಕವಾದದ ಪರಿಣಾಮದಿಂದ ಉಂಟಾದ ಭ್ರಮನಿರಸನವು (disillusionment)  ಅವರಲ್ಲಿ ಕಾಣಿಸಿಕೊಳ್ಳುತ್ತದೆ. ಜಿ‌ಎಸ್‌ಎಸ್ ಅವರು ಗಾಂಧಿ ವಿನೋಬಾ ಕಾಲದ ಸತ್ವಶಾಲೀ ವ್ಯಕ್ತಿತ್ವಗಳನ್ನು ಕಂಡಂತೆಯೇ ನೆಹರೂ ಕಾಲದ ಆಷಾಡಭೂತಿ ರಾಜಕೀಯ ವ್ಯಕ್ತಿತ್ವಗಳನ್ನೂ ಕಂಡವರು.  ಆಧುನಿಕವಾದವು ಬಿಂಬಿಸಿದ ಭ್ರಮನಿರಸನದ ಅಂಶವು ಆವರಲ್ಲಿ ಕ೦ಡು ಬರುವಂತಿದ್ದರೂ ಆದು ನೇತ್ಯಾತ್ಮಕವಾಗಿ ತೋರುವುದಿಲ್ಲ. ರಾಜಕೀಯ ಪಲ್ಲಟಗಳಂತೆ ವ್ಯಕ್ತಿತ್ವಗಳಲ್ಲಿ ಉಂಟಾದ ಮೌಲ್ಯಪಲ್ಲಟಗಳಿಂದ ನೊಂದ ಕವಿಗೆ ಸಿಟ್ಟು, ಆಕ್ರೋಶಗಳು ಹುಟ್ಟುತ್ತವೆ. ವ್ಯವಸ್ಥೆಯ ಮೇಲಿನ ನಂಬಿಕೆ ಅವರಿಗಿದೆ.  ಆದ್ದರಿಂದ ಸ್ವಾರ್ಥಸಾಧಕತನ, ಆಸೆಬುರುಕತನ ಇತ್ಯಾದಿಗಳು ಸಾಮರಸ್ಯವನ್ನು ಕದಡುವ ದುಷ್ಟತನವು ಎಂದು ಆವರಿಗೆ ಕಾಣುತ್ತದೆ.  ವ್ಯವಸ್ಥೆ ಆವರಿಗೆ `ಹದ್ದು ನರಿ ತೋಳ ರಾಕ್ಷಸ ರಾಜ್ಯ'.  ಹೀಗೆಂದು ಬಣ್ಣಿಸುವಾಗ ಆವರಿಗೆ ಬದಲಾದ ವರ್ತಮಾನದ ಆರಿವು ಇದೆ :
  ಒಳಪದರ ತಕ್ಕಷ್ಟು ಸವೆದಿದೆ
  ವರ್ತಮಾನದ ಮತ್ತೆ
  ವಾಸ್ತವದ ಕಣ್ಣು ತೆರದಿದೆ.
     (ಕುಟುಂಬ ಯೋಜನೆಯ ವಿಚಾರ)

ಈ ಆಶಾಭಂಗವು `ಭೀಮಾಲಾಪ'ದಂತಹ ಕವಿತೆಗಳಲ್ಲಿ ಇನ್ನಷ್ಟು ಸ್ಫುಟವಾಗಿದೆ. ಒಂದೆಡೆ ಪ್ರಭುತ್ವದ ನಿರಂಕುಶತೆಯು ಕವಿಗೆ ಸೋಲಿನ ಹಾಡುಗಳನ್ನು ನಿರೂಪಿಸುವಂತೆ ಮಾಡಿದೆ :
  ಕಂಡ ಕಂಡ ಕಡೆ ಸೊಂಡಿಲ ಚಾಚುವ
  ಆನೆಗೆ ಆಂಕುಶವಿಲ್ಲ
    (ಸೋಲಿನ ಹಾಡು)
  ಕಾಡು ಕುದುರೆಗಳ ಹೂಡಿದ ರಥಕ್ಕೆ
  ದಾರಿಯ ಹಂಗಿಲ್ಲ
    (ಸೋಲಿನ ಹಾಡು)
  `ಸಾಕು ನಿಲ್ಲಿಸು ಸಾಮಗಾನ' ಕವಿತೆಯನ್ನು ಬರೆಯುವಾಗ `ಸಾಮಗಾನ' ಎಂದು ಮಧುರ ಧ್ವನಿಯ ಹೊರಡಿಸಿದ್ದ ಕವಿ ಸಿಟ್ಟಿಗೇಳಲು ಕಾರಣವಿದೆ.  ಪ್ರಭುತ್ವದ ಸೋಲು ಅವರ ಸತ್ವಹೀನ ಸಾಧನೆಗಳಲ್ಲಿದೆ :
  ದೇಶಾದ್ಯಂತ ಆಣೆಕಟ್ಟುಗಳ ಕಟ್ಟಿ ನಾವು
  ಬೆಳೆದಿದ್ದೇನು ಬರೀ ಹಸಿವೆ?
  ಹೊಲಗದ್ದೆಗಳ ತುಂಬ ತೆನೆಯೆತ್ತಿ ತೂಗುವುದೇನು?
  ಹಸಿರೆ ಆಥವಾ ನಿಟ್ಟುಸಿರೆ?
     (ಸಾಕು ನಿಲ್ಲಿಸು ಸಾಮಗಾನ)

ಇದರ ಜೊತೆಗೆ ಈ ಸಾಲುಗಳನ್ನು ನೋಡಬೇಕು :
  ಇದುವರೆಗು ಬಿತ್ತಿದ್ದು ಬೆಳೆಯಾಗಿ ತೆನೆದೂಗಲಿಲ್ಲ
  ಬೀಜವೇ ಐಬೋ, ನೆಲದಲ್ಲಿ ಹದವಿಲ್ಲವೊ
  ಗಿಡವಾಗಿ ಪುಟಿದೇಳಲೇ ಇಲ್ಲ.
                    (ವಿಫಲ)
ಇಲ್ಲೆಲ್ಲಾ ಆತ್ಮನಿರೀಕ್ಷಣೆಯ ಅಂಶವು ಸಾಮೂಹಿಕ ಸ್ವರೂಪದಲ್ಲೇ ಬರುತ್ತಿರುವುದನ್ನು ಗಮನಿಸಬಹುದಾಗಿದೆ.

(ಉ)
ಈಗಾಗಲೇ ಹೇಳಿದಂತೆ ಜಿ‌ಎಸ್‌ಎಸ್ ಅವರ ಕಾವ್ಯವು ಚಿಕಿತ್ಸಕ ನೆಲೆಗಳಿಂದ ಹುಟ್ಟುತ್ತವೆ.  ಆದರಿಂದಲೇ ವ್ಯವಸ್ಥೆಯ ಮೇಲಿನ ಸಿಟ್ಟು, ಆಕ್ರೋಶಗಳು ನಿಧಾನವಾಗಿ ವ್ಯಂಗ್ಯದ ಸ್ವರೂಪ ತಳೆಯುತ್ತವೆ.  ವ್ಯಂಗ್ಯವು ಎಂಭತ್ತರ ದಶಕದಲ್ಲಿ ಬಳಕೆಯಾಗುತ್ತಿದ್ದ ಅಸ್ತ್ರವೇ ಆಗಿದೆ.  ಆದರೆ ಜಿ‌ಎಸ್‌ಎಸ್ ಅವರ ವ್ಯಂಗ್ಯವು ನಿರಾಶೆಯಿಂದಾಗಲೀ, ಸಿನಿಕತೆಯಿಂದಾಗಲೀ ಕೂಡಿದುದಲ್ಲ ಎಂದು ನನ್ನ ಭಾವನೆ.  ಆತ್ಮ ನಿರೀಕ್ಷಣೆಯ ಉಗ್ರರೂಪದಂತೆ ಕಾಣುವ ವ್ಯಂಗ್ಯವು ಇಲ್ಲಿ ಕಾಣುತ್ತದೆ- `ನಮ್ಮತನವೆಲ್ಲವನು ಹರಾಜಿಗಿಟ್ಟು ನಿಂತಿದ್ದೇವೆ ಸ್ವಾಮಿ, ನಾವು ಗುಲಾಮರು, ಸೆಂಟ್‍ಪರ್ಸೆಂಟ್ ಗುಲಾಮರು' ಎಂದು ಹೇಳಿ ಹಳಿದುಕೊಳ್ಳುವ ವ್ಯಂಗ್ಯ ಇದೆ. ಅದರೊಳಗಿನ  ಒಳವ್ಯಂಗ್ಯವು ಪರಿಣಾಮಕಾರಿಯಾಗಿ ಬರುತ್ತದೆ-. ಉದಾಹರಣೆಗೆ,
  ಈ ದೇಶದಲ್ಲಿ ಎಲ್ಲವೂ
  ಆಮೂಲಾಗ್ರವಾಗಿ ಬದಲಾಗಬೇಕು.  ಆದರೆ
  ನಾನು ಕೂತ ಕುರ್ಚಿ, ಅದರ ಕೆಳಗಿನದೊಂದಿಷ್ಟಗಲ ನೆಲ
  ಇದ್ದಂತೆಯೇ ಇರಬೇಕು
                           (ಈ ದೇಶದಲ್ಲಿ)

ಇಷ್ಟೆಲ್ಲಾ ಪ್ರಕಟಗೊಳ್ಳುವ ವ್ಯಂಗ್ಯವು ಚಿಕಿತ್ಸಕ ನೆಲೆಯಿಂದಲೇ ಹುಟ್ಟುತ್ತದೆ.  ಇದು ಪರೋಕ್ಷವಾಗಿ ಶುದ್ಧೀಕರಣದ ಆಶಯವುಳ್ಳುದ್ದು.  ಅವರ `ಕಸಪೊರಕೆ' ಕವಿತೆಯ ಸಾಲುಗಳನ್ನು ಇಲ್ಲಿ ಉಲ್ಲೇಖಿಸುವುದಾದರೆ.
  ಈ ಮನೆಯ
  ಶುದ್ಧೀಕರಣವೆ ನಮ್ಮ ಕಸುಪೊರಕೆಗಿರುವ ಗುರಿ
  ಕಸಪೊರಕೆಯೆನಗೆ ಗುರು ; ಮತ್ತೆನ್ನ ಬಾಳಗುರಿ
                        (ಕಸಪೊರಕೆ)

  (ಊ)
`ಕುವೆಂಪು ಪರಂಪರೆಯ ಕವಿ ನಾನು' ಜಿ.ಎಸ್. ಶಿವರುದ್ದಪ್ಪನವರೇ ಆಗಾಗ್ಗೆ ಹೇಳುವುದುಂಟು.  ಕುವೆಂಪು ಪ್ರತಿಪಾದಿಸಿದ ಸರ್ವೋದಯ ತತ್ವ ಆಥವಾ ಸರ್ವರಿಗೆ ಸಮಬಾಳು ಎಂಬುದು ಜಿ‌ಎಸ್‌ಎಸ್ ಅವರು ಹುಡುಕಾಡುವ ಸಮಾನತಾ ಆಶಯಗಳಿಗೆ ಹತ್ತಿರವಿದೆ.  ಅವರು ಕುವೆಂಪು ಸರ್ವೋದಯತತ್ವವನ್ನು ರೂಢಿಸಿಕೊಳ್ಳುವುದು ಎರಡು ನೆಲೆಗಳಿಂದ.  ಒಂದು ಸಾಮಾನ್ಯತೆಯ ದರ್ಶನದಿಂದ ; ಇನ್ನೊಂದು ಸರ್ವರಿಗು ಸಮಬಾಳು ಎನ್ನುವ ತತ್ವವನ್ನು ವಿಶಾಲಾರ್ಥದಲ್ಲಿ ನಿರೂಪಿಸುವುದರಿಂದ.

ಜಿ‌ಎಸ್‌ಎಸ್ ಕಾವ್ಯವು ಸಾಮಾನ್ಯತೆಯ ದರ್ಶನದಲ್ಲೇ ರೂಪುಗೊಂಡಿರುವಂತದ್ದು.  `ಶ್ರೀಸಾಮಾನ್ಯವೇ ಭಗವದ್ಮಾನ್ಯ' ಎನ್ನುವ ಒಳನೋಟ ಮತ್ತು ವಿಕಾಸತತ್ವದ ಅರಿವುಗಳೇ ಅವರ ಕಾವ್ಯವನ್ನು ಮುನ್ನಡೆಸಿವೆ ಮತ್ತು ಅವು ಅವರ ಸಾಮಾಜಿಕ ಸಾಮಾರಸ್ಯದ ಆಶಯಗಳೂ ಆಗಿವೆ.  `ಸಮಾನ್ಯತಾ ರೀತಿ ಅದರ ಪ್ರೀತಿ' (ಗೊಂಬೆಯಾಟ) ಎಂದು ಗುರುತಿಸಿಕೊಳ್ಳುವ ಕವಿ,
  ಬಹುದೊಡ್ಡ ಮಾತನಾಡುತ್ತ
  ದಿನದಿನದ ಸರಳ ಸಾಧಾರಣ ಬದುಕಿ
  ಗವಮಾನ ಮಾಡುವವರನ್ನು ಕಂಡರೆ
  ನನಗಾಗುವುದಿಲ್ಲ.
                          (ನಿಲುವು)

ಹೀಗೆ ಅವರು ಸಾಮಾನ್ಯರ ಬದುಕಿಗೆ ಹೊರಳಿ ನಿಲ್ಲುತ್ತಾರೆ. ಅವರ ಹಣತೆಯ ರೂಪಕವನ್ನು ಇಲ್ಲಿಯೂ ಹಿಂಜಬಹುದಾದರೆ, ಅದೂ ಸಹ ಅವರ ಸಾಮಾನ್ಯತೆಯ ದರ್ಶನಾ ರೂಪಕವೇ ಆಗಿದೆ ಎನ್ನಬಹುದು.

ಕುವೆಂಪು ಅವರ ಸಾಹಿತ್ಯದಲ್ಲಿ ಬರುವ ಶ್ರೀಸಾಮಾನ್ಯನ ಪಾತ್ರವು ಬಂಡಾಯ ಸಾಹಿತ್ಯ ಮತ್ತು ವಿಮರ್ಶೆಗಳಲ್ಲಿ ಮತ್ತಷ್ಟು ಸ್ಫುಟವಾಯಿತು. ಅಲ್ಲದೆ ತಾತ್ವಿಕ ಬೆಂಬಲವನ್ನೂ ಪಡೆದುಕೊಂಡಿತು.  ಜಿ.ಎಸ್.ಶಿವರುದ್ರಪ್ಪನವರ ಕಾವ್ಯದಲ್ಲಿ ಅಂಚಿನಲ್ಲಿರುವವರನ್ನು ಕೇಂದ್ರಕ್ಕೆ ತರುವ ಪಲ್ಲಟಗಳ ಸೂಚನೆಯಿದೆ. ಬಂಡಾಯವು ಇದನ್ನು ಪ್ರತಿಪಾದಿಸಿತು.  ಪುರೋಹಿತಶಾಹಿಯನ್ನು ಖಂಡಿಸುವ, ಮಠಾಧಿಪತಿಗಳನ್ನು ಟೀಕಿಸುವ ಪ್ರವೃತ್ತಿಯೂ ಅವರ ಹಲವಾರು ಕವನಗಳಲ್ಲಿ ಕಾಣುತ್ತದೆ.  ಶೂದ್ರಸಮೂಹದ ಈ ವ್ಯವಸ್ಥೆಯಲ್ಲಿ ನರಳುತ್ತಿರುವುದನ್ನು ಗುರುತಿಸುವ `ಶೂದ್ರನಿಗೊಂದು ಪತ್ರ' ಕವನ ಮುಖ್ಯವೆನಿಸುತ್ತದೆ.  ಶೂದ್ರನ ಅಸ್ತಿತ್ವವು ಇನ್ನಿಲ್ಲದಂತೆ ಅಂಚಿಗೆ ತಳ್ಳಲ್ಪಟ್ಟಿದೆಯೆನ್ನುವುದನ್ನು ಖೇದದಿಂದ ಗುರುತಿಸುವ ಕವನ ಆದು :
  ನಾಮಕೆ, ಜುಟ್ಟಿಗೆ, ದಾರ, ವಿಭೂತಿಗೆ
  ಸದಾ ಬಾಗುತ ಕಾಲೊತ್ತುತ್ತವೆ
  ದಿಂಡಿರುಳುತ್ತವೆ
  ಚೂರುಪಾರಿಗೇ ಪರದಾಡುತ್ತವೆ.
  ಹೀಗಿರುವೀ ಮುಂದೆಯ ಕೂಡಿಸಿ
  ಹೊಸಹೊಳೆಯಲ್ಲಿವನೆಲ್ಲವ ಮೀಯಿಸಿ
  ತೊಳೆಯಬಹುದೇ ಶತಮಾನದ ಕೊಳೆಯ?
  ಏನು ಮಾಡುವುದು, ಹೇಳೋ ಗೆಳೆಯ ?
                        (ಶೂದ್ರನಿಗೊಂದು ಪತ್ರ)

  ಹಾಗೇ ಪೂರಕವಾಗಿ ಈ ಸಾಲುಗಳನ್ನು ಗಮನಿಸಬೇಕು :
  ಮುಗ್ಧರೆದೆಯ ಗದ್ದೆಗಳಲ್ಲಿ
  ಮತ-ಮೌಢ್ಯದ ಬೀಜವ
  ಸದಾ ಬಿತ್ತಿಬೆಳೆಯ ತೆಗವ
  ಚಾಣಾಕ್ಷರ ವೈಭವ
  ಇವರ ನಡುವೆ ಪಠಿಸಬಹುದೆ
  ಸರ್ವೋದಯ ಮಂತ್ರವನು
              (ಪ್ರಗತಿ)

ಅವರ ಇತ್ತೀಚಿನ ಪದ್ಯ `ಕಿಷ್ಕಿಂದೆಯ ಕತ್ತಲಲ್ಲಿ' ಕವಿತೆಯಲ್ಲಿ ವೈದಿಕ ಪರಂಪರೆಗೆ ಬಲಿಬೀಳುವ ಶೂದ್ರಸಮುದಾಯದ ಬಗ್ಗೆ ಮರುಕವಿದೆ.  ಹಾಗೂ ಅವರ ಶಕ್ತಿವ್ಯಯವಾಗುತ್ತಿರುವುದನ್ನು ಗುರುತಿಸಿ, ಅವರ ಬಾಳು ಕತ್ತಲಾಗಿರುವುದನ್ನು ಕಾಣಿಸುತ್ತದೆ.
  ವೀರವಾಲಿಯನು ಮರೆಮೋಸದಿಂದಿರಿದ | ವನ
  ಬೆನ್ನ ಹಿಂದೆಯ ಹೋದ ನಮ್ಮವರು ಸುರಕ್ಷಿತವೆ,
  ರಕ್ಕಸ ಪಡೆಯ ರಣರಂಗದಲ್ಲಿ?
                    (`ಕಿಷ್ಕಿಂಧೆಯ ಕತ್ತಲಲ್ಲಿ')

ಆದರೆ ಅದೇ ಪದ್ಯದಲ್ಲಿ ಸುಪ್ತವಾದ ಶೂದ್ರಶಕ್ತಿಯ ಬಗೆಗಿನ ನಂಬಿಕೆಯು ಸಮಾಧಾನದ ಅಂಶವಾಗಿದೆ :
   ....ಯಾವ ನಿಜವಾದ
  ಸತ್ವವೂ ಬತ್ತಿಹೋಗುವುದಿಲ್ಲ ಇದ್ದ
  ಕಿಂದ್ದಂತೆಯೇ ಸುಪ್ತವಾಗಿರುವುದು, ಈ
  ಬೆಳೆವ ಮಕ್ಕಳ ಒಳಗೆ, ಮರವು ಮಲಗಿದ
  ಹಾಗೆ ಬೀಜದೊಳಗೆ.....

ಶೂದ್ರ ಸಂಸ್ಕೃತಿಯ ಬಗೆಗಿನ ಈ ನಂಬಿಕೆ ಸಾಮಾಜಿಕ ಸಾಮರಸ್ಯದ ಕಾಳಜಿಯಿಂದ ಬಂದಿದ್ದು ಎನ್ನಬಹುದು.  ರಹಮತ್ ತರೀಕೆರೆ ಅವರು ತಮ್ಮ ಇತ್ತೀಚಿನ ಲೇಖನವೊಂದರಲ್ಲಿ ಶ್ರೀರಾಮ, ಲಕ್ಷ್ಮಣ ಸೀತೆಯರ ಮುಂದೆ  ಕೈಮುಗಿದು ಮಂಡಿಯೂರಿ ಕುಳಿತು ಆಂಜನೇಯನನ್ನು ವೈದಿಕಶಾಹಿಯು ಅವೈದಿಕರನ್ನು ಚಿತ್ರಿಸುವ ರೀತಿಯಾಗಿ ಗುರುತಿಸಿದ್ದಾರೆ.  `ವ್ಯಕ್ತಮಧ್ಯ'ದ ಕವನಗಳಲ್ಲಿ ಈ ಅರಿವು ವ್ಯಕ್ತವಾಗುವುದರೊಂದಿಗೆ, ತಮ್ಮ ಕಾಳಜಿಯನ್ನು ಕವಿ ತೋರ್ಪಡಿಕೊಳ್ಳುತ್ತಾರೆ ಎನ್ನಬಹುದು.

ಸ್ತ್ರೀಯರ ಬಗೆಗಿನ ಅವರ ದೃಷ್ಟಿಯು ಘನವೆತ್ತದ್ದಾಗಿದೆ.  ಈ ದೃಷ್ಟಿಗೆ ರಮ್ಯಹಿನ್ನೆಲೆಯಲ್ಲಿ ಸ್ಫೂರ್ತಿ ಒದಗಿದೆ.  ಪ್ರಕೃತಿಯ ಜೊತೆ ಸ್ತ್ರೀಯನ್ನು ಸಮೀಕರಿಸುವ ನವೋದಯದ ಭಾವವು ಇಲ್ಲಿದೆ.  ಸ್ತ್ರೀಕೇಂದ್ರಿತ ಕವನಗಳು ಹಲವಾರು ಜಿ‌ಎಸ್‌ಎಸ್ ಕಾವ್ಯದಲ್ಲಿ ಕಾಣುತ್ತವೆ.  ಮೆಟಫಿಸಿಕಲ್ ಆದ  ದೃಷ್ಟಿಕೋನವೇ ಇಲ್ಲಿಯು ಕೆಲಸ ಮಾಡುತ್ತದೆಯಾಗಿ, ಸ್ತ್ರೀಯ ಔನ್ನತ್ಯವೇ ಹೆಚ್ಚು ಕಾಣುತ್ತವೆ.  ಇದರ ಬಗೆಗಿನ  ತಾತ್ವಿಕ ಜಿಜ್ಞಾಸೆಗಿಂತ ಕವಿಯ ಕಾಳಜಿಯು ಸಾಮಾಜಿಕ ಸಾಮರಸ್ಯದ ಕಡೆಗೆ ತುಡಿಯುವ ಅಂಶವನ್ನು ಇಲ್ಲಿ ಗುರುತಿಸಬಹುದು.

ಈ ಎಲ್ಲಾ ಅಂಶಗಳಲ್ಲಿ ಜಿ‌ಎಸ್‌ಎಸ್ ಅವರ ಕಾವ್ಯವು ಸಬಾಲ್ಟ್ರನ್ ಅಂಶಗಳನ್ನು ಶ್ರೀಮಂತವಾಗಿ ಹೊಂದಿದ ಕಾವ್ಯವಾಗಿ ಕಾಣುತ್ತದೆ.  ಚರಿತ್ರೆಯನ್ನು ಅವರು ಅನುಸಂಧಾನ ಮಾಡುವ ರೀತಿಯೂ ವಿಭಿನ್ನವಾಗಿದ್ದು, ಚರಿತ್ರೆಯ ಪುನರಾವಲೋಕನಕ್ಕೆ ದಾರಿ ಮಾಡಿಕೊಳ್ಳುತ್ತದೆ.  ಇದುವರೆಗು ರಾಜಮಹಾರಾಜರ ಜೀವನ ಕತೆಗಳು, ಆವರ ಧೈರ್ಯಸಾಹಸದ ಕತೆಗಳನ್ನೇ ಚರಿತ್ರೆ ಎಂದು ನಂಬಿಸಲಾಗಿತ್ತು.  ಅದನ್ನು ಕವಿ ಮೊದಲು ಪ್ರಶ್ನಿಸಿಕೊಳ್ಳುತ್ತಾರೆ :
  ಈ ಚರಿತ್ರಯ ಚಕ್ರದಡಿ
  ನುಚ್ಚು ನೂರಾದವರು ಈ ಸಾ
  ಮಾನ್ಯ ಜನರೇ.  ಯಾರು ಬರೆದಿಟ್ಟಿದ್ದಾರೆ
  ಈ ಇವರು ಪಟ್ಟಪಾಡುಗಳನ್ನು?  ಶಾಸನದ ತುಂಬ
  ರಾರಾಜಿಸಿವೆ ಸದಾ ಪಟ್ಟಭದ್ರರ ಹೆಸರೇ.....
                                                  (ಚರಿತ್ರೆ ಅಂದರೆ-....)
ಏಕಲವ್ಯನ ಬೆರಳನ್ನು ಬಲಿತೆಗೆದುಕೊಂಡ ಕತೆಯನ್ನು ಚರಿತ್ರೆಯ ವಿಶ್ಲೇಷಣೆಗೆ ಬಳಸಿಲೊಳ್ಳುವ ಕವಿ ಹೇಳುತ್ತಾರೆ :
  ಬೆರಳಿನ ವಿಚಾರ ಹಾಗಲ್ಲ
  ಶೋಷಣೆಗೆ ಎಷ್ಟು ಮುಖ್ಯ? ಅದು
  ಚರಿತ್ರೆಯ ವಿಷಯ
            (ಚಕ್ರಗತಿ)

ಇಂಥ ಚರಿತ್ರೆಯ ವಿಷಯದ ಬಗ್ಗೆ ಜಾಗೃತರಾಗಿರಬೇಕೆಂಬುದೇ ಕವಿಯ ನಿಲುವು.  ಯಾವ ಕಾರಣಕ್ಕೂ ಚರಿತ್ರೆಯ ವೈಭವೀಕರಣ ಸಲ್ಲದೆಂಬ ಧೋರಣೆಯೂ ಅವರಲ್ಲಿದೆ.
  ಮುಂದಕ್ಕೆ ಚಲಿಸುತ್ತಿದ್ದರೆ ಅದು ಚರಿತ್ರೆ
  ನಿಂತು ಮಡುಗಟ್ಟಿದರೆ ಪುರಾಣ
  ಪರಿಸ್ಥಿತಿ ಹೀಗೆ ಪುರಾಣವಾಗುತ್ತಲೇ
  ಶುರುವಾಗುತ್ತದೆ ಅದರ ಪಾರಾಯಣ
                      (ಚರಿತ್ರೆ-ಪುರಾಣ)

ಚಾರಿತ್ರಿಕ ನಡೆಯನ್ನು ಗತಿಶೀಲತೆಯಿಂದ ಗುರುತಿಸುವ ಕವಿಗೆ, "ಚರಿತ್ರೆ ಎಂದರೆ ನಡೆದುದಷ್ಟೇ ಅಲ್ಲ, ನಡೆಯುತ್ತಿರುವುದೂ ಆಗಿದೆ".  ವಿಕಾಸಕ್ರಮದ ಗತಿಶೀಲತೆಯು ಜಿ‌ಎಸ್‌ಎಸ್ ಕಾವ್ಯದ ಒಳನೋಟ. `ಚಕ್ರ'ದ ಮೂಲಕ ಸಂಕೇತಿಸಿ ಅದನ್ನವರು ಸೂಚಿಸುತ್ತಾರೆ:
  ಈ ಕಾಲ ಮುಗಿತಾಯಕ್ಕೆ ಬಂದಿದೆ
  ಬದಲಾಗುವುದು ಅಗತ್ಯ
  ಚಕ್ರ ತಿರುಗುವುದಕ್ಕೆ
            (ಹೊಸಹುಟ್ಟು)

ಆವರ್ತನ ಗತಿಶೀಲತೆಯನ್ನು ಸೂಚಿಸುವ ನಿಟ್ಟಿನಲ್ಲಿ ಮನ್ವಂತರ ಮತ್ತು ಯುಗಾದಿಯ ಪರಿಕಲ್ಪನೆಗಳು ವ್ಯಕ್ತವಾಗುತ್ತವೆ.

ಜಿ.ಎಸ್.ಶಿವರುದ್ರಪ್ಪನವರ ಕಾವ್ಯವು `ಕಟ್ಟುವ' ರಚನಾತ್ಮಕ ನೆಲೆಯದು. ಸಮಷ್ಟಿಯನ್ನು ಕಟ್ಟಿಕೊಳ್ಳುವ ನೆಲೆಯಲ್ಲಿ ಅದು ವಿಕಾಸವಾಗುತ್ತದೆ.  ಇದಕ್ಕಾಗಿ ಸಮಗ್ರತೆಯ ದೃಷ್ಟಿಯೊಂದನ್ನು ಕವಿ ಹೊಂದಿದ್ದಾರೆ.  ಆ ಕಾರಣದಿಂದಲೇ ಸಾಮಾಜಿಕ ಅಸಮತೋಲನಗಳು ಸಾಮರಸ್ಯವನ್ನು ಹಾಳುಗೆಡಹುವ ಅಂಶಗಳಂತೆ ಅವರಿಗೆ ಕಾಣುತ್ತದೆ.  ವಾಸ್ತವವಾಗಿ ಪರಿಪೂರ್ಣತೆಯನ್ನು ಕಲ್ಪನೆಯು ರಮ್ಯವಾದಿ ನಿಲುವೇ ಹೌದು.  ಒಂದು ಪರಿಪೂರ್ಣ body politic   ನ ಸ್ವರೂಪವನ್ನು ಪರಿಭಾವಿಸುವ ಕವಿ ಅದನ್ನು `ಜನಗಣಮನ ಅಧಿನಾಯಕ' ಎನ್ನುವ ಕಲ್ಪನೆಯಲ್ಲಿ ಕಾಣುತ್ತಾರೆ. ಈ ಕಲ್ಪನೆಯು ಚಲಿಸುವ ಚಕ್ರದಂತೆ ಕಂಡು ವಿಕಾಸಕ್ಕಾಗಿ ಆವರ್ತನೆಗೊಳ್ಳುವಂತದ್ದು.  ಚಕ್ರದಲ್ಲಿನ ಕಡ್ಡಿಗಳು ಭಂಗಗೊಂಡರೆ ವಿಕಾಸದ ಚಲನೆಯು ಹಿಮ್ಮುಖವಾಗಿಬಿಡುತ್ತದೆ. ಜನತಂತ್ರದಲ್ಲಿ ನಂಬಿಕೆಯಿಟ್ಟಿರುವ ಕವಿಗೆ ಅದರ ವಿಕಾಸವು ಮುಖ್ಯವೇ ವಿನಾಶವಲ್ಲ.  ಆದ್ದರಿಂದಲೇ ಅದು ಹಾಳಾಗುತ್ತಿದೆ ಎನ್ನುವ ಸಂದರ್ಭದಲ್ಲೆಲ್ಲ ಅದನ್ನು ಪರಿಶೀಲಿಸುವ, ವ್ಯಂಗ್ಯಮಾಡುವ ಚಿಕಿತ್ಸಕ ಕ್ರಮಗಳಲ್ಲಿ ಕಾಳಜಿಯನ್ನು ವ್ಯಕ್ತಪಡಿಸುತ್ತಾರೆ. ಅವರ ಈ ಸಾಲುಗಳನ್ನು ನೋಡಬೇಕು:
  ಜನಗಣಮನ ಅಧಿನಾಯಕ
  ಕೀಲನು ಕಳಚುವ ತಂತ್ರಗಳು
     (ಸ್ವಾತಂತ್ರ್ಯೋತ್ಸವ-೧೯೮೪)

ಕೀಲು ಮುರಿಯದ ಸಮಗ್ರತೆಯ ಕಲ್ಪನೆಯೇ ಇಲ್ಲಿ ಆವರಿಸಿದೆ.  ಹಾಗೆಯೇ ಅವರ `ಒಡೆದ ಕನ್ನಡಿ' ಪದ್ಯವನ್ನು ಉದಾಹರಿಸುವುದಾದರೆ ಅಲ್ಲಿಯೂ ಕನ್ನಡಿ ಪೂರ್ಣದೃಷ್ಟಿಯ ಸಮಗ್ರತೆಯ ಸಂಕೇತ. ಅದರಲ್ಲಿ ಬಿರುಕುಗಳುಂಟಾದರೆ ಪೂರ್ಣನೋಟ ಸಾಧ್ಯವಾಗದು.
ಈ ಅರಿವು ಇರುವುದರಿಂದಲೇ ಕವಿ ಹೇಳುತ್ತಾರೆ ;

  ಒಡೆದಿರುವೀ ಕನ್ನಡಿ ಬಿರುಕಿನ ಗೆರೆಗೆರೆಯೇ
  ಗಡಿರೇಖೆಯೇ ಗುರುತು,
  ಕಾಣುವುದೆಂತೀ ಸಮಗ್ರ ಮಾನವ್ಯದ ಮುಖವಿದರೊಳು
  ಬರಿ ವಿಕೃತಿಯ ಹೊರತು?
                      (ಒಡೆದ ಕನ್ನಡಿ)

ಇದೇ ಪದ್ಯದಲ್ಲಿ ಬರುವ ಪದಪುಂಜ-`ಒಡೆದ ಹಡಗಿನತುಂಡು' ಎನ್ನುವುದೂ ಸಹ ಸಮಗ್ರತೆಯ ದೃಷ್ಟಿಕೋನದಲ್ಲೇ ಹುಟ್ಟಿರುವಂಥದ್ದು.  ಇದೊಂದು ರಮ್ಯಕಲ್ಪನೆಯೇ.  ಸಿನಿಕತೆಯ ಸೋಂಕಿಲ್ಲದೆ ಕವಿ ರಮ್ಯಭಾವದಿಂದಲೇ ಆಶಾವಾದಿಯಾಗಬಲ್ಲರು.  ಹಾಗಾಗಿ ಅವರು ಹೇಳುತ್ತಾರೆ ;
  ಒಂದೇ ಒಂದೇ ನಾವೆಲ್ಲರೂ ಒಂದೇ
  ಈ ದೇಶದೊಳೆಲ್ಲಿದ್ದರು
  ಭಾರತ ನಮಗೊಂದೇ
         (ಐಕ್ಯಗಾನ)
ಅವರ ಆಶಯವು ಧನಾತ್ಮಕವಾಗಿ ವ್ಯಕ್ತವಾಗುತ್ತದೆ :
  ಮೊಳೆವ ಪೈರಿನ ಮೇಲೆ ಬೆ೦ಕಿ
  ಮಳೆಗರೆದು ಹಾಳು ಮಾಡದಿರೋಣ
  ಸಾಧ್ಯವಾದಷ್ಟು ! ನೀರೆರೆದು ಬೆಳೆದು ಇಬ್ಬರೂ
  ಮನೆಯ೦ಗಳದ ಕಣದಲ್ಲಿ ಬಣವೆ ಕಟ್ಟೋಣ
  ತೂರಿಕೊಳ್ಳಲಿ ನಾಳೆ | ಇದರ ಜಳ್ಳು-ಕಾಳುಗಳನ್ನು
  ಈ ನಮ್ಮ ಮಕ್ಕಳೇ
                        (ಒಪ್ಪಂದ)

ಈ ಕಟ್ಟುವಿಕೆಯ ಆಶಯವು ಸಾಮರಸ್ಯವು ಆಶಯವೇ ಆಗಿದೆ.  ಇದೊಂದು ರಮ್ಯಭಾವವೇ ಆದರೂ, ಯಾವುದೇ ಒಂದು ಭೌತಿಕ ನಿರ್ಮಾಣಕ್ಕೂ ಕನಸುಗಳ ತಳಹದಿಯಿರಬೇಕು.  ಕನಸು, ದರ್ಶನಗಳಿಲ್ಲದೆ ಕಟ್ಟುವಿಕೆಯು ಸಂಭವಿಸುವುದಿಲ್ಲ.  ಕವಿಗೆ ಕನಸುಗಳಿವೆ.  ಆದರೆ ತೀರಾ ಭ್ರಮಾತ್ಮಕವಾಗಿಲ್ಲ.. ಈ ಕಾರಣದಿಂದಲೇ ಅವರು ಹೇಳುತ್ತಾರೆ ;
  ಈ ಕತ್ತಲೆಯನು ಗೆದ್ದು
  ನಿಲ್ಲುತ್ತೇನೆಂಬ ಜಿದ್ದಿನಿಂದಲ್ಲ
  ಹಣತೆ ಹಚ್ಚುತ್ತೇನೆ ನಾನು
        (ನನ್ನ ಹಣತೆ)

ಈ ರೀತಿಯ ಕನಿಷ್ಠ ಆಶಾವಾದ, ಕನಸುಗಾರಿಕೆಗಳಿಲ್ಲದೆ ಬದುಕು ಕಟ್ಟಿಕೊಳ್ಳಲು ಸಾಧ್ಯವಿಲ್ಲ ಅನ್ನಿಸುತ್ತದೆ.

ಕಟ್ಟುವಿಕೆಗೆ ಪರಿಕರವಾಗಿ ಕವಿ ಬಳಸುವುದು ಪ್ರೀತಿಯನ್ನು.  ಕಂಡುಕೊಳ್ಳುವ ಅರಿವು ಮತ್ತು ಸಹಸ್ಪಂದನದ ದಾರಿಗಳನ್ನು ಹೊಳೆಯಿಸುವುದು ಪ್ರೀತಿ. ಹೃದಯಗಳನ್ನು ಬೆಸೆಯಬಲ್ಲ, ಎಲ್ಲೆಗಳನ್ನು ಮೀರಿ ಸಮಷ್ಟಿಯ ಹಿತವನ್ನು ಕಾಣಬಲ್ಲ ಶಕ್ತಿ ಅದಕ್ಕಿದೆ.  ಪ್ರೀತಿಯೆನ್ನುವುದಿಲ್ಲಿ ಸ್ಥಾಯಿಭಾವವಾಗಿ ನಿಲ್ಲುತ್ತದೆ.
  ಪ್ರೀತಿ ಇಲ್ಲದ ಮೇಲೆ
  ದಕ್ಷಿಣಾಫ್ರಿಕದ ಕಗ್ಗತ್ತಲಿಗೆ
  ಬೆಳಕು ಮೂಡೀತು ಹೇಗೆ?
  (ಸೆರಮನೆಯ ಕಂಬಿಯ ನಡುವೆ
  ಕಮರುವ ಕನಸು ಕೊನರೀತು ಹೇಗೆ?
  ಬರಿ ಪದಕ್ಕೆ ಪದ ಜೊತೆಗಿದ್ದ ಮಾತ್ರಕೆ
  ಪದ್ಯವಾದೀತು
  ಹೇಗೆ?
            (ಪ್ರೀತಿ ಇಲ್ಲದ ಮೇಲೆ)

ಪ್ರೀತಿಯೆಂಬುದು ಸಂಯೋಜಕ ಶಕ್ತಿ.  ಇದು ಜಿ. ಎಸ್. ಶಿವರುದ್ರಪ್ಪನವರು ಕಾಣುವ ಸಾಮರಸ್ಯದ ದರ್ಶನ.  `ಅವೈರದಿಂದ ಮಾತ್ರ ವೈರವು ನಾಶವಾಗುತ್ತದೆ.2 ಇದೇ ಸನಾತನ ಧರ್ಮ' ಎನ್ನುತ್ತಾನೆ ಬುದ್ಧ.  ಆ ಧರ್ಮಚಕ್ರ ನಿರಂತರವಾಗಿ ತಿರುಗುತ್ತ ಪ್ರೀತಿಯ ವಿಕಾಸಕ್ರಮವನ್ನು ಕಂಡುಕೊಳ್ಳುವಂತೆ ಜಿ‌ಎಸ್‌ಎಸ್ ಆವರ ಕಾವ್ಯದ ದರ್ಶನ ಇದೆ.  ಅವರ ಸಾಲುಗಳಲೇ ಈ ಲೇಖನವನ್ನು ಕೊನೆಗಾಣಿಸುವುದಾದರೆ,
  ಒಲವಿಗೆ ಒಲವಲ್ಲದೆ
  ಬೇರೇನಿದೆ ಕೊಡುಗೆ
           (ಮಳೆ)
(ಕರ್ನಾಟಕ ಸಾಹಿತ್ಯ ಆಕಾಡೆಮಿ ಫೆಬ್ರವರಿ ೨೦೦೭ ರಲ್ಲಿ ಜಿ‌ಎಸ್‌ಎಸ್ ಅವರ ಮೇಲೆ ಏರ್ಪಡಿಸಿದ್ದ ವಿಚಾರಸಂಕಿರಣದಲ್ಲಿ ಮಂಡಿಸಿದ ಪ್ರಬಂಧ).
ಆಕರ ಗ್ರಂಥಗಳು
1.  ಜಿ.ಎಸ್-ಶಿವರುಪ್ರಪ್ಪ, ಸಮಗ್ರಕಾವ್ಯ.
2. ಹಣತೆ (ಜಿ.ಎಸ್.ಶಿದರುವುಪ್ಪ ಅಭಿನಂದನ ಗ್ರಂಥ).

                     *****

ಕೀಲಿಕರಣ: ಎಂ. ಎನ್. ಎಸ್. ರಾವ್

0 ಕಾಮೆಂಟುಗಳು:

ಕಾಮೆಂಟ್‌‌ ಪೋಸ್ಟ್‌ ಮಾಡಿ