ಕರುಣಿಕರು ಕೊಟ್ಟ ಆರಪಾವು ಜೋಳ

-ಶಿಶುನಾಳ ಶರೀಫ್

ಕರುಣಿಕರು ಕೊಟ್ಟ ಆರಪಾವು ಜೋಳದಿಂದ
ಹೊಟ್ಟೆ ಬರ ಹಿಂಗುವುದ್ಯಾಂಗಲೋ ಮನಸೇ               ||ಪ||

ಸ್ಥಿರವಲ್ಲ ಸಂಸಾರ ಕೆರವನಟ್ಟಿಯ ಸರಿ
ಬರಿದೆ ಆಸೇಕ ಬಿದ್ದಲ್ಲೋ ಮನಸೇ                            ||ಅ.ಪ.||

ನೇಮಿಸಿ ದೇಶಪಾಂಡೆ ಭೀಮರಾಯನೆಂಬೊ
ನಾಮವನು ಕೇಳಿ ಬಂದೆಲ್ಲೋ ಮನಸೇ
ಇವನ್ನು ಕೊಡುತಿದ್ದಿಲ್ಲ ಶಿವನೇ ಸದ್ಗುರು ಬಲ್ಲಾ
ಅವರಪ್ಪ ಬಲು ಜ್ಞಾನಿಯೋ ಮನಸೇ                         ||೧||

ಸತಿ ಸಂತರ ಹಸಿವಿಗೊದಗದ ಕಾಳು ಮನಿಗೊಯ್ಯೋ
ಮತಿಗೇಡಿಯೆನ್ನುತಿಹರೋ ಮನಸೇ
ಜತನದಲಿ ಮಹಾರಾಯನ ಸರಕಿನೊಳಗೆ ಸುರುವಿ
ಹಿತದಿ ಹಿಂದಕ್ಕೆ ನೀ ನಡಿಯಲೋ ಮನಸೇ                 ||೨||

ಆರು ಬೇಡಿದರಿಲ್ಲಾ ಆರು ಕಾಡಿದರಿಲ್ಲಾ
ಪ್ರಾರಬ್ದ ಕೃತಭೋಗವು ಮನಸೇ
ಚಾರುತರದ ವ್ರ್‍ಇಷಬನಮಂತ್ರ ಬಲವಿರಲು
ನರರ ಹಂಗಿನ್ನೇನಲೋ ಮನಸೇ                              ||೩||

ಇಂದಿಗೆ ದುಷ್ಕಾಳ ವಂದೇ ಎನ್ನಲಿಬ್ಯಾದ
ಮುಂದೆ ಪ್ರಳಯ ಕಾಲವೋ ಮನಸೇ
ಬಂದ ಭವಾ ಕಳಿದು ಶಿಶುನಾಳ ಮಂದಿರದಿ ಗೋ-
ವಿಂದ ಗುರುವಿನ ಹೊಂದಿಕೋ ಮನಸೇ                      ||೪||

****

ಕೀಲಿಕರಣ: ಎಂ.ಎನ್.ಎಸ್. ರಾವ್

0 ಕಾಮೆಂಟುಗಳು:

ಕಾಮೆಂಟ್‌‌ ಪೋಸ್ಟ್‌ ಮಾಡಿ