ಮಹಾನಗರ ರಸ್ತೆ - ಮರುಚೇತನ

-ರವಿ ಕೋಟಾರಗಸ್ತಿ
ಚಿತ್ರ: ರಾಂಗೋಪಾಲ್ ರಾಜಾರಾಮ್












ಮಹಾನಗರದ ಮುಖ್ಯ ರಸ್ತೆಯಾಗಿದ್ದು
ನನ್ನ ಅಸ್ತಿತ್ವಕ್ಕೆ ನಾನೇ ಶಪಿಸುತ್ತಾ
ತಲೆ ಎತ್ತುವ ಧನ್ಯತೆ ಕಳೆದಿತ್ತು.

ಬಾಯಾರಿದ ಭೂ ಒಡಲು ಹಸಿರಾಗಿಸಲು
ಧಾರಾಕಾರ ವರುಣನ ವಿಜಯೋತ್ಸವ
ತಗ್ಗು-ಗುಂಡಿಗಳಲಿ ನನ್ನ ದೇಹದ ವಸ್ತ್ರಾಪಹರಣ

ಮಾನ ಬಿಟ್ಟವರು ನನ್ನ ಮಾನ ಮುಚ್ಚಲು
ಬರಿ ಉಸುಕು-ಮಣ್ಣು ಚೆಲ್ಲುತ ಗುಳಂವಾಗಿಸುವರು
ಆಡಳಿತ-ಅಧಿಕಾರಿಗಳು ನೂರು ಸಾವಿರ ಲಕ್ಷ ಲಕ್ಷ

ಸ್ವಾಭಿಮಾನ ಮರೆತ ನಗರವಾಸಿಗಳು
ನನ್ನ ಮೈಮೇಲೆ ನಡೆದಾಡುವಾಗೊಮ್ಮೆ
ಏಳುತ್ತ-ಬೀಳುತ ಹಾಕುವರು ಶಾಪ-ತಾಪ

ತಮಗಾದ ಅನ್ಯಾಯ ಪ್ರತಿಭಟಿಸದಿರುವ
ನಗರವಾಸಿ ನಾಗರಿಕ ವರ್ಗದ
ಭವಿಷ್ಯ ಮೆಲುಕಾಡಿಸುತ್ತಾ ಮೈಚಾಚಿ ಮಲಗಿರುವೆ

ಸ್ವಾತಂತ್ರ್‍ಯ ಸಿಕ್ಕು ಅರ್ಧಶತಕವಾದರೂ
ನಡೆದಿರುವವು ನನ್ನಿಹ ಮೈಮೇಲೆ
ಅತ್ಯಾಚಾರ ಭಾಷೆ-ಕೋಮು ದ್ವೇಷದ ಇರಿತಗಳು

ಕಾರ್ಮಿಕರ ಮೌನ ಹೋರಾಟ - ಮುಷ್ಕರ
ಅಬಲೆಯರ ಆರ್ತನಾದ ಅಪಘಾತ ಗಲಭೆಗಳ
ರಕ್ತದ ಮಡುವಿನಲ್ಲಿ ನರಳಾಟ ಕೇಳುತ ಮೌನವಾಗಿರುವೆ.

ಹುಸಿ ಭರವಸೆ ನೊಂದವರ ನಿಟ್ಟುಸಿರು
ಕೇಳುತ ನೋಡುತ ಬೇಸತ್ತು ಮಲಗಿದ್ದೆ
ಪುಳಕಿತಗೊಂಡೆ ಈ ದಿನ ವೀರಯೋಧರ ಶವಯಾತ್ರೆ ತಿಳಿದು

ದಶ ದಶಕಗಳಿಂದ ಬರಿ ಡಂಬಾಚಾರದ
ನಯ - ವಂಚಕರಿಂದ ತುಳಿಸಿಕೊಂಡು ಸಾಕಾಗಿದ್ದ
ಮೈಮನ ಕಾತರಿಸುತ್ತಿದೆ ವೀರಯೋಧನ ಸ್ಪರ್ಶಕ್ಕಾಗಿ

ಮಾತೃ-ಭೂಮಿಯ ಗಡಿ-ಶಿಖರಗಳಲಿ
ಮಡಿದ-ಮಕ್ಕಳು ಮನೆ ಎನ್ನದೆ
ರಾಷ್ಟ್ರಪ್ರೇಮದ ದೃಢತೆಯಲಿ ಶತ್ರುಗಳ ಸದ್ದಡಗಿಸಿ
ಜೀವ ನೀಡಿದ ವೀರ ಆ ಧೀರ ಸೈನಿಕರು

ನಗರ-ನಾಗರಿಕ ಸನ್ಮಾನ-ಹೆಮ್ಮೆಯ ದುಃಖದಿ ಕಣ್ಣೀರು
ಶವಪೆಟ್ಟಿಗೆಯಡಿ ವೀರ ಜವಾನರು
ಕೊನೆ ಮೆರವಣಿಗೆ ಮೈಮೇಲೆ ಸಾಗುವ ಕ್ಷಣ
ರೋಮಾಂಚನದಿ ದೇಹದ ಕಣ ಕಣವೂ ಧನ್ಯ ಧನ್ಯ

ಹೊತ್ತವರು-ಹೆತ್ತವರೆಲ್ಲಾ ಅತ್ತರು ಹೆಮ್ಮೆಯಲಿ
ಸಾಗಿತ್ತು ರಸ್ತೆಯುದ್ದಕ್ಕೂ ಅಂತಿಮ ಶವ ಯಾತ್ರೆ-ಜಾತ್ರೆ
`ಜವಾನ-ಅಮರ ರಹೇ' ಮುಗಿಲು ಮುಟ್ಟಿದ ಘೋಷಣೆ

ತಾಯಿನಾಡಿಗಾಗಿ ಮಡಿದ ವೀರ ಜವಾನರ ಸ್ಪರ್ಶ
ನನ್ನ ಅಸ್ತಿತ್ವದ ಸಾರ್ಥಕತೆಗೆ ಜೀವ ತುಂಬಿತು
ಮರು ಚೇತನದಿ ಈ ತನುವು ಧನ್ಯತೆ ಪಡೆದಿತ್ತು.

         *****

ಕೀಲಿಕರಣ: ಕಿಶೋರ್‍ ಚಂದ್ರ

0 ಕಾಮೆಂಟುಗಳು:

ಕಾಮೆಂಟ್‌‌ ಪೋಸ್ಟ್‌ ಮಾಡಿ