ಹೆಂಡಗಡಂಗಿನ ಚಿತ್ರ

- ಮಂಜುನಾಥ ವಿ ಎಂ

ಗೋಡೆ ಮೇಲಿನ ದೊಡ್ಡ ಗಾತ್ರದ ಎಲೆಗಳ ಹೂಬಳ್ಳಿ
ಸ್ತಬ್ಧ ಚಿತ್ರವಾಗಿಯಷ್ಟೇ ಉಳಿದಿದೆ.  ಎಂದೋ ಉದುರಿದ ಎಲೆಗಳು
ನೆಲ ಬಗೆದು ಬೂಮಿಯೊಡಲು ಸೇರಿ, ಗೆದ್ದಲಿಡಿದು ಎಲುಬು ತಿಂದ
ಮನುಷ್ಯನಂತೇ ಆಗಿಹೋಗಿವೆಯೇನೊ.

ಬುದ್ಧಿ ಬಂದಾಗ ಮೂಲೆ ಸೇರಿದ ಪ್ರಜ್ಞಾಹೀನ ಇನ್ನೂ ಮೇಲೆದ್ದಿಲ್ಲ.
ಉಡುಪು ಮಾಸಿಲ್ಲ, ಪ್ರೇಮ ಮಾತ್ರ ಬೆಂಕಿಯಂತೆ ಉರಿದು ಹೋಗುತಿದೆ.
ಮಳೆಗಾಲದ ಬಣ್ಣಬಣ್ಣದ ಚಿಟ್ಟೆಗಳು ಒಳಸುಳಿದು ಹೂದೋಟದತ್ತ ಹಾರಿಹೋಗಲಾರಂಭಿಸಿವೆ.

ಹುಲಿ ಆಡಿಸುವವನು ಈಗಷ್ಟೇ ಪೀಪಾಯಿ ಘಾಟು ಹೆಂಡ ಏರಿಸಿ,
ಜನರ ಮಧ್ಯೆಯೇ ನಡೆದುಹೋಗಿದ್ದಾನೆ.

ವಸಂತಮಾಸದ ಹಿರಿಮೆಯಲಿ ಹಿಗ್ಗುವ ಪ್ರಕೃತಿ ಸೌಂದರ್ಯದ ಮೋಹಕಪ್ರಭೆ - ಹೆಂಡಗಿರಾಕಿಗಳನ್ನು
ಯಥೇಚ್ಛವಾಗಿ ಕರೆತರುತ್ತಿದೆ.
ದಮ್ಮಡಿಯಿಲ್ಲದೆ ಕುಡಿದವನೊಬ್ಬ ಅಡವಿಟ್ಟು ಹೋದ ಸ್ಯಾಕ್ಸಫೋನ್
ಇನ್ನೂ ಅಡ್ಡಗೋಡೆಯ ಮೇಲಿದೆ.

ತಡಿಕೆ ಮರೆಯಲ್ಲಿ ಹಂದಿಬಾಡಿನ ಚಾಕಣ ಉರಿಯುತ್ತಿದ್ದವಳು ಮಾತ್ರ
ಅಂದು ಗೈರು ಹಾಜರು.  ಹಸಿ ನೆಲಗಡಲೆ, ಆಲೂಗಡ್ಡೆ ನಂಜಿಕೊಳ್ಳುವ
ಕುಡುಕರಿಗೆ ಅವಳ ಚಿಂತೆಯೇ ಇಲ್ಲ.

ನಾಲ್ಕೈದು ಬಾತುಕೋಳಿಗಳೊಂದಿಗೆ ಬಂದು ಮೂಲೆ ಸೇರಿದ ಬೇಟೆಗಾರ-
ಅಂದಿನ ಶೌರ್ಯ ಸಾಹಸಗಳ ವರ್ಣನೆ ಮಾಡುತ್ತಲೇ ನೆಲಕ್ಕೆ ಬೀಳುತ್ತಾನೆ.

ಕಾಲವನ್ನೇ ಮೀರಿ ಮುನ್ನಡೆಯುವ ಹೆಂಡಗಡಂಗು-
ಕ್ಷಣಕಾಲ ನಿಂತು ನಡೆದಂತೆಯೂ ಭಾಸವಾಗುತ್ತಿತ್ತು.

          *****

0 ಕಾಮೆಂಟುಗಳು:

ಕಾಮೆಂಟ್‌‌ ಪೋಸ್ಟ್‌ ಮಾಡಿ