ಪಯಣ

- ಗಿರಿಜಾಪತಿ ಎಂ. ಎನ್

ಸಾಗುತಿರಲಿ ಜೀವನ ಯಾತ್ರೆ
ಎಚ್ಚರೆಚ್ಚರ ಸಿರಿ ಬೆಳಕಲಿ
ಅಲ್ಲೊ, ಇಲ್ಲೊ, ಎಲ್ಲೋ ಮುಗ್ಗರಿಸದೆ
ಮನ - `ಮನ'ವ ಕೈಯ ಹಿಡಿಯಲಿ ||

ನೀನೆ ನಿನ್ನಯ ದಾರಿ ಬೆಳಕು
ಸಾಗು ಒಳ ಬೆಳಕಿನ ಪಥದಲಿ
ನಿನ್ನರಿವೆ ತಾನದು ಹೊನ್ನ ದೀವಿಗೆ
ಮರವೆ ತಾರದೆ ಜೊತೆ ಸೇರಲಿ ||

ದೇವ ದೇವರಿರವಿನರಿವಿಗೆ
ನೀನೆ ನಿನ್ನಯ ಆಲಯ
ಸಮತೆ ಸಮರಸ ಶಾಂತ ಕ್ಷಮತೆಗೆ
ನಡೆ ನುಡಿಯೇ ಶೃತಿಲಯ ||

ಮೇಲು ಕೀಳಿನ ಸೋಂಕ ಕಾಣದೆ
ಸ್ವಸ್ಥವಿರಲೆದೆ ಬಾಂದಳ
ಸ್ವಾರ್ಥ, ಕ್ರೌರ್ಯ, ದ್ವೇಷದೆದೆಗೂ
ಕಣ್ಣ ತೆರೆಸಲಿ ಪ್ರೀತಿ ಜೋಗುಳ ||

        *****

ಕೀಲಿಕರಣ: ಕಿಶೋರ್‍ ಚಂದ್ರ

0 ಕಾಮೆಂಟುಗಳು:

ಕಾಮೆಂಟ್‌‌ ಪೋಸ್ಟ್‌ ಮಾಡಿ